ಬುಧವಾರ, ಫೆಬ್ರವರಿ 24, 2021

ಆಸ್ಟ್ರೇಲಿಯಾ ಓಪನ್: ಓಸಕಾ ಮುಡಿಗೆ ಚಾಂಪಿಯನ್ ಪಟ್ಟ

ಆಸ್ಟ್ರೇಲಿಯಾ ಓಪನ್: ಓಸಕಾ ಮುಡಿಗೆ ಚಾಂಪಿಯನ್ ಪಟ್ಟ


ಮೆಲ್ಬರ್ನ್‌: ಎದುರಾಳಿಯ ಬಲಶಾಲಿ ಹೊಡೆತಗಳಿಗೆ ಎದೆಗುಂದದೆ ನಿರಾಯಾಸದಿಂದ, ನಿರಾತಂಕವಾಗಿ ಆಡಿದ ಜಪಾನ್‌ನ 23ರ ಹರಯದ ಆಟಗಾರ್ತಿ ನವೊಮಿ ಒಸಾಕ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ರಾಡ್ ಲಾವೆರ್ ಅರೆನಾದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ಜೆನಿಫರ್ ಬ್ರಾಡಿ ವಿರುದ್ಧ 6-4, 6-3ರಲ್ಲಿ ಗೆಲುವು ಸಾಧಿಸಿದರು.

ಸಾವಿರಾರು ಪ್ರೇಕ್ಷಕರ ನಡುವೆ ನಡೆದ ಹಣಾಹಣಿಯನ್ನು ಗೆಲ್ಲಲು ಮೂರನೇ ಶ್ರೇಯಾಂಕದ ಒಸಾಕ ಅವರಿಗೆ 77 ನಿಮಿಷಗಳು ಸಾಕಾದವು. ಈ ಮೂಲಕ ನಾಲ್ಕನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ತಮ್ಮದಾಗಿಸಿಕೊಂಡ ಅವರು ಆಡಿದ ಮೊದಲ ನಾಲ್ಕು ಗ್ರ್ಯಾನ್‌ಸ್ಲಾಂ ಫೈನಲ್‌ಗಳಲ್ಲೂ ಗೆದ್ದ ಎರಡನೇ ಆಟಗಾರ್ತಿ ಎಂದೆನಿಸಿಕೊಂಡರು. ಈ ಸಾಧನೆ ಮಾಡಿದ ಒಟ್ಟಾರೆ ಮೂರನೇ ಟೆನಿಸ್ ಪಟು ಆಗಿದ್ದಾರೆ ಅವರು.

2018ರಲ್ಲಿ ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಗೆಲ್ಲುವ ಮೂಲಕ ಮೊದಲ ಗ್ರ್ಯಾನ್‌ಸ್ಲಾಂ ಕಿರೀಟಕ್ಕೆ ಮುತ್ತಿಟ್ಟ ಒಸಾಕ 2020ರಲ್ಲಿ ಮತ್ತೆ ಅಮೆರಿಕ ಓಪನ್ ಸಾಮ್ರಾಜ್ಞಿಯಾದರು. 2019ರಲ್ಲಿ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಕಿರೀಟವೂ ಅವರ ಮುಡಿಗೇರಿತ್ತು. ಮಹಿಳಾ ವಿಭಾಗದಲ್ಲಿ ಮೋನಿಕಾ ಸೆಲೆಸ್ ಮತ್ತು ಪುರುಷರ ವಿಭಾಗದಲ್ಲಿ ರೋಜರ್ ಫೆಡರರ್ ಆಡಿದ ಮೊದಲ ನಾಲ್ಕು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರು.

ಸೆಮಿಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧ ಗೆದ್ದಿದ್ದ ಒಸಾಕ ಫೈನಲ್‌ನಲ್ಲಿ ಯಾವುದೇ ಉದ್ವೇಗವಿಲ್ಲದೆ ಆಡಿದರು. ಆದರೆ ಭರ್ಜರಿ ಹೊಡೆತಗಳ ಮೂಲಕ ಪಾಯಿಂಟ್‌ಗಳನ್ನು ಕಲೆ ಹಾಕಿದ 22ನೇ ಶ್ರೇಯಾಂಕದ ಬ್ರಾಡಿ ಕೆಲವೊಮ್ಮೆ ವಿಶಿಷ್ಟ ಹಾವ–ಭಾವದ ಮೂಲಕ ಸಂತಸ ವ್ಯಕ್ತಪಡಿಸಿದರು‌.

ಮೊದಲ ಗೇಮ್ ಒಸಾಕ ಗೆದ್ದರೂ ನಂತರ ಬ್ರಾಡಿ ತಿರುಗೇಟು ನೀಡಿದರು. ಆದರೆ ಎರಡು ಡಬಲ್ ಫಾಲ್ಟ್‌ಗಳನ್ನು ಎಸಗಿದ ಅವರು ನಾಲ್ಕನೇ ಗೇಮ್‌ನಲ್ಲಿ ಸರ್ವ್ ಕಳೆದುಕೊಂಡರು. ಆದರೆ ಛಲ ಬಿಡದೆ ಆಡಿದ ಅವರು ಬ್ರೇಕ್ ಪಾಯಿಂಟ್ ಮೂಲಕ ಮತ್ತೆ ಆಧಿಪತ್ಯ ಸ್ಥಾಪಸಿ ಎದುರಾಳಿಗೆ ಆತಂಕ ಒಡ್ಡಿದರು. ಎದೆಗುಂದದ ಒಸಾಕ ಮೇಲೆ ಇದ್ಯಾವುದೂ ಪ್ರಭಾವ ಬೀರಲಿಲ್ಲ. ಮೊದಲ ಸೆಟ್ ಗೆಲ್ಲುವ ಮೂಲಕ ಮೆಲ್ಬರ್ನ್ ಪಾರ್ಕ್‌ನಲ್ಲಿ ಸತತ 20 ಸೆಟ್‌ ಗೆದ್ದ ಸಾಧನೆ ಮಾಡಿದರು.

ಎರಡನೇ ಸೆಟ್‌ನಲ್ಲಿ ಇನ್ನಷ್ಟು ಭರವಸೆಯಿಂದ ಕಣಕ್ಕೆ ಇಳಿದ ಒಸಾಕ ಏಸ್ ಸಿಡಿಸುವ ಮೂಲಕ 3–0 ಮುನ್ನಡೆ ಗಳಿಸಿದರು. ನಂತರ ಬ್ರಾಡಿ ಸ್ವಲ್ಪ ಪ್ರತಿರೋಧ ಒಡ್ಡಿದರೂ ಕೊನೆಯಲ್ಲಿ ಒಸಾಕಗೆ ಸುಲಭ ಜಯ ಒಲಿಯಿತು. ಫೈನಲ್‌ನಲ್ಲಿ ಸೋತರೂ ಬ್ರಾಡಿ ಅವರು ಡಬ್ಲ್ಗುಟಿಎ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 13ನೇ ಸ್ಥಾನಕ್ಕೇರಿದರು.

ನಾಲ್ಕರಲ್ಲಿ ನಾಲ್ಕು: ಒಸಾಕ ತುಳಿದ ಯಶಸ್ಸಿನ ಹಾದಿ

2018ರ ಅಮೆರಿಕ ಓಪನ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು 6-2, 6-4ರಲ್ಲಿ ಮಣಿಸಿ ಒಸಾಕ ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದರು. ಆ ಪಂದ್ಯ ಅಹಿತಕರ ಘಟನೆಗೂ ಸಾಕ್ಷಿಯಾಗಿತ್ತು. ದುರ್ವರ್ತನೆಗೆ ದಂಡ ವಿಧಿಸಿದ ಚೇರ್ ಅಂಪೈರ್‌ ಕಾರ್ಲೋಸ್ ರಾಮೋಸ್ ಅವರನ್ನು ಸೆರೆನಾ ‘ಮೋಸಗಾರ’ ಎಂದು ಜರಿದಿದ್ದರು. ಒಸಾಕ ಅಮೆರಿಕ ಓಪನ್ ಟೂರ್ನಿಯ ಚಾಂಪಿಯನ್ ಆದ ಅತಿ ಕಿರಿಯ ಆಟಗಾರ್ತಿ ಎಂದೆನಿಸಿಕೊಂಡಿದ್ದರು. 2006ರಲ್ಲಿ ಪ್ರಶಸ್ತಿ ಗೆದ್ದ ಮರಿಯಾ ಶರಪೋವಾ ಅವರ ಹೆಸರಿನಲ್ಲಿ ‌ಅಲ್ಲಿಯ ವರೆಗೆ ಈ ದಾಖಲೆ ಇತ್ತು.

2019ರಲ್ಲಿ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು 7-6 (7/2), 5-7, 6-4ರಲ್ಲಿ ಮಣಿಸಿ ಒಸಾಕ ಎರಡನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಮೂಲಕ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನಕ್ಕೇರಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಟೆನಿಸ್ ಪಟು ಎನಿಸಿದ್ದರು. ಎರಡು ತಾಸುಗಳ ಹಣಾಹಣಿಯಲ್ಲಿ ಎದುರಾಳಿಯ ಪ್ರಬಲ ಪೈಪೋಟಿ ಮೀರಿ ನಿಂತ ಒಸಾಕ ಸತತ ಎರಡು ಗ್ರ್ಯಾನ್‌ಸ್ಲಾಂ ಗೆದ್ದ ಅತಿ ಕಿರಿಯ ಆಟಗಾರ್ತಿ ಎಂದೆನಿಸಿಕೊಂಡಿದ್ದರು. ಮಾರ್ಟಿನಾ ಹಿಂಗಿಸ್ (1998ರಲ್ಲಿ) ಮತ್ತು ಕರೊಲಿನಾ ವೋಜ್ನಿಯಾಕಿ (2010ರಲ್ಲಿ) ಅವರನ್ನು ಒಸಾಕ ಹಿಂದಿಕ್ಕಿದ್ದರು.

2020ರ ಅಮೆರಿಕ ಓಪನ್‌ ಟೂರ್ನಿಯಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸಿ ಮೂರನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ಒಸಾಕ ತಮ್ಮದಾಗಿಸಿಕೊಂಡಿದ್ದರು. ಮೊದಲ ಸೆಟ್‌ನಲ್ಲಿ 1-6ರ ಸೋಲುಂಡಿದ್ದ ಅವರು ಎರಡನೇ ಸೆಟ್‌ನಲ್ಲಿ 0-2ರ ಹಿನ್ನಡೆ ಅನುಭವಿಸಿದ್ದರು. ಆದರೆ ನಂತರ ಪುಟಿದೆದ್ದು 1-6, 6-3, 6-3ರಲ್ಲಿ ಫೈನಲ್ ಪಂದ್ಯ ಗೆದ್ದ ಅವರು ವರ್ಣಭೇದ ನೀತಿಯ ವಿರುದ್ಧ ಮಾಸ್ಕ್ ಧರಿಸಿ ಗಮನ ಸೆಳೆದಿದ್ದರು. ಬ್ಲ್ಯಾಕ್ ಲಿವ್ಸ್ ಮ್ಯಾಟರ್ ಅಭಿಯಾನದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಒಂಬತ್ತನೇ ಬಾರಿ ಕಿರೀಟ: ಆಸ್ಟ್ರೇಲಿಯಾ ಓಪನ್ ಗೆ ಜಾಕೊವಿಚ್ 'ರಾಜ'

ಒಂಬತ್ತನೇ ಬಾರಿ ಕಿರೀಟ: ಆಸ್ಟ್ರೇಲಿಯಾ ಓಪನ್ ಗೆ ಜಾಕೊವಿಚ್ 'ರಾಜ'


ಮೆಲ್ಬರ್ನ್‌: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರು. ಸರ್ಬಿಯಾದ ಈ ತಾರಾ ಆಟಗಾರ 7-5, 6-2, 6-2ರಿಂದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಅವರನ್ನು ಮಣಿಸಿ ಒಂಬತ್ತನೇ ಬಾರಿ ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ತಮ್ಮದೇ ದಾಖಲೆಯನ್ನು ಸುಧಾರಿಸಿಕೊಂಡರು.

ರಾಡ್‌ ಲೇವರ್ ಅರೆನಾದಲ್ಲಿ, ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡ ಜೊಕೊವಿಕ್‌, ಒಟ್ಟು 18 ಗ್ರ್ಯಾನ್‌ಸ್ಲಾಮ್‌ಗಳ (ಒಂಬತ್ತು ಆಸ್ಟ್ರೇಲಿಯಾ ಓಪನ್, ಐದು ವಿಂಬಲ್ಡನ್‌, ಮೂರು ಬಾರಿ ಅಮೆರಿಕ ಓಪನ್, ಒಮ್ಮೆ ಫ್ರೆಂಚ್‌ ಓಪನ್‌) ಒಡೆಯರಾದರು. ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಸ್ಪೇನ್‌ನ ರಫೆಲ್ ನಡಾಲ್ ತಲಾ 20 ಬಾರಿ ಕಿರೀಟ ಧರಿಸಿದ್ದಾರೆ.

ಜೊಕೊವಿಚ್‌ ಸತತ ಮೂರನೇ ವರ್ಷ ಇಲ್ಲಿ ಚಾಂಪಿಯನ್ ಆದರು.

ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಜೊಕೊವಿಚ್‌ ತಮ್ಮ ಎಂದಿನ ಭರ್ಜರಿ ಸರ್ವ್‌, ರಿಟರ್ನ್‌ಗಳ ಮೂಲಕ ವಿಜೃಂಭಿಸಿದರು. ಬೇಸ್‌ಲೈನ್ ಹೊಡೆತಗಳಲ್ಲೂ ಅವರ ಪಾರಮ್ಯವಿತ್ತು. ಮೊದಲ ಸೆಟ್‌ನಲ್ಲಿ ತೀವ್ರ ಪೈಪೋಟಿ ನೀಡಿದ ಡ್ಯಾನಿಲ್, ಬಳಿಕ ದಣಿದಂತೆ ಕಂಡುಬಂದರು. ಕೊನೆಯ ಎರಡು ಸೆಟ್‌ಗಳನ್ನು ಅವರು ಸುಲಭವಾಗಿ ಕೈಚೆಲ್ಲಿದರು.

33 ವರ್ಷದ ಜೊಕೊವಿಚ್‌, ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ಹಾಗೂ ಫೈನಲ್ಸ್ ಪಂದ್ಯಗಳಲ್ಲಿ 18 ಬಾರಿ ಸೋಲು ಅನುಭವಿಸಿಲ್ಲ. ಕಳೆದ 10 ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಜೊಕೊವಿಚ್ ಅವರಿದ ಒಲಿದ ಆರನೇ ಪ್ರಶಸ್ತಿ ಇದು. ಈ ಗೆಲುವಿನೊಂದಿಗೆ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಮಾರ್ಚ್‌ 8ರವರೆಗೆ ಅಗ್ರಸ್ಥಾನದಲ್ಲಿ ಮುಂದುವರಿಯುವುದನ್ನು ಖಚಿತಪಡಿಸಿದ್ದು, 311 ವಾರಗಳ ಕಾಲ ಈ ಸ್ಥಾನದಲ್ಲಿದ್ದು, ರೋಜರ್ ಫೆಡರರ್ ಅವರ ದಾಖಲೆಯನ್ನು ಅಳಿಸಿಹಾಕಲಿದ್ದಾರೆ.

ಮೆಡ್ವೆಡೆವ್‌ ಎರಡನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಫೈನಲ್‌ ಪ್ರವೇಶಿಸಿದ್ದರು. 2019ರ ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅವರು ನಡಾಲ್ ಅವರಿಗೆ ಮಣಿದಿದ್ದರು. ಈ ಪಂದ್ಯದಲ್ಲಿ ಸೋಲುವುದರೊಂದಿಗೆ ರಷ್ಯಾದ 25 ವರ್ಷದ ಆಟಗಾರನ 20 ಪಂದ್ಯಗಳ ಸತತ ಗೆಲುವಿನ ಸರಪಳಿಯೂ ತುಂಡರಿಸಿತು.

ಎರಡನೇ ಸೆಟ್‌ನಲ್ಲಿ ಸೋತ ಬಳಿಕ ಪಂದ್ಯ ಕೈಜಾರುತ್ತಿರುವುದನ್ನು ಅರಿತ ಮೆಡ್ವೆಡೆವ್ ಹತಾಶಗೊಂಡರು. ನೀಲಿ ಅಂಗಣದಲ್ಲಿ ತಮ್ಮ ಬಿಳಿ ಬಣ್ಣದ ರ‍್ಯಾಕೆಟ್‌ ಎಸೆದು, ಮುರಿದು ಹಾಕಿದರು.

ಇದೇ ಕ್ರೀಡಾಂಗಣದಲ್ಲಿ ಜೊಕೊವಿಚ್‌, ಸೆಮಿಫೈನಲ್‌ ಅಥವಾ ಫೈನಲ್‌ ಪಂದ್ಯಗಳಲ್ಲಿ ಗ್ರ್ಯಾನ್‌ಸ್ಲಾಮ್ ಚಾಂಪಿಯನ್‌ಗಳಾದ ಫೆಡರರ್‌, ನಡಾಲ್, ಆ್ಯಂಡಿ ಮರ್ರೆ, ಸ್ಟ್ಯಾನ್ ವಾವ್ರಿಂಕಾ, ಡೊಮಿನಿಕ್ ಥೀಮ್ ಅವರನ್ನು ಸೋಲಿಸಿದ ಶ್ರೇಯ ಹೊಂದಿದ್ದಾರೆ.

IND v/s ENG 3ನೇ ಟೆಸ್ಟ್ : ಇಂಗ್ಲೆಂಡ್ ಬ್ಯಾಟಿಂಗ್ , ಇಶಾಂತ್ ಮೊದಲ ವಿಕೇಟ್

IND v/s ENG 3ನೇ ಟೆಸ್ಟ್ : ಇಂಗ್ಲೆಂಡ್ ಬ್ಯಾಟಿಂಗ್ , ಇಶಾಂತ್ ಮೊದಲ ವಿಕೇಟ್


ಅಹಮದಾಬಾದ್: ಭಾರತದ ಮಧ್ಯಮವೇಗಿ ಇಶಾಂತ್ ಶರ್ಮಾ ಅವರಿಗೆ ಇಂದು ನೂರನೇ ಟೆಸ್ಟ್ ಆಡುತ್ತಿದ್ದು, ತಮ್ಮ ಎರಡನೇ ಓವರ್‌ನಲ್ಲಿ ಇಶಾಂತ್ ಆರಂಭಿಕ ಡಾಮ್‌ ಸಿಬ್ಲಿ (0) ವಿಕೆಟ್‌ ಪಡೆಯುವ ಮೂಲಕ ಮೊದಲ ವಿಕೆಟ್‌ ಖಾತೆ ತೆರೆದಿದ್ದಾರೆ. ಇಂಗ್ಲೆಂಡ್‌ 3 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 3 ರನ್‌ ಗಳಿಸಿತ್ತು.

ಗುಜರಾತ್‌ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್‌ ಆರಂಭವಾಗಿದೆ. ಟಾಸ್‌ ಗೆದ್ದಿರುವ ಇಂಗ್ಲೆಂಡ್‌ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿದೆ.

ತಮ್ಮ ಮೊದಲ ಓವರ್‌ನಲ್ಲೇ ಸ್ಪಿನ್ನರ್‌ ಅಕ್ಸರ್‌ ಪಟೇಲ್‌ ವಿಕೆಟ್‌ ಕಬಳಿಸಿದರು. ಜಾನಿ ಬೆಸ್ಟೊ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಶೂನ್ಯಕ್ಕೆ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದರಿಂದಾಗಿ ಇಂಗ್ಲೆಂಡ್‌ ಆರಂಭಿಕ ಆಘಾತ ಅನುಭವಿಸಿದೆ, ಆದರೆ ಬಿರುಸಿನ ಆಟ ಆಡುತ್ತಿರುವ ಜಾಕ್ ಕ್ರಾಲಿ ಈಗಾಗಲೇ ಐದು ಬೌಂಡರಿ ಸಿಡಿಸಿದ್ದಾರೆ.

ಜ್ಯಾಕ್ ಕ್ರಾಲಿ (23) ಮತ್ತು ನಾಯಕ ಜೋ ರೂಟ್ ಕಣದಲ್ಲಿದ್ದಾರೆ. 9 ಓವರ್‌ಗಳಲ್ಲಿ ಇಂಗ್ಲೆಂಡ್‌ ಎರಡು ವಿಕೆಟ್‌ ನಷ್ಟಕ್ಕೆ 30 ರನ್‌ ಗಳಿಸಿದೆ.

ವಿಶ್ವದ ಬೃಹತ್ ಕ್ರಿಕೆಟ್ ಮೈದಾನದಲ್ಲಿ ನಸುಗೆಂಪು ಚೆಂಡಿನ ಮೊದಲ ಹಗಲು–ರಾತ್ರಿ ಟೆಸ್ಟ್ ನಡೆಯುತ್ತಿದೆ. ಭಾರತದ ಪರ ವಾಷಿಂಗ್ಟನ್ ಸುಂದರ್ ಮತ್ತು ಜಸ್‌ಪ್ರೀತ್ ಬೂಮ್ರಾ 11ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ– ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ.

ಇಂಗ್ಲೆಂಡ್‌– ಜೋ ರೂಟ್ (ನಾಯಕ), ಜೇಮ್ಸ್‌ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಜಾನಿ ಬೆಸ್ಟೊ, ಸ್ಟುವರ್ಟ್ ಬ್ರಾಡ್, ಜ್ಯಾಕ್ ಕ್ರಾಲಿ, ಬೆನ್ ಫೋಕ್ಸ್‌, ಜ್ಯಾಕ್ ಲೀಚ್, ಒಲಿ ಪೊಪ್, ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್‌.

ವಿಶ್ವದ ಅತಿ ದೊಡ್ಡ ಮೊಟೆರಾ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ; ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ ಉದ್ಘಾಟನೆ


ವಿಶ್ವದ ಅತಿ ದೊಡ್ಡ ಮೊಟೆರಾ ಸ್ಟೇಡಿಯಂಗೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ; ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ ಉದ್ಘಾಟನೆ

    

Motera Stadium: ಕ್ರೀಡಾಂಗಣದ ಉದ್ಘಾಟನೆಯಲ್ಲಿ ಗೃಹ ಸಚಿವ ಅಮಿತ್​ ಶಾ ಹಾಗೂ ಕ್ರೀಡಾ ಸಚಿವ ಕಿರಣ್​ ರಿಜಿಜು ಭಾಗವಹಿಸಿದ್ದು, ಭೂಮಿ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,10,000 ಆಸನಗಳ ಸಾಮರ್ಥ್ಯ ಹೊಂದಿದೆ.

  • TV9 Web Team
  •  
  • Publish Date - 1:35 pm, Wed, 24 February 21
MOTERA STADIUM

ಮೊಟೆರಾ ಸ್ಟೇಡಿಯಂ

ಕ್ರೀಡಾಂಗಣದ ಉದ್ಘಾಟನೆಯಲ್ಲಿ ಗೃಹ ಸಚಿವ ಅಮಿತ್​ ಶಾ ಹಾಗೂ ಕ್ರೀಡಾ ಸಚಿವ ಕಿರಣ್​ ರಿಜಿಜು ಭಾಗವಹಿಸಿದ್ದು, ಭೂಮಿ ಪೂಜೆ ಸಲ್ಲಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, 1,10,000 ಆಸನಗಳ ಸಾಮರ್ಥ್ಯ ಹೊಂದಿದೆ. ಇದರ ನಂತರ 2ನೇ ಸ್ಥಾನವನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಪಡೆದುಕೊಂಡಿದ್ದು, ಅದು ಸುಮಾರು 1 ಲಕ್ಷ ಜನ ಕೂರುವ ಆಸನಗಳ ಸಾಮರ್ಥ್ಯ ಹೊಂದಿದೆ. ಸದ್ಯ ಕೊವಿಡ್-19 ನಿಯಮಾವಳಿಗಳಿಂದಾಗಿ ಕ್ರೀಡಾಂಗಣದ ಸಾಮರ್ಥ್ಯವನ್ನು 50% ರಷ್ಟು ಮುಚ್ಚಲಾಗಿದ್ದರೂ, 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣಕ್ಕೆ ಲಗ್ಗೆ ಇಡುವ ನಿರೀಕ್ಷೆಯಿದೆ.

ಇಂದಿನ ಪಂದ್ಯದ ಮೂಲಕ ಇದು ಭಾರತದಲ್ಲಿ ಆಡಲಾಗುತ್ತಿರುವ ಎರಡನೇ ಪಿಂಕ್​ ಬಾಲ್​ ಟೆಸ್ಟ್‌ ಎನ್ನುವುದೂ ವಿಶೇಷವಾಗಿದೆ. ಇದಕ್ಕೂ ಮೊದಲು ಟೀಂ ಇಂಡಿಯಾ, ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಪಿಂಕ್​ ಬಾಲ್​ ಟೆಸ್ಟ್​ ಆಡಿತ್ತು ಹಾಗೂ ಅಂದಿನ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾ ವಿರುದ್ಧ ಇನ್ನಿಂಗ್ಸ್​ ಗೆಲುವು ಸಾಧಿಸಿತ್ತು. ಈ ಕಾರಣಗಳಿಂದಾಗಿ ಇಂದಿನ ಪಂದ್ಯದಲ್ಲಿ ಭಾರತ ಹೇಗೆ ಆಡಲಿದೆ ಎಂಬ ಕುತೂಹಲವೂ ಹೆಚ್ಚಿದೆ.

ಭಾನುವಾರ, ಫೆಬ್ರವರಿ 14, 2021

ಹರ್ಭಜನ್ ದಾಖಲೆ ಮುರಿದ ಅಶ್ವಿನ್, ಮುಂದಿನ ಟಾರ್ಗೆಟ್ ಅನಿಲ್ ಕುಂಬ್ಳೆ!

ಹರ್ಭಜನ್ ದಾಖಲೆ ಮುರಿದ ಅಶ್ವಿನ್, ಮುಂದಿನ ಟಾರ್ಗೆಟ್ ಅನಿಲ್ ಕುಂಬ್ಳೆ!

ಚೆನ್ನೈ: ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅಮೋಘ ಲಯದಲ್ಲಿದ್ದು, ಭಾರತೀಯ ಪಿಚ್‌ಗಳಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಟರ್ಬನೇಟರ್‌ ಹರ್ಭಜನ್‌ ಸಿಂಗ್‌ ಅವರಿಗೆ ಸಡ್ಡು ಹೊಡೆದು ಎರಡನೇ ಅತ್ಯಂತ ಯಶಸ್ವಿ ಬೌಲರ್‌ ಎನಿಸಿಕೊಂಡಿದ್ದಾರೆ. 

ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆರ್‌ ಅಶ್ವಿನ್‌ 23.5 ಓವರ್‌ಗಳನ್ನು ಎಸೆದು 43ಕ್ಕೆ 5 ವಿಕೆಟ್‌ ಪಡೆದರು. ಇದು ಇನಿಂಗ್ಸ್‌ ಒಂದರಲ್ಲಿ ಅಶ್ವಿನ್‌ ಐದು ವಿಕೆಟ್‌ ಪಡೆದ ಸಾಧನೆ ಮಾಡಿರುವುದು 29ನೇ ಬಾರಿ ಆಗಿದೆ. 

ಇದೇ ವೇಳೆ ಅಶ್ವಿನ್‌ ಭಾರತೀಯ ಪಿಚ್‌ಗಳಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಹರ್ಭಜನ್ ಸಿಂಗ್‌ ಅವರ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ಅಶ್ವಿನ್‌ ಭಾರತೀಯ ಪಿಚ್‌ಗಳಲ್ಲಿ ಒಟ್ಟು 266* ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿ ಬಜ್ಜಿಗೆ ಸಡ್ಡು ಹೊಡೆದರು. 

ಆಸೀಸ್‌ ವಿರುದ್ಧದ ಟಿ20 ಸರಣಿಗೆ 13 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ಕಿವೀಸ್! 

ಈ ಪಟ್ಟಿಯಲ್ಲಿ 265 ವಿಕೆಟ್‌ಗಳನ್ನು ಪಡೆದಿರುವ ಹರ್ಭಜನ್ ಸಿಂಗ್‌ ಈಗ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಅಶ್ವಿನ್ ದ್ವಿತೀಯ ಸ್ಥಾನಕ್ಕೇರಿದ್ದು, ಮಾಜಿ ದಿಗ್ಗಜ ಬೌಲರ್‌ ಲೆಗ್ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ 24.88ರ ಸರಾಸರಿಯಲ್ಲಿ 350 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. 

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯೂ ಅನಿಲ್ ಕುಂಬ್ಳೆ ಅವರ ಹೆಸರಲ್ಲಿದೆ. ಈ ಪಟ್ಟಿಯಲ್ಲಿ ಜಂಬೋ ಖ್ಯಾತಿಯ ಭಾರತ ತಂಡದ ಮಾಜಿ ನಾಯಕ ಕುಂಬ್ಳೆ 619 ವಿಕೆಟ್‌ಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಮಾಜಿ ಆಲ್‌ರೌಂಡರ್‌ ಕಪಿಲ್‌ ದೇವ್‌ 434 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 

ಅಶ್ವಿನ್ ಸ್ಪಿನ್‌ ಮೋಡಿ, ದ್ವಿತೀಯ ಟೆಸ್ಟ್‌ನಲ್ಲಿ ಟೀಮ್‌ ಇಂಡಿಯಾಗೆ ಬೃಹತ್ ಮುನ್ನಡೆ! 

ಹರ್ಭಜನ್ ಸಿಂಗ್‌ ಮೂರನೇ ಸ್ಥಾನದಲ್ಲಿದ್ದು 417 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್‌ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು 391* ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅಶ್ವಿನ್ 400 ವಿಕೆಟ್‌ಗಳ ಗಡಿ ದಾಟುವ ಸಾಧ್ಯತೆ ದಟ್ಟವಾಗಿದೆ

ಜಿದರ್-ಉಲ್-ಹದೀದ್ ಸಮರಾಭ್ಯಾಸ(ಪಾಕಿಸ್ತಾನ-ಭಾರತ) ಇದು 2007 ರಿಂದೀಚೆಗೆ ಪ್ರತಿ ಎರೆಡು ವರ್ಷಗಳಿಗೊಮ್ಮೆ ಜರುಗುವುದು.

ಇಸ್ಲಾಮಾಬಾದ್‌: ‘ಪಾಕಿಸ್ತಾನಿ ಸೇನೆಯು ಸಿಂಧ್‌ ಪ್ರಾಂತ್ಯದ ಥಾರ್‌ ಮರುಭೂಮಿಯಲ್ಲಿ ಒಂದು ತಿಂಗಳ ಸಮರಾಭ್ಯಾಸವನ್ನು ಕೈಗೊಂಡಿದ್ದು, ಇದೇ 28ರಂದು ಅದು ಕೊನೆಗೊಳ್ಳಲಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಜನವರಿ 28 ರಿಂದ ‘ಜಿದರ್‌–ಉಲ್‌–ಹದೀದ್‌’ ಹೆಸರಿನ ಈ ಸಮರಾಭ್ಯಾಸ ಆರಂಭವಾಗಿದೆ. ಮರುಭೂಮಿಯ ಯುದ್ಧತಂತ್ರಗಳನ್ನು ಅಳವಡಿಸಿಕೊಳ್ಳುವುದು ಇದರ ಉದ್ದೇಶ’ ಎಂದು ತಿಳಿಸಲಾಗಿದೆ.

ಬಹುರಾಷ್ಟ್ರಗಳ ನೌಕಾಭ್ಯಾಸ: ‌ಅರಬ್ಬೀ ಸಮುದ್ರದಲ್ಲಿ ಸುಮಾರು 45 ರಾಷ್ಟ್ರಗಳು ಪಾಲ್ಗೊಂಡಿರುವ ಹಾಗೂ ಪಾಕಿಸ್ತಾನ ಆತಿಥ್ಯ ವಹಿಸಿರುವ ಒಂದು ವಾರದ ನೌಕಾ ಸಮರಾಭ್ಯಾಸ ಶುಕ್ರವಾರದಿಂದ ಆರಂಭವಾಗಿದೆ. 2007ರಿಂದೀಚೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಇದನ್ನು ಸಂಘಟಿಸಲಾಗುತ್ತಿದೆ.

ಭಾನುವಾರ, ಫೆಬ್ರವರಿ 7, 2021

ಇತಿಹಾಸ ನಿರ್ಮಾಣದ ಹೊಸ್ತಿಲಲ್ಲಿ ಸೆರೆನಾ ವಿಲಿಯಮ್ಸ್ ಹಾಗೂ ರಫೆಲ್ ನಡಾಲ್

ಮೆಲ್ಬರ್ನ್‌: ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯಾ ಓಪನ್‌ಗೆ ಸೋಮವಾರ ಚಾಲನೆ ದೊರೆಯಲಿದ್ದು, ವಿಶ್ವ ಟೆನಿಸ್‌ನ ಪ್ರಮುಖ ಆಟಗಾರರಾದ ರಫೆಲ್‌ ನಡಾಲ್‌, ನೊವಾಕ್‌ ಜೊಕೊವಿಚ್‌ ಹಾಗೂ ಸೆರೆನಾ ವಿಲಿಯಮ್ಸ್ ಮೇಲೆ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ ಈ ತಾರೆಗಳು ಇದ್ದಾರೆ.

ಸ್ಪೇನ್‌ ಆಟಗಾರ ನಡಾಲ್ ಅವರಿಗೆ ಇಲ್ಲಿ ಟ್ರೋಫಿ ಮುಡಿಗೇರಿಸಿಕೊಂಡರೆ, ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಗ್ರ್ಯಾನ್‌ಸ್ಲಾಮ್ ಗೆದ್ದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಹಾಗೂ ನಡಾಲ್‌ ಇದುವರೆಗೆ ತಲಾ 20 ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊಣಕಾಲು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಫೆಡರರ್, ಇಲ್ಲಿ ಕಣಕ್ಕಿಳಿಯುತ್ತಿಲ್ಲವಾದ್ದರಿಂದ, ಸ್ಪೇನ್ ಆಟಗಾರನಿಗೆ ಅವರ ದಾಖಲೆ ಮೀರುವ ಅವಕಾಶವಿದೆ.

ನಡಾಲ್‌ ಕೂಡ ಎರಡು ವಾರಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಇತ್ತೀಚೆಗೆ ನಡೆದ ಎಟಿಪಿ ಟೂರ್ನಿಯಲ್ಲಿ ಆಡಿರಲಿಲ್ಲ. ಆದರೂ ಪರಿಸ್ಥಿತಿ ಸುಧಾರಿಸುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.

ಮಂಗಳವಾರ ಮೊದಲ ಸುತ್ತಿನ ಪಂದ್ಯವಾಡುತ್ತಿರುವ ನಡಾಲ್ ಅವರಿಗೆ ಸರ್ಬಿಯಾದ ಲಾಸ್ಲೊ ಡಿಜೇರ್ ಸವಾಲು ಎದುರಾಗಿದೆ.

ಅಮೆರಿಕ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರಿಗೆ ಮಾರ್ಗರೇಟ್‌ ಕೋರ್ಟ್‌ ಅವರ 24 ಗ್ರ್ಯಾನ್‌ಸ್ಲಾಮ್ ಟ್ರೋಫಿ ವಿಜಯದ ದಾಖಲೆ ಸರಿಗಟ್ಟಲು ಇನ್ನು ಒಂದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಅಗತ್ಯವಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಸೆರೆನಾ, ಜರ್ಮನಿಯ ಲಾರಾ ಸಿಜಮಂಡ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ (8) ಪ್ರಶಸ್ತಿ ಗೆದ್ದ ತಮ್ಮದೇ ದಾಖಲೆಯನ್ನು ಅಳಿಸಿಹಾಕುವ ಅವಕಾಶ ಇದೆ. ಅಲ್ಲದೆ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅತಿ ಹೆಚ್ಚು ವಾರಗಳ ಕಾಲ ಅಗ್ರಸ್ಥಾನದಲ್ಲಿರುವ ಅವಕಾಶವಿದೆ.

ಸೋಮವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್‌, ಫ್ರಾನ್ಸ್‌ನ ಜೆರೆಮಿ ಚಾರ್ಡಿ ಎದುರು ಸೆಣಸಲಿದ್ದಾರೆ.

30 ಸಾವಿರ ಪ್ರೇಕ್ಷಕರಿಗೆ ಅವಕಾಶ: ಕೋವಿಡ್‌–19 ಪಿಡುಗಿನ ಆತಂಕದ ಹಿನ್ನೆಲೆಯಲ್ಲಿ ದಿನವೊಂದಕ್ಕೆ 30 ಸಾವಿರ ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂದರೆ ಕ್ರೀಡಾಂಗಣಗಳ ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಲೈನ್‌ ಅಂಪೈರ್‌ಗಳಿರುವುದಿಲ್ಲ: ಟೂರ್ನಿಯ ಪ್ರತಿ ಪಂದ್ಯಗಳು ಲೈನ್‌ ಅಂಪೈರ್‌ಗಳ ಅನುಪಸ್ಥಿಯಲ್ಲಿ ನಡೆಯಲಿವೆ. ಇಲೆಕ್ಟ್ರಾನಿಕ್ ಪರದೆಯಲ್ಲಿ ತೀರ್ಪುಗಳನ್ನು ಭಿತ್ತರಿಸಲಾಗುತ್ತದೆ. ಹೋದ ವರ್ಷದ ಅಮೆರಿಕ ಓಪನ್ ಟೂರ್ನಿಯಲ್ಲಿ ಇದೇ ಮಾದರಿಯನ್ನು ಅನುಸರಿಸಲಾಗಿತ್ತು.

ಶುಕ್ರವಾರ, ಫೆಬ್ರವರಿ 5, 2021

ವಿತ್ತೀಯ ಕೊರತೆ: ಹೀಗೆಂದರೇನು, ಏನಿದರ ಪ್ರಾಮುಖ್ಯತೆ?

ವಿತ್ತೀಯ ಕೊರತೆ: ಹೀಗೆಂದರೇನು, ಏನಿದರ ಪ್ರಾಮುಖ್ಯತೆ?

ಪ್ರಜಾವಾಣಿ ವಾರ್ತೆ Updated: 
prajavani

ದೇಶದ ಹಣಕಾಸು ವ್ಯವಸ್ಥೆ ನಿರ್ಧರಿಸುವ ವಿತ್ತೀಯ ಕೊರತೆ ಮಾಹಿತಿ (ಪ್ರಾತಿನಿಧಿಕ ಚಿತ್ರ - iStock)

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2021ಅನ್ನು ಫೆ.1ರಂದು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ನಿರ್ಮಲಾ ಅವರು ಮಂಡಿಸುತ್ತಿರುವ ಮೂರನೇ ಬಜೆಟ್ ಇದಾಗಿದೆ.

ಬಜೆಟ್ ಕುರಿತಾಗಿ ಸಾಕಷ್ಟು ನಿರೀಕ್ಷೆಗಳು ಮತ್ತು ಅದನ್ನು ಅರ್ಥ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಕುತೂಹಲಗಳು ಹೆಚ್ಚಾಗುತ್ತಿರುವಂತೆಯೇ, ಬಜೆಟ್‌ನಲ್ಲಿ ಪ್ರಮುಖವಾಗಿ ಕೇಳಿಬರುವ ವಿತ್ತೀಯ ಕೊರತೆ ಎಂಬ ವಿಷಯದ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.

ವಿತ್ತೀಯ ಕೊರತೆ ಎಂದರೇನು?
ವಿತ್ತೀಯ ಕೊರತೆ ಅಥವಾ ಹಣಕಾಸು ಕೊರತೆ (Fiscal Deficit) ಎಂದರೆ, ಸರ್ಕಾರದ ಒಟ್ಟು ಖರ್ಚು ಹಾಗೂ ಅದರ ಆದಾಯದ ನಡುವೆ ಇರುವ ವ್ಯತ್ಯಾಸ. ಈ ಆದಾಯದಲ್ಲಿ ಸಾಲ ಪಡೆದ ಹಣ ಒಳಗೊಂಡಿರುವುದಿಲ್ಲ.

ವಿತ್ತೀಯ ಕೊರತೆ ಹೆಚ್ಚಾದರೆ ಏನಾಗುತ್ತದೆ?
ಸರ್ಕಾರವು ಹೆಚ್ಚು ಸಾಲ ಮಾಡಬೇಕಾಗುತ್ತದೆ ಅಥವಾ ಹೆಚ್ಚು ಹಣವನ್ನು ಟಂಕಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕೇಳಿಕೊಳ್ಳಬಹುದು. ಆದರೆ ಹಣವನ್ನು ಟಂಕಿಸುವುದು (ಮುದ್ರಿಸುವುದು) ಸಾಕಷ್ಟು ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ ಮತ್ತು ಬಡ್ಡಿ ದರಗಳ ಏರಿಕೆಗೆ ಕಾರಣವಾಗುತ್ತದೆ. ಹೀಗಾಗಿ, ಹಣವನ್ನು ಮುದ್ರಿಸಿ ವಿತ್ತೀಯ ಕೊರತೆ ತುಂಬಲು ಯಾವುದೇ ಸರ್ಕಾರವೂ ಪ್ರಯತ್ನಿಸುವ ಗೋಜಿಗೆ ಹೋಗುವುದಿಲ್ಲ. ಬದಲಾಗಿ, ಸಾಲವನ್ನೇ ನೆಚ್ಚಿಕೊಳ್ಳುತ್ತದೆ.

ಸರ್ಕಾರ ಎಲ್ಲಿಂದ ಸಾಲ ಪಡೆಯತ್ತದೆ?
ಮಾರುಕಟ್ಟೆ, ಸಣ್ಣ ಉಳಿತಾಯ ನಿಧಿ, ರಾಜ್ಯ ಪಿಂಚಣಿ ನಿಧಿಗಳು, ಬಾಹ್ಯ ವಲಯ ಮತ್ತು ಕಿರು ಅವಧಿಯ ನಿಧಿಗಳಿಂದ ಸರ್ಕಾರ ಸಾಲ ಪಡೆಯುತ್ತದೆ. ಆದರೆ, ವಿತ್ತೀಯ ಆದಾಯ ಕೊರತೆಗೆ ಹಣಕಾಸು ಒದಗಿಸುವ ಪ್ರಧಾನ ಮೂಲವೆಂದರೆ ಮಾರುಕಟ್ಟೆಯಿಂದ ಪಡೆಯುವ ಸಾಲ.

ಸಾಲ ಪಡೆಯುವುದರಿಂದಲೂ ಪ್ರತಿಕೂಲ ಪರಿಣಾಮ ಆಗುವುದಿಲ್ಲವೇ?
ಹೌದು, ಆಗುತ್ತದೆ. ಸರ್ಕಾರ ಹೆಚ್ಚು ಸಾಲ ಪಡೆದಷ್ಟೂ ಖಾಸಗಿ ಉದ್ಯಮಗಳು ಮತ್ತು ಕಾರ್ಪೊರೇಟ್‌ಗಳಿಗೆ ಮಾರುಕಟ್ಟೆ ಪ್ರವೇಶಿಸುವ ಅವಕಾಶ ಕಡಿಮೆಯಾಗುತ್ತದೆ. ಅಲ್ಲದೆ, ಸರ್ಕಾರ ಹೆಚ್ಚು ಸಾಲ ಪಡೆದಲ್ಲಿ ಇತರ ಸಾಲಗಳ ಬಡ್ಡಿ ದರವೂ ಏರಿಕೆಯಾಗುತ್ತದೆ. ಇದರ ಜತೆಗೆ, ಅದು ಸರ್ಕಾರದ ಸಾಲ ಮರುಪಾವತಿಸಬೇಕಾದ ಹೊರೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಯಲ್ಲಿ ಹೂಡಿಕೆ ಮಾಡಬೇಕಾದ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಇದು ಆರ್ಥಿಕತೆ ಕುಸಿತಕ್ಕೆ (ಹಿಂಜರಿಕೆಗೆ) ಕಾರಣವಾಗುತ್ತದೆ.

ವಿತ್ತೀಯ ಕೊರತೆಯ ಸಂಖ್ಯೆಯ ಮೇಲೆ ಹೆಚ್ಚು ಗಮನ ಯಾಕೆ?
ಅದು ದೇಶದ ಆರ್ಥಿಕತೆಯ ಒಟ್ಟಾರೆ ಸಾಮರ್ಥ್ಯವನ್ನು ಪ್ರಕಟಪಡಿಸುತ್ತದೆ. ಜಾಗತಿಕ ಹೂಡಿಕೆದಾರರೂ ಇದೇ ಸಂಖ್ಯೆಯನ್ನು ಅವಲಂಬಿಸಿರುತ್ತಾರೆ. ವಿತ್ತೀಯ ಕೊರತೆ ಹೆಚ್ಚಾಗಿದ್ದರೆ ಮಾರುಕಟ್ಟೆಯಲ್ಲಿ ತಮ್ಮ ಮೇಲೆ ಒತ್ತಡ ಹೆಚ್ಚಾಗಬಹುದು, ಜೊತೆಗೆ ಹೆಚ್ಚಿನ ಹಣದುಬ್ಬರ ಮತ್ತು ಹೆಚ್ಚಿನ ಬಡ್ಡಿದರವು ತಮ್ಮ ಲಾಭದ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ಆತಂಕಕ್ಕೆ ಕಾರಣವಾಗುತ್ತದೆ.

ದೇಶವು ಎಷ್ಟರವರೆಗಿನ ವಿತ್ತೀಯ ಕೊರತೆಯನ್ನು ತಾಳಿಕೊಳ್ಳಬಲ್ಲುದು?
ವಿತ್ತೀಯ ಕೊರತೆಯು ಶೇ.3-4ರಿಂದ ಹೆಚ್ಚು ಇರುವಂತಿಲ್ಲ. ತೆರಿಗೆ ಆದಾಯವು ಸರ್ಕಾರದ ಖರ್ಚನ್ನು ಪೂರೈಸಲು ಸಾಕಷ್ಟಿಲ್ಲದಿರುವ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ, ವಿತ್ತೀಯ ತೆರಿಗೆಯು ಸ್ವಲ್ಪ ಹೆಚ್ಚಾಗಿದ್ದರೂ ಪರವಾಗಿಲ್ಲ.

ಭಾರತಕ್ಕೆ ಸಂಬಂಧಿಸಿದಂತೆ ವಿತ್ತೀಯ ಕೊರತೆ ಹೇಗಿದೆ?
ಭಾರತವು 2008-09ರವೇಳೆಗೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3ಕ್ಕೆ ಇಳಿಸುವ ಗುರಿಯೊಂದಿಗೆ, 2003ರಲ್ಲಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಗುರಿಯ ಪ್ರಕಾರ ಪ್ರತಿ ವರ್ಷ ಶೇ.0.3 ತಗ್ಗಿಸಬೇಕಿತ್ತು. ಆದರೆ ಇದು ಸಾಧ್ಯವಾಗಲಿಲ್ಲ ಮತ್ತು ಸರ್ಕಾರವು ವರ್ಷದಿಂದ ವರ್ಷಕ್ಕೆ ಈ ಗುರಿಯನ್ನೇ ಸಡಿಲಿಸುತ್ತಾ ಹೋಯಿತು. ಕಳೆದ ವರ್ಷ ಕೇಂದ್ರ ಸರ್ಕಾರವು FRBM ನಿಯಮಗಳಿಗೆ ತಿದ್ದುಪಡಿ ತಂದು, ವಿತ್ತೀಯ ಕೊರತೆಯನ್ನು ಶೇ.3ಕ್ಕೆ ಇಳಿಸುವ ಗುರಿಯ ಅವಧಿಯನ್ನು 2020-21ಕ್ಕೆ ವಿಸ್ತರಿಸಿತ್ತು.

ವಿತ್ತೀಯ ಕೊರತೆಯ ಗುರಿ ತಲುಪಲು ಭಾರತವು ಶ್ರಮಿಸಬೇಕೇ?
ಹೊಸ ಜಿಎಸ್‌ಟಿ ಜಾರಿಗೆ ಬಂದಿರುವುದರೊಂದಿಗೆ ಕೆಲವೊಂದು ಸಮಸ್ಯೆಗಳಿರುವುದರಿಂದ, ಸ್ವಲ್ಪ ಮಟ್ಟಿನ ಸಡಿಲಿಕೆಗೆ ಆರ್ಥಿಕ ತಜ್ಞರು ಒಪ್ಪುತ್ತಾರಾದರೂ, ರೇಟಿಂಗ್ ಏಜೆನ್ಸಿಗಳು ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ದೇಶವು ಈ ಗುರಿಗೆ ಕಟ್ಟುನಿಟ್ಟಿನ ಬದ್ಧತೆ ತೋರಬೇಕಿದೆ ಎಂದು ಬಯಸುತ್ತಿದೆ.

ವರ್ಷಗಳಿಂದೀಚೆಗೆ ಈ ಗುರಿ ಹೇಗೆ ಬದಲಾಗಿದೆ?
2011-12ರಲ್ಲಿ ಶೇ.5.9ರಷ್ಟನ್ನು ತಲುಪಿದ್ದ ವಿತ್ತೀಯ ಕೊರತೆಯು 2017-18ಕ್ಕೆ ಶೇ.3.5ರವರೆಗೆ ಇಳಿದು ಸಮಾಧಾನಕರ ಬೆಳವಣಿಗೆ ಕಂಡಿತ್ತು. 2018-19ರಲ್ಲಿ ಶೇ.3.3 ತಲುಪುವ ಗುರಿ ಇರಿಸಲಾಗಿತ್ತು. ಜುಲೈ 2019ರ ಬಜೆಟ್ ವೇಳೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಗುರಿಯನ್ನು ಶೇ.3.4ರಿಂದ ಶೇ.3.3ಕ್ಕೆ ಇಳಿಸಿರುವುದರೊಂದಿಗೆ, ಗುರಿ ಸಾಧಿಸಿ ಆರ್ಥಿಕತೆ ಸುಧಾರಿಸಲು ಸರ್ಕಾರಕ್ಕಿದ್ದ ಬದ್ಧತೆಯನ್ನು ಸ್ಪಷ್ಟಪಡಿಸಿದ್ದರು.

ದೇಶದ ಮೊದಲ ಕಾಗದ ರಹಿತ ಡಿಜಿಟಲ್ ಬಜೆಟ್: ನಿರ್ಮಲಾ ಸೀತಾರಾಮನ್

ದೇಶದ ಮೊದಲ ಕಾಗದ ರಹಿತ ಡಿಜಿಟಲ್ ಬಜೆಟ್: ನಿರ್ಮಲಾ ಸೀತಾರಾಮನ್

ಏಜೆನ್ಸೀಸ್‌ Updated: 
prajavani

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2021–22ನೇ ಹಣಕಾಸು ವರ್ಷದ ಬಜೆಟ್ ಮಂಡನೆ ಆರಂಭಿಸಿದ್ದಾರೆ.

ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ದಶಕದ ಮೊದಲ ಬಜೆಟ್...
ಈ ದಶಕದ ಮೊದಲ ಬಜೆಟ್ ಕೂಡಾ ಇದಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ದೇಶದೊಳಗಿನ ಅಥವಾ ದೇಶದ ಪ್ರದೇಶಗಳ ಮೇಲೆ ಸಂಭವಿಸಿರಬಹುದಾದ ವಿಪತ್ತುಗಳ ದೃಷ್ಟಿಯಿಂದ ನೋಡಿದರೆ ಹಿಂದೆಂದೂ ಕಂಡಿರದಂತಹ ಪರಿಸ್ಥಿತಿಯಲ್ಲಿ ಈ ಬಾರಿ ಬಜೆಟ್ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಬಡ ಜನರಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ ಎಂಬುದನ್ನು ಒತ್ತಿ ಹೇಳಿದರು. ಕೋವಿಡ್-19 ಎದುರಿಸುವಲ್ಲಿ ಲಸಿಕೆ ಅಭಿವೃದ್ಧಿಪಡಿಸಿರುವುದನ್ನು ಉಲ್ಲೇಖಿಸಿದರು.

ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ.


ಕೋವಿಡ್-19 ಹಿನ್ನೆಲೆಯಲ್ಲಿ ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಬಳಿಕ ಸಾಫ್ಟ್ ಕಾಪಿಗಳನ್ನು ಸಂಸದರಿಗೆ ಹಂಚಲಾಗುವುದು. ಸಾರ್ವಜನಿಕರು ಆ್ಯಪ್ ಮೂಲಕವೂ ಬಜೆಟ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

Union Budget 2021: ಬೆಂಗಳೂರು ಮೆಟ್ರೋ ಯೋಜನೆಗೆ ₹14,788 ಕೋಟಿ ಘೋಷಣೆ

Union Budget 2021: ಬೆಂಗಳೂರು ಮೆಟ್ರೋ ಯೋಜನೆಗೆ 14,788 ಕೋಟಿ ಘೋಷಣೆ

ಏಜೆನ್ಸೀಸ್‌ Updated: 
prajavani

ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2021–22ನೇ ಹಣಕಾಸು ವರ್ಷದ ಬಜೆಟ್ ಮಂಡಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಬೆಂಗಳೂರು ನಮ್ಮ ಮೆಟ್ರೋ ರೈಲು ಯೋಜನೆಗೆ ಬರೋಬ್ಬರಿ 14,788 ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದಾರೆ.

ಬೆಂಗಳೂರು ಮೆಟ್ರೋ ವ್ಯಾಪ್ತಿಯನ್ನು ಮತ್ತಷ್ಟು 58.19 ಕಿ.ಮೀ. ದೂರ ವಿಸ್ತರಿಸಲು ಈ ಅನುದಾನ ಘೋಷಿಸಲಾಗಿದೆ.

ಕೇಂದ್ರ ಬಜೆಟ್ 2021 ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಈ ಮಹತ್ವದ ಘೋಷಣೆ ಮಾಡಿದರು.

ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಮಂಡಿಸಲಾಗುತ್ತಿದೆ. ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಬಳಿಕ ಸಾಫ್ಟ್ ಕಾಪಿಗಳನ್ನು ಸಂಸದರಿಗೆ ಹಂಚಲಾಗುವುದು. ಸಾರ್ವಜನಿಕರು ಆ್ಯಪ್ ಮೂಲಕವೂ ಬಜೆಟ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

Budget 2021: ದೇಶದ ಮೊದಲ ಡಿಜಿಟಲ್ ಜನಗಣತಿಗೆ ₹3,768 ಕೋಟಿ

Budget 2021: ದೇಶದ ಮೊದಲ ಡಿಜಿಟಲ್ ಜನಗಣತಿಗೆ 3,768 ಕೋಟಿ

ಏಜೆನ್ಸೀಸ್‌ Updated: 
prajavani

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಕೇಂದ್ರ ಬಜೆಟ್ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಆರ್ಥಿಕ ಸಾಲಿನ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿಯನ್ನು ಘೋಷಣೆ ಮಾಡಿದ್ದರು.
ಅಷ್ಟೇ ಅಲ್ಲದೆ ಡಿಜಿಟಲ್ ಜನಗಣತಿಗೆ 3,768 ಕೋಟಿ ಮೀಸಲಿಡುವುದಾಗಿ ತಿಳಿಸಿದರು.

 ಸಂಸಸತ್ತಿನಲ್ಲಿ ಬಜೆಟ್ ಭಾಷಣದಲ್ಲಿ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ಕಾಗಿ 3,768 ಕೋಟಿ ರೂ.ಗಳನ್ನು ಮೀಸಲಿಡುತ್ತೇನೆ ಎಂದು ತಿಳಿಸಿದರು.

 

ಭಾರತ ಪ್ರಜಾಪ್ರಭುತ್ವದಲ್ಲಿ ಇದೇ ಮೊದಲ ಬಾರಿಗೆ ಕಾಗದರಹಿತ ಡಿಜಿಟಲ್ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದರು.

ಕೋವಿಡ್-19 ನಿಮಯಗಳು ಜಾರಿಯಲ್ಲಿರುವುದರಿಂದ ಬಜೆಟ್ ಪ್ರತಿಗಳನ್ನು ಮುದ್ರಿಸಲಾಗುತ್ತಿಲ್ಲ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಬಳಿಕ ಸಾಫ್ಟ್ ಕಾಪಿಗಳನ್ನು ಸಂಸದರಿಗೆ ಹಂಚಲಾಗುವುದು. ಸಾರ್ವಜನಿಕರು ಆ್ಯಪ್ ಮೂಲಕವೂ ಬಜೆಟ್ ಪ್ರತಿಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

Union Budget 2021: ಆದಾಯ ತೆರಿಗೆ ಮಿತಿ ಯಥಾಸ್ಥಿತಿ

Union Budget 2021: ಆದಾಯ ತೆರಿಗೆ ಮಿತಿ ಯಥಾಸ್ಥಿತಿ

ಏಜೆನ್ಸೀಸ್‌ Updated: 
prajavani

ನಿರ್ಮಲಾ ಸೀತಾರಾಮನ್

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ 2020–21ನೇ ಸಾಲಿನ ಬಜೆಟ್‌ನಲ್ಲಿ, ಆದಾಯ ತೆರಿಗೆ ಮಿತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಈ ಸಲದ ಬಜೆಟ್‌ನಲ್ಲಿ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುತ್ತದೆ ಎಂಬ ಮಧ್ಯಮ ವರ್ಗದ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ.

ಕಳೆದ ಹಣಕಾಸು ವರ್ಷದ ಆದಾಯ ತೆರಿಗೆ ಮಿತಿ ಪ್ರಕಾರ, ವರ್ಷಕ್ಕೆ 5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ.

75 ವರ್ಷ ಹಾಗೂ ಮೇಲ್ಪಟ್ಟ ಹಿರಿಯ ನಾಗರಿಕರು ಪಿಂಚಣಿ ಖಾತೆ ಮತ್ತು ಎಫ್‌ಡಿಯನ್ನು ಒಂದೇ ಬ್ಯಾಂಕ್‌ ಶಾಖೆಯಲ್ಲಿ ಹೊಂದಿರುವವರು ಏಪ್ರಿಲ್‌ 1 ರಿಂದ ಐಟಿ ರಿಟರ್ನ್ ಸಲ್ಲಿಸುವ ಅವಶ್ಯಕತೆ ಇಲ್ಲ. ಬ್ಯಾಂಕುಗಳೇ ಸಂಬಂಧಿಸಿದ ತೆರಿಗೆಯನ್ನು ಕಡಿತ ಮಾಡಲಿವೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

‘ದೇಶ ಈ ವರ್ಷ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಹಿರಿಯರು ದೇಶ ಕಟ್ಟುವ ಕಾರ್ಯಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಹೀಗಾಗಿ 75 ವರ್ಷದ ಹಾಗೂ ಮೇಲ್ಪಟ್ಟ ಹಿರಿಯ ನಾಗರಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಈ ವಿನಾಯಿತಿ ಘೋಷಿಸಲಾಗಿದೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Budget 2021: ಮೂಲಸೌಕರ್ಯ, ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ: ನಿರ್ಮಲಾ ಸೀತಾರಾಮನ್

Budget 2021: ಮೂಲಸೌಕರ್ಯ, ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ: ನಿರ್ಮಲಾ ಸೀತಾರಾಮನ್

ಏಜೆನ್ಸೀಸ್‌ Updated: 
prajavani

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: 2021–22ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಸೋಮವಾರ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮೂಲಸೌಕರ್ಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ನಾವೆಲ್ಲರೂ ಆರ್ಥಿಕತೆಗೆ ಉತ್ತೇಜನ ನೀಡಲು ಬಯಸಿದ ಈ ಸಂದರ್ಭದಲ್ಲಿ ಬಜೆಟ್ ಮಂಡನೆಯಾಗಿದೆ. ಮೂಲಸೌಕರ್ಯ ವೃದ್ಧಿ ಮೇಲೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದು ತಿಳಿಸಿದರು.


ಕೇಂದ್ರ ಬಜೆಟ್ 2021 ಲೈವ್ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

ಕೇಂದ್ರ ಬಜೆಟ್ ಪ್ರಮುಖಾಂಶಗಳ ಮೇಲೆ ಮೆಲುಕು ಹಾಕಿದ ವಿತ್ತ ಸಚಿವೆ, ನಾವು ರಸ್ತೆ, ವಿದ್ಯುತ್ ಉತ್ಪಾದನೆ, ಸೇತುವೆ, ಬಂದರು ನಿರ್ಮಾಣ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ವ್ಯಾಪಿಸಿರುವ ಮೂಲಸೌಕರ್ಯಗಳ ಮೇಲೆ ಹೆಚ್ಚು ಅನುದಾನ ನೀಡಿದ್ದೇವೆ ಎಂದು ತಿಳಿಸಿದರು.

ಎರಡನೇಯದಾಗಿ ನಾವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಕಳೆದ ವರ್ಷ ನಾವು ಎದುರಿಸಿದ ಸಮಸ್ಯೆಯಿಂದ ಈ ಕ್ಷೇತ್ರದಲ್ಲಿ ಆಗಾಧ ಸಾಮರ್ಥ್ಯವಿದೆ ಎಂಬುದನ್ನು ಮನಗಂಡಿದ್ದೇವೆ ಎಂದು ಹೇಳಿದರು.

ಅದೇ ಹೊತ್ತಿಗೆ ಕೃಷಿ ಮೂಲಸೌಕರ್ಯ ಸೆಸ್‌ನ ಹೆಚ್ಚಳದ ಹೊರತಾಗಿಯೂ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದಿಲ್ಲ. ಅಲ್ಲದೆ ಪೆಟ್ರೋಲ್-ಡೀಸೆಲ್‌ಗಾಗಿ ಗ್ರಾಹಕರು ಹೆಚ್ಚುವರಿ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ಸರ್ಕಾರದ ಖರ್ಚು ಹಾಗೂ ಆದಾಯದ ಲೇವಾದೇವಿ ಈಗ ಹೆಚ್ಚು ಪಾರದರ್ಶಕವಾಗಿದೆ ಎಂದವರು ತಿಳಿಸಿದರು.

Union Budget 2021: 42 ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ₹2,217 ಕೋಟಿ

Union Budget 2021: 42 ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ 2,217 ಕೋಟಿ

ಪಿಟಿಐ Updated: 
prajavani

ಪ್ರಾತಿನಿಧಿಕ ಚಿತ್ರ

ನವದೆಹಲಿ: ದೇಶದ 42 ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಿಸುವ ಕಾರ್ಯಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 2,217 ಕೋಟಿ ಮೀಸಲಿಟ್ಟಿದೆ.

‘10 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಒತ್ತು ನೀಡಲಾಗುವುದು’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಇದನ್ನು ಹೊರತುಪಡಿಸಿ ಪರಿಸರ ಸಚಿವಾಲಯಕ್ಕೆ ಈ ಬಜೆಟ್‌ನಲ್ಲಿ 2869.93 ಕೋಟಿ ನಿಗದಿಪಡಿಸಲಾಗಿದೆ. ಆದರೂ, ಕಳೆದ ಬಜೆಟ್‌ಗೆ ಹೋಲಿಸಿದರೆ  2021–22ರಲ್ಲಿ ಸಚಿವಾಲಯಕ್ಕೆ ನೀಡಿದ ಅನುದಾನದಲ್ಲಿ ಶೇ 8ರಷ್ಟು ಕಡಿಮೆಯಾಗಿದೆ.

ಅಲ್ಲದೆ, ರಾಷ್ಟ್ರ ರಾಜಧಾನಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಯ ಉದ್ದೇಶಕ್ಕಾಗಿ ಹೊಸದಾಗಿ ರಚಿಸಲಾಗಿರುವ ಆಯೋಗಕ್ಕೆ ಇದೇ ಮೊದಲ ಬಾರಿಗೆ ಬಜೆಟ್‌ನಲ್ಲಿ 20 ಕೋಟಿ ಅನುದಾನ ನಿಗದಿಪಡಿಸಲಾಗಿದೆ.

ಈ ಬಾರಿ ಹವಾಮಾನ ಬದಲಾವಣೆ ಕ್ರಿಯಾಯೋಜನೆಗೆ ಮೀಸಲಿಟ್ಟ ಅನುದಾನದಲ್ಲಿ 10 ಕೋಟಿ ಹಾಗೂ ಹುಲಿ ಸಂರಕ್ಷಣಾ ಯೋಜನೆಯ ಅನುದಾನದಲ್ಲಿ 50 ಕೋಟಿ ಕಳೆದ ಸಾಲಿಗೆ ಹೋಲಿಸಿದರೆ ಕಡಿತವಾಗಿದೆ. ಈ ವರ್ಷ ಕ್ರಿಯಾಯೋಜನೆಗೆ 30 ಕೋಟಿ ಘೋಷಿಸಲಾಗಿದೆ.

ಆದರೆ, ರಾಷ್ಟ್ರೀಯು ಕೋಸ್ಟಲ್ ಮಿಷನ್‌ಗೆ ಈ ಬಜೆಟ್‌ನಲ್ಲಿ ಮೊತ್ತವನ್ನು ದುಪ್ಪಟ್ಟುಗೊಳಿಸಿದ್ದು, ಒಟ್ಟಾರೆ 200 ಕೋಟಿ ನಿಗದಿಪಡಿಸಲಾಗಿದೆ. ಕಳೆದ ವರ್ಷ 103 ಕೋಟಿ ನಿಗದಿಪಡಿಸಲಾಗಿತ್ತು. ಮೀನುಗಾರರು, ಕರಾವರಿ ತೀರ ರಕ್ಷಣೆಯಲ್ಲಿ ತೊಡಗಿರುವ ಸಮುದಾಯಗಳಿಗೆ ಜೀವನಭದ್ರತೆಯನ್ನು ಈ ಮಿಷನ್‌ ನಡಿ ಒದಗಿಸಲಾಗುತ್ತದೆ.

‘ಹಳೆಯ ವಾಹನಗಳ ವಾಪಸ್‌ಗೆ ಕ್ರಮ‘: ಅಲ್ಲದೆ, ಹಳೆಯ ಹಾಗೂ ವಾಯುಮಾಲಿನ್ಯಕ್ಕೆ ಪ್ರಮುಖವಾಗಿ ಕಾರಣವಾಗುವ ವಾಹನಗಳನ್ನು ಹಂತ ಹಂತವಾಗಿ ಸ್ವಯಂಪ್ರೇರಿತವಾಗಿ ಬಳಕೆಯಿಂದ ಹಿಂಪಡೆಯುವ ಕಾರ್ಯಕ್ರಮವನ್ನೂ ಕೇಂದ್ರವು ಪ್ರಕಟಿಸಿದೆ. ಅದರಂತೆ, ವೈಯಕ್ತಿಕ ಬಳಕೆಯ ವಾಹನಗಳಿಗೆ 20 ವರ್ಷದ ನಂತರ ತಪಾಸಣೆಗೆ ಒಳಪಡಿಸಿ ಸುಸ್ಥಿತಿಯಲ್ಲಿದೆ ಎಂದು ಪ್ರಮಾಣಪತ್ರ ಪಡೆಯುವುದು ಅಗತ್ಯ. ವಾಣಿಜ್ಯ ಉದ್ದೇಶದ ವಾಹನಗಳನ್ನು 15 ವರ್ಷಗಳ ತರುವಾಯ ತಪಾಸಣೆಗೆ ಒಳಪಡಿಸಿ ಪ್ರಮಾಣಪತ್ರ ಪಡೆಯುವುದು ಅಗತ್ಯ.

ಈ ನೀತಿಯ ವ್ಯಾಪ್ತಿಗೆ ಸುಮಾರು 1 ಕೋಟಿಯಷ್ಟು ಹಳೆಯ ಹಗುರ, ಮಧ್ಯಮ ಮತ್ತು ಭಾರಿ ವಾಹನಗಳು ಒಳಪಡಲಿವೆ. ಈ ವಾಹನಗಳು ಹೊಸ ವಾಹನಗಳಿಗಿಂತಲೂ ಶೇ 10 ರಿಂದ 12 ಪಟ್ಟು ಹೆಚ್ಚು ಹೊಗೆಯನ್ನು ವಾತಾವರಣಕ್ಕೆ ಸೇರಿಸುತ್ತವೆ ಎಂದು ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯಿಸಿದರು.

Union Budget 2021: ನಮ್ಮ ಮೆಟ್ರೊ 2ಎ, 2ಬಿ ಮಾರ್ಗಗಳಿಗೆ ಅನುದಾನ

Union Budget 2021: ನಮ್ಮ ಮೆಟ್ರೊ 2ಎ, 2ಬಿ ಮಾರ್ಗಗಳಿಗೆ ಅನುದಾನ

ಪ್ರಜಾವಾಣಿ ವಾರ್ತೆ Updated: 
prajavani

ನಮ್ಮ ಮೆಟ್ರೊ –ಸಾಂದರ್ಭಿಕ ಚಿತ್ರ

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆಯ 2ಎ ಮತ್ತು 2ಬಿ  ಮಾರ್ಗಗಳಿಗೆ ಕೇಂದ್ರದ ಪಾಲಿನ ಅನುದಾನ ಒದಗಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2021–22ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ನಮ್ಮ ಮೆಟ್ರೊ 2ಎ ಮಾರ್ಗವು ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರದವರೆಗೆ ಹಾಗೂ 2 ಬಿ ಮಾರ್ಗವು ಕೆ.ಆರ್‌.ಪುರದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಿರ್ಮಾಣವಾಗಲಿದೆ. ಒಟ್ಟು 58.19 ಕಿ.ಮೀ ಉದ್ದದ ಈ ಮಾರ್ಗಗಳ  ಕಾಮಗಾರಿಗೆ 14,788 ಕೋಟಿ ವೆಚ್ಚವಾಗಲಿದೆ. ಇದರಲ್ಲಿ ಕೇಂದ್ರವು ಹೆಚ್ಚೂ ಕಡಿಮೆ ಶೇ 20ರಷ್ಟು ಪಾಲನ್ನು ಭರಿಸಲಿದೆ.

‘ಈ ಎರಡು ಮಾರ್ಗಗಳಿಗೆ ಕೇಂದ್ರದಿಂದ ನಿಖರವಾಗಿ ಎಷ್ಟು ಮೊತ್ತ ಸಿಗಲಿದೆ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ. ಇದರಲ್ಲಿ ಮೂಲ ಬಂಡವಾಳ ವೆಚ್ಚ, ಭೂಮಿ ವೆಚ್ಚ, ತೆರಿಗೆಗೆ ಸಂಬಂಧಿಸಿದ ವೆಚ್ಚಗಳು ಸೇರಿಸಿ ಈ ಮೊತ್ತವನ್ನು ಲೆಕ್ಕಾಚಾರ ಹಾಕಬೇಕಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಚ್ಚರಿಯ ವಿಷಯವೆಂದರೆ ಈ ಎರಡೂ ಮಾರ್ಗಗಳಿಗೂ ಕೇಂದ್ರ ಸಚಿವ ಸಂಪುಟ ಇನ್ನೂ ಅನುಮೋದನೆ ನೀಡಿಲ್ಲ. ಕೇಂದ್ರದ ಅನುಮೋದನೆಗಾಗಿ ಬಿಎಂಆರ್‌ಸಿಎಲ್‌ ಮೂರು ವರ್ಷಗಳಿಂದ ಕಾಯುತ್ತಿದೆ.

‘ಈ ಎರಡು ಮಾರ್ಗಗಳಿಗೆ ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಅನುದಾನವನ್ನೂ ಬಿಡುಗಡೆ ಮಾಡಿದೆ. ಅದರಲ್ಲೇ ಭೂಸ್ವಾಧೀನ ಹಾಗೂ ಅಗತ್ಯ ಮೂಲಸೌಕರ್ಯಗಳ ಸ್ಥಳಾಂತರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಈಗ ಈ ಯೋಜನೆಗಳ ಬಗ್ಗೆ ಹಣಕಾಸು ಸಚಿವರು ಬಜೆಟ್‌ನಲ್ಲೇ ಪ್ರಸ್ತಾಪಿಸಿರುವುದರಿಂದ ಎರಡನೇ  ಹಂತದ ಈ ಎರಡೂ ವಿಸ್ತರಿತ ಮಾರ್ಗಗಳಿಗೂ ಕೇಂದ್ರದಿಂದ ಶೀಘ್ರವೇ ಅನುಮೋದನೆ ಸಿಗುವ ಭರವಸೆ ಮೂಡಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ತಿಳಿಸಿದರು.

‘ವಿಮಾನನಿಲ್ದಾಣಕ್ಕೆ ಮೆಟ್ರೊ  ಸಂಪರ್ಕ ಕಲ್ಪಿಸುವ ಯೋಜನೆಗೆ ಅನುಮೋದನೆ ನೀಡದಿದ್ದರೂ ಕೇಂದ್ರದ ಪಾಲಿಗೆ ಅನುದಾನ ಬಿಡುಗಡೆ ಬಗ್ಗೆ ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವರು ಪ್ರಸ್ತಾಪಿಸಿರುವುದು ಸ್ವಾಗತಾರ್ಹ. ಆದರೆ, ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರ ವರ್ಷಾನುಗಟ್ಟಲೆ ಸತಾಯಿಸುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ’ ಎಂದು ‘ಪ್ರಜಾರಾಗ್‌’ನ ಸಂಜೀವ ದ್ಯಾಮಣ್ಣವರ್‌ ಅಚ್ಚರಿ ವ್ಯಕ್ತಪಡಿಸಿದರು.

ಉಪನಗರ ರೈಲು ಯೋಜನೆಯ ಉಲ್ಲೇಖವಿಲ್ಲ

ಉಪನಗರ ರೈಲು ಯೋಜನೆಗೆ ಬಜೆಟ್‌ನಲ್ಲಿ ಎಷ್ಟು ಅನುದಾನ ಕಾಯ್ದಿರಿಸಲಾಗಿದೆ ಎಂದು ಬಜೆಟ್‌ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್‌ ಉಲ್ಲೇಖಿಸಿಲ್ಲ. ರೈಲ್ವೆ ಇಲಾಖೆಯ ಪಿಂಕ್‌ ಬುಕ್‌ ಬಿಡುಗಡೆಯಾದ ಬಳಿಕವೇ ಈ ಕುರಿತ ವಿವರಗಳು ಸಿಗಲಿವೆ.

ನಗರದಲ್ಲಿ ಉಪನಗರ ರೈಲು ಸೇವೆಗೆ ಮೂಲಸೌಕರ್ಯ ಕಲ್ಪಿಸುವ 15,767 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ 2020ರಲ್ಲಿ ಅನುಮೋದನೆ ನೀಡಿತ್ತು. ಒಟ್ಟು ಮೊತ್ತದಲ್ಲಿ 2,479 ಕೋಟಿಯನ್ನು ಕೇಂದ್ರ ಭರಿಸಲಿದೆ. ಆದರೆ, ರೈಲ್ವೆ ಸಚಿವಾಲಯವು ಅನುದಾನದ ರೂಪದಲ್ಲಿ  500 ಕೋಟಿಯನ್ನು ಮಾತ್ರ ನೀಡಲಿದ್ದು, ತನ್ನ ಪಾಲಿನ ಉಳಿದ ಮೊತ್ತವನ್ನು ರೈಲ್ವೆ ಜಾಗದ ನಗದೀಕರಣದಿಂದ ಹೊಂದಿಸಲು ಸೂಚಿಸಿತ್ತು.

‘ಹೈಸ್ಪೀಡ್‌ ರೈಲು– ದೇಸೀಕರಣ ಅಗತ್ಯ’

‘ದೇಶದ ರೈಲ್ವೆ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಭರಪೂರ ಅನುದಾನ ಪ್ರಕಟಿಸಿದ್ದಾರೆ. ಆದರೆ, ಹೈಸ್ಪೀಡ್‌ ರೈಲು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ನಮ್ಮ ದೇಶವು ಹಿಂದೆ ಬಿದ್ದಿದೆ’ ಎಂದು ಸಂಜೀವ ದ್ಯಾಮಣ್ಣವರ್‌ ಅಭಿಪ್ರಾಯಪಟ್ಟರು. 

‘ಹೈಸ್ಪೀಡ್‌ ರೈಲು ತಂತ್ರಜ್ಞಾನವನ್ನು ನಮ್ಮ ದೇಶದಲ್ಲೇ ಅಭಿವೃದ್ಧಿಪಡಿಸುವುದು, ಬೋಗಿಗಳ ವಿನ್ಯಾಸ, ಹಳಿಗಳ ಸುಧಾರಣೆ, ಸುರಕ್ಷತಾ ಅಂಶಗಳ ಸುಧಾರಣೆಗೆ ಮತ್ತು ಸಂಶೋಧನೆಗೆ ಸಮಗ್ರ ಕಾರ್ಯಕ್ರಮ ರೂಪಿಸುವ ಅಗತ್ಯವಿತ್ತು. ಈ ವಿಚಾರದಲ್ಲಿ ಚೀನಾ ನಮಗಿಂತ ತುಂಬಾ ಮುಂದಿದೆ. ಶೇ 70ರಷ್ಟು ಮೆಟ್ರೊ ಸೌಕರ್ಯವನ್ನು ದೇಸೀಯವಾಗಿ ಅಭಿವೃದ್ಧಿಪಡಿಸುವಲ್ಲಿ ಸಫಲರಾಗಿದ್ದೇವೆ. ಅದೇ ರೀತಿ ಹೈಸ್ಪೀಡ್‌ ರೈಲು ಸಂಪರ್ಕಕ್ಕೂ ಒತ್ತು ನೀಡದೇ ಹೋದರೆ ಈ ಕ್ಷೇತ್ರದಲ್ಲಿ ಆತ್ಮನಿರ್ಭರ ಗುರಿ ಸಾಧನೆ ಸಾಧ್ಯವಾಗದು’ ಎಂದರು. 

‘ರೈಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೆ ಬಜೆಟ್‌ನಲ್ಲಿ ಒತ್ತು ನೀಡಿರುವುದು ಸ್ವಾಗತಾರ್ಹ. ಇದರಿಂದ ರಾಜ್ಯದ ಅನೇಕ ರೈಲು ಮಾರ್ಗಗಳ ವಿದ್ಯುದೀಕರಣ ಕಾಮಗಾರಿಗಳಿಗೂ ಅನುಕೂಲವಾಗಲಿದೆ. ಇನ್ನೆರಡು ವರ್ಷಗಳಲ್ಲಿ ರಾಜ್ಯದ ಎಲ್ಲ ರೈಲು ಮಾರ್ಗಗಳು ವಿದ್ಯುದೀಕರಣಗೊಳ್ಳಲಿವೆ’ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

Union Budget 2021: 15 ಸಾವಿರ ಮಾದರಿ ಶಾಲೆ

Union Budget 2021: 15 ಸಾವಿರ ಮಾದರಿ ಶಾಲೆ

ಪ್ರಜಾವಾಣಿ ವಾರ್ತೆ Updated: 
prajavani

ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಾದ್ಯಂತ 15 ಸಾವಿರ ಶಾಲೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಅಂಶಗಳಡಿಯಲ್ಲಿ ಗುಣಾತ್ಮಕವಾಗಿ ಸದೃಢಗೊಳಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದ್ದು, ಆಯಾ ಪ್ರದೇಶಗಳಲ್ಲಿ ಅವುಗಳು ನೀತಿಯಲ್ಲಿನ ಧ್ಯೇಯವನ್ನು ಸಾಧಿಸಲು ಇತರೆ ಶಾಲೆಗಳಿಗೆ ಮಾದರಿ ಶಾಲೆಗಳಾಗಿ ಹೊರಹೊಮ್ಮಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಸರ್ಕಾರೇತರ ಸಂಸ್ಥೆ(ಎನ್‌ಜಿಒ), ಖಾಸಗಿ ಶಾಲೆಗಳು ಹಾಗೂ ರಾಜ್ಯಗಳ ಸಹಭಾಗಿತ್ವದಲ್ಲಿ 100 ಸೈನಿಕ ಶಾಲೆಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. 2019–20ನೇ ಬಜೆಟ್‌ನಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣ ಆಯೋಗದ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದೆ. ಇದನ್ನು ಅನುಷ್ಠಾನಗೊಳಿಸಲು ಈ ವರ್ಷ ಶಾಸನ ರಚನೆ ಮಾಡಲಾಗುವುದು ಎಂದರು.

ನೂತನ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಲೇಹ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ಬುಡಕಟ್ಟು ಪ್ರದೇಶಗಳಲ್ಲಿ 750 ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣ ಮಾಡುವುದಾಗಿ ಘೋಷಿಸಿದರು. ಈ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಮೂಲಸೌಕರ್ಯ ವ್ಯವಸ್ಥೆ ದೊರೆಯಲು, ಪ್ರತಿ ಶಾಲೆಗೆ 20 ಕೋಟಿಯ ಬದಲಾಗಿ 38 ಕೋಟಿ ನೀಡಲಾಗುವುದು, ಗುಡ್ಡಗಾಡು ಪ್ರದೇಶಗಳಲ್ಲಿ ನಿರ್ಮಾಣವಾಗಲಿರುವ ಶಾಲೆಗಳಿಗೆ 48 ಕೋಟಿ ನೀಡಲಾಗುವುದು ಎಂದರು.

ಎನ್‌ಇಪಿಯ ಭಾಗವಾಗಿ ಶಿಕ್ಷಣ ಕ್ಷೇತ್ರದ ಯೋಜನೆಗಳು

*ಎನ್‌ಇಪಿಯಡಿ ಶಿಕ್ಷಕರ ಗುಣಮಟ್ಟ ಹೆಚ್ಚಳಕ್ಕೆ ‘ನ್ಯಾಷನಲ್‌ ಪ್ರೊಫೆಷನಲ್‌ ಸ್ಟ್ಯಾಂಡರ್ಡ್ಸ್‌ ಫಾರ್‌ ಟೀಚರ್ಚ್‌(ಎನ್‌ಪಿಎಸ್‌ಟಿ) ಅಭಿವೃದ್ಧಿ.

*ಡಿಜಿಟಲ್‌ ಶಿಕ್ಷಣಕ್ಕೆ ಒತ್ತು ನೀಡಲು ‘ನ್ಯಾಷನಲ್‌ ಡಿಜಿಟಲ್‌ ಎಜುಕೇಷನಲ್‌ ಆರ್ಕಿಟೆಕ್ಚರ್‌(ಎನ್‌ಡಿಇಎಆರ್‌) ಸ್ಥಾಪನೆ.

*ಕಿವಿ ಕೇಳದ ಮಕ್ಕಳಿಗಾಗಿ ಆಂಗಿಕ ಭಾಷೆಯ ಮಾನಕೀಕರಣ ಹಾಗೂ ಅವರ ಬಳಕೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪಠ್ಯಕ್ರಮ ಅಭಿವೃದ್ಧಿ

*ಶಾಲಾ ಶಿಕ್ಷಕರಿಗೆ ಪಠ್ಯವಿಷಯಗಳ ಕುರಿತು ಸಲಹೆ ಸೂಚನೆ ನೀಡಲು ನಿವೃತ್ತ ಹಾಗೂ ಹಿರಿಯ ಶಿಕ್ಷಕರ ಬಳಕೆಯನ್ನು ಕೇಂದ್ರವು ಘೋಷಿಸಿದೆ. 

*ಆಟಿಕೆಗಳು ಮನರಂಜನೆ ಹಾಗೂ ಕಲಿಕೆಯ ಅಭಿವ್ಯಕ್ತಿಯಾಗಿದೆ. ಎಲ್ಲ ಹಂತದ ಶಾಲಾ ಶಿಕ್ಷಣಕ್ಕೆ ಆಟಿಕೆ ಆಧಾರಿತ ಕಲಿಕೆಯ ಅಭಿವೃದ್ಧಿ. ಇದರಿಂದ ಮಕ್ಕಳಲ್ಲಿ ಕಲಿಕೆಯಲ್ಲಿ ಆಸಕ್ತಿ ಹೆಚ್ಚಲಿದ್ದು, ತರಗತಿ ಪಾಠದ ವಾತಾವರಣ ಬದಲಾಗಲಿದೆ. 

*ಇಲ್ಲಿಯವರೆಗೂ ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದಲ್ಲಷ್ಟೇ ಅರ್ಹತೆಯನ್ನು ನಿರ್ಧರಿಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಪ್ರತಿ ಮಗುವಿನ ಆಸಕ್ತಿದಾಯಕ ಕ್ಷೇತ್ರಗಳನ್ನು ಗುರುತಿಸಲು ಹಾಗೂ ಅದನ್ನು ಪ್ರೋತ್ಸಾಹಿಸಲು ಆದ್ಯತೆ

2022–23ನೇ ಸಾಲಿನಿಂದ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯಲ್ಲಿ ಹಂತ ಹಂತವಾಗಿ ಸುಧಾರಣೆ ತಂದು ವಾಡಿಕೆ ಕಲಿಕೆ, ಪರೀಕ್ಷೆಯ ಬದಲಾಗಿ ವಾಸ್ತವ ಸ್ಥಿತಿಯಲ್ಲಿ ಮಕ್ಕಳು ತಮ್ಮ ಕಲಿಕೆಯನ್ನು ಹೇಗೆ ಅಳವಡಿಸುತ್ತಾರೆ, ವಿಶ್ಲೇಷಕ ಕೌಶಲ್ಯದ ಮುಖಾಂತರ ಅವರ ಪರೀಕ್ಷೆ ನಡೆಯಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.  

*35,219 ಕೋಟಿ: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಷ್ಕರಿಸಿದ್ದು, ಇದರಲ್ಲಿ ಕೇಂದ್ರದ ಪಾಲನ್ನು ಹೆಚ್ಚಿಸಲಾಗಿದೆ. 2025–26ರವರೆಗೆ ಈ ಯೋಜನೆಗೆ ಕೇಂದ್ರವು ಮೀಸಲಿರಿಸಿರುವ ಹಣ ಇದಾಗಿದೆ. ಇದರಿಂದ 4 ಕೋಟಿ ಎಸ್ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. 

Union Budget 2021: ಅಪೌಷ್ಟಿಕತೆ ನಿವಾರಣೆಗೆ ‘ಮಿಷನ್ ಪೋಷಣ್ 2.0’

Union Budget 2021: ಅಪೌಷ್ಟಿಕತೆ ನಿವಾರಣೆಗೆ ‘ಮಿಷನ್ ಪೋಷಣ್ 2.0’

ಪಿಟಿಐ Updated: 
prajavani

ಸಾಂದರ್ಭಿಕ ಚಿತ್ರ

ನವದೆಹಲಿ: ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ ಮತ್ತು ಪೋಷಣ್ ಅಭಿಯಾನವನ್ನು ವಿಲೀನಗೊಳಿಸಿ ‘ಮಿಷನ್ ಪೋಷಣ್‌ 2.0’ ಹೆಸರಿನಲ್ಲಿ ಯೋಜನೆ ಪ್ರಾರಂಭಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

‘ಪೌಷ್ಟಿಕಾಂಶ ಕುರಿತು ಜಾಗೃತಿ ಮೂಡಿಸಿ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮವನ್ನು ಬಲಪಡಿಸಲು ಈಗಾಗಲೇ ಆರಂಭಿಸಿರುವ ಪೋಷಣ್ ಅಭಿಯಾನ ಹಾಗೂ ಪೌಷ್ಟಿಕಾಂಶ ಕುರಿತು ಕಾರ್ಯಕ್ರಮಗಳನ್ನು ‘ಮಿಷನ್ ಪೋಷಣ್‌ 2.0’ ಯೋಜನೆಯಡಿ ವಿಲೀನಗೊಳಿಸಲಾಗುವುದು. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 112 ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಆ ಜಿಲ್ಲೆಗಳಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲಾಗುವುದು’ ಎಂದು ನಿರ್ಮಲಾ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌), ಅಂಗನವಾಡಿ ಸೇವೆಗಳು, ಪೋಷಣ್ ಅಭಿಯಾನ, ಹದಿಹರೆಯದ ಬಾಲಕಿಯರ ಯೋಜನೆಗಳು ಇನ್ನು ಮುಂದೆ ‘ಮಿಷನ್ ಪೋಷಣ್ 2.0’ ಯೋಜನೆ ಅಡಿ ಒಂದೇ ಛಾವಣಿಯಡಿ ಸೇರ್ಪಡೆಗೊಳ್ಳಲಿವೆ.

ಅನುದಾನ ಶೇ 16ರಷ್ಟು ಏರಿಕೆ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಕೇಂದ್ರ ಸರ್ಕಾರವು 24,435 ಕೋಟಿ ಮೀಸಲಿರಿಸಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೀಸಲಿರಿಸಿರುವ ಮೊತ್ತದಲ್ಲಿ ಶೇ 16.31ರಷ್ಟು ಏರಿಕೆಯಾಗಿದೆ.

24,435 ಕೋಟಿ ಮೊತ್ತದಲ್ಲಿ 20,105 ಕೋಟಿಯನ್ನು ‘ಸಕ್ಷಮ್ ಅಂಗನವಾಡಿ’ ಯೋಜನೆ ಮತ್ತು ‘ಮಿಷನ್ ಪೋಷಣ್ 2.0’ಗೆ ಮೀಸಲಿರಿಸಲಾಗಿದೆ. ಭೇಟಿ ಬಚಾವೋ ಭೇಟಿ ಪಢಾವೋ, ಒನ್ ಸ್ಟಾಪ್ ಸೆಂಟರ್‌, ಸ್ವಾಧಾರ ಗೃಹ, ಮಕ್ಕಳ ರಕ್ಷಣೆ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಹದಿಹರೆಯದ ಬಾಲಕಿಯರ ಯೋಜನೆ ಮತ್ತು ಉಜ್ವಲ ಅಡುಗೆ ಅನಿಲ ಯೋಜನೆ ಸೇರಿದಂತೆ ಇತರ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಏನೂ ಹಂಚಿಕೆ ಮಾಡಿಲ್ಲ.

ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಸಚಿವಾಲಯದ ಸ್ವಾಯತ್ತ ಸಂಸ್ಥೆಗಳಾದ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (ಎನ್‌ಐಪಿಸಿಸಿಡಿ), ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆ (ಕಾರಾ), ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್), ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಕೇಂದ್ರ ಸಮಾಜ ಕಲ್ಯಾಣ ಮಂಡಳಿಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಹಿಂದಿಗಿಂತ ಹೆಚ್ಚಿನ ಮೊತ್ತದ ಹಣ ಮೀಸಲಿರಿಸಲಾಗಿದೆ. ಆದರೆ, ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣದ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ‌ 726 ಕೋಟಿ ಮೊತ್ತವನ್ನು 48 ಕೋಟಿಗೆ ಇಳಿಸಲಾಗಿದೆ.

Union Budget 2021: ಆದ್ಯತೆ ಪಡೆದ ಮೂಲಸೌಕರ್ಯ

Union Budget 2021: ಆದ್ಯತೆ ಪಡೆದ ಮೂಲಸೌಕರ್ಯ

ಪ್ರಜಾವಾಣಿ ವಾರ್ತೆ Updated: 
prajavani

ಸಾಂದರ್ಭಿಕ ಚಿತ್ರ

ಬಜೆಟ್‌ನಲ್ಲಿ ಹೆದ್ದಾರಿ ವಿಭಾಗಕ್ಕೆ 1.18 ಲಕ್ಷ ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಅತಿಹೆಚ್ಚಿನ ಮೊತ್ತ ಎಂದಿದ್ದಾರೆ. ದಾಖಲೆ ಮೊತ್ತ ಹಣ ನಿಗದಿಪಡಿಸಿರುವುದರಿಂದ ಪ್ರಮುಖ ಹೆದ್ದಾರಿ ಕಾರಿಡಾರ್‌ಗಳು ತ್ವರಿತವಾಗಿ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ. ಕೆಲವು ಪ್ರಮುಖ ಕಾರಿಡಾರ್‌ಗಳು ಮತ್ತು ಇತರ ಪ್ರಮುಖ ಯೋಜನೆಗಳು 2021-22ರಲ್ಲಿ ಸಾಕಷ್ಟು ಚಟುವಟಿಕೆಯನ್ನು ಕಾಣಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿ ಕಾರಿಡಾರ್

* ತಮಿಳುನಾಡು: 1.02 ಲಕ್ಷ ಕೋಟಿ ವೆಚ್ಚದಲ್ಲಿ 3,500 ಕಿಲೋಮೀಟರ್ ರಸ್ತೆ ಅಭಿವೃದ್ಧಿ; ಮದುರೈ–ಕೊಲ್ಲಂ ಕಾರಿಡಾರ್, ಚಿತ್ತೂರು–ತಟ್ಚೂರು ಕಾರಿಡಾರ್ ಮಾರ್ಗದ ರಸ್ತೆ ಕೆಲಸ ಮುಂದಿನ ವರ್ಷದಿಂದ ಆರಂಭ

* ಕೇರಳ: 65000 ಕೋಟಿ ವೆಚ್ಚದಲ್ಲಿ 1,100 ಕಿಲೋಮೀಟರ್ ರಸ್ತೆ ನಿರ್ಮಾಣ; ಮುಂಬೈ–ಕನ್ಯಾಕುಮಾರಿ ಕಾರಿಡಾರ್ ಇದರಲ್ಲಿ ಸೇರಿದೆ

* ಪಶ್ಚಿಮ ಬಂಗಾಳ: 25,000 ಕೋಟಿ ವೆಚ್ಚದಲ್ಲಿ 675 ಕಿಲೋಮೀಟರ್ ರಸ್ತೆ ನಿರ್ಮಾಣ; ಕೋಲ್ಕತ್ತ–ಸಿಲಿಗುರಿ ರಸ್ತೆ ಮೇಲ್ದರ್ಜೆಗೆ

* ಅಸ್ಸಾಂ: 19,000 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ; ಮುಂದಿನ ವರ್ಷಗಳಲ್ಲಿ ಮತ್ತೆ 34,000 ಕೋಟಿ ಮೊತ್ತದ 1,300 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕ್ರಮ

* ದೆಹಲಿ-ಮುಂಬೈ ಎಕ್ಸ್‌ಪ್ರೆಸ್, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲನೆ

* ಪ್ರಸಕ್ತ ಹಣಕಾಸು ವರ್ಷದಲ್ಲಿ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಕಾಮಗಾರಿ ಪ್ರಾರಂಭ

* ಕಾನ್ಪುರ-ಲಖನೌ ಎಕ್ಸ್‌ಪ್ರೆಸ್ ಹೆದ್ದಾರಿ ಕೆಲಸ 2021-22ರಲ್ಲಿ ಪ್ರಾರಂಭ

* 277 ಕಿ.ಮೀ ಉದ್ದದ ಚೆನ್ನೈ-ಸೇಲಂ ಕಾರಿಡಾರ್‌ಗೆ ಶೀಘ್ರ ಆದೇಶ. ಇದು 2021-22ರಲ್ಲಿ ನಿರ್ಮಾಣ ಪ್ರಾರಂಭ

* ಛತ್ತೀಸಗಡ, ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶದ ಮೂಲಕ ಹಾದುಹೋಗುವ ರಾಯ್‌ಪುರ-ವಿಶಾಖಪಟ್ಟಣಂ ಮಾರ್ಗದ 464 ಕಿ.ಮೀ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ಕಾರ್ಯಾದೇಶ; 2021-22ರಲ್ಲಿ ನಿರ್ಮಾಣ ಪ್ರಾರಂಭ

* 2021-22ರಲ್ಲಿ ಅಮೃತಸರ-ಜಾಮ್‌ನಗರ ಹಾಗೂ ದೆಹಲಿ-ಕತ್ರ ಮಾರ್ಗದಲ್ಲಿ ನಿರ್ಮಾಣ ಶುರು

* ಭಾರತ್‌ಮಾಲಾ ಯೋಜನೆಯಡಿ 3.3 ಲಕ್ಷ ಕೋಟಿ ವೆಚ್ಚದಲ್ಲಿ 13,000 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಕಾರ್ಯಾದೇಶ; ಈ ಪೈಕಿ ಈಗಾಗಲೇ 3,800 ಕಿಲೋಮೀಟರ್ ರಸ್ತೆ ಸಿದ್ಧ

ಹಡಗು ಮರುಬಳಕೆ ಸಾಮರ್ಥ್ಯ ವೃದ್ಧಿ ಗುರಿ

* ಹಡಗು ಮರುಬಳಕೆ (ರೀಸೈಕಲ್) ಸಾಮರ್ಥ್ಯ 2024ರಲ್ಲಿ ದ್ವಿಗುಣ (45 ಲಕ್ಷ ಎಲ್‌ಡಿಟಿ)

* ಈ ವಲಯದಲ್ಲಿ 1.5 ಲಕ್ಷ ಉದ್ಯೋಗ ಸೃಷ್ಟಿ

* ಯುರೋಪ್ ಮತ್ತು ಜಪಾನ್‌ನಿಂದ ಹೆಚ್ಚು ಹಡಗುಗಳನ್ನು ತರಿಸಲು ಕ್ರಮ

* ಗುಜರಾತ್‌ನ ಅಲಂಗ್‌ನಲ್ಲಿ ಸುಮಾರು 90 ಹಡಗು ಮರುಬಳಕೆ ಯಾರ್ಡ್‌ಗಳು ಪ್ರಮಾಣಪತ್ರ ಪಡೆದಿವೆ

* ಹಡಗು ಮರುಬಳಕೆ: ಜಾಗತಿಕವಾಗಿ ಭಾರತದ ಪಾಲು ಶೇ 30ರಷ್ಟಿದ್ದು, ಶೇ 50ಕ್ಕೆ ಹೆಚ್ಚಿಸುವ ಗುರಿ

ಕೋಲ್ಕತ್ತದಲ್ಲಿ ಕಾರ್ಮಿಕರು ವಾಣಿಜ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದು. –ರಾಯಿಟರ್ಸ್‌ ಚಿತ್ರ
 

ವಿದ್ಯುತ್ ವಿತರಣಾ ವ್ಯವಸ್ಥೆ ಪುನಶ್ಚೇತನಕ್ಕೆ ಹೆಜ್ಜೆ

ದೇಶದ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂ) ಪುನರುಜ್ಜೀವನಗೊಳಿಸಲು ಐದು ವರ್ಷಗಳಲ್ಲಿ 3.05 ಲಕ್ಷ ಕೋಟಿ  ವಿನಿಯೋಗಿಸುವ ಯೋಜನೆಯನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. ಜೊತೆಗೆ ವಿದ್ಯುತ್ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡುವ ಅವಕಾಶವನ್ನು ಗ್ರಾಹಕರಿಗೇ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ವಿದ್ಯುತ್ ಸೇವಾ ವಿತರಣೆ ಖಚಿತಪಡಿಸಿಕೊಳ್ಳಲು ಕಳೆದ ವರ್ಷ ಗ್ರಾಹಕರ ನಿಯಮಗಳನ್ನು ಜಾರಿಗೊಳಿಸಲಾಗಿತ್ತು.ಎಲ್ಲರಿಗೂ ದಿನದ 24 ಗಂಟೆ ವಿದ್ಯುತ್ ನೀಡುವುದು ಕಾರ್ಯಕ್ರಮದ ಉದ್ದೇಶ.

ರಾಜ್ಯ ಸರ್ಕಾರಗಳ ಒಡೆತನದಲ್ಲಿರುವ ಬಹುತೇಕ ವಿದ್ಯುತ್ ವಿತರಣಾ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿವೆ. ದಿನದ 24 ಗಂಟೆ ವಿದ್ಯುತ್ ಪೂರೈಸಲು ಬೇಕಾದ ವಿದ್ಯುತ್ ಖರೀದಿಸಲು ಹಣಕಾಸಿನ ಕೊರತೆಯಿದೆ. 2020ರ ಡಿಸೆಂಬರ್ ವೇಳೆಗೆ ವಿದ್ಯುತ್ ಉತ್ಪಾದನಾ ಸಂಸ್ಥೆಗಳು ವಿದ್ಯುತ್ ಉತ್ಪಾದಕರಿಂದ 1.35 ಲಕ್ಷ ಕೋಟಿ ಬಾಕಿ ಉಳಿಸಿಕೊಂಡಿವೆ.

ಪೂರ್ವ ಪಾವತಿಸಿದ ಸ್ಮಾರ್ಟ್ ಮೀಟರಿಂಗ್ ಅಳವಡಿಕೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳ ಮೂಲಕ ಡಿಸ್ಕಾಂಗಳ  ಮೂಲಸೌಕರ್ಯ ವೃದ್ಧಿಸಲು ಈ ಯೋಜನೆ ನೆರವು ನೀಡುತ್ತದೆ ಎಂದು ಸಚಿವೆ ಹೇಳಿದರು. ಋಣಭಾರದಲ್ಲಿರುವ ಡಿಸ್ಕಾಂಗಳ ಪುನರುಜ್ಜೀವನಕ್ಕಾಗಿ ಕೇಂದ್ರವು 2015ರ ನವೆಂಬರ್‌ನಲ್ಲಿ ಉದಯ್ (ಉಜ್ವಾಲ್ ಡಿಸ್ಕಾಂ ಅಶ್ಯೂರೆನ್ಸ್ ಯೋಜನೆ) ಯೋಜನೆಯನ್ನು ಪರಿಚಯಿಸಿತ್ತು.

Union Budget 2021: ಸಾಗಣೆ ಮೂಲಸೌಕರ್ಯಕ್ಕೆ ಒತ್ತು

Union Budget 2021: ಸಾಗಣೆ ಮೂಲಸೌಕರ್ಯಕ್ಕೆ ಒತ್ತು

ಪ್ರಜಾವಾಣಿ ವಾರ್ತೆ Updated: 
prajavani

ಆಕರ್ಷಕ ವಿಸ್ಟಾಡೋಮ್ ರೈಲ್ವೆ ಬೋಗಿ

ಕೇಂದ್ರ ಸರ್ಕಾರವು 2021-22ನೇ ಸಾಲಿನ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ದಾಖಲೆಯ 1.10 ಲಕ್ಷ ಕೋಟಿ ಅನುದಾನವನ್ನು ಒದಗಿಸಿದೆ. ಇದರಲ್ಲಿ 1.07 ಲಕ್ಷ ಕೋಟಿ ಬಂಡವಾಳ ವೆಚ್ಚವಾಗಿದೆ. ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಸರಕುಗಳನ್ನು ಸಾಗಣೆ ಮಾಡಿದ ರೈಲ್ವೆ ಇಲಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಹೊಸದಾಗಿ 2 ಸರಕು ಕಾರಿಡಾರ್
ಭಾರತೀಯ ರೈಲ್ವೆ ಇಲಾಖೆಯು 2030ರ ರಾಷ್ಟ್ರೀಯ ರೈಲ್ವೆ ಯೋಜನೆಯನ್ನು ಸಿದ್ಧಪಡಿಸಿದೆ. ಮೇಕ್ ಇನ್ ಇಂಡಿಯಾ ಭಾಗವಾಗಿ, ರೈಲ್ವೆ ಸರಕು ಸಾಗಣೆ ವೆಚ್ಚವನ್ನು ತಗ್ಗಿಸುವುದಕ್ಕಾಗಿ 2030ರ ವೇಳೆಗೆ ಭವಿಷ್ಯದ ರೈಲ್ವೆಯನ್ನು ಸಜ್ಜುಗೊಳಿಸುವುದು ಇದರ ಉದ್ದೇಶ. ಇದಕ್ಕಾಗಿ ಪೂರ್ವ ಸರಕು ಕಾರಿಡಾರ್‌ (ಇಡಿಎಫ್‌ಸಿ) ಮತ್ತು ಪಶ್ಚಿಮ ಸರಕು ಕಾರಿಡಾರ್‌ಗಳನ್ನು (ಡಬ್ಲ್ಯುಡಿಎಫ್‌ಸಿ) ರೂಪಿಸುತ್ತಿದ್ದು, ಜೂನ್ 2022ರೊಳಗೆ ಇವು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಇಡಿಎಫ್‌ಸಿ: ಈ ವರ್ಷವೇ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) 263 ಕಿ.ಮೀ. ದೂರದ ಸೋನೆನಗರ-ಗೊಮೊಹ್ ವಿಭಾಗ ಕಾರ್ಯಾರಂಭ; 274.3 ಕಿ.ಮೀ. ದೂರದ ಗೊಮೊಹ್-ಡಂಕುನಿ ವಿಭಾಗ ಶೀಘ್ರವೇ ಆರಂಭ

* ಭವಿಷ್ಯದ ದಿನಗಳಲ್ಲಿ ಸರಕು ಕಾರಿಡಾರ್ ಯೋಜನೆಗಳನ್ನು ರೈಲ್ವೆ ಕೈಗೆತ್ತಿಕೊಳ್ಳಲಿದೆ; ಖರಗ್‌ಪುರದಿಂದ ವಿಜಯವಾಡದ ಪೂರ್ವ ಕರಾವಳಿ ಕಾರಿಡಾರ್, ಭೂಸಾವಲ್‌ನಿಂದ ಖರಗ್‌ಪುರ ಹಾಗೂ ಡಂಕುನಿವರೆಗೆ ಪೂರ್ವ-ಪಶ್ಚಿಮ ಕಾರಿಡಾರ್ ಮತ್ತು ಇಟಾರ್ಸಿಯಿಂದ ವಿಜಯವಾಡದವರೆಗೆ ಉತ್ತರ-ದಕ್ಷಿಣ ಕಾರಿಡಾರ್ ಕಾರ್ಯಾರಂಭ ಮಾಡಲಿವೆ.

ನೂರರಷ್ಟು ವಿದ್ಯುದೀಕರಣ ಗುರಿ
ಬ್ರಾಡ್‌ಗೇಜ್ ಮಾರ್ಗದ ವಿದ್ಯುದೀಕರಣ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2021ರ ಅಂತ್ಯದ ವೇಳೆಗೆ ಶೇ 72ರಷ್ಟು ಗುರಿ ಸಾಧಿಸಲಿದ್ದು, 2023ರ ಡಿಸೆಂಬರ್ ವೇಳಗೆ ಶೇ 100ರಷ್ಟು ವಿದ್ಯುದೀಕರಣ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.

ಸುರಕ್ಷೆ ಜೊತೆಗೆ ಆರಾಮದಾಯಕ
ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಯ ಬಗ್ಗೆ ರೈಲ್ವೆ ಇಲಾಖೆ ಒತ್ತು ನೀಡಿದೆ. ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ಒದಗಿಸುವ ಸಲುವಾಗಿ ರೈಲ್ವೆ ಪ್ರವಾಸಿ ಮಾರ್ಗಗಳಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ವಿಸ್ಟಾಡೋಮ್ ಎಲ್‌ಎಚ್‌ಬಿ ಬೋಗಿಗಳನ್ನು ಈಗಾಗಲೇ ಪರಿಚಯಿಸಿದೆ.

* ಕಳೆದ ಕೆಲವು ವರ್ಷಗಳಲ್ಲಿ ತೆಗೆದುಕೊಂಡ ಸುರಕ್ಷತಾ ಕ್ರಮಗಳು ಫಲಿತಾಂಶ ನೀಡಿವೆ

* ಮಾನವ ದೋಷದಿಂದ ಉಂಟಾಗುವ ರೈಲ್ವೆ ಅಪಘಾತ ತಡೆಗೆ ದೇಶೀಯವಾಗಿ ವಿನ್ಯಾಸ ಮಾಡಲಾದ ಅಪಘಾತ ತಡೆ ವ್ಯವಸ್ಥೆ ಅಳವಡಿಕೆ

* ಹೆಚ್ಚಿನ ಸಾಂದ್ರತೆಯ ರೈಲ್ವೆ ಜಾಲ ಹೊಂದಿರುವ ಮತ್ತು ಹೆಚ್ಚು ಬಳಸಿದ ಮಾರ್ಗಗಳಲ್ಲಿ ಸ್ವಯಂಚಾಲಿತ ರೈಲು ಘರ್ಷಣೆ ತಡೆ ವ್ಯವಸ್ಥೆ ರೂಪಿಸಲು ಕಾರ್ಯಕ್ರಮ

ಯಾರು ಏನೆಂದರು?

ಎಪಿಎಂಸಿ ಬಲವರ್ಧನೆಗೆ ಅಗತ್ಯವಿರುವ ಅನುದಾನ ಒದಗಿಸಲಾಗಿದೆ. ಕೃಷಿ ಸಾಲದ ಮೊತ್ತವನ್ನೂ ಹೆಚ್ಚಿಸಲಾಗಿದೆ. 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳುವಂತೆ ಮಾಡುವ ಗುರಿ ಇದ್ದು, ಇದಕ್ಕಾಗಿ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ
-ನರೇಂದ್ರ ಸಿಂಗ್‌ ತೋಮರ್‌, ಕೇಂದ್ರ ಕೃಷಿ ಸಚಿವ

*
ಸಮಾಜದ ಎಲ್ಲಾ ಸ್ತರಗಳ ಜನರ ಶ್ರೇಯೋಭಿವೃದ್ಧಿ ಯನ್ನು ಗಮನದಲ್ಲಿಟ್ಟು ಕೊಂಡು ಮಂಡಿಸಿರುವ ಬಜೆಟ್‌. ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಲಪಡಿಸಲು ವಿಶೇಷ ಒತ್ತು ನೀಡಲಾಗಿದೆ.
-ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

**
ಬಡವರು ಬಡವರಾಗಿಯೇ, ಶ್ರೀಮಂತರು ಶ್ರೀಮಂತರಾಗಿಯೇ ಉಳಿಯಬೇಕೆಂಬ ಮೂಲ ತತ್ವದಡಿ ಮಂಡನೆಯಾಗಿರುವ ಬಜೆಟ್‌ ಇದು. ರೈತರ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೀಗಿದ್ದರೂ ಕೃಷಿ ವಲಯದ ಬಲವರ್ಧನೆಗೆ ಪೂರಕ ಕ್ರಮಗಳನ್ನು ಕೈಗೊಂಡಿಲ್ಲ.
-ಸೀತಾರಾಂ ಯೆಚೂರಿ, ಸಿಪಿಐ (ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ

**
ಗಣರಾಜ್ಯೋತ್ಸವದ ದಿನ ಸಾವಿರಾರು ರೈತರು ಟ್ರ್ಯಾಕ್ಟರ್‌ ರ‍್ಯಾಲಿ ಕೈಗೊಂಡಿದ್ದರು. ಅವರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಸೆಸ್‌ ವಿಧಿಸಲಾಗಿದೆ. ಬಡವರು, ಶ್ರಮಿಕರು ಹಾಗೂ ವಲಸೆ ಕಾರ್ಮಿಕರ ಕಲ್ಯಾಣವನ್ನೂ ಕಡೆಗಣಿಸಲಾಗಿದೆ.
-ಪಿ.ಚಿದಂಬರಂ, ಕಾಂಗ್ರೆಸ್‌ ಮುಖಂಡ

*
ಇದು ನಿರಾಶಾದಾಯಕ ಬಜೆಟ್‌. ದೇಶದ ಕೆಲ ಕಾರ್ಪೊರೇಟ್‌ ಕಂಪನಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೊಂಡು ಮಂಡಿಸಿರುವ ಬಜೆಟ್‌. ಇದರಿಂದ ಸಾಮಾನ್ಯ ಜನರ ಬದುಕು ಸುಧಾರಿಸೊಲ್ಲ. ಹಣದುಬ್ಬರದಿಂದ ಅವರ ಸಂಕಷ್ಟ ಇನ್ನಷ್ಟು ಹೆಚ್ಚುತ್ತದೆ
-ಅರವಿಂದ್‌ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

**
ರೈತ, ಜನ ಹಾಗೂ ದೇಶ ವಿರೋಧಿ ಬಜೆಟ್‌. ಕೇಂದ್ರ ಸರ್ಕಾರವು ವಿಮೆಯಿಂದ ಹಿಡಿದು ಪಿಎಸ್‌ಯುವರೆಗೆ ಎಲ್ಲವನ್ನೂ <br/>ಮಾರಲು ಹೊರಟಿದೆ. ಸುಳ್ಳು ಭರವಸೆಗಳ ಮೂಲಕ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿದೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

Union Budget 2021: ದೇಶಿ ಉತ್ಪಾದನೆಗೆ ಉತ್ತೇಜನ

Union Budget 2021: ದೇಶಿ ಉತ್ಪಾದನೆಗೆ ಉತ್ತೇಜನ

ಪಿಟಿಐ Updated: 
prajavani

ಕೋಲ್ಕತ್ತದ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಸೋಮವಾರ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರು

ನವದೆಹಲಿ: ದೇಶೀಯವಾಗಿ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ತೇಜನ ನೀಡುವ ಕ್ರಮವಾಗಿ ವಿವಿದ ಕಚ್ಚಾ ಉತ್ಪನ್ನಗಳಿಗೆ ಅನ್ವಯಿಸಿ ಪ್ರಾಥಮಿಕ ಆಮದು ಸುಂಕವನ್ನು ಇಳಿಸಲಾಗಿದೆ.

ಈ ಕ್ರಮವು ದೇಶೀಯವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಮುಖ್ಯವಾಗಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಸ್ಪರ್ಧೆಗೆ ಸಜ್ಜಾಗಲು ನೆರವಾಗಲಿದೆ. ಅಲ್ಲದೆ, ಇವುಗಳ ಸ್ಪರ್ಧೆಗೆ ಸಮಾನ ವೇದಿಕೆಯು ಸೃಷ್ಟಿಯಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೋವಿಡ್‌ ಪರಿಸ್ಥಿತಿಯಲ್ಲಿ ಆರ್ಥಿಕತೆ ಪುನಶ್ಚೇತನದ ಹಾದಿಯು ಕಷ್ಟಕರವಾಗಿತ್ತು. ವಿಶ್ವವೇ ಅನೇಕ ಸವಾಲುಗಳಿಗೆ ಮುಖಾಮುಖಿಯಾಗಿತ್ತು. ಆ ಸಂದರ್ಭದಲ್ಲೂ ದೇಶದಲ್ಲಿ ಕೈಗಾರಿಕಾ ವಲಯವು ಅಸಾಧಾರಣವಾದ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿತು ಎಂದು ಅವರು ಶ್ಲಾಘಿಸಿದರು.

ಮೊಬೈಲ್‌, ಚಾರ್ಜರ್ –ರಿಯಾಯಿತಿ ವಾಪಸು: ಪ್ರಸ್ತುತ ದೇಶೀಯವಾಗಿ ವಿದ್ಯುನ್ಮಾನ ಪರಿಕರಗಳ ಉತ್ಪಾದನೆ ಕ್ಷೇತ್ರವು ಕ್ಷಿಪ್ರವಾಗಿ ಬೆಳೆಯುತ್ತಿದೆ. ಪರಿಣಾಮ, ಭಾರತವೀಗ ಮೊಬೈಲ್‌ ಪೋನ್ ಮತ್ತು ಚಾರ್ಜರ್‌ಗಳನ್ನು ರಫ್ತು ಮಾಡುವ
ಹಂತವನ್ನು ತಲುಪಿದೆ.

ದೇಶಿ ಉತ್ಪಾದನೆಯ ವಸ್ತುಗಳ ಗುಣಮಟ್ಟ, ಮೌಲ್ಯ ವೃದ್ಧಿಗೆ ಪೂರಕವಾಗಿ ನೆರವಾಗಲು ಚಾರ್ಜರ್‌ಗಳು ಮತ್ತು ಮೊಬೈಲ್‌ ಫೋನ್‌ನ ಕೆಲ ಬಿಡಿಭಾಗಗಳ ನೀಡಿದ್ದ ರಿಯಾಯಿತಿ ಹಿಂಪಡೆಯಲಾಗಿದೆ. ಕೆಲ ಪರಿಕರಗಳ ಮೇಲೆ ಇದ್ದ ಶೂನ್ಯ ತೆರಿಗೆ ಬದಲಾಗಿ, ಇನ್ನು ಸಾಮಾನ್ಯ ಎಂಬಂತಹ ಶೇ 2.5ರಷ್ಟು ತೆರಿಗೆ ಇರುತ್ತದೆ ಎಂದು ತಿಳಿಸಿದರು.

ಲೋಹ, ತಾಮ್ರ ಮರುಬಳಕೆಗೆ ನೆರವು: ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು ಕಬ್ಬಿಣ ಮತ್ತು ಉಕ್ಕಿನ ತೀವ್ರ ದರ ಏರಿಕೆಯ ಪರಿಣಾಮವನ್ನು ಎದುರಿಸಲು ಆಗುವಂತೆ   ಅಲಾಯ್‌, ಅಲಾಯ್‌ಯೇತರ, ಸ್ಟೇನ್‌ಲೆಸ್‌ ಸ್ಟೀಲ್‌ನ ಕೆಲ ಉತ್ಪನ್ನಗಳಿಗೆ ಅನ್ವಯಿಸಿ ಏಕರೂಪದ ಶೇ 7.5ರಷ್ಟು ತೆರಿಗೆ ವಿಧಿಸಲಾಗಿದೆ.

ಲೋಹದ ಮರುಬಳಕೆಗೆ ಉತ್ತೇಜನ ನೀಡಲು, ಎಂಎಸ್‌ಎಂಇಗಳಿಗೆ ಅನ್ವಯಿಸಿ ಕಬ್ಬಿಣ ಕಚ್ಚಾ ಪದಾರ್ಥಗಳಿಗೆ ಮಾರ್ಚ್‌ 31, 2022ರವರೆಗೂ ಸುಂಕ ವಿನಾಯಿತಿ ನೀಡಲಾಗಿದೆ. ಅಂತೆಯೇ, ತಾಮ್ರದ ಮರುಬಳಕೆಗೆ ಪ್ರೊತ್ಸಾಹ ನೀಡಲು ತಾಮ್ರದ ಕಚ್ಚಾ ಪದಾರ್ಥಗಳ ಮೇಲಿನ ಸುಂಕವನ್ನು ಈಗಿನ ಶೇ 5ರಿಂದ ಶೇ 2.5ಕ್ಕೆ ಇಳಿಸಲಾಗಿದೆ.

ಆಟೊಮೊಬೈಲ್ ಉದ್ಯಮ: ಆಟೊಮೊಬೈಲ್‌ ಉದ್ಯಮ ಕ್ಷೇತ್ರದಲ್ಲಿ ಬಳಸಲಾಗುವ ಕೆಲ ಬಿಡಿ ಭಾಗಗಳ ಆಮದು ಸುಂಕವನ್ನು ಶೇ 15ಕ್ಕೆ ಏರಿಸಲಾಗಿದ್ದು, ಇದು ಫೆಬ್ರುವರಿ 2 ರಿಂದಲೇ ಜಾರಿಗೆ ಬರಲಿದೆ. ಸದ್ಯ ಸುಂಕದ ಪ್ರಮಾಣ ಶೇ 7.5ರಿಂದ 10ರವರೆಗೂ ಇತ್ತು.

7 ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಗುರಿ
ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳ ಸೃಷ್ಟಿ, ಅಧಿಕ ಬಂಡವಾಳ ಆಕರ್ಷಿಸಲು ಮೂರು ವರ್ಷಗಳಲ್ಲಿ 7 ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಗುರಿ ಹೊಂದಲಾಗಿದೆ. ಇದಕ್ಕಾಗಿ ಭಾರಿ ಹೂಡಿಕೆ ಟೆಕ್ಸ್‌ಟೈಲ್‌ ಪಾರ್ಕ್ (ಮಿತ್ರಾ) ಯೋಜನೆಯನ್ನು ಸದ್ಯ ಚಾಲ್ತಿಯಲ್ಲಿರುವ ಪಿಎಲ್‌ಐ ಯೋಜನೆಯ ಜೊತೆಗೆ ಆರಂಭಿಸಲಾಗುವುದು.

ಇದಲ್ಲದೆ, ಈ ಉದ್ಯಮವನ್ನು ಪ್ರೋತ್ಸಾಹಿಸಲು ವಿವಿಧ ಕಚ್ಚಾ ಪದಾರ್ಥಗಳ ಮೇಲಿನ ಪ್ರಾಥಮಿಕ ಅಮದು ಸುಂಕವನ್ನು ಭಾಗಶಃ ಇಳಿಸಲಾಗಿದೆ. ಈ ಕ್ರಮವು ಜವಳಿ ಉದ್ಯಮದ ಜೊತೆಗೆ ಎಂಎಸ್‌ಎಂಇಗಳು ಹಾಗೂ ರಫ್ತು ಪ್ರಕ್ರಿಯೆಗೂ ನೆರವಾಗಲಿದೆ ಎಂದು ಸಚಿವೆ ಪ್ರತಿಪಾದಿಸಿದರು.

ಜನಾಭಿಪ್ರಾಯ...

ದೇಶದ ವಿತ್ತೀಯ ಕೊರತೆ ಜಿಡಿಪಿಯ ಶೇ 9.5ರಷ್ಟು ಆಗಲಿರುವ ಅಂದಾಜು ಆತಂಕಕಾರಿ. 13ಸಾವಿರ ಕೋಟಿ ಆತ್ಮನಿರ್ಭರ ಪ್ಯಾಕೇಜಿನ ಪ್ರಸ್ತಾಪ ದೇಶದ ಆರ್ಥಿಕತೆ ಸುಧಾರಣೆಗೆ ಹೇಗೆ ಸಹಾಯ ಎಂಬ ಉಲ್ಲೇಖವಿಲ್ಲ.
– ಐಸಾಕ್ ವಾಸ್, ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಕೆಸಿಸಿಐ) ಅಧ್ಯಕ್ಷ

**

ಕೇಂದ್ರ ಬಜೆಟ್‌ನಲ್ಲಿ ಕಲಬುರ್ಗಿಗೆ ರೈಲ್ವೆ ವಿಭಾಗ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯನ್ನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ.
–ಅಮರನಾಥ ಪಾಟೀಲ, ಎಚ್‌ಕೆಸಿಸಿಐ ಅಧ್ಯಕ್ಷ, ಕಲಬುರ್ಗಿ

**

ಮೂಲಸೌಕರ್ಯ, ಕೃಷಿ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇದೊಂದು ಉತ್ತಮ ಬಜೆಟ್‌. ಮೂರು ಕ್ಷೇತ್ರಗಳ ಮೇಲಿನ ಅನುದಾನ ಹೆಚ್ಚಳದಿಂದ ಉದ್ಯೋಗ ಸೃಷ್ಟಿಯಾಗಲಿದೆ.
–ಮಹೇಂದ್ರ ಲದ್ದಡ, ಅಧ್ಯಕ್ಷ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ

**
ನ್ಯಾಷನಲ್‌ ನರ್ಸಿಂಗ್‌ ಕಮಿಷನ್‌ ರಚಿಸಿದ್ದಾರೆ. ಸಂಶೋಧನಾ ಕ್ಷೇತ್ರಕ್ಕೆ ಒತ್ತು ನೀಡಿದ್ದು, ತೃಪ್ತಿಕರ ಬಜೆಟ್‌. ಈ ಸುಧಾರಣೆ ಅನುಷ್ಠಾನಕ್ಕೆ ಅಧಿಕಾರಿಗಳು ಬದ್ಧತೆ ತೋರಿಸಬೇಕು.
–ಡಾ.ಆರ್.ಬಾಲಸುಬ್ರಮಣ್ಯಂ, ವಿ–ಲೀಡ್‌ ಸಂಸ್ಥಾಪಕ, ಮೈಸೂರು

**

ಬಿಸಿಯೂಟಕ್ಕೆ 1400 ಕೋಟಿ ಮತ್ತು ಐಸಿಡಿಎಸ್‌ಗೆ ಶೇ 30ರಷ್ಟು ಕಡಿತವಾಗಿರುವುದರಿಂದ ಮಕ್ಕಳು ಮತ್ತು ಮಹಿಳೆಯರಿಗೆ ಕೊಡುಗೆ ಶೂನ್ಯವಾಗಿದೆ ಮಾತ್ರವಲ್ಲ ಈ ಎರಡು ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
–ಎಸ್. ವರಲಕ್ಷ್ಮಿ, ಅಧ್ಯಕ್ಷೆ, ಸಿಐಟಿಯು

**
ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಬಲ ನೀಡುವ ಪ್ರಸ್ತಾವವೇ ಇಲ್ಲ. ಸ್ವಾಮಿನಾಥನ್ ವರದಿ ಕುರಿತು ಚಕಾರ ಎತ್ತಿಲ್ಲ. ಕೃಷಿ ಅಭಿವೃದ್ಧಿಗೆ ಸೆಸ್‌ ವಿಧಿಸಲಾಗಿದೆ.
-ಎಚ್‌.ಆರ್. ಬಸವರಾಜಪ್ಪ, ರೈತ ಮುಖಂಡ, ಶಿವಮೊಗ್ಗ

Union Budget 2021: ಚುನಾವಣೆ, ರೈತರ ಮೇಲೆ ಕಣ್ಣು

Union Budget 2021: ಚುನಾವಣೆ, ರೈತರ ಮೇಲೆ ಕಣ್ಣು

ಆನಂದ್‌ ಮಿಶ್ರಾ Updated: 
prajavani

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆಯನ್ನು ಪ್ರಯಾಗರಾಜ್‌ನಲ್ಲಿನ ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಮಳಿಗೆಯೊಂದರಲ್ಲಿ ಜನರು ವೀಕ್ಷಿಸಿದರು –ಪಿಟಿಐ ಚಿತ್ರ

ನವದೆಹಲಿ: ದೇಶದ ಮೊದಲ ಕಾಗದರಹಿತ ಬಜೆಟ್‌ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಿತ್ತೀಯ ಶಿಸ್ತಿನ ನಿರ್ಬಂಧದ ನಡುವೆಯೂ ರಾಜಕೀಯವಾಗಿ ಹೆಚ್ಚು ಮುಖ್ಯವಾದ ವರ್ಗಗಳು ಮತ್ತು ರಾಜ್ಯಗಳನ್ನು ತಲುಪುವ ಯತ್ನ ಮಾಡಿದ್ದಾರೆ.

ಚುನಾವಣೆಯ ಹೊಸ್ತಿಲಲ್ಲಿ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಗೆ ಭರಪೂರ ಕೊಡುಗೆ ಸಿಕ್ಕಿದೆ. ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಗಮನದಲ್ಲಿ ಇರಿಸಿಕೊಂಡು ಗ್ರಾಮೀಣ ಭಾರತಕ್ಕೆ ಸಂದೇಶ ನೀಡುವ ಪ್ರಯತ್ನವೂ ಇದೆ. 

ಜನರ ನಿರೀಕ್ಷೆಗಳು, ಎಲ್ಲರ ಒಳಗೊಳ್ಳುವಿಕೆ ಮತ್ತು ‘ಆತ್ಮ ನಿರ್ಭರ ಭಾರತ’ ಆಶಯಕ್ಕೆ ಅನುಗುಣವಾಗಿ ಸಿದ್ಧಪಡಿಸಲಾದ ಬಜೆಟ್‌ ಎಂದು ಬಿಜೆಪಿ ಹೇಳಿದೆ. ಆದರೆ, ವಿರೋಧ ಪಕ್ಷಗಳಿಗೆ ಬಜೆಟ್‌ ಪಥ್ಯವಾಗಿಲ್ಲ. ಇದು ‘ಶೇಕಡ ನೂರರಷ್ಟು ಮುನ್ನೋಟರಹಿತ’ ಎಂದು ವಿರೋಧ ಪಕ್ಷಗಳು ಹೇಳಿವೆ.

ಕೃಷಿ ಕ್ಷೇತ್ರವನ್ನು ಬಲಪಡಿಸುವ, ರೈತರ ಆದಾಯವನ್ನು ವೃದ್ಧಿಸುವ ಮತ್ತು ಗ್ರಾಮಗಳು ಹಾಗೂ ರೈತರನ್ನು ಹೃದಯದಲ್ಲಿ ಇರಿಸಿಕೊಂಡಿರುವ ಬಜೆಟ್‌ ಇದು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಆದರೆ,  ಇಡೀ ದೇಶವನ್ನು ತಮ್ಮ ನೆಚ್ಚಿನ ಬಂಡವಾಳಶಾಹಿಗಳಿಗೆ ಕೊಡುವ ಹುನ್ನಾರ ಈ ಬಜೆಟ್‌ನಲ್ಲಿ ಇದೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ. 

ಈ ಬಜೆಟ್‌ ಶ್ರೀಮಂತರ ಪರ. ರೈತರು ಮತ್ತು ಶೋಷಿತ ವರ್ಗವನ್ನು ನಿರ್ಲಕ್ಷಿಸಲಾಗಿದೆ ಎಂದು ಬಿಎಸ್‌ಪಿ ಹೇಳಿದೆ. ರೈತರು ಮತ್ತು ಸಾಮಾನ್ಯ ಜನರ ಸಮಸ್ಯೆಗಳನ್ನು ಈ ಬಜೆಟ್‌ ಇನ್ನಷ್ಟು ಹೆಚ್ಚಿಸಲಿದೆ ಎಂದು ಎಸ್‌ಪಿ ಹೇಳಿದೆ. 

ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚಹಾ ತೋಟದ ಕಾರ್ಮಿಕರಿಗಾಗಿ 1,000 ಕೋಟಿಯ ವಿಶೇಷ ಯೋಜನೆ ಘೋಷಿಸಲಾಗಿದೆ. ತಮಿಳುನಾಡು ರಾಜ್ಯಕ್ಕೆ 3,500 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಕಟಿಸಲಾಗಿದೆ. ಇದಕ್ಕೆ ತಗಲುವ ವೆಚ್ಚ 1.03 ಲಕ್ಷ ಕೋಟಿ. ಕೇರಳ ರಾಜ್ಯಕ್ಕೆ 65 ಸಾವಿರ ಕೋಟಿ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಇವೆ. ಪಶ್ಚಿಮ ಬಂಗಾಳಕ್ಕೆ 25 ಸಾವಿರ ಕೋಟಿ ವೆಚ್ಚದಲ್ಲಿ 675 ಕಿ.ಮೀ. ಹೆದ್ದಾರಿಯ ಯೋಜನೆಯನ್ನು ಪ್ರಕಟಿಸಲಾಗಿದೆ. ಅಸ್ಸಾಂನಲ್ಲಿ 34 ಸಾವಿರ ಕೋಟಿ ಮೊತ್ತದಲ್ಲಿ 1300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಆಗಲಿದೆ. ಈ ಎಲ್ಲ ರಾಜ್ಯಗಳಲ್ಲಿ ಮುಂದಿನ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬುದು ಈ ಯೋಜನೆಗಳ ಹಿನ್ನೆಲೆಯನ್ನು ಬಹಿರಂಗಪಡಿಸುತ್ತದೆ. 

ಅಸ್ಸಾಂನಲ್ಲಿ ಈಗ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 18 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. 2014ರ ಚುನಾವಣೆಗಿಂತ ತನ್ನ ನೆಲೆಯನ್ನು ಈ ಮಟ್ಟಕ್ಕೆ ವಿಸ್ತರಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿತ್ತು. ತಮಿಳು ನಾಡಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಿಜೆಪಿ ಭಾರಿ ಪ್ರಯತ್ನ ನಡೆಸುತ್ತಿದೆ. ಹಿಂದುತ್ವದ ಪ್ರತಿಪಾದನೆ ಮತ್ತು ಮೈತ್ರಿ ಮೂಲಕ ಈ ರಾಜ್ಯದಲ್ಲಿ ಹೆಚ್ಚು ಮತಗಳನ್ನು ಪಡೆಯುವ ಕಾರ್ಯತಂತ್ರವನ್ನು ಬಿಜೆಪಿ ಹಾಕಿಕೊಂಡಿದೆ. 

ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಐದು ಪ್ರಮುಖ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ಗಣನೀಯ ಪ್ರಮಾಣದ ಮೊತ್ತವನ್ನು ತೆಗೆದಿರಿಸಲಾಗಿದೆ. 

ಕೃಷಿ ಕ್ಷೇತ್ರವನ್ನು ಆಧುನೀಕರಣಗೊಳಿಸಬೇಕು ಎಂದು ಪ್ರಧಾನಿ ಮೋದಿ ಅವರು ಭಾನುವಾರವಷ್ಟೇ ಹೇಳಿದ್ದರು. ಮರುದಿನ ಮಂಡನೆಯಾದ ಬಜೆಟ್‌ನಲ್ಲಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ ಅನ್ನು ಘೋಷಿಸಲಾಗಿದೆ. ಕೃಷಿ ಉತ್ಪನ್ನ ಹೆಚ್ಚಳ, ಸಂಗ್ರಹ ಮತ್ತು ಸಂಸ್ಕರಣೆಗೆ ಕೃಷಿ ಮೂಲಸೌಕರ್ಯ ಹೆಚ್ಚಳದ ಅಗತ್ಯ ಇದೆ ಎಂಬುದಕ್ಕೆ ನಿರ್ಮಲಾ ಅವರು ಒತ್ತು ನೀಡಿದ್ದಾರೆ. 

‘ನಮ್ಮ ಸರ್ಕಾರವು ರೈತರ ಅಭಿವೃದ್ಧಿಗೆ ಬದ್ಧ’ ಎಂದು ಅವರು  ಹೇಳಿದ್ದಾರೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 40 ಸಾವಿರ ಕೋಟಿ ನಿಗದಿ ಮಾಡಲಾಗಿದೆ. ಕಳೆದ ಬಜೆಟ್‌ನಲ್ಲಿ ಇದು 30 ಸಾವಿರ ಕೋಟಿ ಇತ್ತು. 

Union Budget 2021: ಕೃಷಿ ಸಾಲದ ಗುರಿ ಶೇ 10ರಷ್ಟು ಹೆಚ್ಚಳ

Union Budget 2021: ಕೃಷಿ ಸಾಲದ ಗುರಿ ಶೇ 10ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated: 
prajavani

ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರದಾದ್ಯಂತ ತೀವ್ರಸ್ವರೂಪದ ಹೋರಾಟಗಳು ನಡೆಯುತ್ತಿರುವುದರಿಂದ, 2021–22ನೇ ಸಾಲಿನ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ಸರ್ಕಾರ ಯಾವ ಘೋಷಣೆಗಳನ್ನು ಮಾಡುತ್ತದೆ ಎಂಬ ಬಗ್ಗೆ ವಿಶೇಷವಾದ ಕುತೂಹಲವಿತ್ತು.

‘ನಮ್ಮ ಸರ್ಕಾರವು ರೈತರ ಏಳಿಗೆಗೆ ಬದ್ಧವಾಗಿದೆ’ ಎನ್ನುತ್ತಲೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಮುಂದಿಟ್ಟ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌, ಕೃಷಿ ಸಾಲ ವಿತರಣೆಯ ಗುರಿಯನ್ನು 16.5 ಲಕ್ಷ ಕೋಟಿಗೆ (ಶೇ 10ರಷ್ಟು) ಹೆಚ್ಚಿಸಿದ್ದಲ್ಲದೆ, ಬೆಳೆ ಕಟಾವಿನ ನಂತರದ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ ಶೇ 2.5ರಿಂದ ಆರಂಭಿಸಿ ಕೆಲವು ಉತ್ಪನ್ನಗಳ ಮೇಲೆ ಶೇ 100ರಷ್ಟು ‘ಕೃಷಿ ಮೂಲಸೌಲಭ್ಯ ಮತ್ತು ಅಭಿವೃದ್ಧಿ ಸೆಸ್‌’ (ಎಐಡಿಸಿ) ಜಾರಿ ಮಾಡುವುದಾಗಿಯೂ ತಿಳಿಸಿದರು. ಈ ಸೆಸ್‌ ಸಾಮಾನ್ಯ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದೂ ಸಚಿವೆ ಹೇಳಿದರು.

‘ರೈತರು ಬೆಳೆಗೆ ಮಾಡುವ ವೆಚ್ಚದ 1.5ರಷ್ಟು ಪಟ್ಟು ಆದಾಯ ಬರಬೇಕೆಂಬ ಉದ್ದೇಶದಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ಎಂಎಸ್‌ಪಿ ಅಡಿ ಖರೀದಿ ಮಾಡುವ ಧಾನ್ಯಗಳ ಪ್ರಮಾಣವು ಕಳೆದ ಕೆಲವು ವರ್ಷಗಳಲ್ಲಿ ಸತತವಾಗಿ ಏರಿಕೆಯಾಗುತ್ತಿದೆ’ ಎಂದರು. 2013–14ನೇ ಸಾಲಿನಲ್ಲಿ ಭತ್ತ, ಗೋಧಿ, ಹತ್ತಿ ಮುಂತಾದ ಉತ್ಪನ್ನಗಳ ಖರೀದಿಗಾಗಿ ಮಾಡಿದ್ದ ವೆಚ್ಚ ಹಾಗೂ 2020–21ನೇ ಸಾಲಿನಲ್ಲಿ ಮಾಡಿರುವ ವೆಚ್ಚಗಳ ಅಂಕಿಅಂಶಗಳನ್ನು ನೀಡಿದರು.

‘ಕಳೆದ ಆರು ವರ್ಷಗಳಲ್ಲಿ ಗೋಧಿ, ಧಾನ್ಯಗಳು ಹಾಗೂ ಹತ್ತಿಯ ಖರೀದಿ ಪ್ರಮಾಣವು ಹಲವು ಪಟ್ಟು ಹೆಚ್ಚಾಗಿದೆ. 43.66 ಲಕ್ಷ ರೈತರು ಕನಿಷ್ಠ ಬೆಂಬಲ ಬೆಲೆಯ ಲಾಭಗಳನ್ನು ಪಡೆದಿದ್ದಾರೆ ಎಂದು ನಿರ್ಮಲಾ ತಿಳಿಸಿದರು.

ಶೇ 5.63ರಷ್ಟು ಹೆಚ್ಚು ಹಂಚಿಕೆ
ಕೃಷಿ ಹಾಗೂ ರೈತರ ಅಭಿವೃದ್ಧಿ ಸಚಿವಾಲಯಕ್ಕೆ ಕಳೆದ ಸಾಲಿಗಿಂತ ಶೇ 5.63ರಷ್ಟು ಹೆಚ್ಚು ಹಣವನ್ನು (1,31,531 ಕೋಟಿ) ಹಂಚಿಕೆ ಮಾಡಲಾಗಿದೆ. ಇದರಲ್ಲಿ ದೊಡ್ಡ ಮೊತ್ತವನ್ನು ‘ಪಿಎಂ–ಕಿಸಾನ್‌’ ಯೋಜನೆಯ ಮೂಲಕ ವೆಚ್ಚ ಮಾಡಲಾಗುವುದು. ಕೃಷಿ ಮೂಲಸೌಲಭ್ಯ ಹಾಗೂ ನೀರಾವರಿ ಯೋಜನೆಗಳಿಗೂ ಕಳೆದ ವರ್ಷಕ್ಕಿಂತ ಹೆಚ್ಚು ಹಣವನ್ನು ಒದಗಿಸಲಾಗಿದೆ.

ಒಟ್ಟು ಹಂಚಿಕೆಯಲ್ಲಿ 1,23,017.57 ಕೋಟಿಯನ್ನು ವಿವಿಧ ಯೋಜನೆಗಳಿಗೆ ಹಾಗೂ 8,513.62 ಕೋಟಿಯನ್ನು ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗಕ್ಕೆ ನೀಡಲಾಗಿದೆ. ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಡೇರಿ ಸಚಿವಾಲಯಕ್ಕೆ 4,820.82 ಕೋಟಿ ಹಂಚಿಕೆ ಮಾಡಲಾಗಿದೆ.

ಸಬ್ಸಿಡಿ ವೆಚ್ಚ ಹೆಚ್ಚಳ
ಕೋವಿಡ್‌ ಕಾರಣದಿಂದ ಆಹಾರ ಹಾಗೂ ರಸಗೊಬ್ಬರಗಳಿಗೆ ನೀಡಿದ ಸಬ್ಸಿಡಿ ಪ್ರಮಾಣವು ಹೆಚ್ಚಾಗಿರುವುದರಿಂದ 2021–22ನೇ ಸಾಲಿನಲ್ಲಿ ಸರ್ಕಾರದ ಮೇಲೆ ಸಬ್ಸಿಡಿಯ ಹೊರೆ ಹೆಚ್ಚಾಗಿದೆ.

2020–21ನೇ ಸಾಲಿನಲ್ಲಿ 2.62 ಲಕ್ಷ ಕೋಟಿಯಷ್ಟಿದ್ದ ಸಬ್ಸಿಡಿ, 2021–22ನೇ ಸಾಲಿನಲ್ಲಿ ಶೇ 147ರಷ್ಟು ಏರಿಕೆಯಾಗಿ 6.48 ಲಕ್ಷ ಕೋಟಿಗೆ ತಲುಪಲಿದೆ. ಆಹಾರ ಮತ್ತು ರಸಗೊಬ್ಬರ ಸಬ್ಸಿಡಿಯಲ್ಲದೆ, 3.69 ಲಕ್ಷ ಕೋಟಿ ಮೊತ್ತವನ್ನು ಬೇರೆ ಸಬ್ಸಿಡಿಗಾಗಿ ತೆಗೆದಿರಿಸಿದೆ.

ಪ್ರಸಕ್ತ ಸಾಲಿನಲ್ಲಿ ಆಹಾರ ಸಬ್ಸಿಡಿಗಾಗಿ 1.15 ಲಕ್ಷ ಕೋಟಿ ಹಂಚಿಕೆ ಮಾಡಲಾಗಿತ್ತು. ಆದರೆ, ಕೋವಿಡ್‌ ಸಂದರ್ಭದಲ್ಲಿ ಬಡವರು ಮತ್ತು ಅಂಚಿನಲ್ಲಿರುವವರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲು ನಿರ್ಧರಿಸಿದ್ದರಿಂದ ಸಬ್ಸಿಡಿಗಾಗಿ ಮಾಡಿರುವ ವೆಚ್ಚ 4.22 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಅದರಂತೆ ರಸಗೊಬ್ಬರದ ಸಬ್ಸಿಡಿಯೂ ಮೊದಲೇ ಅಂದಾಜಿಸಿದ್ದ 71,309 ಕೋಟಿಯಿಂದ, 1.33 ಲಕ್ಷ ಕೋಟಿಗೆ ಏರಿಕೆಯಾಗಿತ್ತು. 2020–21ನೇ ಸಾಲಿನಲ್ಲಿ ಸಬ್ಸಿಡಿಗಾಗಿ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಕೋವಿಡ್‌ ಪಿಡುಗು ಸರ್ಕಾರದ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.

ಕೃಷಿ ಕ್ಷೇತ್ರ: ಪ್ರಮುಖ ಅಂಶಗಳು

* ಪ್ರಸಕ್ತ ಟೊಮೆಟೊ, ಈರುಳ್ಳಿ ಹಾಗೂ ಆಲುಗಡ್ಡೆಗಳಿಗೆ ಮಾತ್ರ ಸೀಮಿತವಾಗಿರುವ ‘ಆಪರೇಷನ್‌ ಗ್ರೀನ್‌’ ಯೋಜನೆಯು ಶೀಘ್ರದಲ್ಲಿ ಹಾಳಾಗುವ ಇನ್ನೂ 22 ಸರಕುಗಳಿಗೆ ವಿಸ್ತರಣೆ

* ಕೊಚ್ಚಿ, ಚೆನ್ನೈ, ವಿಶಾಖಪಟ್ಟಣ, ಪರದೀಪ್‌ (ಅಸ್ಸಾಂ) ಹಾಗೂ ಪೆಟುವಾಘಾಟ್‌ (ಪಶ್ಚಿಮ ಬಂಗಾಳ) ಮೀನುಗಾರಿಕಾ ಬಂದರುಗಳ ಅಭಿವೃದ್ಧಿ. ಇವುಗಳನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿ ರೂಪಿಸಲು ಪ್ರಸ್ತಾವನೆ. ಕಡಲ ಕೃಷಿ ಉತ್ತೇಜನಕ್ಕೆ ಹೆಚ್ಚಿನ ಅನುದಾನ

* ಒಳನಾಡು ಮೀನುಗಾರಿಕೆಯ ಉತ್ತೇಜನಕ್ಕೂ ಅಗತ್ಯ ಕ್ರಮ

* ಎಪಿಎಂಸಿಯ ಇನ್ನೂ 1,000 ಮಂಡಿಗಳನ್ನು ಎಲೆಕ್ಟ್ರಾನಿಕ್‌ ರಾಷ್ಟ್ರೀಯ ಮಾರುಕಟ್ಟೆಯ (ಇ–ನಾಮ್‌) ಜತೆ ಸಂಯೋಜಿಸಲು ಕ್ರಮ

* ಎಪಿಎಂಸಿಗಳ ಮೂಲಸೌಲಭ್ಯ ಅಭಿವೃದ್ಧಿಗೂ ಕೃಷಿ ಮೂಲಸೌಲಭ್ಯ ಅಭಿವೃದ್ಧಿ ನಿಧಿ ಬಳಕೆಗೆ ಒಪ್ಪಿಗೆ

* ಪಶುಸಂಗೋಪನೆ, ಡೇರಿ ಹಾಗೂ ಮೀನುಗಾರಿಕಾ ಕ್ಷೇತ್ರಗಳಿಗೆ ಹೆಚ್ಚಿನ ಸಾಲ ಸೌಲಭ್ಯ