ಮಂಗಳವಾರ, ಮಾರ್ಚ್ 29, 2022

ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ 'ಬೇರುಗಳ ಸೇತುವೆ' ಸೇರ್ಪಡೆ


ಶಿಲ್ಲಾಂಗ್: ಮೇಘಾಲಯದ ಸುಮಾರು 70 ಗ್ರಾಮಗಳಲ್ಲಿ ಇರುವ, ಪ್ರಕೃತಿ ಸಹಜವಾಗಿ ಮೂಡಿರುವ ‘ಬೇರುಗಳ ತೂಗುಸೇತುವೆ’ಗಳು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳು ಕುರಿತ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಪ್ರಕೃತಿ ಸಹಜವಾಗಿ ಮೂಡಿರುವ ಈ ತೂಗು ಸೇತುವೆಗಳು ಸಾಮಾಜಿಕ, ಸಾಂಸ್ಕೃತಿಕವಾಗಿ ಸ್ಥಳೀಯ ಜನರು ಪ್ರಕೃತಿಯ ಜೊತೆಗೆ ಬೆಸೆದುಕೊಂಡಿರುವುದರ ಸಂಕೇತವಾಗಿ ಹೆಸರಾಗಿವೆ.

‘ಮೇಘಾಲಯದ ಸಾಂಸ್ಕೃತಿಕ ಹೆಗ್ಗುರುತು ‘ಬೇರುಗಳ ಸೇತುವೆಗಳು’ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗಿರುವುದು ಸಂತಸ ಮೂಡಿಸಿದೆ’ ಎಂದು ಮುಖ್ಯಮಂತ್ರಿ ಸಿ.ಕೆ.ಸಂಗ್ಮಾ ಹೇಳಿದ್ದಾರೆ.

ಈ ಕುರಿತು ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ಯಶಸ್ಸಿಗಾಗಿ ಎಲ್ಲ ಭಾಗಿದಾರ ಸಂಸ್ಥೆಗಳು, ಜನರಿಗೆ ಅಭಿನಂದಿಸುತ್ತೇನೆ ಎಂದಿದ್ದಾರೆ. ಪ್ರಸ್ತುತ 72 ಗ್ರಾಮಗಳ ವ್ಯಾಪ್ತಿಯಲ್ಲಿ ಇಂತಹ ಬೇರುಗಳ ಸೇತುವೆಗಳು 100ಕ್ಕೂ ಹೆಚ್ಚಿವೆ.

ಭಾರತದಲ್ಲಿ ಸೂರ್ಯಕಾಂತಿ ಎಣ್ಣೆಗೆ ಬೆಡಿಕೆ; ರಷ್ಯಾದಿಂದ ದಾಖಲೆಯ ಬೆಲೆಗೆ ಖರೀದಿ.


ಭಾರತ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳು:

* ಸೂರ್ಯಕಾಂತಿ ಎಣ್ಣೆ: ಉಕ್ರೇನ್, ರಷ್ಯಾ

* ತಾಳೆ ಎಣ್ಣೆ: ಇಂಡೊನೇಷ್ಯಾ, ಮಲೇಷ್ಯಾ

* ಸೋಯಾಬಿನ್‌ ಎಣ್ಣೆ: ಅರ್ಜೆಂಟಿನಾ, ಬ್ರೆಜಿಲ್‌


ಮುಂಬೈ: ಉಕ್ರೇನ್‌ನಿಂದ ಖಾದ್ಯ ತೈಲದ ಪೂರೈಕೆ ನಿಂತಿರುವುದರಿಂದ ದೇಶದ ಸ್ಥಳೀಯ ಮಾರುಕಟ್ಟೆಗಳಲ್ಲಿ ಅಡುಗೆಗೆ ಬಳಕೆಯಾಗುವ ತೈಲ ದರ ಏರಿಕೆಯಾಗಿದೆ. ಈಗ ಭಾರತವು ರಷ್ಯಾದಿಂದ 45,000 ಟನ್‌ ಸೂರ್ಯಕಾಂತಿ ಎಣ್ಣೆಯನ್ನು ಅತ್ಯಧಿಕ ಬೆಲೆಗೆ ಖರೀದಿಸಿರುವುದಾಗಿ ವರದಿಯಾಗಿದೆ.

ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಅಲ್ಲಿಂದ ಸೂರ್ಯಕಾಂತಿ ಎಣ್ಣೆಯ ಪೂರೈಕೆ ಸ್ಥಗಿತಗೊಂಡಿದೆ. ಭಾರತ ಹೊರ ದೇಶಗಳಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಖಾದ್ಯ ತೈಲ ಆಮದು ಮಾಡಿಕೊಳ್ಳುತ್ತಿದೆ. ತಾಳೆ ಎಣ್ಣೆ ಪೂರೈಕೆಯ ಮೇಲೆ ಇಂಡೊನೇಷ್ಯಾ ಮಿತಿ ಹೇರಿದೆ ಹಾಗೂ ದಕ್ಷಿಣ ಅಮೆರಿಕದಲ್ಲಿ ಸೋಯಾಬಿನ್‌ ಬೆಳೆ ಇಳುವರಿ ಕಡಿಮೆಯಾಗಿರುವುದು ದೇಶದಲ್ಲಿ ಸಸ್ಯ ಮೂಲದ ತೈಲಗಳ ಲಭ್ಯತೆಯಲ್ಲಿ ಕೊರತೆ ಸೃಷ್ಟಿಸಿಯಾಗಿದೆ.

ಉಕ್ರೇನ್‌ನಿಂದ ಅಡುಗೆ ಎಣ್ಣೆ ರವಾನಿಸುವುದು ಸಾಧ್ಯವಾಗದಿರುವ ಕಾರಣದಿಂದಾಗಿ ಖರೀದಿದಾರರು ರಷ್ಯಾದಿಂದ ತೈಲ ಖರೀದಿ ವ್ಯವಹಾರ ನಡೆಸುತ್ತಿರುವುದಾಗಿ ಜೆಮಿನಿ ಎಡಿಬಲ್ಸ್ ಅಂಡ್‌ ಫ್ಯಾಟ್ಸ್‌ ಇಂಡಿಯಾ ಪ್ರೈ.ಲಿ.,ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಚೌಧರಿ ಹೇಳಿದ್ದಾರೆ. ಜೆಮಿನಿ ಸಂಸ್ಥೆಯು ಏಪ್ರಿಲ್‌ನಲ್ಲಿ ರಷ್ಯಾದಿಂದ 12,000 ಟನ್‌ ಸೂರ್ಯಕಾಂತಿ ಎಣ್ಣೆ ಪೂರೈಕೆಗೆ ಒಪ್ಪಂದ ಮಾಡಿಕೊಂಡಿದೆ.

ರಿಫೈನರಿಗಳು ಸೂರ್ಯಕಾಂತಿ ಕಚ್ಚಾ ತೈಲವನ್ನು ಪ್ರತಿ ಟನ್‌ಗೆ 2,150 ಡಾಲರ್‌ (₹1.63 ಲಕ್ಷ) ದಾಖಲೆಯ ಬೆಲೆಗೆ ಖರೀದಿಸಿವೆ. ಅದು ತೈಲ ಬೆಲೆ, ಇನ್ಶ್ಯುರೆನ್ಸ್‌ ಹಾಗೂ ಸರಕು ಸಾಗಣೆ ವೆಚ್ಚವನ್ನು (ಸಿಐಎಫ್‌) ಒಳಗೊಂಡಿದೆ. ಉಕ್ರೇನ್‌ ಮೇಲೆ ರಷ್ಯಾ ದಾಳಿಗೂ ಮುನ್ನ ಪ್ರತಿ ಟನ್‌ ಸೂರ್ಯಕಾಂತಿ ಕಚ್ಚಾ ತೈಲವನ್ನು 1,630 ಡಾಲರ್‌ಗಳಿಗೆ (₹1.23 ಲಕ್ಷ) ಖರೀದಿಸಲಾಗುತ್ತಿತ್ತು ಎಂದು ಡೀಲರ್‌ಗಳು ಹೇಳಿದ್ದಾರೆ.

ಉಕ್ರೇನ್‌–ರಷ್ಯಾ ಸಂಘರ್ಷಕ್ಕೂ ಮುನ್ನ ತಾಳೆ ಎಣ್ಣೆ ಮತ್ತು ಸೋಯಾಬಿನ್‌ ಎಣ್ಣೆಗಿಂತಲೂ ಕಡಿಮೆ ಬೆಲೆಗೆ ಸೂರ್ಯಕಾಂತಿ ಎಣ್ಣೆ ದೊರೆಯುತ್ತಿತ್ತು. ಆದರೆ, ಸೂರ್ಯಕಾಂತಿ ಎಣ್ಣೆಯ ಅತಿ ದೊಡ್ಡ ರಫ್ತುದಾರ ರಾಷ್ಟ್ರವಾಗಿರುವ ಉಕ್ರೇನ್‌ನಿಂದ ಪೂರೈಕೆ ಸ್ಥಗಿತವಾಗಿರುವುದರಿಂದ ರಿಫೈನರಿಗಳು ದೊಡ್ಡ ಮೊತ್ತ ತೆರಬೇಕಾಗಿದೆ ಎಂದು ಚೌಧರಿ ಹೇಳಿದ್ದಾರೆ.

ಜಗತ್ತಿನಾದ್ಯಂತ ಉತ್ಪಾದನೆಯಾಗುವ ಶೇಕಡ 60ರಷ್ಟು ಸೂರ್ಯಕಾಂತಿ ಎಣ್ಣೆ ಹಾಗೂ ಒಟ್ಟು ರಫ್ತು ಪ್ರಮಾಣದಲ್ಲಿ ಶೇಕಡ 76ರಷ್ಟು ಯುರೋಪ್‌ ಮತ್ತು ಏಷ್ಯಾ ನಡುವಿನ ಕಪ್ಪು ಸಮುದ್ರದ ಮಾರ್ಗದಲ್ಲಿ ರವಾನೆಯಾಗುತ್ತದೆ.

ಹಡಗುಗಳ ಮೂಲಕ ಉಕ್ರೇನ್‌ನಿಂದ ಭಾರತಕ್ಕೆ ತಲುಪಬೇಕಿದ್ದ 3,00,000 ಟನ್‌ಗೂ ಹೆಚ್ಚಿನ ಪ್ರಮಾಣದ ಸೂರ್ಯಕಾಂತಿ ಎಣ್ಣೆ ಸಾಗಣೆಗೆ ಅಡ್ಡಿಯಾಗಿದೆ. ಈಗ ಭಾರತದ ಖರೀದಿದಾರರು ರಷ್ಯಾಗೆ ಡಾಲರ್‌ಗಳ ರೂಪದಲ್ಲಿ ಪಾವತಿಸುತ್ತಿದ್ದಾರೆ ಹಾಗೂ ಸರಕು ಸಾಗಣೆ ಮಾಡುವ ಹಡಗುಗಳಿಗೆ ದೇಶದ ವಿಮಾ ಕಂಪನಿಗಳು ವಿಮೆ ನೀಡುತ್ತಿವೆ.

ದೇಶದಲ್ಲಿ ಸುಮಾರು 2 ಲಕ್ಷ ಟನ್‌ ಸೂರ್ಯಕಾಂತಿ ಎಣ್ಣೆ ಬಳಕೆಯಾಗುತ್ತಿದ್ದು, ರಿಫೈನರಿಗಳು ಪ್ರಸ್ತುತ 80,000 ಟನ್‌ಗಳಷ್ಟು ಆಮದು ಮಾಡಿಕೊಳ್ಳಬಹುದಾಗಿದೆ ಎಂದು ದೆಹಲಿ ಮೂಲದ ವಿತರಕರೊಬ್ಬರು ಹೇಳಿದ್ದಾರೆ.

ಸೂರ್ಯಕಾಂತಿ ಎಣ್ಣೆಯ ಕೊರತೆಯಿಂದಾಗಿ ಜನರು ಸೋಯಾ, ಕಡಲೆಕಾಯಿ ಎಣ್ಣೆ ಹಾಗೂ ಸಾಸಿವೆ ಎಣ್ಣೆ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಭಾರತ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳು:

* ಸೂರ್ಯಕಾಂತಿ ಎಣ್ಣೆ: ಉಕ್ರೇನ್, ರಷ್ಯಾ

* ತಾಳೆ ಎಣ್ಣೆ: ಇಂಡೊನೇಷ್ಯಾ, ಮಲೇಷ್ಯಾ

* ಸೋಯಾಬಿನ್‌ ಎಣ್ಣೆ: ಅರ್ಜೆಂಟಿನಾ, ಬ್ರೆಜಿಲ್‌

ಶನಿವಾರ, ಮಾರ್ಚ್ 12, 2022

15ನೇ ಹಣಕಾಸು ಆಯೋಗದ 2021-22 ರಿಂದ 2025-26ನೇ ಸಾಲಿನ ವರದಿ ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಕೆ

ಹಣಕಾಸು ಆಯೋಗ

15ನೇ ಹಣಕಾಸು ಆಯೋಗದ 2021-22 ರಿಂದ 2025-26ನೇ ಸಾಲಿನ ವರದಿ ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಕೆ

Posted On: 09 NOV 2020 1:00PM

ಶ್ರೀ ಎನ್.ಕೆ. ಸಿಂಗ್ ನೇತೃತ್ವದ ಹದಿನೈದನೇ ಹಣಕಾಸು ಆಯೋಗ (XVFC) ಇಂದು 2021-22 ರಿಂದ 2025-26ನೇ ಸಾಲಿನ ತನ್ನ ವರದಿಯನ್ನು ಭಾರತದ ಮಾನ್ಯ ರಾಷ್ಟ್ರಪತಿಯವರಿಗೆ ಸಲ್ಲಿಸಿತು. ಆಯೋಗದ ಸದಸ್ಯರಾದ ಶ್ರೀ ಅಜಯ್ ನಾರಾಯಣ್ ಝಾ, ಪ್ರೊ. ಅನೂಪ್ ಸಿಂಗ್, ಡಾ. ಅಶೋಕ್ ಲಹಿರಿ ಮತ್ತು ಡಾ. ರಮೇಶ್ ಚಂದ್ ಅವರೊಂದಿಗೆ ಆಯೋಗದ ಕಾರ್ಯದರ್ಶಿ ಶ್ರೀ ಅರವಿಂದ್ ಮೆಹ್ತಾ ಅವರು ಅಧ್ಯಕ್ಷರ ಜೊತೆಗಿದ್ದರು.

ಉಲ್ಲೇಖಿತ ನಿಯಮಗಳ (ಟಿಓಆರ್) ಅನ್ವಯ, 2021-22 ರಿಂದ 2025-26ರ ಸಾಲಿನವರೆಗೆ ಐದು ವರ್ಷಗಳ ಕಾಲದ ತನ್ನ ಶಿಫಾರಸುಗಳನ್ನು 2020ರ ಅಕ್ಟೋಬರ್ 30ರೊಳಗೆ ಸಲ್ಲಿಸುವುದು ಆಯೋಗಕ್ಕೆ ಕಡ್ಡಾಯವಾಗಿತ್ತು. ಕಳೆದ ವರ್ಷ, ಆಯೋಗವು 2020-21ರ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿತ್ತು, ಕೇಂದ್ರ ಸರ್ಕಾರ ಅದನ್ನು ಅಂಗೀಕರಿಸಿತ್ತು ಹಾಗೂ 2020 ಜನವರಿ 30ರಂದು ಸಂಸತ್ತಿನಲ್ಲಿ ಮಂಡಿಸಿತ್ತು.

ಉಲ್ಲೇಖಿತ ನಿಯಮಗಳನ್ವಯ ಅನನ್ಯ ಮತ್ತು ವಿಸ್ತೃತ ಶ್ರೇಣಿಯ ವಿಚಾರಗಳ ಕುರಿತಂತೆ ತನ್ನ ಶಿಫಾರಸುಗಳನ್ನು ನೀಡಲು ಆಯೋಗಕ್ಕೆ ಕೇಳಲಾಗಿತ್ತು. ಕೇಂದ್ರ ಮತ್ತು ರಾಜ್ಯಗಳ ನಡುವೆ ಹಾಗೂ ರಾಜ್ಯಗಳೊಳಗಿನ ತೆರಿಗೆ ಹಂಚಿಕೆ,  ಸ್ಥಳೀಯ ಸರ್ಕಾರಗಳ ಅನುದಾನ, ವಿಪತ್ತು ನಿರ್ವಹಣಾ ಅನುದಾನದ ಹೊರತಾಗಿ, ವಿದ್ಯುತ್ ವಲಯ, ಡಿಬಿಟಿ ಅಳವಡಿಕೆ, ಘನತ್ಯಾಜ್ಯ ನಿರ್ವಹಣೆ ಇತ್ಯಾದಿ  ಹಲವು ಕ್ಷೇತ್ರಗಳಲ್ಲಿ ರಾಜ್ಯಗಳಿಗೆ ಕಾರ್ಯಕ್ಷಮತೆ ಪ್ರೋತ್ಸಾಹಕ ಪರೀಕ್ಷೆ ಮತ್ತು ಶಿಫಾರಸು ಮಾಡಲು ಆಯೋಗವನ್ನು ಕೇಳಲಾಗಿತ್ತು. ರಕ್ಷಣಾ ಮತ್ತು ಆಂತರಿಕ ಭದ್ರತೆಗೆ ಧನ ಸಹಾಯಕ್ಕಾಗಿ ಪ್ರತ್ಯೇಕ ಕಾರ್ಯವಿಧಾನವನ್ನು ಸ್ಥಾಪಿಸಬೇಕೇ ಎಂದು ಪರಿಶೀಲಿಸಲು ಮತ್ತು ಹಾಗಿದ್ದಲ್ಲಿ ಅಂತಹ ಕಾರ್ಯವಿಧಾನವನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂದೂ ಕೇಳಲಾಗಿತ್ತು. ಆಯೋಗವು ಈ ವರದಿಯಲ್ಲಿ ತನ್ನ ಎಲ್ಲಾ ಅಭಿಮತವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲು ಪ್ರಯತ್ನಿಸಿದೆ.

ಈ ವರದಿಯನ್ನು ನಾಲ್ಕು ಸಂಪುಟಗಳಲ್ಲಿ ಸಂಯೋಜಿಸಲಾಗಿದೆ. ಸಂಪುಟ 1 ಮತ್ತು 2 ಈ ಹಿಂದಿನಂತೆಯೇ ಪ್ರಮುಖ ವರದಿ ಮತ್ತು ಅದಕ್ಕೆ ಪೂರಕವಾದ ಪರಿವಿಡಿಗಳನ್ನು ಒಳಗೊಂಡಿದೆ. ಸಂಪುಟ 3 ಕೇಂದ್ರ ಸರ್ಕಾರಕ್ಕೆ ಮೀಸಲಾಗಿದ್ದು,  ಮಧ್ಯಮ-ಅವಧಿಯ ಸವಾಲುಗಳು ಮತ್ತು ಮಾರ್ಗಸೂಚಿಯೊಂದಿಗೆ ಪ್ರಮುಖ ವಿಭಾಗಗಳನ್ನು ಹೆಚ್ಚು ಆಳವಾಗಿ ಪರಿಶೀಲಿಸುತ್ತದೆ. ಸಂಪುಟ 4 ಸಂಪೂರ್ಣವಾಗಿ ರಾಜ್ಯಗಳಿಗೆ ಮೀಸಲಾಗಿದ್ದು, ಆಯೋಗವು ಪ್ರತಿ ರಾಜ್ಯದ ಹಣಕಾಸನ್ನು ಬಹಳ ಆಳವಾಗಿ ವಿಶ್ಲೇಷಿಸಿದೆ ಮತ್ತು ಪ್ರತ್ಯೇಕವಾಗಿ ರಾಜ್ಯಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಎದುರಿಸಲು ರಾಜ್ಯ-ನಿರ್ದಿಷ್ಟ ಪರಿಗಣನೆಗಳನ್ನೂ ಒಳಗೊಂಡಿದೆ.

ಕೇಂದ್ರ ಸರ್ಕಾರ ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ ತರುವಾಯ ವರದಿಯಲ್ಲಿರುವ ಶಿಫಾರಸುಗಳ ಬಗ್ಗೆ ವಿವರಣಾತ್ಮಕ ಜ್ಞಾಪನಾ ಪತ್ರ / ಕೈಗೊಂಡ ಕ್ರಮದ ವರದಿಯೊಂದಿಗೆ ಇದು ಸಾರ್ವಜನಿಕ ತಾಣಗಳಲ್ಲಿ ಲಭ್ಯವಾಗಲಿದೆ. ವರದಿಯ ಮುಖಪುಟ ಮತ್ತು ಶೀರ್ಷಿಕೆ ಈ ವರದಿಯಲ್ಲಿ ವಿಶಿಷ್ಟವಾಗಿವೆ- “ಕೋವಿಡ್ ಸಮಯದಲ್ಲಿ ಹಣಕಾಸು ಆಯೋಗ” ಹಾಗೂ ರಾಜ್ಯಗಳು ಮತ್ತು ಒಕ್ಕೂಟದ ನಡುವಿನ ಸಮತೋಲನವನ್ನು ಸೂಚಿಸುವ ರಕ್ಷಾಪುಟದಲ್ಲಿ ಮಾಪಕ ಬಳಸಲಾಗಿದೆ.


ಶುಕ್ರವಾರ, ಮಾರ್ಚ್ 4, 2022

ಡಿಜಿ ಯಾತ್ರಾ:- ವಿಮಾನಯಾನದ ಪ್ರಯಾಣಕ್ಕೆ ಸಂಬಂಧಿಸಿದಂತೆ ಇರುವ ಮಾಹಿತಿ.

ಭಾರತದಲ್ಲಿ ಉಡಾನ್‌ ಯೋಜನೆಯಿಂದಾಗಿ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ವಿಮಾನಯಾನ ಮಾಡುವ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಉದಾಹರಣೆಗೆ, ಪ್ರತಿದಿನ ಸರಾಸರಿ ಮೂವತ್ತು ಸಾವಿರ ಪ್ರಯಾಣಿಕರು ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಳಸುತ್ತಿದ್ದಾರೆ. ಕೋವಿಡ್‌-19ರಿಂದ ಸ್ಥಗಿತವಾಗಿರುವ ಅಂತರರಾಷ್ಟ್ರೀಯ ವಿಮಾನಯಾನ ಪೂರ್ಣ ಪ್ರಮಾಣದಲ್ಲಿ ಮತ್ತೆ ಪ್ರಾರಂಭವಾದರೆ, ಪ್ರತಿದಿನ ಬೆಂಗಳೂರಿನ ವಿಮಾನ ನಿಲ್ದಾಣವನ್ನು ಬಳಸುವ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ವಿಮಾನ ಹೊರಡುವ ಸಮಯಕ್ಕಿಂತ ಕೆಲವು ಗಂಟೆಗಳ ಕಾಲ ಮೊದಲು ವಿಮಾನ ನಿಲ್ದಾಣವನ್ನು ತಲುಪಬೇಕು. ವಿಮಾನ ನಿಲ್ದಾಣ ಪ್ರವೇಶಿಸಲು, ಸರತಿಸಾಲಿನಲ್ಲಿ ನಿಂತು ಸುರಕ್ಷತಾ ಸಿಬ್ಬಂದಿಗೆ ಐಡಿ, ಟಿಕೆಟ್‌ ಅಥವಾ ಬೋರ್ಡಿಂಗ್‌ ಪಾಸ್‌ ತೋರಿಸಬೇಕು. ಲಗೇಜ್‌ ಚೆಕ್‌ ಇನ್‌ ಮಾಡಲು, ಬೋರ್ಡಿಂಗ್‌ ಪಾಸ್‌ ಪಡೆಯಲು ಮತ್ತೊಮ್ಮೆ ಸರತಿಸಾಲಿನಲ್ಲಿ ನಿಲ್ಲಬೇಕು. ಇದಾದ ನಂತರ ಬೋರ್ಡಿಂಗ್‌ ಏರಿಯಾ ಪ್ರವೇಶಿಸುವ ಮೊದಲು ಸೆಕ್ಯೂರಿಟಿ ತಪಾಸಣೆಗಾಗಿ ಸರತಿಸಾಲಿನಲ್ಲಿ ನಿಲ್ಲಬೇಕು. ವಿಮಾನ ಹೊರಡಲು ಸಿದ್ಧವಾದಾಗ, ಬೋರ್ಡಿಂಗ್‌ ಏರಿಯಾದಿಂದ ವಿಮಾನದ ಹತ್ತಿರ ಹೋಗಲು ಸರತಿಸಾಲಿನಲ್ಲಿ ನಿಂತು ವಿಮಾನಯಾನ ಸಿಬ್ಬಂದಿಗೆ ಬೋರ್ಡಿಂಗ್‌ ಪಾಸ್‌ ತೋರಿಸಬೇಕು. ವಿಮಾನ ಪ್ರವೇಶಿಸುವ ಮೊದಲು ಮತ್ತೊಮ್ಮೆ ಸರತಿಸಾಲಿನಲ್ಲಿ ನಿಂತು ಬೋರ್ಡಿಂಗ್‌ ಪಾಸ್‌ ತೋರಿಸಿ, ಸೆಕ್ಯುರಿಟಿ ಚೆಕ್‌ಗೆ ಒಳಪಡಬೇಕು.

ಇಷ್ಟೊಂದು ಸರತಿಸಾಲಿನಲ್ಲಿ ನಿಲ್ಲುವುದು ಮತ್ತು ಇಷ್ಟೊಂದು ಹಂತದಲ್ಲಿ ಸೆಕ್ಯುರಿಟಿ ತಪಾಸಣೆಗಾಗಿ ಪ್ರಯಾಣಿಕರ ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಮತ್ತೊಂದು ಕಡೆ, ವಿವಿಧ ಹಂತದಲ್ಲಿ ಪ್ರಯಾಣಿಕರಿಗೆ ನೆರವಾಗಲು ಸಾಕಷ್ಟು ಸಿಬ್ಬಂದಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆ ನಿಯೋಜಿಸಬೇಕಾಗುತ್ತದೆ.

ಪ್ರಯಾಣಿಕರಿಗೆ ಸುಲಭವಾಗಿ ವಿಮಾನಯಾನ ಮಾಡಲು ಸಾಧ್ಯವಾಗಲು, ಭಾರತ ಸರ್ಕಾರ ಕಂಪ್ಯೂಟರ್‌ ವಿಷನ್‌ ತಂತ್ರಜ್ಞಾನ ಆಧಾರಿತ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಹಂತಹಂತವಾಗಿ ಭಾರತದ ಎಲ್ಲ ವಿಮಾನ ನಿಲ್ದಾಣದಲ್ಲಿ ಜಾರಿಗೊಳಿಸುತ್ತಿದೆ.

ಈ ಸೌಲಭ್ಯವನ್ನು ಪಡೆಯುವ ಇಚ್ಛಿಸುವ ಪ್ರಯಾಣಿಕರು, ಈ ಉದ್ದೇಶಕ್ಕಾಗಿ ಲಭ್ಯವಾಗುವ ಜಾಲತಾಣದಲ್ಲಿ ತಮ್ಮ ಹೆಸರು, ಇ-ಮೇಲ್‌ ವಿಳಾಸ, ಮೊಬೈಲ್‌ ಫೋನ್‌ ಸಂಖ್ಯೆ ಹಾಗೂ ಐಡಿ ಮಾಹಿತಿ (ಆಧಾರ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸೆನ್ಸ್‌ ಇತ್ಯಾದಿ) ನೀಡಿದರೆ ಅವರಿಗೊಂದು ಡಿಜಿಯಾತ್ರಾ ಐಡಿ ದೊರೆಯುತ್ತದೆ.

ವಿಮಾನಯಾನಕ್ಕಾಗಿ ಟಿಕೆಟ್‌ ಖರೀದಿಸುವಾಗ ಈ ಡಿಜಿ ಯಾತ್ರಾ ಐಡಿಯನ್ನು ಪ್ರಯಾಣಿಕರು ನೀಡಬೇಕು. ಅವರು ವಿಮಾನಯಾನ ಪ್ರಾರಂಭಿಸುವ ವಿಮಾನ ನಿಲ್ದಾಣಕ್ಕೆ ಡಿಜಿ ಯಾತ್ರಾ ಐಡಿಯನ್ನು ಹಾಗೂ ಟಿಕೆಟ್‌ ಮಾಹಿತಿಯನ್ನು ವಿಮಾನಯಾನ ಸಂಸ್ಥೆ ತಲುಪಿಸುತ್ತದೆ.

ಮೊದಲ ಸಲ ಡಿಜಿ ಯಾತ್ರಾ ಐಡಿ ಪ್ರಯಾಣ ಮಾಡುವಾಗ ಮಾತ್ರ ವಿಮಾನ ನಿಲ್ದಾಣದಲ್ಲಿರುವ ನೊಂದಣಿ ಕಿಯೋಸ್ಕ್‌ನಲ್ಲಿ ಪ್ರಯಾಣಿಕರ ಐಡಿಯನ್ನು ಪರಿಶೀಲಿಸಲಾಗುತ್ತದೆ. ಪರಿಶೀಲನೆ ಯಶಸ್ವಿಯಾದರೆ, ಪ್ರಯಾಣಿಕರ ಫೋಟೊವನ್ನು ಅವರ ಡಿಜಿ ಯಾತ್ರಾ ಐಡಿಯಲ್ಲಿ ಸೇರಿಸಲಾಗುತ್ತದೆ.‌

ಇಷ್ಟು ಮಾಡಿದ ನಂತರ, ಎಷ್ಟು ಬಾರಿ ವಿಮಾನಯಾನ ಮಾಡಿದರೂ, ಪ್ರಯಾಣಿಕರನ್ನು ‘ಐಡಿ ತೋರಿಸಿ’ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಅಥವಾ ಸುರಕ್ಷತಾ ಸಿಬ್ಬಂದಿ ಕೇಳುವುದಿಲ್ಲ.

ಡಿಜಿ ಯಾತ್ರಾ ಐಡಿ ಹೊಂದಿರುವ ಪ್ರಯಾಣಿಕರು ವಿಮಾನಯಾನ ಮಾಡಲು ವಿಮಾನ ನಿಲ್ದಾಣಕ್ಕೆ ಬಂದಾಗ, ಸ್ವಯಂಚಾಲಿತ ದ್ವಾರದಲ್ಲಿ ತಮ್ಮ ಟಿಕೆಟ್‌ ಅಥವಾ ಬೋರ್ಡಿಂಗ್‌ ಪಾಸ್‌ ಸ್ಕ್ಯಾನ್‌ ಮಾಡಬೇಕು. ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರ ಟಿಕೆಟ್‌ ಅಥವಾ ಬೋರ್ಡಿಂಗ್‌ ಪಾಸ್‌ ಮಾಹಿತಿಯನ್ನು ಹಾಗೂ ಡಿಜಿ ಯಾತ್ರಾ ಐಡಿಯಲ್ಲಿರುವ ಫೋಟೊದ ಜೊತೆಗೆ ಪ್ರಯಾಣಿಕರ ಹೋಲಿಕೆಯನ್ನು ಮಾಡಿ ಪರಿಶೀಲಿಸಲಾಗುತ್ತದೆ. ಮಾಹಿತಿ ಮತ್ತು ಫೋಟೊ ಹೋಲಿಕೆಯಾದರೆ, ಸ್ವಯಂಚಾಲಿತ ದ್ವಾರ ತೆರೆದುಕೊಳ್ಳುತ್ತದೆ ಮತ್ತು ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಪ್ರವೇಶಿಸಬಹುದು.

ಅಲ್ಲಿಂದ ಪ್ರಯಾಣಿಕರು ನೇರವಾಗಿ ಸೆಕ್ಯೂರಿಟಿ ತಪಾಸಣ ವಲಯಕ್ಕೆ ಹೋಗಬಹುದು; ಅಲ್ಲಿ ತಪಾಸಣೆಯ ನಂತರ ಬೋರ್ಡಿಂಗ್‌ ಏರಿಯಾವನ್ನು ಪ್ರವೇಶಿಸಬಹುದು.

ಪ್ರಯಾಣಿಕರಿಗೆ ಹಲವು ಬಾರಿ ಸರತಿಸಾಲಿನಲ್ಲಿ ನಿಲ್ಲುವುದು ಡಿಜಿ ಯಾತ್ರಾ ಸೌಲಭ್ಯದಿಂದ ತಪ್ಪುತ್ತದೆ; ಐಡಿ ಮತ್ತು ಬೋರ್ಡಿಂಗ್‌ ಪಾಸ್‌ ತೋರಿಸುವುದೂ ತಪ್ಪುತ್ತದೆ. ಅಧಿಕೃತ ಪ್ರಯಾಣಿಕರು ಮತ್ತು ಸಿಬ್ಬಂದಿಯ ಹೊರತಾಗಿ ಬೇರೆ ಯಾರಿಗೂ ವಿಮಾನ ನಿಲ್ದಾಣ ಪ್ರವೇಶಿಸುವ ಅವಕಾಶ ಇರುವುದಿಲ್ಲವಾದ ಕಾರಣ ವಿಮಾನ ನಿಲ್ದಾಣ ಮತ್ತು ವಿಮಾನಯಾನದ ಸುರಕ್ಷತೆಯೂ ಹೆಚ್ಚಾಗುತ್ತದೆ.

ಡಿಜಿ ಯಾತ್ರಾ ಸೌಲಭ್ಯವನ್ನು ಮೊದಲು ಪ್ರಾಯೋಗಿಕವಾಗಿ ಬೆಂಗಳೂರು ಮತ್ತು ಹೈದರಾಬಾದಿನ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗಿತ್ತು. ಈಗ ಮೊದಲ ಹಂತವಾಗಿ ಪುಣೆ, ವಿಜಯವಾಡ, ಕೋಲ್ಕತ್ತಾ ಮತ್ತು ವಾರಾಣಸಿ ವಿಮಾನ ನಿಲ್ದಾಣಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಅನುಷ್ಠಾನಗೊಳಿಸಲಾಗುತ್ತದೆ.