ಗುರುವಾರ, ಫೆಬ್ರವರಿ 4, 2021

ಬಜೆಟ್ ಇತಿಹಾಸ ಕುರಿತ ಮಾಹಿತಿ

ಭಾರತದ ಬಜೆಟ್‌ ಇತಿಹಾಸ, ನಿಮಗಿದು ಗೊತ್ತಿರಲಿ!

 | Vijaya Karnataka | Updated: 01 Feb 2021, 12:02:19 PM

ವಿತ್ತ ಸಚಿವರು ಮಂಡಿಸುತ್ತಿರುವ ಕೇಂದ್ರ ಬಜೆಟ್‌ಗೆ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದೆ. ಭಾರತದ ಬಜೆಟ್‌ನ ಇತಿಹಾಸ, ಸ್ವಾರಸ್ಯಕರ ಸಂಗತಿಗಳು, ವಿವಿಧ ವಲಯಗಳ ನಿರೀಕ್ಷೆಗಳು ಇಲ್ಲಿವೆ

ಇಂದು ವಿತ್ತ ಸಚಿವರು ಮಂಡಿಸುತ್ತಿರುವ ಕೇಂದ್ರ ಬಜೆಟ್‌ಗೆ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದೆ. ಭಾರತ ಸರಕಾರ ಮಂಡಿಸುವ ಬಜೆಟ್‌ನ ಇತಿಹಾಸ, ಸ್ವಾರಸ್ಯಕರ ಸಂಗತಿಗಳು, ವಿವಿಧ ವಲಯಗಳ ನಿರೀಕ್ಷೆಗಳು ಇಲ್ಲಿವೆ.

ಸಂಜೆ 5 ಗಂಟೆ: 2000ನೇ ಇಸವಿಯವರೆಗೆ, ಸಂಜೆ 5 ಗಂಟೆಗೆ ಬಜೆಟ್‌ನ್ನು ಮಂಡಿಸಲಾಗುತ್ತಿತ್ತು. ಭಾರತ ಹಾಗೂ ಬ್ರಿಟನ್‌ನ ಸಮಯ ವ್ಯತ್ಯಾಸ ಸರಿದೂಗಿಸಲು ಅಳವಡಿಸಿಕೊಂಡಿದ್ದ ಪದ್ಧತಿಯಿದು. ನಂತರ ಅದನ್ನು ಬೆಳಗ್ಗೆ 11 ಗಂಟೆಗೆ ನಿಗದಿಪಡಿಸಲಾಯಿತು.

ಅತ್ಯಧಿಕ ಬಜೆಟ್‌ ಮಂಡನೆ: 
ವಿತ್ತ ಮಂತ್ರಿ ಹಾಗೂ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ಹತ್ತು ಬಾರಿ ಬಜೆಟ್‌ ಮಂಡಿಸುವ ಮೂಲಕ, ಅತಿ ಹೆಚ್ಚು ಸಲ ಆಯವ್ಯಯ ಮಂಡಿಸಿದ ದಾಖಲೆ ಹೊಂದಿದ್ದಾರೆ. ತಮ್ಮ ಜನ್ಮದಿನದಂದೇ (ಫೆ.29) ಎರಡು ಬಾರಿ ಬಜೆಟ್‌ ಮಂಡಿಸಿದ ವಿತ್ತ ಮಂತ್ರಿಯೂ ಅವರೊಬ್ಬರೇ.

160 ನಿಮಿಷ: 
ಸ್ವತಂತ್ರ ಭಾರತದಲ್ಲಿಅತಿ ದೀರ್ಘ ಕಾಲ ಆಯವ್ಯಯ ಓದಿದ ದಾಖಲೆ ನಿರ್ಮಲಾ ಸೀತಾರಾಮನ್‌ ಅವರದು, 2020ರಲ್ಲಿ. ಇಷ್ಟು ಹೊತ್ತು ಓದಿದ ಬಳಿಕವೂ ಹಲವು ಪುಟಗಳು ಉಳಿದಿದ್ದವಾದರೂ, ಬಳಲಿಕೆಯಿಂದ ಓದು ನಿಲ್ಲಿಸಿದರು.


171.15 ಕೋಟಿ ರೂ.: 
ವಿತ್ತ ಸಚಿವ ಆರ್‌.ಕೆ.ಷಣ್ಮುಖಂ ಚೆಟ್ಟಿ ಅವರು 1947 ನವೆಂಬರ್‌ನಲ್ಲಿಮಂಡಿಸಿದ ಸ್ವತಂತ್ರ ಭಾರತದ ಮೊದಲ ಬಜೆಟ್‌ನ ಒಟ್ಟಾರೆ ಆದಾಯ 171.15 ಕೋಟಿ ರೂ. ಇತ್ತು. ವೆಚ್ಚ 197.39 ಕೋಟಿ ರೂ.ಗಳಿತ್ತು. ಕೊರತೆ ವೆಚ್ಚ ವಿಭಜನೆ ಸಂತ್ರಸ್ತರ ಮರುವಸತಿಗೆ ಸಂಬಂಧಿಸಿದ್ದಾಗಿತ್ತು

ಕೃಷಿಗೆ ಹೊಸ ಯೋಜನೆಗಳು

ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರವನ್ನು ಮೇಲೆತ್ತಲು, ಕ್ರುದ್ಧಗೊಂಡಿರುವ ರೈತರನ್ನು ತಣಿಸಲು ಹಲವು ಹೊಸ ಘೋಷಣೆಗಳನ್ನು ನಿರ್ಮಲಾ ಮಾಡಬಹುದು. ಆತ್ಮನಿರ್ಭರ ಪ್ಯಾಕೇಜ್‌ನಲ್ಲಿ1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿ ಘೋಷಿಸಲಾಗಿತ್ತು. ಇದರಿಂದ ಒಟ್ಟಾರೆ ಕಳೆದ ವರ್ಷದ ಕೃಷಿ ಬಜೆಟ್‌ ದುಪ್ಪಟ್ಟುಗೊಂಡಿತ್ತು. ಈ ಬಾರಿ ಪಿಎಂ ಕಿಸಾನ್‌ ಅಥವಾ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನಂಥ ಹಲವು ಕ್ರಮಗಳ ನಿರೀಕ್ಷೆ ಈ ಕ್ಷೇತ್ರದ ತಜ್ಞರದು.

ಬ್ಯಾಡ್‌ ಬ್ಯಾಂಕ್‌

ಬ್ಯಾಂಕಿಂಗ್‌ ವ್ಯವಸ್ಥೆಯ ಲೋಪ ಹಾಗೂ ಕೋವಿಡ್‌ ಸನ್ನಿವೇಶದಿಂದಾಗಿ ಕೆಟ್ಟ ಸಾಲಗಳಲ್ಲಿಭಾರಿ ಹೆಚ್ಚಳವಾಗಿದೆ. ಆರ್ಥಿಕತೆಯಲ್ಲಿಸಾಲದ ಆಹ್ವಾನ ಹೆಚ್ಚಳ ಹಾಗೂ ಮಾರಾಟಕ್ಕೆ ಮುನ್ನ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮೌಲ್ಯ ಹೆಚ್ಚಳಕ್ಕಾಗಿ, ಬ್ಯಾಡ್‌ ಬ್ಯಾಂಕ್‌ ಒಂದನ್ನು ಸರಕಾರ ಸೃಷ್ಟಿಸುವ ಸಾಧ್ಯತೆಯಿದ್ದು, ಕೆಟ್ಟ ಸಾಲಗಳನ್ನು ಅದಕ್ಕೆ ವರ್ಗಾಯಿಸಿ, ಬಳಿಕ ಅದನ್ನು ರಿಯಾಯಿತಿ ದರದಲ್ಲಿಸಾಗಹಾಕಬಹುದು.

ಮೂಲಸೌಕರ್ಯ ವ್ಯವಸ್ಥೆ:ಮೂಲಸೌಕರ್ಯ ಕ್ಷೇತ್ರ ಯಾವಾಗಲೂ ಹೆಚ್ಚಿನ ಹಣದ ಹರಿವನ್ನು ನಿರೀಕ್ಷಿಸುತ್ತದೆ. ಕೊರೊನಾ ಕಾಲದ ಉದ್ಯೋಗನಷ್ಟ ಸರಿದೂಗಿಸಲು ಇನ್ನಷ್ಟು ಹರಿವಿನಿ ನಿರೀಕ್ಷೆ. ರಾಷ್ಟ್ರೀಯ ಮೂಲಸೌಕರ್ಯ ವಾಹಿನಿ (ಎನ್‌ಐಪಿ) ಅಳವಡಿಕೆಗೆ 2020-25ರ ಅವಧಿಯಲ್ಲಿ111 ಲಕ್ಷ ಕೋಟಿ ರೂ. ಹರಿವು ಬೇಕಾದೀತೆಂಬ ನಿರೀಕ್ಷೆಯಿತ್ತು. ವಿದೇಶಿ ಹೂಡಿಕೆದಾರರು ಹಾಗೂ ಆಂತರಿಕ ಉತ್ಪಾದಕರನ್ನು ಆಕರ್ಷಿಸಲು ಉತ್ಪಾದನೆ ಆಧರಿತ ಭತ್ಯೆ ವ್ಯವಸ್ಥೆ (ಪಿಎಲ್‌ಐ)ಯ ಅಳವಡಿಕೆಯ ಸಾಧ್ಯತೆ.


​ಎಂಎಸ್‌ಎಂಇಗಳತ್ತ ಗಮನ

ಸಣ್ಣ ಹಾಗೂ ಮಧ್ಯಮವರ್ಗದ ಉದ್ದಿಮೆಗಳು ಬಿಜೆಪಿಯ ನಿಷ್ಠಾವಂತ ಮತಬ್ಯಾಂಕ್‌ ಹಾಗೂ ಕೊರೊನಾ ಕಾಲದಲ್ಲಿಹೆಚ್ಚಿನ ಹೊಡೆತ ತಿಂದವರು. ಸಾಕಷ್ಟು ಉದ್ಯೋಗನಷ್ಟ ಇಲ್ಲಿಆಗಿದೆ. ಈ ವಲಯ ಮೇಲೆತ್ತಲು ಹಾಗೂ ಉದ್ಯೋಗಸೃಷ್ಟಿಗಾಗಿ ಹೆಚ್ಚಿನ ಹಣವನ್ನು ಬಜೆಟ್‌ ಸಂಕಲ್ಪಿಸಲಿದೆ. ಆತ್ಮನಿರ್ಭರ ಪ್ಯಾಕೇಜ್‌ನಲ್ಲೂಇದಕ್ಕೆ ವಿನಿಯೋಗವಿತ್ತು. ಇಲ್ಲಿನ ಸವಾಲು ಎಂದರೆ ಸ್ಟೀಲ್‌, ತಾಮ್ರ, ಸಿಮೆಂಟ್‌ ಮುಂತಾದ ಕಚ್ಚಾವಸ್ತುಗಳ ವ್ಯಾಪಾರ ನಿರ್ಬಂಧ, ಬೆಲೆಯೇರಿಕೆ, ಸುಂಕಗಳ ನಿಯಂತ್ರಣ. ಹೊಸ ಉದ್ದಿಮೆಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿರುವ ಬ್ಯಾಂಕ್‌ಗಳನ್ನೂ ದಾರಿಗೆ ತರುವ ಸವಾಲು ಇದೆ.

ಖಾಸಗೀಕರಣ: ಖಾಸಗೀಕರಣದಿಂದ 40 ಶತಕೋಟಿ ಡಾಲರ್‌ನಷ್ಟು ಹಣವನ್ನು ಕಲೆಹಾಕುವ ಉದ್ದೇಶ ಸರಕಾರಕ್ಕೆ ಇದೆ. ನಷ್ಟದ ಸ್ಥಿತಿಯಲ್ಲಿರುವ ಇಂಧನ, ಗಣಿಗಾರಿಕೆ, ಬ್ಯಾಂಕಿಂಗ್‌ ಸಂಸ್ಥೆಗಳನ್ನು ಹಾಗೂ ಪ್ರಮುಖ ಸಂಸ್ಥೆಗಳ ಅಲ್ಪ ಷೇರುಗಳನ್ನು ಮಾರಾಟ ಮಾಡುವ ಇರಾದೆ ಸರಕಾರದ್ದು. ಭಾರತ್‌ ಪೆಟ್ರೋಲಿಯಂ, ಎಲ್‌ಐಸಿ, ಬಿಎಸ್ಸೆನ್ನೆಲ್‌, ಏರ್‌ ಇಂಡಿಯಾ ಸಂಭಾವ್ಯ ಸಂಸ್ಥೆಗಳು.


ಬಜೆಟ್‌ ನಿರೀಕ್ಷೆಗಳು: ಕೋವಿಡೋತ್ತರ ಆರೋಗ್ಯ ಸೇವೆ

2020ರ ಪೂರ್ತಿ ಕೋವಿಡ್‌ ವಿರುದ್ಧ ಹೋರಾಟ ನಡೆಸಿದ ಕೇಂದ್ರ ಸರಕಾರ, ಈ ವರ್ಷ ಆರೋಗ್ಯ ಸೇವೆಗೆ ಹೆಚ್ಚಿನ ಗಮನ ಹಾಗೂ ಅನುದಾನ ನೀಡಲಿದೆ ಎಂಬುದು ತಜ್ಞರ ಅನಿಸಿಕೆ. ಕೋವಿಡ್‌ ಮತ್ತು ಇತರ ಸೋಂಕುಗಳಿಗೆ ಸಂಬಂಧಿಸಿದ, ಜೀವತಂತ್ರಜ್ಞಾನ ಹಾಗೂ ವೈದ್ಯಕೀಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಿದೆ. ಕಳೆದ ದಶಕದಲ್ಲಿದೇಶದ ತನ್ನ ಜಿಡಿಪಿಯ ಶೇ.1ನ್ನು ಮಾತ್ರ ಆರೋಗ್ಯ ಸೇವೆಯತ್ತ ಹರಿಸಿದೆ. ಅಮೆರಿಕ ಶೇ.17ರಷ್ಟನ್ನು ನೀಡುತ್ತದೆ. ಕೋವಿಡ್‌ ನಮ್ಮ ಆರೋಗ್ಯಸೇವೆಯ ದೌರ್ಬಲ್ಯವನ್ನು ತೋರಿಸಿದೆ. ಈ ವಲಯದಲ್ಲಿಮೂಲಸೌಕರ್ಯ ವೃದ್ಧಿ, ಮಾನವ ಸಂಪನ್ಮೂಲ ವೃದ್ಧಿ, ಕೌಶಲ್ಯವೃದ್ಧಿ, ಡಿಜಿಟಲ್‌ ಹೆಲ್ತ್‌ಕೇರ್‌ಗಳಿಗೆ ವಿನಿಯೋಗ ಹೆಚ್ಚಿಸಲಿದೆ. 'ವೈದ್ಯಕೀಯ ಡಿಪ್ಲೊಮಸಿ' ಅಥವಾ 'ಲಸಿಕೆ ರಾಜತಾಂತ್ರಿಕತೆ'ಯ ಮೂಲಕ ಸರಕಾರ ಈ ವಲಯದ ಸಾಧ್ಯತೆಗಳನ್ನೂ ಅರ್ಥ ಮಾಡಿಕೊಂಡಿದೆ. ಪ್ರಸ್ತುತ ಶೇ.1ರಷ್ಟಿರುವ ಆರೋಗ್ಯ ಟ್ಯಾಕ್ಸ್‌ ಅನ್ನು ಹೆಚ್ಚಿಸುವ ಸಾಧ್ಯತೆ.


ಮುದ್ರಣದ ಕತೆ

ಮೊದಲು ಬಜೆಟ್‌ ಪ್ರತಿಗಳು ರಾಷ್ಟ್ರಪತಿ ಭವನದಲ್ಲಿ ಮುದ್ರಣಗೊಳ್ಳುತ್ತಿದ್ದವು. 1950ರಲ್ಲಿ ಬಜೆಟ್‌ ಪ್ರತಿ ಸೋರಿಕೆಯಾದ ಬಳಿಕ, ಮಿಂಟೋ ರಸ್ತೆಗೆ ಮುದ್ರಣ ಸ್ಥಳಾಂತರಗೊಂಡಿತು. ನಂತರ ನಾತ್‌ರ್‍ ಬ್ಲಾಕ್‌ನ ನೆಲಮಳಿಗೆಗೆ ಸ್ಥಳಾಂತರವಾಯಿತು.

ಬ್ಲ್ಯಾಕ್‌ ಬಜೆಟ್‌: 1973-74ರಲ್ಲಿಗಂಭೀರ ಆರ್ಥಿಕ ಒತ್ತಡದ ನಡುವೆ ಮಂಡನೆಯಾದ ಆಯವ್ಯಯವನ್ನು 'ಬ್ಲ್ಯಾಕ್‌ ಬಜೆಟ್‌' ಎಂದೇ ಕರೆಯಾಗುತ್ತದೆ. 1971ರಲ್ಲಿನಡೆದ ಬಾಂಗ್ಲಾಯುದ್ಧ, ಮಾನ್ಸೂನ್‌ ವೈಫಲ್ಯದ ಪರಿಣಾಮ ಬಜೆಟ್‌ ಮೇಲಾಗಿ, 550 ಕೋಟಿ ರೂ.ಗಳ ಕೊರತೆ ತೋರಿಸಿತ್ತು. ಕಲ್ಲಿದ್ದಲು ಗಣಿಗಳು ಹಾಗೂ ಜನರಲ್‌ ಇನ್ಸೂರೆನ್ಸ್‌ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸುವ ಪ್ರಸ್ತಾವ ಮಂಡಿಸಿತ್ತು.


​ಬಹಿ ಖಾತಾ ಇರುತ್ತಾ?

2019ರಲ್ಲಿವಿತ್ತ ಸಚಿವೆ ನಿರ್ಮಲಾ ಅವರು, ಸಾಂಪ್ರದಾಯಿಕ ಬಜೆಟ್‌ ಬ್ರೀಫ್‌ಕೇಸ್‌ ಬದಲು ಬಜೆಟ್‌ ಕಡತವಿದ್ದ ಬಟ್ಟೆಯ 'ಬಹೀ ಖಾತಾ' ಸಂಸತ್ತಿಗೆ ತಂದಿದ್ದರು. ಬಜೆಟ್‌ ಬ್ರೀಫ್‌ಕೇಸ್‌ ಪರಂಪರೆ ಇಂಗ್ಲೆಂಡ್‌ನ ಬಜೆಟ್‌ ಚೀಫ್‌ ವಿಲಿಯಂ ಗ್ಲಾಡ್‌ಸ್ಟೋನ್‌ನದು. ಈತನ ಭಾಷಣ ಎಷ್ಟು ಉದ್ದವಿರುತ್ತಿತ್ತು ಎಂದರೆ ಅದನ್ನೆಲ್ಲತುಂಬಿಸಲು ಬ್ರೀಫ್‌ಕೇಸ್‌ ಅಗತ್ಯವಾಗಿತ್ತು. ಈ ಸಲ ಬಜೆಟ್‌ ಮುದ್ರಣವಿಲ್ಲದಿರುವುದರಿಂದ ಬಹೀ ಖಾತಾದ ಕತೆ ಏನಾಗಲಿದೆಯೋ ತಿಳಿಯದು.

ಬ್ಲೂಶೀಟ್‌: ಕೇಂದ್ರ ಬಜೆಟ್‌ನ ಸ್ಟಾರ್ಟಿಂಗ್‌ ಪಾಯಿಂಟ್‌ ಅಂದರೆ ಬ್ಲೂಶೀಟ್‌; ಇದರಲ್ಲಿಪ್ರಮುಖ ಅಂಕಿ ಅಂಶಗಳಿರುತ್ತವೆ. ಬಜೆಟ್‌ನ ನೀಲಿನಕ್ಷೆ ಎಂದೇ ಪರಿಗಣಿತ. ಇದು ತುಂಬಾ ರಹಸ್ಯ ಹಾಗೂ ಬಜೆಟ್‌ ಜಂಟಿ ಸೆಕ್ರೆಟರಿ ವಶದಲ್ಲಿರುತ್ತದೆ.


​ಮೊತ್ತ ಮೊದಲ ಬಜೆಟ್‌

ಭಾರತದ ಮೊತ್ತ ಮೊದಲ ಒಕ್ಕೂಟ ಬಜೆಟ್‌ ಮಂಡನೆಯಾದುದು 1860ರ ಫೆ.18ರಂದು. ಬ್ರಿಟಿಷ್‌ ಕಂಪನಿ ಸರಕಾರದ ವೈಸರಾಯ್‌ ಅವರ ಎಕ್ಸಿಕ್ಯೂಟಿವ್‌ ಸಮಿತಿಯ ವಿತ್ತ ಸದಸ್ಯನಾಗಿದ್ದ ಜೇಮ್ಸ್‌ ವಿಲ್ಸನ್‌ ಮಂಡಿಸಿದ್ದು. ಈತ 'ದಿ ಇಕಾನಮಿಸ್ಟ್‌' ಪತ್ರಿಕೆಯ ಸ್ಥಾಪಕ. ಈತ ಸ್ಥಾಪಿಸಿದ ಚಾರ್ಟರ್ಡ್‌ ಬ್ಯಾಂಕ್‌ ಮುಂದೆ ಸ್ಟಾಂಡರ್ಡ್‌ ಬ್ಯಾಂಕ್‌ನಲ್ಲಿ ವಿಲೀನವಾಯಿತು.

ಕೋವಿಡ್‌ ತಂದ ಬದಲಾವಣೆ: ಕೋವಿಡ್‌ನಿಂದಾಗಿ ಈ ಬಾರಿ ಬಜೆಟ್‌ ಮಂಡನೆಯ ಸ್ವರೂಪದಲ್ಲಿಬದಲಾವಣೆ ಆಗಿದೆ. ಮೊತ್ತ ಮೊದಲ ಬಾರಿಗೆ ಬಜೆಟ್‌ ಮುದ್ರಣಗೊಳ್ಳುತ್ತಿಲ್ಲ. ಬದಲಾಗಿ, ಅದೇ ವೇಳೆಗೆ ಸರಿಯಾಗಿ ಕೇಂದ್ರ ಸರಕಾರದ 'ಯೂನಿಯನ್‌ ಬಜೆಟ್‌' ಆ್ಯಪ್‌ನಲ್ಲಿಸಂಸತ್‌ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಲಿದೆ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ