ಭಾನುವಾರ, ಡಿಸೆಂಬರ್ 31, 2023

ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರಾಗಿ ಅರವಿಂದ ಪನಗಾರಿಯ ನೇಮಕ


ನವದೆಹಲಿ: 16 ನೇ ಕೇಂದ್ರ ಹಣಕಾಸು ಆಯೋಗದ ನೂತನ ಅಧ್ಯಕ್ಷರನ್ನಾಗಿ ನೀತಿ ಆಯೋಗದ ಮಾಜಿ ಅಧ್ಯಕ್ಷ ಅರವಿಂದ್ ಪನಗಾರಿಯಾ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

2015 ರಿಂದ 2017ರವರೆಗೆ ಪನಗಾರಿಯಾ ಅವರು ನೀತಿ ಆಯೋಗದ ಅಧ್ಯಕ್ಷರಾಗಿದ್ದರು. ಆ ಬಳಿಕ ಅವರು ಪ್ರಧಾನಿ ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಹಣಕಾಸು ಸಂಬಂಧಿ ಸಲಹೆ ಸೂಚನೆಗಳನ್ನು ಕೊಡುವಲ್ಲಿ ಮುಂಚೂಣಿಯಲ್ಲಿದ್ದರು.

ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ ಅವರು ಆಯೋಗದ ಕಾರ್ಯದರ್ಶಿಯಾಗಿರುತ್ತಾರೆ ಎಂದು ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ಅರವಿಂದ್ ಪನಗಾರಿಯಾ ಅವರು ಪ್ರಮುಖ ಭಾರತ–ಅಮೆರಿಕನ್ ಆರ್ಥಿಕ ತಜ್ಞ ಎಂದು ಗುರುತಿಸಿಕೊಂಡಿದ್ದಾರೆ.

ಐದು ವರ್ಷಕ್ಕೊಮ್ಮೆ ಕೇಂದ್ರ ಸರ್ಕಾರ ರಚಿಸುವ ಹಣಕಾಸು ಆಯೋಗ ಕೇಂದ್ರ ಹಾಗೂ ರಾಜ್ಯಗಳ ನಡುವೆ ತೆರಿಗೆ ಸಂಗ್ರಹದ ಹಂಚಿಕೆ ಬಗ್ಗೆ ಸಲಹೆ, ಸೂಚನೆ ಹಾಗೂ ಶಿಫಾರಸುಗಳನ್ನು ನೀಡುತ್ತದೆ.

ಕೇಂದ್ರ ಸರ್ಕಾರ ಪ್ರತಿ ಶತ 42 ರಷ್ಟು ತೆರಿಗೆ ಸಂಗ್ರಹವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ. ಹಣಕಾಸು ಆಯೋಗವು 2025 ರ ಅಕ್ಟೋಬರ್ 31 ರೊಳಗೆ ಐದು ವರ್ಷದ ತನ್ನ ವರದಿಯನ್ನು ಸಿದ್ದಪಡಿಸಿ ಒಪ್ಪಿಸಬೇಕು. ಅದು 2026ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.