ಭಾನುವಾರ, ಆಗಸ್ಟ್ 14, 2016

ಕರ್ನಾಟಕದ ಆರ್ಥಿಕತೆ (ಭಾಗ ೨)

ಕನ್ನಡ ಅಧ್ಯಯನ (ಕರ್ನಾಟಕದ ಆರ್ಥಿಕತೆ): ಭಾಗ ೧ – ಅಭಿವೃದ್ಧಿ – ಸಂಪನ್ಮೂಲಗಳು – ಜನಸಂಖ್ಯೆ – ಬಡತನ: ೨. ಕರ್ನಾಟಕದಲ್ಲಿ ಮಾನವಸಂಪನ್ಮೂಲಾಭಿವೃದ್ಧಿ : ಒಂದು ಸಮೀಕ್ಷೆ (೨)

ಪದವೀಪೂರ್ವ ಶಿಕ್ಷಣ

೧೯೫೬-೫೭ರಲ್ಲಿ ಎರಡು ವರ್ಷದ ಇಂಟರ್ ಮೀಡಿಯಟ್ ಶಿಕ್ಷಣವನ್ನು ರದ್ದುಗೊಳಿಸಿ ಒಂದು ವರ್ಷದ ಪದವೀಪೂರ್ಣ ಶಿಕ್ಷಣವನ್ನಾರಂಭಿಸಲಾಯಿತು. ಕೆಲವು ಪ್ರೌಢಶಾಲೆಗಳಲ್ಲಿ ೧೧ನೇ ತರಗತಿಯನ್ನು ತೆರೆಯಲಾಯಿತು.

೧೯೭೦ರಲ್ಲಿ ಪ್ರಿ ಯೂನಿವರ್ಸಿಟಿ ಬೋರ್ಡನ್ನು ಪ್ರಾರಂಭಿಸಲಾಯಿತು. ಪ್ರಿ ಯೂನಿವರ್ಸಿಟಿಯಲ್ಲಿ ಕೋರ್ಸ್‌‌ಗಳನ್ನು ವಿಸ್ತರಿಸಿ ಅದರೊಂದಿಗೆ ಸಾಧ್ಯವಾದಷ್ಟು ಸಮಾನತೆಯನ್ನೂ ತರುವ ಪ್ರಯತ್ನ ನಡೆಯಿತು. ೧೯೭೦ರ ದಶಕದಲ್ಲಿ ಪ್ರಿ ಯೂನಿವರ್ಸಿಟಿಯನ್ನು ಪದವೀಪೂರ್ವ ಕಾಲೇಜುಗಳೆಂದು ಕರೆಯಲಾಯಿತು.

೧೯೮೭ರಲ್ಲಿ ಒಟ್ಟು ೬೫೧ ಪದವೀಪೂರ್ವ ಕಾಲೇಜುಗಳಿದ್ದವು. ಅವುಗಳಲ್ಲಿ ಸುಮಾರು ೧, ೧೧, ೮೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ೧೯೮೦ ದಶಕದಲ್ಲಿ ತರಗತಿಗಳಲ್ಲಿ ಹೆಚ್ಚಿನಾಂಶ ತೇರ್ಗಡೆಯಾದವರು ಸೇರಿದ್ದು ವೃತ್ತಿ ಶಾಲೆಗೆ ಸೇರಿದ್ದ ಶಿಕ್ಷಣ. ಅವರುಗಳಲ್ಲಿ ಹೆಚ್ಚಿನಾಂಶ ವೈದ್ಯರೂ, ತಾಂತ್ರಿಕ ವಿಜ್ಞಾನಿಗಳೂ ಮತ್ತು ವೃತ್ತಿ ಶಿಕ್ಷಣ ಪಡೆದವರಾದರು.

೧೯೯೦ರ ದಶಕದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪದವಿ ಮುಗಿಸಿ ವೃತ್ತಿ ಆಧರಿತ ಶಿಕ್ಷಣ ಪಡೆಯುವ ಇಚ್ಛೆ ತೋರಿದುದರಿಂದ, ಡಿಗ್ರಿ ಕೋರ್ಸುಗಳಲ್ಲಿ ಭರ್ತಿಯಾಗುವವರ ಸಂಖ್ಯೆ ಕಡಿಮೆಯಾಗತೊಡಗಿತು.

ಪದವೀಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದಲ್ಲಿ ಒಂದು ತಿರುವನ್ನು ತರುವಂತಹ ಶಿಕ್ಷಣವಾದುದರಿಂದ ಅದಕ್ಕೆ ಹೆಚ್ಚು ಗಮನ ಕೊಡಲಾಯಿತು. ಇದಲ್ಲದೇ ಪದವೀಪೂರ್ವ (ಪ್ರಿ ಯೂನಿವರ್ಸಿಟಿ) ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳ ಗುಣಮಟ್ಟವನ್ನು ಗುರುತಿಸುವ ಸಾಮಾನ್ಯ ಭರ್ತಿ ಮಾಡುವ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಅವರಲ್ಲಿ ಹೆಚ್ಚು ಮಂದಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ, ಡೆಂಟಲ್ ಕೋರ್ಸ್‌‌ಗಳಿಗೆ ಆಯ್ಕೆ ಆಗುತ್ತಾರೆ. ಇದರಿಂದಲೇ ಈ ವಿಧದ ಶಿಕ್ಷಣಕ್ಕೆ ಬಹಳ ಮಹತ್ವ ಕೊಡಲಾಗುತ್ತಿದೆ. ಕೊಳಂದೆ ಸ್ವಾಮೀ ವರದಿಯ ಮೇರೆಗೆ ೧೯೭೭ರ ನಂತರ ಪದವೀ ಪೂರ್ವ ಶಿಕ್ಷಣದ ಜೊತೆಯಲ್ಲಿ ಶಾಲೆಗಳಲ್ಲಿ, ಡಿಗ್ರಿ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣವನ್ನು ಆರಂಭಿಸಿ ವಿದ್ಯಾರ್ಥಿಗಳು ಶೇಕಡ ೫೦ರಷ್ಟು ವೃತ್ತಿ ಶಿಕ್ಷಣಕ್ಕೆ ಭರ್ತಿಯಾಗುವಂತೆ ಉತ್ತೇಜನ ನೀಡಲಾಗುತ್ತಿದೆ.

ವೃತ್ತಿ ಶಿಕ್ಷಣ

೧೯೭೭ರಲ್ಲಿ ವೃತ್ತಿ ಶಿಕ್ಷಣ ನಿರ್ದೇಶನಾಲಯವನ್ನು ಅಸ್ತಿತ್ವಕ್ಕೆ ತರಲಾಯಿತು. ಮೊದಲು ಇದು ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿದ್ದು ನಂತರ ೧೯೭೯ರಲ್ಲಿ ಈ ಯೋಜನೆಯನ್ನು ರಾಜ್ಯಕ್ಕೆ ವರ್ಗಾಯಿಸಲಾಯಿತು. ಈಗ ಈ ನಿರ್ದೇಶನಾಲಯದಡಿಯಲ್ಲಿ ಒಟ್ಟು ಐದು ವಿಭಾಗಗಳು ಅಂದರೆ ಬೆಂಗಳೂರು, ಮಂಗಳೂರು, ಶಿವಮೊಗ್ಗ, ರಾಯಚೂರು ಮತ್ತು ಧಾರವಾಡಗಳಲ್ಲಿ ಉಪ ನಿರ್ದೇಶಕರ ಉಸ್ತುವಾರಿಯಲ್ಲಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ರಾಜ್ಯ ಮಟ್ಟದಲ್ಲಿ ಮಾನ್ಯ ವಿದ್ಯಾ ಮಂತ್ರಿಗಳ ಅಧ್ಯಕ್ಷತೆಯಲ್ಲಿ ವೃತ್ತಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಹಿನ್ನೆಲೆಯಲ್ಲಿ ವಿವಿಧ ಸರ್ಕಾರೇತರ ಮುಖ್ಯಸ್ಥರನ್ನೊಳಗೊಂಡ ರಾಜ್ಯ ಶಿಕ್ಷಣ ಮಂಡಳಿಯು ಪರೀಕ್ಷಾ ಸಂಬಂಧ ಮತ್ತಿತರ ವಿಷಯಗಳಲ್ಲಿ ಸಲಹೆ ನೀಡುತ್ತಾ ಬಂದಿದೆ.

೧೯೫೭, ೧೯೮೮, ೧೯೯೫-೯೬ರಲ್ಲಿ ಮೂರು ಬಾರಿ ವೃತ್ತಿ ಶಿಕ್ಷಣ ಸಮೀಕ್ಷೆಗಳನ್ನೂ ವಿವಿಧ ಜಿಲ್ಲೆಗಳಲ್ಲಿ ತಯಾರಿಸಿ, ವೃತ್ತಿ ಶಿಕ್ಷಣದ ಕೋರ್ಸಗಳನ್ನು ಅವುಗಳಿಗೆ ಸರಿಹೋದುವಂತಹ ಪಠ್ಯಕ್ರಮಗಳನ್ನೂ ತಯಾರಿಸಿ ಮತ್ತು ವೃತ್ತಿ ಶಿಕ್ಷಣಕ್ಕೆ ಸೌಲಭ್ಯ ಮತ್ತು ಸಲಕರಣೆಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ವೃತ್ತಿ ಶಿಕ್ಷಣವನ್ನು ಆರಂಭಿಸಲಾಗಿದೆ.

ಡಾ|| ರಾಮೇಗೌಡ ಕಮಿಟಿಯ ವರದಿಯ ಮೇರೆಗೆ ತಾಂತ್ರಿಕ ವಿದ್ಯೆಗೆ ಸೇರಿದಂತಹ ವೃತ್ತಿ ಶಿಕ್ಷಣವನ್ನು ಇಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯ/ಪಾಲಿಟೆಕ್ನಿಕ್ ಸಂಸ್ಥೆಗಳಿಗೆ ಬದಲಾಯಿಸಲಾಯಿತು.

ಎಂಟನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ವೃತ್ತಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದು, ಶೇಕಡ ೨೫ ಭಾಗ ಸಾಮಾನ್ಯ ಶಿಕ್ಷಣದಿಂದ ವೃತ್ತಿ ಶಿಕ್ಷಣಕ್ಕೆ ಅಳವಡಿಸುವ ಭೌತಿಕ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಅಂತೆಯೇ ೧೯೯೩-೯೪ನೇ ಸಾಲಿನಲ್ಲಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳು ಸೇರಿದಂತೆ ೨೦೫ ಹೊಸ ವೃತ್ತಿ ಶಿಕ್ಷಣ ಕೋರ್ಸಗಳನ್ನು ಪ್ರಾರಂಭಿಸಿ ಒಟ್ಟು ೫೯೧ ವಿದ್ಯಾಲಯಗಳಲ್ಲಿ ೧೦೧೫ ಕೋರ್ಸ್‌‌ಗಳನ್ನು (ಆಯ್ದ ೫೯ ಕಸಬುಗಳಲ್ಲಿ) ಒಟ್ಟು ೧೧೧೨ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.

ಪ್ರೌಢಶಾಲಾ ಹಂತದಲ್ಲಿ ವೃತ್ತಿ ಪೂರ್ವ (ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ) ಶಿಕ್ಷಣ ಕೋರ್ಸ್‌‌ಗಳನ್ನು ಸಂಯುಕ್ತ ಪದವಿ ಪೂರ್ವ ವಿದ್ಯಾಲಯಗಳಲ್ಲಿ ಆಯ್ದ (ವಿವಿಧ) ೨೦ ಕಸುಬುಗಳಲ್ಲಿ ೧೦೦ ಕೋರ್ಸ್‌‌ಗಳನ್ನು ೧೯೯೪-೯೫ನೇ ಸಾಲಿನಿಂದ ಜಾರಿಗೊಳಿಸಲು ನಿರ್ಧರಿಸಲಾಯಿತು.

ಇದಲ್ಲದೇ ವೃತ್ತಿ ಶಿಕ್ಷಣ ಪಡೆದ ಪದವೀಧರ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕೊಡುವುದರ ಸಲುವಾಗಿ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಪ್ರತ್ಯೇಕ ನೋಂದಣಿ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರವು ಸರ್ಕಾರೀ ಇಲಾಖೆಗಳಲ್ಲಿ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಸರ್ಕಾರೀ ಇಲಾಖೆಗಳಿಗೆ ಮತ್ತು ಕೋರ್ಸಿಗೆ ಸಂಬಂಧಿಸಿದಂತೆ ಇಲಾಖೆಗಳು ಸಿ ಮತ್ತು ಆರ್ ನಿಯಮಗಳನ್ನೂ ತಿದ್ದುಪಡಿ ಮಾಡಲಾಗಿದೆ. ಇವುಗಳಿಂದಾಗಿ ವಿದ್ಯಾರ್ಥಿಗಳು ಉದ್ಯೋಗಾವಕಾಶ ಪಡೆದುಕೊಳ್ಳುತ್ತಿದ್ದಾರೆ. ಇವುಗಳಲ್ಲದೇ, ಎರಡು ವರ್ಷ ತರಬೇತಿಯಾದ ನಂತರ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ತರಬೇತಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ತಿದ್ದುಪಡಿ ಮಾಡಲಾಗಿದ್ದು ೧೦೦೦ ವಿದ್ಯಾರ್ಥಿಗಳು ಇದರಿಂದಾಗಿ ಪ್ರಯೋಜನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಪ್ರಾಯೋಗಿಕ ತರಬೇತಿ ಪಡೆದು ಕೆಲಸ/ಉದ್ದಿಮೆಗಳಲ್ಲಿ ಉನ್ನತ ಸ್ಥಾನ ಪಡೆಯಲು ಸಹಾಯಕವಾಗಿದೆ. ಇಲ್ಲವಾದಲ್ಲಿ ಸ್ವಯಂ ಉದ್ಯೋಗಿಗಳಾಗಲು ಸಾಧ್ಯವಿದೆ.

ವೃತ್ತಿ ಶಿಕ್ಷಣ ಇಲಾಖೆಯು ೧೯೯೩-೧೯೯೪ನೇ ಸಾಲಿನಲ್ಲಿ ಸುಮಾರು ೧೯೪.೦೭೫  ಲಕ್ಷ ರೂಪಾಯಿಗಳನ್ನು (ರಾಜ್ಯದ ಪಾಲು) ಮತ್ತು ೬೪೫.೩೩೫ ಲಕ್ಷ ರೂಪಾಯಿಗಳನ್ನು (ಕೇಂದ್ರದ ಪಾಲು) ವೃತ್ತಿ ಶಿಕ್ಷಣಕ್ಕಾಗಿ ಖರ್ಚು ಮಾಡಿದೆ.

ವೃತ್ತಿ ಶಿಕ್ಷಣವು ಪ್ರಗತಿಯಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ನೆರವಿನಿಂದ ಸಾಧ್ಯವಾಗಿದ್ದರೂ ಸಹಾ ನಿರೀಕ್ಷಿಸಿದಷ್ಟು ಫಲಕಾರಿಯಾಗಿಲ್ಲ. ಇದಕ್ಕೆ ಕಾರಣವನ್ನು ವಿವಿಧ ಸಂಶೋಧನೆಗಳಿಂದ (ಎನ್.ಸಿ.ಇ.ಆರ್.ಟಿ., ಐ.ಐ.ಎಮ್., ಐ.ಎಸ್.ಇ.ಸಿ. ಶಿವರುದ್ರಪ್ಪ) ಕಂಡುಹಿಡಿಯಲಾಗಿದೆ. ಇವುಗಳಿಂದ ಹೊರಬಂದಿರುವ ಅಂಶಗಳು ಹೀಗಿವೆ:

ಆಡಳಿತ ಮತ್ತು ನಿರ್ವಹಣೆಯಲ್ಲಿರುವ ಕುಂದುಕೊರತೆಗಳು.

ವಿದ್ಯಾರ್ಥಿಗಳು ಮತ್ತು ಪೋಷಕರು ತೋರುವ ಭಾವನೆಗಳು (ಕೋರ್ಸುಗಳಿಗೆ ಹೆಚ್ಚು ಮಹತ್ವ ಕೊಡದಿರುವಿಕೆ, ಕೆಲವು ಕೋರ್ಸ್‌‌ಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲದಿರುವಿಕೆ ಮತ್ತು ಪದವೀ ಮಟ್ಟದಲ್ಲಿ ಕೋರ್ಸ್‌‌ಗಳನ್ನು ಮುಂದುವರೆಸುವಂತಹ ಕಾರ್ಯಕ್ರಮಗಳಿಲ್ಲದಿರುವಿಕೆ, ಉದ್ಯೋಗಾವಕಾಶ ಕಡಿಮೆ ಇರುವಿಕೆ).

ವೃತ್ತಿ ತರಬೇತಿ ಕೊಡುವ ಕೇಂದ್ರಗಳನ್ನು ಪದವೀಪೂರ್ವ ಕಾಲೇಜುಗಳಿಗೆ ಸೇರಿಸುವುದರಿಂದ ಆಡಳಿತ ಮಾರ್ಗದ ತಾರತಮ್ಯತೆಗೆ ತುತ್ತಾಗಿ ವೃತ್ತಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಾ ಬಂದಿದೆ.

ವೃತ್ತಿ ಶಿಕ್ಷಣದಲ್ಲಿ ಹೆಚ್ಚು ಶಿಕ್ಷಕರನ್ನು ನೇಮಿಸಲಾಗಿದ್ದು, ಅವರಿಗೆ (ಶಿಕ್ಷಕರಿಗೆ) ತರಬೇತಿ ನೀಡಲಾಗಿದೆ. ಅದರಡಿಯಲ್ಲಿ ಶ್ರಮಿಕ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ, ವೃತ್ತಿ ಶಿಕ್ಷಣ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡಲು ಅನುಕೂಲವಾಗುವಂತಹ ಜನರಲ್ ಫೌಂಡೇಷನ್ ಕೋರ್ಸ್‌ತರಬೇತಿ ಕೊಡಲಾಗುತ್ತಿದೆ.

ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಡೆಸಲಾಗುತ್ತಿರುವ ಪಾಲಿಟೆಕ್ನಿಕ್ ಮತ್ತು ಐ.ಟಿ.ಐ.ಕೋರ್ಸ್‌‌ಗಳೂ ಸಹ ಸಾಕಷ್ಟು ಪ್ರಗತಿ/ವಿಸ್ತರಣೆ ಹೊಂದಿವೆ. ಇವುಗಳೂ ಸಹ ಇತ್ತೀಚೆಗೆ ಗುಣಮಟ್ಟವನ್ನು ಕಳೆದುಕೊಂಡಿದ್ದು ಆ ಕಾರಣಕ್ಕಾಗಿ ಒಂದು ಕಮಿಟಿಯನ್ನೂ ರಚಿಸಿ ಅವರ ಸಲಹೆಯ ಮೇರೆಗೆ ಹೆಚ್ಚು ಕಾರ್ಯಕ್ರಮಗಳನ್ನು ನಿಯೋಜಿಸಲಾಗುತ್ತಿದೆ. ಈ ಕಾರಣದಿಂದಾಗಿ ಪಾಲಿಟೆಕ್ನಿಕ್ ಮತ್ತು ಐ.ಟಿ.ಐ. ಉತ್ತಮ ಪ್ರಗತಿ ಸಾಧಿಸುತ್ತಿವೆ. ಇವುಗಳನ್ನು ವಿಸ್ತರಿಸುವ ಯೋಜನೆ ಕರ್ನಾಟಕಕ್ಕೆ ಇದೆ. ಅವುಗಳಲ್ಲದೇ ಡ್ಯಾನಿಡ, ನಿಟ್ಟೂರು ಮುಂತಾದ ಖಾಸಗೀ ಸಂಸ್ಥೆಗಳೂ ವಿವಿಧ ವೃತ್ತಿ ಶಿಕ್ಷಣ ಕೊಡುವಂತಹ ಖಾಸಗೀ ಸಂಸ್ಥೆಗಳನ್ನೂ ನಗರ ವಲಯಗಳಲ್ಲಿ  ಕಾಣಬಹುದು.

ನಿರೀಕ್ಷಿಸಿದ ಮಟ್ಟದಲ್ಲಿ ಶಿಕ್ಷಣದ ವ್ಯಾಪ್ತಿಯಾಗದಿರುವಿಕೆ ಅಂದರೆ ಸುಮಾರು ಶೇಕಡ ೫೦ರಷ್ಟು (ಎಸ್.ಸಿ.ಇ.ಆರ್.ಟಿ. ಪರೀಕ್ಷೆಯವರು) ವಿದ್ಯಾರ್ಥಿಗಳು ಮತ್ತು ಶಿಕ್ಷಣಕ್ಕೆ ಬರದೇ ಇರುವುದು ಶೋಚನೀಯ. ಇದಕ್ಕೆ ಕಾರಣ ವೃತ್ತಿ ಶಿಕ್ಷಣದ ಬಗ್ಗೆ ಅಭಿಪ್ರಾಯ ಭಿನ್ನವಾಗಿರುವುದು  ಮತ್ತು ವೃತ್ತಿ ಶಿಕ್ಷಣದ ಮಹತ್ವವನ್ನು ಕುರಿತು ಪ್ರಚಾರ ನಡೆಸಲಾಗದಿರುವುದು.

ಶಿಕ್ಷಕರಿಗೆ ಖಾಯಂ ಕೆಲಸವಿಲ್ಲದಿರುವಿಕೆಯಿಂದಾಗಿ ಮತ್ತು ಶಿಕ್ಷಕರಿಗೆ ಸೂಕ್ತ ಸಂಭಾವನೆ ಮತ್ತು ಇನ್ನಿತರ ಕಾಲೇಜುಗಳಲ್ಲಿರುವ ಶಿಕ್ಷಕರಿಗೆ ಸಿಗುವಂತಹ ಸೌಲಭ್ಯಗಳು ಸಿಗದಿರುವಿಕೆಯಿಂದಾಗಿ ಶಿಕ್ಷಕರು ವೃತ್ತಿ ಶಿಕ್ಷಣದಲ್ಲಿ ಮುಂದುವರೆಸದೇ ಇರುವುದು ಮತ್ತೊಂದು ಪ್ರಬಲ ಕಾರಣ.

ಉನ್ನತ ಶಿಕ್ಷಣ

ಕರ್ನಾಟಕದ ಶಿಕ್ಷಣದ ಚರಿತ್ರೆಯನ್ನು ನೋಡಿದಾಗ ಕಂಡುಬರುವ ಅಂಶವೆಂದರೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದ್ದು ಅದರ ವಿಸ್ತರಣೆ, ಪ್ರಾದೇಶಿಕ ವ್ಯಾಪ್ತಿಗೆ ಅನುವಾಗುವಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ೧೯೫೬-೫೭ರಲ್ಲಿ ೫೧ ಕಾಲೇಜುಗಳಲ್ಲಿ ಅವುಗಳಲ್ಲಿ ೩೦೪೦೦ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು ಮತ್ತು ಅಧ್ಯಾಪಕರ ಸಂಖ್ಯೆ ೧೩೨೦ ಇದ್ದಿತು.

೧೯೮೧ರಲ್ಲಿ ೨೬೫ ಕಾಲೇಜುಗಳು ಅವುಗಳಲ್ಲಿ ೨೨೩೪೫೭ ವಿದ್ಯಾರ್ಥಿಗಳೂ, ೬೧೬೨ ಶಿಕ್ಷಕರೂ ಇದ್ದರು. ೧೯೮೯ರ ವೇಳೆಗೆ ಸಾಮಾನ್ಯ ಶಿಕ್ಷಣ ನೀಡುವ ಕಾಲೇಜುಗಳ ಸಂಖ್ಯೆ ೪೭೫೫ ಇದ್ದು, ವೃತ್ತಿ ಶಿಕ್ಷಣ ನೀಡುವ ಕಾಲೇಜುಗಳ ಸಂಖ್ಯೆ ೮೯೧ ಇದ್ದಿತು. ಇವುಗಳಲ್ಲಿ ಸುಮಾರು ೪೨೫೭೨೯೯ ವಿದ್ಯಾರ್ಥಿಗಳಿದ್ದರು.

೧೯೯೨-೯೩ರಲ್ಲಿ ೫೩೨ ಕಾಲೇಜುಗಳನ್ನೂ, ಸ್ನಾತಕೋತ್ತರ ವಿಭಾಗಗಳನ್ನು ಹೊಂದಿರುವ ೧೭೫ ಕಾಲೇಜುಗಳೂ, ಅವುಗಳಲ್ಲಿ ಸುಮಾರು ೩೪೪೦೧೦ ಮತ್ತು ೮೯೦೪ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರಮಾಣ ೬೩ ಇದ್ದಿತು. ಇವುಗಳನ್ನು ವಿಶ್ವವಿದ್ಯಾಲಯಗಳ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಉನ್ನತ ಶಿಕ್ಷಣದ ಮಹತ್ವವನ್ನು ಏಳನೇ ಮತ್ತು ಎಂಟನೇ ಪಂಚವಾರ್ಷಿಕ ಯೋಜನೆಗಳಲ್ಲಿ ತಿಳಿದು ಉನ್ನತ ಶಿಕ್ಷಣಕ್ಕೆ ಹೆಚ್ಚ ಹಣ ವ್ಯವಸ್ಥೆ ಮಾಡಲಾಗಿದೆ.

ಏಳನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣದಲ್ಲಿ ಪ್ರಗತಿಯನ್ನು ಗುರುತಿಸಿ ಎಂಟನೇ ವಾರ್ಷಿಕ ಯೋಜನೆಯಲ್ಲಿ ಅದನ್ನು ಹೆಚ್ಚು ಪರಿಣಾಮಕಾರಿಯಾಗಲು ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚುವಂತೆ ಮಾಡಲು ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಕರ್ನಾಟಕದಲ್ಲಿ ಪರ್ಸ್‌ಪೆಕ್ಟಿವ್ಸ್ ಫಾರ್ ಎಜುಕೇಶನ್ ಸೆಕ್ಟರ್ ಫಾರ್ ಪಾಲಿಸಿ ಪೇಪರ್ ಫಾರ್ ಎಯ್ತ್ ಫೈವ್ ಇಯರ್ ಪ್ಲಾನ್ (Perspectives for Education Sector Policy Paper for VIII Five Year Plan. August 1989) ಎಂಬ ವರದಿಯನ್ನು ಬಿಡುಗಡೆ ಮಾಡಲಾಯಿತು. ಇದರಡಿಯಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಯಿತು.

ಸರ್ ರಾಧಾಕೃಷ್ಣನ್ ಕಮೀಷನ್ (೧೯೪೮), ಮೊದಲಿಯಾರ್ ಕಮೀಷನ್ (೧೯೪೮), ಕೊಠಾರಿ ಕಮೀಷನ್ (೧೯೬೪-೬೬). ನೂತನ ಶಿಕ್ಷಣ ಪದ್ಧತಿ (೧೯೮೬) ಮತ್ತು ಆಚಾರ್ಯ ರಾಮಮೂರ್ತಿ ಕಮಿಟಿ ವರದಿಗಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ಸಲಹೆಗಳನ್ನು ಮಾಡಿದ್ದವು. ಇವುಗಳನ್ನು ಕರ್ನಾಟಕದ ಉನ್ನತ ಶಿಕ್ಷಣದ ವಿವಿಧ ಅಂಗಗಳಲ್ಲಿ ಅಳವಡಿಸಲಾಗಿದ್ದು ಅದರಂತೆ ಶಿಕ್ಷಣದ ಪ್ರಗತಿ ಮತ್ತು ವಿಸ್ತರಣೆಯಾಗುವಂತೆ ಪಂಚವಾರ್ಷಿಕ ಯೋಜನೆಗಳಲ್ಲಿ ಹಣ ವಿನಿಮಯ ಮಾಡಲಾಗಿತ್ತು ಆದರೆ ಉನ್ನತ ಶಿ‌ಕ್ಷಣದಲ್ಲಿ ತಲೆದೋರಿದ ಸಮಸ್ಯೆಗಳು ಅನೇಕ. ಅವುಗಳನ್ನು ಗುರುತಿಸಿ ಎಂಟನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವೇರಿಸಲು ಸಾಧ್ಯವಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ವಿವರಗಳನ್ನು ಹೊತ್ತ ಮೇಲೆ ಹೇಳಿದ ವರದಿಯಲ್ಲಿ ಉನ್ನತ ಶಿಕ್ಷಣದ ಬಗ್ಗೆ ಕೆಲವು ಅನಿಸಿಕೆಗಳನ್ನು ನೋಡಿದಾಗ ಕಂಡು ಬರುವ ಅಂಶಗಳು ಹೀಗಿವೆ. “ಕರ್ನಾಟಕದಲ್ಲಿ ಮಾನವ ಸಂಪನ್ಮೂಲಾಭಿವೃದ್ಧಿ ಆಗಬೇಕಾದರೆ, ಔದ್ಯೋಗೀಕರಣ ಮತ್ತು ವಿಧಾನಗಳನ್ನು ನವೀಕರಿಸಿ ಅನುಸರಿಸಬೇಕಾದರೆ ಉನ್ನತ ಶಿಕ್ಷಣ ಪಡೆದ ಜನಶಕ್ತಿ ಅವಶ್ಯಕ.” ಉನ್ನತ ಶಿಕ್ಷಣ ಪಡೆದ ಜನಶಕ್ತಿಯೇ ಕರ್ನಾಟಕದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಅನುಕೂಲವಾಗುವಂತಹ ಜನಸಂಖ್ಯೆ. ಇವರಿಂದಲೇ ಕಾರ್ಖಾನೆಗಳಲ್ಲಿ, ಉದ್ದಿಮೆಗಳಲ್ಲಿ, ಸೇವಾ ಕ್ಷೇತ್ರಗಳಲ್ಲಿ ನುರಿತ ಜನಶಕ್ತಿ ಇರಲು ಸಾಧ್ಯವಾಗುತ್ತದೆ. ಇವುಗಳಿಂದಲೇ ರಾಜ್ಯದ ಆರ್ಥಿಕ ಮಟ್ಟ ಸುಧಾರಿಸಲು ಕಲೆ ವಿಭಾಗದಲ್ಲಿದ್ದಾರೆ. ವಿಜ್ಞಾನ ಶಿಕ್ಷಣ ಪಡೆಯುತ್ತಿರುವವರು ಶೇಕಡ ೨೦ರಷ್ಟು ಮಾತ್ರ. ಇದಕ್ಕೆ ಕಾರಣ ಅನೇಕ. ಇವುಗಳಲ್ಲಿ ಪ್ರಮುಖವಾದುದು ಪ್ರಯೋಗಶಾಲೆಗಳ ಗುಣಮಟ್ಟ (ಶೋಚನೀಯವಾಗಿದೆ) ಕಡಿಮೆ, ವಿಜ್ಞಾನ ಶಿಕ್ಷಣ ಪಡೆಯಲು ಸೌಲಭ್ಯ, ಸೌಕರ್ಯಗಳಿಲ್ಲದಿರುವಿಕೆ, ಮುಂದುವರೆದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸೌಲಭ್ಯ ಸಲಕರಣೆಗಳು ಮತ್ತು ವಿಜ್ಞಾನ ಶಿಕ್ಷಣಕ್ಕೆ ಅನುಕೂಲವಾಗುವಂತಹ ಪ್ರಯೋಗ ಶಾಲೆಗಳು ಮತ್ತು ಅದಕ್ಕೆ ಸೂಕ್ತವಾದ ಶಿಕ್ಷಕರ ವ್ಯವಸ್ಥೆ ಮಾಡುವುದರಿಂದಲೇ ಮುಂದಿನ ಪೀಳಿಗೆಯನ್ನು ವಿಜ್ಞಾನಿಗಳನ್ನು ಮತ್ತು ವಿಜ್ಞಾನಕ್ಕೆ ಹೊಂದುವಂತಹ ಜನಶಕ್ತಿಯನ್ನು ತಯಾರಿಸಲು ಸಾಧ್ಯವಾಗುವುದು. ಇಲ್ಲದಿದ್ದಲ್ಲಿ ನಮ್ಮ ದೇಶವು ವೈಜ್ಞಾನಿಕವಾಗಿ ಪ್ರಗತಿ ಪಡೆಯಲು ಅಸಾಧ್ಯ ಎಂದು ತಿಳಿಸಿದ್ದಾರೆ. ಅದಲ್ಲದೇ ಉನ್ನತ ಶಿಕ್ಷಣದಲ್ಲಿನ ಅನೇಕ ಸಮಸ್ಯೆಗಳನ್ನು ವಿಶ್ಲೇಷಿಸಿ ಎಂಟನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಏರಿಸುವಂತಹ ಸೌಲಭ್ಯಗಳನ್ನು ಕರ್ನಾಟಕ ಸರ್ಕಾರ (ಕೇಂದ್ರವು ಸರ್ಕಾರ ಮತ್ತು ಯು.ಜಿ.ಸಿ ನೆರವಿನಿಂದ) ಒದಗಿಸುತ್ತಿದೆ.

ಅಲ್ಲದೇ ೧೯೯೨ರಲ್ಲಿ ನವನೀತರಾವ್‌ರವರ ನೇತೃತ್ವದಲ್ಲಿ ಒಂದು ಕಮಿಟಿಯನ್ನು ರಚಿಸಲಾಗಿದ್ದು ಕರ್ನಾಟಕದ ವಿಶ್ವವಿದ್ಯಾಲಯಗಳ ಶೈಕ್ಷಣಿಕ, ಆಡಳಿತ ಮತ್ತು ನಿರ್ವಹಣೆಯನ್ನು ಕುರಿತಂತೆ ಇರುವ ಪ್ರಮುಖ ಸಮಸ್ಯೆಗಳನ್ನು ಅಧ್ಯಯಿಸಿ ಅವುಗಳ ನಿವಾರಣೋಪಾಯಕ್ಕೆ ಕೆಲವಾರು ಸಲಹೆಗಳನ್ನು ನೀಡಿದೆ. ಅವುಗಳಲ್ಲಿ ಪ್ರಮುಖವಾದವುಗಳು.

ಶಿಕ್ಷಣದ ಗುಣಮಟ್ಟವನ್ನು ಹೆಚ್ಚುವಂತೆ ಮಾಡಲು ಶಿಕ್ಷಕರ ತರಬೇತಿ, ಶಿಕ್ಷಕರಿಗೆ ವೇತನ ಹೆಚ್ಚಿಸುವಿಕೆ, ಕಾಲೇಜುಗಳನ್ನೂ ಮತ್ತು ವಿಶ್ವವಿದ್ಯಾಲಯಗಳನ್ನು ಸ್ವಯಂ ಶಾಸನ ಪದ್ಧತಿಗೆ ಅಳವಡಿಸುವುದು, ಉನ್ನತ ಶಿಕ್ಷಣದಲ್ಲಿ ವೃತ್ತಿ ಶಿಕ್ಷಣವನ್ನು ಜಾರಿಗೆ ತರುವುದು, ಅಂತರ್ ವಿಶ್ವವಿದ್ಯಾಲಯಗಳ ಸಮಾವೇಶ ಅಡಿಗಡಿಗೆ ಮಾಡಿ ಉನ್ನತ ಶಿಕ್ಷಣದಲ್ಲಿರುವ ಸಮಸ್ಯೆಗಳನ್ನು ನಿವಾರಿಸುವುದು, ಕುಲಪತಿಗಳ ಸ್ಥಾನಕ್ಕೆ ಶಿಕ್ಷಣ ವೃಂದದವರಿಂದಲೇ ಒಬ್ಬರನ್ನು ನೇಮಕಾತಿ ಮಾಡುವುದು, ಸಹಭಾಗಿತ್ವವುಳ್ಳ ಆಡಳಿತ ವ್ಯವಸ್ಥೆಯನ್ನು ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಳವಡಿಸಿಕೊಳ್ಳುವುದು.

ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ

ಕರ್ನಾಟಕದ ತಾಂತ್ರಿಕ ಶಿಕ್ಷಣವು ೧೯ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು ೧೯೫೧-೫೬ರ ವೇಳೆಗೆ ಸುಮಾರು ಆರು ಇಂಜಿನಿಯರಿಂಗ್ ಕಾಲೇಜುಗಳಿದ್ದವು. ೧೯೫೬-೬೧ರಲ್ಲಿ ಅವುಗಳ ಸಂಖ್ಯೆ ೧೧ಕ್ಕೆ ಏರಿತು. ೧೯೬೧ರಿಂದ ೧೯೮೫ರವರೆಗೆ ಅವುಗಳ ಸಂಖ್ಯೆ ೪೧ ಆಯಿತು ಮತ್ತು ೧೯೯೨-೯೩ರ ವೇಳೆಗೆ ೫೫ಕ್ಕೆ ಏರಿತು.

ಅದೇ ರೀತಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ೧೯೫೬ಕ್ಕೆ ಮುನ್ನ ಒಂದಾಗಿದ್ದು ೧೯೬೦-೬೧ರ ವೇಳೆಗೆ ೪ಕ್ಕೆ ಏರಿತು. ೧೯೮೧ರಿಂದ ೧೯೯೧ರವರೆಗೆ ಸುಮಾರು ೧೯ ಕಾಲೇಜುಗಳು ಪ್ರಾರಂಭವಾದವು.

ಕರ್ನಾಟಕದ ತಾಂತ್ರಿಕ ಶಿಕ್ಷಣ ಮತ್ತು ವೈದ್ಯಕೀಯ ಶಿ‌ಕ್ಷಣ ದೇಶದಲ್ಲಿ ಬಹು ಮಹತ್ವವನ್ನು ಪಡೆದಿದ್ದು ಈ ಶಿಕ್ಷಣ ಪಡೆಯಲು ಭಾರತಾದ್ಯಂತ (ಮತ್ತು ವಿದೇಶೀಯ) ವಿದ್ಯಾರ್ಥಿಗಳು ಇಚ್ಚಿಸುವ ಕಾರಣ ಕಾಲೇಜುಗಳಲ್ಲಿನ ಒತ್ತಡ ಹೆಚ್ಚುತ್ತಾ ಇದೆ. ಈ ಕಾರಣದಿಂದಲೇ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿರಿಸುವಂತಹ ಸುಪ್ರೀಂ ಕೋರ್ಟ್‌ಸುಗ್ರೀವಾಜ್ಞೆ ಹೊರಡಿಸಿತು. ಇದಕ್ಕಾಗಿ ಇಲ್ಲಿನ ಆಡಳಿತ ವ್ಯವಸ್ಥೆಯನ್ನು ಮಾಡಲು ಸರ್ಕಾರವು ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳಿಗೆ ಉತ್ತೇಜನ ನೀಡಲಾರಂಭಿಸಿತು. ಈ ವರ್ಷದಲ್ಲಿ ಕನ್ನಡಗರಿಗಾಗಿಯೇ ಮೀಸಲಾತಿ ಇರಬೇಕೆಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.

೧೯೬೧ರಿಂದ ೭೦ರವರೆಗೆ ಈ ಕೋರ್ಸ್‌ಗಳಲ್ಲಿ ಶೈಕ್ಷಣಿಕ ನಷ್ಟ ಹೆಚ್ಚಾಗಿತ್ತು. ಈಗ ಶೈಕ್ಷಣಿಕ ನಷ್ಟವು ಕಡಿಮೆಯಾಗುತ್ತಾ ಬರುವುದು ಕಂಡು ಬಂದಿದೆ (ಡಿ.ಎಮ್. ನಂಜುಂಡಪ್ಪ ಮತ್ತು ಗೌರಿಶಂಕರ) ಇದಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಈ ಎರಡು ಶಿಕ್ಷಣಗಳನ್ನು ಪಡೆದ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ವಿವಿಧ ಉದ್ಯೋಗ ಕೇಂದ್ರಗಳಲ್ಲಿ ಭರ್ತಿಯಾಗಿರುವುದನ್ನು ಗುರುತಿಸಬಹುದಾಗಿದೆ. ಉದ್ಯೋಗ ವಿನಿಮಯ ಕೇಂದ್ರಗಳಲ್ಲೂ ಸಹ ಹೆಸರನ್ನು ನೊಂದಾಯಿಸಿದವರ ಸಂಖ್ಯೆ ಹೆಚ್ಚಿರುವುದು ಕಂಡು ಬರುತ್ತದೆ.

ವಿಜ್ಞಾಣ ಶಿಕ್ಷಣ, ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ಹೆಚ್ಚಿನಾಂಶ ಇರುವುದರಿಂದಲೇ ಮಾನವ ಸಂಪನ್ಮೂಲಾಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದನ್ನು ಗುರುತಿಸಿ ಎಂಟನೇ ಪಂಚವಾರ್ಷಿಕ ಯೋಜನೆಯಲ್ಲಿ ಈ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಬೆಂಬಲ ನೀಡಲಾಗುತ್ತಿದೆ.

ಅಲ್ಲದೇ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾನಿಲಯ, ಐ.ಐ.ಎಮ್, ಐಸೆಕ್, ಇಸ್ರೋ, ಐ.ಐ.ಎಸ್.ಸಿ., ಮುಂತಾದ ಸಂಶೋಧನಾ ಕೇಂದ್ರಗಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತಿವೆ.

ಕರ್ನಾಟಕ ಸರ್ಕಾರವು ವಿವಿಧ ಯೋಜನೆಗಳಡಿಯಲ್ಲಿ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಪದವೀಧರ ಮತ್ತು ಸ್ನಾತಕೋತ್ತರ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹವಾದ ಅಂಶ.

ವಯಸ್ಕರ ಶಿಕ್ಷಣ

ವಯಸ್ಕರ ಶಿಕ್ಷಣವು ಕರ್ನಾಟಕದಲ್ಲಿ ಮೊಟ್ಟಮೊದಲು ೧೯ನೇ ಶತಮಾನದಲ್ಲಿ ಪ್ರಾರಂಭವಾಗಿ ಅದಕ್ಕೆ ಪ್ರತೀ ಪಂಚವಾರ್ಷಿಕ ಯೋಜನೆಗಳಲ್ಲೂ ಒತ್ತು ಕೊಡಲಾಗುತ್ತಿದೆ. ೧೯೮೯-೯೦ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಸಾಕ್ಷರತಾ ಆಂದೋಲನವನ್ನು ಘೋಷಿಸಲಾಯಿತು. ಸಾಮೂಹಿಕ ಸಾಕ್ಷರತಾ ಆಂದೋಲನವನ್ನು ೨೦ ತಾಲ್ಲೂಕುಗಳಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಸ್ವಯಂ ಸೇವಕರು, ಸಾಮೂಹಿಕ ಕ್ರಿಯಾ ಕಾರ್ಯಕ್ರಮದ ಅಂಗವಾಗಿ ಒಟ್ಟು ೨.೩೨ ಲಕ್ಷ ಅಕ್ಷರಸ್ಥರನ್ನು ದಾಖಲಾತಿ ಮಾಡಿಕೊಂಡು ೧.೯೪ ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲಾಗಿದೆ.

ರಾಷ್ಟ್ರೀಯ ಸಾಕ್ಷರತಾ ನಿಯೋಗ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಪರಿಷತ್, ಮಂಡಲ್ ಪಂಚಾಯತ್ ಮತ್ತು ಇತರ ಅಭಿವೃದ್ಧಿ ಇಲಾಖೆಗಳ ಸಹಕಾರದೊಂದಿಗೆ ಸಾಕ್ಷರತಾ ಕಾರ್ಯಾಚರಣೆಗೊಳಿಸಲಾಗಿದೆ.

೧೯೯೧-೯೨ರ ವೇಳೆಗೆ ಸುಮಾರು ೭೨೦೦ ಕೇಂದ್ರಗಳು ಅವುಗಳಲ್ಲಿ ೨೧೬೦೦೦ ದಾಖಲಾತಿ ಸಂಖ್ಯೆಯನ್ನು ಹೊಂದಿ ಸಂಪೂರ್ಣವಾಗಿ ಸಾಮೂಹಿಕ ಸಾಕ್ಷರತಾ ಆಂದೋಲನದ ದಾಖಲಾತಿ ೧೩.೯೧ ಲಕ್ಷ ದಾಖಲಾತಿಯಾಗುವಂತೆ ಕಾರ್ಯಾಚರಣೆ ನಡೆಸಲಾಗಿದೆ.

ಕಾರ್ಯಕ್ರಮದಿಂದಾಗಿ ರಾಜ್ಯದ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗುವ ಸಂಭವವಿದೆ. ಇದು ಜನರಿಗಾಗಿ ಜನರಿಂದಲೇ ನಡೆಸಲ್ಪಡುವ ಕಾರ್ಯಕ್ರಮವಾಗಿ ಹೆಚ್ಚು ಫಲಕಾರಿಯಾಗಿಯೂ ಮತ್ತು ಕರ್ನಾಟಕವು ದೇಶದಲ್ಲಿ ಒಂದು ಮಾದರಿ ರಾಜ್ಯವಾಗಲಿದೆಯೆಂದರೆ ಅತಿಶಯೋಕ್ತಿಯಲ್ಲ.

ಉಪಸಂಹಾರ

ಕರ್ನಾಟಕ ರಾಜ್ಯದ ಮಾನವ ಸಂಪನ್ಮೂಲಾಭಿವೃದ್ಧಿ ಮತ್ತು ವಿಸ್ತರಣೆಯಾಗಲು ಒಂದು ಕಡೆ ವಿಸ್ತರಣೆ ಪ್ರಗತಿಯಾಗಬೇಕು ಮತ್ತೊಂದು ಕಡೆ ಉದ್ಯೋಗದಲ್ಲಿ ನಿರತರಾಗಿರುವ ಜನಶಕ್ತಿಯ ಬೆಳವಣಿಗೆಯಾಗಬೇಕು. ಶಿಕ್ಷಣದಿಂದಲೇ ಸಾಮಾಜಿಕ ನಿರತರಾಗಿರುವ ಜನಶಕ್ತಿಯ ಬೆಳವಣಿಗೆಯಾಗಬೇಕು. ಶಿಕ್ಷಣದಿಂದಲೇ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು ಸಾಧ್ಯ. ಆದರೆ ಶಿಕ್ಷಣ ಪಡೆದ ನುರಿತ ಪರಿಣಿತರಾದ ಜನಶಕ್ತಿಯನ್ನೇ ಅವಲಂಬಿಸಿ ನಡೆಸಿರುವ ಆರ್ಥಿಕ ಯೋಜನೆಗಳ ಫಲಕಾರಿಯಾಗಿಯೂ ಮತ್ತು ಪರಿಣಾಮಕಾರಿಯಾಗುವಂತಹ ಕಾರ್ಯಕ್ರಮಗಳನ್ನು ಕೊಟ್ಟಿವೆ. ಆದರೆ ಈ ದಿಸೆಯಲ್ಲಿ ಕರ್ನಾಟಕದ ಮಾನವ ಸಂಪನ್ಮೂಲಾಭಿವೃದ್ಧಿಯಲ್ಲಿನ ಯೋಜನೆಗಳಲ್ಲಿ ನಿರೀಕ್ಷಿಸಿದ ಪ್ರಗತಿ ಸಾಧಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಆದರೆ ಸಾಕಷ್ಟು ಜನಶಕ್ತಿ ನಿರ್ದಿಷ್ಟ ದಿಸೆಯಲ್ಲಿ ಶಿಕ್ಷಣ ಮತ್ತು ತರಬೇತಿ ಪಡೆಯದಿರುವಿಕೆ, ಶಿಕ್ಷಣದ ಸಮಸ್ಯೆಗಳು, ಉದ್ಯಮ ಮತ್ತು ಶಿಕ್ಷಣ, ನೇರ ಸಂಬಂಧವಿಲ್ಲದಿರುವಿಕೆ. ಪದವೀಧರರು ನಿರುದ್ಯೋಗಿಗಳಾಗಿರುವಿಕೆ, ಶಿಕ್ಷಣ ಪಡೆದ ವ್ಯಕ್ತಿಗಳಿಗೆ ಹೊಂದುವಂತಹ ಉದ್ಯೋಗದ ಕೊರತೆ, ಶಿಕ್ಷಣ ಪಡೆದವರು ಹೊರದೇಶಗಳಿಗೆ ವಲಸೆ ಹೋಗುವಿಕೆ, ಉನ್ನತ ಶೈಕ್ಷಣಿಕ ನಷ್ಟ, ವಿಶ್ವವಿದ್ಯಾಲಯಗಳಿಂದ ಹೊರಬರುವಂತಹ ವಿದ್ಯಾರ್ಥಿಗಳ ಗುಣಮಟ್ಟ ಕಡಿಮೆ ಇರುವುದು. ಕರ್ನಾಟಕ ಸರ್ಕಾರವು ಯುವ ಜನರಿಗಾಗಿ ಮತ್ತು ಬಡತನ ರೇಖೆಯಡಿಯಲ್ಲಿರುವ ಜನರಿಗೆ ಒದಗಿಸುತ್ತಿರುವ ಕಾರ್ಯಕ್ರಮಗಳಲ್ಲಿ ಹೆಚ್ಚು ಫಲಾನುಭವಿಗಳಿಲ್ಲದಿರುವಿಕೆ, ಈ ಕಾರ್ಯಕ್ರಮಗಳಲ್ಲಿನ ಆಡಳಿತ ವ್ಯವಸ್ಥೆಯಲ್ಲಿರುವ ಲೋಪ ದೋಷಗಳು, ಶಿಕ್ಷಣದಲ್ಲಿ ರಾಜಕೀಯತೆ ಮತ್ತು ರಾಜಕಾರಣಿಗಳ ಅಕ್ರಮ ಪ್ರವೇಶ, ಯುವಜನಾಂಗಗಳಲ್ಲಿನ ಅಸಮಾಧಾನ, ಶಿಕ್ಷಕರು ಮತ್ತು ಶಿಕ್ಷಣ ಪಡೆಯುವವರಲ್ಲಿನ ಸಂಬಂಧದಲ್ಲಿ ಬಿರುಕು, ಜಾತ್ಯತೀತ ಘರ್ಷಣೆಗಳು, ಶಿಕ್ಷಕರ ಸಂಘಗಳ ಪ್ರತಿಭಟನೆ, ವಿದ್ಯಾರ್ಥಿಗಳ ಮೌಲ್ಯ/ನೈತಿಕ ಮಟ್ಟದಲ್ಲಿನ ಬದಲಾವಣೆಗಳು, ಪೋಷಕರ ಅನಕ್ಷರತೆ, ಗ್ರಾಮೀಣ ಮತ್ತು ನಗರವಾಸಿಗಳಲ್ಲಿರುವ ತಾರತಮ್ಯ ಮುಂತಾದವುಗಳೇ ಈಗಿನ ಸಮಸ್ಯೆಗಳು.

ಶಿಕ್ಷಣದ ಪ್ರಗತಿಯಾದಂತೆ ಮಾನವ ಸಂಪನ್ಮೂಲಾಭಿವೃದ್ಧಿಯು ನಡೆಯುತ್ತಿರುವುದು ಕರ್ನಾಟಕದಲ್ಲಿ ಕಂಡು ಬರುತ್ತಿದೆ. ಕರ್ನಾಟಕದ ಶಿಕ್ಷಣವು ದೇಶದಲ್ಲಿ ಹೆಚ್ಚಿನಾಂಶ ಮಾನವ ಸಂಪನ್ಮೂಲಾಭಿವೃದ್ಧಿಗೆ ಬೇಕಾದ ಜನಶಕ್ತಿಯನ್ನು ಉತ್ಪನ್ನ ಮಾಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ ಕಾರಣಗಳು ಅನೇಕ. ಅವುಗಳಲ್ಲಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ, ಸ್ವಯಂಶಾಸಕ ಸಂಘ ಸಂಸ್ಥೆಗಳ ಮುತುವರ್ಜಿ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನಿಯಮಗಳನ್ನು ಪಾಲಿಸುವಿಕೆ ಮತ್ತು ಪಂಚವಾರ್ಷಿಕ ಯೋಜನೆಗಳಲ್ಲಿ ಸೌಲಭ್ಯ  ಮತ್ತು ಸೌಕರ್ಯಗಳನ್ನು ಒದಗಿಸುವಿಕೆ ಮುಂತಾದವುಗಳು ಪ್ರಮಖವಾಗಿದೆ. ಇದಲ್ಲದೇ ಶೈಕ್ಷಣಿಕ ನಷ್ಟವಾಗುವುದನ್ನು ಕಡಿಮೆ ಮಾಡುವಂತಹ ಕಾರ್ಯಕ್ರಮಗಳಿಗೆ ವಿದೇಶೀ ವಿನಿಮಯದೊಂದಿಗೆ ವಿಶ್ವಸಂಸ್ಥೆಗಳಿಂದ ಧನ ಸಹಾಯ ಪಡೆದು ನಡೆಸುವ ವಿವಿಧ ಕಾರ್ಯಕ್ರಮಗಳಿಂದ ದೇಶದ ಮಾನವ ಸಂಪನ್ಮೂಲಾಭಿವೃದ್ಧಿಯಾಗುವುದರಲ್ಲಿ ಕರ್ನಾಟಕದ ಪಾತ್ರ ಹಿರಿದು ಎಂಬುದರಲ್ಲಿ ಸಂದೇಹವಿಲ್ಲ.

ಗ್ರಂಥ ಋಣ

ಲೇಖನಗಳು

ಸೀತಾ ಪ್ರಭು, ದಿ ಬಡ್ಜೆಟ್ ಆಂಡ್ ಸ್ಟ್ರಕ್ಚರಲ್ ಅಡ್ಜಸ್ಟ್‌ಮೆಂಟ್ ವಿತ್ ಎ ಹ್ಯೂಮನ್ ಫೇಸ್, ಈ.ಪಿ.ಡಬ್ಲ್ಯೂ, ಏಪ್ರಿಲ್ ೧೬-೨೩, ೧೯೯೪.

ಎಸ್.ಪಿ. ಗುಪ್ತ ಆಂಡ್ ಏ.ಕೆ. ಸರ್ಕಾರ್, ಫಿಸ್ಕಲ್ ಕರೆಕ್ಷನ್ ಆಂಡ್ ಹ್ಯೂಮನ್ ರಿಸೋರ್ಸ್‌ಡಿಪಾರ್ಟ್‌‌ಮೆಂಟ್, ಎಕ್ಸಪೆಂಡಿಚರ್ ಅಟ್ ಸೆಂಟ್ರಲ್ ಆಂಡ್ ಸ್ಟೇಟ್ ಲೆವಲ್ಸ್, ಈ.ಪಿ.ಡಬ್ಲ್ಯೂ, ಮಾರ್ಚ್ ೨೬, ೧೯೯೪.

ಯುನಿವರ್ಸಿಟಿ ನ್ಯೂಸ್, ಜುಲೈ ೩, ೧೯೯೫ ಪಿ.ಪಿ. ೧೮-೧೯.

ಯುನಿವರ್ಸಿಟಿ ನ್ಯೂಸ್, ಜೂನ್ ೧೯, ೧೯೯೫.

ಯು.ಎನ್.ಡಿ.ಪಿ. ಹ್ಯೂಮನ್ ಡೆವಲಪಮೆಂಟ್ ರಿಪೋರ್ಟ್, ೧೯೯೪.

ಗವರ್ನಮೆಂಟ್ ಆಫ್ ಇಂಡಿಯಾ (ಪ್ಲಾನಿಂಗ್ ಕಮೀಷನ್) ಸೆವೆನ್ತ್ ಫೈವ್ ಇಯರ್ ಪ್ಲಾನ್ ೧೯೮೫-೯೦, ಸೆಂಟರ್ ಫಾರ್ ರಿಸರ್ಚ್ ಇನ್ ರೂರಲ್ ಆಂಡ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟಲ್.

ಎಜುಕೇಷನ್ ಇನ್ ಇಂಡಿಯನ್ ಪಾಲಿಸೀಸ್ ಪ್ಲಾನಿಂಗ್ ಆಂಡ್ ಇಂಪ್ಲೀಮೆಂಟೇಷನ್ ೧೯೮೧-೮೫, ೧೯೯೫.

ಗವರ್ನಮೆಂಟ್ ಆಫ್ ಇಂಡಿಯಾ : (ಮಿನಿಸ್ಟ್ರಿ ಆಫ್ ಎಜುಕೇಷನ್), ರಿಪೋರ್ಟ್ ಆಫ್ ಎಜುಕೇಷನ್ ಕಮೀಷನ್ ೧೯೯೪-೬೬.

ನ್ಯಾಷನಲ್ ಲಿಟ್ರಸಿ ಮಿಷನ್ ದಿ ಕರ್ನಾಟಕಾ ಲಿಟ್ರಸಿ ಕ್ಯಾಂಪೇಸ್

ಕರ್ನಾಟಕ ಪ್ರಗತಿಪಥ, ನಂಜುಂಡಪ್ಪ ಡಿ.ಎಂ.

ಪುಸ್ತಕಗಳು

ಸೀತಾರಾಮು ಎ.ಎಸ್ (೧೯೮೦): ಎಜುಕೇಷನ್ ಆಮಡ್ ರೂರಲ್ ಡೆವೆಲಪ್‌ಮೆಂಟ್, ನ್ಯೂಡೆಲ್ಲಿ, ಆಷೀಷ ಪಬ್ಲಿಷರ್ಸ್

ಸೀತಾರಾಮು ಎ.ಎಸ್ (೧೯೮೫): ಎಜುಕೇಷನ್ ಇನ್ ಸ್ಲಮ್ಸ್, ನ್ಯೂಡೆಲ್ಲಿ, ಆಷೀಷ ಪಬ್ಲಿಷರ್ಸ್.

ಸೀತಾರಾಮು ಎ.ಎಸ್ ಮತ್ತು ಎಂ.ಡಿ. ಉಷಾದೇವಿ (೧೯೮೫): ಎಜುಕೇಷನ್ ಇನ್ ರೂರಲ್ ಏರಿಯಾಸ್: ಕನಸ್ಟ್ರೇನ್ಸ್ ಅಂಡ್ ಪ್ರಾಸ್ಪೆಕ್ಟಸ್, ನ್ಯೂಡೆಲ್ಲಿ, ಆಷೀಷ ಪಬ್ಲಿಷರ್ಸ್.

ದೇವೇಗೌಡ ಎ.ಸಿ. ಮತ್ತು ಪರಮೇಶ್ವರನ್ ಟಿ.ಆರ್(೧೯೮೫): ಹಿಸ್ಟರಿ ಆಫ್ ಎಜುಕೇಷನ್ ಇನ್ ಮೈಸೂರು, ಬೆಂಗಳೂರು, ಗಮರ್ನಮೆಂಟ್ ಆಫ್ ಕರ್ನಾಟಕ, ಡಿಪಾರ್ಟಮೆಂಟ್ ಆಫ್ ಎಜುಕೇಷನ್ ಅಂಡ್ ಯೂತ್ ಸರ್ವಿಸಸ್

ದೇವೇಗೌಡ ಎ.ಸಿ. (೧೯೭೪) ಪರಸೂಟ್ ಆಫ್ ಕ್ವಾಲಿಟಿ ಇನ್ ಎಜುಕೇಷನ್ ಬೆಂಗಳೂರು ಗಮರ್ನಮೆಂಟ್ ಆಫ್ ಕರ್ನಾಟಕ, ಡಿಪಾರ್ಟಮೆಂಟ್ ಆಫ್ ಎಜುಕೇಷನ್ ಅಂಡ್ ಯೂತ್ ಸರ್ವಿಸಸ್.

ವರದಿಗಳು

ಗವರ್ನಮೆಂಟ್

ಕರ್ನಾಟಕ

ಪಿ.ಎಚ್.ಡಿ. ಥೀಸಿಸ್

೧. ಚಂದ್ರಶೇಖರ್, ಸ್ಟಡಿ ಆಫ್ ದಿ ಯುಟಿಲೈಸೇಷನ್ ಆಫ್ ವೇರಿಯಸ್ ಮೆಜರ್ಸ್ ಪ್ರೊವೈಡೆಡ್ ಈಕ್ವಾಲಿಟಿ ಆಫ್ ಎಡುಕೇಷನಲ್ ಆಪರ್ಚುನಿಟಿ ಇನ್ ದಿ ಕೇಸ್ ಆಫ್ ಅದರ್ ಬ್ಯಾಕವರ್ಡ್ ಕ್ಲಾಸಸ್ ಇನ್ ಎ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ.

೨. ಗೌರೀಶಂಕರ, ಸ್ಟಡಿ ಆಫ್ ದಿ ರಿಲೇಷನ್‌ಷಿಪ್ ಬಿಟ್ವಿನ್ ಸೋಷಿಯಲ್ ಕ್ಲಾಸ್, ಎಜುಕೇಷನಲ್ ಅಚೀವ್‌ಮೆಂಟ್ ಅಂಡ್ ಇಂಜಿನಿಯರಿಂಗ್ ಎಜುಕೇಷನ್ ಇನ್ ಕರ್ನಾಟಕ ಸ್ಟೇಟ್ (೧೯೯೪).

೩. ಗಣೇಶ ಭಟ್ಟ, ಪರ್ಪಾರಮೆನ್ಸ್ ಆಫ್ ಸೆಕೆಂಡರಿ ಸ್ಕೂಲ್ ಸಿಸ್ಟಮ್ ಇನ್ ರೂರಲ್ ಕರ್ನಾಟಕ ( ೧೯೮೮).

೪. ಚಂದ್ರಶೇಖರ್, ಕ್ರಿಟಿಕಲ್ ಸ್ಟಡಿ ಇನ್ ಡೆಪ್ತ ಆಫ್ ದಿ ಗಮರ್ನಮೆಂಟ್ ಆಫ್ ಕರ್ನಾಟಕ ದಿ ಫಿಲ್ಡ ಆಫ್ ಎಜುಕೇಷನ್ ಡ್ಯೂರಿಂಗ್ ದಿ ಪೀರಿಯಡ್ ೧೯೪೭-೭೨ (೧೯೭೮).

೫. ಮಾನವೀಕರ್ ಶಾರದಾ, ಕ್ರಿಟಿಕಲ್ ಸ್ಟಡಿ ಆಫ್ ದಿ ರಿಲೇಷನ್‌ಷಿಪ್ ಬಿಟ್ವಿನ್ ಎಕ್ಸಪೆಂಡಿಚರ್ ಪ್ಯಾಟ್ರನ್ ಆಂಡ್ ಎಫಿಷಿಯನ್ಸಿ ಆಫ್ ಲೆವಲ್ಸ್ ಆಫ್ ದಿ ಸೆಕೆಂಡರಿ ಸ್ಕೂಲ್ಸ ಆಫ್ ಬೆಂಗಳೂರು ಡಿಸ್ಟ್ರಿಕ್ಟ್ (೧೯೮೨).

೬. ಶಕುಂತಲಾ, ಕ್ರಿಟಿಕಲ್ ಸ್ಟಡಿ ಆಫ್ ನಾನ್-ಫಾರ್ಮಲ್ ಎಜುಕೇಷನ್ ಫಾರ್ ಡ್ರಾಫ್ ಔಟ್ಸ್ ಆಂಡ್ ನಾನ್-ಎನರೋಲ್ಡ್ ಚಿಲ್ಡ್ರನ್ ಇನ್ ದಿ ಏಜ್ ಗ್ರೂಪ್ ೯-೧೪ ಇನ್ ಕರ್ನಾಟಕ ಸ್ಟೇಟ್ (೧೯೮೭)

ಪುಸ್ತಕ: ಕನ್ನಡ ಅಧ್ಯಯನ (ಕರ್ನಾಟಕದ ಆರ್ಥಿಕತೆ)
ಲೇಖಕರು: ಉಷಾ ರಾಮ್‌ಕುಮಾರ್
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಕೆ.ಜಿ. ವಾಸುಕಿಪ್ರೊ. ಅಬ್ದುಲ್ ಅಜೀಜ್

ಕರ್ನಾಟಕದ ಆರ್ಥಿಕತೆ (ಪ್ರಸ್ತಾವನೆ) ಭಾಗ ೧

ಕನ್ನಡ ಅಧ್ಯಯನ (ಕರ್ನಾಟಕದ ಆರ್ಥಿಕತೆ): ಪ್ರಸ್ತಾವನೆ

ಕರ್ನಾಟಕ ಆರ್ಥಿಕತೆ ಕೆಲವು ವರ್ಷಗಳ ಹಿಂದೆ ರಾಷ್ಟ್ರದಲ್ಲಿನ ಮೇಲ್ಮಟ್ಟದ ಅಭಿವೃದ್ಧಿ ಪಥದಲ್ಲಿನ ರಾಜ್ಯಗಳ ಪೈಕಿ ಒಂದಾಗಿತ್ತು. ಅದರ ಸರಾಸರಿ ತಲಾದಾಯ ಹಾಗೂ ಬೆಳವಣಿಗೆ ದರವು ರಾಷ್ಟ್ರದ ಸರಾಸರಿಗಿಂತ ಅಧಿಕವಿತ್ತು. ಆದರೆ ಇತ್ತೀಚೆಗೆ ಕರ್ನಾಟಕದ ಬೆಳವಣಿಗೆಯ ದರ ಕುಂಠಿತವಾದ ಕಾರಣ ಅದರ ತಲಾದಾಯವು ರಾಷ್ಟ್ರದಕ್ಕಿಂತ ಕೆಳಕ್ಕೆ ಇಳಿಯಿತು. ಹೀಗಾಗಿ ಅದರ ಸ್ಥಾನ ರಾಷ್ಟ್ರದ ಸರಾಸರಿಗಿಂತ ಕೆಳಕ್ಕೆ ಇಳಿದು ಬಂದಿದೆ. ಇದು ಆತಂಕವನ್ನುಂಟುಮಾಡುವಂತಹ ವಿಷಯವೇ ಸರಿ. ಆದ ಕಾರಣ ಕರ್ನಾಟಕ ಆರ್ಥಿಕತೆಯ ಈ ಒಂದು ಚಿತ್ರಣವನ್ನು ಅರ್ಥ ಮಾಡಿಕೊಂಡು ಅದಕ್ಕೆ ಸೂಕ್ತವಾದ ಕ್ರಮಗಳನ್ನು ಯೋಜಿಸುವುದು ಚಿಂತನಕಾರರ ಹಾಗೂ ಆಡಳಿತಕಾರರ ಜವಾಬ್ದಾರಿಯೆನಿಸುತ್ತದೆ.

ಒಂದು ದೃಷ್ಟಿಯಲ್ಲಿ ನೋಡಿದ್ದೇಯಾದರೆ, ಆರ್ಥಿಕತೆಯ ಬೆಳವಣಿಗೆಯ ದರ ಕಡಿಮೆಯಾದ ಪಕ್ಷದಲ್ಲಿ ಕೆಲವು ಸಂದರ್ಭದಲ್ಲಿ ಆತಂಕ ಪಡುವ ಅವಶ್ಯಕತೆಯಿಲ್ಲ. ಅನೇಕ ವೇಳೆ ಈ ದರವು ಕಡಿಮೆಯಾದರೂ ಆರ್ಥಿಕತೆಯ ಇತರೆ ಬೆಳವಣಿಗೆಯ ಸೂಚಿಗಳಲ್ಲಿ ಉತ್ತಮತೆಯನ್ನು ಕಾಣಬಹುದು. ಉದಾಹರಣೆಗೆ ಕೇರಳದ ಆರ್ಥಿಕತೆಯನ್ನು ತೆಗೆದುಕೊಂಡರೆ ಅಲ್ಲಿ ಆರ್ಥಿಕ ಬೆಳವಣಿಗೆ ದರ ಕಡಿಮೆಯಿದ್ದರೂ ಸಹ ಇತರೆ ಬೆಳವಣಿಗೆ ಸೂಚಿಗಳಾದ ಅಕ್ಷರತೆ ಮತ್ತು ಆರೋಗ್ಯ ಮಟ್ಟ, ಪೌಷ್ಟಿಕತೆ, ಶಿಶು ಮರಣ ಮತ್ತು ಆಯಸ್ಸು ಇವುಗಳಲ್ಲಿ ಉತ್ತಮತೆ ಕಂಡು ಬಂದಿದೆ. ಪರಿಸ್ಥಿತಿ ಹೀಗಿದ್ದ ಪಕ್ಷದಲ್ಲಿ ನಮ್ಮ ಮುಂದೆ ನಿಲ್ಲುವ ಪ್ರಶ್ನೆ ಏನೆಂದರೆ ಕರ್ನಾಟಕ ಆರ್ಥಿಕತೆ ಕಡಿಮೆ ಬೆಳವಣಿಗೆ ದರವನ್ನು ಸೂಚಿಸಿದ್ದಾದರೂ ಇತರ ಬೆಳವಣಿಗೆ ಸೂಚಿಗಳ ಬಗ್ಗೆಯಾದರೂ ಉತ್ತಮತೆಯನ್ನು ತೋರಿಸುತ್ತಿದೆಯೇ ಎಂಬುದು. ಒಂದು ವೇಳೆ ಈ ಸೂಚಿಗಳು ಸಹ ಉತ್ತೇಜನಕಾರಿ ಅಲ್ಲದಿದ್ದರೆ ನಮ್ಮ ಮುಂದೆ ನಿಲ್ಲುವ ಮತ್ತೊಂದು ಪ್ರಶ್ನೆ ಏನೆಂದರೆ ನಮ್ಮ ಆರ್ಥಿಕತೆಯು ಎಲ್ಲಿ ಎಡವಿದೆ? ಅದರ ಬೆಳವಣಿಗೆಯಲ್ಲಿ ಏನಾದರೂ ಅಡೆತಡೆಗಳು ಕಂಡು ಬಂದಿವೆಯೆ? ಹಾಗಿದ್ದ ಪಕ್ಷದಲ್ಲಿ ಇದನ್ನು ಸರಿಪಡಿಸಲು ಯಾವ ರೀತಿಯ ಪರಿಹಾರವನ್ನು ಸೂಚಿಸಬಹುದು?

ಈ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಆರ್ಥಿಕತೆಯ ಒಂದು ಸಮೀಕ್ಷೆಯನ್ನು ಕೈಗೊಳ್ಳುವ ದೃಷ್ಟಿಯಿಂದ ಕನ್ನಡ ವಿಶ್ವವಿದ್ಯಾಲಯದ ಅಡಿಯಲ್ಲಿ ಒಂದು ಸಂಕಿರಣವನ್ನು ಏರ್ಪಡಿಸಲಾಯಿತು. ಈ ಸಂಕಿರಣದ ಒಂದು ಸಮರ್ಪಕವಾದ ಚೌಕಟ್ಟನ್ನು ತಯಾರಿಸಿ, ಈ ಚೌಕಟ್ಟಿನಲ್ಲಿ ಸೇರ್ಪಡಿಸಬಹುದಾದ ಹದಿನಾರು ವಿಷಯಗಳನ್ನು ಗುರುತಿಸಲಾಯಿತು. ಪ್ರತಿಯೊಂದು ವಿಷಯಕ್ಕೂ ಒಬ್ಬ ಅಥವಾ ಇಬ್ಬರು ತಜ್ಞರನ್ನು ಆರಿಸಿ ಆ ವಿಷಯವನ್ನು ಕುರಿತು ಲೇಖನ ಬರೆಯುವ ಹಾಗೆ ಆಹ್ವಾನ ನೀಡಲಾಯಿತು. ಹಾಗೂ ಈ ಲೇಖನಗಳನ್ನು ಚರ್ಚಾಕೂಟದಲ್ಲಿ ಮಂಡಿಸಿ ಚರ್ಚೆಯಲ್ಲಿ ಬಂದಂತಹ ಸಲಹೆಗಳ ಆಧಾರದ  ಮೇಲೆ ಅವುಗಳನ್ನು ಪರಿಷ್ಕರಿಸಲಾಯಿತು. ಈ ಒಂದು ಪ್ರಯತ್ನದ ಫಲವೇ ಪ್ರಸ್ತುತ ಪುಸ್ತಕ. ಈ ಪ್ರಸ್ತಾಪನೆಯಲ್ಲಿ ಪ್ರಸ್ತುತ ಪುಸ್ತಕದ ಸ್ಥೂಲ ಪರಿಚಯವನ್ನು ಮಾಡಿಕೊಡುವ ಪ್ರಯತ್ನ ನಡೆದಿದೆ.

ಪಿ.ಆರ್. ಬ್ರಹ್ಮಾನಂದ ಅವರು ತಮ್ಮ ಲೇಖನದಲ್ಲಿ ಕರ್ನಾಟಕ ಆರ್ಥಿಕತೆಯ ಸಮಗ್ರ ಚಿತ್ರವನ್ನು ಮೂಡಿಸಿದ್ದಾರೆ. ಅದರ ಬೆಳವಣಿಗೆ ದರ, ಭವಿಷ್ಯತ್ತಿನಲ್ಲಿ ಅದು ಯಾವ ಪಥದಲ್ಲಿ ಮುನ್ನಡೆಯಬಹುದು ಹಾಗೂ ಅದರ ಮುನ್ನಡೆಯ ಪಥದಲ್ಲಿ ಯಾವ ಬಗೆಯ ಅಡೆತಡೆಗಳುಂಟಾಗಬಹುದು ಎಂಬ ಅಂಶಗಳನ್ನು ಅವರದೇ ಆದ ಶೈಲಿಯಲ್ಲಿ ವಿಶ್ಲೇಷಿಸಿದ್ದಾರೆ. ಆರ್ಥಿಕ ಬೆಳವಣಿಗೆ ದರವು ಇತ್ತೀಚೆಗೆ ಕುಂಠಿತವಾಗಿದ್ದು ರಾಷ್ಟ್ರದ ಆರ್ಥಿಕತೆಯ ಸರಾಸರಿಗಿಂತ ಕೆಳಮಟ್ಟದಲ್ಲಿರುವುದನ್ನು ತೋರಿಸಿಕೊಟ್ಟುದರ ಜೊತೆಗೆ ಇದಕ್ಕೆ ಕಾರಣವಾದ ಬಂಡವಾಳ ಕೊರತೆ ಹಾಗೂ ಸರ್ಕಾರದ ಹಣಕಾಸಿನ ನೀತಿಯ ಕೆಲವು ಕೊರತೆಗಳತ್ತ ನಮ್ಮ ಗಮನವನ್ನು ಸೆಳೆಯುತ್ತಾರೆ. ಅಲ್ಲದೆ, ನಮ್ಮ ಆರ್ಥಿಕತೆ ಏರುಗತಿ ಪ್ರಮಾಣದಲ್ಲಿ ಬೆಳೆಯಬೇಕಾದರೆ ಈ ಕೊರತೆಗಳನ್ನು ಸರಿಪಡಿಸುವುದರ ಜೊತೆಗೆ ಹೊರಗಿನ ಬಂಡವಾಳ ಹಾಗೂ ಕೆಲವು ವಿಧದ ತರಬೇತಿ ಹೊಂದಿದ ಮತ್ತು ಕೌಶಲ್ಯವಿರುವ ಕಾರ್ಮಿಕರ ಒಳ ಹರಿಯುವಿಕೆಯನ್ನು ಉತ್ತೇಜಿಸುವ ಹಾಗೂ ಅವುಗಳನ್ನು ತಾಳಿಕೊಳ್ಳುವ ಉದಾರವಾದ ವಾತಾವರಣವನ್ನು ನಾವು ಸೃಷ್ಟಿಸಬೇಕೆಂಬ ಮಾತನ್ನು ಹೇಳುತ್ತಾರೆ.

ಕರ್ನಾಟಕದ ಆರ್ಥಿಕ ಬೆಳವಣಿಗೆ ದರ ಕುಂಠಿತವಾಗಿರುವುದು ನಿಜವಷ್ಟೆ, ಆದರೆ ಬೆಳವಣಿಗೆಯ ಇತರೆ ಸೂಚಿಗಳ ಸ್ಥಿತಿಯೇನೆಂಬುದನ್ನು ನೋಡೋಣ. ಇಲ್ಲಿ ಲೂಯಿಸ್ ಅವರ ರಚಿಸಿರುವ ಭೌತಿಕ ಜೀವನ ಗುಣಮಟ್ಟ ಸೂಚಿಯನ್ನು ಮಾರ್ಗದರ್ಶಿಯಾಗಿ ತೆಗೆದುಕೊಳ್ಳೋಣ. ಅವರು ಮೂರು ಸಾಮಾಜಿಕ ಅಭಿವೃದ್ಧಿ ಅಂಶಗಳ ಆಧಾರದ ಮೇಲೆ ಈ ಸೂಚಿಯನ್ನು ರಚಿಸಿದ್ದಾರೆ. ಅವು ಯಾವುದೆಂದರೆ: ಒಂದು ವರ್ಷ ಪ್ರಾಯದಲ್ಲಿನ ಜೀವನಾಯುಷ್ಯ, ಶಿಶು ಮರಣ ದರ ಮತ್ತು ಸಾಕ್ಷರತೆ ದರ. ಅವರ ಈ ಸೂಚಿಯ ಪ್ರಕಾರ ಭಾರತದ ಎಲ್ಲಾ ರಾಜ್ಯಗಳನ್ನು ತೆಗೆದುಕೊಂಡಾಗ ಕೇರಳ ಮೊದಲನೆ ಸ್ಥಾನವನ್ನು ಪಡೆಯುತ್ತದೆ. ಕರ್ನಾಟಕ ನಾಲ್ಕನೆ ಸ್ಥಾನದಲ್ಲಿ ಇದೆ. ಅದರಲ್ಲೂ ಐದನೇ ಸ್ಥಾನದಲ್ಲಿರುವ ತಮಿಳುನಾಡಿಗೂ ನಮಗೂ ಇರುವ ಅಂತರ ತೀರ ಕಡಿಮೆ. ಒಂದು ವೇಳೆ ತಮಿಳುನಾಡು ಇನ್ನು ಸ್ವಲ್ಪವೇ ಬೆಳವಣಿಗೆ ತೋರಿಸಿದರೆ ಸಾಕು ಅದು ನಾಲ್ಕನೇ ಸ್ಥಾನಕ್ಕೆ ಬಂದು ಕರ್ನಾಟಕವು ಐದನೆಯದಕ್ಕೆ ತಳ್ಳಲ್ಪಡುತ್ತದೆ.

ಅಂದ ಮೇಲೆ ಕರ್ನಾಟಕದಲ್ಲಿ ಯಾವುದೇ ಪ್ರಮಾಣದ ಆರ್ಥಿಕ ಬೆಳೆವಣಿಗೆ ಉಂಟಾಗಿದ್ದರೂ ಸಹ ಅದರ ಪರಿಣಾಮ ಜನಜೀವನದ ಗುಣಮಟ್ಟದ ಮೇಲೆ ಅಷ್ಟಾಗಿ ಉಂಟಾಗಿಲ್ಲ ಎಂದಾಯಿತು. ಹಾಗೂ ಬೆಳವಣಿಗೆ ದರ ಕಡಿಮೆಯಿದ್ದರೂ ಇತರೆ ಸೂಚಿಗಳು ಉತ್ತಮವಾಗಿದೆ ಎಂಬ ಸಮಾಧಾನವನ್ನು ನಾವು  ತೆಗೆದುಕೊಳ್ಳುವಂತೂ ಇಲ್ಲ. ಕರ್ನಾಟಕದ ಭೌತಿಕ ಗುಣಮಟ್ಟ ಸೂಚಿಯು ಉತ್ತಮಗೊಳ್ಳಬೇಕಾದರೆ ಲೂಯಿಸ್ ಅವರ ಪ್ರಕಾರ ಶಿಕ್ಷಣ  ಹಾಗೂ ಪೌಷ್ಟಿಕತೆ ಕಾರ್ಯಕ್ರಮಗಳಿಗೆ ಸರ್ಕಾರವು ಹೆಚ್ಚಿನ ಗಮನ ಕೊಡಬೇಕು. ಹಾಗೂ ಸಾಕ್ಷರತೆಯ ರಂಗದಲ್ಲಿ ಮಹಿಳಾ ಸಾಕ್ಷರತೆಗೆ ವಿಶೇಷ ಒತ್ತು ನೀಡಬೇಕು. ಏಕೆಂದರೆ ಈ ಕ್ರಮವು ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ಹಾಗೂ ಶಿಶು ಮರಣ ದರದ ಮೇಲೆ ಲಾಭದಾಯಕ ಪ್ರಭಾವ ಬೀರುತ್ತದೆ ಎಂಬ ನಂಬಿಕೆ.

ಕರ್ನಾಟಕ ಆರ್ಥಿಕತೆಯ ಬೇರೆ ಬೇರೆ ಮುಖಗಳನ್ನು ಪರಿಚಯ ಮಾಡಿಕೊಡುತ್ತಾ ಉಳಿದ ತಜ್ಞರು ನಿರ್ದಿಷ್ಟವಾದ ಕ್ಷೇತ್ರಗಳನ್ನೂ ಸಮಸ್ಯೆಗಳನ್ನೂ ಕೈಗೆತ್ತಿಕೊಂಡು ಆಳವಾದ ಅಧ್ಯಯನ ಮಾಡಿ ತಮ್ಮ ಅನಿಸಿಕೆಗಳನ್ನು ನಿರೂಪಿಸಿದ್ದಾರೆ. ಈಗ ಅಂತಹ ಲೇಖನಗಳ ಪರಿಚಯದತ್ತ ದೃಷ್ಟಿ ಹರಿಸೋಣ.

ಸಾರಿಗೆ, ವಿದ್ಯುತ್ ಹಾಗೂ ಸಂಪರ್ಕಗಳಂತ ಅತಿ ಮುಖ್ಯವೆನಿಸಿದ ಮೂಲಭೂತ ಸೌಕರ್ಯಗಳ ಅಧ್ಯಯನವನ್ನು ಕೈಗೊಂಡ ಜಾನ್ಸನ್ ಸ್ಯಾಮ್ಯುಲ್ ಹಾಗೂ ಲಿಂಗರಾಜು ಅವರು ಆರ್ಥಿಕತೆಯಲ್ಲಿ ಈ ಸೌಲಭ್ಯಗಳ ಪ್ರಾಮುಖ್ಯತೆಯನ್ನು ಗುರುತಿಸುತ್ತಾ ಅವುಗಳ ಕುಂದುಕೊರತೆಗಳನ್ನು ಎತ್ತಿ ತೋರಿಸುತ್ತಾರೆ. ರೈಲು ಸಾರಿಗೆ ಇತ್ತೀಚೆಗೆ ಕರ್ನಾಟಕದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದೆ. ಹಾಗೆಯೆ ರಸ್ತೆ ಸಾರಿಗೆಯೂ ಸಹ. ಆದರೆ ಅವರು ರಸ್ತೆಗಳ ಗುಣಮಟ್ಟದಲ್ಲಿ ಕೊರತೆ ಇರುವುದನ್ನು ತೋರಿಸಿಕೊಡುತ್ತಾರೆ. ಅದರಲ್ಲೂ ರಾಷ್ಟೀಯ ಹೆದ್ದಾರಿಗಳ ಮತ್ತು ಗ್ರಾಮಾಂತರ ರಸ್ತೆಗಳ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕೆಂದು ವಾದಿಸುತ್ತಾರೆ.

ನಮ್ಮಲ್ಲಿ ವಿದ್ಯುತ್ ಕೊರತೆ ಸಮಸ್ಯೆ ಬಹಳ ವರ್ಷಗಳಿಂದಲೂ ಬೇರೂರಿಬಟ್ಟಿದೆ. ಕೊರತೆಯ ಜೊತೆಗೆ ರವಾನೆ ಮತ್ತು ಹಂಚಿಕೆಯಲ್ಲಿ ಅಧಿಕ ಪ್ರಮಾಣದಲ್ಲಿ ವಿದ್ಯುತ್ ನಷ್ಟವಾಗುವ ಸಮಸ್ಯೆಯೂ ಸೇರಿಕೊಂಡಿದೆ. ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಅದರ ಸೋರಿಕೆಯನ್ನು ಕೂಡಲೇ ತಡೆಗಟ್ಟುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು ಹಾಗೂ ಖಾಸಗಿ ಬಂಡವಾಳವು ವಿದ್ಯುತ್ ಕ್ಷೇತ್ರಕ್ಕೆ ಹರಿದುಬರುವಂತೆ ಉತ್ತೇಜಿಸುವ ನೀತಿಯೊಂದನ್ನು ಸರ್ಕಾರವು ರೂಪಿಸಬೇಕೆಂಬುದು ಇವರ ಅಭಿಪ್ರಾಯ.

ಭೌತಿಕ ಮೂಲಭೂತ ಸೌಕರ್ಯಗಳಲ್ಲದೆ, ಆರ್ಥಿಕ ಅಭಿವೃದ್ಧಿಗೆ ಅನುವಾಗುವ ಮತ್ತೊಂದು ಅತಿ ಮುಖ್ಯವಾದ ಅಂಶವೆಂದರೆ ಮಾನವ ಸಂಪತ್ತು. ವಿದ್ಯಾವಂತ ಹಾಗೂ ಆರೋಗ್ಯಕರವಾದ ಮಾನವ ಸಂಪತ್ತು ಆರ್ಥಿಕ ಬೆಳವಣಿಗೆಗೆ ಬಂಡವಾಳ ರೂಪದಲ್ಲಿ ಸಹಾಯಕವಾಗುತ್ತದೆ. ಆದ ಕಾರಣ ಅತಿ ಹೆಚ್ಚಿನ ಮಟ್ಟದ ಅನಕ್ಷರತೆಯಿರುವ ನಮ್ಮ ಸಮಾಜದಲ್ಲಿ ಅಕ್ಷರತೆಯನ್ನು ಹರಡುವ ಒಂದು ಚಳವಳಿಯನ್ನೇ ಕೈಗೊಂಡು ಮಾನವ ಸಂಪತ್ತನ್ನು ವೃದ್ಧಿಸಬೇಕು. ಈ ಪ್ರಯತ್ನವನ್ನು ಕೈಗೊಂಡ ಕರ್ನಾಟಕ ಸರ್ಕಾರದ  ಸಾಧನೆಯನ್ನು ಕುರಿತು ಉಷಾ ರಾಮಕುಮಾರ್ ಅವರು ಬರೆದಿರುವ ಲೇಖನ ಇಲ್ಲಿ ಉಚಿತವೆನಿಸುತ್ತದೆ.

ಶಾಲಾ ಶಿಕ್ಷಣವು ಒಂದು ದೃಷ್ಟಿಯಲ್ಲಿ ಮಾನವ ಸಂಪತ್ತಿನ ಸಮರ್ಪಕ ಬೆಳವಣಿಗೆಗೆ ಮೂಲಭೂತವಾದ ಅಡಿಪಾಯವನ್ನು ಹಾಕುತ್ತದೆಯೆಂದು ಮನಗಂಡು ಸರ್ಕಾರವು ಕರ್ನಾಟಕದಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ೬ ರಿಂದ ೧೧ ಮತ್ತು ೧೧ ರಿಂದ ೧೪ ರೊಳಗಿನ ಮಕ್ಕಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟುದಲ್ಲದೆ, ಕಾರಣಾಂತರದಿಂದ ಶಾಲೆ ಬಿಟ್ಟ ಮಕ್ಕಳಿಗಾಗಿ ಅನೌಪಚಾರಿಕ ಶಾಲಾ ಅಭ್ಯಾಸಕ್ಕೆ ಬೇರೆ ವ್ಯವಸ್ಥೆ ಮಾಡಿದೆ. ಶಾಲಾ ಶಿಕ್ಷಣ ಮುಗಿಸಿದ ಮಕ್ಕಳಿಗೆ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ವ್ಯವಸ್ಥೆ ಹಾಗೂ ತಾಂತ್ರಿಕ ಮತ್ತು ವೈದ್ಯಕೀಯ ಶಿ‌ಕ್ಷಣದ ವ್ಯವಸ್ಥೆಯನ್ನೂ ಮಾಡಿದೆ. ಶಿಕ್ಷಣ ಕ್ಷೇತ್ರವು ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ಎಲ್ಲಾ ಮಟ್ಟದಲ್ಲೂ ಖಾಸಗಿ ಶಾಲಾ ಕಾಲೇಜುಗಳನ್ನು ಸ್ಥಾಪಿಸುವ ಅನುಕೂಲವನ್ನು ಮಾಡಿಕೊಟ್ಟಿರುವುದು ಗಮನಾರ್ಹ. ಆದರೆ, ಶಿಕ್ಷಣ ಕ್ಷೇತ್ರದಲ್ಲಿ ಕಂಡುಬರುವ ಎರಡು ಅತಿ ಮುಖ್ಯವಾದ ಕೊರತೆಗಳೆಂದರೆ (ಅ) ಮಕ್ಕಳು ಶಾಲೆಯನ್ನು ತ್ಯಜಿಸುವ ಪ್ರಮಾಣದ ಹೆಚ್ಚಳ ಹಾಗೂ ವಿದ್ಯಾರ್ಜನೆಗೆಂದು ಮುಂದೆ ಬರುವ ಹೆಣ್ಣು ಮಕ್ಕಳ ಪ್ರಮಾಣ ಗಂಡು ಮಕ್ಕಳಿಗೆ ಹೋಲಿಸಿದರೆ ಕಡಿಮೆ ಇರುವುದು, ಮತ್ತು (ಆ) ಶಿಕ್ಷಣದ ಗುಣಮಟ್ಟದಲ್ಲಿ ಕೊರತೆ. ಈ ಕೊರತೆಗಳನ್ನು ನೀಗಿಸುವ ದೃಷ್ಟಿಯಿಂದ ಸಮರ್ಪಕವಾದ ಯೋಜನೆಗಳನ್ನು ಸರ್ಕಾರ ರೂಪಿಸಿ ಅನುಷ್ಠಾನಕ್ಕೆ ತರುವ ಅವಶ್ಯಕತೆ ಇದೆ ಎಂಬ ವಾದ ಉಷಾ ಅವರದು.

ಅದೇ ರೀತಿಯಾಗಿ ಮಾನವ ಸಂಪತ್ತನ್ನು ಗುಣಾತ್ಮಕವಾಗಿ ಉತ್ತಮಗೊಳಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಕೈಗೊಳ್ಳುವುದರ ಮೂಲಕ ತೆಗೆದುಕೊಂಡಿದೆ. ಈ ಕ್ರಮಗಳ ಸ್ಥೂಲ ಪರಿಚಯ ಮಾಡಿಕೊಟ್ಟು ಹಾಗೂ ಅವುಗಳ ಪರಿಣಾಮಗಳೇನೆಂಬುದನ್ನು ವಿಶ್ಲೇಷಿಸುತ್ತಾ ಹನುಮಂತ ರಾಯಪ್ಪ ಮತ್ತು ಉಮಾಮಣಿಯವರು ಒಟ್ಟಿನಲ್ಲಿ ಪರಿಮಾಣಕ್ಕಿಂತ ಗುಣಾತ್ಮಕ ಜನ ಸಂಪತ್ತನ್ನು ಬೆಳೆಸಲು ಪ್ರಯೋಗಿಸಬಹುದಾದ ಸಲಹೆಗಳನ್ನು ತಮ್ಮ ಲೇಖನದಲ್ಲಿ ಕೊಟ್ಟಿದ್ದಾರೆ. ಸ್ತ್ರೀಯರ ಮದುವೆ ವಯಸ್ಸನ್ನು ಸೂಕ್ತವಾಗಿ ಹೆಚ್ಚಿಸುವುದು, ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವುದು, ಮಕ್ಕಳ ಪಾಲನೆ ಮತ್ತು ಪೋಷಣೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯ ಕಾರ್ಯಕ್ರಮಗಳನ್ನು ಕೈಗೊಳ್ಳುವುದು – ಈ ಕ್ರಮಗಳಿಂದ ಜನಸಂಖ್ಯೆ ಬೆಳೆವಣಿಗೆ ಪ್ರಮಾಣ ಕಡಿಮೆಯಾಗುವುದಿಲ್ಲದೆ ಜನ ಸಂಪತ್ತಿನ ಗುಣಮಟ್ಟವೂ ಸಹ ಅಧಿಕವಾಗುತ್ತದೆ ಎಂಬ ಅಂಶವು ಅವರ ಲೇಖನದಿಂದ ಮೂಡಿಬರುತ್ತದೆ.

ಜೀವನ ಮಟ್ಟವನ್ನು ಉತ್ತಮಗೊಳಿಸುವ ಇತರೆ ಅಂಶಗಳು ಎಂದರೆ ಬಡತನ ಮತ್ತು ನಿರುದ್ಯೋಗವನ್ನು ತೊಡೆದು ಹಾಕುವುದು. ಈ ಕುತ್ತುಗಳ ಬಗ್ಗೆ ಅಧ್ಯಯನ ಮಾಡಿ ನಮಗಾಗಿ ಲೇಖನ ತಯಾರಿಸಿದವರು ಶಾಂತಪ್ಪ ಮತ್ತು ಕೇಶವ ಅವರು. ಅವರ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ ಬಡತನದ ಮಟ್ಟವು ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡಲ್ಲೂ ಭಾರತದ ಮಟ್ಟಕ್ಕಿಂತ ಹೆಚ್ಚಾಗಿರುವುದು ಕಂಡುಬರುತ್ತದೆ ಹಾಗೂ ನಿರುದ್ಯೋಗ ಮಟ್ಟವನ್ನು ಯಾವುದೇ ವಿಧಾನವನ್ನಳವಡಿಸಿ ಅಳೆದರೂ ಸಹ ಅದು ಭಾರತದ ಸ್ಥಿತಿಗಿಂತ ಗಮನಾರ್ಹವಾಗಿ ಕಡಿಮೆ ! ಸಾಮಾನ್ಯವಾಗಿ ಬಡತನ ಮತ್ತು ನಿರುದ್ಯೋಗ ಒಂದಕ್ಕೊಂದು ಅಂಟಿಕೊಂಡು ಚಲಿಸುವ ಚಾಲಕಗಳು, ಆದರೆ ಕರ್ನಾಟಕದ ಸ್ಥಿತಿಯಲ್ಲಿ ಅವುಗಳು ಬೇರೆಯಾಗಿರುವುದು ಗಮನಾರ್ಹ, ಇದಕ್ಕೆ ಕಾರಣ ಬಹುಶಃ ನಮ್ಮಲ್ಲಿನ ಉದ್ಯೋಗಾವಕಾಶಗಳು ಮುಖ್ಯವಾಗಿ ಪ್ರಥಮ ಮತ್ತು ತೃತೀಯ ಕ್ಷೇತ್ರಗಳಲ್ಲಿ ಅಷ್ಟು ಉತ್ಪಾದಕತ್ವದ್ದೂ ಲಾಭದಾಯಕವಾದ್ದೂ ಇಲ್ಲದಿರುವಿಕೆ.

ಬಡತನ ಮತ್ತು ನಿರುದ್ಯೋಗಗಳ ಬೇಗೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ದೇಶದಾದ್ಯಂತ ಮಾಡಿರುವ ಹಾಗೆ ಕರ್ನಾಟಕದಲ್ಲೂ ಸಹ ಅನೇಕ ನೇರ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸರಿಯಷ್ಟೆ. ಇಂತಹ ಕಾರ್ಯಕ್ರಮಗಳು ಎಷ್ಟು ಪರಿಣಾಮಕಾರಿಗಳಾಗಿವೆ ಎಂಬುದನ್ನು ಪರಿಶೀಲಿಸಿದ ಶಾಂತಪ್ಪ ಮತ್ತು ಕೇಶವ ಅವರು ಅವುಗಳನ್ನು ಅನುಷ್ಠಾನಗೊಳಿಸುವಿಕೆಯ ಕೆಲವು ನ್ಯೂನತೆಗಳನ್ನೂ ಎತ್ತಿ ತೋರಿಸಿದ್ದಾರೆ.

ಕೃಷಿ ಪ್ರಧಾನವಾದ ನಮ್ಮ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ದರ ಒಟ್ಟಾರೆ ಆರ್ಥಿಕತೆಯ ಬೆಳೆವಣಿಗೆ ದರವನ್ನು ನಿರ್ಣಯಿಸುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಆದರೆ ನಮ್ಮ ಕೃಷಿ ಕ್ಷೇತ್ರದ ಬೆಳೆವಣಿಗೆ ದರ ಇತ್ತೀಚೆಗೆ ಅಷ್ಟೊಂದು ಗಮನಾರ್ಹ ಏರಿಕೆಯನ್ನು ತೋರಿಸುತ್ತಿಲ್ಲ. ಈ ಸಂಬಂಧಿತವಾಗಿ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ಶೆಣೈ ಹಾಗೂ ವಿವೇಕಾನಂದ ಅವರು ಅವರ ಲೇಖನದಲ್ಲಿ ಕೈಗೊಂಡಿದ್ದಾರೆ. ಹಾಗೂ ಕೃಷಿಗೆ ಸಂಬಂಧಿಸಿದ ಅನುಷ್ಟಾನಗೊಳಿಸಬಹುದಾದ ನೀತಯ ಆಯ್ಕೆ ಕುರಿತಂತೆ ಈ ಲೇಖನ ಒಂದು ಮಾರ್ಗದರ್ಶನ ನೀಡುತ್ತದೆ.

ಆದರೆ ಕರ್ನಾಟಕ ಕೃಷಿ ಕ್ಷೇತ್ರದ ಬೆಳೆವಣಿಗೆ ದರ ಇತ್ತೀಚೆಗೆ ಸ್ಥಗಿತಗೊಂಡಿರುವುದಲ್ಲದೆ ಅದು ರಾಷ್ಟ್ರಕ್ಕಿಂತ ಕೆಳಮಟ್ಟದಲ್ಲಿದೆ. ಇದಕ್ಕೆ ಕಾರಣ ಬೆಳೆಗಳ ಇಳುವರಿಕೆಯಲ್ಲಿ ಹೆಚ್ಚಿನ ಏರಿಕೆ ಇಲ್ಲದಿರುವುದು ಮತ್ತು ಅದು ಕೆಳಮಟ್ಟದಲ್ಲಿ ಸ್ಥಗಿತಗೊಂಡಿರುವುದು. ಹಾಗೂ ಕರ್ನಾಟಕ ಬೆಳೆಗಳ ವಿನ್ಯಾಸದಲ್ಲಿ ಬದಲಾವಣೆಯೂ ಸಹ ಕಂಡುಬಂದಿದೆ. ಇತ್ತೀಚೆಗೆ ಧಾನ್ಯಗಳಿಗಿಂತ ವ್ಯಾಪಾರೀ ಬೆಳೆಗಳಿಗೆ ಒತ್ತು ಹೆಚ್ಚು ಸಿಗುತ್ತಲಿದೆ. ಒಂದು ದೃಷ್ಟಿಯಲ್ಲಿ ಇಂತಹ ಪ್ರವೃತ್ತಿ ಒಳ್ಳೆಯದೇ. ಆದರೆ ಧಾನ್ಯಗಳ ಇಳುವರಿಯನ್ನು ತೀವ್ರ ದರದಲ್ಲಿ ಏರಿಕೆಗೊಳಿಸದಿದ್ದರೆ ನಮ್ಮಲ್ಲಿ ಧಾನ್ಯಗಳಭಾವವಾಗಿ ಬೇರೆ ರಾಜ್ಯಗಳಿಂದ ಅವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ.

ಕೃಷಿ ಉತ್ಪಾದನೆ ಹಾಗೂ ಬೆಳೆಗಳ ಇಳುವರಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಒಂದು ಸಮರ್ಪಕವಾದಂತಹ ಕೃಷಿ ಧೋರಣೆಯನ್ನು ಸರ್ಕಾರ ಅಳವಡಿಸಿಕೊಳ್ಳಬೇಕು. ಭೂ ಸುಧಾರಣೆ, ಕೃಷಿ ಸಾಲ, ಕೃಷಿಗೆ ಬೇಕಾಗುವ ಇತರೆ ಸೌಲಭ್ಯಗಳನ್ನು ಒದಗಿಸುವುದು – ಇವುಗಳು ಅಂತಹ ಧೋರಣೆಗಳ ಅಂಗಗಳಾಗಬೇಕಷ್ಟೆ.

ಆದರೆ ಮುಖ್ಯವಾಗಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವುದರಿಂದ ಕೃಷಿ ಕ್ಷೇತ್ರದ ಬೆಳೆವಣಿಗೆಗೆ ತುಂಬಾ ಅನುಕೂಲವಾಗುತ್ತದೆ, ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ವೆಂಕಟರೆಡ್ಡಿಯವರು ಕರ್ನಾಟಕದ ನೀರಾವರಿ ಅಭಿವೃದ್ಧಿ ಬಗ್ಗೆ ಉಂಟಾಗಿರುವ ಮುನ್ನಡೆ ಹಾಗೂ ಸಮಸ್ಯೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ, ನೀರಾವರಿ ಸೌಲಭ್ಯದ ಬಗ್ಗೆ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದರೂ ಅದರ ಮಟ್ಟವು ರಾಷ್ಟ್ರದ ಸರಾಸರಗಿಂತ ಕಡಿಮೆ ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ. ಹಾಗೂ ಅದರಲ್ಲಿ ಪ್ರಾದೇಶಿಕ ಅಸಮಾನತೆಯ ತೀರ ಹೆಚ್ಚು. ಅಂದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯನ್ನು ಕೈಗೊಂಡು ನೀರಾವರಿ ಶಕ್ಯತೆಯನ್ನು ಹೆಚ್ಚಿಸುವುದಲ್ಲದೆ ಪ್ರಾದೇಶಿಕ ಅಸಮಾನತೆಯನ್ನು ತೊಡೆದು ಹಾಕುವ ಪ್ರಯತ್ನ ಕೈಗೊಳ್ಳಬೇಕೆಂಬ ಅವರ ಸಲಹೆ ತುಂಬಾ ಉಚಿತ. ಅಲ್ಲದೆ ಅವರೇ ಹೇಳುವಂತೆ ನೀರಾವರಿ ಸೌಲಭ್ಯದ ವಿರಳತೆಯ ಸ್ಥಿತಿಯಲ್ಲಿ ನದಿ ಮೂಲ, ನೀರಿನ ಹಂಚಿಕೆ  ಮತ್ತು ಉಪಯೋಗದ ಬಗ್ಗೆ ಹಾಗೂ ರೈತರು ನೀರನ್ನು ಜಾಗರೂಕತೆಯನ್ನು ವಹಿಸಿ ಬಳಸುವ ವಿಧಾನಗಳನ್ನು ಅವರಿಗೆ ತಿಳಿಯ ಹೇಳುವ ಕಾರ್ಯಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂಬ ಸಲಹೆಗಳು ಒಪ್ಪಿಕೊಳ್ಳುವಂತಹವು.

ಅತಿ ಹೆಚ್ಚಿನ ಪ್ರಮಾಣದ ಜನ ಸಂಖ್ಯೆಯು ಇಂದು ಕರ್ನಾಟಕದಲ್ಲಿ ಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ಕಾರಣ ಅವರ ಕ್ಷೇಮಾಭಿವೃದ್ಧಿಯನ್ನುಂಟು ಮಾಡಬೇಕಾದರೆ ಗ್ರಾಮಾಭಿವೃದ್ಧಿಯನ್ನು ಕೈಗೊಳ್ಳಬೇಕು. ವಿ.ಎಮ್.ರಾವ್ ಅವರ ಪ್ರಕಾರ ಗ್ರಾಮಾಭಿವೃದ್ಧಿಯು ಪ್ರಮುಖವಾಗಿ ಮೂರು ಆಕರಗಳಿಂದ ಪ್ರಭಾವಿತಗೊಳ್ಳುತ್ತದೆ. ಅವು ಯಾವುವೆಂದರೆ: ಮಾರುಕಟ್ಟೆ ಶಕ್ತಿಗಳು, ಸರ್ಕಾರದ ಧೋರಣೆ ಹಾಗೂ ಕಾರ್ಯಕ್ರಮಗಳು, ಮತ್ತು ರಾಜಕೀಯ. ಆದರೆ ಇವು ಗ್ರಾಮೀಣ ಅಭಿವೃದ್ಧಿಯ ಮೇಲೆ ಒಂದೊಂದು ಬಾರಿ ಕೆಟ್ಟ ಪ್ರಭಾವವನ್ನು ಬೀರುವ ಸಾಧ್ಯತೆ ಉಂಟು. ಆದ ಕಾರಣ ಸರ್ಕಾರವು ಕೆಲವು ಸೂಕ್ತ ನೀತಿಗಳನ್ನು ರೂಪಿಸಿಕೊಳ್ಳಬೇಕು. ಉದಾಹರಣೆಗೆ, ಬೆಂಬಲ ನೀತಿಗಳಿಂದ ಬಡವರು ಸ್ವಾವಲಂಬಿಗಳಾಗುವಂತೆ ಮಾಡಬೇಕು, ಹೂಡಿಕೆ ನೀತಿಯಿಂದ ರಾಜ್ಯದ ನೆಲ-ಜಲ ಸಂಪನ್ಮೂಲದ ಸಂರಕ್ಷಣೆ ಮಾಡಬೇಕು, ಒಣ ಭೂಮಿಯ ಬೇಸಾಯವನ್ನು ಉತ್ತಮಗೊಳಿಸುವ ತಾಂತ್ರಿಕತೆಯನ್ನು ಬೆಳೆಸಬೇಕು. ಹಾಗೂ ರಫ್ತು ಮಾರುಕಟ್ಟೆಗೆ ದೇಣಿಗೆ ನೀಡುವ ತೋಟಗಾರಿಕೆ, ಮೀನುಗಾರಿಕೆ, ಹೂಗಳ ಬೆಳೆಗಳಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಬೇಕು. ಮೂರನೆಯದಾಗಿ, ನಿಯಂತ್ರಕ ಧೋರಣೆಗಳ ಮೂಲಕ ಮಾರುಕಟ್ಟೆ ನಿಯಂತ್ರಣೆ. ನಗರ ಉದ್ದಮೆಗಳಿಂದ ಗ್ರಾಮೀಣ ಹಿತಾಸಕ್ತಿಯ ರಕ್ಷಣೆ. ಖಾಸಗಿ ಬಂಡವಾಳ ಹೂಡಿಕೆಯಿಂದ ಉತ್ಪಾದನೆಯಲ್ಲಾಗುವ ವಿಕಾರಗಳ ನಿಯಂತ್ರಣ ಇವುಗಳನ್ನು ಕೈಗೊಳ್ಳಬೇಕು ಎಂಬ ಸಲಹೆಗಳ ಅತಿ ಸೂಕ್ತವಾದುವು.

ಗ್ರಾಮೀಣ ಅಭಿವೃದ್ಧಿಗೆ ಅನುವಾಗುವ ಹಾಗೂ ಗ್ರಾಮೀಣ ಬಡತನ ಮತ್ತು ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ಬಂದಿರುವ ಒಂದು ಉಪಾಯ ರೇಷ್ಮೆ ಕೃಷಿ ಎಂದರೆ ತಪ್ಪಾಗಲಾರದು. ಇದರ ಪ್ರಮುಖವಾದ ಪಾತ್ರವನ್ನು ಕುರಿತು ಪ್ರಸ್ತಾವನೆ ಮಾಡಿವು ಗೋವಿಂದರಾಜು ಅವರು ರೇಷ್ಮೆ ಕೃಷಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಕೈಗೊಂಡಿರುವ ಅನೇಕ ಯೋಜನೆಗಳನ್ನೂ ಕಾರ್ಯಕ್ರಮಗಳನ್ನೂ ಕುರಿತು ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲೂ ಹಿಪ್ಪುನೇರಳೆ ಬೆಳೆಯುವಂತೆ ಉತ್ತೇಜನ ಕೊಡುವ ಯೋಜನೆ, ರೇಷ್ಮೆ ಇಳುವರಿ ಹೆಚ್ಚಾಗುವಂತೆ ಮಾಡುವ ದೃಷ್ಟಿಯಿಂದ ಬೈವೋಲ್ಟೀನ್ ರೇಷ್ಮೆ ತಳಿಯನ್ನು ವೃದ್ಧಿಸಿ ಪ್ರಚುರ ಪಡಿಸುವುದು, ಮಧ್ಯವರ್ತಿಗಳ ಕಾಟವಿಲ್ಲದಂತೆ ಉತ್ಪಾದಕರು ಮತ್ತು ಗ್ರಾಹಕರು ರೇಷ್ಮೆ ಗೂಡು ಹಾಗೂ ಕಚ್ಚಾರೇಷ್ಮೆಗಳನ್ನು ಮಾರುವ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಿಕೊಡುವ ಕ್ರಮಗಳನ್ನು ಸರ್ಕಾರ ಕೈಗೊಂಡಿರುವುದು ಗಮನಾರ್ಹ.

ಇಂದು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಅಭಿವೃದ್ಧಿಯೂ ಆಗಬೇಕಾಗಿದೆ. ಹಿಂದುಳಿದವರ, ಮಹಿಳೆಯರ ಹಾಗೂ ಅಲ್ಪ ಸಂಖ್ಯಾತರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಾದಾಗಲೇ ನಮ್ಮ ಸಮಾಜವು ಒಂದು ಪ್ರಬುದ್ಧವಾದುದಾಗುತ್ತದೆ ಹಾಗೂ ಪ್ರಗತಿಪರವಾದುದು ಎನಿಸಿಕೊಳ್ಳುತ್ತದೆ. ಈ ಹಾದಿಯಲ್ಲಿ ಸರ್ಕಾರ ಸಾಕಷ್ಟು ಶ್ರಮಿಸುತ್ತಿರಿವುದರ ಬಗ್ಗೆ ಅನುಮಾನವಿಲ್ಲ. ಇದಲ್ಲದೆ ನಾವು ಗುರುತಿಸಬೇಕಾದುದು ಪಂಚಾಯತ್ ರಾಜ್ ಸಂಸ್ಥೆಗಳ ಹಾಗೂ ಸರ್ಕಾರೇತರ ಸಂಸ್ಥೆಗಳ ಪಾತ್ರ. ಇವುಗಳ ಪಾತ್ರವನ್ನು ಕುರಿತು ಬರೆದಿರುವ ಶಿವಣ್ಣನವರು ಇಲ್ಲಿಯತನಕ ಪಟ್ಟಭದ್ರವರ್ಗಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದ ಪಂಚಾಯತಿಗಳು ಇತ್ತೀಚಿನ ಕಾಯಿದೆಯ ಕಾರಣ ಅವುಗಳ ಆಡಳಿತ ಸೂತ್ರ ದುರ್ಬಲವರ್ಗಗಳ ಕೈಗೂ ಸಿಕ್ಕಿರುವ ದೃಷ್ಟಿಯಿಂದ ಇನ್ನು ಮೇಲೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಬದಲಾವಣೆಯಾಗುತ್ತದೆ ಎಂಬ ಆಶಯವನ್ನು ವ್ಯಕ್ತ ಪಡಿಸುತ್ತಾರೆ. ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳು ಪಂಚಾಯತ್‌ಗಳೊಟ್ಟಿಗೆ ಕೂಡಿ ಅಭಿವೃದ್ಧಿ ಕಾರ್ಯಗಳಿಗೆ ಕೈಒಡ್ಡಿದರೆ ಪಂಚಾಯತ್‌ಗಳು ಮತ್ತೂ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಅಭಿವೃದ್ಧಿಯನ್ನು ಪ್ರವರ್ತನಗೊಳಿಸಲು ಸಾಧ್ಯ ಎಂದೂ ಅಭಿಪ್ರಾಯ ಪಡುತ್ತಾರೆ.

ಕರ್ನಾಟಕ ಆರ್ಥಿಕತೆಯ ಮತ್ತೊಂದು ಮುಖ್ಯವಾದ ಕ್ಷೇತ್ರವೆಂದರೆ ಕೈಗಾರಿಕೆ. ಇದನ್ನು ಕುರಿತು ಬರೆಯುತ್ತಾ ಪ್ರಹ್ಲಾದಾಚಾರ್ ಅವರು ಕರ್ನಾಟಕ ಸರ್ಕಾರವು ತನ್ನ ದೂರದರ್ಶಿತ್ವ ನೀತಿಯಿಂದಾಗಿ ರಾಜ್ಯವು ದೇಶದಲ್ಲೇ ಕೈಗಾರಿಕಾ ಬೆಳವಣಿಗೆ ಮಟ್ಟದಲ್ಲಿ ಸ್ವಾತಂತ್ಯ್ರ, ಪೂರ್ವದಲ್ಲಿ ನಾಲ್ಕನೇ ಸ್ಥಾನ ಪಡೆಯುವಂತೆ ಮಾಡಿತ್ತು. ಆದರೆ ಇಂದು ಅದರ ಬೆಳೆವಣಿಗೆ ಕುಂಠಿತವಾಗಿ ಒಂಭತ್ತನೇ ಸ್ಥಾನಕ್ಕಿಳಿದಿದೆ ಎನ್ನುತ್ತಾರೆ. ಅಲ್ಲದೆ ರಾಜ್ಯದಲ್ಲಿ ಇಂದು ಕೈಗಾರಿಕೆಗಳ ಪ್ರಾದೇಶಿಕ ಅಸಮಾನತೆ, ಹಾಗೂ ಕೈಗಾರಿಕೆಗಳ ರೋಗಗ್ರಸ್ತತೆ ಕಡೆ ನಮ್ಮ ಗಮನವನ್ನು ಸೆಳೆದು ಈ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಅನುಕೂಲಕರವಾದ ಕೈಗಾರಿಕಾ ನೀತಿಯನ್ನು ರೂಪಿಸಿಕೊಳ್ಳಬೇಕೆಂದೂ ಸಲಹೆ ನೀಡುತ್ತಾರೆ. ಅವರು ಒತ್ತು ಕೊಡುವುದು ಮುಖ್ಯವಾಗಿ ಕೈಗಾರಿಕಾ ಬೆಳೆವಣಿಗೆಗೆ ಅನುಕೂಲ ಮಾಡಿಕೊಡುವಂತಹ ಒಂದು ವಾತಾವರಣದ ಸೃಷ್ಟಿ. ಅವರ ಪ್ರಕಾರ ಇಂತಹ ವಾತಾವರಣ ಸೃಷ್ಟಿಯಾಗಬೇಕಾದರೆ ಸಾಂಸ್ಥಿಕ ಸುಧಾರಣೆಗಳು, ಪ್ರಗತಿಪರ ತೆರಿಗೆ ನೀತಿ, ಸಾಧನ ಸಂಪತ್ತುಗಳ ಹಾಗೂ ಮೂಲಭೂತ ಸೌಲಭ್ಯಗಳ ಸೃಷ್ಟಿ ಆಗಬೇಕು.

ಕೈಗಾರಿಕಾಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸುವ ಮತ್ತೊಂದು ಮುಖ್ಯವಾದ ಅಂಶವೆಂದರೆ  ಹಿತಕರ ಕೈಗಾರಿಕಾ ಸಂಬಂಧಗಳು. ಇಂತಹ ವಾತಾವರಣವು ಕೈಗಾರಿಕಾ ವಿವಾದಗಳಿ‌ಲ್ಲಿದಿದ್ದ ಮಾತ್ರಕ್ಕೆ ಉಂಟಾಗುವುದಿಲ್ಲ. ಇದರ ಜೊತೆಗೆ ಕಾರ್ಮಿಕರ ಗೈರುಹಾಜರಿ ಹಾಗೂ ಉದ್ಯಮ ಬಿಟ್ಟು ಬೇರೆಯದಕ್ಕೆ ಹೊರಟುಹೋಗುವ ಕಾರ್ಮಿಕರ ಪ್ರಮಾಣ ತೀರ ಕಡಿಮೆಯಿರಬೇಕು. ಕೆಲಸದ ಜಾಗದಲ್ಲಿ ಹಾಗೂ ಉದ್ಯಮ ಬಿಟ್ಟು ಬೇರೆಯದಕ್ಕೆ ಹೊರಟುಹೋಗುವ ಕಾರ್ಮಿಕರ ಪ್ರಮಾಣ ತೀರ ಕಡಿಮೆಯಿರಬೇಕು. ಕೆಲಸದ ಜಾಗದಲ್ಲಿ ಹಾಗೂ ವೇಳೆಯಲ್ಲಿ ಶಿಸ್ತು, ಉತ್ಪಾದಕತ್ವವನ್ನು ಹೆಚ್ಚಿಸುವಂತೆ ಕಾರ್ಮಿಕರ ಸಹಕಾರ ಇರಬೇಕು. ಅಲ್ಲದೆ ಯಾವುದೇ ವಿವಾದ ಉಂಟಾದಾಗ ಅದನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಿಕೊಳ್ಳುವ ಮನೋಭಾವ ಕಾರ್ಮಿಕರಲ್ಲೂ ಉದ್ಯಮಿಗಳಲ್ಲೂ ಇರಬೇಕು. ಈ ಒಂದು ಚೌಕಟ್ಟಿನ್ನಿಟ್ಟಿಕೊಂಡು ಕರ್ನಾಟಕದಲ್ಲಿನ ಕೈಗಾರಿಕಾ ಸಂಬಂಧಗಳ ವಿಶ್ಲೇಷಣೆಯನ್ನು ಮಾಡುತ್ತಾ ರೇಣುಕಾರ್ಯ ಅವರು ಕೈಗಾರಿಕಾ ವಿವಾದಗಳ ಪ್ರಮಾಣ, ಇವುಗಳಿಂದ ತೊಂದರೆಗೀಡಾದ ಕಾರ್ಮಿಕರ ಸಂಖ್ಯೆ ಹಾಗೂ ಕಳೆದುಕೊಳ್ಳಲಾದ ಮಾನವ ದಿನಗಳನ್ನು ಇತರೆ ರಾಜ್ಯಗಳಿಗೆ ಹೋಲಿಸಿದ್ದೇ ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ಉತ್ತಮ ಎಂದು ಹೇಳುತ್ತಾರೆ. ಆದರೆ ಕೆಲಸಕ್ಕೆ ಗೈರು ಹಾಜರಾಗುವುದು, ಹಾಜರಾದರೂ ಕೆಲಸ ಮಾಡದಿರುವುದು, ಅಶಿಸ್ತನ್ನು ವ್ಯಕ್ತಪಡಿಸುವುದು – ಇವನ್ನು ಗಮನಿಸಿದರೆ ಕರ್ನಾಟಕದಲ್ಲಿ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಅಂದ ಮೇಲೆ ನಮ್ಮಲ್ಲಿ ಈ ಪರಿಸ್ಥಿತಿಯನ್ನು ಉತ್ತಮ ಪಡಿಸುವ ಯತ್ನವನ್ನು ಮಾಡಬೇಕಾಗಿದೆ. ಇದರಲ್ಲಿ ಕಾರ್ಮಿಕರು, ಮಾಲಿಕರು ಹಾಗೂ ಸರ್ಕಾರ ಪರಸ್ಪರ ಸಹಾಯಕವಾದ ಪಾತ್ರವನ್ನು ವಹಿಸಬೇಕು ಎಂಬುದನ್ನು ಅವರು ಒತ್ತಿ ಹೇಳುತ್ತಾರೆ.

ಕೈಗಾರಿಕಾ ಕ್ಷೇತ್ರಕ್ಕೆ ನೇರ ಸಂಬಂಧವುಳ್ಳ ಹಾಗೂ ಹೆಚ್ಚು ಗಮನ ಕೊಡಬೇಕಾದ ಕ್ಷೇತ್ರ ಎಂದರೆ ಸಾರ್ವಜನಿಕ ಉದ್ಯಮಗಳು. ಕರ್ನಾಟಕ ಸರ್ಕಾರವು ಅನೇಕ ಉದ್ಯಮಗಳನ್ನು ಸ್ವಾತಂತ್ಯ್ರ ಪೂರ್ವದಿಂದಲೂ ಪ್ರಾರಂಭಿಸಿ ಅವುಗಳನ್ನು ನಿರ್ವಹಿಸುತ್ತಿರುವುದು ನಿಜವಷ್ಟೆ. ಆದರೆ ಅವುಗಳಿಂದ ಬರುತ್ತಿರುವ ಲಾಭದ ಪ್ರಮಾಣ ಇತ್ತೀಚಿನ ಅಂದಾಜಿನ ಪ್ರಕಾರ ಕೇವಲ ಶೇಕಡಾ ೦.೮೨ ಹಾಗೂ ಅವುಗಳ ಪೈಕಿ ಬಹುತೇಕ ಉದ್ಯಮಗಳು ನಷ್ಟವನ್ನನುಭವಿಸುವಂತಹವು. ಇಂತಹ ಉದ್ಯಮಗಳ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿವೆ. ಇವುಗಳ ಬಗ್ಗೆ ಸರ್ಕಾರವು ಅವನ್ನು ತನ್ನೊಂದಿಗಿರಿಸಬೇಕೆ, ಮುಚ್ಚಬೇಕೆ, ಇಲ್ಲವೆ ಖಾಸಗೀ ಬಂಡವಾಳಸ್ಥರಿಗೆ ಮಾರಿಬಿಡಬೇಕೆ ಎಂಬ ಒಂದು ನಿರ್ಣಯಕ್ಕೆ ಬರಬೇಕು. ಆದರೆ ನಮ್ಮ ಮುಂದೆ ಇರುವ ಪ್ರಶ್ನೆ ಯಾವುದನ್ನು ಇರಿಸಿಕೊಳ್ಳಬೇಕು ಯಾವುದನ್ನು ಮಾರಬೇಕು? ಅಂದರೆ ಅವುಗಳ ಪೈಕಿ ನಿಜಕ್ಕೂ ಯಾವುವು ಸರ್ಕಾರಕ್ಕೆ ಹಾಗೂ ಸಮಾಜಕ್ಕೆ ಹೊರೆಯಾಗಿವೆ? ಇದಕ್ಕೆ ಶ್ರೀಕಂಠಾರಾಧ್ಯ ಅವರ ಉತ್ತರ ಬಹಳ ಸೂಕ್ತವಾಗಿದೆ. ಹಣಕಾಸು ಫಲಿತಾಂಶ ಮತ್ತು ಇತರೆ ಮಾನದಂಡಗಳು – ಎಂದರೆ ಸೇವೆಗಳ ಗುಣಮಟ್ಟ, ಮೊದಲೇ ನಿಗದಿಪಡಿಸಿರುವ ಗುರಿಗಳನ್ನು ಎಷ್ಟರ ಮಟ್ಟಿಗೆ ಮುಟ್ಟಲಾಗಿದೆ, ಉತ್ಪಾದಕತೆ, ಉದ್ಯೋಗ ಸೃಷ್ಟಿ-ಇವನ್ನು ಪ್ರಯೋಗಿಸಿ ಮೇಲಿನ ಪ್ರಶ್ನೆಯನ್ನು ಇತ್ಯರ್ಥ ಮಾಡಿಕೊಂಡು ಯಾವುದೇ ಒಂದು ನಿರ್ಧಾರಕ್ಕೆ ಬರಬೇಕು ಎಂಬುದು.

 

ಪುಸ್ತಕ: ಕನ್ನಡ ಅಧ್ಯಯನ (ಕರ್ನಾಟಕದ ಆರ್ಥಿಕತೆ)
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಸಂಪುಟ ಸಂಪಾದಕರು: ಕೆ.ಜಿ. ವಾಸುಕಿಪ್ರೊ. ಅಬ್ದುಲ್ ಅಜೀಜ್