ಶುಕ್ರವಾರ, ಏಪ್ರಿಲ್ 7, 2017

2017-18 ರಲ್ಲಿ ಭಾರತದ ಆರ್ಥಿಕ ಪ್ರಗತಿ 7.4 ಹೆಚ್ಚಳ


2017-18ರಲ್ಲಿ ಭಾರತದ ಆರ್ಥಿಕ ಪ್ರಗತಿ ಶೇಕಡಾ 7.4ಕ್ಕೆ ಹೆಚ್ಚಳ: ಎಡಿಬಿ

ನವದೆಹಲಿ: ಮುಂಬರುವ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರ ಶೇಕಡಾ 7.4ರಷ್ಟು ಅಭಿವೃದ್ಧಿ ಹೊಂದಲಿದ್ದು ನಂತರದ ವರ್ಷ ಶೇಕಡಾ 7.6ಕ್ಕೆ ಏರಿಕೆಯಾಗಿ ಚೀನಾಕ್ಕಿಂತ ಮುಂದೆ ಸಾಗಲಿದೆ ಎಂದು ಏಷ್ಯನ್ ಅಭಿವೃದ್ಧಿ ಬ್ಯಾಂಕ್(ಎಡಿಬಿ) ತಿಳಿಸಿದೆ.

ಅಧಿಕ ಮೌಲ್ಯದ ಬ್ಯಾಂಕು ನೋಟುಗಳ ಚಲಾವಣೆ ಹಿಂತೆಗೆತದ ಪರಿಣಾಮ  ಸ್ವಲ್ಪ ಸಮಯ ವ್ಯಾಪಾರ ವಹಿವಾಟಿಗೆ ಅನನುಕೂಲವಾದರೂ ಕೂಡ ಇದರಿಂದ ಸಾಕಷ್ಟು ಆರ್ಥಿಕ ಸುಧಾರಣೆಯಾಗಿದೆ. ವ್ಯಾಪಾರ ವಿಶ್ವಾಸ ಮತ್ತು ಹೂಡಿಕೆ ಭವಿಷ್ಯದ ಮೇಲೆ ಅಗಾಧ ಪರಿಣಾಮ ಬೀರಿದೆ ಎಂದು ಎಡಿಬಿ ಪ್ರಮುಖ ಆರ್ಥಿಕ ಪ್ರಕಟಣೆಯಲ್ಲಿ ತಿಳಿಸಿದೆ.

2016-17ರಲ್ಲಿ ಭಾರತದಲ್ಲಿ ಶೇಕಡಾ 7.1ರಷ್ಟು ಪ್ರಗತಿಯಾಗಿದ್ದು, ಅಧಿಕ ಮೌಲ್ಯದ ನೋಟುಗಳ ರದ್ಧತಿಯಿಂದ ದೇಶದ ಆರ್ಥಿಕತೆ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದೇ ಹಲವರು ಭಾವಿಸಿದ್ದರು.
ಅದಕ್ಕೆ ವ್ಯತಿರಿಕ್ತವಾಗಿ 2017-18ರಲ್ಲಿ ಶೇಕಡಾ 7.4ಕ್ಕೆ ಏರಿಕೆಯಾಗಿದೆ. 2018-19ರಲ್ಲಿ ಅದು ಶೇಕಡಾ 7.6ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.

ಚೀನಾ ದೇಶದ  ಆರ್ಥಿಕ ಪ್ರಗತಿ ಶೇಕಡಾ 6.5ರಷ್ಟು 2017 ರಲ್ಲಿ ಕಾಣುವ ನಿರೀಕ್ಷೆಯಿದ್ದರೆ 2018ರಲ್ಲಿ ಅದಕ್ಕಿಂತ ಕಡಿಮೆ 6.2ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. 2016ರಲ್ಲಿ ಚೀನಾ ದೇಶದ ಆರ್ಥಿಕ ಪ್ರಗತಿ ಶೇಕಡಾ 6.7ರಷ್ಟಾಗಿತ್ತು.

ಸರಕು ಮತ್ತು ಸೇವಾ ತೆರಿಗೆ ಜುಲೈಯಲ್ಲಿ ಆರಂಭವಾಗಲಿದ್ದು ನಂತರದ ಆರ್ಥಿಕ ಪ್ರಗತಿ ಹೇಗಿರುತ್ತದೆ ಎಂಬ ಕುತೂಹಲ ಆರ್ಥಿಕ ತಜ್ಞರಿಗಿದೆ.

ಕತರ್ ನಲ್ಲಿ ಹಾರುವ ಕಣ್ಣಿನ ಆಸ್ಪತ್ರೆ

ಕತರ್‌ನಲ್ಲಿ ಹಾರುವ ಕಣ್ಣಿನ ಆಸ್ಪತ್ರೆ

ದೋಹ,ಎ. 6: ಹಾರುವ ಕಣ್ಣಿನ ಆಸ್ಪತ್ರೆ ಎಂದು ಕರೆಯಲಾಗುವ ಆರ್ಬಿಸ್ ಪ್ಲೈಯಿಂಗ್‌ಐ ಹಾಸ್ಪಿಟಲ್ ಕತರ್‌ಗೆ ಬಂದಿಳಿದಿದೆ. ಕತರ್ ಅಭಿವೃಧ್ಧಿ ನಿಧಿಯ ಸಹಾಯದೊಂದಿಗೆ ಕತರ್ ಚ್ಯಾರಿಟಿ ನಡೆಸುವ ಕತರ್ ಕ್ರಿಯೇಟಿಂಗ್ ವಿಷನ್ ಎನ್ನುವ ಕಣ್ಣಿಗೆ ಸಂಬಂಧಿಸಿದ ಯೋಜನೆಯ ಅಂಗವಾಗಿ ಹಾರುವ ಕಣ್ಣಿನ ಆಸ್ಪತ್ರೆ ಕತರ್‌ಗೆ ಬಂದಿಳಿದಿದೆ.

  2016ರಲ್ಲಿ ಜೂನ್‌ನಲ್ಲಿಟೆಕ್ಸಾಸ್‌ನಲ್ಲಿ ಜಗತ್ತಿನ ಪ್ರಮುಖ ಎನ್‌ಜಿಒ ಆದ ಆರ್ಬಿಸ್ ವಿಮಾನದಲ್ಲಿ ಕಣ್ಣಾಸ್ಪತ್ರೆಯ ಹಾರಾಟಕ್ಕೆ ಚಾಲನೆ ನೀಡಿತ್ತು. ವಿವಿಧ ದೇಶಗಳಿಗೆ ಹೋಗಿ ಕಣ್ಣಿನ ರೋಗಿಗಳಿಗೆ ಚಿಕಿತ್ಸೆ ಕೊಡುವ ಉದ್ದೇಶದಿಂದ ವಿಮಾನದಲ್ಲಿ ಕಣ್ಣಾಸ್ಪತ್ರೆಯನ್ನು ಅದು ತೆರೆದಿತ್ತು. ಈ ವರೆಗೆ ಅದು ವಿವಿಧ ದೇಶಗಳಲ್ಲಿ ಹಾರಾಟನಡೆಸಿದೆ. ಅಲ್ಲಿನ ಕಣ್ಣಿನ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಕತರ್ ಕ್ರಿಯೇಟಿಂಗ್ ವಿಷನ್ ಎನ್ನುವ ಯೋಜನೆಯ ಅಂಗವಾಗಿ ಹಾರುವ ಕಣ್ಣಾಸ್ಪತ್ರೆ ಕತರ್‌ಗೆ ಬಂದಿಳಿದೆ.
ನೋಡಲು ಈ ಆಸ್ಪತ್ರೆ ವಿಮಾನ ಇತರ ಸಾಮಾನ್ಯ ವಿಮಾಗಳಂತೆ ಇದೆ. ಒಳಭಾಗದಲ್ಲಿ ಅತ್ಯಾಧುನಿಕ ಆಪರೇಷನ್ ಥಿಯೇಟರ್ ಇದೆ. 46 ಸೀಟುಗಳನ್ನು ಹೊಂದಿದೆ. ಪ್ರೀಪೋಸ್ಟ್ ಆಪರೇಷನ್ ಸ್ಪೇಸ್ ಮತ್ತು ಲೇಸರ್ ಸ್ಯೂಟ್ ಇತ್ಯಾದಿಗಳನ್ನು ಈವಿಮಾನದಲ್ಲಿ ಸಜ್ಜೀಕರಿಸಲಾಗಿದೆ. ಕತರ್ ಕ್ರಿಯೇಟಿಂಗ್ ವಿಷನ್ ಯೋಜನೆಯು

  ಭಾರತ,ಬಾಂಗ್ಲಾದೇಶದ 4,73,000 ರಷ್ಟು ಮಕ್ಕಳ ನೇತ್ರರೋಗಕ್ಕೆ ಉತ್ತಮ ಚಿಕಿತ್ಸೆಯನ್ನು ಕೊಡಿಸುವ ನಿಟ್ಟಿನಲ್ಲಿ ಕತರ್ ಚ್ಯಾರಿಟಿಯ ಅಧೀನದ ಮಹಾನ್ ಯೋಜನೆಯಾಗಿದೆ. 2015ರಲ್ಲಿ ಚ್ಯಾರಿಟಿ ಮತ್ತು ಆರ್ಬಿಸ್ ಸೇರಿ ಬಾಂಗ್ಲಾದೇಶದಲ್ಲಿ ಅಂಧ ಮಕ್ಕಳ ಚಿಕಿತ್ಸೆಗಾಗಿ ಎರಡು ಮಿಲಿಯನ್ ರಿಯಾಲ್ ವ್ಯಯಿಸಿದೆಎಂದು ಸಂಘಟಕರು ತಿಳಿಸಿದ್ದಾರೆ.

ಗುರುವಾರ, ಏಪ್ರಿಲ್ 6, 2017

ಸಾಮಾನ್ಯ ಜ್ಞಾನ ಪ್ರಶ್ನೊತ್ತರಗಳು

೧) *ಇತ್ತೀಚಿನ ಬೆಳವಣಿಗೆಯಲ್ಲಿ ಕನ್ನಡದ ಮೊದಲ ಶಾಸನ ಎಂದು ಪರಿಗಣಿಸಲಾದ "ತಾಳಗುಂದದ" ಶಾಸನದ ಅವಧಿ ಯಾವುದು?*

ಕ್ರಿ. ಶ.
ಅ)೩೭೦- ೪೫೦
ಆ)೩೬೦ -೪೩೦
ಇ)೩೬೫- ೪೨೫
ಈ)೪೫೦- ೫೦೦

ಅ✅✅

೨) *ನೌಕಾಪಡೆಯ ಯಾವ ವಿಭಾಗ ಡಿಸೆಂಬರ್ ನಲ್ಲಿ ೫೦ ವರ್ಷ ಪೂರೈಸಿತು?*

ಅ)ಶಸ್ತ್ರ ವಿಭಾಗ
ಆ)ಜಲಾಂತರ್ಗಾಮಿ ವಿಭಾಗ
ಇ)ಯುದ್ಧ ವಿಭಾಗ
ಈ)ಯಾವುದೂ ಅಲ್ಲ

ಆ✅✅
*ಅರ್ಧ ಶತಮಾನದ ಸಂಭ್ರಮ*
ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿಭಾಗವು ಈ ವರ್ಷದ ಡಿಸೆಂಬರ್ 8ರಂದು 50 ವರ್ಷಗಳನ್ನು ಪೂರೈಸಲಿದೆ. 1967ರ ಡಿಸೆಂಬರ್‌ 8ರಂದು ನೌಕಾಪಡೆಗೆ ಐಎನ್‌ಎಸ್‌ ಕಲ್ವರಿ ಜಲಾಂತರ್ಗಾಮಿಯನ್ನು ಹಸ್ತಾಂತರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ 8ರಂದು ಜಲಾಂತರ್ಗಾಮಿ ದಿನ ಆಚರಿಸಲಾಗುತ್ತಿದೆ.

೩) *೨೦೧೭ ನ್ನು ವಿಶ್ವಸಂಸ್ಥೆ ಸುಸ್ಥಿರ ಪ್ರವಾಸೋದ್ಯಮ ವರ್ಷ ಎಂದು ಅಳವಡಿಸಿಕೊಂಡಿದೆ. ಇದರ ಅವಧಿ_______*

ಅ)ಜನವರಿಯಿಂದ ಡಿಸೆಂಬರ್
ಆ)ಜನವರಿ ೪ ರಿಂದ ಒಂದು ವರ್ಷ
ಇ)ಡಿಸೆಂಬರ್ ೪ ರಿಂದ ಒಂದು ವರ್ಷ
ಈ) ಜನವರಿ ೧ ರಿಂದ ಒಂದು ವರ್ಷ

ಇ✅✅

೪) *ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗದರೆ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?*(ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ)

ಅ)ಅಮೆರಿಕ
ಆ)ಪಾಕಿಸ್ತಾನ
ಇ)ಇರಾನ್
ಈ)ಸೌದಿ ಅರೇಬಿಯಾ

ಈ✅✅

೫) *ಹಸಿರುಮನೆ ಪರಿಣಾಮ ಕುರಿತು ಅಧ್ಯಯನ ನಡೆಸಲು ಮೂರು ದೇಶಗಳು ಉಪಗ್ರಹ ಕಳಿಸಿವೆ. ಯಾವುದು ಗುಂಪಿಗೆ ಸೇರುವುದಿಲ್ಲ?*

ಅ)ಅಮೆರಿಕ
ಆ)ರಷ್ಯಾ
ಇ)ಚೀನ
ಈ)ಜಪಾನ್

ಆ✅✅ ಇನ್ನೂ ಕಳಿಸಿಲ್ಲ

೬) *ಬೋಳವಾರ ಮಹಮ್ಮದ್ ಕುಂಞ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ?*

ಅ)ಪಾಪು ಗಾಂಧಿ
ಆ) ಸ್ವಾತಂತ್ರ್ಯ ದ ಓಟ
ಇ)ಸ್ವಾತಂತ್ರ್ಯ ದ ಹೋರಾಟ
ಇ)ತಟ್ಟು ಚಪ್ಪಾಳೆ ಪುಟ್ಟ ಮಗು

ಆ✅✅

೭) *೨೦೧೬ರ ಮೂರ್ತಿದೇವಿ ಪ್ರಶಸ್ತಿ ಜ್ಞಪಡೆದವರು_______*

ಅ)ವೀರೇಂದ್ರ ಕುಮಾರ್
ಆ)ಪದ್ಮಾ ಸಚ್ ದೇವ್
ಇ)ತಿರುಮಲೇಶ್
ಈ)ಸುನೀತಾ ಜೈನ್

ಅ✅✅
ಮಲಯಾಳಂ ಲೇಖಕ. ಐಮಾವಥ ಭೂಮಿಯಿಲ್ ಕೃತಿಗೆ.

೮) *ಡಿ.ಎಸ್. ಸಿ ಪ್ರಶಸ್ತಿಯನ್ನು ಪಡೆದವರು______*

ಅ)ಸಲ್ಮಾನ್ ರಶ್ದಿ
ಆ)ಚೇತನ್ ಭಗತ್
ಇ)ಅರುಂಧತಿ ರಾಯ್
ಈ)ದೆಬೊರಾ ಸ್ಮಿತ್

ಇ✅✅
ದಕ್ಷಿಣ ಏಷ್ಯನ್ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ. ಸ್ಲೀಪಿಂಗ್ ಆನ್ ಜ್ಯುಪಿಟರ್ ಕೃತಿಗೆ.

೯) *ನವದೆಹಲಿಯಲ್ಲಿ ನಡೆದ ೧ ನೇ ಬ್ರಿಕ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಚಿತ್ರ______*

ಅ)ರೂಮ್
ಆ)ತಿಥಿ
ಇ)ಬಾಹುಬಲಿ
ಈ)ಪಿಕು

ಆ✅✅

೧೦) *ಜೈಲುಗಳಲ್ಲಿ ಇರುವವರನ್ನು ಸುಶಿಕ್ಷಿತರನ್ನಾಗಿಸುವ ಶಿಕ್ಷಣ ಯೋಜನೆಯಾದ ಜೈಲು ಜ್ಯೋತಿ ಯೋಜನೆಯನ್ನು ಯಾವ ರಾಜ್ಯ ಜಾರಿಗೆ ತಂದಿತು?*

ಅ) ಉತ್ತರ ಪ್ರದೇಶಳೂ
ಆ)ಗುಜರಾತ್
ಇ)ಕೇರಳ
ಈ)ಬಿಹಾರ

ಇ✅✅

೧೧) " *ಹೃದಯ ಸಂವಾದ ಭಾಜ: ಸಹೃದಯಾ" ಹೇಳಿಕೆಯ ಅಲಂಕಾರ ಗ್ರಂಥ ಯಾವುದು?*

ಅ)ಕಾವ್ಯಾದರ್ಶಿ
ಆ)ಧ್ವನ್ಯಾಲೋಕ
ಇ)ನಾಟ್ಯಶಾಸ್ತ್ರ
ಈ)ಧ್ವನ್ಯಾಲೋಕ ಲೋಚನ

ಆ✅✅

೧೨) *"ಮಹೋನ್ನತಿ" ತತ್ವ ಪ್ರತಿಪಾದಕ_____*

ಅ)ಮ್ಯಾಥ್ಯೂ ಆರ್ನಾಲ್ಡ್
ಆ)ಟಿ.ಎಸ್. ಎಲಿಯಟ್
ಇ)ಎ.ಸಿ.ಬ್ರಾಡ್ಲೆ
ಈ)ಲಾಂಜಿನಸ್

ಈ✅✅

೧೩) *"ರಸವು ಅನುಕಾರ್ಯ ಮತ್ತು ಅನುಕರ್ತರಲ್ಲಿದೆ " ಎಂದವರು______*

ಅ)ವಾಮನ
ಆ)ಭರತ
ಇ)ಆನಂದವರ್ಧನ
ಈ)ಭಟ್ಟಲೊಲ್ಲಟ

ಈ✅✅

೧೪) *"ಗದ್ಯಾಶ್ರಮ ಗುರುತು ಪ್ರತೀತಿಯಂ ಕೆಯ್ ಕೊಂಡರ್ " ವಾಕ್ಯ __ ಪುಸ್ತಕದಲ್ಲಿ ಬರುತ್ತದೆ.*

ಅ)ಶಬ್ದಮಣಿದರ್ಪಣ
ಆ)ಕಾವ್ಯಾವಲೋಕನ
ಇ)ಪಂಪಭಾರತ
ಈ)ಕವಿರಾಜಮಾರ್ಗ

ಈ✅✅

೧೫) *ಕ್ಷಾತ್ರಯುಗ ,ಮತಪ್ರಚಾರಯುಗ , ಸಾರ್ವಜನಿಕ ಯುಗ - ಎಂದು ಸಾಹಿತ್ಯ ಚರಿತ್ರೆಯನ್ನು ವಿಂಗಡಣೆ ಮಾಡಿದವರು______*

ಅ)ಆರ್. ನರಸಿಂಹಾಚಾರ್
ಆ)ಡಿ.ನರಸಿಂಹಾಚಾರ್
ಇ)ಕಿಟೆಲ್
ಈ)ಕನ್ನಡವಕ್ಕಿ

ಈ✅✅

೧೬) *"ಸಕಲ ಲಕ್ಷಣವು ವಸ್ತುಕತೆ ವರ್ಣಕಕಿಂತು ವಿಕಳವಾದರೂ ದೋಷವಿಲ್ಲ" - ಎಂದವರು_____*

ಅ)ಭರತ
ಆ)ಕೇಶಿರಾಜ
ಇ)ನಾಗವರ್ಮ
ಈ)ರಾಘವಾಂಕ

ಈ✅✅

೭) *"ಜ್ವಾಲಾಮುಖಿಯ ಮೇಲೆ " ಕಾದಂಬರಿಯ ಪ್ರಕಾರ-_______*

ಅ)ನವ್ಯ
ಆ)ನವೋದಯ
ಇ)ಪ್ರಗತಿಶೀಲ
ಈ)‌ಬಂಡಾಯ

ಇ✅✅

೧೮) *ಭಾಷೆಯ ಉಗಮಕ್ಕೆ ಅನುರಣನವಾದವೇ ಕಾರಣವೆಂದವನು-_____*

ಅ)ಎಂ.ಮರಿಯಪ್ಪ ಭಟ್ಟ
ಆ)ಕೆ.ಕೆಂಪೇಗೌಡ
ಇ)ವಿಲಿಯಂ ಬ್ರೈಟ್
ಈ)ಮ್ಯಾಕ್ಸ್ ಮುಲ್ಲರ್

ಈ✅✅

೧೯) *"ಪಳಗನ್ನಡಂ ಪೊಲಗೆಡಸಿ ನುಡಿವರ್" __ ಕೃತಿಯಲ್ಲಿ ಕಂಡುಬರುತ್ತದೆ.*

ಅ)ಶಬ್ದಮಣಿದರ್ಪಣ
ಆ)ಪಂಪಭಾರತ
ಇ)ಕಾವ್ಯಾವಲೋಕನ
ಈ)ಅಭಿಧಾನ ವಸ್ತುಕೋಶ

ಅ✅✅

೨೦) *ಕನ್ನಡದಲ್ಲಿ ಮೊದಲು ದರ್ಶನ ವಿಮರ್ಶೆಯನ್ನು ಬರೆದವರು ಯಾರು?*

ಅ)ಎಚ್. ತಿಪ್ಪೇರುದ್ರಸ್ವಾಮಿ
ಆ)ಕುವೆಂಪು
ಇ)ದ.ರಾ.ಬೇಂದ್ರೆ
ಈ)ತೀ.ನಂ.ಶ್ರೀ

ಅ✅✅

೨೧) *"ಕಟ್ಟಿಯುಮೆನೋ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ" - ಈ ವಾಕ್ಯದ ಅಂತರಾರ್ಥ _*

ಅ)ಹೂಹಾರದ ಸುವಾಸನೆ
ಆ)ಸಹೃದಯನ ಅಗತ್ಯತೆ
ಇ)ಹೂ ಮುಡಿವ ಹೆಣ್ಣು ಮಕ್ಕಳ ಅಗತ್ಯ
ಈ) ಯಾವುದೂ ಅಲ್ಲ

ಆ✅✅
ಅಂದರೆ ಕವಿ ಈ ವಾಕ್ಯದಲ್ಲಿ ಕವಿ ಎಷ್ಟು ಒಳ್ಳೆಯ ಸಾಹಿತ್ಯ ರಚನೆ ಮಾಡಿದರೂ ಸಹ ಅದನ್ನು ಓದಿ ಆಸ್ವಾದಿಸುವವರು (ಸಹೃದಯ) ಇಲ್ಲದಿದ್ದರೆ ಆ ಸಾಹಿತ್ಯ ವ್ಯರ್ಥ ಎಂಬರ್ಥದಲ್ಲಿ ಹೂವಿನ ಮಾಲೆಗೆ ಹೋಲಿಸಿ ತಿಳಿಸಿದ್ದಾರೆ. ಅನಂತನಾಥಪುರಾಣದಲ್ಲಿ.

೨೨) *ದಂಡಿಯ ಕೃತಿಗಳಲ್ಲಿ ತಪ್ಪಾದುದು ಯಾವುದು?*

ಅ)ಕಾವ್ಯಾದರ್ಶ
ಆ)ದಶಕುಮಾರ ಚರಿತೆ
ಇ)ಕಾವ್ಯಾಲಂಕಾರ
ಈ)ಅವಂತೀ ಸುಂದರೀ

ಇ✅✅ ಭಾಮಹ ಬರೆದಿದ್ದಾನೆ. ದಂಡಿಯ ಇನ್ನೊಂದು ಕೃತಿ - ತ್ರಯೋದಂಡಿ ಪ್ರಬಂಧಾ: .

೨೩) *"ಕವಿಗಳನ್ನು ಆದರಿಸಿ , ಪೂಜಿಸಿ , ಉಡುಗೊರೆ ನೀಡಿ .ಆದರೆ ರಾಜ್ಯದಿಂದ ಹೊರಗೆ ಕಳುಹಿಸಿ"- ಎಂದವರು_____*

ಅ)ಕಾರ್ಲ್ ಮಾರ್ಕ್ಸ್
ಆ)ಪ್ಲೇಟೊ
ಇ)ಅರಿಸ್ಟಾಟಲ್‌
ಈ)ಸಾಕ್ರಟೀಸ್

ಆ✅✅
ಆದರ್ಶ ಪ್ರಜಾರಾಜ್ಯದಲ್ಲಿ ಕವಿಯನ್ನು ಹೊರದೂಡಬೆಕೆಂದ. ಜನ ಕವಿಗಳ ಕೃತಿಗಳನ್ನು ಓದುವುದರಲ್ಲಿ ಸಮಯ ವ್ಯರ್ಥ ಮಾಡುತ್ತಾರೆಂದು ಈ ಮಾತನ್ನು ಹೇಳಿದ.

೨೪) *ಹ್ಯಾಮ್ಲೆಟ್ ನಾಟಕವನ್ನು "ಈಡಿಪಸ್ ಕಾಂಪ್ಲೆಕ್ಸ್" ನೆಲೆಯಲ್ಲಿ ವಿಮರ್ಶಿಸಿದ ವಿಮರ್ಶಕ_____*

ಅ)ಸಿಗ್ಮಂಡ್ ಫ್ರಾಯ್ಡ್‌
ಆ)ಐ.ಎ.ರಿಚರ್ಡ್
ಇ)ಸಿ.ಜಿ.ಯೂಂಗ್
ಈ)ಅರ್ನೆಸ್ಟ್ ಜೋನ್ಸ್

ಈ✅✅
ಈಡಿಪಸ್ ಕಾಂಪ್ಲೆಕ್ಸ್ ಎಂಬುದು ಒಂದು ಮನ:ಶಾಸ್ತ್ರೀಯ ವಿಮರ್ಶೆಯ  ವಿಧಾನವಾಗಿದೆ.

೨೫) *ಸೋಫೋಕ್ಲೀಸನ ಏಜಾಕ್ಸ್ ನಾಟಕವನ್ನು ಹಲವರು ಕನ್ನಡೀಕರಿಸಿದ್ದಾರೆ. ಅದರಲ್ಲಿ ತಪ್ಪಾದುದು ಯಾವುದು?*

ಅ)ಬಿ.ಎಂ.ಶ್ರೀ- ಅಶ್ವತ್ಥಾಮನ್
ಆ) ಎಚ್.ಎಂ.ಚೆನ್ನಯ್ಯ - ಆಯಾಸ್
ಇ)ಕುವೆಂಪು- ಬಿರುಗಾಳಿ
ಈ)ಸುಜನಾ- ಏಜಾಕ್ಸ್

ಇ✅✅
ಇದನ್ನು ಕುವೆಂಪು ಅವರು ಶೇಕ್ಸ್‌ಪಿಯರ್ ನ ಹ್ಯಾಮ್ಲೆಟ್ ಪ್ರಭಾವದಿಂದ ರಚಿಸಿದರು.

ಗಲ್ಫ್ ಕಂಫನಿಗೆ ಇದ್ದಕ್ಕಿದ್ದಂತೆ CEO ಆದ ಧೋನಿ

ಗಲ್ಫ್ ಕಂಪನಿಗೆ ಇದ್ದಕ್ಕಿದ್ದಂತೆ CEO ಆದ ಧೋನಿ!

ಮುಂಬೈ, ಏಪ್ರಿಲ್ 4: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೋಮವಾರ ಇದ್ದಕ್ಕಿದ್ದಂತೆ ಗಲ್ಫ್ ಆಯಿಲ್ ಇಂಡಿಯಾ ಕಂಪನಿಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕಗೊಂಡರು.

ಇದೇನು, ಧೋನಿ ಹೀಗೆ ಏಕಾಏಕಿ ತಮ್ಮ ವೃತ್ತಿಜೀವನ ಬದಲಿಸಿದರೇ ಅಥವಾ ಈ ವೃತ್ತಿ ಜೀವನ ಆಯ್ಕೆಗಾಗಿಯೇ ತಮ್ಮ ಕ್ರಿಕೆಟ್ ಬದುಕು ತೊರೆದರೇ ಎಂಬ ಗುಮಾನಿ ಎಲ್ಲರಲ್ಲಿ ಮೂಡುವುದು ಸಹಜ.

ಆದರೆ, ವಿಚಾರ ಅದಲ್ಲ. ತಮ್ಮ ಕಂಪನಿಯ ಉದ್ಯೋಗಿಗಳಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದಾಗಿಯೇ ಧೋನಿಯವರನ್ನು ತನ್ನ ಕಚೇರಿಗೆ ಕರೆಯಿಸಿಕೊಂಡಿದ್ದ ಕಂಪನಿಯ ಆಡಳಿತ ಮಂಡಳಿ, ಒಂದು ದಿನದ ಮಟ್ಟಿಗೆ ಅವರನ್ನು ಸಿಇಒ ಸ್ಥಾನಕ್ಕೆ ನೇಮಕ ಮಾಡಿತ್ತು.

ಧೋನಿ ಹೀಗೆ ಬರುತ್ತಾರೆಂದು ಕಂಪನಿಯ ನೌಕರರಿಗೆ ಗೊತ್ತೇ ಇರಲಿಲ್ಲವಂತೆ. ಇದ್ದಕ್ಕಿದ್ದಂತೆ, ಸೋಮವಾರ ಬೆಳಗ್ಗೆ ನೀಲಿ ಸೂಟ್ ಧರಿಸಿ ಮುಂಬೈನ ಅಂಧೇರಿಯಲ್ಲಿನ ಕಂಪನಿಗೆ ಆಗಮಿಸಿದ ಧೋನಿಯನ್ನು ಕಂಡ ಕೂಡಲೇ ಇಡೀ ಕಚೇರಿಯ ಸಿಬ್ಬಂದಿ ಅಚ್ಚರಿಗೊಂಡರಂತೆ.
ಅಷ್ಟೇ ಅಲ್ಲ, ಧೋನಿ ನಮ್ಮ ಕಂಪನಿ ಹೊಸ ಸಿಇಒ ಎಂಬ ವಿಚಾರ ತಿಳಿದ ಮೇಲಂತೂ ಮತ್ತಷ್ಟು ಥ್ರಿಲ್ ಆದರಂತೆ.

ಹಾಗೆ, ಎಲ್ಲರಿಗೂ ಅಚ್ಚರಿ ನೀಡಿದ ಧೋನಿ, ಕಂಪನಿಯ ವ್ಯವಸ್ಥಾಪಕರು ಮತ್ತಿತರನ್ನು ಪರಿಚಯ ಮಾಡಿಕೊಂಡ ನಂತರ, ಕೆಲವಾರು ಸಭೆಗಳನ್ನು ನಡೆಸಿದ್ದಾರೆ. ಆಡಳಿತಾತ್ಮಕವಾಗಿ ಕೆಲವು ಚಿಕ್ಕಪುಟ್ಟ ನಿರ್ಧಾರಗಳನ್ನೂ ಕೈಗೊಂಡಿದ್ದಾರೆಂದು ಅವರ ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಅರುಣ್ ಪಾಂಡೆ ತಿಳಿಸಿದ್ದಾರೆ.

ಚಿರನಿದ್ರೆಗೆ ಜಾರಿದ ಗಾನಕೋಗಿಲೆ ಕಿಶೋರಿ ಅಮೋನ್ಕರ್

ಚಿರನಿದ್ರೆಗೆ ಜಾರಿದ ಗಾನಕೋಗಿಲೆ ಕಿಶೋರಿ ಅಮೋನ್ಕರ್

ಮುಂಬೈ, ಏಪ್ರಿಲ್ 4: ಅದು ಹಿಂದೂಸ್ತಾನಿ ಸಂಗೀತ ಕ್ಷೇತ್ರ ಒಂದು ಕ್ಷಣ ಸ್ತಬ್ಧಗೊಂಡ ದಿನ. ರಾಗರಸದಿಂದ ಮಾಂತ್ರಿಕ ಪ್ರಪಂಚವನ್ನೇ ಸೃಷ್ಟಿಸುತ್ತಿದ್ದ ಗಾನಕೋಗಿಲೆ ಮೌನವಾದ ದಿನ.

ಹೌದು, ಹಿಂದೂಸ್ತಾನಿ ಸಂಗೀತದ ದಂತಕತೆ ಎಂದೇ ಖ್ಯಾತರಾಗಿದ್ದ ಪದ್ಮವಿಭೂಷಣ ಕಿಶೋರಿ ಅಮೋನ್ಕರ್(84) ಸೋಮವಾರದಂದು (ಏಪ್ರಿಲ್ 3) ಮುಂಬೈಯ ಸ್ವಗೃಹದಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ನಿಧನ ಸಂಗೀತ ಕ್ಷೇತ್ರದಲ್ಲಿ ನೀರವತೆ ಸೃಷ್ಟಿಸಿದೆ.

1932, ಏಪ್ರಿಲ್ 10 ರಂದು ಮುಂಬೈಯಲ್ಲಿ ಜನಿಸಿದ ಕಿಶೋರಿ ಅವರು ಹಿಂದೂಸ್ತಾನಿ ಸಂಗೀತ ಪ್ರಕಾರದಲ್ಲಿ ಮಹೋನ್ನತ ಸಾಧನೆ ಮಾಡಿದ್ದಲ್ಲದೆ, ಬೇರೆ ಬೇರೆ ಸಂಗೀತ ಪ್ರಕಾರಗಳಿಗೆ ವೇದಿಕೆ ನೀಡುವುದಕ್ಕಾಗಿ ಜೈಪುರ ಘರಾನಾ ಎಂಬ ಪರಿಕಲ್ಪನೆಯನ್ನೂ ಪರಿಚಯಿಸಿದರು.

ಸಂಗೀತದ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ, ಕಲೆಗೆ ಸದಾ ಹೊಸತನ ಬೇಕು ಎಂದ ಅವರು ಕೆಲವರ ಟೀಕೆಗೂ ಗುರಿಯಾದದ್ದಿದೆ.
ಆದರೂ ಸಂಗೀತದ ಬೇರೆ ಬೇರೆ ಪ್ರಕಾರಗಳ ಪ್ರಯೋಗದಲ್ಲೇ ಬದುಕಿನ ಸಾರ್ಥಕತೆ ಕಾಣುತ್ತಿದ್ದ ಕಿಶೋರಿ ಅವರು ತಮ್ಮ ಶಿಷ್ಯರಿಗಾಗಲಿ, ಅಭಿಮಾನಿಗಳಿಗಾಗಲಿ, ಹೊಸತನವನ್ನು ಆವಿಷ್ಕರಿಸುವ ಪಾಠವನ್ನೇ ಹೇಳುತ್ತಿದ್ದರು.

ರಾಗ್ ಕೇದಾರ್, ರಾಗ್ ಭೂಪ್ ಎಲ್ಲವೂ ಆಕೆಯ ಸ್ವರದ ಅಲೆಯಲ್ಲಿ ಮೋಡಿಯನ್ನೇ ಮಾಡುತ್ತಿದ್ದವು. ಆಕೆಯ ಸ್ವರದೊಂದಿಗೆ ಬೆರೆವ ರಾಗ ಸಂಗೀತ ಸುಧೆಯನ್ನೇ ಹರಿಸುತ್ತಿತ್ತು. 84ರ ಇಳಿವಯಸ್ಸಿನಲ್ಲೂ ಆಕೆ ವೇದಿಕೆಯ ಮೇಲೆ ಬಂದರೆ, ವೇದಿಕೆಗೇ ಯೌವನ ಬಂತೇನೋ ಅನ್ನಿಸುತ್ತಿತ್ತು. ಆ ಧ್ವನಿಯಲ್ಲಾಗಲಿ, ಅವರ ನಡೆ-ನುಡಿಯಲ್ಲಾಗಲಿ ವಯೋಸಹಜ ದಣಿವಿನ ಕುರುಹೂ ಕಾಣುತ್ತಿರಲಿಲ್ಲ.

ಅವರ ಸಂಗೀತ ಸೇವೆಯನ್ನು ಪರಿಗಣಿಸಿದ ಭಾರತ ಸರ್ಕಾರ, ಪದ್ಮಭೂಷಣ (1987) ಮತ್ತು ಪದ್ಮವಿಭೂಷಣ(2002) ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಇನ್ನೊಂದು ವಾರದಲ್ಲಿ (ಏಪ್ರಿಲ್ 10) ತಮ್ಮ 85 ವರ್ಷದ ಹುಟ್ಟಿದ ದಿನವನ್ನು ಆಚರಿಸಿಕೊಳ್ಳಲಿದ್ದ ಕಿಶೋರಿ ನಿದ್ದೆಯಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಇಬ್ಬರು ಮಕ್ಕಳು ಮತ್ತು ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.

ಬಿಎಸ್-||| ನಿಷೇದದಿಂದ ವಾಣಿಜ್ಯ ವಾಹ‌ನ ಉತ್ಪಾದನೆ

ಬಿಎಸ್-III ನಿಷೇಧದಿಂದ ವಾಣಿಜ್ಯ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ: ಕ್ರಿಸಿಲ್

ಮುಂಬೈ: ಏಪ್ರಿಲ್ 1 ರಿಂದ ಬಿಎಸ್ 3 ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿಷೇಧ ಆದೇಶದ ನಂತರ ಭಾರಿ ರಿಯಾಯಿತಿ ದರದಲ್ಲಿ ಬಿಎಸ್ 3 ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ ಉಂಟಾಗಲಿದೆ ಎಂದು ವರದಿಯೊಂದು ಹೇಳಿದೆ.  ಸಂಶೋಧನಾ ಸಂಸ್ಥೆ ಕ್ರಿಸಿಲ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ರಿಯಾಯಿತಿ ದರದಲ್ಲಿ ಈಗಾಗಲೇ ವಾಹನಗಳನ್ನು ಮಾರಟ ಮಾಡಿರುವುದರಿಂದ 1,200 ಕೋಟಿ ನಷ್ಟವಾಗಿದೆ. ಇನ್ನು ಮಾರಾಟವಾಗದೇ ಉಳಿದಿರುವ ವಾಹನಗಳಿಂದ  1,300 ಕೋಟಿ ರೂಪಾಯಿ ನಷ್ಟ ಉಂತಾಗಲಿದ್ದು, ಒಟ್ಟು 2,500 ಕೋಟಿ ರೂ ನಷ್ಟವಾಗಲಿದೆ ಎಂದು ಕ್ರಿಸಿಲ್ ಅಂದಾಜಿಸಿದ್ದು ವಾಹನ ತಯಾರಿಕಾ ಸಂಸ್ಥೆಗಳ ಒಟ್ಟಾರೆ ಲಾಭದಲ್ಲಿ ಶೇ.2.5 ರಷ್ಟು ನಷ್ಟವಾಗಲಿದೆ.  ಮಾರಾಟವಾಗದೇ ಉಳಿದ ವಾಹನಗಳನ್ನು ಡೀಲರ್ ಗಳಿಂದ ವಾಪಸ್ ತಂದು ನಂತರ ಅದಕ್ಕೊಂದು ವ್ಯವಸ್ಥೆ ಮಾಡಬೇಕಿರುವುದರಿಂದ  2017-18 ನೇ ಸಾಲಿನ ಆರ್ಥಿಕ ವರ್ಶದ ಮೇಲೆಯೂ ಬಿಎಸ್-III ನಿಷೇಧ ಹಾಗೂ ರಿಯಾಯಿತಿ ದರದಲ್ಲಿ ವಾಹನಗಳ ಮಾರಾಟ ಪರಿಣಾಮ ಬೀರಲಿದೆ ಎಂದು ಕ್ರಿಸಿಲ್ ವಿಶ್ಲೇಷಿಸಿದೆ.
ಈಗಷ್ಟೇ ಮುಕ್ತಾಯಗೊಂಡಿರುವ 2016-17 ಆರ್ಥಿಕ ವರ್ಷಕ್ಕೆ ಬಿಎಸ್-III ನಿಷೇಧದಿಂದ ಇಬಿಐಟಿಡಿಎ ಮಾರ್ಜಿನ್ 100 ಬಿಪಿಎಸ್ ಕಡಿಮೆಯಾಗಲಿದೆ ಎಂದು ಕ್ರಿಸಿಲ್ ಹೇಳಿದೆ. 

ರೋಹಿಂಗ್ಯಾ (ಬರ್ಮಾ ಮೂಲದ ಮುಸ್ಲಿಂರು) ಗಡಿಪಾರಿಗೆ ಚಿಂತನೆ

ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರದ ಚಿಂತನೆ

ನವದೆಹಲಿ, ಏಪ್ರಿಲ್ 3: ಕಾನೂನು ಬಾಹಿರವಾಗಿ ಭಾರತದೊಳಕ್ಕೆ ನುಸುಳಿ, ಇಲ್ಲೇ ನೆಲೆಸಿರುವ ಮಿಯಾಮ್ನಾರ್ (ಬರ್ಮಾ) ಮೂಲದ ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರದೂಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈವರೆಗೆ, ಅವರು ಯಾವುದೇ ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವ ಬಗ್ಗೆ ಮಾಹಿತಿ ಇಲ್ಲವಾದರೂ, ನಿರಾಶ್ರಿತರಂತೆ ಆಗಮಿಸಿರುವ ಅವರನ್ನು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವ ಸಂಘಟನೆಗಳು, ವ್ಯಕ್ತಿಗಳು ಹಣದ ಆಮಿಷ ನೀಡಿ ಉಪಯೋಗಿಸಿಕೊಳ್ಳುವ ಸಾಧ್ಯತೆಗಳಿವೆ.

ಹಾಗಾದಲ್ಲಿ, ಈ ನಿರಾಶ್ರಿತರ ಗುಂಪುಗಳು ಸಂಘಟಿತ ಸ್ವರೂಪ ಪಡೆದುಕೊಂಡು ಭವಿಷ್ಯದಲ್ಲಿ ದೇಶಕ್ಕೆ ಮಾರಕವಾಗಬಹುದು ಎಂಬ ಬಗ್ಗೆ ಅನುಮಾನಗಳಿರುವುದರಿಂದ ಅವರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ.

ಮೂಲಗಳ ಪ್ರಕಾರ, ಭಾರತದಲ್ಲಿ ಬೀಡುಬಿಟ್ಟಿರುವ ಈ ನಿರಾಶ್ರಿತರು ಮೂಲತಃ ಬರ್ಮಾದ ರೋಹಿಂಗ್ಯಾ ಪ್ರಾಂತ್ಯದವರು. ಭಾರತ ಹಾಗೂ ಮಿಯಾಮ್ನಾರ್- ಬಾಂಗ್ಲಾ ದೇಶ ಗಡಿಗಳ ಮೂಲಕ ಅಕ್ರಮವಾಗಿ ನುಸುಳಿಕೊಂಡು ಭಾರತದೊಳಗ್ಗೆ ಇವರು ಬಂದು ನೆಲೆಸಿದ್ದಾರೆ ಹಾಗೂ ನೆಲೆಸುತ್ತಲೇ ಇದ್ದಾರೆ.

ಈ ಮೊದಲು ಇವರನ್ನು ನಿರಾಶ್ರಿತರೆಂದು ಪರಿಗಣಿಸಿದ್ದ ಕೇಂದ್ರ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ, ಮಾನವ ಕಳ್ಳಸಾಗಣೆಗೆ ನೆರವಾಗುತ್ತಿರುವ ಬಗ್ಗೆ ಆರೋಪಗಳಿವೆ.

ಭಾರತದಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಲು ಸದಾ ಹಪಹಪಿಸುವ ಭಯೋತ್ಪಾದಕರು ಇಂಥ ನಿರಾಶ್ರಿತರಿಗೆ ಹಣ ಇನ್ನಿತರ ಸೌಲಭ್ಯಗಳ ಆಸೆ ತೋರಿಸಿ ಅವರನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲು ಆರಂಭಿಸಿದ್ದಾರೆಂದೂ ಹೇಳಲಾಗುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರವು ಈ ಬಗ್ಗೆ ಎಚ್ಚೆತ್ತುಕೊಂಡಿದೆ.

ಗಾಯಕನಾಗಿ ಹೊಸ ಇನಿಂಗ್ಸ್ ಪ್ರಾಂಭಿಸಿದ ಸಚಿನ್

ಗಾಯಕನಾಗಿ ಹೊಸ ಇನಿಂಗ್ಸ್‌ ಪ್ರಾರಂಭಿಸಿದ ಸಚಿನ್‌

ಮುಂಬೈ:  ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಇನ್ನು ಮುಂದೆ ಗಾಯಕರೂ ಹೌದು. ತಮ್ಮ ಆಕರ್ಷಕ ಬ್ಯಾಟಿಂಗ್‌ ಮತ್ತು ದಾಖಲೆಗಳ ಮೂಲಕ  ಜನಪ್ರಿಯರಾದ ತೆಂಡೂಲ್ಕರ್‌, ಇದೇ ಮೊದಲ ಬಾರಿಗೆ ಹಾಡಿಗೆ ದನಿಯಾಗಿದ್ದಾರೆ.

ದೇಶದ ಮಹಾನ್ ಕ್ರಿಕೆಟ್‌ ತಾರೆಯರಿಗೆ ಅರ್ಪಿಸುವ ಸಲುವಾಗಿ ಸಿದ್ಧಪಡಿಸಿರುವ ಗೀತೆಯನ್ನು ತೆಂಡೂಲ್ಕರ್‌ ಹಾಡಿದ್ದಾರೆ. ಅವರ ಜತೆ ಗಾಯಕ ಸೋನು ನಿಗಂ ಕೂಡ ದನಿಗೂಡಿಸಿದ್ದಾರೆ.

‘ಸಚಿನ್ಸ್‌ ಕ್ರಿಕೆಟ್‌ವಾಲಿ ಬೀಟ್‌’ ಎಂಬ ಶೀರ್ಷಿಕೆಯ ಹಾಡಿಗೆ ಶಮೀರ್‌ ಟಂಡನ್‌  ಸ್ವರ ಸಂಯೋಜಿಸಿದ್ದಾರೆ. ಈ ಹಾಡನ್ನು ತೆಂಡೂಲ್ಕರ್‌ ಇತ್ತೀಚೆಗೆ ಆರಂಭಿಸಿದ ‘100 ಎಂಬಿ’ ಡಿಜಿಟಲ್‌ ವೇದಿಕೆಯ ಪ್ರಚಾರದ ಭಾಗವಾಗಿ ಸಿದ್ಧಪಡಿಸಲಾಗಿದೆ.

‘ಇದೇ ಮೊದಲ ಬಾರಿಗೆ  ನಾನು ಹಾಡುವುದನ್ನು ಜನ ನೋಡಲಿದ್ದಾರೆ. ನಾನು ಹಾಡುವುದನ್ನು ಅನಂದಿಸಿದಂತೆ ನನ್ನ ಎಲ್ಲ ಅಭಿಮಾನಿಗಳು ಕೇಳುವುದನ್ನೂ ಆನಂದಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ತೆಂಡೂಲ್ಕರ್‌ ಹೇಳಿದ್ದಾರೆ.

2011ರ ವಿಶ್ವಕಪ್‌ ಗೆದ್ದ ಆರನೇ ವಾರ್ಷಿಕೋತ್ಸವದ ದಿನವಾದ ಭಾನುವಾರ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಎಲ್ಲ ಆರು ವಿಶ್ವಕಪ್‌ಗಳಲ್ಲಿ ತಮ್ಮೊಂದಿಗೆ ಆಡಿದ ಪ್ರತಿ ಆಟಗಾರ ಹೆಸರನ್ನೂ ತೆಂಡೂಲ್ಕರ್‌ ಉಲ್ಲೇಖಿಸಿದರು.

ಬೆಂಗಳೂರಿನ "IISC" ಗೆ ಮೊದಲ ಸ್ಥಾನ

ಶಿಕ್ಷಣ ಸಂಸ್ಥೆಗಳ ರಾಂಕಿಂಗ್: ಐಐಎಸ್‌ಸಿಗೆ ಮೊದಲ ಸ್ಥಾನ

ಹೊಸದಿಲ್ಲಿ: ಕಳೆದ ತಿಂಗಳು "ಟೈಮ್ಸ್‌ ಹೈಯರ್‌ ಎಜುಕೇಶನ್‌' ಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿದ್ದ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸೋಮವಾರ ಪ್ರಕಟಿಸಿದ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ರಾಂಕಿಂಗ್ನ ಎಲ್ಲ ವಿಭಾಗಗಳಲ್ಲಿಯೂ ಅಗ್ರ ಸ್ಥಾನ ಪಡೆದುಕೊಂಡಿದೆ.

ನ್ಯಾಶನಲ್ಸ್‌ ಇನ್‌ಸ್ಟಿಟ್ಯೂಷನ್ಸ್‌ ರಾಂಕಿಂಗ್ ಫ್ರೆàಮ್‌ವರ್ಕ್‌ (ಎನ್‌ಐಆರ್‌ಎಫ್) ಸಿದ್ಧ ಪಡಿಸಿರುವ ಈ ರಾಂಕಿಂಗ್ ಪಟ್ಟಿಯಲ್ಲಿ ಏಳು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಕೂಡ ಟಾಪ್‌ 10ರಲ್ಲೇ ಸ್ಥಾನ ಪಡೆದುಕೊಂಡಿವೆ. ಟಾಪ್‌ 10ರ ಕಡೆಯ ಎರಡು ಸ್ಥಾನಗಳಲ್ಲಿ ಬನಾರಸ್‌ ಹಿಂದೂ ವಿವಿ (ಬಿಎಚ್‌ಯು) ಮತ್ತು ಜವಾಹರಲಾಲ್‌ ನೆಹರೂ ವಿವಿ (ಜೆಎನ್‌ಯು) ಇವೆ.

ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಈ ಕುರಿತು ಮಾಹಿತಿ ನೀಡಿದರು.
ಕಳೆದ ವರ್ಷ ಈ ಸಮಯದಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್‌ ಮತ್ತು ಎಂಜಿನಿಯರಿಂಗ್‌ ಹಾಗೂ ಸಮಗ್ರ ರಾಂಕಿಂಗ್ ಬಿಡುಗಡೆಗೊಳಿಸಲಾಗಿತ್ತು. ಸಮಗ್ರ ಮತ್ತು ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಎಸ್‌ಸಿ ಅಗ್ರಸ್ಥಾನ ಗಳಿಸಿ, ಈಗಲೂ ಆ ಸ್ಥಾನ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಉಗ್ರ ಅಫ‌jಲ್‌ ಗುರು ಪರ ಕಾರ್ಯಕ್ರಮದಿಂದ ವಿಶ್ವಾದ್ಯಂತ ಸುದ್ದಿಯಾಗಿದ್ದ ದಿಲ್ಲಿಯ ಜವಾಹರ್‌ಲಾಲ್‌ ನೆಹರೂ ವಿವಿ ಕಳೆದ ಬಾರಿ ಎರಡನೇ ಸ್ಥಾನದಲ್ಲಿತ್ತು. ಈ ಬಾರಿ ಉತ್ತಮ ವಿವಿಗಳ ಪಟ್ಟಿಯಲ್ಲಿ 2ನೇ ಸ್ಥಾನಗಳಿಸಿದೆ.

ಉತ್ತಮ ರಾಂಕಿಂಗ್ಗೆ ಹೆಚ್ಚು ನಿಧಿ: ಉತ್ತಮ ರಾಂಕಿಂಗ್ಗೆ ಹೆಚ್ಚಿನ ಅನುದಾನ ಮತ್ತು ಸ್ವಾಯತ್ತತೆ ಸಿಗಲಿದೆ. ಇದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ ಮಾತು. ಪಟ್ಟಿ ಬಿಡುಗಡೆಗೊಳಿಸಿದ ಅನಂತರ ಮಾತನಾಡಿದ ಅವರು, ವಿವಿಗಳು ಮತ್ತು ಕಾಲೇಜುಗಳ ನಡುವೆ ಉತ್ತಮ ಸ್ಪರ್ಧೆ ಏರ್ಪಡಲಿ ಎಂಬ ಉದ್ದೇಶದಿಂದ ಈ ರಾಂಕಿಂಗ್ ಪ್ರಕಟಿಸಲಾಗಿದೆ. ಹೆಚ್ಚಿನ ಶ್ರೇಣಿ ಪಡೆದ ಸಂಸ್ಥೆಗಳಿಗೆ ಸರಕಾರದ ಹೆಚ್ಚುವರಿ ಸೌಲಭ್ಯ ದೊರೆಯಲಿದೆ ಎಂದು ಹೇಳಿದ್ದಾರೆ.

ಐಐಎಸ್‌ಸಿ ವಿಶೇಷತೆ: ಬೆಂಗಳೂರಿನಲ್ಲಿರುವ ದೇಶದ ಪ್ರತಿಷ್ಠಿತ ಹಾಗೂ 108 ವರ್ಷಗಳ ಇತಿಹಾಸವುಳ್ಳ ಶಿಕ್ಷಣ ಸಂಸ್ಥೆ ಐಐಎಸ್‌ಸಿ. ವೈಜ್ಞಾನಿಕ ಸಂಶೋಧನೆ ಮತ್ತು ಉನ್ನತ ಶಿಕ್ಷಣ ನೀಡುವ ಮುಕ್ತ ವಿಶ್ವವಿದ್ಯಾಲಯ ಇದಾಗಿದೆ. ಮೈಸೂರು ಮಹಾರಾಜ ನಾಲ್ಕನೇ ಕೃಷ್ಣರಾಜ ಒಡೆಯರ್‌ ಮತ್ತು ಜೆಮ್‌ಶೇಟ್‌ಜೀ ಟಾಟಾ ಅವರ ಸಹಕಾರದಿಂದ 1909ರಲ್ಲಿ ಆರಂಭವಾಯಿತು. ಈಗಲೂ ಇದನ್ನು "ಟಾಟಾ ಇನ್‌ಸ್ಟಿಟ್ಯೂಟ್‌' ಎಂದು ಕರೆಯಲಾಗುತ್ತದೆ. ವಿಶ್ವದ ಅಗ್ರಸ್ಥಾನದಲ್ಲಿರುವ ವಿಶ್ವವಿದ್ಯಾಲಯ ಗಳಲ್ಲಿ ಇದೂ ಒಂದು. ಐಐಎಸ್‌ಸಿಯಲ್ಲಿ 3,700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ರಾಜ್ಯದ ಎರಡು ಕಡೆಗಳಲ್ಲಿ ಕ್ಯಾಂಪಸ್‌ ಇದ್ದು, ಪ್ರಧಾನ ಕ್ಯಾಂಪಸ್‌ ಬೆಂಗ ಳೂರು ನಗರದ ಉತ್ತರ ಭಾಗದಲ್ಲಿದೆ. ಇನ್ನೊಂದು ಕ್ಯಾಂಪಸ್‌ ಚಳ್ಳಕೆರೆಯಲ್ಲಿದೆ. ಐಐಎಸ್‌ಸಿ ವಿಶ್ವದ ಟಾಪ್‌ 10 ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೊದಲ ವಿಶ್ವವಿದ್ಯಾಲಯ.

ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಉತ್ತಮ ಸ್ಥಾನ ಗಳಿಸಿರುವ ಸಂಸ್ಥೆಗಳಿಗೆ ಮುಂದಿನ ದಿನಗಳಲ್ಲಿ ಸ್ವಾಯತ್ತೆ, ಹೆಚ್ಚಿನ ಧನ ಸಹಾಯ ಮತ್ತು ಇತರ ನೆರವನ್ನು ನೀಡಲಾಗುತ್ತದೆ. ಈ ಬಗ್ಗೆ ಶೀಘ್ರ ನಿರ್ಧಾರ ಪ್ರಕಟಿಸಲಾಗುತ್ತದೆ.
-ಪ್ರಕಾಶ್‌ ಜಾವಡೇಕರ್‌,
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

ಬೆಂಗಳೂರು 3 ನೇ ಅತೀ ಅಗ್ಗದ ನಗರಿ

ಬೆಂಗ್ಳೂರು 3ನೇ ಅತಿ ಅಗ್ಗದ ನಗರಿ!

ನವದೆಹಲಿ: ವಿಶ್ವದ ಅತಿ ಅಗ್ಗದ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗೆ 3ನೇ ಸ್ಥಾನ! ಆರ್ಥಿಕ ಗುಪ್ತಚರ ಘಟಕ (ಯುಐಯು) ಈ ಪಟ್ಟಿ ತಯಾರಿಸಿದ್ದು, ಚೆನ್ನೈಗೆ 6ನೇ ಸ್ಥಾನ, ಮುಂಬೈ 7 ಮತ್ತು ನವದೆಹಲಿಗೆ 10ನೇ ಸ್ಥಾನ ಲಭ್ಯವಾಗಿದೆ. ನಗರವಾಸಿಗಳ ಜೀವನಶೈಲಿ, ವಾಸಯೋಗ್ಯ ಸ್ಥಳ, ಜೀವನ ನಿರ್ವಹಣೆ ವೆಚ್ಚ ಮುಂತಾದ ಸಂಗತಿಗಳನ್ನು ಮಾನದಂಡವಾಗಿರಿಸಿಕೊಂಡು ಈ ಪಟ್ಟಿ ಸಿದ್ಧಪಡಿಸಲಾಗಿದೆ. ವಿಶ್ವದ ದುಬಾರಿ ನಗರಗಳ ಪಟ್ಟಿಯನ್ನೂ ಯುಐಯು ತಯಾರಿಸಿದ್ದು, ನಂ.1 ಸ್ಥಾನ ಸಿಂಗಾ ಪುರದ ಪಾಲಾಗಿದೆ. 4ನೇ ಸ್ಥಾನದಲ್ಲಿ ಟೊಕಿಯೊ, ಒಸಾಕಾ 5, ಸಿಯೋಲ್‌ 6ನೇ ಸ್ಥಾನದಲ್ಲಿದ್ದು, ಕಳೆದವರ್ಷ ಲಕ್ಷುರಿ ಸಿಟಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಲಾಸ್‌ಏಂಜಲೀಸ್‌ ಈ ಬಾರಿ 11ನೇ ಸ್ಥಾನಕ್ಕೆ ಕುಸಿದಿದೆ.

ಆನಂದಭರಿತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 122ನೇ ಸ್ಥಾನ!

ಲಂಡನ್‌: ವಿಶ್ವದ ಸಂತೋಷಭರಿತ ದೇಶಗಳ ಪಟ್ಟಿಯಲ್ಲಿ ಭಾರತ 3 ಸ್ಥಾನ ಕುಸಿತ ಕಂಡಿದ್ದು, 122ನೇ ಸ್ಥಾನ ಅಲಂಕರಿಸಿದೆ. ಅಚ್ಚರಿಯೆಂದರೆ, ನೆರೆಯ ರಾಷ್ಟ್ರ ಪಾಕಿಸ್ತಾನ 80ನೇ ಸ್ಥಾನ, ಇರಾಕ್‌ 117ನೇ ಸ್ಥಾನದಲ್ಲಿದ್ದು, ಭಾರತವನ್ನು ಹಿಂದಿಕ್ಕಿವೆ!
ಜಿಡಿಪಿ, ಭ್ರಷ್ಟಾಚಾರ, ಅಭಿವೃದ್ಧಿ ಮುಂತಾದ ಸಂಗತಿ ಆಧರಿಸಿ ತಯಾರಿಸುವ ಹ್ಯಾಪಿನೆಸ್‌ ಪಟ್ಟಿ ಇದಾಗಿದ್ದು, ಕಳೆದವರ್ಷ ಭಾರತ 118ನೇ ಸ್ಥಾನದಲ್ಲಿತ್ತು. ಡೆನ್ಮಾರ್ಕ್‌ ಅನ್ನು 3ನೇ ಸ್ಥಾನಕ್ಕೆ ತಳ್ಳಿ, ನಾರ್ವೆ ವಿಶ್ವದ "ಅತ್ಯಂತ ಆನಂದಭರಿತ ರಾಷ್ಟ್ರ' ಎಂಬ ಹಿರಿಮೆಗೆ ಪಾತ್ರವಾಗಿದೆ. 79ನೇ ಸ್ಥಾನದಲ್ಲಿ ಚೀನಾ, ನೇಪಾಳ 99, ಶ್ರೀಲಂಕಾ 120ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿವೆ.