ಮಸ್ಸೂರಿ (ಉತ್ತರಾಖಂಡ): ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಗೆ ಇದೇ ಮೊದಲ ಬಾರಿ ಇಬ್ಬರು ಮಹಿಳಾ ಅಧಿಕಾರಿಗಳು ಯುದ್ಧಭೂಮಿಯಲ್ಲಿ ಕರ್ತವ್ಯ ನಿರ್ವಹಿಸಲು ಸೇರ್ಪಡೆಗೊಂಡಿದ್ದಾರೆ.
ಇಲ್ಲಿನ ಐಟಿಬಿಪಿ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಪ್ರಕೃತಿ ಮತ್ತು ದೀಕ್ಷಾ ಸೇರಿದಂತೆ ಒಟ್ಟು 53 ಅಧಿಕಾರಿಗಳು ತರಬೇತಿಯನ್ನು ಪೂರೈಸಿದರು. ಭಾನುವಾರ ಈ ಅಧಿಕಾರಿಗಳ ನಿರ್ಗಮನ ಪಥಸಂಚಲನ ನಡೆಯಿತು.
ಐಟಿಬಿಪಿ ಮಹಾನಿರ್ದೇಶಕ ಎಸ್.ಎಸ್. ದೇಸ್ವಾಲ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಘ್ ಧಾಮಿ ಅವರು ಪೃಕೃತಿ ಮತ್ತು ದಿಕ್ಷಾ ಅವರ ಭುಜದ ಮೇಲೆ ‘ಅಸಿಸ್ಟಂಟ್ ಕಮಾಂಡಂಟ್’ ರ್ಯಾಂಕ್ಗೆ ಸಂಬಂಧಿಸಿದ ಪಟ್ಟಿಯನ್ನು ಲಗತ್ತಿಸಿದರು. ‘ಅಸಿಸ್ಟಂಟ್ ಕಮಾಂಡಂಟ್’ ಐಟಿಬಿಪಿಯಲ್ಲಿ ಆರಂಭದ ಹಂತದ ಹುದ್ದೆಯಾಗಿದೆ.
ಪ್ರಕೃತಿಯ ತಂದೆ ಭಾರತೀಯ ವಾಯು ಪಡೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ದೀಕ್ಷಾ ತಂದೆ ಕಮಲೇಶ್ ಕುಮಾರ್ ಐಟಿಬಿಪಿಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಖಾಕಿ ಸಮವಸ್ತ್ರದಲ್ಲಿದ್ದ ಕಮಲೇಶ್ ಕುಮಾರ್ ಅವರು, ಪಥಸಂಚಲನದ ಬಳಿಕ ತಮ್ಮ ಮಗಳಿಗೆ ಸಲ್ಯೂಟ್ ಹೊಡೆದಾಗ ದೀಕ್ಷಾ ಸಹ ಪ್ರತಿ ಸಲ್ಯೂಟ್ ಹೊಡೆದರು.
‘ತಂದೆಯೇ ನನಗೆ ಮಾದರಿ. ಯಾರಿಗಿಂತಲೂ ಕಡಿಮೆ ಇಲ್ಲ ಎಂದು ನನ್ನನ್ನು ಪರಿಗಣಿಸಿದ್ದರು. ಎಲ್ಲ ರೀತಿಯ ಮಾರ್ಗದರ್ಶನ ಮಾಡಿದ್ದಾರೆ’ ಎಂದು ದೀಕ್ಷಾ ಪ್ರತಿಕ್ರಿಯಿಸಿದರು.
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿರುವ ಪ್ರಕೃತಿ, ‘ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸುವುದು ಸವಾಲಿನ ಕೆಲಸ. ಇದು ಅತ್ಯಂತ ಕಠಿಣ ಕಾರ್ಯವೂ ಹೌದು’ ಎಂದು ಹೇಳಿದರು.
ಅಖಿಲ ಭಾರತ ಮಟ್ಟದ ಪರೀಕ್ಷೆ ಮೂಲಕ ಯುದ್ಧ ಕಾರ್ಯಾಚರಣೆಯ ಕಾರ್ಯಕ್ಕೂ ಮಹಿಳಾ ಅಧಿಕಾರಿಗಳನ್ನು 2016ರಿಂದ ಐಟಿಬಿಪಿಗೆ ಸೇರ್ಪಡೆ ಮಾಡಿಕೊಳ್ಳುವುದನ್ನು ಆರಂಭಿಸಲಾಯಿತು. ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಈ ಪರೀಕ್ಷೆ ನಡೆಸುತ್ತದೆ. ಇದಕ್ಕಿಂತ ಮೊದಲು ಕಾನ್ಸ್ಟೆಬಲ್ ಹುದ್ದೆಯಲ್ಲಿ ಮಾತ್ರ ಮಹಿಳೆಯರನ್ನು ಸೇರಿಸಿಕೊಳ್ಳಲಾಗುತ್ತಿತ್ತು.
ಇಂದು ವೈರಸ್ಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸುವುದು ಅನಿವಾರ್ಯವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಉದ್ದೇಶಕ್ಕೆ ಸೀಮಿತವಾದ ಹಲವು ಬಗೆಯ ಮಾಸ್ಕ್ಗಳಿವೆ. ಇವುಗಳಿಗೆ ಭಿನ್ನವೆಂಬಂತೆ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಮಾಸ್ಕ್ಗಳನ್ನು ತಯಾರಿಸುವಲ್ಲಿ ತಂತ್ರಜ್ಞರು ಮಗ್ನರಾಗಿದ್ದಾರೆ. ಇಂಥ ಕೆಲವು ಮಾಸ್ಕ್ಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೆ, ಇನ್ನೂ ಕೆಲವು ಬಳಕೆಗೆ ಸಿಗುವ ಹಂತದಲ್ಲಿವೆ. ಅಂಥ ಕೆಲವು ಸ್ಮಾರ್ಟ್ ಮಾಸ್ಕ್ಗಳ ಮಾಹಿತಿ ಇಲ್ಲಿದೆ.
ಬ್ರೀಜ್ ಮಾಸ್ಕ್
ಇದು ಆಟೊಮೆಟೆಡ್ ಸ್ಮಾರ್ಟ್ ಎಲೆಕ್ಟ್ರಿಕ್ ಮಾಸ್ಕ್. ಇದನ್ನು ನಮ್ಮ ಮೊಬೈಲ್ ಫೋನ್, ಡಿವೈಸ್ ಯುಎಸ್ಬಿ ಕೇಬಲ್ಗಳು ಅಥವಾ ಗುಣಮಟ್ಟದ ಮೈಕ್ರೊ ಯುಎಸ್ಬಿ ಕೇಬಲ್ ಬಳಸಿ ಚಾರ್ಜ್ ಮಾಡಬಹುದು. 30 ನಿಮಿಷ ಚಾರ್ಜ್ಗಿಟ್ಟರೆ ಸಂಪೂರ್ಣ ಚಾರ್ಜ್ ಆಗುತ್ತದೆ. ನೋಡುವುದಕ್ಕೂ ಸುಂದರವಾಗಿರುವಂತೆ ಇದನ್ನು ತಯಾರಿಸಲಾಗಿದ್ದು, ಮೂತಿಯ ಭಾಗ ಕಾಣುವಂತೆ ಫೈಬರ್ ಗ್ಲಾಸನ್ನು ಅಳವಡಿಸಲಾಗಿದೆ; ಹೀಗಾಗಿ ಮಾಸ್ಕ್ ಧರಿಸಿದ್ದರೂ ನಮ್ಮನ್ನು ಇತರರು ಸುಲಭವಾಗಿ ಗುರುತಿಸಬಹುದು. ಈ ಮಾಸ್ಕ್ನ ಎಡಭಾಗದಲ್ಲಿ ಏರ್ಫಿಲ್ಟರ್ ಫ್ಯಾನ್ ಅಳವಡಿಸಲಾಗಿದ್ದು, ಇದು ವಾತಾವರಣದಲ್ಲಿರುವ ಕಲುಷಿತ ಗಾಳಿಯನ್ನು ಶುದ್ಧೀಕರಿಸಿ ನಮಗೆ ತಲುಪಿಸುತ್ತದೆ; ಬ್ಯಾಕ್ಟೀರಿಯಾ ಹಾಗೂ ವೈರಸ್ಗಳು ದೇಹ ಪ್ರವೇಶಿಸದಂತೆ ತಡೆಯುತ್ತದೆ. ಆದರೆ ಈ ಮಾಸ್ಕ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದಿಲ್ಲ.
ವೂಬಿ ಪಾಪ್ ಮಾಸ್ಕ್
ಇದೊಂದು ಸಿಲಿಕಾನ್ ಮಾಸ್ಕ್. ಇದನ್ನು ಮಕ್ಕಳ ರಕ್ಷಣೆಗಾಗಿಯೇ ತಯಾರಿಸಲಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ ತಂತ್ರಜ್ಞಾನವಿಲ್ಲದಿದ್ದರೂ ಗಾಳಿಯಲ್ಲಿನ ಶೇ. 95ರಷ್ಟು ಹಾನಿಕಾರಕಗಳು ನಮ್ಮ ದೇಹವನ್ನು ಪ್ರವೇಶಿಸದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಇದನ್ನು ವಿವಿಧ ಉಪಕರಣಗಳನ್ನು ಜೋಡಿಸಿ ತಯಾರಿಸಲಾಗಿದ್ದು, ಬೇಕೆಂದಾಗ ಬಿಡಿಸಿ ಸ್ವಚ್ಛಗೊಳಿಸಿಕೊಳ್ಳಬಹುದು. ಎರಡು ಬಗೆಯ ಫಿಲ್ಟರ್ಗಳನ್ನು ಅಳವಡಿಸಲಾಗಿದ್ದು, ಅಗ್ನಿದುರಂತ, ವಿಪರೀತ ವಾಯುಮಾಲಿನ್ಯವಿರುವಂಥ ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದು.
ಎಒ ಏರ್ ಫ್ಲೈ ಥ್ರೊ
ನೋಡಲು ಕನ್ನಡಕದಂತೆ ಕಾಣುವ ಈ ಮಾಸ್ಕ್ ವಿನ್ಯಾಸ ಆಕರ್ಷಕವಾಗಿದೆ. ಇದು ಪ್ರಸ್ತುತ ಬಳಕಗೆ ಲಭ್ಯವಿಲ್ಲದಿದ್ದರೂ ಭವಿಷ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಸಾಮಾನ್ಯ ಮನುಷ್ಯರಷ್ಟೇ ಅಲ್ಲದೆ ಬೃಹತ್ ಕೈಗಾರಿಕಾ ಪ್ರದೇಶಗಳು ಹಾಗೂ ಹೆಚ್ಚು ವಾಯುಮಾಲಿನ್ಯವಿರುವಂಥ ಪ್ರದೇಶಗಳಲ್ಲಿ ಬಳಸುವುದಕ್ಕೆ ನೆರವಾಗಲೆಂದೇ ಇದನ್ನು ತಯಾರಿಸಲಾಗಿದೆ. ಇದರಲ್ಲಿ ಮೂರು ಎಲೆಕ್ಟ್ರಿಕ್ ಏರ್ಫಿಲ್ಟರ್ ಫ್ಯಾನ್ಗಳನ್ನು ಅಳವಡಿಸಲಾಗಿದ್ದು, ವಾತಾವರಣದಲ್ಲಿರುವ ಹಾನಿಕಾರಕಗಳು ದೇಹವನ್ನು ಪ್ರವೇಶಿಸದಂತೆ ತಡೆಯುತ್ತದೆ. ಮಕ್ಕಳಿಂದ ಹಿರಿಯರವರೆಗೆ ಗಾತ್ರಕ್ಕೆ ತಕ್ಕಂತೆ ಹೊಂದಿಸಿಕೊಂಡು ಮೂತಿಗೆ ಸಿಕ್ಕಿಸಿಕೊಳ್ಳಬಹುದು. 2020ರ ಜನವರಿಯಲ್ಲಿ ನಡೆದ ಸಿಇಎಸ್ ವಸ್ತು–ಉಪಕರಣಗಳ ಪ್ರದರ್ಶನದಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು.
ಫಿಲಿಪ್ಸ್ ಏರ್ ಮಾಸ್ಕ್
ಹೆಸರೇ ಹೇಳುವಂತೆ ಇದು ಫಿಲಿಪ್ಸ್ ಕಂಪನಿ ತಯಾರಿಸಿದ ಸ್ಮಾರ್ಟ್ ಮಾಸ್ಕ್. ಇದು ಸಂಪೂರ್ಣ ಎಲೆಕ್ಟ್ರಾನಿಕ್ ತಂತ್ರಜ್ಞಾನ ಆಧಾರಿತ ಮಾಸ್ಕ್ ಆಗಿದ್ದು, ಆಟೊಮೆಟೆಡ್ ಏರ್ ಫಿಲ್ಟರ್ಗಳನ್ನು ಅಳವಡಿಸಲಾಗಿದೆ. ಇದು ನೋಡಲು ಸಾಮಾನ್ಯ ಬಟ್ಟೆಯ ಮಾಸ್ಕ್ನಂತೆ ಕಂಡರೂ ಎಡಭಾಗದಲ್ಲಿ ಗಾಳಿ ಶುದ್ಧೀಕರಿಸುವ ಫಿಲ್ಟರ್ ಅಳವಡಿಸಲಾಗಿದೆ. ಇದು ಪುಟ್ಟ ಮೋಟಾರ್ ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ. ಮೈಕ್ರೊ ಯುಎಸ್ಬಿ ಚಾರ್ಜಿಂಗ್ ಪೋರ್ಟಲ್ ಇರುವುದರಿಂದ ಚಾರ್ಜ್ಗೆ ಇಟ್ಟು ಅಗತ್ಯ ಸಂದರ್ಭಗಳಲ್ಲಿ ಬಳಸಬಹುದು. ಇದರ ಹೊರನೋಟ ಕ್ರೀಡಾಪಟುಗಳಿಗೆ ಹೆಚ್ಚು ಒಪ್ಪುತ್ತದೆ. ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಇವಲ್ಲದೆ ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸುವಂತೆ ಇದನ್ನು ತಯಾರಿಸಲಾಗಿದೆ. ಮೂರು ವಿಂಡ್ ಮೋಡ್ಗಳು, 3ಡಿ ಲೇಸರ್ ಕಟ್ನಂಥ ವೈಶಿಷ್ಟ್ಯಗಳೂ ಇದರಲ್ಲಿವೆ.
ಕ್ಲಿಯು ಮಾಸ್ಕ್
ಇದು ಪಾರದರ್ಶಕ ಸಿಲಿಕಾನ್ ಮಾಸ್ಕ್ ಆಗಿದ್ದು, ಮ್ಯಾಗ್ನೆಟಿಕ್ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಎಲೆಕ್ಟ್ರಿಕ್ ತಂತ್ರಜ್ಞಾನ ಆಧಾರಿತ ಮಾಸ್ಕ್ಗಳಿಗೆ ಹೋಲಿಸಿದರೆ ಇದರ ವಿನ್ಯಾಸ ಸರಳವಾಗಿಯೇ ಕಾಣುತ್ತದೆ. ಮೂತಿಯನ್ನು ತೋರಿಸುವ ಪಾರದರ್ಶಕ ಭಾಗವನ್ನು ಸರಿಸಿ ಆಹಾರ, ಪಾನೀಯಗಳನ್ನು ಸೇವಿಸಬಹುದು. ಇದರಲ್ಲಿ ಪುಟ್ಟ ಗಾತ್ರದ ಸ್ಮಾರ್ಟ್ ಸ್ಪೀಕರ್ ಫೋನ್ ಹಾಗೂ ಮೈಕ್ರೊ ಫೋನ್ ಅಳವಡಿಸಲಾಗಿದ್ದು, ನಮ್ಮ ಸ್ಮಾರ್ಟ್ ಫೋನ್ಗೆ ಜೋಡಿಸಿಕೊಂಡು ಕರೆ ಬಂದಾಗ ಇದರ ಮೂಲಕವೇ ಮಾತನಾಡಬಹುದು. ಇದರ ಜತೆಗೆ ಚಾರ್ಜ್ ಮಾಡಲು ಚಾರ್ಜಿಂಗ್ ಸ್ಟ್ಯಾಂಡ್ ಕೂಡ ಸಿಗುತ್ತದೆ. ಚಾರ್ಜ್ನ ಸಮಯದಲ್ಲಿ ನೇರಳಾತೀತ ಕಿರಣಗಳು ಮಾಸ್ಕ್ನೊಳಗೆ ಬಿಡುಗಡೆಯಾಗುತ್ತವೆ. ಇವು ಮಾಸ್ಕ್ನಲ್ಲಿ ವೈರಸ್, ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ.
ರಿಯೊ ಒಲಿಂಪಿಕ್ಸ್ನಲ್ಲಿ ಪಿ.ವಿ. ಸಿಂಧು ಗಳಿಸಿದ ಬೆಳ್ಳಿ ಪದಕಕ್ಕಿಂತಲೂ ಟೋಕಿಯೊ ಒಲಿಂಪಿಕ್ಸ್ನಲ್ಲಿ ಜಯಿಸಿದ ಕಂಚಿನ ಪದಕದ ಬೆಲೆ ಒಂದಿಷ್ಟು ಹೆಚ್ಚಿರಬಹುದಲ್ಲವೇ?
ಅದ್ಹೇಗೆ? ಮೂರನೇ ಸ್ಥಾನಕ್ಕೆ ಸಿಕ್ಕಿದ್ದು? ಬೆಳ್ಳಿ ಪದಕ ಸಿಕ್ಕಿದ್ದು ಎರಡನೇ ಸ್ಥಾನಕ್ಕೆ? ಇಂದೆಂತಹ ತರ್ಕ ಅಂತಾ ಕೇಳ್ತಿರಾ. ಅದಕ್ಕೆ ಉತ್ತರ ಸರಳ.
ಆಟದಲ್ಲಿ ಬೆಳ್ಳಿ ಪದಕ ಸಿಗುವುದು ಫೈನಲ್ನಲ್ಲಿ ಸೋತಾಗ. ಆದರೆ ಕಂಚಿನ ಪದಕ ಒಲಿಯುವುದು ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಗೆದ್ದ ನಂತರವಷ್ಠೇ ಎಂದೂ ಹೇಳಬಹುದು. ಆದರೆ, ಇದಷ್ಟೇ ಅಲ್ಲ. ಸಿಂಧು ಕಂಚಿನ ಪದಕಕ್ಕೆ ಇಂತಹ ಕೆಲವು ವಿಶೇಷಗಳಿವೆ. ಅವುಗಳೇನು? ಒಂದೊಂದಾಗಿ ನೋಡೋಣ ಬನ್ನಿ.
ಎರಡು ಕೊರೊನಾ ಅಲೆಗಳ ಪೆಟ್ಟು
ಕಳೆದ ಒಂದೂವರೆ ವರ್ಷದಲ್ಲಿ ಭಾರತ ಎರಡು ಬಾರಿ ಕೊರೊನಾ ಅಲೆಗಳ ಬರ್ಬರತೆಯಲ್ಲಿ ನರಳಿತ್ತು. ಕ್ರೀಡಾ ಚಟುವಟಿಕೆಗಳು ಈಗಲೂ ಪೂರ್ಣಪ್ರಮಾಣದಲ್ಲಿ ನಡೆಯುತ್ತಿಲ್ಲ. ಅದರಲ್ಲೂ ಮೊದಲ ಅಲೆ ಬಂದಾಗ ಒಳಾಂಗಣ ಕ್ರೀಡೆಗಳು ಹೆಚ್ಚು ಪೆಟ್ಟು ತಿಂದವು. ಅದರಲ್ಲಿ ಕುಸ್ತಿ, ಬ್ಯಾಡ್ಮಿಂಟನ್, ಈಜು ಮತ್ತಿತರ ಕ್ರೀಡೆಗಳನ್ನು ಪ್ರಮುಖವಾಗಿ ನೋಡಬಹುದು. 2019ರಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಸಿಂಧು ಒಲಿಂಪಿಕ್ ಚಿನ್ನದ ಮೇಲೆ ಕಣ್ಣಿಟ್ಟವರು. ದೇಶದ ನಿರೀಕ್ಷೆಯ ಭಾರವೂ ಅವರ ಮೇಲಿತ್ತು. ಆದರೆ, ಅದಕ್ಕೆ ತಕ್ಕ ಅಭ್ಯಾಸ ಮಾಡಲು ಅವರು ಪರದಾಡಬೇಕಾಯಿತು. ಲಾಕ್ಡೌನ್ನಲ್ಲಿ ಮನೆಯಲ್ಲಿಯೇ ಫಿಟ್ನೆಸ್ ಕಾಪಾಡಿಕೊಂಡಿರುವುದೇ ದೊಡ್ಡ ಸವಾಲಾಗಿತ್ತು. ಇನ್ನೇನು 2020ರ ಸೆಪ್ಟೆಂಬರ್ ವೇಳೆಗೆ ನಿಧಾನವಾಗಿ ಜನಜೀವನ ಸಹಜಸ್ಥಿತಿಗೆ ಬರುತ್ತಿದ್ದರೂ ಪ್ರಯಾಣದಲ್ಲಿ ಅಪಾಯ ಕಡೆಗಣಿಸುವಂತಿರಲಿಲ್ಲ. ಆದ್ದರಿಂದ ವಿದೇಶಗಳಲ್ಲಿ ನಡೆಯಬೇಕಿದ್ದ ಕೆಲವು ಸೂಪರ್ ಸೀರಿಸ್ ಟೂರ್ನಿಗಳು ರದ್ದಾದವು. ನಡೆದ ಕೆಲವು ಟೂರ್ನಿಗಳಿಗೆ ಹೋಗುವ ಮುನ್ನ ಭಾರತದ ಬ್ಯಾಡ್ಮಿಂಟನ್ ಪಟುಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದ್ದರಿಂದ ತಪ್ಪಿಸಿಕೊಳ್ಳಬೇಕಾಯಿತು. ಇದರಿಂದಾಗಿ ಸೈನಾ ನೆಹ್ವಾಲ್, ಕೆ. ಶ್ರೀಕಾಂತ್ ಅವರಂತಹ ಪರಿಣತರಿಗೆ ಅವಕಾಶ ತಪ್ಪಿತು. ಈ ಎಲ್ಲ ಸವಾಲುಗಳ ನಡುವೆ ಗಟ್ಟಿಯಾಗಿ ಉಳಿದಿದ್ದು ಸಿಂಧು ಮಾತ್ರ.
ಲಂಡನ್ಗೆ ತೆರಳಿ ಸ್ಟ್ರೆಂತ್ ಮತ್ತು ನ್ಯೂಟ್ರಿಷನ್ ಟ್ರೇನಿಂಗ್ ಪಡೆದರು. ಬಹುಕಾಲದ ಕೋಚ್ ಪುಲ್ಲೇಲ ಗೋಪಿಚಂದ್ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ ಎಂಬ ಚರ್ಚೆಗಳು ನಡೆದವು. ಇದೇ ಹೊತ್ತಿನಲ್ಲಿ ಹೈದರಾಬಾದಿನ ಗೋಪಿ ಅಕಾಡೆಮಿಯನ್ನು ಬಿಟ್ಟು ಸಿಂಧು ಗಚ್ಚಿಬೌಳಿಯಲ್ಲಿ ಅಭ್ಯಾಸ ಆರಂಭಿಸಿದ್ದರು. ಅದೂ ಕೂಡ ವಿದೇಶಿ ಕೋಚ್ ಪಾರ್ಕ್ ಟಿ ಸಾಂಗ್ ಅವರ ಮಾರ್ಗದರ್ಶನದಲ್ಲಿ. ಅದರ ನಡುವೆ ಕೊರೊನಾದ ಎರಡನೇ ಅಲೆಯ ಗಾಳಿ ಜೋರಾಗಿಯೇ ಬೀಸಿತು. ದೇಶದಲ್ಲಿ ಮತ್ತೆ ಕ್ರೀಡಾ ಚಟುವಟಿಕೆಗಳು ನೇಪಥ್ಯಕ್ಕೆ ಸರಿದವು. ಈ ಹೊತ್ತಿನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನಲ್ಲಿ ಸಿಂಧು ಆಡಿದರು. ಅಲ್ಲಿ ಕ್ವಾರ್ಟರ್ಫೈನಲ್ನಲ್ಲಿ ಮುಗ್ಗರಿಸಿದಾಗ ಅವರ ಫಿಟ್ನೆಸ್ ಕುರಿತು ವ್ಯಂಗ್ಯಗಳು ಕೇಳಿಬಂದಿದ್ದು ಇದೆ. ಅನಿಶ್ವಿತತೆ ನಡುವೆಯೂ ಆಯೋಜನೆಗೊಂಡ ಒಲಿಂಪಿಕ್ಸ್ಗೆ ಹೊರಟು ನಿಂತ ಭಾರತ ಬ್ಯಾಡ್ಮಿಂಟನ್ ತಂಡದಲ್ಲಿದ್ದ ತಮ್ಮ ಸ್ಥಾನವನ್ನು ಗೋಪಿ, ಪಾರ್ಕ್ಗೆ ಬಿಟ್ಟುಕೊಟ್ಟರು. ಆದರೆ, ಸಿಂಧು ಕಂಚು ಗೆದ್ದಾಗ ಮೊದಲು ಟ್ವೀಟ್ ಮಾಡಿ ಅಭಿನಂದಿಸಿದ್ದು ಕೂಡ ಗೋಪಿಯೇ. ಇದರಿಂದಾಗಿ ಅವರ ನಡುವೆ ಭಿನ್ನಾಭಿಪ್ರಾಯಗಳಿಲ್ಲ ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ.
ಕಂಚಿಗೂ ನಾಲ್ಕನೇ ಸ್ಥಾನಕ್ಕೂ ಅಜಗಜಾಂತರ!
ಸೆಮಿಫೈನಲ್ನಲ್ಲಿ ತಮ್ಮ ಗೆಳತಿ ತೈ ಜು ಯಿಂಗ್ ಮುಂದೆ ಸೋತಾಗ ಸಿಂಧು ಹತಾಶೆಯಿಂದ ಕುಗ್ಗಿಹೋಗಿದ್ದರು. ಚಿನ್ನ ಗೆಲ್ಲುವ ಆಸೆ ಕಮರಿಹೋದ ದುಃಖದಲ್ಲಿ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ಒಬ್ಬ ಕೋಚ್ ಮಾಡಬೇಕಾದ ಕೆಲಸವನ್ನು ಪಾರ್ಕ್ ಅಚ್ಚುಕಟ್ಟಾಗಿ ನಿರ್ವಹಿಸಿದರು.
‘ಈ ರೀತಿ ದುಃಖ ಪಡುವುದರಿಂದ ಏನೂ ಸಿಗುವುದಿಲ್ಲ. ನಾಲ್ಕನೇ ಸ್ಥಾನಕ್ಕೂ ಕಂಚಿನ ಪದಕ ಗಳಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆಯ್ಕೆ ನಿನ್ನದು‘ ಎಂದಷ್ಟೇ ಹೇಳಿದ್ದ ಪಾರ್ಕ್ ಮಾತು ಸಿಂಧು ಮನಕ್ಕೆ ನಾಟಿತು. ಮರುದಿನವೇ ಇದ್ದ ಪಂದ್ಯಕ್ಕೆ ಮಾನಸಿಕವಾಗಿ, ದೈಹಿಕವಾಗಿ ಅವರೆಷ್ಟು ಗಟ್ಟಿಯಾಗಿ ಕಣಕ್ಕಿಳಿದರು ಎಂಬುದನ್ನು ಚೀನಾದ ಹೀ ಬಿಂಗ್ಜಿಯಾವೊ ಎದುರಿಗಿನ ಪಂದ್ಯ ನೋಡಿದರೆ ತಿಳಿಯುತ್ತದೆ. ಅವರೊಳಗಿನ ಗಟ್ಟಿ ಛಲ, ಪುಟಿದೇಳುವ ಗುಣ ಮತ್ತು ಸಂಪೂರ್ಣ ಸಾಮರ್ಥ್ಯದ ಅರಿವು ಹಾಗೂ ಅದನ್ನು ಪಣಕ್ಕಿಡುವ ರೀತಿಯನ್ನು ಆ ಪಂದ್ಯದಲ್ಲಿ ತೋರಿಸಿಕೊಟ್ಟರು. ಚೀನಾದ ಎಡಗೈ ಆಟಗಾರ್ತಿಯ ವೇಗವನ್ನು ತಡೆದು ಅಮೋಘ ಆಕ್ರಮಣಶೀಲ ಆಟವಾಡಿದ ಸಿಂಧು ಕಂಚಿನ ಪದಕವನ್ನಷ್ಟೇ ಅಲ್ಲ ಎಲ್ಲರ ಮನಸ್ಸು ಕೂಡ ಗೆದ್ದರು. ಇತಿಹಾಸ ಬರೆದರು.
ಎಲ್ಲರಿಗೂ ಸ್ನೇಹಿತೆ ಸಿಂಧು
ಬ್ಯಾಡ್ಮಿಂಟನ್ ಅಂಕಣದಲ್ಲಿ ಎದುರಾಳಿಯನ್ನು ವೀರಾವೇಷದಿಂದ ಎದುರಿಸುವ ಸಿಂಧು ಆಟದಾಚೆ ಎಲ್ಲರಿಗೂ ನೆಚ್ಚಿನ ಸ್ನೇಹಿತೆ. ಅದು ರಿಯೊ ಒಲಿಂಪಿಕ್ಸ್ ಫೈನಲ್ನಲ್ಲಿ ತಾವು ಎದುರಿಸಿದ ಕ್ಯಾರೊಲಿನ್ ಮರಿನ್ ಇರಬಹುದು, ಮೊನ್ನೆಯಷ್ಟೇ ಸೆಮಿಫೈನಲ್ನಲ್ಲಿ ಎದುರಿಸಿದ ಚೀನಾ ತೈಪೆಯ ತೈ ಜು ಯಿಂಗ್ ಇರಬಹುದು ಅಥವಾ ಕ್ವಾರ್ಟರ್ಫೈನಲ್ನಲ್ಲಿ ಎದುರಾಗಿದ್ದ ಜಪಾನಿನ ಅಕಾನೆ ಯಾಮಗುಚಿ ಇರಬಹುದು. ಎಲ್ಲರಿಗೂ ಸಿಂಧು ಅಚ್ಚುಮೆಚ್ಚು.
‘ಫೈನಲ್ನಲ್ಲಿ ನಾನು ಸೋತೆ. ಬಹಳ ದುಃಖವಾಗಿತ್ತು. ವಿಜಯವೇದಿಕೆ ಬಳಿ ನನ್ನನ್ನು ತಬ್ಬಿಕೊಂಡು ಸಂತೈಸಿದ ಸಿಂಧು, ಕೈಗಳನ್ನು ಹಿಡಿದು ನಿನಗೆ ಬೇಸರವಾಗಿದೆ. ಸೋಲಿನಿಂದ ಮುಜುಗರವಾಗುತ್ತಿದೆ. ಆದರೆ ನೀನು ತುಂಬಾ ಚೆನ್ನಾಗಿ ಆಡಿದೆ. ಪೂರ್ಣ ಸಾಮರ್ಥ್ಯ ತೋರಿದೆ. ಆದರೆ ಈ ದಿನ ನಿನ್ನದಾಗಿರಲಿಲ್ಲ. ಮುಂದೆ ಓಳ್ಳೆಯದಾಗುತ್ತೆ ಎಂದರು. ಸೆಮಿಫೈನಲ್ನಲ್ಲಿ ನಾನು ಸಿಂಧು ಅವರನ್ನು ಸೋಲಿಸಿದ್ದೆ. ಆದರೂ ಆಕೆಯ ಸಹೃದಯತೆ, ನಿರಂತರ ಬೆಂಬಲ ಮತ್ತು ಕ್ರೀಡಾ ಮನೋಭಾವಕ್ಕೆ ತಲೆಬಾಗಿದೆ. ಅತ್ತುಬಿಟ್ಟೆ’ ಎಂದು ತೈಜು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಹ್ಯಾಟ್ರಿಕ್ನತ್ತ ಚಿತ್ತ
ಇನ್ನು ಮೂರು ವರ್ಷ ಕಳೆದರೆ ಪ್ಯಾರಿಸ್ ಒಲಿಂಪಿಕ್ಸ್ ಆಯೋಜನೆಗೊಳ್ಳಲಿದೆ. ಈ ಅವಧಿಯಲ್ಲಿ ಸಿಂಧು ಮತ್ತಷ್ಟು ಸದೃಢರಾಗಿ ಮೂರನೇ ಒಲಿಂಪಿಕ್ ಪದಕಕ್ಕೆ ಮುತ್ತಿಡುವರೇ ಎಂಬ ಕುತೂಹಲವೂ ಈಗ ಗರಿಗೆದರಿದೆ.
26 ವರ್ಷದ ಸಿಂಧು ಅವರಿಗೆ ಮುಂದಿನ ಮೂರು ವರ್ಷಗಳಲ್ಲಿ ತಮ್ಮ ಫಿಟ್ನೆಸ್ ಮತ್ತು ಆಟದ ಲಯವನ್ನು ಉಳಿಸಿಕೊಳ್ಳುವ ಸವಾಲು ಇದೆ. 2013ರಲ್ಲಿ ವಿಶ್ವ ಚಾಂಪಿಯನ್ಷಿಪ್ ಕಂಚಿನೊಂದಿಗೆ ಆರಂಭವಾದ ಅವರ ಪದಕ ಬೇಟೆ ಟೋಕಿಯೊದ ಕಂಚಿನವರೆಗೂ ಬಂದಿದೆ. ಈ ಅವಧಿಯಲ್ಲಿ ಅವರು ಎರಡು ಬಾರಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ, ಒಂದುಕಂಚು ಮತ್ತು ಒಂದು ಚಿನ್ನ, ಊಬರ್ ಕಪ್, ಒಲಿಂಪಿಕ್ಸ್ ಬೆಳ್ಳಿ, ಕಾಮನ್ವೆಲ್ತ್ ಚಿನ್ನ, ಏಷ್ಯನ್ ಕಂಚಿನ ಪದಕಗಳಿಂದ ತಮ್ಮ ಕೊರಳನ್ನು ಅಲಂಕರಿಸಿಕೊಂಡಿದ್ದಾರೆ.
ಅಪ್ಪ ರಮಣ ಮತ್ತು ಅಮ್ಮ ಪಿ. ವಿಜಯಾ ಅವರ ನಿರಂತರ ಪ್ರೋತ್ಸಾಹದಿಂದ ಸಿಂಧು ಭಾರತದ ಭರವಸೆಯ ಐಕಾನ್ ಆಗಿದ್ದಾರೆ. ಮಹಿಳೆಯರು ಮತ್ತು ಯುವಜನತೆಯ ಸ್ಪೂರ್ತಿಯಾಗಿ ಬೆಳೆದಿದ್ದಾರೆ. ಒಂದು ಕಾಲದಲ್ಲಿ ಒಲಿಂಪಿಕ್ನಲ್ಲಿ ಭಾಗವಹಿಸುವುದೇ ದೊಡ್ಡದು ಎಂದುಕೊಂಡಿದ್ದ ಕಾಲ ಇದಲ್ಲ. ಭಾರತದ ಹೆಣ್ಣುಮಗಳು ಕೂಡ ಎರಡು ಪದಕ ಜಯಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರು ನೆಟ್ಟಿರುವ ಮೈಲುಗಲ್ಲನ್ನು ಮುಟ್ಟುವವರು ಸದ್ಯಕ್ಕಂತೂ ಭಾರತದಲ್ಲಿ ಕಾಣುತ್ತಿಲ್ಲ. ಮುಂದಿನ ವರ್ಷಗಳಲ್ಲಿ ಸಿಂಧುಗೆ ಸವಾಲೊಡ್ಡುವವರು ಬರುವ ನಿರೀಕ್ಷೆಯಂತೂ ಇದೆ. ಜೊತೆಗೆ ಸಿಂಧು ಹ್ಯಾಟ್ರಿಕ್ನ ಕನಸು ಕೂಡ. ಏಕೆಂದರೆ, ಕಂಚಿನ ಪದಕ ಅಂತ್ಯವಲ್ಲ ಹೊಸ ಆರಂಭದ ಸಂಕೇತವೂ ಆಗಬಹುದು.