ಶುಕ್ರವಾರ, ಫೆಬ್ರವರಿ 5, 2021

Union Budget 2021: 42 ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ₹2,217 ಕೋಟಿ

Union Budget 2021: 42 ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ 2,217 ಕೋಟಿ

ಪಿಟಿಐ Updated: 
prajavani

ಪ್ರಾತಿನಿಧಿಕ ಚಿತ್ರ

ನವದೆಹಲಿ: ದೇಶದ 42 ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಿಸುವ ಕಾರ್ಯಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 2,217 ಕೋಟಿ ಮೀಸಲಿಟ್ಟಿದೆ.

‘10 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಒತ್ತು ನೀಡಲಾಗುವುದು’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಇದನ್ನು ಹೊರತುಪಡಿಸಿ ಪರಿಸರ ಸಚಿವಾಲಯಕ್ಕೆ ಈ ಬಜೆಟ್‌ನಲ್ಲಿ 2869.93 ಕೋಟಿ ನಿಗದಿಪಡಿಸಲಾಗಿದೆ. ಆದರೂ, ಕಳೆದ ಬಜೆಟ್‌ಗೆ ಹೋಲಿಸಿದರೆ  2021–22ರಲ್ಲಿ ಸಚಿವಾಲಯಕ್ಕೆ ನೀಡಿದ ಅನುದಾನದಲ್ಲಿ ಶೇ 8ರಷ್ಟು ಕಡಿಮೆಯಾಗಿದೆ.

ಅಲ್ಲದೆ, ರಾಷ್ಟ್ರ ರಾಜಧಾನಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಯ ಉದ್ದೇಶಕ್ಕಾಗಿ ಹೊಸದಾಗಿ ರಚಿಸಲಾಗಿರುವ ಆಯೋಗಕ್ಕೆ ಇದೇ ಮೊದಲ ಬಾರಿಗೆ ಬಜೆಟ್‌ನಲ್ಲಿ 20 ಕೋಟಿ ಅನುದಾನ ನಿಗದಿಪಡಿಸಲಾಗಿದೆ.

ಈ ಬಾರಿ ಹವಾಮಾನ ಬದಲಾವಣೆ ಕ್ರಿಯಾಯೋಜನೆಗೆ ಮೀಸಲಿಟ್ಟ ಅನುದಾನದಲ್ಲಿ 10 ಕೋಟಿ ಹಾಗೂ ಹುಲಿ ಸಂರಕ್ಷಣಾ ಯೋಜನೆಯ ಅನುದಾನದಲ್ಲಿ 50 ಕೋಟಿ ಕಳೆದ ಸಾಲಿಗೆ ಹೋಲಿಸಿದರೆ ಕಡಿತವಾಗಿದೆ. ಈ ವರ್ಷ ಕ್ರಿಯಾಯೋಜನೆಗೆ 30 ಕೋಟಿ ಘೋಷಿಸಲಾಗಿದೆ.

ಆದರೆ, ರಾಷ್ಟ್ರೀಯು ಕೋಸ್ಟಲ್ ಮಿಷನ್‌ಗೆ ಈ ಬಜೆಟ್‌ನಲ್ಲಿ ಮೊತ್ತವನ್ನು ದುಪ್ಪಟ್ಟುಗೊಳಿಸಿದ್ದು, ಒಟ್ಟಾರೆ 200 ಕೋಟಿ ನಿಗದಿಪಡಿಸಲಾಗಿದೆ. ಕಳೆದ ವರ್ಷ 103 ಕೋಟಿ ನಿಗದಿಪಡಿಸಲಾಗಿತ್ತು. ಮೀನುಗಾರರು, ಕರಾವರಿ ತೀರ ರಕ್ಷಣೆಯಲ್ಲಿ ತೊಡಗಿರುವ ಸಮುದಾಯಗಳಿಗೆ ಜೀವನಭದ್ರತೆಯನ್ನು ಈ ಮಿಷನ್‌ ನಡಿ ಒದಗಿಸಲಾಗುತ್ತದೆ.

‘ಹಳೆಯ ವಾಹನಗಳ ವಾಪಸ್‌ಗೆ ಕ್ರಮ‘: ಅಲ್ಲದೆ, ಹಳೆಯ ಹಾಗೂ ವಾಯುಮಾಲಿನ್ಯಕ್ಕೆ ಪ್ರಮುಖವಾಗಿ ಕಾರಣವಾಗುವ ವಾಹನಗಳನ್ನು ಹಂತ ಹಂತವಾಗಿ ಸ್ವಯಂಪ್ರೇರಿತವಾಗಿ ಬಳಕೆಯಿಂದ ಹಿಂಪಡೆಯುವ ಕಾರ್ಯಕ್ರಮವನ್ನೂ ಕೇಂದ್ರವು ಪ್ರಕಟಿಸಿದೆ. ಅದರಂತೆ, ವೈಯಕ್ತಿಕ ಬಳಕೆಯ ವಾಹನಗಳಿಗೆ 20 ವರ್ಷದ ನಂತರ ತಪಾಸಣೆಗೆ ಒಳಪಡಿಸಿ ಸುಸ್ಥಿತಿಯಲ್ಲಿದೆ ಎಂದು ಪ್ರಮಾಣಪತ್ರ ಪಡೆಯುವುದು ಅಗತ್ಯ. ವಾಣಿಜ್ಯ ಉದ್ದೇಶದ ವಾಹನಗಳನ್ನು 15 ವರ್ಷಗಳ ತರುವಾಯ ತಪಾಸಣೆಗೆ ಒಳಪಡಿಸಿ ಪ್ರಮಾಣಪತ್ರ ಪಡೆಯುವುದು ಅಗತ್ಯ.

ಈ ನೀತಿಯ ವ್ಯಾಪ್ತಿಗೆ ಸುಮಾರು 1 ಕೋಟಿಯಷ್ಟು ಹಳೆಯ ಹಗುರ, ಮಧ್ಯಮ ಮತ್ತು ಭಾರಿ ವಾಹನಗಳು ಒಳಪಡಲಿವೆ. ಈ ವಾಹನಗಳು ಹೊಸ ವಾಹನಗಳಿಗಿಂತಲೂ ಶೇ 10 ರಿಂದ 12 ಪಟ್ಟು ಹೆಚ್ಚು ಹೊಗೆಯನ್ನು ವಾತಾವರಣಕ್ಕೆ ಸೇರಿಸುತ್ತವೆ ಎಂದು ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯಿಸಿದರು.

Union Budget 2021: ನಮ್ಮ ಮೆಟ್ರೊ 2ಎ, 2ಬಿ ಮಾರ್ಗಗಳಿಗೆ ಅನುದಾನ

Union Budget 2021: ನಮ್ಮ ಮೆಟ್ರೊ 2ಎ, 2ಬಿ ಮಾರ್ಗಗಳಿಗೆ ಅನುದಾನ

ಪ್ರಜಾವಾಣಿ ವಾರ್ತೆ Updated: 
prajavani

ನಮ್ಮ ಮೆಟ್ರೊ –ಸಾಂದರ್ಭಿಕ ಚಿತ್ರ

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆಯ 2ಎ ಮತ್ತು 2ಬಿ  ಮಾರ್ಗಗಳಿಗೆ ಕೇಂದ್ರದ ಪಾಲಿನ ಅನುದಾನ ಒದಗಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2021–22ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ನಮ್ಮ ಮೆಟ್ರೊ 2ಎ ಮಾರ್ಗವು ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರದವರೆಗೆ ಹಾಗೂ 2 ಬಿ ಮಾರ್ಗವು ಕೆ.ಆರ್‌.ಪುರದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಿರ್ಮಾಣವಾಗಲಿದೆ. ಒಟ್ಟು 58.19 ಕಿ.ಮೀ ಉದ್ದದ ಈ ಮಾರ್ಗಗಳ  ಕಾಮಗಾರಿಗೆ 14,788 ಕೋಟಿ ವೆಚ್ಚವಾಗಲಿದೆ. ಇದರಲ್ಲಿ ಕೇಂದ್ರವು ಹೆಚ್ಚೂ ಕಡಿಮೆ ಶೇ 20ರಷ್ಟು ಪಾಲನ್ನು ಭರಿಸಲಿದೆ.

‘ಈ ಎರಡು ಮಾರ್ಗಗಳಿಗೆ ಕೇಂದ್ರದಿಂದ ನಿಖರವಾಗಿ ಎಷ್ಟು ಮೊತ್ತ ಸಿಗಲಿದೆ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ. ಇದರಲ್ಲಿ ಮೂಲ ಬಂಡವಾಳ ವೆಚ್ಚ, ಭೂಮಿ ವೆಚ್ಚ, ತೆರಿಗೆಗೆ ಸಂಬಂಧಿಸಿದ ವೆಚ್ಚಗಳು ಸೇರಿಸಿ ಈ ಮೊತ್ತವನ್ನು ಲೆಕ್ಕಾಚಾರ ಹಾಕಬೇಕಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಚ್ಚರಿಯ ವಿಷಯವೆಂದರೆ ಈ ಎರಡೂ ಮಾರ್ಗಗಳಿಗೂ ಕೇಂದ್ರ ಸಚಿವ ಸಂಪುಟ ಇನ್ನೂ ಅನುಮೋದನೆ ನೀಡಿಲ್ಲ. ಕೇಂದ್ರದ ಅನುಮೋದನೆಗಾಗಿ ಬಿಎಂಆರ್‌ಸಿಎಲ್‌ ಮೂರು ವರ್ಷಗಳಿಂದ ಕಾಯುತ್ತಿದೆ.

‘ಈ ಎರಡು ಮಾರ್ಗಗಳಿಗೆ ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಅನುದಾನವನ್ನೂ ಬಿಡುಗಡೆ ಮಾಡಿದೆ. ಅದರಲ್ಲೇ ಭೂಸ್ವಾಧೀನ ಹಾಗೂ ಅಗತ್ಯ ಮೂಲಸೌಕರ್ಯಗಳ ಸ್ಥಳಾಂತರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಈಗ ಈ ಯೋಜನೆಗಳ ಬಗ್ಗೆ ಹಣಕಾಸು ಸಚಿವರು ಬಜೆಟ್‌ನಲ್ಲೇ ಪ್ರಸ್ತಾಪಿಸಿರುವುದರಿಂದ ಎರಡನೇ  ಹಂತದ ಈ ಎರಡೂ ವಿಸ್ತರಿತ ಮಾರ್ಗಗಳಿಗೂ ಕೇಂದ್ರದಿಂದ ಶೀಘ್ರವೇ ಅನುಮೋದನೆ ಸಿಗುವ ಭರವಸೆ ಮೂಡಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ತಿಳಿಸಿದರು.

‘ವಿಮಾನನಿಲ್ದಾಣಕ್ಕೆ ಮೆಟ್ರೊ  ಸಂಪರ್ಕ ಕಲ್ಪಿಸುವ ಯೋಜನೆಗೆ ಅನುಮೋದನೆ ನೀಡದಿದ್ದರೂ ಕೇಂದ್ರದ ಪಾಲಿಗೆ ಅನುದಾನ ಬಿಡುಗಡೆ ಬಗ್ಗೆ ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವರು ಪ್ರಸ್ತಾಪಿಸಿರುವುದು ಸ್ವಾಗತಾರ್ಹ. ಆದರೆ, ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರ ವರ್ಷಾನುಗಟ್ಟಲೆ ಸತಾಯಿಸುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ’ ಎಂದು ‘ಪ್ರಜಾರಾಗ್‌’ನ ಸಂಜೀವ ದ್ಯಾಮಣ್ಣವರ್‌ ಅಚ್ಚರಿ ವ್ಯಕ್ತಪಡಿಸಿದರು.

ಉಪನಗರ ರೈಲು ಯೋಜನೆಯ ಉಲ್ಲೇಖವಿಲ್ಲ

ಉಪನಗರ ರೈಲು ಯೋಜನೆಗೆ ಬಜೆಟ್‌ನಲ್ಲಿ ಎಷ್ಟು ಅನುದಾನ ಕಾಯ್ದಿರಿಸಲಾಗಿದೆ ಎಂದು ಬಜೆಟ್‌ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್‌ ಉಲ್ಲೇಖಿಸಿಲ್ಲ. ರೈಲ್ವೆ ಇಲಾಖೆಯ ಪಿಂಕ್‌ ಬುಕ್‌ ಬಿಡುಗಡೆಯಾದ ಬಳಿಕವೇ ಈ ಕುರಿತ ವಿವರಗಳು ಸಿಗಲಿವೆ.

ನಗರದಲ್ಲಿ ಉಪನಗರ ರೈಲು ಸೇವೆಗೆ ಮೂಲಸೌಕರ್ಯ ಕಲ್ಪಿಸುವ 15,767 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ 2020ರಲ್ಲಿ ಅನುಮೋದನೆ ನೀಡಿತ್ತು. ಒಟ್ಟು ಮೊತ್ತದಲ್ಲಿ 2,479 ಕೋಟಿಯನ್ನು ಕೇಂದ್ರ ಭರಿಸಲಿದೆ. ಆದರೆ, ರೈಲ್ವೆ ಸಚಿವಾಲಯವು ಅನುದಾನದ ರೂಪದಲ್ಲಿ  500 ಕೋಟಿಯನ್ನು ಮಾತ್ರ ನೀಡಲಿದ್ದು, ತನ್ನ ಪಾಲಿನ ಉಳಿದ ಮೊತ್ತವನ್ನು ರೈಲ್ವೆ ಜಾಗದ ನಗದೀಕರಣದಿಂದ ಹೊಂದಿಸಲು ಸೂಚಿಸಿತ್ತು.

‘ಹೈಸ್ಪೀಡ್‌ ರೈಲು– ದೇಸೀಕರಣ ಅಗತ್ಯ’

‘ದೇಶದ ರೈಲ್ವೆ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಭರಪೂರ ಅನುದಾನ ಪ್ರಕಟಿಸಿದ್ದಾರೆ. ಆದರೆ, ಹೈಸ್ಪೀಡ್‌ ರೈಲು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ನಮ್ಮ ದೇಶವು ಹಿಂದೆ ಬಿದ್ದಿದೆ’ ಎಂದು ಸಂಜೀವ ದ್ಯಾಮಣ್ಣವರ್‌ ಅಭಿಪ್ರಾಯಪಟ್ಟರು. 

‘ಹೈಸ್ಪೀಡ್‌ ರೈಲು ತಂತ್ರಜ್ಞಾನವನ್ನು ನಮ್ಮ ದೇಶದಲ್ಲೇ ಅಭಿವೃದ್ಧಿಪಡಿಸುವುದು, ಬೋಗಿಗಳ ವಿನ್ಯಾಸ, ಹಳಿಗಳ ಸುಧಾರಣೆ, ಸುರಕ್ಷತಾ ಅಂಶಗಳ ಸುಧಾರಣೆಗೆ ಮತ್ತು ಸಂಶೋಧನೆಗೆ ಸಮಗ್ರ ಕಾರ್ಯಕ್ರಮ ರೂಪಿಸುವ ಅಗತ್ಯವಿತ್ತು. ಈ ವಿಚಾರದಲ್ಲಿ ಚೀನಾ ನಮಗಿಂತ ತುಂಬಾ ಮುಂದಿದೆ. ಶೇ 70ರಷ್ಟು ಮೆಟ್ರೊ ಸೌಕರ್ಯವನ್ನು ದೇಸೀಯವಾಗಿ ಅಭಿವೃದ್ಧಿಪಡಿಸುವಲ್ಲಿ ಸಫಲರಾಗಿದ್ದೇವೆ. ಅದೇ ರೀತಿ ಹೈಸ್ಪೀಡ್‌ ರೈಲು ಸಂಪರ್ಕಕ್ಕೂ ಒತ್ತು ನೀಡದೇ ಹೋದರೆ ಈ ಕ್ಷೇತ್ರದಲ್ಲಿ ಆತ್ಮನಿರ್ಭರ ಗುರಿ ಸಾಧನೆ ಸಾಧ್ಯವಾಗದು’ ಎಂದರು. 

‘ರೈಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೆ ಬಜೆಟ್‌ನಲ್ಲಿ ಒತ್ತು ನೀಡಿರುವುದು ಸ್ವಾಗತಾರ್ಹ. ಇದರಿಂದ ರಾಜ್ಯದ ಅನೇಕ ರೈಲು ಮಾರ್ಗಗಳ ವಿದ್ಯುದೀಕರಣ ಕಾಮಗಾರಿಗಳಿಗೂ ಅನುಕೂಲವಾಗಲಿದೆ. ಇನ್ನೆರಡು ವರ್ಷಗಳಲ್ಲಿ ರಾಜ್ಯದ ಎಲ್ಲ ರೈಲು ಮಾರ್ಗಗಳು ವಿದ್ಯುದೀಕರಣಗೊಳ್ಳಲಿವೆ’ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

Union Budget 2021: 15 ಸಾವಿರ ಮಾದರಿ ಶಾಲೆ

Union Budget 2021: 15 ಸಾವಿರ ಮಾದರಿ ಶಾಲೆ

ಪ್ರಜಾವಾಣಿ ವಾರ್ತೆ Updated: 
prajavani

ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಾದ್ಯಂತ 15 ಸಾವಿರ ಶಾಲೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಅಂಶಗಳಡಿಯಲ್ಲಿ ಗುಣಾತ್ಮಕವಾಗಿ ಸದೃಢಗೊಳಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದ್ದು, ಆಯಾ ಪ್ರದೇಶಗಳಲ್ಲಿ ಅವುಗಳು ನೀತಿಯಲ್ಲಿನ ಧ್ಯೇಯವನ್ನು ಸಾಧಿಸಲು ಇತರೆ ಶಾಲೆಗಳಿಗೆ ಮಾದರಿ ಶಾಲೆಗಳಾಗಿ ಹೊರಹೊಮ್ಮಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಸರ್ಕಾರೇತರ ಸಂಸ್ಥೆ(ಎನ್‌ಜಿಒ), ಖಾಸಗಿ ಶಾಲೆಗಳು ಹಾಗೂ ರಾಜ್ಯಗಳ ಸಹಭಾಗಿತ್ವದಲ್ಲಿ 100 ಸೈನಿಕ ಶಾಲೆಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. 2019–20ನೇ ಬಜೆಟ್‌ನಲ್ಲಿ ಭಾರತದಲ್ಲಿ ಉನ್ನತ ಶಿಕ್ಷಣ ಆಯೋಗದ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದೆ. ಇದನ್ನು ಅನುಷ್ಠಾನಗೊಳಿಸಲು ಈ ವರ್ಷ ಶಾಸನ ರಚನೆ ಮಾಡಲಾಗುವುದು ಎಂದರು.

ನೂತನ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಲೇಹ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ಬುಡಕಟ್ಟು ಪ್ರದೇಶಗಳಲ್ಲಿ 750 ಏಕಲವ್ಯ ಮಾದರಿ ವಸತಿ ಶಾಲೆ ನಿರ್ಮಾಣ ಮಾಡುವುದಾಗಿ ಘೋಷಿಸಿದರು. ಈ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಮೂಲಸೌಕರ್ಯ ವ್ಯವಸ್ಥೆ ದೊರೆಯಲು, ಪ್ರತಿ ಶಾಲೆಗೆ 20 ಕೋಟಿಯ ಬದಲಾಗಿ 38 ಕೋಟಿ ನೀಡಲಾಗುವುದು, ಗುಡ್ಡಗಾಡು ಪ್ರದೇಶಗಳಲ್ಲಿ ನಿರ್ಮಾಣವಾಗಲಿರುವ ಶಾಲೆಗಳಿಗೆ 48 ಕೋಟಿ ನೀಡಲಾಗುವುದು ಎಂದರು.

ಎನ್‌ಇಪಿಯ ಭಾಗವಾಗಿ ಶಿಕ್ಷಣ ಕ್ಷೇತ್ರದ ಯೋಜನೆಗಳು

*ಎನ್‌ಇಪಿಯಡಿ ಶಿಕ್ಷಕರ ಗುಣಮಟ್ಟ ಹೆಚ್ಚಳಕ್ಕೆ ‘ನ್ಯಾಷನಲ್‌ ಪ್ರೊಫೆಷನಲ್‌ ಸ್ಟ್ಯಾಂಡರ್ಡ್ಸ್‌ ಫಾರ್‌ ಟೀಚರ್ಚ್‌(ಎನ್‌ಪಿಎಸ್‌ಟಿ) ಅಭಿವೃದ್ಧಿ.

*ಡಿಜಿಟಲ್‌ ಶಿಕ್ಷಣಕ್ಕೆ ಒತ್ತು ನೀಡಲು ‘ನ್ಯಾಷನಲ್‌ ಡಿಜಿಟಲ್‌ ಎಜುಕೇಷನಲ್‌ ಆರ್ಕಿಟೆಕ್ಚರ್‌(ಎನ್‌ಡಿಇಎಆರ್‌) ಸ್ಥಾಪನೆ.

*ಕಿವಿ ಕೇಳದ ಮಕ್ಕಳಿಗಾಗಿ ಆಂಗಿಕ ಭಾಷೆಯ ಮಾನಕೀಕರಣ ಹಾಗೂ ಅವರ ಬಳಕೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪಠ್ಯಕ್ರಮ ಅಭಿವೃದ್ಧಿ

*ಶಾಲಾ ಶಿಕ್ಷಕರಿಗೆ ಪಠ್ಯವಿಷಯಗಳ ಕುರಿತು ಸಲಹೆ ಸೂಚನೆ ನೀಡಲು ನಿವೃತ್ತ ಹಾಗೂ ಹಿರಿಯ ಶಿಕ್ಷಕರ ಬಳಕೆಯನ್ನು ಕೇಂದ್ರವು ಘೋಷಿಸಿದೆ. 

*ಆಟಿಕೆಗಳು ಮನರಂಜನೆ ಹಾಗೂ ಕಲಿಕೆಯ ಅಭಿವ್ಯಕ್ತಿಯಾಗಿದೆ. ಎಲ್ಲ ಹಂತದ ಶಾಲಾ ಶಿಕ್ಷಣಕ್ಕೆ ಆಟಿಕೆ ಆಧಾರಿತ ಕಲಿಕೆಯ ಅಭಿವೃದ್ಧಿ. ಇದರಿಂದ ಮಕ್ಕಳಲ್ಲಿ ಕಲಿಕೆಯಲ್ಲಿ ಆಸಕ್ತಿ ಹೆಚ್ಚಲಿದ್ದು, ತರಗತಿ ಪಾಠದ ವಾತಾವರಣ ಬದಲಾಗಲಿದೆ. 

*ಇಲ್ಲಿಯವರೆಗೂ ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದಲ್ಲಷ್ಟೇ ಅರ್ಹತೆಯನ್ನು ನಿರ್ಧರಿಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಪ್ರತಿ ಮಗುವಿನ ಆಸಕ್ತಿದಾಯಕ ಕ್ಷೇತ್ರಗಳನ್ನು ಗುರುತಿಸಲು ಹಾಗೂ ಅದನ್ನು ಪ್ರೋತ್ಸಾಹಿಸಲು ಆದ್ಯತೆ

2022–23ನೇ ಸಾಲಿನಿಂದ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯಲ್ಲಿ ಹಂತ ಹಂತವಾಗಿ ಸುಧಾರಣೆ ತಂದು ವಾಡಿಕೆ ಕಲಿಕೆ, ಪರೀಕ್ಷೆಯ ಬದಲಾಗಿ ವಾಸ್ತವ ಸ್ಥಿತಿಯಲ್ಲಿ ಮಕ್ಕಳು ತಮ್ಮ ಕಲಿಕೆಯನ್ನು ಹೇಗೆ ಅಳವಡಿಸುತ್ತಾರೆ, ವಿಶ್ಲೇಷಕ ಕೌಶಲ್ಯದ ಮುಖಾಂತರ ಅವರ ಪರೀಕ್ಷೆ ನಡೆಯಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.  

*35,219 ಕೋಟಿ: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಷ್ಕರಿಸಿದ್ದು, ಇದರಲ್ಲಿ ಕೇಂದ್ರದ ಪಾಲನ್ನು ಹೆಚ್ಚಿಸಲಾಗಿದೆ. 2025–26ರವರೆಗೆ ಈ ಯೋಜನೆಗೆ ಕೇಂದ್ರವು ಮೀಸಲಿರಿಸಿರುವ ಹಣ ಇದಾಗಿದೆ. ಇದರಿಂದ 4 ಕೋಟಿ ಎಸ್ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. 

Union Budget 2021: ಅಪೌಷ್ಟಿಕತೆ ನಿವಾರಣೆಗೆ ‘ಮಿಷನ್ ಪೋಷಣ್ 2.0’

Union Budget 2021: ಅಪೌಷ್ಟಿಕತೆ ನಿವಾರಣೆಗೆ ‘ಮಿಷನ್ ಪೋಷಣ್ 2.0’

ಪಿಟಿಐ Updated: 
prajavani

ಸಾಂದರ್ಭಿಕ ಚಿತ್ರ

ನವದೆಹಲಿ: ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ ಮತ್ತು ಪೋಷಣ್ ಅಭಿಯಾನವನ್ನು ವಿಲೀನಗೊಳಿಸಿ ‘ಮಿಷನ್ ಪೋಷಣ್‌ 2.0’ ಹೆಸರಿನಲ್ಲಿ ಯೋಜನೆ ಪ್ರಾರಂಭಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

‘ಪೌಷ್ಟಿಕಾಂಶ ಕುರಿತು ಜಾಗೃತಿ ಮೂಡಿಸಿ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮವನ್ನು ಬಲಪಡಿಸಲು ಈಗಾಗಲೇ ಆರಂಭಿಸಿರುವ ಪೋಷಣ್ ಅಭಿಯಾನ ಹಾಗೂ ಪೌಷ್ಟಿಕಾಂಶ ಕುರಿತು ಕಾರ್ಯಕ್ರಮಗಳನ್ನು ‘ಮಿಷನ್ ಪೋಷಣ್‌ 2.0’ ಯೋಜನೆಯಡಿ ವಿಲೀನಗೊಳಿಸಲಾಗುವುದು. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 112 ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಆ ಜಿಲ್ಲೆಗಳಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಲಾಗುವುದು’ ಎಂದು ನಿರ್ಮಲಾ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌), ಅಂಗನವಾಡಿ ಸೇವೆಗಳು, ಪೋಷಣ್ ಅಭಿಯಾನ, ಹದಿಹರೆಯದ ಬಾಲಕಿಯರ ಯೋಜನೆಗಳು ಇನ್ನು ಮುಂದೆ ‘ಮಿಷನ್ ಪೋಷಣ್ 2.0’ ಯೋಜನೆ ಅಡಿ ಒಂದೇ ಛಾವಣಿಯಡಿ ಸೇರ್ಪಡೆಗೊಳ್ಳಲಿವೆ.

ಅನುದಾನ ಶೇ 16ರಷ್ಟು ಏರಿಕೆ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಕೇಂದ್ರ ಸರ್ಕಾರವು 24,435 ಕೋಟಿ ಮೀಸಲಿರಿಸಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೀಸಲಿರಿಸಿರುವ ಮೊತ್ತದಲ್ಲಿ ಶೇ 16.31ರಷ್ಟು ಏರಿಕೆಯಾಗಿದೆ.

24,435 ಕೋಟಿ ಮೊತ್ತದಲ್ಲಿ 20,105 ಕೋಟಿಯನ್ನು ‘ಸಕ್ಷಮ್ ಅಂಗನವಾಡಿ’ ಯೋಜನೆ ಮತ್ತು ‘ಮಿಷನ್ ಪೋಷಣ್ 2.0’ಗೆ ಮೀಸಲಿರಿಸಲಾಗಿದೆ. ಭೇಟಿ ಬಚಾವೋ ಭೇಟಿ ಪಢಾವೋ, ಒನ್ ಸ್ಟಾಪ್ ಸೆಂಟರ್‌, ಸ್ವಾಧಾರ ಗೃಹ, ಮಕ್ಕಳ ರಕ್ಷಣೆ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಹದಿಹರೆಯದ ಬಾಲಕಿಯರ ಯೋಜನೆ ಮತ್ತು ಉಜ್ವಲ ಅಡುಗೆ ಅನಿಲ ಯೋಜನೆ ಸೇರಿದಂತೆ ಇತರ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಏನೂ ಹಂಚಿಕೆ ಮಾಡಿಲ್ಲ.

ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಸಚಿವಾಲಯದ ಸ್ವಾಯತ್ತ ಸಂಸ್ಥೆಗಳಾದ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (ಎನ್‌ಐಪಿಸಿಸಿಡಿ), ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆ (ಕಾರಾ), ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್), ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಕೇಂದ್ರ ಸಮಾಜ ಕಲ್ಯಾಣ ಮಂಡಳಿಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಹಿಂದಿಗಿಂತ ಹೆಚ್ಚಿನ ಮೊತ್ತದ ಹಣ ಮೀಸಲಿರಿಸಲಾಗಿದೆ. ಆದರೆ, ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣದ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ‌ 726 ಕೋಟಿ ಮೊತ್ತವನ್ನು 48 ಕೋಟಿಗೆ ಇಳಿಸಲಾಗಿದೆ.

Union Budget 2021: ಆದ್ಯತೆ ಪಡೆದ ಮೂಲಸೌಕರ್ಯ

Union Budget 2021: ಆದ್ಯತೆ ಪಡೆದ ಮೂಲಸೌಕರ್ಯ

ಪ್ರಜಾವಾಣಿ ವಾರ್ತೆ Updated: 
prajavani

ಸಾಂದರ್ಭಿಕ ಚಿತ್ರ

ಬಜೆಟ್‌ನಲ್ಲಿ ಹೆದ್ದಾರಿ ವಿಭಾಗಕ್ಕೆ 1.18 ಲಕ್ಷ ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಅತಿಹೆಚ್ಚಿನ ಮೊತ್ತ ಎಂದಿದ್ದಾರೆ. ದಾಖಲೆ ಮೊತ್ತ ಹಣ ನಿಗದಿಪಡಿಸಿರುವುದರಿಂದ ಪ್ರಮುಖ ಹೆದ್ದಾರಿ ಕಾರಿಡಾರ್‌ಗಳು ತ್ವರಿತವಾಗಿ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ. ಕೆಲವು ಪ್ರಮುಖ ಕಾರಿಡಾರ್‌ಗಳು ಮತ್ತು ಇತರ ಪ್ರಮುಖ ಯೋಜನೆಗಳು 2021-22ರಲ್ಲಿ ಸಾಕಷ್ಟು ಚಟುವಟಿಕೆಯನ್ನು ಕಾಣಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿ ಕಾರಿಡಾರ್

* ತಮಿಳುನಾಡು: 1.02 ಲಕ್ಷ ಕೋಟಿ ವೆಚ್ಚದಲ್ಲಿ 3,500 ಕಿಲೋಮೀಟರ್ ರಸ್ತೆ ಅಭಿವೃದ್ಧಿ; ಮದುರೈ–ಕೊಲ್ಲಂ ಕಾರಿಡಾರ್, ಚಿತ್ತೂರು–ತಟ್ಚೂರು ಕಾರಿಡಾರ್ ಮಾರ್ಗದ ರಸ್ತೆ ಕೆಲಸ ಮುಂದಿನ ವರ್ಷದಿಂದ ಆರಂಭ

* ಕೇರಳ: 65000 ಕೋಟಿ ವೆಚ್ಚದಲ್ಲಿ 1,100 ಕಿಲೋಮೀಟರ್ ರಸ್ತೆ ನಿರ್ಮಾಣ; ಮುಂಬೈ–ಕನ್ಯಾಕುಮಾರಿ ಕಾರಿಡಾರ್ ಇದರಲ್ಲಿ ಸೇರಿದೆ

* ಪಶ್ಚಿಮ ಬಂಗಾಳ: 25,000 ಕೋಟಿ ವೆಚ್ಚದಲ್ಲಿ 675 ಕಿಲೋಮೀಟರ್ ರಸ್ತೆ ನಿರ್ಮಾಣ; ಕೋಲ್ಕತ್ತ–ಸಿಲಿಗುರಿ ರಸ್ತೆ ಮೇಲ್ದರ್ಜೆಗೆ

* ಅಸ್ಸಾಂ: 19,000 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ; ಮುಂದಿನ ವರ್ಷಗಳಲ್ಲಿ ಮತ್ತೆ 34,000 ಕೋಟಿ ಮೊತ್ತದ 1,300 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕ್ರಮ

* ದೆಹಲಿ-ಮುಂಬೈ ಎಕ್ಸ್‌ಪ್ರೆಸ್, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲನೆ

* ಪ್ರಸಕ್ತ ಹಣಕಾಸು ವರ್ಷದಲ್ಲಿ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಕಾಮಗಾರಿ ಪ್ರಾರಂಭ

* ಕಾನ್ಪುರ-ಲಖನೌ ಎಕ್ಸ್‌ಪ್ರೆಸ್ ಹೆದ್ದಾರಿ ಕೆಲಸ 2021-22ರಲ್ಲಿ ಪ್ರಾರಂಭ

* 277 ಕಿ.ಮೀ ಉದ್ದದ ಚೆನ್ನೈ-ಸೇಲಂ ಕಾರಿಡಾರ್‌ಗೆ ಶೀಘ್ರ ಆದೇಶ. ಇದು 2021-22ರಲ್ಲಿ ನಿರ್ಮಾಣ ಪ್ರಾರಂಭ

* ಛತ್ತೀಸಗಡ, ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶದ ಮೂಲಕ ಹಾದುಹೋಗುವ ರಾಯ್‌ಪುರ-ವಿಶಾಖಪಟ್ಟಣಂ ಮಾರ್ಗದ 464 ಕಿ.ಮೀ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ಕಾರ್ಯಾದೇಶ; 2021-22ರಲ್ಲಿ ನಿರ್ಮಾಣ ಪ್ರಾರಂಭ

* 2021-22ರಲ್ಲಿ ಅಮೃತಸರ-ಜಾಮ್‌ನಗರ ಹಾಗೂ ದೆಹಲಿ-ಕತ್ರ ಮಾರ್ಗದಲ್ಲಿ ನಿರ್ಮಾಣ ಶುರು

* ಭಾರತ್‌ಮಾಲಾ ಯೋಜನೆಯಡಿ 3.3 ಲಕ್ಷ ಕೋಟಿ ವೆಚ್ಚದಲ್ಲಿ 13,000 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಕಾರ್ಯಾದೇಶ; ಈ ಪೈಕಿ ಈಗಾಗಲೇ 3,800 ಕಿಲೋಮೀಟರ್ ರಸ್ತೆ ಸಿದ್ಧ

ಹಡಗು ಮರುಬಳಕೆ ಸಾಮರ್ಥ್ಯ ವೃದ್ಧಿ ಗುರಿ

* ಹಡಗು ಮರುಬಳಕೆ (ರೀಸೈಕಲ್) ಸಾಮರ್ಥ್ಯ 2024ರಲ್ಲಿ ದ್ವಿಗುಣ (45 ಲಕ್ಷ ಎಲ್‌ಡಿಟಿ)

* ಈ ವಲಯದಲ್ಲಿ 1.5 ಲಕ್ಷ ಉದ್ಯೋಗ ಸೃಷ್ಟಿ

* ಯುರೋಪ್ ಮತ್ತು ಜಪಾನ್‌ನಿಂದ ಹೆಚ್ಚು ಹಡಗುಗಳನ್ನು ತರಿಸಲು ಕ್ರಮ

* ಗುಜರಾತ್‌ನ ಅಲಂಗ್‌ನಲ್ಲಿ ಸುಮಾರು 90 ಹಡಗು ಮರುಬಳಕೆ ಯಾರ್ಡ್‌ಗಳು ಪ್ರಮಾಣಪತ್ರ ಪಡೆದಿವೆ

* ಹಡಗು ಮರುಬಳಕೆ: ಜಾಗತಿಕವಾಗಿ ಭಾರತದ ಪಾಲು ಶೇ 30ರಷ್ಟಿದ್ದು, ಶೇ 50ಕ್ಕೆ ಹೆಚ್ಚಿಸುವ ಗುರಿ

ಕೋಲ್ಕತ್ತದಲ್ಲಿ ಕಾರ್ಮಿಕರು ವಾಣಿಜ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದು. –ರಾಯಿಟರ್ಸ್‌ ಚಿತ್ರ
 

ವಿದ್ಯುತ್ ವಿತರಣಾ ವ್ಯವಸ್ಥೆ ಪುನಶ್ಚೇತನಕ್ಕೆ ಹೆಜ್ಜೆ

ದೇಶದ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂ) ಪುನರುಜ್ಜೀವನಗೊಳಿಸಲು ಐದು ವರ್ಷಗಳಲ್ಲಿ 3.05 ಲಕ್ಷ ಕೋಟಿ  ವಿನಿಯೋಗಿಸುವ ಯೋಜನೆಯನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. ಜೊತೆಗೆ ವಿದ್ಯುತ್ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡುವ ಅವಕಾಶವನ್ನು ಗ್ರಾಹಕರಿಗೇ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ವಿದ್ಯುತ್ ಸೇವಾ ವಿತರಣೆ ಖಚಿತಪಡಿಸಿಕೊಳ್ಳಲು ಕಳೆದ ವರ್ಷ ಗ್ರಾಹಕರ ನಿಯಮಗಳನ್ನು ಜಾರಿಗೊಳಿಸಲಾಗಿತ್ತು.ಎಲ್ಲರಿಗೂ ದಿನದ 24 ಗಂಟೆ ವಿದ್ಯುತ್ ನೀಡುವುದು ಕಾರ್ಯಕ್ರಮದ ಉದ್ದೇಶ.

ರಾಜ್ಯ ಸರ್ಕಾರಗಳ ಒಡೆತನದಲ್ಲಿರುವ ಬಹುತೇಕ ವಿದ್ಯುತ್ ವಿತರಣಾ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿವೆ. ದಿನದ 24 ಗಂಟೆ ವಿದ್ಯುತ್ ಪೂರೈಸಲು ಬೇಕಾದ ವಿದ್ಯುತ್ ಖರೀದಿಸಲು ಹಣಕಾಸಿನ ಕೊರತೆಯಿದೆ. 2020ರ ಡಿಸೆಂಬರ್ ವೇಳೆಗೆ ವಿದ್ಯುತ್ ಉತ್ಪಾದನಾ ಸಂಸ್ಥೆಗಳು ವಿದ್ಯುತ್ ಉತ್ಪಾದಕರಿಂದ 1.35 ಲಕ್ಷ ಕೋಟಿ ಬಾಕಿ ಉಳಿಸಿಕೊಂಡಿವೆ.

ಪೂರ್ವ ಪಾವತಿಸಿದ ಸ್ಮಾರ್ಟ್ ಮೀಟರಿಂಗ್ ಅಳವಡಿಕೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳ ಮೂಲಕ ಡಿಸ್ಕಾಂಗಳ  ಮೂಲಸೌಕರ್ಯ ವೃದ್ಧಿಸಲು ಈ ಯೋಜನೆ ನೆರವು ನೀಡುತ್ತದೆ ಎಂದು ಸಚಿವೆ ಹೇಳಿದರು. ಋಣಭಾರದಲ್ಲಿರುವ ಡಿಸ್ಕಾಂಗಳ ಪುನರುಜ್ಜೀವನಕ್ಕಾಗಿ ಕೇಂದ್ರವು 2015ರ ನವೆಂಬರ್‌ನಲ್ಲಿ ಉದಯ್ (ಉಜ್ವಾಲ್ ಡಿಸ್ಕಾಂ ಅಶ್ಯೂರೆನ್ಸ್ ಯೋಜನೆ) ಯೋಜನೆಯನ್ನು ಪರಿಚಯಿಸಿತ್ತು.

Union Budget 2021: ಸಾಗಣೆ ಮೂಲಸೌಕರ್ಯಕ್ಕೆ ಒತ್ತು

Union Budget 2021: ಸಾಗಣೆ ಮೂಲಸೌಕರ್ಯಕ್ಕೆ ಒತ್ತು

ಪ್ರಜಾವಾಣಿ ವಾರ್ತೆ Updated: 
prajavani

ಆಕರ್ಷಕ ವಿಸ್ಟಾಡೋಮ್ ರೈಲ್ವೆ ಬೋಗಿ

ಕೇಂದ್ರ ಸರ್ಕಾರವು 2021-22ನೇ ಸಾಲಿನ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ದಾಖಲೆಯ 1.10 ಲಕ್ಷ ಕೋಟಿ ಅನುದಾನವನ್ನು ಒದಗಿಸಿದೆ. ಇದರಲ್ಲಿ 1.07 ಲಕ್ಷ ಕೋಟಿ ಬಂಡವಾಳ ವೆಚ್ಚವಾಗಿದೆ. ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಸರಕುಗಳನ್ನು ಸಾಗಣೆ ಮಾಡಿದ ರೈಲ್ವೆ ಇಲಾಖೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಹೊಸದಾಗಿ 2 ಸರಕು ಕಾರಿಡಾರ್
ಭಾರತೀಯ ರೈಲ್ವೆ ಇಲಾಖೆಯು 2030ರ ರಾಷ್ಟ್ರೀಯ ರೈಲ್ವೆ ಯೋಜನೆಯನ್ನು ಸಿದ್ಧಪಡಿಸಿದೆ. ಮೇಕ್ ಇನ್ ಇಂಡಿಯಾ ಭಾಗವಾಗಿ, ರೈಲ್ವೆ ಸರಕು ಸಾಗಣೆ ವೆಚ್ಚವನ್ನು ತಗ್ಗಿಸುವುದಕ್ಕಾಗಿ 2030ರ ವೇಳೆಗೆ ಭವಿಷ್ಯದ ರೈಲ್ವೆಯನ್ನು ಸಜ್ಜುಗೊಳಿಸುವುದು ಇದರ ಉದ್ದೇಶ. ಇದಕ್ಕಾಗಿ ಪೂರ್ವ ಸರಕು ಕಾರಿಡಾರ್‌ (ಇಡಿಎಫ್‌ಸಿ) ಮತ್ತು ಪಶ್ಚಿಮ ಸರಕು ಕಾರಿಡಾರ್‌ಗಳನ್ನು (ಡಬ್ಲ್ಯುಡಿಎಫ್‌ಸಿ) ರೂಪಿಸುತ್ತಿದ್ದು, ಜೂನ್ 2022ರೊಳಗೆ ಇವು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಇಡಿಎಫ್‌ಸಿ: ಈ ವರ್ಷವೇ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) 263 ಕಿ.ಮೀ. ದೂರದ ಸೋನೆನಗರ-ಗೊಮೊಹ್ ವಿಭಾಗ ಕಾರ್ಯಾರಂಭ; 274.3 ಕಿ.ಮೀ. ದೂರದ ಗೊಮೊಹ್-ಡಂಕುನಿ ವಿಭಾಗ ಶೀಘ್ರವೇ ಆರಂಭ

* ಭವಿಷ್ಯದ ದಿನಗಳಲ್ಲಿ ಸರಕು ಕಾರಿಡಾರ್ ಯೋಜನೆಗಳನ್ನು ರೈಲ್ವೆ ಕೈಗೆತ್ತಿಕೊಳ್ಳಲಿದೆ; ಖರಗ್‌ಪುರದಿಂದ ವಿಜಯವಾಡದ ಪೂರ್ವ ಕರಾವಳಿ ಕಾರಿಡಾರ್, ಭೂಸಾವಲ್‌ನಿಂದ ಖರಗ್‌ಪುರ ಹಾಗೂ ಡಂಕುನಿವರೆಗೆ ಪೂರ್ವ-ಪಶ್ಚಿಮ ಕಾರಿಡಾರ್ ಮತ್ತು ಇಟಾರ್ಸಿಯಿಂದ ವಿಜಯವಾಡದವರೆಗೆ ಉತ್ತರ-ದಕ್ಷಿಣ ಕಾರಿಡಾರ್ ಕಾರ್ಯಾರಂಭ ಮಾಡಲಿವೆ.

ನೂರರಷ್ಟು ವಿದ್ಯುದೀಕರಣ ಗುರಿ
ಬ್ರಾಡ್‌ಗೇಜ್ ಮಾರ್ಗದ ವಿದ್ಯುದೀಕರಣ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2021ರ ಅಂತ್ಯದ ವೇಳೆಗೆ ಶೇ 72ರಷ್ಟು ಗುರಿ ಸಾಧಿಸಲಿದ್ದು, 2023ರ ಡಿಸೆಂಬರ್ ವೇಳಗೆ ಶೇ 100ರಷ್ಟು ವಿದ್ಯುದೀಕರಣ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.

ಸುರಕ್ಷೆ ಜೊತೆಗೆ ಆರಾಮದಾಯಕ
ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಯ ಬಗ್ಗೆ ರೈಲ್ವೆ ಇಲಾಖೆ ಒತ್ತು ನೀಡಿದೆ. ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ಒದಗಿಸುವ ಸಲುವಾಗಿ ರೈಲ್ವೆ ಪ್ರವಾಸಿ ಮಾರ್ಗಗಳಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ವಿಸ್ಟಾಡೋಮ್ ಎಲ್‌ಎಚ್‌ಬಿ ಬೋಗಿಗಳನ್ನು ಈಗಾಗಲೇ ಪರಿಚಯಿಸಿದೆ.

* ಕಳೆದ ಕೆಲವು ವರ್ಷಗಳಲ್ಲಿ ತೆಗೆದುಕೊಂಡ ಸುರಕ್ಷತಾ ಕ್ರಮಗಳು ಫಲಿತಾಂಶ ನೀಡಿವೆ

* ಮಾನವ ದೋಷದಿಂದ ಉಂಟಾಗುವ ರೈಲ್ವೆ ಅಪಘಾತ ತಡೆಗೆ ದೇಶೀಯವಾಗಿ ವಿನ್ಯಾಸ ಮಾಡಲಾದ ಅಪಘಾತ ತಡೆ ವ್ಯವಸ್ಥೆ ಅಳವಡಿಕೆ

* ಹೆಚ್ಚಿನ ಸಾಂದ್ರತೆಯ ರೈಲ್ವೆ ಜಾಲ ಹೊಂದಿರುವ ಮತ್ತು ಹೆಚ್ಚು ಬಳಸಿದ ಮಾರ್ಗಗಳಲ್ಲಿ ಸ್ವಯಂಚಾಲಿತ ರೈಲು ಘರ್ಷಣೆ ತಡೆ ವ್ಯವಸ್ಥೆ ರೂಪಿಸಲು ಕಾರ್ಯಕ್ರಮ

ಯಾರು ಏನೆಂದರು?

ಎಪಿಎಂಸಿ ಬಲವರ್ಧನೆಗೆ ಅಗತ್ಯವಿರುವ ಅನುದಾನ ಒದಗಿಸಲಾಗಿದೆ. ಕೃಷಿ ಸಾಲದ ಮೊತ್ತವನ್ನೂ ಹೆಚ್ಚಿಸಲಾಗಿದೆ. 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳುವಂತೆ ಮಾಡುವ ಗುರಿ ಇದ್ದು, ಇದಕ್ಕಾಗಿ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ
-ನರೇಂದ್ರ ಸಿಂಗ್‌ ತೋಮರ್‌, ಕೇಂದ್ರ ಕೃಷಿ ಸಚಿವ

*
ಸಮಾಜದ ಎಲ್ಲಾ ಸ್ತರಗಳ ಜನರ ಶ್ರೇಯೋಭಿವೃದ್ಧಿ ಯನ್ನು ಗಮನದಲ್ಲಿಟ್ಟು ಕೊಂಡು ಮಂಡಿಸಿರುವ ಬಜೆಟ್‌. ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಲಪಡಿಸಲು ವಿಶೇಷ ಒತ್ತು ನೀಡಲಾಗಿದೆ.
-ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

**
ಬಡವರು ಬಡವರಾಗಿಯೇ, ಶ್ರೀಮಂತರು ಶ್ರೀಮಂತರಾಗಿಯೇ ಉಳಿಯಬೇಕೆಂಬ ಮೂಲ ತತ್ವದಡಿ ಮಂಡನೆಯಾಗಿರುವ ಬಜೆಟ್‌ ಇದು. ರೈತರ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೀಗಿದ್ದರೂ ಕೃಷಿ ವಲಯದ ಬಲವರ್ಧನೆಗೆ ಪೂರಕ ಕ್ರಮಗಳನ್ನು ಕೈಗೊಂಡಿಲ್ಲ.
-ಸೀತಾರಾಂ ಯೆಚೂರಿ, ಸಿಪಿಐ (ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ

**
ಗಣರಾಜ್ಯೋತ್ಸವದ ದಿನ ಸಾವಿರಾರು ರೈತರು ಟ್ರ್ಯಾಕ್ಟರ್‌ ರ‍್ಯಾಲಿ ಕೈಗೊಂಡಿದ್ದರು. ಅವರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಸೆಸ್‌ ವಿಧಿಸಲಾಗಿದೆ. ಬಡವರು, ಶ್ರಮಿಕರು ಹಾಗೂ ವಲಸೆ ಕಾರ್ಮಿಕರ ಕಲ್ಯಾಣವನ್ನೂ ಕಡೆಗಣಿಸಲಾಗಿದೆ.
-ಪಿ.ಚಿದಂಬರಂ, ಕಾಂಗ್ರೆಸ್‌ ಮುಖಂಡ

*
ಇದು ನಿರಾಶಾದಾಯಕ ಬಜೆಟ್‌. ದೇಶದ ಕೆಲ ಕಾರ್ಪೊರೇಟ್‌ ಕಂಪನಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಕೊಂಡು ಮಂಡಿಸಿರುವ ಬಜೆಟ್‌. ಇದರಿಂದ ಸಾಮಾನ್ಯ ಜನರ ಬದುಕು ಸುಧಾರಿಸೊಲ್ಲ. ಹಣದುಬ್ಬರದಿಂದ ಅವರ ಸಂಕಷ್ಟ ಇನ್ನಷ್ಟು ಹೆಚ್ಚುತ್ತದೆ
-ಅರವಿಂದ್‌ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

**
ರೈತ, ಜನ ಹಾಗೂ ದೇಶ ವಿರೋಧಿ ಬಜೆಟ್‌. ಕೇಂದ್ರ ಸರ್ಕಾರವು ವಿಮೆಯಿಂದ ಹಿಡಿದು ಪಿಎಸ್‌ಯುವರೆಗೆ ಎಲ್ಲವನ್ನೂ <br/>ಮಾರಲು ಹೊರಟಿದೆ. ಸುಳ್ಳು ಭರವಸೆಗಳ ಮೂಲಕ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿದೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

Union Budget 2021: ದೇಶಿ ಉತ್ಪಾದನೆಗೆ ಉತ್ತೇಜನ

Union Budget 2021: ದೇಶಿ ಉತ್ಪಾದನೆಗೆ ಉತ್ತೇಜನ

ಪಿಟಿಐ Updated: 
prajavani

ಕೋಲ್ಕತ್ತದ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಸೋಮವಾರ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರು

ನವದೆಹಲಿ: ದೇಶೀಯವಾಗಿ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ತೇಜನ ನೀಡುವ ಕ್ರಮವಾಗಿ ವಿವಿದ ಕಚ್ಚಾ ಉತ್ಪನ್ನಗಳಿಗೆ ಅನ್ವಯಿಸಿ ಪ್ರಾಥಮಿಕ ಆಮದು ಸುಂಕವನ್ನು ಇಳಿಸಲಾಗಿದೆ.

ಈ ಕ್ರಮವು ದೇಶೀಯವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಮುಖ್ಯವಾಗಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಸ್ಪರ್ಧೆಗೆ ಸಜ್ಜಾಗಲು ನೆರವಾಗಲಿದೆ. ಅಲ್ಲದೆ, ಇವುಗಳ ಸ್ಪರ್ಧೆಗೆ ಸಮಾನ ವೇದಿಕೆಯು ಸೃಷ್ಟಿಯಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೋವಿಡ್‌ ಪರಿಸ್ಥಿತಿಯಲ್ಲಿ ಆರ್ಥಿಕತೆ ಪುನಶ್ಚೇತನದ ಹಾದಿಯು ಕಷ್ಟಕರವಾಗಿತ್ತು. ವಿಶ್ವವೇ ಅನೇಕ ಸವಾಲುಗಳಿಗೆ ಮುಖಾಮುಖಿಯಾಗಿತ್ತು. ಆ ಸಂದರ್ಭದಲ್ಲೂ ದೇಶದಲ್ಲಿ ಕೈಗಾರಿಕಾ ವಲಯವು ಅಸಾಧಾರಣವಾದ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿತು ಎಂದು ಅವರು ಶ್ಲಾಘಿಸಿದರು.

ಮೊಬೈಲ್‌, ಚಾರ್ಜರ್ –ರಿಯಾಯಿತಿ ವಾಪಸು: ಪ್ರಸ್ತುತ ದೇಶೀಯವಾಗಿ ವಿದ್ಯುನ್ಮಾನ ಪರಿಕರಗಳ ಉತ್ಪಾದನೆ ಕ್ಷೇತ್ರವು ಕ್ಷಿಪ್ರವಾಗಿ ಬೆಳೆಯುತ್ತಿದೆ. ಪರಿಣಾಮ, ಭಾರತವೀಗ ಮೊಬೈಲ್‌ ಪೋನ್ ಮತ್ತು ಚಾರ್ಜರ್‌ಗಳನ್ನು ರಫ್ತು ಮಾಡುವ
ಹಂತವನ್ನು ತಲುಪಿದೆ.

ದೇಶಿ ಉತ್ಪಾದನೆಯ ವಸ್ತುಗಳ ಗುಣಮಟ್ಟ, ಮೌಲ್ಯ ವೃದ್ಧಿಗೆ ಪೂರಕವಾಗಿ ನೆರವಾಗಲು ಚಾರ್ಜರ್‌ಗಳು ಮತ್ತು ಮೊಬೈಲ್‌ ಫೋನ್‌ನ ಕೆಲ ಬಿಡಿಭಾಗಗಳ ನೀಡಿದ್ದ ರಿಯಾಯಿತಿ ಹಿಂಪಡೆಯಲಾಗಿದೆ. ಕೆಲ ಪರಿಕರಗಳ ಮೇಲೆ ಇದ್ದ ಶೂನ್ಯ ತೆರಿಗೆ ಬದಲಾಗಿ, ಇನ್ನು ಸಾಮಾನ್ಯ ಎಂಬಂತಹ ಶೇ 2.5ರಷ್ಟು ತೆರಿಗೆ ಇರುತ್ತದೆ ಎಂದು ತಿಳಿಸಿದರು.

ಲೋಹ, ತಾಮ್ರ ಮರುಬಳಕೆಗೆ ನೆರವು: ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು ಕಬ್ಬಿಣ ಮತ್ತು ಉಕ್ಕಿನ ತೀವ್ರ ದರ ಏರಿಕೆಯ ಪರಿಣಾಮವನ್ನು ಎದುರಿಸಲು ಆಗುವಂತೆ   ಅಲಾಯ್‌, ಅಲಾಯ್‌ಯೇತರ, ಸ್ಟೇನ್‌ಲೆಸ್‌ ಸ್ಟೀಲ್‌ನ ಕೆಲ ಉತ್ಪನ್ನಗಳಿಗೆ ಅನ್ವಯಿಸಿ ಏಕರೂಪದ ಶೇ 7.5ರಷ್ಟು ತೆರಿಗೆ ವಿಧಿಸಲಾಗಿದೆ.

ಲೋಹದ ಮರುಬಳಕೆಗೆ ಉತ್ತೇಜನ ನೀಡಲು, ಎಂಎಸ್‌ಎಂಇಗಳಿಗೆ ಅನ್ವಯಿಸಿ ಕಬ್ಬಿಣ ಕಚ್ಚಾ ಪದಾರ್ಥಗಳಿಗೆ ಮಾರ್ಚ್‌ 31, 2022ರವರೆಗೂ ಸುಂಕ ವಿನಾಯಿತಿ ನೀಡಲಾಗಿದೆ. ಅಂತೆಯೇ, ತಾಮ್ರದ ಮರುಬಳಕೆಗೆ ಪ್ರೊತ್ಸಾಹ ನೀಡಲು ತಾಮ್ರದ ಕಚ್ಚಾ ಪದಾರ್ಥಗಳ ಮೇಲಿನ ಸುಂಕವನ್ನು ಈಗಿನ ಶೇ 5ರಿಂದ ಶೇ 2.5ಕ್ಕೆ ಇಳಿಸಲಾಗಿದೆ.

ಆಟೊಮೊಬೈಲ್ ಉದ್ಯಮ: ಆಟೊಮೊಬೈಲ್‌ ಉದ್ಯಮ ಕ್ಷೇತ್ರದಲ್ಲಿ ಬಳಸಲಾಗುವ ಕೆಲ ಬಿಡಿ ಭಾಗಗಳ ಆಮದು ಸುಂಕವನ್ನು ಶೇ 15ಕ್ಕೆ ಏರಿಸಲಾಗಿದ್ದು, ಇದು ಫೆಬ್ರುವರಿ 2 ರಿಂದಲೇ ಜಾರಿಗೆ ಬರಲಿದೆ. ಸದ್ಯ ಸುಂಕದ ಪ್ರಮಾಣ ಶೇ 7.5ರಿಂದ 10ರವರೆಗೂ ಇತ್ತು.

7 ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಗುರಿ
ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳ ಸೃಷ್ಟಿ, ಅಧಿಕ ಬಂಡವಾಳ ಆಕರ್ಷಿಸಲು ಮೂರು ವರ್ಷಗಳಲ್ಲಿ 7 ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಗುರಿ ಹೊಂದಲಾಗಿದೆ. ಇದಕ್ಕಾಗಿ ಭಾರಿ ಹೂಡಿಕೆ ಟೆಕ್ಸ್‌ಟೈಲ್‌ ಪಾರ್ಕ್ (ಮಿತ್ರಾ) ಯೋಜನೆಯನ್ನು ಸದ್ಯ ಚಾಲ್ತಿಯಲ್ಲಿರುವ ಪಿಎಲ್‌ಐ ಯೋಜನೆಯ ಜೊತೆಗೆ ಆರಂಭಿಸಲಾಗುವುದು.

ಇದಲ್ಲದೆ, ಈ ಉದ್ಯಮವನ್ನು ಪ್ರೋತ್ಸಾಹಿಸಲು ವಿವಿಧ ಕಚ್ಚಾ ಪದಾರ್ಥಗಳ ಮೇಲಿನ ಪ್ರಾಥಮಿಕ ಅಮದು ಸುಂಕವನ್ನು ಭಾಗಶಃ ಇಳಿಸಲಾಗಿದೆ. ಈ ಕ್ರಮವು ಜವಳಿ ಉದ್ಯಮದ ಜೊತೆಗೆ ಎಂಎಸ್‌ಎಂಇಗಳು ಹಾಗೂ ರಫ್ತು ಪ್ರಕ್ರಿಯೆಗೂ ನೆರವಾಗಲಿದೆ ಎಂದು ಸಚಿವೆ ಪ್ರತಿಪಾದಿಸಿದರು.

ಜನಾಭಿಪ್ರಾಯ...

ದೇಶದ ವಿತ್ತೀಯ ಕೊರತೆ ಜಿಡಿಪಿಯ ಶೇ 9.5ರಷ್ಟು ಆಗಲಿರುವ ಅಂದಾಜು ಆತಂಕಕಾರಿ. 13ಸಾವಿರ ಕೋಟಿ ಆತ್ಮನಿರ್ಭರ ಪ್ಯಾಕೇಜಿನ ಪ್ರಸ್ತಾಪ ದೇಶದ ಆರ್ಥಿಕತೆ ಸುಧಾರಣೆಗೆ ಹೇಗೆ ಸಹಾಯ ಎಂಬ ಉಲ್ಲೇಖವಿಲ್ಲ.
– ಐಸಾಕ್ ವಾಸ್, ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಕೆಸಿಸಿಐ) ಅಧ್ಯಕ್ಷ

**

ಕೇಂದ್ರ ಬಜೆಟ್‌ನಲ್ಲಿ ಕಲಬುರ್ಗಿಗೆ ರೈಲ್ವೆ ವಿಭಾಗ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯನ್ನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ.
–ಅಮರನಾಥ ಪಾಟೀಲ, ಎಚ್‌ಕೆಸಿಸಿಐ ಅಧ್ಯಕ್ಷ, ಕಲಬುರ್ಗಿ

**

ಮೂಲಸೌಕರ್ಯ, ಕೃಷಿ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇದೊಂದು ಉತ್ತಮ ಬಜೆಟ್‌. ಮೂರು ಕ್ಷೇತ್ರಗಳ ಮೇಲಿನ ಅನುದಾನ ಹೆಚ್ಚಳದಿಂದ ಉದ್ಯೋಗ ಸೃಷ್ಟಿಯಾಗಲಿದೆ.
–ಮಹೇಂದ್ರ ಲದ್ದಡ, ಅಧ್ಯಕ್ಷ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ

**
ನ್ಯಾಷನಲ್‌ ನರ್ಸಿಂಗ್‌ ಕಮಿಷನ್‌ ರಚಿಸಿದ್ದಾರೆ. ಸಂಶೋಧನಾ ಕ್ಷೇತ್ರಕ್ಕೆ ಒತ್ತು ನೀಡಿದ್ದು, ತೃಪ್ತಿಕರ ಬಜೆಟ್‌. ಈ ಸುಧಾರಣೆ ಅನುಷ್ಠಾನಕ್ಕೆ ಅಧಿಕಾರಿಗಳು ಬದ್ಧತೆ ತೋರಿಸಬೇಕು.
–ಡಾ.ಆರ್.ಬಾಲಸುಬ್ರಮಣ್ಯಂ, ವಿ–ಲೀಡ್‌ ಸಂಸ್ಥಾಪಕ, ಮೈಸೂರು

**

ಬಿಸಿಯೂಟಕ್ಕೆ 1400 ಕೋಟಿ ಮತ್ತು ಐಸಿಡಿಎಸ್‌ಗೆ ಶೇ 30ರಷ್ಟು ಕಡಿತವಾಗಿರುವುದರಿಂದ ಮಕ್ಕಳು ಮತ್ತು ಮಹಿಳೆಯರಿಗೆ ಕೊಡುಗೆ ಶೂನ್ಯವಾಗಿದೆ ಮಾತ್ರವಲ್ಲ ಈ ಎರಡು ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
–ಎಸ್. ವರಲಕ್ಷ್ಮಿ, ಅಧ್ಯಕ್ಷೆ, ಸಿಐಟಿಯು

**
ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಬಲ ನೀಡುವ ಪ್ರಸ್ತಾವವೇ ಇಲ್ಲ. ಸ್ವಾಮಿನಾಥನ್ ವರದಿ ಕುರಿತು ಚಕಾರ ಎತ್ತಿಲ್ಲ. ಕೃಷಿ ಅಭಿವೃದ್ಧಿಗೆ ಸೆಸ್‌ ವಿಧಿಸಲಾಗಿದೆ.
-ಎಚ್‌.ಆರ್. ಬಸವರಾಜಪ್ಪ, ರೈತ ಮುಖಂಡ, ಶಿವಮೊಗ್ಗ

Union Budget 2021: ಚುನಾವಣೆ, ರೈತರ ಮೇಲೆ ಕಣ್ಣು

Union Budget 2021: ಚುನಾವಣೆ, ರೈತರ ಮೇಲೆ ಕಣ್ಣು

ಆನಂದ್‌ ಮಿಶ್ರಾ Updated: 
prajavani

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆಯನ್ನು ಪ್ರಯಾಗರಾಜ್‌ನಲ್ಲಿನ ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಮಳಿಗೆಯೊಂದರಲ್ಲಿ ಜನರು ವೀಕ್ಷಿಸಿದರು –ಪಿಟಿಐ ಚಿತ್ರ

ನವದೆಹಲಿ: ದೇಶದ ಮೊದಲ ಕಾಗದರಹಿತ ಬಜೆಟ್‌ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಿತ್ತೀಯ ಶಿಸ್ತಿನ ನಿರ್ಬಂಧದ ನಡುವೆಯೂ ರಾಜಕೀಯವಾಗಿ ಹೆಚ್ಚು ಮುಖ್ಯವಾದ ವರ್ಗಗಳು ಮತ್ತು ರಾಜ್ಯಗಳನ್ನು ತಲುಪುವ ಯತ್ನ ಮಾಡಿದ್ದಾರೆ.

ಚುನಾವಣೆಯ ಹೊಸ್ತಿಲಲ್ಲಿ ಇರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಗೆ ಭರಪೂರ ಕೊಡುಗೆ ಸಿಕ್ಕಿದೆ. ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಗಮನದಲ್ಲಿ ಇರಿಸಿಕೊಂಡು ಗ್ರಾಮೀಣ ಭಾರತಕ್ಕೆ ಸಂದೇಶ ನೀಡುವ ಪ್ರಯತ್ನವೂ ಇದೆ. 

ಜನರ ನಿರೀಕ್ಷೆಗಳು, ಎಲ್ಲರ ಒಳಗೊಳ್ಳುವಿಕೆ ಮತ್ತು ‘ಆತ್ಮ ನಿರ್ಭರ ಭಾರತ’ ಆಶಯಕ್ಕೆ ಅನುಗುಣವಾಗಿ ಸಿದ್ಧಪಡಿಸಲಾದ ಬಜೆಟ್‌ ಎಂದು ಬಿಜೆಪಿ ಹೇಳಿದೆ. ಆದರೆ, ವಿರೋಧ ಪಕ್ಷಗಳಿಗೆ ಬಜೆಟ್‌ ಪಥ್ಯವಾಗಿಲ್ಲ. ಇದು ‘ಶೇಕಡ ನೂರರಷ್ಟು ಮುನ್ನೋಟರಹಿತ’ ಎಂದು ವಿರೋಧ ಪಕ್ಷಗಳು ಹೇಳಿವೆ.

ಕೃಷಿ ಕ್ಷೇತ್ರವನ್ನು ಬಲಪಡಿಸುವ, ರೈತರ ಆದಾಯವನ್ನು ವೃದ್ಧಿಸುವ ಮತ್ತು ಗ್ರಾಮಗಳು ಹಾಗೂ ರೈತರನ್ನು ಹೃದಯದಲ್ಲಿ ಇರಿಸಿಕೊಂಡಿರುವ ಬಜೆಟ್‌ ಇದು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಆದರೆ,  ಇಡೀ ದೇಶವನ್ನು ತಮ್ಮ ನೆಚ್ಚಿನ ಬಂಡವಾಳಶಾಹಿಗಳಿಗೆ ಕೊಡುವ ಹುನ್ನಾರ ಈ ಬಜೆಟ್‌ನಲ್ಲಿ ಇದೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ. 

ಈ ಬಜೆಟ್‌ ಶ್ರೀಮಂತರ ಪರ. ರೈತರು ಮತ್ತು ಶೋಷಿತ ವರ್ಗವನ್ನು ನಿರ್ಲಕ್ಷಿಸಲಾಗಿದೆ ಎಂದು ಬಿಎಸ್‌ಪಿ ಹೇಳಿದೆ. ರೈತರು ಮತ್ತು ಸಾಮಾನ್ಯ ಜನರ ಸಮಸ್ಯೆಗಳನ್ನು ಈ ಬಜೆಟ್‌ ಇನ್ನಷ್ಟು ಹೆಚ್ಚಿಸಲಿದೆ ಎಂದು ಎಸ್‌ಪಿ ಹೇಳಿದೆ. 

ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚಹಾ ತೋಟದ ಕಾರ್ಮಿಕರಿಗಾಗಿ 1,000 ಕೋಟಿಯ ವಿಶೇಷ ಯೋಜನೆ ಘೋಷಿಸಲಾಗಿದೆ. ತಮಿಳುನಾಡು ರಾಜ್ಯಕ್ಕೆ 3,500 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಕಟಿಸಲಾಗಿದೆ. ಇದಕ್ಕೆ ತಗಲುವ ವೆಚ್ಚ 1.03 ಲಕ್ಷ ಕೋಟಿ. ಕೇರಳ ರಾಜ್ಯಕ್ಕೆ 65 ಸಾವಿರ ಕೋಟಿ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಇವೆ. ಪಶ್ಚಿಮ ಬಂಗಾಳಕ್ಕೆ 25 ಸಾವಿರ ಕೋಟಿ ವೆಚ್ಚದಲ್ಲಿ 675 ಕಿ.ಮೀ. ಹೆದ್ದಾರಿಯ ಯೋಜನೆಯನ್ನು ಪ್ರಕಟಿಸಲಾಗಿದೆ. ಅಸ್ಸಾಂನಲ್ಲಿ 34 ಸಾವಿರ ಕೋಟಿ ಮೊತ್ತದಲ್ಲಿ 1300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಆಗಲಿದೆ. ಈ ಎಲ್ಲ ರಾಜ್ಯಗಳಲ್ಲಿ ಮುಂದಿನ ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬುದು ಈ ಯೋಜನೆಗಳ ಹಿನ್ನೆಲೆಯನ್ನು ಬಹಿರಂಗಪಡಿಸುತ್ತದೆ. 

ಅಸ್ಸಾಂನಲ್ಲಿ ಈಗ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ 18 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. 2014ರ ಚುನಾವಣೆಗಿಂತ ತನ್ನ ನೆಲೆಯನ್ನು ಈ ಮಟ್ಟಕ್ಕೆ ವಿಸ್ತರಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿತ್ತು. ತಮಿಳು ನಾಡಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಿಜೆಪಿ ಭಾರಿ ಪ್ರಯತ್ನ ನಡೆಸುತ್ತಿದೆ. ಹಿಂದುತ್ವದ ಪ್ರತಿಪಾದನೆ ಮತ್ತು ಮೈತ್ರಿ ಮೂಲಕ ಈ ರಾಜ್ಯದಲ್ಲಿ ಹೆಚ್ಚು ಮತಗಳನ್ನು ಪಡೆಯುವ ಕಾರ್ಯತಂತ್ರವನ್ನು ಬಿಜೆಪಿ ಹಾಕಿಕೊಂಡಿದೆ. 

ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಐದು ಪ್ರಮುಖ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ಗಣನೀಯ ಪ್ರಮಾಣದ ಮೊತ್ತವನ್ನು ತೆಗೆದಿರಿಸಲಾಗಿದೆ. 

ಕೃಷಿ ಕ್ಷೇತ್ರವನ್ನು ಆಧುನೀಕರಣಗೊಳಿಸಬೇಕು ಎಂದು ಪ್ರಧಾನಿ ಮೋದಿ ಅವರು ಭಾನುವಾರವಷ್ಟೇ ಹೇಳಿದ್ದರು. ಮರುದಿನ ಮಂಡನೆಯಾದ ಬಜೆಟ್‌ನಲ್ಲಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್‌ ಅನ್ನು ಘೋಷಿಸಲಾಗಿದೆ. ಕೃಷಿ ಉತ್ಪನ್ನ ಹೆಚ್ಚಳ, ಸಂಗ್ರಹ ಮತ್ತು ಸಂಸ್ಕರಣೆಗೆ ಕೃಷಿ ಮೂಲಸೌಕರ್ಯ ಹೆಚ್ಚಳದ ಅಗತ್ಯ ಇದೆ ಎಂಬುದಕ್ಕೆ ನಿರ್ಮಲಾ ಅವರು ಒತ್ತು ನೀಡಿದ್ದಾರೆ. 

‘ನಮ್ಮ ಸರ್ಕಾರವು ರೈತರ ಅಭಿವೃದ್ಧಿಗೆ ಬದ್ಧ’ ಎಂದು ಅವರು  ಹೇಳಿದ್ದಾರೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ 40 ಸಾವಿರ ಕೋಟಿ ನಿಗದಿ ಮಾಡಲಾಗಿದೆ. ಕಳೆದ ಬಜೆಟ್‌ನಲ್ಲಿ ಇದು 30 ಸಾವಿರ ಕೋಟಿ ಇತ್ತು. 

Union Budget 2021: ಕೃಷಿ ಸಾಲದ ಗುರಿ ಶೇ 10ರಷ್ಟು ಹೆಚ್ಚಳ

Union Budget 2021: ಕೃಷಿ ಸಾಲದ ಗುರಿ ಶೇ 10ರಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated: 
prajavani

ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರದಾದ್ಯಂತ ತೀವ್ರಸ್ವರೂಪದ ಹೋರಾಟಗಳು ನಡೆಯುತ್ತಿರುವುದರಿಂದ, 2021–22ನೇ ಸಾಲಿನ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ಸರ್ಕಾರ ಯಾವ ಘೋಷಣೆಗಳನ್ನು ಮಾಡುತ್ತದೆ ಎಂಬ ಬಗ್ಗೆ ವಿಶೇಷವಾದ ಕುತೂಹಲವಿತ್ತು.

‘ನಮ್ಮ ಸರ್ಕಾರವು ರೈತರ ಏಳಿಗೆಗೆ ಬದ್ಧವಾಗಿದೆ’ ಎನ್ನುತ್ತಲೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಮುಂದಿಟ್ಟ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌, ಕೃಷಿ ಸಾಲ ವಿತರಣೆಯ ಗುರಿಯನ್ನು 16.5 ಲಕ್ಷ ಕೋಟಿಗೆ (ಶೇ 10ರಷ್ಟು) ಹೆಚ್ಚಿಸಿದ್ದಲ್ಲದೆ, ಬೆಳೆ ಕಟಾವಿನ ನಂತರದ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ ಶೇ 2.5ರಿಂದ ಆರಂಭಿಸಿ ಕೆಲವು ಉತ್ಪನ್ನಗಳ ಮೇಲೆ ಶೇ 100ರಷ್ಟು ‘ಕೃಷಿ ಮೂಲಸೌಲಭ್ಯ ಮತ್ತು ಅಭಿವೃದ್ಧಿ ಸೆಸ್‌’ (ಎಐಡಿಸಿ) ಜಾರಿ ಮಾಡುವುದಾಗಿಯೂ ತಿಳಿಸಿದರು. ಈ ಸೆಸ್‌ ಸಾಮಾನ್ಯ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದೂ ಸಚಿವೆ ಹೇಳಿದರು.

‘ರೈತರು ಬೆಳೆಗೆ ಮಾಡುವ ವೆಚ್ಚದ 1.5ರಷ್ಟು ಪಟ್ಟು ಆದಾಯ ಬರಬೇಕೆಂಬ ಉದ್ದೇಶದಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ಎಂಎಸ್‌ಪಿ ಅಡಿ ಖರೀದಿ ಮಾಡುವ ಧಾನ್ಯಗಳ ಪ್ರಮಾಣವು ಕಳೆದ ಕೆಲವು ವರ್ಷಗಳಲ್ಲಿ ಸತತವಾಗಿ ಏರಿಕೆಯಾಗುತ್ತಿದೆ’ ಎಂದರು. 2013–14ನೇ ಸಾಲಿನಲ್ಲಿ ಭತ್ತ, ಗೋಧಿ, ಹತ್ತಿ ಮುಂತಾದ ಉತ್ಪನ್ನಗಳ ಖರೀದಿಗಾಗಿ ಮಾಡಿದ್ದ ವೆಚ್ಚ ಹಾಗೂ 2020–21ನೇ ಸಾಲಿನಲ್ಲಿ ಮಾಡಿರುವ ವೆಚ್ಚಗಳ ಅಂಕಿಅಂಶಗಳನ್ನು ನೀಡಿದರು.

‘ಕಳೆದ ಆರು ವರ್ಷಗಳಲ್ಲಿ ಗೋಧಿ, ಧಾನ್ಯಗಳು ಹಾಗೂ ಹತ್ತಿಯ ಖರೀದಿ ಪ್ರಮಾಣವು ಹಲವು ಪಟ್ಟು ಹೆಚ್ಚಾಗಿದೆ. 43.66 ಲಕ್ಷ ರೈತರು ಕನಿಷ್ಠ ಬೆಂಬಲ ಬೆಲೆಯ ಲಾಭಗಳನ್ನು ಪಡೆದಿದ್ದಾರೆ ಎಂದು ನಿರ್ಮಲಾ ತಿಳಿಸಿದರು.

ಶೇ 5.63ರಷ್ಟು ಹೆಚ್ಚು ಹಂಚಿಕೆ
ಕೃಷಿ ಹಾಗೂ ರೈತರ ಅಭಿವೃದ್ಧಿ ಸಚಿವಾಲಯಕ್ಕೆ ಕಳೆದ ಸಾಲಿಗಿಂತ ಶೇ 5.63ರಷ್ಟು ಹೆಚ್ಚು ಹಣವನ್ನು (1,31,531 ಕೋಟಿ) ಹಂಚಿಕೆ ಮಾಡಲಾಗಿದೆ. ಇದರಲ್ಲಿ ದೊಡ್ಡ ಮೊತ್ತವನ್ನು ‘ಪಿಎಂ–ಕಿಸಾನ್‌’ ಯೋಜನೆಯ ಮೂಲಕ ವೆಚ್ಚ ಮಾಡಲಾಗುವುದು. ಕೃಷಿ ಮೂಲಸೌಲಭ್ಯ ಹಾಗೂ ನೀರಾವರಿ ಯೋಜನೆಗಳಿಗೂ ಕಳೆದ ವರ್ಷಕ್ಕಿಂತ ಹೆಚ್ಚು ಹಣವನ್ನು ಒದಗಿಸಲಾಗಿದೆ.

ಒಟ್ಟು ಹಂಚಿಕೆಯಲ್ಲಿ 1,23,017.57 ಕೋಟಿಯನ್ನು ವಿವಿಧ ಯೋಜನೆಗಳಿಗೆ ಹಾಗೂ 8,513.62 ಕೋಟಿಯನ್ನು ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗಕ್ಕೆ ನೀಡಲಾಗಿದೆ. ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಡೇರಿ ಸಚಿವಾಲಯಕ್ಕೆ 4,820.82 ಕೋಟಿ ಹಂಚಿಕೆ ಮಾಡಲಾಗಿದೆ.

ಸಬ್ಸಿಡಿ ವೆಚ್ಚ ಹೆಚ್ಚಳ
ಕೋವಿಡ್‌ ಕಾರಣದಿಂದ ಆಹಾರ ಹಾಗೂ ರಸಗೊಬ್ಬರಗಳಿಗೆ ನೀಡಿದ ಸಬ್ಸಿಡಿ ಪ್ರಮಾಣವು ಹೆಚ್ಚಾಗಿರುವುದರಿಂದ 2021–22ನೇ ಸಾಲಿನಲ್ಲಿ ಸರ್ಕಾರದ ಮೇಲೆ ಸಬ್ಸಿಡಿಯ ಹೊರೆ ಹೆಚ್ಚಾಗಿದೆ.

2020–21ನೇ ಸಾಲಿನಲ್ಲಿ 2.62 ಲಕ್ಷ ಕೋಟಿಯಷ್ಟಿದ್ದ ಸಬ್ಸಿಡಿ, 2021–22ನೇ ಸಾಲಿನಲ್ಲಿ ಶೇ 147ರಷ್ಟು ಏರಿಕೆಯಾಗಿ 6.48 ಲಕ್ಷ ಕೋಟಿಗೆ ತಲುಪಲಿದೆ. ಆಹಾರ ಮತ್ತು ರಸಗೊಬ್ಬರ ಸಬ್ಸಿಡಿಯಲ್ಲದೆ, 3.69 ಲಕ್ಷ ಕೋಟಿ ಮೊತ್ತವನ್ನು ಬೇರೆ ಸಬ್ಸಿಡಿಗಾಗಿ ತೆಗೆದಿರಿಸಿದೆ.

ಪ್ರಸಕ್ತ ಸಾಲಿನಲ್ಲಿ ಆಹಾರ ಸಬ್ಸಿಡಿಗಾಗಿ 1.15 ಲಕ್ಷ ಕೋಟಿ ಹಂಚಿಕೆ ಮಾಡಲಾಗಿತ್ತು. ಆದರೆ, ಕೋವಿಡ್‌ ಸಂದರ್ಭದಲ್ಲಿ ಬಡವರು ಮತ್ತು ಅಂಚಿನಲ್ಲಿರುವವರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲು ನಿರ್ಧರಿಸಿದ್ದರಿಂದ ಸಬ್ಸಿಡಿಗಾಗಿ ಮಾಡಿರುವ ವೆಚ್ಚ 4.22 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಅದರಂತೆ ರಸಗೊಬ್ಬರದ ಸಬ್ಸಿಡಿಯೂ ಮೊದಲೇ ಅಂದಾಜಿಸಿದ್ದ 71,309 ಕೋಟಿಯಿಂದ, 1.33 ಲಕ್ಷ ಕೋಟಿಗೆ ಏರಿಕೆಯಾಗಿತ್ತು. 2020–21ನೇ ಸಾಲಿನಲ್ಲಿ ಸಬ್ಸಿಡಿಗಾಗಿ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಕೋವಿಡ್‌ ಪಿಡುಗು ಸರ್ಕಾರದ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.

ಕೃಷಿ ಕ್ಷೇತ್ರ: ಪ್ರಮುಖ ಅಂಶಗಳು

* ಪ್ರಸಕ್ತ ಟೊಮೆಟೊ, ಈರುಳ್ಳಿ ಹಾಗೂ ಆಲುಗಡ್ಡೆಗಳಿಗೆ ಮಾತ್ರ ಸೀಮಿತವಾಗಿರುವ ‘ಆಪರೇಷನ್‌ ಗ್ರೀನ್‌’ ಯೋಜನೆಯು ಶೀಘ್ರದಲ್ಲಿ ಹಾಳಾಗುವ ಇನ್ನೂ 22 ಸರಕುಗಳಿಗೆ ವಿಸ್ತರಣೆ

* ಕೊಚ್ಚಿ, ಚೆನ್ನೈ, ವಿಶಾಖಪಟ್ಟಣ, ಪರದೀಪ್‌ (ಅಸ್ಸಾಂ) ಹಾಗೂ ಪೆಟುವಾಘಾಟ್‌ (ಪಶ್ಚಿಮ ಬಂಗಾಳ) ಮೀನುಗಾರಿಕಾ ಬಂದರುಗಳ ಅಭಿವೃದ್ಧಿ. ಇವುಗಳನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿ ರೂಪಿಸಲು ಪ್ರಸ್ತಾವನೆ. ಕಡಲ ಕೃಷಿ ಉತ್ತೇಜನಕ್ಕೆ ಹೆಚ್ಚಿನ ಅನುದಾನ

* ಒಳನಾಡು ಮೀನುಗಾರಿಕೆಯ ಉತ್ತೇಜನಕ್ಕೂ ಅಗತ್ಯ ಕ್ರಮ

* ಎಪಿಎಂಸಿಯ ಇನ್ನೂ 1,000 ಮಂಡಿಗಳನ್ನು ಎಲೆಕ್ಟ್ರಾನಿಕ್‌ ರಾಷ್ಟ್ರೀಯ ಮಾರುಕಟ್ಟೆಯ (ಇ–ನಾಮ್‌) ಜತೆ ಸಂಯೋಜಿಸಲು ಕ್ರಮ

* ಎಪಿಎಂಸಿಗಳ ಮೂಲಸೌಲಭ್ಯ ಅಭಿವೃದ್ಧಿಗೂ ಕೃಷಿ ಮೂಲಸೌಲಭ್ಯ ಅಭಿವೃದ್ಧಿ ನಿಧಿ ಬಳಕೆಗೆ ಒಪ್ಪಿಗೆ

* ಪಶುಸಂಗೋಪನೆ, ಡೇರಿ ಹಾಗೂ ಮೀನುಗಾರಿಕಾ ಕ್ಷೇತ್ರಗಳಿಗೆ ಹೆಚ್ಚಿನ ಸಾಲ ಸೌಲಭ್ಯ

Union Budget 2021: ಕೋವಿಡ್‌ ಲಸಿಕೆಗೆ ₹35 ಸಾವಿರ ಕೋಟಿ

Union Budget 2021: ಕೋವಿಡ್‌ ಲಸಿಕೆಗೆ 35 ಸಾವಿರ ಕೋಟಿ

ಪ್ರಜಾವಾಣಿ ವಾರ್ತೆ Updated: 
prajavani

ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್‌ –19 ಲಸಿಕೆ ಅಭಿಯಾನಕ್ಕೆ 35 ಸಾವಿರ ಕೋಟಿ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದು ಆರೋಗ್ಯ ಸಚಿವಾಲಯಕ್ಕೆ ನಿಗದಿ ಮಾಡಲಾದ ಅನುದಾನಕ್ಕೆ ಹೊರತಾದ ಮೊತ್ತ.

ಆರೋಗ್ಯ ಮತ್ತು ಯೋಗ ಕ್ಷೇಮಕ್ಕಾಗಿ ಭಾರಿ ಮೊತ್ತವನ್ನು ನೀಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿಕೊಂಡಿದ್ದಾರೆ. ಆದರೆ, ಇದರ ವಿವರಗಳು ಈ ಹೇಳಿಕೆಗಿಂತ ಭಿನ್ನವಾಗಿ ಕಾಣಿಸುತ್ತಿವೆ.

‘ಆರೋಗ್ಯ ಮತ್ತು ಯೋಗಕ್ಷೇಮ’ಕ್ಕೆ ಮೀಸಲು ಇರಿಸಿದ ಮೊತ್ತವು ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಶೇ 137ರಷ್ಟು ಏರಿಕೆಯಾಗಿದೆ ಎಂದು ಬಜೆಟ್‌ ಭಾಷಣದಲ್ಲಿ ವಿವರಿಸಲಾಗಿದೆ. ಆದರೆ, ಆರೋಗ್ಯ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಹಣಕಾಸು ಆಯೋಗಕ್ಕೆ ನಿಗದಿ ಮಾಡಿದ ಮೊತ್ತವನ್ನೂ ಒಟ್ಟು ಸೇರಿಸಿ ಶೇ 137ರಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

 2021–22ನೇ ಸಾಲಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿರಿಸಿದ ಅನುದಾನದಲ್ಲಿ ಶೇ 9ರಷ್ಟು ಮಾತ್ರ ಏರಿಕೆಯಾಗಿದೆ. 2020–21ನೇ ಸಾಲಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ 65,012 ಕೋಟಿ ಮೀಸಲಿರಿಸಲಾಗಿತ್ತು, ಇದು ಈ ಬಾರಿ 71,269 ಕೋಟಿಗೆ ಏರಿಕೆಯಾಗಿದೆ. ಕುಡಿಯುವ ನೀರಿನ ಇಲಾಖೆಗೆ ಈ ಬಾರಿ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದ್ದು, ಪ್ರತಿ ಕುಟುಂಬಕ್ಕೂ ಕುಡಿಯುವ ನೀರಿನ ಸಂಪರ್ಕ ದೊರಕಿಸುವ ಯೋಜನೆಗೆ 40 ಸಾವಿರ ಕೋಟಿ ಮೀಸಲಿರಿಸಲಾಗಿದೆ. 

ಪಿಎಂ ಆತ್ಮನಿರ್ಭರ್ ಸ್ವಸ್ಥ ಭಾರತ್‌ ಯೋಜನೆ: ಕೋವಿಡ್‌–19 ಪಿಡುಗಿನ ಬೆನ್ನಲ್ಲೇ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಸ್ತುತ ಇರುವ ಪ್ರಾಥಮಿಕ ಮತ್ತು ಇತರೆ ಆರೋಗ್ಯ ಕೇಂದ್ರಗಳ ಸಾಮರ್ಥ್ಯ ಹೆಚ್ಚಳ, ಹೊಸ ರೋಗಗಳ ಪತ್ತೆ ಮತ್ತು ಅದಕ್ಕಿರುವ ಚಿಕಿತ್ಸೆ ಹಾಗೂ ನೂತನ ಆರೋಗ್ಯ ಸಂಸ್ಥೆಗಳ ಸ್ಥಾಪನೆಗಾಗಿ ಬಜೆಟ್‌ನಲ್ಲಿ ‘ಪ್ರಧಾನ ಮಂತ್ರಿ ಆತ್ಮನಿರ್ಭರ್‌ ಸ್ವಸ್ಥ ಭಾರತ’ ಹೆಸರಿನಲ್ಲಿ ಹೊಸ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಗೆ ಮುಂದಿನ ಆರು ವರ್ಷಗಳಲ್ಲಿ 64,180 ಕೋಟಿ ಮೀಸಲಿರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. 

Union Budget 2021: ವೆಚ್ಚ ಹೆಚ್ಚಳ, ಆರ್ಥಿಕ ಪುನಶ್ಚೇತನ

Union Budget 2021: ವೆಚ್ಚ ಹೆಚ್ಚಳ, ಆರ್ಥಿಕ ಪುನಶ್ಚೇತನ

ಪ್ರಜಾವಾಣಿ ವಾರ್ತೆ Updated: 
prajavani

ನಿರ್ಮಲಾ ಸೀತಾರಾಮನ್‌

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ತತ್ತರಿಸಿರುವ ದೇಶದ ಅರ್ಥವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ಮಹತ್ವದ ಹೊಣೆ ಹೊತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಉದ್ಯೋಗ ಸೃಷ್ಟಿಗೆ ದಾರಿಯಾಗುವ ಮೂಲ ಸೌಕರ್ಯ ಅಭಿವೃದ್ಧಿಗೆ ಗಮನ ಕೇಂದ್ರೀಕರಿಸಿ ಸೋಮವಾರ ಲೋಕಸಭೆಯಲ್ಲಿ 2021–22ನೇ ಸಾಲಿನ ಬಜೆಟ್‌ ಮಂಡಿಸಿದ್ದಾರೆ. ಒಟ್ಟು ಆರು ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಆರ್ಥಿಕತೆಯನ್ನು ಸರಿದಾರಿಗೆ ತರುವ ಮುನ್ನೋಟವನ್ನು ದೇಶದ ಮುಂದಿರಿಸಿದ್ದಾರೆ.

ಆರೋಗ್ಯ ಕ್ಷೇತ್ರದ ಮೇಲೆ ಗಣನೀಯ ಮೊತ್ತವನ್ನು ವೆಚ್ಚ ಮಾಡಬೇಕಾದ ಅನಿವಾರ್ಯವನ್ನು ಕೋವಿಡ್‌–19 ಮನದಟ್ಟು ಮಾಡಿದೆ. ಹಾಗಾಗಿಯೇ, ಆರೋಗ್ಯ ಕ್ಷೇತ್ರದ ಮೇಲೆ ಒಟ್ಟು 2.23 ಲಕ್ಷ ಕೋಟಿ ವೆಚ್ಚ ಮಾಡುವುದಾಗಿ ನಿರ್ಮಲಾ ಅವರು ಬಜೆಟ್‌ನಲ್ಲಿ ಭರವಸೆ ನೀಡಿದ್ದಾರೆ. ಕಳೆದ ವರ್ಷ ಈ ವಲಯದಲ್ಲಿ ಸರ್ಕಾರ ಮಾಡಿದ್ದ ವೆಚ್ಚಕ್ಕೆ ಹೋಲಿಸಿದರೆ ಇದು ಶೇಕಡ 137ರಷ್ಟು ಜಾಸ್ತಿ.

ಉದ್ಯೋಗ ಸೃಷ್ಟಿಗೆ ಇರುವ ಬಹುದೊಡ್ಡ ಅಸ್ತ್ರ ಎಂದು ಅರ್ಥಶಾಸ್ತ್ರಜ್ಞರು ಮತ್ತೆ ಮತ್ತೆ ಹೇಳಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಈ ಬಜೆಟ್‌ನಲ್ಲಿ ಪ್ರಾಧಾನ್ಯ ಪಡೆದಿವೆ. 2021–22ರಲ್ಲಿ ಕೇಂದ್ರ ಸರ್ಕಾರದ ಒಟ್ಟು ಬಂಡವಾಳ ವೆಚ್ಚವು
ಒಟ್ಟು 5.54 ಲಕ್ಷ ಕೋಟಿ ಆಗಿರಲಿದೆ. ‘ಇದು 2020–21ರ ಬಜೆಟ್‌ಗೆ ಹೋಲಿಸಿದರೆ ಶೇ 34.5ರಷ್ಟು ಜಾಸ್ತಿ’ ಎಂದು ನಿರ್ಮಲಾ ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್‌ 2020: ಮುಖ್ಯಾಂಶಗಳ ಮಾಹಿತಿ

ಕೇಂದ್ರ ಬಜೆಟ್‌ 2020: ಮುಖ್ಯಾಂಶಗಳ ಮಾಹಿತಿ ಇಲ್ಲಿದೆ ನೋಡಿ...

ಪ್ರಜಾವಾಣಿ ವಾರ್ತೆ Updated: 
prajavani

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ 2020-21ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಶನಿವಾರ  ಮಂಡಿಸಿದರು. ಬಜೆಟ್‌ ಮುಖ್ಯಾಂಶಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...

ಮೇ 2019ರಲ್ಲಿ ಪ್ರಧಾನಿ ಮೋದಿ ಭಾರಿ ಜನಮತದೊಂದಿಗೆ ಸರ್ಕಾರ ರಚಿಸಿದರು. ಮಾನವೀಯತೆ ಮತ್ತು ಬದ್ಧತೆಯ ಸರ್ಕಾರ ನಮ್ಮದು. ಜನರು ಕೇವಲ ರಾಜಕೀಯ ಸ್ಥಿರತೆಗಾಗಿ ಜನಾದೇಶ ಕೊಡಲಿಲ್ಲ. ಅವರು ತಮ್ಮ ಆಶೋತ್ತರ ಬಿಂಬಿಸಬೇಕು ಎಂದು ಸೂಚಿಸಿದರು ಎನ್ನುವ ಮೂಲಕ ಬಜೆಟ್‌ ಭಾಷಣ ಆರಂಭಿಸಿದರು. 

* ಭಾರತದ ಆಕಾಂಕ್ಷೆ: ಎಲ್ಲರ ಜೊತೆಗೆ, ಎಲ್ಲರ ವಿಕಾಸ ಎನ್ನುವ ಮಂತ್ರದೊಂದಿಗೆ ನಮ್ಮ ಪ್ರಧಾನಿ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದಾರೆ. ನೇರ ನಗದು ವರ್ಗಾವಣೆಯಿಂದ ಜನರಿಗೆ ಲಾಭವಾಗಿದೆ. ಕೇಂದ್ರ ಸರ್ಕಾರ ಜಾರಿ ಮಾಡಿದ ಆರೋಗ್ಯ ವಿಮೆ, ಅಪಘಾತ ವಿಮೆ, ಯುಪಿಐ, ಪೇಮೆಂಟ್ ಗೇಟ್‌ ವೇ, ವಸತಿ ಯೋಜನೆ ಸೇರಿದಂತೆ ಹಲವು ಸಮಾಜ ಕಲ್ಯಾಣ ಯೋಜನೆಗಳು ಜನರಿಗೆ ತಲುಪಿದ್ದು ಭಾರತದ ಸದೃಢವೇ ನಮ್ಮ ಆಕಾಂಕ್ಷೆ ಎಂದರು.

* ಮೂರು ಮೂಲಸೂತ್ರಗಳು: ಈ ಬಾರಿ ಬಜೆಟ್‌ಗೆ ಮೂರು ಮೂಲಸೂತ್ರಗಳನ್ನು ಹೊಂದಿದೆ ಎಂದು ನಿರ್ಮಲಾ ಹೇಳಿದರು. 1) ಭಾರತದ ಆಕಾಂಕ್ಷೆ  2) ಆರ್ಥಿಕ ಪ್ರಗತಿ  3) ಸಾಮಾಜಿಕ ಕಾಳಜಿ

ಕೃಷಿ

* ತಾಲೂಕು ‌ಹೋಬಳಿ ಮಟ್ಟದಲ್ಲಿ ಆಹಾರ ಸಂಸ್ಕರಣ ಘಟಗಳನ್ನು ಸ್ಥಾಪಿಸಲು ರಾಜ್ಯ ಸರಕಾರಗಳಿಗೆ ಕೇಂದ್ರ ಹಣಕಾಸು ಸಹಾಯ

* ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಕೃಷಿ ಉಡಾನ್ ಯೋಜನೆ

* ಪ್ರತ್ಯೇಕ ವಿಮಾನದ ಮೂಲಕ ಕೃಷಿ ಉತ್ಪನ್ನಗಳ ಸಾಗಾಟ

* ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕೃಷಿ ವಿಮಾನಯಾನಕ್ಕೆ ಸರಕಾರದ ಮನ್ನಣೆ 

* ಪ್ರಧಾನಮಂತ್ರಿ ಕಿಸಾನ್‌ ಕ್ರೆಡಿಟ್‌ಕಾರ್ಡ್ ಸ್ಕೀಮ್ ಗೆ 15 ಲಕ್ಷ ಕೋಟಿ ಮೀಸಲು

* ಹಾಲು ಉತ್ಪಾದನೆ ದ್ವಿಗುಣಗೊಳಿಸಲು ಸರಕಾರದ ‌ಆದ್ಯತೆ

* ರೈತರ ಆದಾಯ 2022ರವೇಳೆಗೆ ದ್ವಿಗುಣಗೊಳಿಸಲು ಕ್ರಮ

* ಜಲಕ್ಷಾಮ ಸಮಸ್ಯೆಯುಳ್ಳ 100 ಜಿಲ್ಲೆಗಳಿಗೆ ಸಮಗ್ರ ಕಾರ್ಯ ಸೂಚಿ

* 20 ಲಕ್ಷ ರೈತರಿಗೆ ಪಂಪ್‌ಸೆಟ್‌ ವಿತರಣೆ ಮಾಡಲಾಗುವುದು ಅಂಥ ಹೇಳಿದರು. 

* ರೈತರಿಗಾಗಿ ಕಿಸಾನ್ ರೈಲು ಘೋಷಣೆ, ಪಿಪಿಪಿ ಮಾದರಿಯಲ್ಲಿ ನಿರ್ಮಾಣ

* 20 ಲಕ್ಷ ರೈತರಿಗೆ ಸೋಲಾರ್ ಪಂಪ್ ಸೆಟ್ ವಿತರಣೆ,

*  ರೈಲ್ವೇ ಟ್ರ್ಯಾಕ್ ನ ಬದಿಯಲ್ಲಿ ಖಾಲಿ ಜಾಗದಲ್ಲಿ ಸೋಲಾರ್ ಫಲಕಗಳ ಅಳವಡಿಕೆ ಗೆ ಹೊಸ ಯೋಜನೆ ವಿದ್ಯುತ್ ಬಿಲ್ ಗಾಗಿ 3 ವರ್ಷದ ಒಳಗೆ ಪ್ರೀ ಪೈಡ್ ಸ್ಮಾರ್ಟ್ Energy meter ಅಳವಡಿಕೆಗೆ ರಾಜ್ಯಗಳಿಗೆ ಸಲಹೆ

* ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ 6.11 ಕೋಟಿ ರೈತರಿಗೆ ವಿಮೆ ಪ್ರಯೋಜನೆ ಸಿಕ್ಕಿದೆ

*ಕುಸುಮ್‌ ಯೋಜನೆ : ರೈತರು ಅನ್ನದಾತರಷ್ಟೇ ಅಲ್ಲ ವಿದ್ಯುತ್‌ ಉತ್ಪಾದಕರು ಆಗುತ್ತಾರೆ. ಪಂಪ್‌ಸೆಟ್‌ಗಳಿಗೆ ಸೋಲಾರ್ ಶಕ್ತಿ ಒದಗಿಸುವ ಯೋಜನೆ ಕುಸುಮ್‌ ಯೋಜನೆ ಘೋಷಣೆ ಮಾಡಿದ್ದು ರೈತರು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್‌  ಅನ್ನು ಗ್ರಿಡ್ ಮೂಲಕ ಸರ್ಕಾರವೇ ಖರೀದಿಸಲಿದೆ. ಈ ಮೂಲಕ ಬರಡು ಭೂಮಿಯಲ್ಲಿಯೂ ರೈತರು ಹಣ ಗಳಿಸಬಹುದು. 

* ಸಾವಯವ ಉತ್ಪನ್ನಗಳ ಆನ್‌ಲೈನ್ ಮರಾಟ: ರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಉತ್ಪನ್ನಗಳ ಆನ್‌ಲೈನ್ ಮರಾಟಕ್ಕೆ ವ್ಯವಸ್ಥೆ ಮಾಡಲಾಗುವುದು.

* ಕೃಷಿ ಸಾಲ: ಕೃಷಿಗೆ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದು. 2020–21ರ ಸಾಲಿಗೆ 15 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ ಹೊಂದಲಾಗಿದ್ದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಎಲ್ಲ ರೈತರನ್ನು ಸೇರ್ಪಡೆ ಮಾಡಲಾಗುವುದು.

1.6 ಲಕ್ಷ ಕೋಟಿ ಮೀಸಲು:  ಕೃಷಿ ಮತ್ತು ಸಂಬಂಧಿತ ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಗೆ 2.83 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಘೋಷಣೆ ಮಾಡಲಾಗಿದೆ. ಕೃಷಿಗಾಗಿ 1.6 ಲಕ್ಷ ಕೋಟಿ ಮೀಸಲಿರಿಸಲಾಗಿದೆ.

* ಪಶುಸಂಗೋಪನೆ: ರಾಸುಗಳಲ್ಲಿ ಕಾಲುಬಾಯಿ ರೋಗ, ಕುರಿ ಮತ್ತು ಮೇಕೆಗಳಲ್ಲಿ ಪಿಪಿಪಿ ಕಾಯಿಲೆ ಮುಕ್ತ ಭಾರತದ ಘೋಷಣೆ. ಹಾಲು ಉತ್ಪಾದನೆಯನ್ನು 53.5 ಟನ್‌ನಿಂದ 108 ಟನ್‌ಗೆ ಹೆಚ್ಚಿಸುವ ಗುರಿಯನ್ನು ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. 

ಮೀನುಗಾರಿಕೆ

1 ಲಕ್ಷ ಕೋಟಿ ಮೀನು ರಫ್ತಿನ ಗುರಿ (2025ರವರೆಗೆ)

*200 ಲಕ್ಷ ಟನ್‌ ಮೀನು ಉತ್ಪಾದನೆ ಗುರಿ.

* ಸಾಗರ್ ಮಿತ್ರ ಯೋಜನೆ ಮತ್ತು ಮೀನು ಉತ್ಪಾದಕ ಸಂಸ್ಥೆಗಳ ಮೂಲಕ ಗ್ರಾಮೀಣ ನಿರುದ್ಯೋಗಿ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಗಳಿಕೆ.‌

ಆರೋಗ್ಯ ಮತ್ತು ನೈರ್ಮಲ್ಯ

* ಆರೋಗ್ಯ ಮತ್ತು ನೈರ್ಮಲ್ಯಕ್ಕೆ  69,000 ಕೋಟಿ ಮೀಸಲು

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗಾಗಿ 6400 ಕೋಟಿ 

ಜನ ಔಷಧಿ ಕೇಂದ್ರಗಳ ವಿಸ್ತರಣೆ, ನೂತನ 2000 ಔಷಧಿಗಳ ಸೇರ್ಪಡೆ

ಸ್ವಚ್ಛ ಭಾರತ ಯೋಜನೆಗಾಗಿ 12.300 ಕೋಟಿ

* ನೀರಿನ ಸಮಸ್ಯೆಗೆ ಪರಿಹಾರ: ನೀರಿನ ಸಮಸ್ಯೆ ಇರುವ ದೇಶದ 100 ಜಿಲ್ಲೆಗಳಿಗೆ ಸಮಗ್ರ ಯೋಜನೆ.

* 112 ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಡೆಯಡಿ ಆಸ್ಪತ್ರೆ ನಿರ್ಮಾಣ. 2024ರ ವೇಳೆಗೆ ದೇಶದೆಲ್ಲೆಡೆ ಜನೌಷಧ ಕೇಂದ್ರಗಳನ್ನು ವಿಸ್ತರಿಸಲು ಬದ್ಧ

* ಇಂದ್ರಧನುಷ್: ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಇಂದ್ರಧನುಷ್ ಯೋಜನೆಯ ವಿಸ್ತರಣೆ.

* ಜನ ಆರೋಗ್ಯ ಯೋಜನೆ:  ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ತಾಲ್ಲೂಕು ಮತ್ತು ಹೋಬಳಿ ಹಂತದ ಅಸ್ಪತ್ರೆಗಳಿಗೂ ಸೌಲಭ್ಯ ಒದಗಿಸಲು ಚಿಂತನೆ. ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ.

* ಕ್ಷಯ ರೋಗ ನಿರ್ಮೂಲನೆ: ಕ್ಷಯರೋಗ ಹೋದರೆ ದೇಶ ಬಲಿಷ್ಠವಾಗುತ್ತೆ. 2025ರ ವೇಳೆಗೆ ಕ್ಷಯ ರೋಗ ನಿರ್ಮೂಲನೆಗೆ ಪಣ. 2024ರ ಹೊತ್ತಿಗೆ ದೇಶದ ಎಲ್ಲ ಜಿಲ್ಲೆಗಳಿಗೆ ಜನ ಆರೋಗ್ಯ ಯೋಜನೆ ವಿಸ್ತರಣೆ ಮಾಡಲಾಗುವುದು.

ಶಿಕ್ಷಣ ಮತ್ತು ಕೌಶಲ

ಶಿಕ್ಷಣಕ್ಕೆ 99,300 ಕೋಟಿ. ಕೌಶಲಾಭಿವೃದ್ದಿಗೆ 3,000 ಕೋಟಿ ಅನುದಾನ.

* ಶಿಕ್ಷಣ ಕ್ಷೇತ್ರದಲ್ಲಿ  FDI ( Foreign direct investment) ಗೆ ಅವಕಾಶ

* ಹೊರ ದೇಶದ ವಿಧ್ಯಾರ್ಥಿಗಳು ಭಾರತದಲ್ಲಿ ಕಲಿಕೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹೊಸ ಸ್ಕಾಲರ್‌ಶಿಪ್ ಯೋಜನೆ ಜಾರಿ

* ಹೊಸ ಶಿಕ್ಷಣ ನೀತಿ: 2030ರ ಹೊತ್ತಿಗೆ ಜಗತ್ತಿನ ಅತಿಹೆಚ್ಚು ಉದ್ಯೋಗಕ್ಕೆ ಸಿದ್ಧರಿರುವ ಜನರು ನಮ್ಮ ದೇಶದಲ್ಲಿ ಇರುತ್ತಾರೆ. ಹೊಸ ಶಿಕ್ಷಣ ನೀತಿಗೆ 2 ಲಕ್ಷಕ್ಕೂ ಹೆಚ್ಚು ಸಲಹೆಗಳು ಬಂದಿದ್ದು ಶೀಘ್ರ ಹೊಸ ಶಿಕ್ಷಣ ನೀತಿ ಘೋಷಣೆ ಮಾಡಲಾಗುತ್ತದೆ. 

* ಇಂಟರ್ನ್‌ಶಿಪ್: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರಿಗೆ ಇಂಟರ್ನ್‌ಶಿಪ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.

* ಆನ್‌ಲೈನ್‌ನಲ್ಲಿ ಪದವಿ: ಶಿಕ್ಷಣವಂಚಿತರಿಗಾಗಿ ಆನ್‌ಲೈನ್‌ನಲ್ಲಿ ಪದವಿ ಶಿಕ್ಷಣಕ್ಕೆ ಅವಕಾಶ ನೀಡಲಾಗುತ್ತದೆ. 

* ಪೊಲೀಸ್‌ ವಿಶ್ವವಿದ್ಯಾಲಯ:  ನ್ಯಾಷನಲ್ ಪೊಲೀಸ್‌ ವಿಶ್ವವಿದ್ಯಾಲಯ ಮತ್ತು ಫೊರೆನ್ಸಿಕ್ ವಿಶ್ವವಿದ್ಯಾಲಯಗಳ ಪ್ರಸ್ತಾವ ಮಂಡನೆಯಾಗಿದ್ದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು.

* ನರ್ಸ್‌ಗಳ ಕೌಶಲ ವೃದ್ಧಿ: ನರ್ಸ್‌ಗಳ ಕೌಶಲ ವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಲಾಗಿದೆ. ಭಾರತ ಸಂಜಾತ ನರ್ಸ್‌ಗಳಿಗೆ ವಿದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ವಿಶೇಷ ಯೋಜನೆ ರೂಪಿಸಲಾಗುವುದು.

ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ

* ಈ ಸಾಲಿನಲ್ಲಿ  27,300 ಕೋಟಿ ಮೀಸಲಿಡಲಾಗಿದೆ.

* ಸ್ಮಾರ್ಟ್‌ಫೋನ್‌, ಎಲೆಕ್ಟಾನಿಕ್‌ ಸಾಧನಗಳ ಉತ್ಪಾದನೆ ಹಾಗೂ ಸೆಮಿ ಕಂಡಕ್ಟರ್‌ ಪ್ಯಾಕಿಂಗ್‌ ವಿಶೇಷ ಯೋಜನೆ ಇದಕ್ಕಾಗಿ  1,480 ಕೋಟಿ ವೆಚ್ಚ. ನಾಲ್ಕು ವರ್ಷಗಳಲ್ಲಿ ಸಾಧನೆಯ ಗುರಿ.

* ರಾಷ್ಟ್ರೀಯ ಜವಳಿ ಮಿಷನ್‌ ಸ್ಥಾಪನೆ

ಮಹಿಳೆ ಮತ್ತು ಮಕ್ಕಳು

ಬೇಟಿ ಬಚಾವೋ ಬೇಟಿ ಪಡಾವೋ: ಈ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು ಒಟ್ಟಾರೆ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಬಾಲಕಿಯರ ಸಂಖ್ಯೆ ಹೆಚ್ಚಾಗಿದೆ. ಪ್ರೌಢಶಿಕ್ಷಣದಲ್ಲಿಯೂ ಪರಿಸ್ಥಿತಿ ಸುಧಾರಿಸುತ್ತಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌: 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ಒದಗಿಸುವ ಮೂಲಕ ಮಹಿಳೆಯರು, ಮಕ್ಕಳ ಸ್ಥಿತಿಗತಿ ಅರಿತು ಸ್ಪಂದಿಸಲು ಸಾಧ್ಯವಾಯಿತು. 

ಪೌಷ್ಟಿಕಾಂಶ ಕೊರತೆ ನೀಗಿಸಲು 35,600 ಕೋಟಿ:  ಪೌಷ್ಟಿಕಾಂಶ ಕೊರತೆ ನೀಗಿಸಲು ಸರ್ಕಾರ 35,600 ಕೋಟಿ ರೂಪಾಯಿ ಒದಗಿಸುವ ಘೋಷಣೆ ಮಾಡಿದೆ.

ಧಾನ್ಯ ಲಕ್ಷ್ಮಿ ಯೋಜನೆ: ಸ್ವ ಸಹಾಯ ಗುಂಪುಗಳಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ. ಈ ಗುಂಪುಗಳನ್ನು ಧಾನ್ಯ ಲಕ್ಷ್ಮಿ ಎಂದು ಕರೆಯಲಾಗುವುದು. ನಬಾರ್ಡ್, ಮುದ್ರಾ ಯೋಜನೆಯಡಿ ನೆರವು ನೀಡಲಾಗುವುದು.

ಮೂಲ ಸೌಕರ್ಯ

100 ಲಕ್ಷ ಕೋಟಿ ಹೂಡಿಕೆ (ಮುಂದಿನ 5 ವರ್ಷಗಳಲ್ಲಿ)

* ದೇಶದಾದ್ಯಂತ 6500 ಯೋಜನೆಯ ಕಾಮಗಾರಿಗಳು ನಡೆಯುತ್ತಿವೆ

* ರಾಷ್ಟ್ರೀಯ ಸರಕು ಸಾಗಣೆ ಪಾಲಿಸಿಯನ್ನು ಶೀಘ್ರದಲ್ಲೇ ಮಂಡಿಸಲಾಗುವುದು. 

* ಹೊಸದಾಗಿ ನವೋದ್ಯಮ ಸ್ಥಾಪಿಸುವವರಿಗೆ ಮೂಲಸೌಕರ್ಯದಲ್ಲಿ ರಿಯಾಯಿತಿ ( ಭೂಮಿ, ಇಂಧನ ಇತ್ಯಾದಿ)

* ದೆಹಲಿ– ಮುಂಬೈ ಎಕ್ಸ್‌ಪ್ರೆಸ್‌ವೇ ಯೋಜನೆ 2023ಕ್ಕೆ ಅಂತ್ಯ

* ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆ ಘೋಷಣೆ

ವಿಮಾನಯಾನ

*  2024 ರ ಒಳಗೆ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು 1.7 ಲಕ್ಷ ಕೋಟಿ ಮೀಸಲು

* ವಿಮಾನಗಳ ಸಂಖ್ಯೆ ದುಪ್ಪಟ್ಟು ಮಾಡಲಾಗುವುದು

* ಉಡಾನ್ ಯೋಜನೆ ಆಡಿಯಲ್ಲಿ ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣ ಸೇರ್ಪಡೆ. 

ಸಮಾಜ ಕಲ್ಯಾಣ ಮತ್ತು ಹಿರಿಯ ನಾಗರಿಕ

* ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ವಿವಿಧ ಯೋಜನೆಗಳಿಗೆ 85000 ಕೋಟಿ ಮೀಸಲು

* ಮಕ್ಕಳ ಪೋಷಣೆ‌ ಮತ್ತು ಆಹಾರಕ್ಕಾಗಿ 35600 ಕೋಟಿ ಮೀಸಲು

* ಹಿರಿಯ ನಾಗರಿಕರ ಮತ್ತು ವಿಕಲಚೇತನರ ಯೋಜನೆಗಳಿಗೆ 9500 ಕೋಟಿ ಮೀಸಲು

ರೈಲ್ವೆ ಬಜೆಟ್‌

* ಬೆಂಗಳೂರಿಗೆ ಸಬ್‌ ಅರ್ಬನ್‌ ರೈಲು ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇದಕ್ಕಾಗಿ   18,600 ಕೋಟಿ ಮೀಸಲು ಇರಿಸಲಾಗಿದೆ.

* 11,000 ಟ್ರ್ಯಾಕ್ ವಿದ್ಯುದ್ದೀಕರಣ ಮಾಡಲಾಗುವುದು

* ರೈಲ್ವೆ ನಿಲ್ದಾಣಗಳಲ್ಲಿ 550 ವೈ-ಫೈ ಸೌಲಭ್ಯ ಕಲ್ಪಿಸಲಾಗುವುದು

* ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗೆ ಹೆಚ್ಚು ಒತ್ತು ನೀಡಲಾಗುವುದು

* ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸಲು ಹೆಚ್ಚಿನ ತೇಜಸ್ ರೈಲುಗಳ ನಿಯೋಜಿಸಲಾಗುವುದು

* ತೇಜಸ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಎಲ್ಲ ರಾಜ್ಯಗಳಿಗೆ ವಿಸ್ತರಿಸಲಾಗುವುದು

ಗುರುವಾರ, ಫೆಬ್ರವರಿ 4, 2021

ಬಜೆಟ್ ಇತಿಹಾಸ ಕುರಿತ ಮಾಹಿತಿ

ಭಾರತದ ಬಜೆಟ್‌ ಇತಿಹಾಸ, ನಿಮಗಿದು ಗೊತ್ತಿರಲಿ!

 | Vijaya Karnataka | Updated: 01 Feb 2021, 12:02:19 PM

ವಿತ್ತ ಸಚಿವರು ಮಂಡಿಸುತ್ತಿರುವ ಕೇಂದ್ರ ಬಜೆಟ್‌ಗೆ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದೆ. ಭಾರತದ ಬಜೆಟ್‌ನ ಇತಿಹಾಸ, ಸ್ವಾರಸ್ಯಕರ ಸಂಗತಿಗಳು, ವಿವಿಧ ವಲಯಗಳ ನಿರೀಕ್ಷೆಗಳು ಇಲ್ಲಿವೆ

ಇಂದು ವಿತ್ತ ಸಚಿವರು ಮಂಡಿಸುತ್ತಿರುವ ಕೇಂದ್ರ ಬಜೆಟ್‌ಗೆ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದೆ. ಭಾರತ ಸರಕಾರ ಮಂಡಿಸುವ ಬಜೆಟ್‌ನ ಇತಿಹಾಸ, ಸ್ವಾರಸ್ಯಕರ ಸಂಗತಿಗಳು, ವಿವಿಧ ವಲಯಗಳ ನಿರೀಕ್ಷೆಗಳು ಇಲ್ಲಿವೆ.

ಸಂಜೆ 5 ಗಂಟೆ: 2000ನೇ ಇಸವಿಯವರೆಗೆ, ಸಂಜೆ 5 ಗಂಟೆಗೆ ಬಜೆಟ್‌ನ್ನು ಮಂಡಿಸಲಾಗುತ್ತಿತ್ತು. ಭಾರತ ಹಾಗೂ ಬ್ರಿಟನ್‌ನ ಸಮಯ ವ್ಯತ್ಯಾಸ ಸರಿದೂಗಿಸಲು ಅಳವಡಿಸಿಕೊಂಡಿದ್ದ ಪದ್ಧತಿಯಿದು. ನಂತರ ಅದನ್ನು ಬೆಳಗ್ಗೆ 11 ಗಂಟೆಗೆ ನಿಗದಿಪಡಿಸಲಾಯಿತು.

ಅತ್ಯಧಿಕ ಬಜೆಟ್‌ ಮಂಡನೆ: 
ವಿತ್ತ ಮಂತ್ರಿ ಹಾಗೂ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ಹತ್ತು ಬಾರಿ ಬಜೆಟ್‌ ಮಂಡಿಸುವ ಮೂಲಕ, ಅತಿ ಹೆಚ್ಚು ಸಲ ಆಯವ್ಯಯ ಮಂಡಿಸಿದ ದಾಖಲೆ ಹೊಂದಿದ್ದಾರೆ. ತಮ್ಮ ಜನ್ಮದಿನದಂದೇ (ಫೆ.29) ಎರಡು ಬಾರಿ ಬಜೆಟ್‌ ಮಂಡಿಸಿದ ವಿತ್ತ ಮಂತ್ರಿಯೂ ಅವರೊಬ್ಬರೇ.

160 ನಿಮಿಷ: 
ಸ್ವತಂತ್ರ ಭಾರತದಲ್ಲಿಅತಿ ದೀರ್ಘ ಕಾಲ ಆಯವ್ಯಯ ಓದಿದ ದಾಖಲೆ ನಿರ್ಮಲಾ ಸೀತಾರಾಮನ್‌ ಅವರದು, 2020ರಲ್ಲಿ. ಇಷ್ಟು ಹೊತ್ತು ಓದಿದ ಬಳಿಕವೂ ಹಲವು ಪುಟಗಳು ಉಳಿದಿದ್ದವಾದರೂ, ಬಳಲಿಕೆಯಿಂದ ಓದು ನಿಲ್ಲಿಸಿದರು.


171.15 ಕೋಟಿ ರೂ.: 
ವಿತ್ತ ಸಚಿವ ಆರ್‌.ಕೆ.ಷಣ್ಮುಖಂ ಚೆಟ್ಟಿ ಅವರು 1947 ನವೆಂಬರ್‌ನಲ್ಲಿಮಂಡಿಸಿದ ಸ್ವತಂತ್ರ ಭಾರತದ ಮೊದಲ ಬಜೆಟ್‌ನ ಒಟ್ಟಾರೆ ಆದಾಯ 171.15 ಕೋಟಿ ರೂ. ಇತ್ತು. ವೆಚ್ಚ 197.39 ಕೋಟಿ ರೂ.ಗಳಿತ್ತು. ಕೊರತೆ ವೆಚ್ಚ ವಿಭಜನೆ ಸಂತ್ರಸ್ತರ ಮರುವಸತಿಗೆ ಸಂಬಂಧಿಸಿದ್ದಾಗಿತ್ತು

ಕೃಷಿಗೆ ಹೊಸ ಯೋಜನೆಗಳು

ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರವನ್ನು ಮೇಲೆತ್ತಲು, ಕ್ರುದ್ಧಗೊಂಡಿರುವ ರೈತರನ್ನು ತಣಿಸಲು ಹಲವು ಹೊಸ ಘೋಷಣೆಗಳನ್ನು ನಿರ್ಮಲಾ ಮಾಡಬಹುದು. ಆತ್ಮನಿರ್ಭರ ಪ್ಯಾಕೇಜ್‌ನಲ್ಲಿ1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿ ಘೋಷಿಸಲಾಗಿತ್ತು. ಇದರಿಂದ ಒಟ್ಟಾರೆ ಕಳೆದ ವರ್ಷದ ಕೃಷಿ ಬಜೆಟ್‌ ದುಪ್ಪಟ್ಟುಗೊಂಡಿತ್ತು. ಈ ಬಾರಿ ಪಿಎಂ ಕಿಸಾನ್‌ ಅಥವಾ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನಂಥ ಹಲವು ಕ್ರಮಗಳ ನಿರೀಕ್ಷೆ ಈ ಕ್ಷೇತ್ರದ ತಜ್ಞರದು.

ಬ್ಯಾಡ್‌ ಬ್ಯಾಂಕ್‌

ಬ್ಯಾಂಕಿಂಗ್‌ ವ್ಯವಸ್ಥೆಯ ಲೋಪ ಹಾಗೂ ಕೋವಿಡ್‌ ಸನ್ನಿವೇಶದಿಂದಾಗಿ ಕೆಟ್ಟ ಸಾಲಗಳಲ್ಲಿಭಾರಿ ಹೆಚ್ಚಳವಾಗಿದೆ. ಆರ್ಥಿಕತೆಯಲ್ಲಿಸಾಲದ ಆಹ್ವಾನ ಹೆಚ್ಚಳ ಹಾಗೂ ಮಾರಾಟಕ್ಕೆ ಮುನ್ನ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮೌಲ್ಯ ಹೆಚ್ಚಳಕ್ಕಾಗಿ, ಬ್ಯಾಡ್‌ ಬ್ಯಾಂಕ್‌ ಒಂದನ್ನು ಸರಕಾರ ಸೃಷ್ಟಿಸುವ ಸಾಧ್ಯತೆಯಿದ್ದು, ಕೆಟ್ಟ ಸಾಲಗಳನ್ನು ಅದಕ್ಕೆ ವರ್ಗಾಯಿಸಿ, ಬಳಿಕ ಅದನ್ನು ರಿಯಾಯಿತಿ ದರದಲ್ಲಿಸಾಗಹಾಕಬಹುದು.

ಮೂಲಸೌಕರ್ಯ ವ್ಯವಸ್ಥೆ:ಮೂಲಸೌಕರ್ಯ ಕ್ಷೇತ್ರ ಯಾವಾಗಲೂ ಹೆಚ್ಚಿನ ಹಣದ ಹರಿವನ್ನು ನಿರೀಕ್ಷಿಸುತ್ತದೆ. ಕೊರೊನಾ ಕಾಲದ ಉದ್ಯೋಗನಷ್ಟ ಸರಿದೂಗಿಸಲು ಇನ್ನಷ್ಟು ಹರಿವಿನಿ ನಿರೀಕ್ಷೆ. ರಾಷ್ಟ್ರೀಯ ಮೂಲಸೌಕರ್ಯ ವಾಹಿನಿ (ಎನ್‌ಐಪಿ) ಅಳವಡಿಕೆಗೆ 2020-25ರ ಅವಧಿಯಲ್ಲಿ111 ಲಕ್ಷ ಕೋಟಿ ರೂ. ಹರಿವು ಬೇಕಾದೀತೆಂಬ ನಿರೀಕ್ಷೆಯಿತ್ತು. ವಿದೇಶಿ ಹೂಡಿಕೆದಾರರು ಹಾಗೂ ಆಂತರಿಕ ಉತ್ಪಾದಕರನ್ನು ಆಕರ್ಷಿಸಲು ಉತ್ಪಾದನೆ ಆಧರಿತ ಭತ್ಯೆ ವ್ಯವಸ್ಥೆ (ಪಿಎಲ್‌ಐ)ಯ ಅಳವಡಿಕೆಯ ಸಾಧ್ಯತೆ.


​ಎಂಎಸ್‌ಎಂಇಗಳತ್ತ ಗಮನ

ಸಣ್ಣ ಹಾಗೂ ಮಧ್ಯಮವರ್ಗದ ಉದ್ದಿಮೆಗಳು ಬಿಜೆಪಿಯ ನಿಷ್ಠಾವಂತ ಮತಬ್ಯಾಂಕ್‌ ಹಾಗೂ ಕೊರೊನಾ ಕಾಲದಲ್ಲಿಹೆಚ್ಚಿನ ಹೊಡೆತ ತಿಂದವರು. ಸಾಕಷ್ಟು ಉದ್ಯೋಗನಷ್ಟ ಇಲ್ಲಿಆಗಿದೆ. ಈ ವಲಯ ಮೇಲೆತ್ತಲು ಹಾಗೂ ಉದ್ಯೋಗಸೃಷ್ಟಿಗಾಗಿ ಹೆಚ್ಚಿನ ಹಣವನ್ನು ಬಜೆಟ್‌ ಸಂಕಲ್ಪಿಸಲಿದೆ. ಆತ್ಮನಿರ್ಭರ ಪ್ಯಾಕೇಜ್‌ನಲ್ಲೂಇದಕ್ಕೆ ವಿನಿಯೋಗವಿತ್ತು. ಇಲ್ಲಿನ ಸವಾಲು ಎಂದರೆ ಸ್ಟೀಲ್‌, ತಾಮ್ರ, ಸಿಮೆಂಟ್‌ ಮುಂತಾದ ಕಚ್ಚಾವಸ್ತುಗಳ ವ್ಯಾಪಾರ ನಿರ್ಬಂಧ, ಬೆಲೆಯೇರಿಕೆ, ಸುಂಕಗಳ ನಿಯಂತ್ರಣ. ಹೊಸ ಉದ್ದಿಮೆಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿರುವ ಬ್ಯಾಂಕ್‌ಗಳನ್ನೂ ದಾರಿಗೆ ತರುವ ಸವಾಲು ಇದೆ.

ಖಾಸಗೀಕರಣ: ಖಾಸಗೀಕರಣದಿಂದ 40 ಶತಕೋಟಿ ಡಾಲರ್‌ನಷ್ಟು ಹಣವನ್ನು ಕಲೆಹಾಕುವ ಉದ್ದೇಶ ಸರಕಾರಕ್ಕೆ ಇದೆ. ನಷ್ಟದ ಸ್ಥಿತಿಯಲ್ಲಿರುವ ಇಂಧನ, ಗಣಿಗಾರಿಕೆ, ಬ್ಯಾಂಕಿಂಗ್‌ ಸಂಸ್ಥೆಗಳನ್ನು ಹಾಗೂ ಪ್ರಮುಖ ಸಂಸ್ಥೆಗಳ ಅಲ್ಪ ಷೇರುಗಳನ್ನು ಮಾರಾಟ ಮಾಡುವ ಇರಾದೆ ಸರಕಾರದ್ದು. ಭಾರತ್‌ ಪೆಟ್ರೋಲಿಯಂ, ಎಲ್‌ಐಸಿ, ಬಿಎಸ್ಸೆನ್ನೆಲ್‌, ಏರ್‌ ಇಂಡಿಯಾ ಸಂಭಾವ್ಯ ಸಂಸ್ಥೆಗಳು.


ಬಜೆಟ್‌ ನಿರೀಕ್ಷೆಗಳು: ಕೋವಿಡೋತ್ತರ ಆರೋಗ್ಯ ಸೇವೆ

2020ರ ಪೂರ್ತಿ ಕೋವಿಡ್‌ ವಿರುದ್ಧ ಹೋರಾಟ ನಡೆಸಿದ ಕೇಂದ್ರ ಸರಕಾರ, ಈ ವರ್ಷ ಆರೋಗ್ಯ ಸೇವೆಗೆ ಹೆಚ್ಚಿನ ಗಮನ ಹಾಗೂ ಅನುದಾನ ನೀಡಲಿದೆ ಎಂಬುದು ತಜ್ಞರ ಅನಿಸಿಕೆ. ಕೋವಿಡ್‌ ಮತ್ತು ಇತರ ಸೋಂಕುಗಳಿಗೆ ಸಂಬಂಧಿಸಿದ, ಜೀವತಂತ್ರಜ್ಞಾನ ಹಾಗೂ ವೈದ್ಯಕೀಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಿದೆ. ಕಳೆದ ದಶಕದಲ್ಲಿದೇಶದ ತನ್ನ ಜಿಡಿಪಿಯ ಶೇ.1ನ್ನು ಮಾತ್ರ ಆರೋಗ್ಯ ಸೇವೆಯತ್ತ ಹರಿಸಿದೆ. ಅಮೆರಿಕ ಶೇ.17ರಷ್ಟನ್ನು ನೀಡುತ್ತದೆ. ಕೋವಿಡ್‌ ನಮ್ಮ ಆರೋಗ್ಯಸೇವೆಯ ದೌರ್ಬಲ್ಯವನ್ನು ತೋರಿಸಿದೆ. ಈ ವಲಯದಲ್ಲಿಮೂಲಸೌಕರ್ಯ ವೃದ್ಧಿ, ಮಾನವ ಸಂಪನ್ಮೂಲ ವೃದ್ಧಿ, ಕೌಶಲ್ಯವೃದ್ಧಿ, ಡಿಜಿಟಲ್‌ ಹೆಲ್ತ್‌ಕೇರ್‌ಗಳಿಗೆ ವಿನಿಯೋಗ ಹೆಚ್ಚಿಸಲಿದೆ. 'ವೈದ್ಯಕೀಯ ಡಿಪ್ಲೊಮಸಿ' ಅಥವಾ 'ಲಸಿಕೆ ರಾಜತಾಂತ್ರಿಕತೆ'ಯ ಮೂಲಕ ಸರಕಾರ ಈ ವಲಯದ ಸಾಧ್ಯತೆಗಳನ್ನೂ ಅರ್ಥ ಮಾಡಿಕೊಂಡಿದೆ. ಪ್ರಸ್ತುತ ಶೇ.1ರಷ್ಟಿರುವ ಆರೋಗ್ಯ ಟ್ಯಾಕ್ಸ್‌ ಅನ್ನು ಹೆಚ್ಚಿಸುವ ಸಾಧ್ಯತೆ.


ಮುದ್ರಣದ ಕತೆ

ಮೊದಲು ಬಜೆಟ್‌ ಪ್ರತಿಗಳು ರಾಷ್ಟ್ರಪತಿ ಭವನದಲ್ಲಿ ಮುದ್ರಣಗೊಳ್ಳುತ್ತಿದ್ದವು. 1950ರಲ್ಲಿ ಬಜೆಟ್‌ ಪ್ರತಿ ಸೋರಿಕೆಯಾದ ಬಳಿಕ, ಮಿಂಟೋ ರಸ್ತೆಗೆ ಮುದ್ರಣ ಸ್ಥಳಾಂತರಗೊಂಡಿತು. ನಂತರ ನಾತ್‌ರ್‍ ಬ್ಲಾಕ್‌ನ ನೆಲಮಳಿಗೆಗೆ ಸ್ಥಳಾಂತರವಾಯಿತು.

ಬ್ಲ್ಯಾಕ್‌ ಬಜೆಟ್‌: 1973-74ರಲ್ಲಿಗಂಭೀರ ಆರ್ಥಿಕ ಒತ್ತಡದ ನಡುವೆ ಮಂಡನೆಯಾದ ಆಯವ್ಯಯವನ್ನು 'ಬ್ಲ್ಯಾಕ್‌ ಬಜೆಟ್‌' ಎಂದೇ ಕರೆಯಾಗುತ್ತದೆ. 1971ರಲ್ಲಿನಡೆದ ಬಾಂಗ್ಲಾಯುದ್ಧ, ಮಾನ್ಸೂನ್‌ ವೈಫಲ್ಯದ ಪರಿಣಾಮ ಬಜೆಟ್‌ ಮೇಲಾಗಿ, 550 ಕೋಟಿ ರೂ.ಗಳ ಕೊರತೆ ತೋರಿಸಿತ್ತು. ಕಲ್ಲಿದ್ದಲು ಗಣಿಗಳು ಹಾಗೂ ಜನರಲ್‌ ಇನ್ಸೂರೆನ್ಸ್‌ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸುವ ಪ್ರಸ್ತಾವ ಮಂಡಿಸಿತ್ತು.


​ಬಹಿ ಖಾತಾ ಇರುತ್ತಾ?

2019ರಲ್ಲಿವಿತ್ತ ಸಚಿವೆ ನಿರ್ಮಲಾ ಅವರು, ಸಾಂಪ್ರದಾಯಿಕ ಬಜೆಟ್‌ ಬ್ರೀಫ್‌ಕೇಸ್‌ ಬದಲು ಬಜೆಟ್‌ ಕಡತವಿದ್ದ ಬಟ್ಟೆಯ 'ಬಹೀ ಖಾತಾ' ಸಂಸತ್ತಿಗೆ ತಂದಿದ್ದರು. ಬಜೆಟ್‌ ಬ್ರೀಫ್‌ಕೇಸ್‌ ಪರಂಪರೆ ಇಂಗ್ಲೆಂಡ್‌ನ ಬಜೆಟ್‌ ಚೀಫ್‌ ವಿಲಿಯಂ ಗ್ಲಾಡ್‌ಸ್ಟೋನ್‌ನದು. ಈತನ ಭಾಷಣ ಎಷ್ಟು ಉದ್ದವಿರುತ್ತಿತ್ತು ಎಂದರೆ ಅದನ್ನೆಲ್ಲತುಂಬಿಸಲು ಬ್ರೀಫ್‌ಕೇಸ್‌ ಅಗತ್ಯವಾಗಿತ್ತು. ಈ ಸಲ ಬಜೆಟ್‌ ಮುದ್ರಣವಿಲ್ಲದಿರುವುದರಿಂದ ಬಹೀ ಖಾತಾದ ಕತೆ ಏನಾಗಲಿದೆಯೋ ತಿಳಿಯದು.

ಬ್ಲೂಶೀಟ್‌: ಕೇಂದ್ರ ಬಜೆಟ್‌ನ ಸ್ಟಾರ್ಟಿಂಗ್‌ ಪಾಯಿಂಟ್‌ ಅಂದರೆ ಬ್ಲೂಶೀಟ್‌; ಇದರಲ್ಲಿಪ್ರಮುಖ ಅಂಕಿ ಅಂಶಗಳಿರುತ್ತವೆ. ಬಜೆಟ್‌ನ ನೀಲಿನಕ್ಷೆ ಎಂದೇ ಪರಿಗಣಿತ. ಇದು ತುಂಬಾ ರಹಸ್ಯ ಹಾಗೂ ಬಜೆಟ್‌ ಜಂಟಿ ಸೆಕ್ರೆಟರಿ ವಶದಲ್ಲಿರುತ್ತದೆ.


​ಮೊತ್ತ ಮೊದಲ ಬಜೆಟ್‌

ಭಾರತದ ಮೊತ್ತ ಮೊದಲ ಒಕ್ಕೂಟ ಬಜೆಟ್‌ ಮಂಡನೆಯಾದುದು 1860ರ ಫೆ.18ರಂದು. ಬ್ರಿಟಿಷ್‌ ಕಂಪನಿ ಸರಕಾರದ ವೈಸರಾಯ್‌ ಅವರ ಎಕ್ಸಿಕ್ಯೂಟಿವ್‌ ಸಮಿತಿಯ ವಿತ್ತ ಸದಸ್ಯನಾಗಿದ್ದ ಜೇಮ್ಸ್‌ ವಿಲ್ಸನ್‌ ಮಂಡಿಸಿದ್ದು. ಈತ 'ದಿ ಇಕಾನಮಿಸ್ಟ್‌' ಪತ್ರಿಕೆಯ ಸ್ಥಾಪಕ. ಈತ ಸ್ಥಾಪಿಸಿದ ಚಾರ್ಟರ್ಡ್‌ ಬ್ಯಾಂಕ್‌ ಮುಂದೆ ಸ್ಟಾಂಡರ್ಡ್‌ ಬ್ಯಾಂಕ್‌ನಲ್ಲಿ ವಿಲೀನವಾಯಿತು.

ಕೋವಿಡ್‌ ತಂದ ಬದಲಾವಣೆ: ಕೋವಿಡ್‌ನಿಂದಾಗಿ ಈ ಬಾರಿ ಬಜೆಟ್‌ ಮಂಡನೆಯ ಸ್ವರೂಪದಲ್ಲಿಬದಲಾವಣೆ ಆಗಿದೆ. ಮೊತ್ತ ಮೊದಲ ಬಾರಿಗೆ ಬಜೆಟ್‌ ಮುದ್ರಣಗೊಳ್ಳುತ್ತಿಲ್ಲ. ಬದಲಾಗಿ, ಅದೇ ವೇಳೆಗೆ ಸರಿಯಾಗಿ ಕೇಂದ್ರ ಸರಕಾರದ 'ಯೂನಿಯನ್‌ ಬಜೆಟ್‌' ಆ್ಯಪ್‌ನಲ್ಲಿಸಂಸತ್‌ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಲಿದೆ.




2021-22 ಕೇಂದ್ರ ಬಜೆಟ್ ಮಂಡನೆಯ ನಂತರ ಪ್ರಧಾನಮಂತ್ರಿ ಅವರ ಹೇಳಿಕೆ

2021-22 ಕೇಂದ್ರ ಬಜೆಟ್ ಮಂಡನೆಯ ನಂತರ ಪ್ರಧಾನಮಂತ್ರಿ ಅವರ ಹೇಳಿಕೆ

ನಮಸ್ಕಾರ,

ಅಸಾಧಾರಣ ಸಂದರ್ಭಗಳ ನಡುವೆಯೇ 2021ನೇ ಸಾಲಿನ ಬಜೆಟ್ ಮಂಡಿಸಲಾಗಿದೆ. ಇದರಲ್ಲಿ ವಾಸ್ತವತೆಯ ಪ್ರಜ್ಞೆಯ ಜೊತೆಗೆ ಅಭಿವೃದ್ಧಿಯ ವಿಶ್ವಾಸವೂ ಒಳಗೊಂಡಿದೆ. ಜಗತ್ತಿನಲ್ಲಿ ಕೊರೊನಾ ಸೃಷ್ಟಿಸಿರುವ ಪ್ರಭಾವ ಇಡೀ ಮನುಕುಲದ ಮೇಲಾಗಿದೆ. ಈ ಸಂದರ್ಭಗಳ ನಡುವೆಯೇ ಇಂದಿನ ಬಜೆಟ್ ಭಾರತದ ಆತ್ಮವಿಶ್ವಾಸದ ಮೇಲೆ ಬೆಳಕು ಚೆಲ್ಲುತ್ತಿದೆ. ಇದೇ ವೇಳೆ ಜಗತ್ತಿನಲ್ಲಿ ಇದು ಹೊಸ ವಿಶ್ವಾಸವನ್ನು ಹುಟ್ಟುಹಾಕಲಿದೆ.

ಇಂದಿನ ಬಜೆಟ್ ನಲ್ಲಿ ಸ್ವಾವಲಂನೆಯ ಮುನ್ನೋಟವಲ್ಲದೆ, ಪ್ರತಿಯೊಂದು ವರ್ಗ ಮತ್ತು ಪ್ರತಿಯೊಂದು ವ್ಯಕ್ತಿಯ ಒಳಗೊಳ್ಳುವಿಕೆ ಒಳಗೊಂಡಿದೆ. ಬಜೆಟ್ ನಲ್ಲಿ ಪ್ರಗತಿಗೆ ಹೊಸ ಅವಕಾಶಗಳ ತತ್ವಗಳಿವೆ. ಹೊಸ ಅವಕಾಶಗಳ ವಿಸ್ತರಣೆ, ಯುವಜನತೆಗೆ ಹೊಸ ಅವಕಾಶಗಳ ಸೃಷ್ಟಿ, ಮಾನವ ಸಂಪನ್ಮೂಲಕ್ಕೆ ಹೊಸ ಆಯಾಮ, ಮೂಲಸೌಕರ್ಯ ವಲಯದಲ್ಲಿ ಹೊಸ ಕ್ಷೇತ್ರಗಳ ಅಭಿವೃದ್ಧಿಯ ಜೊತೆಗೆ ಆಧುನಿಕತೆ ಹಾಗೂ ಹೊಸ ಸುಧಾರಣೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮುನ್ನಡೆಯುವ ಮಾರ್ಗವಿದೆ.

ಮಿತ್ರರೇ,

ಈ ಬಜೆಟ್, ನಿಯಮ ಮತ್ತು ನಿಬಂಧನೆಗಳನ್ನು ಸರಳೀಕರಣಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ಜೀವನವನ್ನು ಸುಗಮಗೊಳಿಸುವುದಕ್ಕೆ ಉತ್ತೇಜನ ನೀಡಲಾಗುವುದು. ಈ ಬಜೆಟ್ ಸಾರ್ವಜನಿಕರಲ್ಲಿ, ಹೂಡಿಕೆದಾರರಲ್ಲಿ, ಕೈಗಾರಿಕೆ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಅದಕ್ಕಾಗಿ ನಾನು ಹಣಕಾಸು ಸಚಿವೆ ನಿರ್ಮಲಾ ಜಿ ಮತ್ತು ಅವರ ಸಹೋದ್ಯೋಗಿ ಅನುರಾಗ್ ಜಿ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ.

ಮಿತ್ರರೇ,

ಈ ಅಪರೂಪದ ಬಜೆಟ್ ಭಾಷಣದ ಕುರಿತು ಒಂದೆರಡು ಗಂಟೆಗಳಲ್ಲೇ ತಜ್ಞರು ಹಲವು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಸಾಮಾನ್ಯ ಜನರ ಮೇಲೆ ಅಧಿಕ ಹೊರೆ ಹೊರಿಸಲಿದೆ ಎಂದು ಹಲವು ತಜ್ಞರು ಅಂದಾಜಿಸಿದ್ದರು. ಆದರೆ ವಿತ್ತೀಯ ಸ್ಥಿರತೆ ಕಾಯ್ದುಕ್ಕೊಳ್ಳುವ ನಿಬಂಧನೆಗೆ ಅನುಗುಣವಾಗಿ ಸರ್ಕಾರ ಬಜೆಟ್ ಗಾತ್ರವನ್ನು ಹೆಚ್ಚಳ ಮಾಡುವಲ್ಲಿ ಒತ್ತಡವನ್ನು ಪಾಲಿಸಿತು. ನಮ್ಮ ಸರ್ಕಾರ, ಬಜೆಟ್ ಅತ್ಯಂತ ಪಾರದರ್ಶಕವಾಗಿರಬೇಕು ಎಂದು ನಿರಂತರ ಪ್ರಯತ್ನಗಳನ್ನು ನಡೆಸಿತು. ಈ ಬಜೆಟ್ ನಲ್ಲಿ ಪಾರದರ್ಶಕತೆ ಕಾಯ್ದುಕೊಂಡಿರುವುದಕ್ಕೆ ಹಲವು ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ.

ಮಿತ್ರರೇ,

ಕೊರೊನಾ ವಿರುದ್ಧದ ಸಮರದಲ್ಲಿ ಭಾರತ, ಪ್ರತಿ ಸ್ಪಂದನೆಯ ಬದಲಿಗೆ ಸದಾ ಕ್ರಿಯಾಶೀಲವಾಗಿತ್ತು. ಅದು ಕೊರೊನಾ ಸಂದರ್ಭದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಲ್ಲಾಗಿರಬಹುದು ಅಥವಾ ಆತ್ಮನಿರ್ಭರ ಭಾರತ ಸಂಕಲ್ಪದಲ್ಲಾಗಿರಬಹುದು. ಈ ಸಕ್ರಿಯ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗುವ ಸಲುವಾಗಿ ಇಂದಿನ ಬಜೆಟ್ ನಲ್ಲಿ ಯಾವುದೇ ಪ್ರತಿಸ್ಪಂದನೆಗಳಿಗೆ ಜಾಗವಿಲ್ಲ. ಇದೇ ವೇಳೆ ನಾವು ಕೇವಲ ಸಕ್ರಿಯಕ್ಕೆ ಸೀಮಿತವಾಗದೆ, ನಾವು ಅತ್ಯಂತ ಸಕ್ರಿಯ ಬಜೆಟ್ ನೀಡುವ ಮೂಲಕ ದೇಶಕ್ಕೆ ಕ್ರಿಯಾಶೀಲತೆಯ ಸಂದೇಶವನ್ನು ನೀಡಿದ್ದೇವೆ. ಈ ಬಜೆಟ್ ನಲ್ಲಿ ವಿಶೇಷವಾಗಿ ಆರೋಗ್ಯ ಮತ್ತು ಯೋಗಕ್ಷೇಮ ಎರಡೂ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೀವವಿದ್ದರೆ ಪ್ರಗತಿಯಿರುತ್ತದೆ. ಬಜೆಟ್ ನಲ್ಲಿ ಎಂಎಸ್ಎಂಇಗಳು ಮತ್ತು ವಿಶೇಷವಾಗಿ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಅಂತೆಯೇ ಈ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹಿಂದೆಂದೂ ನಿರೀಕ್ಷಿಸಲಾಗದಷ್ಟು ಒತ್ತು ನೀಡಲಾಗಿದೆ. ಈ ಬಜೆಟ್ ದೇಶದ ಪ್ರತಿಯೊಂದು ವಲಯದ ಅಭವೃದ್ಧಿಗೆ ಅಂದರೆ ಸಮಗ್ರ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ವಿಶೇಷವಾಗಿ ನಮ್ಮ ದಕ್ಷಿಣದ ರಾಜ್ಯಗಳು, ಈಶಾನ್ಯ ರಾಜ್ಯಗಳು ಮತ್ತು ಉತ್ತರದ ಲೇಹ್-ಲಡಾಖ್ ಪ್ರಾಂತ್ಯದ ಅಭಿವೃದ್ಧಿಗೆ ವಿಶೇಷ ಗಮನ ನೀಡಿರುವುದು ನನಗೆ ಸಂತಸ ತಂದಿದೆ. ಬಜೆಟ್ ನಲ್ಲಿ ಕರಾವಳಿಯ ರಾಜ್ಯಗಳಾದ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳಗಳನ್ನು ವಾಣಿಜ್ಯ ಶಕ್ತಿ ಕೇಂದ್ರಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬಳಕೆ ಮಾಡಿಕೊಳ್ಳಲಾಗದ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಈ ಬಜೆಟ್ ನೆರವಾಗಲಿದೆ. ಈ ಬಜೆಟ್ ನಲ್ಲಿ ಸಂಶೋಧನೆ ಮತ್ತು ಆವಿಷ್ಕಾರ ಪೂರಕ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಜೊತೆಗೆ ನಮ್ಮ ಯುವಜನರನ್ನು ಸಬಲೀಕರಣಗೊಳಿಸುವ ಮತ್ತು ಉಜ್ವಲ ಭವಿಷ್ಯಕ್ಕೆ ಸಮಗ್ರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಭಾರತ ಮುನ್ನಡೆಯಲಿದೆ.

ಮಿತ್ರರೇ,

ಈ ಬಜೆಟ್ ನಲ್ಲಿ ಆರೋಗ್ಯ, ನೈರ್ಮಲೀಕರಣ, ಪೌಷ್ಠಿಕಾಂಶ, ಶುದ್ಧ ನೀರು ಒದಗಿಸುವಲ್ಲಿ ಸಮಾನತೆ ಮತ್ತು ದೇಶದ ಸಾಮಾನ್ಯ ಮಹಿಳೆಯರು ಮತ್ತು ಪುರುಷರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಬಜೆಟ್ ನಲ್ಲಿ ಮೂಲಸೌಕರ್ಯ ವೃದ್ಧಿಗೆ ಖರ್ಚು ಮಾಡುವ ಹಣವನ್ನು ನಿರೀಕ್ಷೆಗೂ ಮೀರಿ ಹೆಚ್ಚಳ ಮಾಡುವ ಜೊತೆಗೆ ಹಲವು ವ್ಯವಸ್ಥಿತ ಸುಧಾರಣೆಗಳನ್ನು ಪ್ರಸ್ತಾಪಿಸಲಾಗಿದ್ದು, ಇದರಿಂದಾಗಿ ಪ್ರಗತಿಗೆ ಹೆಚ್ಚಿನ ಪ್ರಯೋಜನವಾಗುವುದಲ್ಲದೆ, ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. ದೇಶದಲ್ಲಿ ಕೃಷಿ ವಲಯದ ಬಲವರ್ಧನೆಗೆ ವಿಶೇಷ ಒತ್ತು ನೀಡಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಬಜೆಟ್ ನಲ್ಲಿ ಹಲವು ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ಕೃಷಿ ವಲಯದಲ್ಲಿ ರೈತರು ಸುಲಭವಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಲಗಳನ್ನು ಪಡೆಯಬಹುದಾಗಿದೆ. ಕೃಷಿ ಮೂಲಸೌಕರ್ಯ ನಿಧಿಯ ಮೂಲಕ ದೇಶದಲ್ಲಿ ಎಪಿಎಂಸಿಗಳು ಹಾಗು ಮಂಡಿಗಳ ಬಲವರ್ಧನೆಗೆ ನೆರವಾಗುವ ಹಲವು ಅಂಶಗಳು ಸೇರಿವೆ. ಈ ಎಲ್ಲ ನಿರ್ಧಾರಗಳು ಗ್ರಾಮಗಳು ಮತ್ತು ನಮ್ಮ ರೈತರು ಬಜೆಟ್ ನ ಹೃದಯವಾಗಿದೆ ಎಂಬುದನ್ನು ಪ್ರದರ್ಶಿಸುತ್ತದೆ. ಈ ಬಾರಿ ಎಂಎಸ್ಎಂಇ ವಲಯಕ್ಕೆ ನೀಡುತ್ತಿದ್ದ ಬಜೆಟ್ ಅನ್ನು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಎರಡುಪಟ್ಟು ಅಧಿಕ ಹಣ ನೀಡಲಾಗಿದೆ. ಇದರಿಂದಾಗಿ ಎಂಎಸ್ಎಂಇ ವಲಯಕ್ಕೆ ಭಾರೀ ಉತ್ತೇಜನ ಸಿಗುವುದಲ್ಲದೆ, ಉದ್ಯೋಗಾವಕಾಶಗಳು ಹೆಚ್ಚಾಗಲಿವೆ.

ಮಿತ್ರರೇ,

ಈ ಬಜೆಟ್ ಸ್ವಾವಲಂಬಿ ಮಾರ್ಗದಲ್ಲಿ ಮುನ್ನಡೆಸುವುದಾಗಿದ್ದು, ಇದರಲ್ಲಿ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯ ಪ್ರಗತಿಯೂ ಒಳಗೊಂಡಿದೆ. ಈ ದಶಕದ ಆರಂಭಕ್ಕೆ ಬಜೆಟ್ ಅತ್ಯಂತ ಭದ್ರ ಬುನಾದಿಯನ್ನು ಹಾಕಲಿದೆ. ಆತ್ಮನಿರ್ಭರ ಭಾರತದ ಅತ್ಯಂತ ಪ್ರಮುಖ ಬಜೆಟ್ ಗಾಗಿ ನಾನು ಎಲ್ಲ ದೇಶವಾಸಿಗಳಿಗೂ ಶುಭಾಶಯಗಳನ್ನು ಕೋರುತ್ತೇನೆ. ಮತ್ತೊಮ್ಮೆ ಹಣಕಾಸು ಸಚಿವರು ಹಾಗೂ ಅವರ ಇಡೀ ತಂಡಕ್ಕೆ ನಾನು ಅಭಿನಂದನೆ ಮತ್ತು ಧನ್ಯವಾದಗಳನ್ನು ಹೇಳುತ್ತೇನೆ.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲ,  ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

***

ಮಂಗಳವಾರ, ಫೆಬ್ರವರಿ 2, 2021

ನಾಸಾದ ಉನ್ನತ ಹುದ್ದೆಗೆ ಭಾರತೀಯ-ಅಮೇರಿಕನ್ ಭವ್ಯಾಲಾಲ್ ನೇಮಕ

ವಾಷಿಂಗ್ಟನ್‌: ಭಾರತೀಯ–ಅಮೆರಿಕನ್‌ ಭವ್ಯಾ ಲಾಲ್‌ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಹಂಗಾಮಿ ಕಾರ್ಯಕಾರಿ ಮುಖ್ಯಸ್ಥರಾಗಿ ಸೋಮವಾರ ನೇಮಕಗೊಂಡಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ನಿರ್ವಹಿಸಿರುವ 'ಏಜೆನ್ಸಿ ರಿವ್ಯೂ ಟೀಮ್‌ನಲ್ಲಿ' ಭವ್ಯಾ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ.

'ಇನ್‌ಸ್ಟಿಟ್ಯೂಟ್‌ ಫಾರ್‌ ಡಿಫೆನ್ಸ್‌ ಅನಾಲಿಸಿಸ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನಲ್ಲಿ (ಎಸ್‌ಟಿಪಿಐ) ಸಂಶೋಧನಾ ಸಿಬ್ಬಂದಿ ಸದಸ್ಯೆಯಾಗಿ 2005ರಿಂದ 2020ರ ವರೆಗೂ ಕಾರ್ಯನಿರ್ವಹಿಸಿದ್ದಾರೆ. ಎಂಜೆನಿಯರಿಂಗ್‌ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಅವರು ಅನುಭವ ಪಡೆದಿದ್ದಾರೆ' ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

ಭವ್ಯಾ ಲಾಲ್‌

ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಹಾಗೂ ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಯೋಜನಾ ನೀತಿಯ ವಿಶ್ಲೇಷಣೆ ಕಾರ್ಯಗಳನ್ನು ಮುನ್ನಡೆಸಿದ್ದರು. ನಾಸಾ, ರಕ್ಷಣಾ ಇಲಾಖೆ ಹಾಗೂ ಗುಪ್ತಚರ ಇಲಾಖೆಗಳಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಭವ್ಯಾ ಅನುಭವ ಹೊಂದಿದ್ದಾರೆ.

ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಸಮಿತಿಗಳಲ್ಲಿ ಉನ್ನತ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಬ್ಯಾಹ್ಯಾಕಾಶ ಕ್ಷೇತ್ರದಲ್ಲಿ ಅವರ ಕೊಡುಗೆಗಳನ್ನು ಗಮನಿಸಿ ಅಂತರರಾಷ್ಟ್ರೀಯ ಗಗನಯಾತ್ರಿಗಳ ಅಕಾಡೆಮಿಗೆ ಗೌರವ ಸದಸ್ಯೆಯಾಗಿ ನೇಮಕ ಮಾಡಲಾಗಿದೆ.

ಭವ್ಯ ಲಾಲ್‌ ಅವರು ನ್ಯೂಕ್ಲಿಯರ್‌ ಎಂಜಿನಿಯರಿಂಗ್‌ ವಿಷಯದಲ್ಲಿ ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಂಐಟಿಯಿಂದ ತಂತ್ರಜ್ಞಾನ ಮತ್ತು ಕಾರ್ಯನೀತಿಯಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ ಹಾಗೂ ಜಾರ್ಜ್‌ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ಸಾರ್ವಜನಿಕ ನೀತಿ ಮತ್ತು ಸಾರ್ವಜನಿಕ ಆಡಳಿತ ವಿಷಯಗಳಲ್ಲಿ ಡಾಕ್ಟರೇಟ್‌ ಪಡೆದಿದ್ದಾರೆ.