ಸೋಮವಾರ, ಮೇ 23, 2022

ಶಿಕ್ಷಕರ ನೇಮಕಾತಿ ವೇಳೆ ಹಿಂದಿ B,Ed ಪದವೀಧರರ ಪರಿಗಣನೆ -ಸಚಿವ ಬಿ ಸಿ ನಾಗೇಶ ಭರವಸೆ.

*ಶಿಕ್ಷಕರ ನೇಮಕಾತಿ ವೇಳೆ ಹಿಂದಿ B,Ed ಪದವೀಧರರ ಪರಿಗಣನೆ,*
*ಸಚಿವ ಬಿ ಸಿ ನಾಗೇಶ ಭರವಸೆ*

ಈ ಗೊಂದಲ ನಿವಾರಣೆ ಆಗಬೇಕು. ಸುತ್ತೋಲೆ ಮೂಲಕ‌ ಆಡಳಿತ ನಡೆಸುವುದು ಆರೋಗ್ಯಕರ ಆಡಳಿತವಲ್ಲ, ಸುತ್ತೋಲೆ ನಮ್ಮ ಅನುಕೂಲಕ್ಕೆ ಮಾತ್ರ ಇವೆ. ಹಾಗಾಗಿ, ನೇಮಕಾತಿ ವಿಚಾರದಲ್ಲಿ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳನ್ನೂ ಹಿಂದಿ ಶಿಕ್ಷಕರ ನೇಮಕಾತಿಗೆ ಪರಿಗಣಿಸಬೇಕು ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಹೇಳಿದರು..

ಬೆಂಗಳೂರು : ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ 2016ರ ಪ್ರಕಾರ ಅನರ್ಹರಾಗಿದ್ದು, ಇವರನ್ನೂ ಪರಿಗಣಿಸುವ ಕುರಿತು ಆದಷ್ಟು ಬೇಗ ಅಧಿಕಾರಿಗಳ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್​​ನಲ್ಲಿ ನಿಯಮ‌ 72ರ ಅಡಿ ಗಮನ ಸೆಳೆಯುವ ಸೂಚನೆಯಡಿ ವಿಷಯ ಮಂಡಿಸಿದ ವಿಧಾನ ಪರಿಷತ್ತಿನ ಸದಸ್ಯರಾದ ಎಸ್ ವಿ ಸಂಕನೂರು, ಆಯನೂರು ಮಂಜುನಾಥ್ ಹಾಗೂ ಶಶೀಲ್ ಜಿ. ನಮೋಶಿ ಅವರು, ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ 2016ರ ಪ್ರಕಾರ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅನರ್ಹರಾಗಿರುವರು.

ಇದರಿಂದ 2016ರ ಪೂರ್ವದಲ್ಲಿ ಹಿಂದಿ ಬಿ.ಇಡಿ ಪಡೆದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಬೀದಿ ಪಾಲಾಗಿರುವ ಸನ್ನಿವೇಶ ಉಂಟಾಗಿದೆ. ಕೂಡಲೇ ಇವರಿಗೂ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕರ್ನಾಟಕ ಉನ್ನತ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ 2772/ 2011 69822-69826/2012 ಯಡಿ ನೀಡಿರುವ ತೀರ್ಪಿನಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು 20020 ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ on N.C.T.E (National Council for Teacher Education) F ಪಡಿಸಿರುವ ವಿದ್ಯಾರ್ಹತೆಗಿಂತ ಕಡಿಮೆ ಇರುವ ಕಾರಣ 2002ರ ವೃಂದ ಮತ್ತು ನೇಮಕಾತಿ ನಿಯಮಾವಳಿಯನ್ನು ರದ್ದುಪಡಿಸಿರುತ್ತದೆ ಎಂದರು.

ಸಂಸತ್ತಿನ ಶಾಸನದ ಪ್ರಕಾರ ಸ್ಥಾಪಿತವಾದ ಸಂಸ್ಥೆಯಾದ ಎನ್‌ಸಿಟಿಇಯಿಂದ ಮಾನ್ಯತೆ ಪಡೆಯದ ಸಂಸ್ಥೆಗಳಿಂದ ಪಡೆದ ಬಿ.ಇಡಿ ಪದವಿಯು ಶಿಕ್ಷಕರ ಹುದ್ದೆಗೆ ನೇಮಕಾತಿ ಹೊಂದಲು ಅನರ್ಹವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ-2016ರ ಪ್ರಕಾರ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅನರ್ಹರಾಗಿದ್ದಾರೆ. ಸದರಿ ಪರೀಕ್ಷೆ/ಪದವಿಗಳಿಗೆ ತತ್ಸಮಾನತೆ ಪರಿಗಣಿಸಿ ನೀಡಿರುವ ಸರ್ಕಾರದ ಆದೇಶಗಳನ್ನು ಸರ್ಕಾರ 18/04/2017ರಲ್ಲಿ ರದ್ದುಪಡಿಸಿದೆ ಎಂದು ಮಾಹಿತಿ ನೀಡಿದರು.

ಪುಸ್ತುತ ಚಾಲ್ತಿಯಲ್ಲಿರುವ 2016ರ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಅನುಸರಿಸಿ ಪ್ರೌಢ ಶಾಲಾ ಹಿಂದಿ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

*ಹಿಂದಿ ರಾಷ್ಟ್ರಭಾಷೆ ಚರ್ಚೆ :* ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಶಿಲ್‌ ನಮೋಷಿ, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಗಲೇಬೇಕು, ಅದರಲ್ಲಿ ಎರಡು ಮಾತಿಲ್ಲ. ‌ಆದರೆ, ಹಿಂದಿ ರಾಷ್ಟ್ರಭಾಷೆ ಆಗಿದೆ. ಅದಕ್ಕೂ ಕೊಡಬೇಕಾದ ಆದ್ಯತೆ ಕೊಡಬೇಕಿದೆ. ನೇಮಕಾತಿ ವಿಚಾರದಲ್ಲಿ ಆಗಿರುವ ಲೋಪ ಸರಿಪಡಿಸಬೇಕು ಎಂದರು.


ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಹಿಂದಿ ನಮ್ಮ ರಾಷ್ಟ್ರದಲ್ಲಿ ಅಧಿಕೃತ ಭಾಷೆ ಅಷ್ಟೇ ಹೊರತು ರಾಷ್ಟ್ರ ಭಾಷೆ ಅಲ್ಲ. ಎಲ್ಲಾ ಭಾಷೆಗಳ ರೀತಿ ಅದು ಒಂದು ಭಾಷೆ ಅಷ್ಟೇ ಎಂದರು.

*ಸುತ್ತೋಲೆಗಳ ಆಡಳಿತವಾಗಬಾರದು :* ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸುತ್ತೋಲೆಗಳ ಮೇಲೆ ಅಧಿಕಾರಿಗಳು ಆಡಳಿತ ನಡೆಸಲು ಹೊರಟಿದ್ದಾರೆ. ಸುತ್ತೋಲೆ ಆಡಳಿತ ನಡೆಯಬಾರದು ಕಾಯ್ದೆಗಳ,ಕಾನೂನುಗಳ ಆಡಳಿತ ನಡೆಯಬೇಕು. ಒಂದು ಕಡೆ ಅವಕಾಶ ಕೊಡಲಾಗುತ್ತದೆ, ಮತ್ತೊಂದು ಕಡೆ ನಿರಾಕರಿಸಲಾಗುತ್ತದೆ.

ಈ ಗೊಂದಲ ನಿವಾರಣೆ ಆಗಬೇಕು. ಸುತ್ತೋಲೆ ಮೂಲಕ‌ ಆಡಳಿತ ನಡೆಸುವುದು ಆರೋಗ್ಯಕರ ಆಡಳಿತವಲ್ಲ, ಸುತ್ತೋಲೆ ನಮ್ಮ ಅನುಕೂಲಕ್ಕೆ ಮಾತ್ರ ಇವೆ. ಹಾಗಾಗಿ, ನೇಮಕಾತಿ ವಿಚಾರದಲ್ಲಿ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳನ್ನೂ ಹಿಂದಿ ಶಿಕ್ಷಕರ ನೇಮಕಾತಿಗೆ ಪರಿಗಣಿಸಬೇಕು ಎಂದರು.

*ನೇಮಕಾತಿ ಕಾಯ್ದೆಗೆ ತಿದ್ದುಪಡಿ ತನ್ನಿ :* ಜೆಡಿಎಸ್‌ನ ಶ್ರೀಕಂಠೇಗೌಡ ಮಾತನಾಡಿ, ಹತ್ತು ಇಪ್ಪತ್ತು ವರ್ಷದಿಂದ ಪಾಠ ಮಾಡುತ್ತಿರುವ ಹಿಂದಿ ಶಿಕ್ಷಕರು ಬೀದಿಗೆ ಬೀಳಲಿದ್ದಾರೆ. ಭವಿಷ್ಯದಲ್ಲಿ ಬೇಕಾದರೂ ಹೊಸ ಕಾನೂನಿನಂತೆ ನೇಮಕ ಮಾಡಿಕೊಳ್ಳಿ. ಆದರೆ, ಈಗ ಇರುವವರಿಗೆ ಅವಕಾಶ ಕಲ್ಪಿಸಲೇಬೇಕು, ಅಗತ್ಯವಾದಲ್ಲಿ ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ 2016ಕ್ಕೆ ತಿದ್ದುಪಡಿಯನ್ನು ತನ್ನಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ ನಾಗೇಶ್, ಸಿ ಅಂಡ್ ಆರ್ ರೂಲ್ ಅನ್ನು ಹೈಕೋರ್ಟ್ ನಿರ್ದೇಶನದ ಆಧಾರದಲ್ಲಿ 2016ರಲ್ಲಿ ತಂದಿದ್ದಾರೆ. ಮುಂದಿನ ದಿನದಲ್ಲಿ ಈ ಬೇಡಿಕೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಎಸ್.ವಿ ಸಂಕನೂರು, ಕೂಡಲೇ ಇದಕ್ಕೊಂದು ಸಮಿತಿ ರಚನೆಯಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆಯಿರಿ, ಪರಿಷತ್ ಸದಸ್ಯರ ಅಹವಾಲು ಆಲಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ನಿರ್ದೇಶಿಸಿದರು. ಸಭಾಪತಿ ನೀಡಿದ ನಿರ್ದೇಶನಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ನಾಗೇಶ್, ಆದಷ್ಟು ಬೇಗ ಸಭೆ ನಡೆಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ