ಭಾನುವಾರ, ಜನವರಿ 29, 2023

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಿರೀಟ ಮುಡಿಗೇರಿಸಿಕೊಂಡ ಬೆಲಾರೂಸ್‌ನ ಅರಿನಾ ಸಬಲೆಂಕಾ


ಮೆಲ್ಬರ್ನ್‌: ಬೆಲಾರೂಸ್‌ನ ಅರಿನಾ ಸಬಲೆಂಕಾ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಿರೀಟ ಮುಡಿಗೇರಿಸಿಕೊಂಡರು.

ರಾಡ್‌ ಲೇವರ್‌ ಅರೆನಾದಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ, ಸೆಟ್‌ ಹಿನ್ನಡೆಯಿಂದ ಪುಟಿದೆದ್ದ ಅವರು 4-6, 6-3, 6-4ರಿಂದ ಕಜಕಸ್ತಾನದ ಎಲೆನಾ ರಿಬಾಕಿನಾ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದರು.

ತೀವ್ರ ಕುತೂಹಲ ಕೆರಳಿಸಿದ್ದ ಹಣಾಹಣಿಯು 2 ತಾಸು 28 ನಿಮಿಷಗಳ ಕಾಲ ನಡೆಯಿತು. ಹಾಲಿ ವಿಂಬಲ್ಡನ್‌ ಚಾಂಪಿಯನ್‌ಗೆ ಸೋಲುಣಿಸಿದ ಸಂತಸದಲ್ಲಿ ಸಬಲೆಂಕಾ ಆನಂದಬಾಷ್ಪ ಸುರಿಸಿದರು.

ಬಿರುಸಿನ ಗ್ರೌಂಡ್‌ಸ್ಟ್ರೋಕ್‌ಗಳು, ನಿಖರ ಸರ್ವ್‌ಗಳು ಮತ್ತು ಅದ್ಭುತ ರ‍್ಯಾಲಿಗಳು ಪಂದ್ಯದ ಮೆರುಗು ಹೆಚ್ಚಿಸಿದವು.

ಕೇವಲ 34 ನಿಮಿಷಗಳಲ್ಲಿ ಮೊದಲ ಸೆಟ್‌ ಗೆದ್ದುಕೊಂಡ ರಿಬಾಕಿನಾ, ಪ್ರಶಸ್ತಿ ಜಯಿಸುವ ನಿರೀಕ್ಷೆ ಮೂಡಿಸಿದ್ದರು. ಆದರೆ ಎರಡನೇ ಸೆಟ್‌ಅನ್ನು 57 ನಿಮಿಷಗಳಲ್ಲಿ ತಮ್ಮದಾಗಿಸಿಕೊಂಡ ಸಬಲೆಂಕಾ, ನಿರ್ಣಾಯಕ ಸೆಟ್‌ನ ಕುತೂಹಲ ಹೆಚ್ಚುವಂತೆ ಮಾಡಿದರು.

ಮೂರನೇ ಸೆಟ್‌ನಲ್ಲಿ 3–3 ಗೇಮ್‌ಗಳಿಂದ ಸಮಬಲವಾಗಿದ್ದಾಗ ರಿಬಾಕಿನಾ ಎರಡು ಬ್ರೇಕ್ ಪಾಯಿಂಟ್ಸ್ ಉಳಿಸಿಕೊಂಡರು. ಏಸ್‌ ಸಿಡಿಸಿದ ಸಬಲೆಂಕಾ 5–3ರಿಂದ ಮುನ್ನಡೆದರು. ಬಳಿಕ ಅದೇ ಲಯದೊಂದಿಗೆ ಸೆಟ್‌ ಹಾಗೂ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಪಂದ್ಯದಲ್ಲಿ ರಿಬಾಕಿನಾ ಒಂಬತ್ತು ಮತ್ತು ಸಬಲೆಂಕಾ 17 ಏಸ್‌ಗಳನ್ನು ಸಿಡಿಸಿದರು. ಬೆಲಾರೂಸ್‌ ಆಟಗಾರ್ತಿ ಏಳು ಡಬಲ್ ಫಾಲ್ಟ್ಸ್ ಎಸಗಿದರು. ರಿಬಾಕಿನಾ ಒಂದು ಡಬಲ್ ಫಾಲ್ಟ್ ಮಾತ್ರ ಮಾಡಿದರು. ಇಲ್ಲಿ ಟ್ರೋಫಿ ಜಯಿಸುವುದರೊಂದಿಗೆ ಸಬಲೆಂಕಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಎರಡನೇ ಸ್ಥಾನಕ್ಕೇರಲಿದ್ದಾರೆ.

ಏಳು ತಿಂಗಳ ಅವಧಿಯಲ್ಲಿ ಎರಡನೇ ಗ್ರ್ಯಾನ್‌ಸ್ಲಾಮ್‌ ಫೈನಲ್ ತಲುಪಿದ ರಿಬಾಕಿನಾ ಮೊದಲ ಬಾರಿಗೆ ಅಗ್ರ 10ರೊಳಗಿನ ರ‍್ಯಾಂಕಿಂಗ್‌ ಪಡೆಯಲಿದ್ದಾರೆ.

ಡಿ ಗ್ರೂಟ್‌ ಸತತ ಒಂಬತ್ತನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ: ನೆದರ್ಲೆಂಡ್ಸ್ ದಂತಕತೆ ಡಿಯೆಡ್‌ ಡಿ ಗ್ರೂಟ್‌ ಅವರು ಮಹಿಳೆಯರ ವೀಲ್‌ಚೇರ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಇದರೊಂದಿಗೆ ಸತತ ಒಂಬತ್ತು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಕಿರೀಟ ಧರಿಸಿದ ಸಾಧನೆ ಮಾಡಿದರು.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಡಿಗ್ರೂಟ್‌ 0-6, 6-2, 6-2ರಿಂದ ಜಪಾನ್‌ನ ಯುಯಿ ಕಮಿಜಿ ಅವರನ್ನು ಪರಾಭವಗೊಳಿಸಿದರು. ಡಿ ಗ್ರೂಟ್ ಅವರಿಗೆ ಇದು ಐದನೇ ಆಸ್ಟ್ರೇಲಿಯಾ ಓಪನ್ ಕಿರೀಟ. ಒಟ್ಟಾರೆ 17ನೇ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಗರಿಯಾಗಿದೆ.

ನಡಾಲ್ ದಾಖಲೆ ಸರಿಗಟ್ಟಿದ ಜೋಕೊವೀಚ್ ಗೆ ಆಸ್ಟ್ರೇಲಿಯನ್ ಓಪನ್ ಕಿರೀಟ

ಮೆಲ್ಬರ್ನ್‌: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಚಾಂಪಿಯನ್ ಆಗಿದ್ದಾರೆ.

ಈ ಮೂಲಕ ಸ್ಪೇನ್‌ನ ರಫೆಲ್ ನಡಾಲ್ ಅವರ ದಾಖಲೆಯ 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಸಾಧನೆಯನ್ನು ಸರಿಗಟ್ಟಿದ್ದಾರೆ.

ಅಷ್ಟೇ ಅಲ್ಲದೆ ದಾಖಲೆಯ 10ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿ ಗೆದ್ದ ಕೀರ್ತಿಗೆ ಪಾತ್ರರಾಗಿದ್ದಾರೆ.

ಭಾನುವಾರ ರಾಡ್‌ ಲೇವರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಮುಖಾಮುಖಿಯಲ್ಲಿ ಜೊಕೊವಿಚ್ ಅವರು ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಸ್‌ ವಿರುದ್ಧ 6-3, 7-6 (7-4), 7-6 (7-5)ರ ಅಂತರದಲ್ಲಿ ಗೆಲುವು ದಾಖಲಿಸಿದರು.

ಪಂದ್ಯದುದ್ಧಕ್ಕೂ ಎದುರಾಳಿ ವಿರುದ್ಧ ಸವಾರಿ ಮಾಡಿದ 35 ವರ್ಷದ ಜೊಕೊವಿಚ್ ನೂತನ ಇತಿಹಾಸ ಸೃಷ್ಟಿಸಿದರು.

ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ಜೊಕೊವಿಚ್‌ ಅವರು ಕಳೆದ ಆವೃತ್ತಿಯ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಈ ಗೆಲುವಿನೊಂದಿಗೆ ಜೊಕೊವಿಚ್ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.

24 ವರ್ಷದ ಸಿಟ್ಸಿಪಸ್‌, 2021ರ ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದರು. ಆಗ ಪ್ರಶಸ್ತಿ ಸುತ್ತಿನಲ್ಲಿ ಜೊಕೊವಿಚ್‌ ಎದುರೇ ಸೋತಿದ್ದರು.‌


ಗರ್ಭಕಂಠ ಕ್ಯಾನ್ಸರ್ ಲಸಿಕೆ ಖರೀದಿ: ಜಾಗತಿಕ ಟೆಂಡರ್ ಸಾಧ್ಯತೆ.

ಗರ್ಭಕಂಠ ಕ್ಯಾನ್ಸರ್ ಲಸಿಕೆ ಖರೀದಿ: ಜಾಗತಿಕ ಟೆಂಡರ್ ಸಾಧ್ಯತೆ.
ನವದೆಹಲಿ: ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟಲು ನೀಡಲಾಗುವ ಲಸಿಕೆಯ (ಎಚ್‌ಪಿವಿ ಲಸಿಕೆ) ಖರೀದಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ಈ ಸಂಬಂಧ ಏಪ್ರಿಲ್‌ನಲ್ಲಿ ಜಾಗತಿಕ ಟೆಂಡರ್‌ ಆಹ್ವಾನಿಸಲು ನಿರ್ಧರಿಸಿದೆ.

‘2026ರ ವೇಳೆಗೆ, ಲಸಿಕೆಯ 16.02 ಕೋಟಿಯಷ್ಟು ಡೋಸ್‌ಗಳು ಲಭ್ಯವಾಗಬೇಕು. ಹೀಗಾಗಿ, ಜಾಗತಿಕ ಟೆಂಡರ್‌ ಕರೆಯಲಾಗುತ್ತಿದೆ. ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ) ಅಲ್ಲದೇ, ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಮೆರ್ಕ್‌ ಕಂಪನಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

9ರಿಂದ 14 ವರ್ಷ ವಯೋಮಾನದ ಬಾಲಕಿಯರಿಗೆ ಈ ಲಸಿಕೆ ನೀಡಲಾಗುತ್ತದೆ. ಅಲ್ಲದೇ, ಈ ಲಸಿಕೆಯನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸಲಾಗಿದ್ದು, ಬರುವ ಜೂನ್‌ನಲ್ಲಿ ಲಸಿಕೆ ನೀಡಿಕೆಗೆ ಚಾಲನೆ ನೀಡಲಾಗುತ್ತದೆ.

ಎಸ್‌ಐಐ ಉತ್ಪಾದಿಸುವ ಎಚ್‌ಪಿವಿ ಲಸಿಕೆ ‘ಸರ್ವಾವ್ಯಾಕ್‌’ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಜ.24ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಎಸ್‌ಐಐ ಸಿಇಒ ಅದಾರ್‌ ಪೂನಾವಾಲಾ ಹಾಗೂ ನಿರ್ದೇಶಕ (ಸರ್ಕಾರ ಮತ್ತು ನಿಯಂತ್ರಣ ಪ್ರಾಧಿಕಾರದ ವ್ಯವಹಾರಗಳ ವಿಭಾಗ) ಪ್ರಕಾಶ್ ಸಿಂಗ್‌ ಈ ಸಂದರ್ಭದಲ್ಲಿ ಹಾಜರಿದ್ದರು.

ಬುಧವಾರ, ಜನವರಿ 25, 2023

ಮೀರ್ ಸಾದಿಕ್ ಎಂದು ಅಪಹಾಸ್ಯ ಮಾಡುವುದರ ಹಿಂದಿರುವ ಸತ್ಯ ಘಟನೆಯ ಕರಾಳ ಸತ್ಯ....

ಮೀರ್ ಸಾದಿಕ್ ಎಂದು ಅಪಹಾಸ್ಯ ಮಾಡುವುದರ ಹಿಂದಿರುವ ಸತ್ಯ ಘಟನೆಯ ಕರಾಳ ಸತ್ಯ....

ಮೀರ್ ಸಾದಿಕ್

ಹೈದರಾಲಿಯ ಕಾಲದ ಮೈಸೂರು ಸಂಸ್ಥಾನದ ಅಧಿಕಾರಿಗಳಲ್ಲೊಬ್ಬ. ಪ್ರೀತಿ, ವಿಶ್ವಾಸಗಳಿಗೆ ಪಾತ್ರನಾಗಿದ್ದುದರಿಂದ ಟಿಪ್ಪುಸುಲ್ತಾನ್ ಇವನನ್ನೇ ತನ್ನ ದಿವಾನನಾಗಿ ನೇಮಿಸಿದ. ಈತ ಕಂದಾಯ ಮತ್ತು ಹಣಕಾಸಿನ ಅಧ್ಯಕ್ಷನೂ ಆಗಿದ್ದ.

ಟಿಪ್ಪುವಿಗೆ ಕಾದಿದ್ದ ಕರಾಳ ಭವಿಷ್ಯ ಮನಗಂಡ ಈತ ಬ್ರಿಟಿಷರೊಂದಿಗೆ ಸಹಕರಿಸಲು ಆರಂಭಿಸಿದ. ಬ್ರಿಟಿಷ್ ಗವರ್ನರ್ ಜನರಲ್ ಕಾರ್ನ್‍ವಾಲೀಸ್ ಮೈಸೂರಿನ ಮೇಲೆ ದಂಡೆತ್ತಿ ಬಂದ ಕಾಲದಿಂದಲೇ ಅವರೊಂದಿಗೆ ಸಂಪರ್ಕ ಬೆಳೆಸಿದ. ಶ್ರೀರಂಗಪಟ್ಟಣದ ಒಪ್ಪಂದದ ತನಕ ಮಾತ್ರ (1792) ಟಿಪ್ಪುವಿಗೆ ನಿಷ್ಠೆಯಿಂದಿದ್ದ. ದಿವಾನನ ಇಂಗಿತ ಅರಿತ ಟಿಪ್ಪು ಇವನನ್ನು ಬಂಧಿಸಿ ಸೆರೆಯಲ್ಲಿಟ್ಟ. ವಿಧೇಯನಾಗಿರುವ ಭರವಸೆಯ ಮೇಲೆ ಮೊದಲಿನ ಸ್ಥಾನದಲ್ಲಿ ನೇಮಿಸಿದ. ಆದರೆ ಇವನು ಸ್ವಾಮಿದ್ರೋಹಿಯಾಗಿಯೇ ಮುಂದುವರೆದ. ಇವನೊಂದಿಗೆ ಅನೇಕ ಅಧಿಕಾರಿಗಳು ಬ್ರಿಟಿಷರು ಹೂಡಿದ ಒಳಸಂಚಿನಲ್ಲಿ ಭಾಗಿಯಾಗಿದ್ದರು. ಇದನ್ನು ಅರಿತ ಟಿಪ್ಪು ಗಲ್ಲಿಗೇರಿಸಬೇಕಾಗಿದ್ದ ದೇಶದ್ರೋಹಿಗಳ ಪಟ್ಟಿ ತಯಾರಿಸಿದ. ಆ ಪಟ್ಟಿಯಲ್ಲಿ ಮೊದಲ ಹೆಸರು ಮೀರ್ ಸಾದಿಕ್‍ನದು. ದರ್ಬಾರಿನ ಸೇವಕನೊಬ್ಬ ಇದನ್ನು ಅರಿತು ವಿಷಯವನ್ನು ಸಾದಿಕ್‍ನಿಗೆ ತಿಳಿಸಿದ. ಆಗ ಈತ ಟಿಪ್ಪುವಿನ ಆಜ್ಞೆ ಕಾರ್ಯಗತಗೊಳ್ಳುವುದಕ್ಕೆ ಮುನ್ನವೇ ಕೋಟೆಯನ್ನು ಬ್ರಿಟಿಷರಿಗೆ ಒಪ್ಪಿಸಲು ಏರ್ಪಾಡುಮಾಡಿದ. ಜೊತೆಗೆ ಟಿಪ್ಪು ತಪ್ಪಿಸಿಕೊಳ್ಳದಂತೆಯೂ ಕ್ರಮ ಕೈಗೊಂಡ.

ಈತ ಬ್ರಿಟಿಷರೊಂದಿಗೆ ನಡೆಸಿದ ಒಳಸಂಚಿನಂತೆ 1799 ಮೇ 2ರಂದು ಕೋಟೆಯನ್ನು ಕಾಯುತ್ತಿದ್ದ ಮೈಸೂರಿನ ಸೈನಿಕರನ್ನು ವೇತನ ಹೆಚ್ಚಳದ ನೆಪದಲ್ಲಿ ಹಿಂದಕ್ಕೆ ಕರೆಯಿಸಿಕೊಂಡ. ಕಾವಲು ಸೈನಿಕರ ನಿರ್ಗಮನದ ವಿರುದ್ಧ ಪ್ರತಿಭಟಿಸುವವರಾರೂ ಇರಲಿಲ್ಲ. ಸುಲ್ತಾನನ ನಿಷ್ಠಾವಂತ ಸೇನಾನಿ ಸಯಿದ್ ಗಫಾರ್ ಫಿರಂಗಿ ಗುಂಡಿಗೆ ಬಲಿಯಾಗಿದ್ದ. ಅತನು ಮರಣಹೊಂದಿದ ಕೂಡಲೇ ಮೀರ್ ಸಾದಿಕ್ ಕೋಟೆಯ ಮೇಲಿಂದ ಬಿಳಿಕರವಸ್ತ್ರ ಹಿಡಿದಾಗ ಕಂದಕದಲ್ಲಿ ಅಡಗಿಕೊಂಡಿದ್ದ ಬ್ರಿಟಿಷ್ ಯೋಧರು ಮುನ್ನೆಡೆದು ಕೋಟೆಯ ಸಂಧಿಯೊಂದರಲ್ಲಿ ತಮ್ಮ ಧ್ವಜ ನೆಟ್ಟರು. ಮೀರ್ ಸಾದಿಕನ ಕುತಂತ್ರ ತನ್ನ ಒಡಯನನ್ನೇ ಬಲಿತೆಗೆದುಕೊಂಡಿತು. ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯ ಟಿಪ್ಪುವಿನ ಸೊಕ್ಕನ್ನಡಗಿಸುವ ಆಸೆ ಫಲಿಸಿತು. ಸಾದಿಕ್ ತನ್ನ ಕುತಂತ್ರದ ಫಲವನ್ನುಣ್ಣಲು ಬಹಳ ಕಾಲ ಬಾಳಲಿಲ್ಲ. ಬ್ರಿಟಿಷರೊಂದಿಗೆ ಸೇರಿಕೊಳ್ಳಲು ರಹಸ್ಯವಾಗಿ ಪಲಾಯನಕ್ಕೆ ಯತ್ನಿಸಿದಾಗ ಮೈಸೂರಿನ ಸೈನಿಕರೇ ಇವನನ್ನು ಕೊಲೆಗೈದರು. ಇವನ ದುಷ್ಕøತದ ಬಗ್ಗೆ ತಿಳಿದ ಅವರು ಶವವನ್ನು ಹೂತ ಮೇಲೂ ಹೊರತೆಗೆದು ಅವಮಾನ ಪಡಿಸಿದರು. ಗಂಡಸರು, ಹೆಂಗಸರು, ಮಕ್ಕಳಾದಿಯಾಗಿ ಶವವನ್ನು ಸುತ್ತುವರಿದು ಅದರ ಮೇಲೆ ಹೊಸಲು ಚೆಲ್ಲಿದರು. ಎರಡು ವಾರಗಳ ಅನಂತರ ಪರಿಸ್ಥಿತಿ ಸುಧಾರಿಸಲು ಬ್ರಿಟಿಷರೇ ಮಧ್ಯೆ ಪ್ರವೇಶಿಸಬೇಕಾಯಿತು. ಟಿಪ್ಪುವಿನ ಸ್ಮರಣಾರ್ಥ ಶ್ರೀರಂಗಪಟ್ಟಣ ಸಂದರ್ಶಿಸುವವರು ಇಂದಿಗೂ ಮೀರ್ ಸಾದಿಕ್ ಕೊಲೆಗೀಡಾದ ಜಾಗದಲ್ಲಿ ಕಲ್ಲೆಸೆಯುತ್ತಾರೆ. (ಸಿ.ಬಿ.ಆರ್.)

ಕೃಪೆ:- ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶ