ಗುರುವಾರ, ಜುಲೈ 16, 2015

ಕರ್ನಾಟಕದಅರಣ್ಯಗಳ ವರ್ಗೀಕರಣ

ಅರಣ್ಯಗಳ ವರ್ಗೀಕರಣ

ಹವಾಗುಣ, ಮಣ್ಣು, ಉಷ್ಣತೆ, ಗಾಳಿ, ಮಳೆ, ಸಮುದ್ರಮಟ್ಟದಿಂದ ಇರುವ ದೂರ ಮತ್ತು ಎತ್ತರ ಮತ್ತು ಆ ಪ್ರದೇಶದ ಸಸ್ಯ ಸಮುದಾಯಕ್ಕೆ ಹಿಂದೆ ಸಿಕ್ಕಿರುವ ಉಪಚಾರ ಇವೇ ಮೊದಲಾದ ಅಂಶಗಳ ಆಧಾರದ ಮೇಲೆ ಕರ್ನಾಟಕದ ಅರಣ್ಯಗಳನ್ನು ವಿವಿಧ ಬಗೆಗಳಾಗಿ ವಿಂಗಡಿಸಲಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ವಿವಿಧ ಪ್ರಕಾರದ ಮಣ್ಣಿದೆ. ವರ್ಷಕ್ಕೆ ೨೫೦-೮೦೦ಮೀಮೀ ಮಳೆ ಬಿದ್ದು ಉಷ್ಣತೆ ೧೫-೪೦ ಸೆಲ್ಸಿಯಸ್ ವರೆಗೆ ವ್ಯತ್ಯಾಸವಾಗುತ್ತದೆ. ನೆಲದ ಎತ್ತರ ಸಮುದ್ರ ಮಟ್ಟದಿಂದ ೧೭೦೦ಮೀ ವರೆಗೆ ವಿವಿಧ ಜಾತಿಯ ಸಸ್ಯಗಳನ್ನೊಳಗೊಂಡ ವಿವಿಧ ನೈಜ ಅರಣ್ಯಗಳಿಗೆ ಎಡೆ ಮಾಡಿ ಕೊಟ್ಟಿದೆ. ವಿವಿಧ ಸಸ್ಯಪ್ರಭೇದ ಸಮೂಹ ಮತ್ತು ವಿಸ್ತರಣೆಗಳ ಆಧಾರದ ಮೇಲೆ ಕರ್ನಾಟಕದ ಅರಣ್ಯ ಪ್ರದೇಶವನ್ನು ಈ ಕೆಳಕಂಡಂತೆ ವಿಂಗಡಿಸಬಹುದು (ಚಾಂಪಿಯನ್ ಮತ್ತು ಸೇತ್ ಎಂಬ ತಜ್ಞರ ವರ್ಗೀಕರಣದ ಪ್ರಕಾರ)
◾೧. ದಕ್ಷಿಣಾರ್ಧದ ಉಷ್ಣವಲಯದ ತೇವಪೂರಿತ ನಿತ್ಯ ಹರಿದ್ವರ್ಣದ ಅರಣ್ಯ
◾೨. ದಕ್ಷಿಣಾರ್ಧದ ಉಷ್ಣವಲಯದ ಆಂಶಿಕ ನಿತ್ಯ ಹರಿದ್ವರ್ಣದ ಅರಣ್ಯ
◾೩. ದಕ್ಷಿಣ ಭಾರತದ ತೇವ ಮಿಶ್ರಿತ ಪರ್ಣಪಾತಿ ಅರಣ್ಯ
◾೪. ದಕ್ಷಿಣಾರ್ಧದ ಉಷ್ಣವಲಯದ ಒಣ ಪರ್ಣಪಾತಿ ಅರಣ್ಯ
◾೫. ದಕ್ಷಿಣಾರ್ಧದ ಉಷ್ಣವಲಯದ ಕುರುಚಲು ಅರಣ್ಯ
ಇದರ ಜೊತೆಗೆ ಆಯಾ ಸ್ಥಳದ ಸೂಕ್ಷ್ಮ ಹವಾಗುಣವನ್ನು ಅವಲಂಬಿಸಿ ಮಾರ್ಪಾಡಾಗಿರುವ ಸಣ್ಣ ಪುಟ್ಟ ಬಗೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಇನ್ನೊಂದು ಮುಖ್ಯವಾದ ಅಂಶವೆಂದರೆ ಮೇಲೆ ನಮೂದಿಸಿರುವ ವರ್ಗಗಳು ಒಂದರೊಡನೊಂದು ಸೇರಿಕೊಳ್ಳುವುದು ಅಥವಾ ಒಂದು ಜಾತಿಯ ಗಿಡಮರಗಳ ಗುಂಪಿನಲ್ಲಿ ಮತ್ತೊಂದು ಬಗೆಯವು ಅಡಕವಾಗಿರುವುದು. ಜೊತೆಗೆ ದಟ್ಟ ಅರಣ್ಯದ ನಡುವೆ ಗಿಡಮರಗಳಿಲ್ಲದೆ ಕೇವಲ ಹುಲ್ಲು ಮಾತ್ರ ಬೆಳೆದಿದ್ದು ಕೆಲವು ಸಸ್ಯಾಹಾರಿ ಪ್ರಾಣಿಗಳಿಗೆ ಮೇವು ನೀಡುವ ಹುಲ್ಲುಗಾವಲುಗಳೂ ಕಂಡುಬರುತ್ತವೆ. ಜೌಗಿನಿಂದ ಕೂಡಿದ ಪ್ರದೇಶಗಳನ್ನು ‘ಹಡ್ಲು’ ಎಂದು ಕರೆಯುತ್ತಾರೆ. ಇಳಿಜಾರಿನ ಪ್ರದೇಶಗಳಲ್ಲಿ ಗಾಳಿಯ ಒತ್ತಡದಿಂದ ಗಿಡಮರಗಳು ಬೆಳೆಯದೆ ಕೇವಲ ಕಲ್ಲುಮಣ್ಣುಗಳಿಂದಾವೃತವಾದ ನಿರುಪಯುಕ್ತ ಸ್ಥಳಗಳೂ ಅರಣ್ಯದ ಮಧ್ಯದಲ್ಲಿವೆ. ಈ ಸ್ಥಳಗಳನ್ನು ಶೋಲಾಗಳೆನ್ನುತ್ತಾರೆ.
ದಕ್ಷಿಣಾರ್ಧದ ಉಷ್ಣವಲಯದ ತೇವಪೂರಿತ ನಿತ್ಯ ಹರಿದ್ವರ್ಣದ ಅರಣ್ಯಸಂಪಾದಿಸಿ
ಪಶ್ಚಿಮ ಕರಾವಳಿಯ ಉದ್ದಕ್ಕೂ ಬೆಳಗಾವಿಯಿಂದ ಕೊಡಗಿನವರೆಗೂ ಈ ಬಗೆಯ ಅರಣ್ಯವನ್ನು ಕಾಣಬಹುದು. ಇಲ್ಲಿ ವಾರ್ಷಿಕವಾಗಿ ಸು.೨೫೦೦-೮೦೦೦ ಮಿಮೀ ಮಳೆಯಾಗುತ್ತದೆ. ಸಮುದ್ರ ಮಟ್ಟದಿಂದ ೫೦೦-೧೦೦೦ಮೀ ಎತ್ತರದವರೆಗೂ ಈ ಅರಣ್ಯ ವಿಸ್ತರಿಸಿದೆ. ದಟ್ಟವಾಗಿ ಬೆಳೆಯುವ ಇವುಗಳಲ್ಲಿ ವಿವಿಧ ಜಾತಿಯ ಮರಗಳನ್ನು ಕಾಣಬಹುದು. ಈ ಗುಂಪಿನ ಅರಣ್ಯಗಳ ಅತಿಮುಖ್ಯ ಲಕ್ಷಣವೆಂದರೆ ಮೇಲ್ಚಾವಣಿಯಲ್ಲಿರುವ ಮರಗಳು ನೀಳವಾಗಿ ಬೆಳೆದಿರುತ್ತವೆ. ಮೊದಲನೆಯ ಕೊಂಬೆಗೂ ನೆಲಕ್ಕೂ ಸು.೩೦ಮೀ ಅಂತರವಿರುತ್ತದೆ. ಮರಗಳ ಸುತ್ತಳತೆ ಸು.೫ಮೀ ಇರುತ್ತದೆ.
ನಿತ್ಯ ಹರಿದ್ವರ್ಣದ ಅರಣ್ಯ ಸಾಮಾನ್ಯವಾಗಿ ಮೂರು ಶ್ರೇಣಿಯ ಸಸ್ಯಜಾತಿಗಳನ್ನೊಳಗೊಂಡಿವೆ. ಈ ಗುಂಪಿನ ಕಾಡುಗಳಲ್ಲಿ ಧೂಮ, ಸುರಹೊನ್ನೆ, ಕಿರಾಳಭೋಗಿ, ಮಾವು, ಗುಳಮಾವು, ಬೆನ್ನಾಟೆ, ಹೊಳೆಗಾರ, ಹೊಳೆಹೊನ್ನೆ, ಬಿಲ್ಲಿ, ನಾಗಸಂಪಿಗೆ, ಬಿಳಿದೇವದಾರು, ಪಾಲಿ, ಸಂಪಿಗೆ, ಸಾಲುಧೂಪ, ಹೆಬ್ಬಲಸು, ನೊಗ, ಬಲಂಜೆ, ಸಟ್ಟಗ, ದಾಲ್ಚಿನ್ನಿ, ಹೈಗ, ಕಾಯಿಧೂಪ, ನೀಲಿ, ಬಗನಿ, ನೇರಳೆ, ಸಾಗಡೆ, ರಂಚ, ಅರಿಶಿನಗುರಿಗೆ, ತೊರತ್ತಿ, ರಾಮನಡಿಕೆ, ಬೊಂಬು, ವಾಟೆ, ಗುರಿಗೆ, ಕೇದಗೆ, ಬೆತ್ತ ಮೊದಲಾದ ಗಿಡ ಮರಬಳ್ಳಿಗಳು ಕಂಡುಬರುತ್ತವೆ. ಈ ಅರಣ್ಯಗಳ ಪಾತ್ರ ದೇಶದ ಹಿತದೃಷ್ಟಿಯಿಂದ ಬಹುಮುಖ್ಯವಾದುದು. ನೇರವಾಗಿ ಬೆಳೆಯುವ ಮರಗಳಿಂದ ವಿದ್ಯುಚ್ಫಕ್ತಿ ಕಂಬಗಳು, ರೈಲುಕಂಬಿಗಳ ಆಸರೆಯ ದಿಮ್ಮಿಗಳು, ಕಾಗದದ ಉತ್ಪತ್ತಿಗೆ ಬೇಕಾದ ನಾರು ತಿರುಳು, ತೆಳುಹೊದಿಕೆ ಮರದ ಹಾಳೆಗಳು ಮುಂತಾದವು ದೊರಕುವವು.
ದಕ್ಷಿಣಾರ್ಧದ ಉಷ್ಣವಲಯದ ಆಂಶಿಕ ನಿತ್ಯ ಹರಿದ್ವರ್ಣದ ಅರಣ್ಯಸಂಪಾದಿಸಿ
ಈ ಗುಂಪಿನ ಕಾಡುಗಳು ಪಶ್ಚಿಮ ಕರಾವಳಿಯಲ್ಲಿ ನಿತ್ಯಹರಿದ್ವರ್ಣ ಅರಣ್ಯ ಮತ್ತು ತಾತ್ಕಾಲಿಕ ಪರ್ಣಪಾತಿ ಅರಣ್ಯಗಳ ಮಧ್ಯ ಹರಡಿವೆ. ಇಲ್ಲಿ ನಿತ್ಯಹರಿದ್ವರ್ಣ ವೃಕ್ಷ ಮತ್ತು ಬೇಸಗೆಯಲ್ಲಿ ಎಲೆ ಉದುರಿಸುವ ವೃಕ್ಷಗಳ ಸಮ್ಮಿಶ್ರಣವನ್ನು ಕಾಣಬಹುದು. ಜಂಬೆಮರಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಆಸರೆಯ ಕಾಂಡಗಳುಳ್ಳ ಮರಗಳೂ ಇಲ್ಲಿ ಇವೆ. ಸಟ್ಟಗ, ಬೂರುಗ ಮುಂತಾದವು ಈ ಗುಂಪಿಗೆ ಸೇರುತ್ತವೆ. ಸಾಮಾನ್ಯವಾಗಿ ಮರಗಳ ತೊಗಟೆ ಸ್ವಲ್ಪ ದಪ್ಪವಾಗಿಯೂ ಗಡುಸಾಗಿಯೂ ಇರುವುದು. ಈ ಬಗೆಯ ಅರಣ್ಯವಿರುವ ಪ್ರದೇಶಗಳಲ್ಲಿ ೨೦೦೦-೨೫೦೦ಮಿಮೀ ಮಳೆಯಾಗುತ್ತದೆ. ಸಾಮಾನ್ಯವಾಗಿ ಈ ಕಾಡಿನಲ್ಲಿ ಹನಾಲು, ಕರಿಮರ, ನಂದಿ, ಹೊಳೆಗಾರ ಹೈಗ, ಬೆನ್ನಾಟೆ, ಸಂಪಿಗೆ, ದಾಲ್ಚಿನ್ನಿ, ಕಿರಾಳಭೋಗಿ, ಹೆಬ್ಬಲಸು, ಸಟ್ಟಗ, ರಂಗುಮಾಲೆ, ಗರಿಗೆ, ಹೆಬ್ಬಿದಿರು ಮೊದಲಾದವು ವಿಶೇಷವಾಗಿ ಬೆಳೆಯುವುವು.
ದಕ್ಷಿಣ ಭಾರತದ ತೇವ ಮಿಶ್ರಿತ ಪರ್ಣಪಾತಿ ಅರಣ್ಯಸಂಪಾದಿಸಿ
ಪಶ್ಚಿಮ ಕರಾವಳಿಯ ಪೂರ್ವಪಾಶರ್ವ್‌ದ ಉದ್ದಕ್ಕೂ ಈ ಬಗೆಯ ಅರಣ್ಯವನ್ನು ಕಾಣಬಹುದು. ಇಲ್ಲಿನ ಮಳೆಯ ಪರಿಮಾಣ ೧೫೦೦-೨೦೦೦ ಮಿಮೀ. ತೇಗ ಮತ್ತಿ, ನಂದಿ, ಹೊನ್ನೆ, ಹೇತ್ತೇಗ, ಬೀಟೆ, ಬಿಳಿಮತ್ತಿ, ತಾರೆ, ಜಂಬೆ, ಸಾಗಡೆ, ಕೌಲು, ಹಲಸು, ತಡಸಲು, ಬೂರುಗ, ನೆಲ್ಲಿ ಮುಂತಾದವು ಇಲ್ಲಿನ ಮುಖ್ಯ ಸಸ್ಯಜಾತಿಗಳು. ಜೊತೆಗೆ ನೀರಿನ ಆಸರೆಯಿರುವ ಕಡೆಗಳಲ್ಲೆಲ್ಲ ಹೆಬ್ಬಿದಿರು ಬಲು ಸಾಮಾನ್ಯವಾಗಿ ಕಂಡುಬರುತ್ತದೆ. ಕಿರಿಬಿದಿರಾದರೂ ಶುಷ್ಕ ಹವೆ ಪ್ರದೇಶಗಳಲ್ಲೆಲ್ಲಾ ಕಂಡುಬರುತ್ತದೆ. ಇಲ್ಲಿನ ಮರಗಳಿಗೆ ಒಣಹವೆಯನ್ನು ತಡೆದುಕೊಳ್ಳುವ ಶಕ್ತಿ ಇದೆ. ಈ ಕಾಡುಗಳ ಕೆಳಗಿನ ಶ್ರೇಣಿಯಲ್ಲಿ ಕೆಲವು ಸಣ್ಣ ನಿತ್ಯಹರಿದ್ವರ್ಣ ವೃಕ್ಷಗಳು ಕೂಡಾ ಕಂಡುಬರುತ್ತವೆ.
ದಕ್ಷಿಣಾರ್ಧದ ಉಷ್ಣವಲಯದ ಒಣ ಪರ್ಣಪಾತಿ ಅರಣ್ಯಸಂಪಾದಿಸಿ
ವರ್ಷದಲ್ಲಿ ೮೫೦ ರಿಂದ ೧೫೦೦ಮಿಮೀ ಮಳೆ ಬೀಳುವ ಪ್ರದೇಶದಲ್ಲಿ ಈ ಬಗೆಯ ಅರಣ್ಯ ಕಂಡುಬರುತ್ತದೆ. ಕೆಲವು ಸಲ ಶೀಘ್ರವಾಗಿ ಆರುವ ಒಣಮಣ್ಣು ಇರುವ ಹಾಗೂ ೧೯೦೦ಮಿಮೀ ಮಳೆ ಬೀಳುವ ಪ್ರದೇಶದಲ್ಲೂ ಕಾಣಬಹುದು. ಯಾವ ಪ್ರದೇಶದಲ್ಲಿ ಮಳೆ ೭೫೦ಮಿಮೀಗಿಂತ ಕಡಿಮೆ ಬೀಳುತ್ತದೊ ಅಲ್ಲಿ ಕುರುಚಲು ಅರಣ್ಯಕ್ಕೆ ಎಡೆಮಾಡಿಕೊಡುತ್ತದೆ. ಈ ಅರಣ್ಯಗಳು ೪೫೦-೬೦೦ಮೀ ಎತ್ತರದಲ್ಲಿದ್ದು ಸಣ್ಣಪುಟ್ಟ ಗುಡ್ಡಗಳನ್ನು ಆಕ್ರಮಿಸಿಕೊಂಡಿವೆ. ಬಹುಶಃ ಮೈದಾನ ಪ್ರದೇಶವನ್ನೆಲ್ಲಾ ವ್ಯವಸಾಯಕ್ಕೆ ಉಪಯೋಗಿಸಿರುವುದು ಇದಕ್ಕೆ ಕಾರಣವಿರಬೇಕು.
ಪರಾಕಾಷ್ಠೆಯನ್ನು ತಲಪಿರುವ ಈ ಅರಣ್ಯಗಳಲ್ಲಿ ಮೇಲಿನ ಮರಶ್ರೇಣಿ ಇಕ್ಕಟ್ಟಾಗಿರುತ್ತದೆಯಾದರೂ ದಟ್ಟವಾಗಿರುವುದಿಲ್ಲ. ಇಲ್ಲಿ ಕಂಡುಬರುವ ಬಹುಪಾಲು ವೃಕ್ಷಗಳೆಲ್ಲವೂ ಬೇಸಿಗೆಯಲ್ಲಿ ಎಲೆಯುದುರುವಂಥವು. ಇವುಗಳ ಎತ್ತರ ೧೨-೨೦ಮೀ. ಮರಗಳ ಕೆಳಗೆ ಕಿರುಬಿದಿರುಗಳು, ಅನೇಕ ಜಾತಿಯ ಹುಲ್ಲುಗಳು, ಅಡರು ಬಳ್ಳಿಗಳು ಬೆಳೆದಿರುತ್ತವೆ. ಬೆತ್ತ ಮತ್ತು ತಾಳವೃಕ್ಷಗಳು ಈ ಅರಣ್ಯಗಳಲ್ಲಿ ಕಂಡುಬರುವುದಿಲ್ಲ.
ಈ ಅರಣ್ಯಗಳಲ್ಲಿ ಕೆಲವೆಡೆ ಸಾಗುವಾನಿ ಜಾತಿಯ ಮರಗಳು ಹಾಗೂ ದಿಂಡಿಲು ಮತ್ತು ಮತ್ತಿ ಜಾತಿಯ ಮರಗಳು ಬೆಳೆಯುತ್ತವೆ. ಸಾಗುವಾನಿ ಜಾತಿಯ ಮರಗಳು ಕಂಡುಬರದ ಪ್ರದೇಶಗಳಲ್ಲಿ ದಿಂಡಿಗ, ಮತ್ತಿ, ಬೆಂಡೆ, ನಂದಿ, ಹೆತ್ತೇಗ, ಕಣಗಲು, ಹಿಪ್ಪೆ, ಬೂರುಗ, ತಡಸಲು, ಹೊನ್ನೆ, ಗಂಧ, ಹುರುಗಲು, ತಾರೆ, ಕಮರ, ಕಗ್ಗಲು, ನೂನಲು, ಬಿಲ್ವಪತ್ರೆ, ಬೇಲ, ನೆಲ್ಲಿ, ಎಲಚಿ, ಬಿಕ್ಕೆ, ಬಾಗೆ, ಬಂದರಿಕೆ, ಲಂಟಾನ, ಎಡಮುರಿ, ಮುತ್ತುಗ, ಜಗಳಗಂಟಿ, ಸಾಗಡೆ, ಕೂಳಿ, ದೊಡ್ಡ ತೊಪ್ಪೆ ಹಾಗೂ ಅನೇಕ ಜಾತಿಯ ಮುಳ್ಳಿನ ಗಿಡಗಳು ಕಂಡುಬರುತ್ತವೆ. ತೇವಮಿಶ್ರಿತ ಪರ್ಣಪಾತಿ ಅರಣ್ಯ ಹಾಗೂ ಉಷ್ಣವಲಯದ ಒಣ ಪರ್ಣಪಾತಿ ಅರಣ್ಯಗಳು ತಾತ್ಕಾಲಿಕವಾಗಿ ಎಲೆ ಉದುರುವ ಅರಣ್ಯಗಳು. ಈ ಅರಣ್ಯಗಳಲ್ಲಿ ವನ್ಯಮೃಗದ ಸಂಪತ್ತು ಹೇರಳವಾಗಿದೆ. ಇವುಗಳಲ್ಲಿ ಪ್ರಮುಖವಾದ ಪ್ರಾಣಿಗಳು ಆನೆ, ಹುಲಿ, ಕಾಡುಕೋಣ, ಚಿರತೆ, ಕಡವೆ, ಚುಕ್ಕಿ ಚಿಗರೆ, ಕಾಡುಹಂದಿ, ಕರಡಿ, ಸೀಳುನಾಯಿ ಮುಂತಾದವು. ವರ್ಣರಂಜಿತ ಪಕ್ಷಿಗಳಾದ ನವಿಲು, ಕಾಡುಕೋಳಿ, ಕೆಂಬೂತ ಇವು ಮುಖ್ಯವಾದ ಪಕ್ಷಿಗಳು.
ದಕ್ಷಿಣಾರ್ಧದ ಉಷ್ಣವಲಯದ ಕುರುಚಲು ಅರಣ್ಯಸಂಪಾದಿಸಿ
ಇವುಗಳಲ್ಲಿ ಮರಗಿಡಗಳ ಎಲೆಗಳು ಸಾಮಾನ್ಯವಾಗಿ ಬೇಸಗೆಯಲ್ಲಿ ಉದುರುತ್ತವೆ. ಇಲ್ಲಿನ ಮಳೆಯ ಪ್ರಮಾಣ ಸು.೨೫೦-೧೦೦೦ಮಿಮೀ. ಈ ಅರಣ್ಯಗಳಲ್ಲಿ ಮುಳ್ಳಿನ ಗಿಡಗಳ ಪ್ರಮಾಣ ಹೆಚ್ಚು. ಈ ಗುಂಪಿನ ಕಾಡುಗಳು ದೇಶದ ಆದಾಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವಲ್ಲ. ಪ್ರಕೃತಿಯ ವಿಕೋಪಕ್ಕಿಂತ ಹೆಚ್ಚಾಗಿ ಮಾನವ ಚಟುವಟಿಕೆಯಿಂದಾಗಿ ಈ ಬಗೆಯ ಕಾಡು ನಶಿಸಿ ಹೋಗುತ್ತಿದೆ. ಈ ಅರಣ್ಯಗಳಲ್ಲಿ ದಿಂಡಿಗ, ಗೊಬ್ಬಳಿ, ಬಿಳಿಜಾಲಿ, ಕತ್ತಾಳೆ, ಬನ್ನಿ, ಬಬ್ಬಿಲಿ, ಬಿಲ್ವಾರ, ಬಾಗೆ, ಮತ್ತಿ, ತಾರೆ, ಅಳಲೆ, ಬಿಲ್ವಪತ್ರ, ಬೇಲ, ಸಾಂಬ್ರಾಣಿ, ನವಿಲಾಡಿ, ಗಂಧ, ಹುರುಗಲು, ಬೇವು, ಕಗ್ಗಲಿ, ದೇವದಾರು, ಹಂಗರು ಮುಂತಾದ ಗಿಡಮರಗಳನ್ನು ಕಾಣಬಹುದು. ಜೊತೆಗೆ ಎಲಚಿ, ಸೀತಾಫಲ, ಈಚಲು, ಎಕ್ಕ, ಕಾರೆಗಿಡ, ಪಾಪಾಸುಕಳ್ಳಿ, ಚಂಡರಿಕೆ, ಲಂಟಾನ ಮುಂತಾದವುಗಳೂ ಕಂಡುಬರುತ್ತವೆ.
ಕರ್ನಾಟಕದಲ್ಲಿ ಈ ಎಲ್ಲ ಐದು ಬಗೆಯ ಅರಣ್ಯಗಳಿದ್ದರೂ ರಾಜ್ಯದ ಹಾಗೂ ದೇಶದ ಅಭಿವೃದ್ಧಿಗೆ ಮೊದಲ ಮೂರು ವಿಧದ ಅರಣ್ಯಗಳ ಕೊಡುಗೆ ಮಹತ್ವದ್ದು. ಈ ಬಗೆಯ ಅರಣ್ಯಗಳಲ್ಲಿ ಬೆಲೆಬಾಳುವ ಮರಗಳು ಹೆಚ್ಚು. ಅವು ಸಮೃದ್ಧವಾಗಿಯೂ ಬೆಳೆಯುತ್ತವೆ. ಆದರೆ ಈ ಬಗೆಯ ಅರಣ್ಯಗಳ ಪ್ರಮಾಣ ಕುರುಚಲು ಅರಣ್ಯಗಳಿಗಿಂತ ಕಡಿಮೆ ಇದೆ ಎಂಬುದು ಗಮನಿಸಬೇಕಾದ ಅಂಶ. ಕರ್ನಾಟಕದಲ್ಲಿರುವ ವಿವಿಧ ಬಗೆಯ ಅರಣ್ಯಗಳು, ಅವುಗಳ ಸೇಕಡಾವಾರು ಪ್ರಮಾಣ, ವಿಸ್ತೀರ್ಣ ಮುಂತಾದ ಅಂಕಿ ಸಂಖ್ಯೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಅರಣ್ಯ -ವಿಧ
ವಿಸ್ತೀರ್ಣ-ಒಟ್ಟು
ಅರಣ್ಯದ (೧೦೦೦ ಹೆಕ್ಟೇರುಗಳಲ್ಲಿ)

! ಶೇಕಡಾವಾರು
೧. ದಕ್ಷಿಣಾರ್ಧದ ಉಷ್ಣವಲಯದ
ತೇವಪೂರಿತ
ನಿತ್ಯಹರಿದ್ವರ್ಣದ ಅರಣ್ಯ
 ೫೮೦ ೧೫.೧೧
೨. ದಕ್ಷಿಣಾರ್ಧದ ಉಷ್ಣವಲಯದ
ಆಂಶಿಕ ನಿತ್ಯಹರಿದ್ವರ್ಣದ ಅರಣ್ಯ
 ೫೭೮ ೧೪.೯೬
೩. ದಕ್ಷಿಣ ಭಾರತದ
ತೇವಮಿಶ್ರಿತ ಪರ್ಣಪಾತಿ ಅರಣ್ಯ
 ೭೨೭ ೧೮.೬೪
೪. ದಕ್ಷಿಣಾರ್ಧದ ಉಷ್ಣವಲಯದ
ಒಣ ಪರ್ಣಪಾತಿ ಅರಣ್ಯ
 ೮೧೮ ೨೧.೧೧
೫. ದಕ್ಷಿಣಾರ್ಧದ ಉಷ್ಣವಲಯದ
ಕುರುಚಲು ಅರಣ್ಯ
 ೧೧೬೧ ೩೦.೧೮
ಒಟ್ಟು
೩೮೬೪
೧೦೦.೦೦

ಅರಣ್ಯ ಇಲಾಖೆಯ ಆಡಳಿತಸಂಪಾದಿಸಿ
ಭಾರತದ ಸಂವಿಧಾನದ ವಿಧಿಗನುಗುಣವಾಗಿ ಅರಣ್ಯ ಇಲಾಖೆಯ ಆಡಳಿತ ಕರ್ನಾಟಕ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. ಅರಣ್ಯ ಇಲಾಖೆಯ ಆಡಳಿತದ ಉನ್ನತ ಹುದ್ದೆಗಳಿಗೆ ಆಯ್ಕೆ, ಅರಣ್ಯ ವಿದ್ಯಾಭ್ಯಾಸ ಹಾಗೂ ವೈಜ್ಞಾನಿಕ ಸಂಶೋಧನೆಗಳ ಮೇಲ್ವಿಚಾರಣೆ ಭಾರತ ಸರ್ಕಾರಕ್ಕೆ ಸೇರಿದೆ. ಅರಣ್ಯ ಹುಟ್ಟುವಳಿಗಳ ರಫ್ತು ಆಮದುಗಳು ಕೂಡಾ ಕೇಂದ್ರ ಮೇಲ್ವಿಚಾರಣೆಯಲ್ಲಿಯೇ ನಡೆಯುತ್ತವೆ. ಕರ್ನಾಟಕದ ಅರಣ್ಯ ಇಲಾಖೆಯ ಎಲ್ಲಾ ಕಾರ್ಯ ಚಟುವಟಿಕೆಗಳೂ ಅರಣ್ಯಖಾತೆ ಮಂತ್ರಿಗಳ ನೇತೃತ್ವದಲ್ಲಿ ಅರಣ್ಯ ಕಾರ್ಯದರ್ಶಿಗಳ ಮುಖಾಂತರ ಸಾಗುತ್ತವೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ಸೇರಿದೆ. ಇವರ ಅಧೀನದಲ್ಲಿ ಅರಣ್ಯ ವಿಭಾಗ, ವನ್ಯಜೀವಿ ವಿಭಾಗ ಹಾಗೂ ಅರಣ್ಯ ಕಾರ್ಪೊರೇಶನ್ ಎಂಬ ಮೂರು ಮುಖ್ಯ ಘಟಕಗಳಿವೆ. ಮುಖ್ಯ ಸಂರಕ್ಷಣಾಧಿಕಾರಿಗಳು ಈ ಘಟಕಗಳ ಮುಖ್ಯಸ್ಥರು. ಇವರ ಅಧೀನದಲ್ಲಿ ವೃತ್ತ ಸಂರಕ್ಷಣಾಧಿಕಾರಿಗಳು, ವಿಭಾಗ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ವನಾಧಿಕಾರಿಗಳು, ಅರಣ್ಯ ರಕ್ಷಕರು ಮುಂತಾದವರಿರುತ್ತಾರೆ. ಕರ್ನಾಟಕದಲ್ಲಿ ಒಟ್ಟು ೧೪ ವೃತ್ತಗಳು, ೫೮ ವಿಭಾಗಗಳು, ೧೯೮ ವಲಯಗಳೂ ಇವೆ. ಇದರೊಂದಿಗೆ ಅಭಿವೃದ್ಧಿ ಮುಖ್ಯ ಸಂರಕ್ಷಣಾಧಿಕಾರಿ, ಅರಣ್ಯ ಕೈಗಾರಿಕೆಗಳ ಮುಖ್ಯ ಅಧಿಕಾರಿ, ಮುಖ್ಯ ವನ್ಯಪ್ರಾಣಿ ಸಂರಕ್ಷಣಾಧಿಕಾರಿ ಮುಂತಾದ ಹುದ್ದೆಗಳಿವೆ. ಬೆಂಗಳೂರಿನಲ್ಲಿ ಒಂದು ಅರಣ್ಯ ವೈಜ್ಞಾನಿಕ ಸಂಶೋಧನ ಕೇಂದ್ರವೂ ಇದೆ. ಅರಣ್ಯ ಉಸ್ತುವಾರಿಗಾಗಿ ಗ್ರಾಮ ಅರಣ್ಯ ಸಮಿತಿಗಳನ್ನು ಅನೇಕ ಕಡೆ ಅಸ್ತಿತ್ವಕ್ಕೆ ತರಲಾಗಿದೆ.
ಅರಣ್ಯ ರಕ್ಷಕರಿಗೆ ತರಬೇತಿ ನೀಡಲು ಕುಶಾಲನಗರ, ಯಲ್ಲಾಪುರ, ಹನುಮನಹಟ್ಟಿ ಮತ್ತು ಬೀದರಗಳಲ್ಲಿ ತರಬೇತಿ ಶಾಲೆಗಳಿವೆ. ವನಾಧಿಕಾರಿಗಳು ಮತ್ತು ಮೋಜಣಿದಾರರ (ಸರ್ವೇಯರ್) ತರಬೇತಿಗೆಂದು ಅಂಬಿಕಾನಗರದ ಸಮೀಪ ತರಬೇತಿಶಾಲೆ ಇದೆ. ವಲಯಾಧಿಕಾರಿಗಳಿಗೆ ತರಬೇತಿ ನೀಡಲು ಕೊಯಮತ್ತೂರಿನಲ್ಲಿಯೂ ಭಾರತೀಯ ಅರಣ್ಯ ಸೇವಾ ಅಧಿಕಾರಿಗಳಿಗೆ ತರಬೇತಿ ನೀಡಲು ಡೆಹರಾಡೂನಿನಲ್ಲಿಯೂ ಅರಣ್ಯ ಕಾಲೇಜುಗಳಿವೆ. ಅರಣ್ಯಗಳ ಬಗ್ಗೆ ಹೆಚ್ಚಿನ ವ್ಯಾಸಂಗ, ಮಾಹಿತಿ ಪಡೆಯಲು, ಮೇಲ್ದರ್ಜೆಯ ಅಧಿಕಾರಿಗಳಿಗೆ ವಿದೇಶಗಳಿಗೆ ಭೇಟಿ ನೀಡುವ ಅವಕಾಶಗಳೂ ಇವೆ. ಕರ್ನಾಟಕದಲ್ಲಿ ಅತ್ಯಂತ ಸಂಪದ್ಭರಿತ ಅರಣ್ಯಗಳಿದ್ದರೂ ಅನೇಕ ಕಾರಣಗಳಿಂದಾಗಿ ಅರಣ್ಯಪ್ರದೇಶ ದಿನೇ ದಿನೇ ಕ್ಷಿಣಿಸುತ್ತಿದೆ. ಅರಣ್ಯಪ್ರದೇಶವನ್ನು ವ್ಯವಸಾಯೋದ್ದೇಶಕ್ಕಾಗಿ ಬಳಸುತ್ತಿರುವುದು, ನೀರಾವರಿ ಮತ್ತು ವಿದ್ಯುಚ್ಫಕ್ತಿ ಉದ್ದೇಶಗಳಿಗಾಗಿ ಜಲಾಶಯಗಳನ್ನು ನಿರ್ಮಿಸುತ್ತಿರುವುದು, ನಿರ್ವಸಿತರಿಗೆ ಮರುವಸತಿ ಕಲ್ಪಿಸಲು ಕಾಡುಗಳನ್ನು ಕಡಿಯುವುದು ಅತಿಯಾಗಿ ಮೇಯಿಸುವುದು, ಕಾಡ್ಗಿಚ್ಚು, ಅತಿಕ್ರಮಣ ಚಟುವಟಿಕೆ- ಇವು ಅರಣ್ಯನಾಶಕ್ಕೆ ಮುಖ್ಯ ಕಾರಣಗಳು. ಕಳೆದ ಕೆಲವು ವರ್ಷಗಳಿಂದ ಅರಣ್ಯಾಭಿವೃದ್ಧಿಗೆ, ವನ್ಯಪ್ರಾಣಿ ಸಂರಕ್ಷಣೆಗೆ ಸಾಕಷ್ಟು ಗಮನ ಹರಿಸಲಾಗಿದೆ. ಅರಣ್ಯದ ಇಳುವರಿಯನ್ನು ಹೆಚ್ಚಿಸುವುದು, ಭೂ ಸವಕಳಿಯನ್ನು ತಪ್ಪಿಸುವುದು, ನಾಶಗೊಂಡ ಅರಣ್ಯಗಳಲ್ಲಿ ಪುನಃ ಮರಗಳನ್ನು ಬೆಳೆಸುವುದು, ಸಣ್ಣ ಪ್ರಮಾಣದ ಅರಣ್ಯೋತ್ಪನ್ನಗಳ ಅಭಿವೃದ್ಧಿ, ಅರಣ್ಯ ಸಂಪರ್ಕ ಮಾರ್ಗಗಳ ಅಭಿವೃದ್ಧಿ, ಮೃದು ಮರಗಳನ್ನು, ಬೆಂಕಿಕಡ್ಡಿ ಮರಗಳನ್ನು ಬೆಳೆಸುವುದು, ಪರರಾಷ್ಟ್ರಗಳಿಂದ ಬಂದ ಭಾರತೀಯ ನಿರಾಶ್ರಿತರ ಪುನರ್ ವಸತಿಗಾಗಿ ರಬ್ಬರ್ ತೋಟ ಬೆಳೆಸುವುದು, ಸೌದೆಗಾಗಿ ಮರಗಳನ್ನು ವೃದ್ಧಿಸುವುದು, ಕೋಕೋ ಗಿಡಗಳನ್ನು ಬೆಳೆಸುವುದು ಮುಂತಾದ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಈಗ ಪ್ರತ್ಯೇಕವಾದ ಸಾಮಾಜಿಕ ಅರಣ್ಯ ವಿಭಾಗವನ್ನೇ ಪ್ರಾರಂಭಿಸಲಾಗಿದೆ. ಕರ್ನಾಟಕ ಅರಣ್ಯ ಕೈಗಾರಿಕಾ ಮಂಡಳಿಯನ್ನು ಕೂಡಾ ಸ್ಥಾಪಿಸಲಾಗಿದೆ. ಅರಣ್ಯ ರಕ್ಷಣೆಗಾಗಿ ಬಂದೋಬಸ್ತ್‌ ನೋಡಿಕೊಳ್ಳಲು ಮತ್ತು ಅರಣ್ಯ ಉತ್ಪನ್ನಗಳನ್ನು ಸಾಗಿಸಲು ಅರಣ್ಯ ಇಲಾಖೆ ಅರಣ್ಯ ಪ್ರದೇಶದಲ್ಲಿ ೨೯೩೮ಕಿಮೀ ರಸ್ತೆ ನಿರ್ಮಾಣ ಮಾಡಿದೆ (೧೯೯೫).
ಅರಣ್ಯ ಉದ್ಯಮಗಳುಸಂಪಾದಿಸಿ
ಕರ್ನಾಟಕದ ಅರಣ್ಯ ಪ್ರದೇಶ ವಿವಿಧ ಸಸ್ಯವರ್ಗಗಳ ತವರೂರು. ಶ್ರೀಗಂಧ, ಹೊನ್ನೆ, ನಂದಿ, ಮತ್ತಿ, ಹನಾಲು, ಕರಡಿ, ಸಾಗುವಾನಿ, ಬೀಟೆ, ಹೆತ್ತೇಗ, ತಡಸಲು, ಭೋಗಿ, ನೊಗ, ಬೂರುಗ, ಮಾಕಾಳಿ, ದೊಡ್ಡತೊಪ್ಪೆ, ಸಟ್ಟುಗ, ಬಿಲ್ವಾರ, ಗೊದ್ದ, ತಾರೆ, ದಿಂಡಿಗ, ಬೆಂಡೆ, ಜಂಬೆ, ನೇರಳೆ, ಬಲ್ಲಿ, ಹಲಸು, ಹೆಬ್ಬಲಸು, ಗುಳಮಾವು, ನಾಗ ಸಂಪಿಗೆ, ಕಿರಾಳ ಭೋಗಿ, ಬಿಳಿದೇವದಾರು, ಬೆನ್ನಾಟೆ, ಬಲಂಜಿ, ಹೊಳೆಗಾರ, ನೀಲಿ ಸಂಪಿಗೆ, ಹಾಲುಮಡ್ಡಿ, ಮದ್ದಾಲೆ, ಚುಂಗ, ಧೂಮ, ಸಾಲ್ಧೂಪ, ಕಾಯಿಧೂಪ, ಸುರಹೊನ್ನೆ, ಪಾಲಿ, ಕೊಟ್ಟಿ, ಮಾವು ಮುಂತಾದ ಪ್ರಮುಖ ವೃಕ್ಷಗಳು ಬೆಳೆಯುತ್ತವೆ. ಜೊತೆಗೆ ಬಿದಿರು, ವಾಟೆ ಮತ್ತು ಬೆತ್ತ ಅರಣ್ಯದಲ್ಲಿ ವಿಪುಲವಾಗಿವೆ. ಅರಣ್ಯ ವೈವಿಧ್ಯಮಯ ವಾಗಿರುವಂತೆ ಕರ್ನಾಟಕದ ಅರಣ್ಯ ಉದ್ಯಮಗಳೂ ವೈವಿಧ್ಯಪೂರ್ಣವಾಗಿವೆ.
ಅನಾದಿಕಾಲದಿಂದಲೂ ಮಾನವನ ಜೀವನ ಅರಣ್ಯದೊಡನೆ ಬೆರೆತುಹೋಗಿದೆ. ಆದಿಮಾನವ ದಿನಬಳಕೆಯ ಆಹಾರವಸ್ತುಗಳಾದ ಗಿಡಮೂಲಿಕೆ, ಹಣ್ಣು ಹಂಪಲು, ಮೊಟ್ಟೆ, ಮಾಂಸಗಳನ್ನು, ಮನೆಕಟ್ಟಲು ಬಳಸುವ ಸಾಮಗ್ರಿಯನ್ನೂ ಮೈ ಮುಚ್ಚುವ ಉಡುಪನ್ನೂ ಬೆಂಕಿಯನ್ನೂ ಆಯುಧ ಉಪಕರಣಗಳನ್ನೂ ಅರಣ್ಯದಿಂದಲೇ ಪಡೆಯುತ್ತಿದ್ದ. ಒಂದು ದೇಶದಲ್ಲಿ ಸೌದೆ ಮತ್ತು ಕೈಗಾರಿಕೆಗೆ ಉಪಯೋಗಿಸುತ್ತಿರುವ ಅರಣ್ಯ ಉತ್ಪನ್ನಗಳ ಬಳಕೆಯ ಮೇಲೆ ಅಲ್ಲಿನ ಕೈಗಾರಿಕಾ ಪ್ರಗತಿಯನ್ನು ನಿರ್ಧರಿಸಲಾಗುತ್ತದೆ. ಕೈಗಾರಿಕಾ ಪ್ರಗತಿಯುಳ್ಳ ದೇಶದಲ್ಲಿ ಅರಣ್ಯದ ಕಚ್ಚಾವಸ್ತುಗಳು ಕೈಗಾರಿಕೆಗಳಿಗೆ ಬಳಕೆಯಾಗುತ್ತವೆ. ಅಲ್ಪಭಾಗ ಮಾತ್ರ ಸೌದೆಗೆ ಉಪಯೋಗವಾಗುತ್ತದೆ. ಆದರೆ ನಮ್ಮಲ್ಲಿ ಕಾಡಿನ ಮರಗಳನ್ನು ಸೌದೆಗೆ ಹೆಚ್ಚು ಬಳಸುವುದು ಕಂಡುಬರುತ್ತಿದೆ ಗ್ರಾಮೀಣ ವಸತಿ ಇದಕ್ಕೆ ಮುಖ್ಯ ಕಾರಣ. ಈ ಮುಂದೆ ತಿಳಿಸಿರುವಂತೆ ಸಸ್ಯಗಳನ್ನು ವಿಶ್ವವ್ಯಾಪ್ತಿಯುಳ್ಳ ಕಚ್ಚಾವಸ್ತುಗಳನ್ನಾಗಿ ಪರಿಗಣಿಸಬಹುದು. ಏಕೆಂದರೆ ಅವನ್ನು ಮಣ್ಣು, ಲೋಹ, ಗಾಜು, ನೇಯ್ದ ವಸ್ತುಗಳ ಬದಲಾಗಿ ಬಳಸಬಹುದು.
ಕರ್ನಾಟಕದಲ್ಲಿ ವ್ಯವಸಾಯವೇ ಪ್ರಧಾನವಾದ ಕಸಬು. ವ್ಯವಸಾಯಕ್ಕೆ ಅರಣ್ಯದ ಅಗತ್ಯ ಬಹಳ ಇದೆ. ಹೆಚ್ಚು ಯಾಂತ್ರಿಕತೆ ಇಲ್ಲದ ಬೇಸಾಯಕ್ಕೆ ಅಗತ್ಯವಾದ ನೇಗಿಲು, ಕೊರಡು, ಕುಂಟೆ, ರೆಂಟೆ ಮುಂತಾದ ಉಪಕರಣಗಳನ್ನು ತಯಾರಿಸಲು ಮರದ ಅಗತ್ಯವಿದೆ. ಎಲೆಗೊಬ್ಬರವಂತೂ ವ್ಯವಸಾಯಕ್ಕೆ ಪೌಷ್ಟಿಕವೆಂದು ಪರಿಗಣಿಸಲಾಗುತ್ತದೆ. ಹಸುರೆಲೆಗಳನ್ನು ಬಳಸಿ ಕಾಂಪೋಸ್ಟ್‌ ಗೊಬ್ಬರವನ್ನೂ ತಯಾರಿಸಲಾಗುತ್ತದೆ. ದನದ ಮೇವು, ಮರದ ಸಕ್ಕರೆ, ಮಾದಕ ಪಾನೀಯ, ಶ್ರೀಗಂಧ, ನೀಲಗಿರಿ, ನಿಂಬೆಹುಲ್ಲಿನ ಎಣ್ಣೆ, ರೆಯಾನ್, ಪಾಲಿಫೈಬರ್, ಸೌದೆ, ಇದ್ದಿಲು, ಬೆಂಕಿಕಡ್ಡಿ, ವಿದ್ಯುಚ್ಫಕ್ತಿ, ಮನೆಗೆ ಮರಮುಟ್ಟು, ಪೀಠೋಪಕರಣ, ಪ್ಲೈವುಡ್ ಮತ್ತು ವಿನೀರ್, ಸ್ಲೀಪರ್ಗಳು, ರೈಲ್ವೆಬೋಗಿ, ರೈಲು ಹಾಗೂ ಬಸ್ಸಿನ ಚೌಕಟ್ಟು, ದೋಣಿ, ಹಡಗು ಮಾಡಲು, ಟೀ ಪೆಟ್ಟಿಗೆಗಳು, ಸಾಮಾನು ಸಾಗಣೆ ಪೆಟ್ಟಿಗೆಗಳು, ಕಾಗದ, ಪೆನ್ಸಿಲ್, ಚಿತ್ರೋದ್ಯಮದ ಕಾಗದ, ಪಾರದರ್ಶಕ ಅಂಟು ಮುಂತಾದವುಗಳಿಗೆಲ್ಲ ಅರಣ್ಯಗಳ ಕೊಡುಗೆ ಆಪಾರವಾದುದು. ಕಳೆದ ಎರಡು ಶತಮಾನಗಳಿಂದ ಕರ್ನಾಟಕದಲ್ಲಿ ಅರಣ್ಯ ಆಧಾರಿತವಾದ ಹಲವಾರು ಉದ್ಯಮಗಳು ಸ್ಥಾಪಿತವಾಗಿವೆ.
ಶ್ರೀಗಂಧದ ಉದ್ಯಮಸಂಪಾದಿಸಿ
ಶ್ರೀಗಂಧದ ಮರ ಕರ್ನಾಟಕಕ್ಕೆ ಪ್ರಕೃತಿದತ್ತ ವರ. ರಾಷ್ಟ್ರದ ಒಟ್ಟು ಉತ್ಪತ್ತಿಯ ಶೇ. ೮೦ ಭಾಗ ಕರ್ನಾಟಕದಲ್ಲಿಯೇ ದೊರೆಯುತ್ತದೆ. ಹೀಗಾಗಿ ಶ್ರೀಗಂಧದ ಬೀಡು ಎನ್ನುವ ಮಾತಿದೆ. ಶ್ರೀಗಂಧದ ತೈಲ ಅತಿ ಪರಿಮಳಯುಕ್ತ ಸುಗಂಧ ದ್ರವ್ಯಗಳಲ್ಲಿ ಒಂದು. ಇದು ಪ್ರಾಚೀನ ಕಾಲದಿಂದ ಇಂದಿನವರೆಗೂ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಮಧ್ಯಯುಗದಲ್ಲಿ ವರ್ತಕರು ಈ ಸುಗಂಧವನ್ನು ಪರ್ಷಿಯ, ಅರೇಬಿಯ, ಏಷ್ಯಮೈನರ್, ಈಜಿಪ್ಟ್‌, ಗ್ರೀಸ್ ಮತ್ತು ರೋಮ್ಗಳಿಗೆ ಸಾಗಿಸುತ್ತಿದ್ದುದರ ಬಗ್ಗೆ ಉಲ್ಲೇಖವಿದೆ.
ಕರ್ನಾಟಕದ ಶ್ರೀಗಂಧ ಸ್ಯಾಂಟಲಮ್ ಆಲ್ಬಮ್ ಪ್ರಭೇದಕ್ಕೆ ಸೇರುತ್ತದೆ. ಇದರಿಂದ ಗಂಧದೆಣ್ಣೆಯನ್ನು ತೆಗೆಯುತ್ತಾರೆ. ಆಸ್ಟ್ರೇಲಿಯದಲ್ಲಿ ಬೆಳೆಯುವ ಗಂಧದಮರ ಸ್ಯಾಂಟಲಮ್ ಸ್ಟೈಕೇಟಮ್ದಿಂದ ತೆಗೆಯುವ ತೈಲದೊಡನೆ ತೀವ್ರ ಪೈಪೋಟಿ ಇದೆಯಾದರೂ ಅದು ಕರ್ನಾಟಕದ ಎಣ್ಣೆಯಷ್ಟು ಉತ್ತಮ ದರ್ಜೆಯದಲ್ಲ. ಆದರೂ ಸುಧಾರಿತ ಭಟ್ಟಿ ಇಳಿಸುವ ವಿಧಾನ, ಸಂಯೋಜಿಸುವ ಮತ್ತು ಮಿಶ್ರಣಮಾಡುವ ವಿಧಾನ, ಉತ್ತಮ ದರ್ಜೆಯ ನಿರ್ವಹಣೆ ಮುಂತಾದವುಗಳಿಂದಾಗಿ ಆಸ್ಟ್ರೇಲಿಯದ ಗಂಧದೆಣ್ಣೆ ಕರ್ನಾಟಕದ ತೈಲದೊಡನೆ ಪೈಪೋಟಿ ನೆಡಸಲು ಸಾಧ್ಯವಾಗಿದೆ. ಇಂಡೋನೇಷ್ಯದಲ್ಲಿ ತಯಾರಿಸುವ ಗಂಧದೆಣ್ಣೆಯೂ ಸ್ವಲ್ಪಮಟ್ಟಿಗೆ ನಮ್ಮ ಶ್ರೀಗಂಧದೆಣ್ಣೆಯೊಂದಿಗೆ ಸ್ಪರ್ಧಿಸುತ್ತಿದೆ.
೧೯೧೨ರ ವರೆಗೂ ಕರ್ನಾಟಕದಿಂದ ಶ್ರೀಗಂಧದ ಚಕ್ಕೆ ಬೇರೆ ದೇಶಗಳಿಗೆ, ಅದರಲ್ಲೂ ಮುಖ್ಯವಾಗಿ ಜರ್ಮನಿಗೆ ರಫ್ತಾಗುತ್ತಿತ್ತು. ಅಲ್ಲಿ ಚಕ್ಕೆಯಿಂದ ತೈಲವನ್ನು ತೆಗೆದು ವಿವಿಧ ದೇಶಗಳಿಗೆ ಮಾರುತ್ತಿದ್ದರು. ಒಂದನೆಯ ಮಹಾಯುದ್ಧದ ಪ್ರಯುಕ್ತ ಇದರ ಮಾರಾಟ ನಿಂತುಹೋಯಿತು. ಆಗ ಮೈಸೂರಿನ ದಿವಾನರಾಗಿದ್ದ ಎಂ. ವಿಶ್ವೇಶ್ವರಯ್ಯನವರು ಮರದಿಂದ ಗಂಧದ ಎಣ್ಣೆಯನ್ನು ಹೊರತೆಗೆಯುವ ಯೋಜನೆಯನ್ನು ರೂಪಿಸಿ ೧೯೧೬ರಲ್ಲಿ ಬೆಂಗಳೂರಿನಲ್ಲಿ ಗಂಧದ ಎಣ್ಣೆಯ ಕಾರ್ಖಾನೆಯನ್ನು ಸ್ಥಾಪಿಸಿದರು. ೧೯೧೭ರಲ್ಲಿ ಈ ಕಾರ್ಖಾನೆಯನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಮಲೆನಾಡು ಪ್ರದೇಶದಲ್ಲಿ ಮರದಿಂದ ಗಂಧವನ್ನು ಕೆತ್ತಿ ಸಾಗಿಸಿದ ಮೇಲೆ ಉಳಿದ ಚಿಲ್ವಾ ಗಂಧದ ಚಕ್ಕೆಯನ್ನು ವಿಕ್ರಯಿಸುವುದು ಸಮಸ್ಯೆಯಾಯಿತಾದ್ದರಿಂದ ಅದನ್ನು ಉಪಯೋಗಿಸಲು ಶಿವಮೊಗ್ಗದಲ್ಲಿ ಒಂದು ಪರಿವರ್ತನ ಕಾರ್ಖಾನೆಯನ್ನು ಪ್ರಾರಂಭಿಸಲಾಯಿತು. ಇದು ೧೯೬೩ರಲ್ಲಿ ಪೂರ್ಣ ಗಂಧದ ಎಣ್ಣೆ ಕಾರ್ಖಾನೆಯಾಗಿ ಪರಿವರ್ತಿತವಾಯಿತು. ವರ್ಷಂಪ್ರತಿ ೨೦೦೦ ಟನ್ ಶ್ರೀಗಂಧದ ಮರವನ್ನು ಇವೆರಡು ಕಾರ್ಖಾನೆಗಳು ಉಪಯೋಗಿಸುತ್ತಿವೆ.
ಗಂಧದ ಎಣ್ಣೆಗೆ ಯುರೋಪ್, ಅಮೆರಿಕ ಮತ್ತು ಅರಬ್ ದೇಶಗಳಿಂದ ಹೆಚ್ಚು ಬೇಡಿಕೆ ಉಂಟು. ಗಂಧದ ಎಣ್ಣೆಯನ್ನು ಸುಗಂಧ ದ್ರವ್ಯಗಳ ಹಾಗೂ ಮೈ ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಗಂಧದ ಪರಿಮಳ ಮನಮೆಚ್ಚುವಂಥದು. ಜೊತೆಗೆ ಗಂಧದಿಂದ ಎಣ್ಣೆಯನ್ನು ತೆಗೆದ ಮೇಲೆ ಬರುವ ಗಂಧದ ಪುಡಿಯಿಂದ ಊದಿನ ಕಡ್ಡಿಯನ್ನು ತಯಾರುಮಾಡುತ್ತಾರೆ. ಈಗ ೮೦ ದೇಶಗಳಿಗೆ ಊದಿನಕಡ್ಡಿ ನಿರ್ಯಾತವಾಗುತ್ತಿದ್ದು ಇದರಿಂದ ಪ್ರತಿವರ್ಷ ಸು. ೧೦೦ ಕೋಟಿಗಿಂತಲೂ ಹೆಚ್ಚು ವಿದೇಶೀ ವಿನಿಮಯ ಬರುತ್ತಿದೆ. ಗಂಧದ ಮರವನ್ನು ಕೆತ್ತನೆ ಕೆಲಸಕ್ಕೂ ಉಪಯೋಗಿಸುತ್ತಾರೆ. ಮೈಸೂರು, ಬೆಂಗಳೂರು, ಸಾಗರ, ಸೊರಬ, ಕುಮಟ, ಕಾರವಾರಗಳಲ್ಲಿ ಗಂಧದ ಮರದಿಂದ ಕೆತ್ತನೆ ಕೆಲಸ ಮಾಡುವ ಗುಡಿಗಾರಿಕೆಯ ಕುಶಲ ಕೆಲಸಗಾರರರಿದ್ದಾರೆ. ಗಂಧದ ಮರಗಳನ್ನು ಕದ್ದು ಕಡಿದು ಸಾಗಿಸುವ ದಂಧೆಯಿಂದಾಗಿ ಅವುಗಳ ರಕ್ಷಣೆ ದೊಡ್ಡ ಸಮಸ್ಯೆಯಾಗಿದ್ದು ಅವುಗಳ ಲಭ್ಯತೆ ಕ್ಷೀಣಿಸಿದೆ.
ಕಾಗದದ ಕಾರ್ಖಾನೆಗಳುಸಂಪಾದಿಸಿ
ಬೊಂಬಿನಿಂದ ಕಾಗದವನ್ನು ತಯಾರುಮಾಡುವ ಕಾರ್ಖಾನೆಗಳಾದ ಭದ್ರಾವತಿಯ ಮೈಸೂರು ಕಾಗದದ ಕಾರ್ಖಾನೆ, ದಾಂಡೇಲಿಯ ಪಶ್ಚಿಮ ಕರಾವಳಿಯ ಕಾಗದದ ಕಾರ್ಖಾನೆ (ವೆಸ್ಟ್‌ಕೋಸ್ಟ್‌ ಪೇಪರ್ ಮಿಲ್) ಇವು ಮುಖ್ಯವಾದವು. ಮೈಸೂರು ಕಾಗದದ ಕಾರ್ಖಾನೆ ವರ್ಷಂಪ್ರತಿ ಸು. ೩೦,೦೦೦ ಟನ್ ಕಾಗದವನ್ನು ತಯಾರಿಸುತ್ತಿತ್ತು. ದಾಂಡೇಲಿಯಲ್ಲಿರುವ ಪಶ್ಚಿಮ ಕರಾವಳಿಯ ಕಾಗದ ಕಾರ್ಖಾನೆ ೧೯೫೮ರಲ್ಲಿ ಕಾರ್ಯಾರಂಭ ಮಾಡಿತು. ಈ ಕಾರ್ಖಾನೆ ಪ್ರತಿವರ್ಷ ಸು. ೪೫,೦೦೦ ಟನ್ ಕಾಗದವನ್ನು ತಯಾರಿಸುತ್ತಿತ್ತು. ಇವುಗಳ ಜೊತೆಗೆ ಬೆಳಗೊಳದ ಮಂಡ್ಯ ನ್ಯಾಷನಲ್ ಕಾಗದ ಕಾರ್ಖಾನೆ ಮತ್ತು ಮುನಿರಾಬಾದ್ನ ತುಂಗಭದ್ರಾ ಕಾಗದ ಹಾಗೂ ಸ್ಟ್ರಾಬೋರ್ಡ್ ಕಾರ್ಖಾನೆಗಳು ಕಬ್ಬಿನ ಸಿಪ್ಪೆ ಹಾಗೂ ಹುಲ್ಲನ್ನು ಕಚ್ಚಾವಸ್ತುವನ್ನಾಗಿ ಉಪಯೋಗಿಸಿ ಕಾಗದ ತಯಾರಿಸುತ್ತಿದ್ದ ಕಾರ್ಖಾನೆಗಳು. ಈ ಪೈಕಿ ಮೈಸೂರಿನ ಬಳಿ ಬೆಳಗೊಳದ ಕಾರ್ಖಾನೆಯಲ್ಲಿ ಬೊಂಬನ್ನು ಕಚ್ಚಾವಸ್ತುವನ್ನಾಗಿ ಉಪಯೋಗಿಸಿ ಕಾಗದ ತಯಾರಿಕೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯಿತಾದರೂ ಈ ಯೋಜನೆ ಕಾರ್ಯಗತವಾಗುವ ಮೊದಲೇ ಅನಿವಾರ್ಯವಾಗಿ ಈ ಕಾರ್ಖಾನೆಯನ್ನು ಮುಚ್ಚಲಾಯಿತು. ಇವುಗಳೊಂದಿಗೆ ಕಾರವಾರ ಹಾಗೂ ನಂಜನಗೂಡಿನಲ್ಲಿ ಖಾಸಗಿ ಸ್ವಾಮ್ಯದಲ್ಲಿರುವ ಕಾಗದದ ಕಾರ್ಖಾನೆಗಳೂ ಇವೆ. ಇಂದು ರಾಜ್ಯದಲ್ಲಿ ಒಟ್ಟು ೧೪ಕಕ್ಕೂ ಹೆಚ್ಚು ಕಾಗದದ ಕಾರ್ಖಾನೆಗಳಿವೆ.
ರಬ್ಬರ್ ಉದ್ಯಮಸಂಪಾದಿಸಿ
ರಬ್ಬರ್ ಉದ್ಯಮಕ್ಕೆ ಕೇರಳ ಹೆಚ್ಚು ಪ್ರಸಿದ್ಧಿಯಾಗಿದೆ. ಆದರೆ ೧೯೬೧ರಿಂದ ಈಚೆಗೆ ಕರ್ನಾಟಕದಲ್ಲಿ ಸಾವಿರಾರು ಹೆಕ್ಟೆರ್ ಅರಣ್ಯ ಪ್ರದೇಶದಲ್ಲಿ ರಬ್ಬರ್ ನೆಡುತೋಪುಗಳನ್ನು ಬೆಳೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡುಬಿದರೆ ತಾಲ್ಲೂಕುಗಳಲ್ಲಿ ಹಾಗೂ ಕೊಡಗು ಜಿಲ್ಲೆಯ ಪಶ್ಚಿಮ ಇಳಿಜಾರು ಪ್ರದೇಶಗಳಲ್ಲಿ ಇಂಥ ನೆಡುತೋಪುಗಳಿವೆ. ಈಗ ವರ್ಷಕ್ಕೆ ಸು. ೨೦೦೦ ಟನ್ ರಬ್ಬರ್ ಉತ್ಪಾದನೆಯಾಗುತ್ತಿದೆ. ರಬ್ಬರ್ ನೆಡುತೋಪುಗಳ ಕಾರ್ಯಕ್ರಮದೊಂದಿಗೆ ಶ್ರೀಲಂಕಾದಿಂದ ಬಂದ ನಿರಾಶ್ರಿತರಿಗೆ ಪುನರ್ವಸತಿಕಲ್ಪಿಸುವ ಕಾರ್ಯಕ್ರಮವನ್ನು ಜೋಡಿಸಲಾಗಿದ್ದು, ಈ ಕಾರ್ಯಕ್ರಮದ ಅಡಿಯಲ್ಲಿ ಸು. ೧೦,೦೦೦ ಮಂದಿಗೆ ಪುನರ್ವಸತಿ ದೊರೆತಿದೆ. ರಬ್ಬರ್ ತಯಾರಿಕೆಯನ್ನು ಆಧರಿಸಿದ, ವಾಹನಗಳ ಚಕ್ರದ ಟ್ಯೂಬು ಹಾಗೂ ಟೈರುಗಳನ್ನೂ ತಯಾರಿಸುವ ಕಾರ್ಖಾನೆಗಳೂ ಈಗ ಕರ್ನಾಟಕದಲ್ಲಿ ಸ್ಥಾಪಿತವಾಗಿವೆ. ಈಗ ಪ್ರತ್ಯೇಕವಾದ ರಬ್ಬರ್ ಉದ್ಯಮ ನಿಗಮವನ್ನೂ ಕೂಡಾ ಪ್ರಾರಂಭಿಸಲಾಗಿದೆ. ಸ್ಲೇಟು ಹಾಗೂ ಫೋಟೋ ಚೌಕಟ್ಟಿನ ಉದ್ಯಮಗಳು: ಚಿಕ್ಕಮಗಳೂರು, ಸಾಗರ, ಕುಶಾಲನಗರ, ಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಸ್ಲೇಟು ಹಾಗೂ ಫೋಟೋ ಚೌಕಟ್ಟಿನ ಅನೇಕ ಉದ್ಯಮಗಳಿವೆ. ಈ ಉದ್ಯಮಗಳು ಸಿಲ್ವರ್ ಓಕ್ ಮತ್ತು ಬೆನ್ನಾಟೆ ಮರಗಳನ್ನು ಉಪಯೋಗಿಸಿಕೊಳ್ಳುತ್ತವೆ. ಜೊತೆಗೆ ಆಂಧ್ರಪ್ರದೇಶದಲ್ಲಿರುವ ಕೆಲವು ಕಾರ್ಖಾನೆಗಳ ಆವಶ್ಯಕತೆಯ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಕರ್ನಾಟಕದ ಅರಣ್ಯಗಳು ಪೂರೈಸುತ್ತಿವೆ.
ಮರ ಕುಯ್ಯುವ ಕಾರ್ಖಾನೆಗಳುಸಂಪಾದಿಸಿ
ಕರ್ನಾಟಕದಲ್ಲಿ ಸರ್ಕಾರದ ಮತ್ತು ಖಾಸಗಿ ಆಡಳಿತಕ್ಕೊಳಪಟ್ಟಿರುವ ೫೦೦ಕ್ಕೂ ಹೆಚ್ಚು ಮರ ಕೊಯ್ಯುವ ಕಾರ್ಖಾನೆಗಳಿದ್ದು ಕರ್ನಾಟಕದ ಪ್ರಮುಖ ಉದ್ಯಮವರ್ಗಗಳಲ್ಲಿ ಒಂದು ಎನಿಸಿಕೊಂಡಿದೆ.
ಕರಕುಶಲ ವಸ್ತುಗಳುಸಂಪಾದಿಸಿ
ಕರ್ನಾಟಕ ಅನಾದಿ ಕಾಲದಿಂದಲೂ ತನ್ನ ಕರಕುಶಲ ಕಲೆಗಳಿಗೆ ಪ್ರಸಿದ್ಧಿಯಾಗಿದೆ. ಕರ್ನಾಟಕದಾದ್ಯಂತ ಕುಶಲ ಕಲೆಗಾರರಿದ್ದಾರೆ. ಮೈಸೂರು, ಚನ್ನಪಟ್ಟಣ, ಬೆಂಗಳೂರು, ಶಿವಮೊಗ್ಗ, ಸಾಗರ, ಸೊರಬ, ಶಿರಸಿ, ಹೊನ್ನಾವರ, ಕುಮಟದ ಕುಶಲಕಲೆಗಾರರು ವಿಶೇಷ ಮನ್ನಣೆಯನ್ನು ಪಡೆದಿದ್ದಾರೆ. ಕೆತ್ತನೆಯ ಕೆಲಸಕ್ಕೆ ಶ್ರೀಗಂಧ, ಆನೆಯ ದಂತ, ಬೀಟೆ, ಹೆತ್ತೇಗ, ಕೂಳ, ಹಲಸು, ಕರಿಮರ ಮುಂತಾದ ಹಲವಾರು ವಸ್ತುಗಳು ಬಳಕೆಯಾಗುತ್ತವೆ.
ಪ್ರಾಣಿ ಪಕ್ಷಿಗಳ ಚರ್ಮ ಪ್ರಸಾದನ ಉದ್ಯಮಗಳುಸಂಪಾದಿಸಿ
ಕರ್ನಾಟಕದ ಅರಣ್ಯಗಳು ವನ್ಯಪ್ರಾಣಿಗಳ ತವರುಗಳಾಗಿವೆ. ಇತ್ತೀಚಿನವರೆಗೂ ಬೇಟೆಗಾರರಿಗೆ ಅವಕಾಶವಿದ್ದುದರಿಂದ ಬೇಟೆಯಾದ ಪ್ರಾಣಿಪಕ್ಷಿಗಳ ಚರ್ಮವನ್ನು ಹದಗೊಳಿಸುವ ಹಾಗೂ ಆ ಪ್ರಾಣಿಗಳ ಸ್ಥಿರ ಆಕಾರ ನೀಡುವ ಉದ್ಯಮ ಬಹಳ ಹೆಸರುವಾಸಿಯಾಗಿತ್ತು. ಜೊತೆಗೆ ಪಾದರಕ್ಷೆಗಳು ಹಾಗೂ ಇನ್ನಿತರ ಚರ್ಮದ ವಸ್ತುಗಳನ್ನು ತಯಾರಿಸುವ ಉದ್ಯಮವೂ ಸಾಗುತ್ತಿತ್ತು. ಈಗ ಬೇಟೆಯಾಡುವುದು ನಿಷಿದ್ಧವಾದ್ದರಿಂದ ಇಂಥ ಉದ್ಯಮಗಳು ಕಡಿಮೆಯಾಗಿವೆ. ಚರ್ಮದ ಬದಲು ಪ್ಲಾಸ್ಟಿಕ್ ಅಥವಾ ಕೃತಕವಾಗಿ ತಯಾರಿಸಿದ ವಸ್ತುಗಳನ್ನು ಈ ಉದ್ಯಮಗಳಿಗೆ ಬಳಸಲಾಗುತ್ತಿದೆ.
ಪೆಟ್ಟಿಗೆ ಉದ್ಯಮಗಳುಸಂಪಾದಿಸಿ
ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಬೆಳಗಾಂವಿ, ಸುಳ್ಯ, ಚಾಮರಾಜನಗರ ಮುಂತಾದೆಡೆಗಳಲ್ಲಿ ಮರದ ಪೆಟ್ಟಿಗೆ ತಯಾರಿಕೆಯಲ್ಲಿ ನಿರತವಾದ ಅನೇಕ ಕಾರ್ಖಾನೆಗಳಿವೆ. ಪ್ಲೈವುಡ್ ಮತ್ತು ವಿನೀರ್ ಉದ್ಯಮಗಳು: ಧಾರವಾಡ, ದಾಂಡೇಲಿ, ತಾಳಗುಪ್ಪ, ಸಿದ್ಧಾಪುರ, ಸುಬ್ರಹ್ಮಣ್ಯ, ಮೈಸೂರು, ಹುಣಸೂರು, ಬೆಂಗಳೂರು, ಬಂಟ್ವಾಳ ಮತ್ತು ಹುಬ್ಬಳ್ಳಿಗಳಲ್ಲಿ ಪ್ಲೈವುಡ್ ಮತ್ತು ವಿನೀರ್ ಕಾರ್ಖಾನೆಗಳಿವೆ. ಬಲಂಜಿ, ಅರಶಿನ, ತೇಗ, ಬಿಲ್ವಾರ, ಮದ್ದಾಲೆ, ಕದಂಬ, ಹೆಬ್ಬಲಸು, ಹಲಸು, ಸುರಹೊನ್ನೆ, ಕಾಯಿಧೂಪ, ಗಂಧಗರಿಗೆ, ಬೀಟೆ, ಧೂಮ, ಬಿಳಿದೇವದಾರು, ಪಟ್ಟಗ, ನೇರಳೆ, ಕೂರಿ, ಗೊದ್ದ, ಸಿಲ್ವರ್ ಓಕ್, ದೊಡ್ಡತೊಪ್ಪಾ, ಬೆಂಡೆ, ನಂದಿ, ಬೆನ್ನಾಟೆ, ಗುಳಮಾವು, ಸಂಪಿಗೆ, ಪಾಲಿ ಬೂರುಗ, ಸಾಗುವಾನಿ, ಮತ್ತಿ ಜಾತಿಯ ಮರಗಳು, ಸಾಲುಧೂಪ ಮುಂತಾದ ವೃಕ್ಷಗಳು ಪ್ಲೈವುಡ್ ಮಾಡಲು ಬಳಕೆಯಾಗುತ್ತವೆ.
ಕರ್ನಾಟಕದ ಪ್ಲೈವುಡ್ಡಿಗೆ ಇರಾನ್, ಇರಾಕ್, ಸೌದಿ, ಕುವೈತ್, ಅರೇಬಿಯ, ಶ್ರೀಲಂಕಾ, ಸಿಂಗಪುರ, ಇಂಗ್ಲೆಂಡ್, ಕೆನಡ, ಅಮೆರಿಕ, ಜಪಾನ್, ಜರ್ಮನಿ ಮುಂತಾದ ದೇಶಗಳಿಂದ ಅಧಿಕ ಬೇಡಿಕೆಯಿದೆ. ಈ ಕಾರ್ಖಾನೆ ಅತ್ಯಂತ ಹೆಚ್ಚಿನ ಜನರಿಗೆ ಉದ್ಯೋಗವನ್ನು ಕಲ್ಪಿಸುವ ಮತ್ತು ವಿದೇಶೀ ವಿನಿಮಯವನ್ನು ಒದಗಿಸುವ ಒಂದು ಉದ್ಯಮವಾಗಿದೆ.
ಬೆಂಕಿಕಡ್ಡಿ ಕಾರ್ಖಾನೆಗಳುಸಂಪಾದಿಸಿ
ಇವು ಮುಖ್ಯವಾಗಿ ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕೇಂದ್ರಿಕೃತವಾಗಿವೆ. ಈ ಎರಡು ಜಿಲ್ಲೆಗಳಲ್ಲಿ ೨೦ ಕಾರ್ಖಾನೆಗಳಿವೆ. ಅಲ್ಲದೆ ಧಾರವಾಡ, ಚಾಮರಾಜನಗರ, ಸಾಗರ, ಪುತ್ತೂರುಗಳಲ್ಲಿಯೂ ಸಣ್ಣ ಸಣ್ಣ ಕಾರ್ಖಾನೆಗಳಿವೆ. ಆದರೆ ಇವು ಯಾವುವೂ ಪೂರ್ಣ ಪ್ರಮಾಣದ ಕಾರ್ಖಾನೆಗಳಲ್ಲ. ಆದ್ದರಿಂದ ಈ ಕಾರ್ಖಾನೆಗಳು ಕಡ್ಡಿಗಳನ್ನು ಶಿವಕಾಶಿಯಲ್ಲಿರುವ ಕಾರ್ಖಾನೆಗಳಿಗೂ ವಿಮ್ಕೋ ಕಂಪನಿಗೂ ಮಾರುತ್ತವೆ. ವಿಮ್ಕೋ ಕಂಪನಿ ಚೆನ್ನೈ, ಅಂಬರನಾಥ, ಚೂಟರ್ ಬುಕ್ಗಂಜ್, ಕಲ್ಲಿಕೋಟೆ ಹಾಗೂ ಪೋರ್ಟ್ಬ್ಲೆರ್ಗಳಲ್ಲಿರುವ ತನ್ನ ಕಾರ್ಖಾನೆಗಳಿಗೆ ಬೆಂಕಿಕಡ್ಡಿಗಳನ್ನು ಕಳುಹಿಸಿ ಪೊಟ್ಟಣಗಳನ್ನು ತಯಾರಿಸುತ್ತದೆ. ಶಿವಮೊಗ್ಗದಲ್ಲಿ ಬೆಂಕಿ ಪೊಟ್ಟಣಗಳನ್ನು ತಯಾರಿಸುವ ಕಾರ್ಖಾನೆ ಇದೆ. ಇತ್ತೀಚೆಗೆ ಕೆಲವು ಅದ್ದುವ ಕಾರ್ಖಾನೆಗಳು ಪ್ರಾರಂಭವಾಗಿವೆ. ಮರದ ಕಡ್ಡಿಯ ಬದಲು ಎಣ್ಣೆ ಕಾಗದದ ಕಡ್ಡಿಗಳನ್ನು ತಯಾರಿಸಲಾಗುತ್ತದೆ.
ಹರಿಹರ ಪಾಲಿಫೈಬರ್ ಕಾರ್ಖಾನೆಸಂಪಾದಿಸಿ
ಇದು ೧೯೭೦ರಲ್ಲಿ ಕಾರ್ಯಾರಂಭ ಮಾಡಿತು. ಈ ಕಾರ್ಖಾನೆಗೆ ದಿನವಹಿ ೧೨೦೦ ಟನ್ನು ನೀಲಗಿರಿ ಮರ ಕಚ್ಚಾವಸ್ತುವಾಗಿ ಬೇಕಾಗುತ್ತದೆ. ಈ ಕಾರ್ಖಾನೆ ಸಾವಿರಾರು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದೆಯಲ್ಲದೆ ಪರೋಕ್ಷವಾಗಿ ೧೦,೦೦೦ ಮಂದಿಗೆ ಉದ್ಯೋಗ ದೊರಕುವಂತೆ ಮಾಡಿದೆ. ಇದರೊಂದಿಗೆ ಕೇರಳದ ಮಾವೂರಿನಲ್ಲಿರುವ ಗ್ವಾಲಿಯರ್ ರೆಯಾನ್ ಕಾರ್ಖಾನೆಗೆ ಇತ್ತೀಚಿನವರೆಗೂ ಕರ್ನಾಟಕದ ಅರಣ್ಯಗಳಿಂದ ಬೊಂಬು ಮತ್ತು ಸೌದೆ ಸರಬರಾಜಾಗುತ್ತಿದ್ದವು.
ಮರ ಸಂರಕ್ಷಣೆ ಕಾರ್ಯಗಾರಸಂಪಾದಿಸಿ
ಎರಡನೆಯ ಮಹಾಯುದ್ಧದ ಅನಂತರ ಸಾಗುವಾನಿ ಮರ ನಶಿಸುತ್ತ ಬಂದಿದ್ದರಿಂದ ಕೆಳದರ್ಜೆಯ ಜಾತಿಯ ಮರಗಳನ್ನು ಸಾಗುವಾನಿ ಮರದ ಬದಲು ಉಪಯೋಗಿಸುವ ಸಾಧ್ಯತೆಯನ್ನು ಕುರಿತು ಅಧ್ಯಯನ ನಡೆಸಲಾಗಿದೆ. ರಕ್ಷಕ ರಾಸಾಯನಿಕ ಪದಾರ್ಥವನ್ನು ಉಪಯೋಗಿಸಿ ಮರಗಳನ್ನು ಅಧಿಕ ಕಾಲಾವಧಿಯವರೆಗೂ ಉಪಯೋಗಕ್ಕೆ ಬರುವಂತೆ ಮಾಡುವ ತಂತ್ರವನ್ನು ಕಂಡುಹಿಡಿಯಲಾಗಿದೆ. ಈಗ ಸರ್ಕಾರದ ಅಧೀನದಲ್ಲಿ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಮರ ಸಂರಕ್ಷಕ ಕಾರ್ಯಾಗಾರಗಳಿವೆ. ಮುಖ್ಯವಾಗಿ ವಿದ್ಯುಚ್ಫಕ್ತಿ ಕಂಬಗಳಿಗೆ ಹಾಗೂ ರೈಲ್ವೆ ಹಳಿಗಳ ಕೆಳಗೆ ಉಪಯೋಗಿಸುವ ಅಡಿಮರಗಳನ್ನು ಇಲ್ಲಿ ಸಂಸ್ಕರಿಸಲಾಗುವುದು. ಖಾಸಗಿ ಆಡಳಿತಕ್ಕೊಳಪಟ್ಟ ಇನ್ನೊಂದು ಕಾರ್ಯಾಗಾರ ಹುಬ್ಬಳ್ಳಿಯಲ್ಲಿದೆ. ಇತ್ತೀಚೆಗೆ ವಿದ್ಯುತ್ ಕಂಬಗಳಿಗೆ ಹಾಗೂ ರೈಲ್ವೆ ಹಳಿಗಳ ಅಡಿಪಟ್ಟಿಗಳಿಗೆ ಮರದ ಬದಲು ಕಾಂಕ್ರೀಟ್ ಕಂಬಗಳನ್ನು ಬಳಸುವುದರ ಮೂಲಕ ಮರಗಳನ್ನು ಕಡಿದು ಉಪಯೋಗಿಸುವುದನ್ನು ಕಡಿಮೆ ಮಾಡಲಾಗುತ್ತಿದೆ. ಕರ್ನಾಟಕದ ಕಾಡುಗಳಲ್ಲಿ ನಾಟಾಕ್ಕೆ ಉಪಯುಕ್ತವಾದ ಮರಗಳ ಪ್ರಮಾಣ ತುಂಬಾ ಕ್ಷೀಣಿಸಿದ್ದರಿಂದ ಆಗ್ನೇಯ ಏಷ್ಯದ ರಾಷ್ಟ್ರಗಳಿಂದ ಮತ್ತು ಆಫ್ರಿಕದಿಂದ ಮರದ ದಿಮ್ಮಿಗಳನ್ನು ಆಮದು ಮಾಡಿಕೊಳ್ಳುವುದು ಹೆಚ್ಚಿದೆ.
ಪೀಠೋಪಕರಣಗಳ ಉದ್ಯಮಸಂಪಾದಿಸಿ
ಈ ಉದ್ಯಮಕ್ಕೆ ಬೆತ್ತ, ಮರ ಮತ್ತು ಪ್ಲೈವುಡ್ಗಳನ್ನು ಉಪಯೋಗಿಸುತ್ತಾರೆ. ಕೊಡಗಿನ ಮೂರ್ಕಲ್ ಮತ್ತು ಶಿವಮೊಗ್ಗದಲ್ಲಿ ಸರ್ಕಾರದ ಅಧೀನಕ್ಕೊಳಪಟ್ಟ ಪೀಠೋಪಕರಣ ತಯಾರಿಕೆಯ ಎರಡು ಘಟಕಗಳಿವೆ. ಇವುಗಳ ಜೊತೆಗೆ ಖಾಸಗಿ ಕ್ಷೇತ್ರದಲ್ಲಿ ಸಾವಿರಾರು ಘಟಕಗಳು ಕೆಲಸಮಾಡುತ್ತಿವೆ. ಇದಲ್ಲದೆ ವಿವಿಧ ಜಿಲ್ಲೆಗಳಲ್ಲಿರುವ ಬಂದೀಖಾನೆಗಳಲ್ಲಿ ಕೂಡಾ ಪೀಠೋಪಕರಣಗಳ ತಯಾರಿಕೆಯ ಕೆಲಸ ನಡೆಯುತ್ತದೆ.
ಚಿಪ್ ಬೋರ್ಡ್ ಉದ್ಯಮಸಂಪಾದಿಸಿ
ಯಾವ ಕೈಗಾರಿಕೆಗಳಿಗೂ ಬಾರದ ವಿವಿಧ ಜಾತಿಯ ಸಣ್ಣಮರದ ತುಂಡುಗಳಿಂದ ಚಿಪ್ ಬೋರ್ಡ್ನ್ನು ತಯಾರಿಸಬಹುದು. ಅರಣ್ಯ ಉದ್ಯಮದಲ್ಲಿ ಇದೊಂದು ಬಹುಮುಖ್ಯ ಪ್ರಗತಿಪರ ಹೆಜ್ಜೆ. ಚಿಪ್ ಬೋರ್ಡ್ಗಳನ್ನು ಶಕ್ತಿ ಪ್ರಾಧನ್ಯವಿಲ್ಲದ ಭಾಗಗಳಲ್ಲಿ ಹಲಗೆಗಳ ಬದಲಾಗಿ ಉಪಯೋಗಿಸಬಹುದು.

ಕರ್ನಾಟಕದ ಅರಣ್ಯ ಸಂಪತ್ತು


ಕರ್ನಾಟಕದ ಅರಣ್ಯ ಸಂಪತ್ತು


ಕರ್ನಾಟಕದ ಅರಣ್ಯ ಸಂಪತ್ತು ಹೇರಳವಾದುದು. ಪುರಾತನ ಕಾಲದಲ್ಲಿ ಕರ್ನಾಟಕ ರಾಜ್ಯ ದಂಡಕಾರಣ್ಯದ ಒಂದು ಮುಖ್ಯ ಪ್ರದೇಶವಾಗಿದ್ದು ಮೃಗಗಳ ಬೇಟೆಯಲ್ಲಿ ಆಸಕ್ತಿಯಿದ್ದ ಅಂದಿನ ಅರಸರಿಂದ ಅನೇಕ ರೀತಿಯಲ್ಲಿ ಪೋಷಿತವಾಗಿದ್ದಿತು. ಪ್ರಸಿದ್ಧ ವೆನಿಶಿಯನ್ ಪ್ರವಾಸಿ ಮಾರ್ಕೋಪೋಲೋ ಕರ್ನಾಟಕದ ಅರಣ್ಯ ಸಂಪತ್ತನ್ನು ಸಾಕಷ್ಟು ಪ್ರಶಂಸಿಸಿದ್ದಾನೆ. ವಿಜಯನಗರಕ್ಕೆ ಭೇಟಿ ನೀಡಿದ ಅನೇಕ ವಿದೇಶೀ ಪ್ರವಾಸಿಗಳೂ ಇಲ್ಲಿನ ಕಾಡಿನ ದಟ್ಟತೆ ಮತ್ತು ಸಮೃದ್ಧತೆಯ ಬಗ್ಗೆ ವರ್ಣಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ಅರಣ್ಯಗಳಿಗೆ ತುಂಬಾ ಪ್ರಾಮುಖ್ಯ ನೀಡಲಾಗಿತ್ತು. ಅಂದು ವಿಜಯನಗರವನ್ನು ಸಂದರ್ಶಿಸಿದ ಅರೇಬಿಯದ ವ್ಯಾಪಾರಿ ಅಬ್ದುಲ್ ರಜಾಕ್ ಎಂಬಾತ ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ಅದರ ವಾಣಿಜ್ಯ ಪ್ರಾಮುಖ್ಯತೆಯ ಬಗ್ಗೆ ಬಹುವಾಗಿ ವಿವರಿಸಿದ್ದಾನೆ. ವಿಜಯನಗರ ಸಾಮ್ರಾಜ್ಯ ಇರುವವರೆಗೂ ದಕ್ಷರೀತಿಯಿಂದ ನಡೆಯುತ್ತಿದ್ದ ಅರಣ್ಯಗಳ ಆಡಳಿತ ೧೫೬೫ರ ತಾಳೀಕೋಟೆಯ ಕದನದ ಅನಂತರ ಕುಸಿಯಿತು. ಸಾಗುವಳಿಗೆ ಸಾಕಷ್ಟು ಜಮೀನಿಲ್ಲದೆ ಜನ ಅರಣ್ಯ ಒತ್ತುವರಿ ಮಾಡಿ ವ್ಯವಸಾಯ ಮಾಡಲು ಪ್ರಾರಂಭಿಸಿದರು. ತರುವಾಯ ಹೈದರ್ ಅಲಿ ಹಾಗೂ ಟಿಪ್ಪುಸುಲ್ತಾನರ ಕಾಲದಲ್ಲಿ ಶ್ರೀಗಂಧದ ಮರವನ್ನು ರಾಜವೃಕ್ಷ ಎಂದು ಪರಿಗಣಿಸಲಾಯಿತು. ಜೊತೆಗೆ ಬಹುಮುಖ್ಯ ಪ್ರಯೋಜನಕಾರಿ ಸಾಗುವಾನಿ ತೇಗದ ಮರಕ್ಕೂ ಸರ್ಕಾರದ ರಕ್ಷಣೆ ದೊರೆಯಿತು.
ಕಾಡುಗಳ ಆಡಳಿತ ಹಾಗೂ ಸಂರಕ್ಷಣೆಯಲ್ಲಿ ಬ್ರಿಟಿಷರ ಕೊಡುಗೆ ಅಪಾರ. ವೈಜ್ಞಾನಿಕ ವಿಧಾನದಲ್ಲಿ ಕಾಡುಗಳ ವಿಂಗಡನೆ ಹಾಗೂ ಸಂರಕ್ಷಣೆಯನ್ನು ಇಡೀ ಭಾರತದಲ್ಲಿ ಪ್ರಾರಂಭಿಸಿದವರೂ ಬ್ರಿಟಿಷರೇ. ಕರ್ನಾಟಕದ ಸ್ಥಿತಿಯೂ ಬೇರೆಯಲ್ಲ. ೧೭೯೯ರ ಅನಂತರ ಬ್ರಿಟಿಷರ ಅಧೀನಕ್ಕೊಳಪಟ್ಟ ಕರ್ನಾಟಕದ ಭಾಗದಲ್ಲಿ ಮೊದಲು ಶ್ರೀಗಂಧ ಹಾಗೂ ತೇಗದ ಮರಗಳಿಗೆ ಮಾತ್ರ ಪ್ರಾಮುಖ್ಯವಿತ್ತು. ಗವರ್ನರ್ ಜನರಲ್ ಡಾಲ್ ಹೌಸಿಯ ೧೮೫೦ರ ಆದೇಶ, ಕರ್ನಾಟಕದ ಅರಣ್ಯ ರಕ್ಷಣೆ, ಅಭಿವೃದ್ಧಿ, ಮಾರ್ಪಾಡು ಎಲ್ಲವೂ ಕಾನೂನು ಕಟ್ಟಳೆಗಳಿಗೆ ಒಳಪಟ್ಟು ವೈಜ್ಞಾನಿಕ ರೀತಿಯಲ್ಲಿ ಬೆಳೆದುಬರುವಂತೆ ಮಾಡಿತು. ಹಿಂದೆ ಅರಬ್ಬರು, ಆಫ್ರಿಕನ್ನರು ಅನಂತರ ಭಾರತಕ್ಕೆ ಬಂದ ಬ್ರಿಟಿಷರು ಹಡಗುಗಳ ನಿರ್ಮಾಣಕ್ಕೆ ಸಾಗುವಾನಿ ಮತ್ತು ಸುರಹೊನ್ನೆ ಮರಗಳನ್ನು ಕಡಿದು ಉಪಯೋಗಿಸುತ್ತಿದ್ದರು. ಇಂಗ್ಲೆಂಡಿನ ಓಕ್ ಮರ ನಶಿಸುತ್ತ ಬಂದಂತೆಲ್ಲ ಕರ್ನಾಟಕದ ಸಾಗುವಾನಿ ಮರಗಳಿಗೆ ಬೇಡಿಕೆ ಹೆಚ್ಚುತ್ತ ಬಂದಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಇಡೀ ಭಾರತದಲ್ಲಿ ಸಾಕಷ್ಟು ಪ್ರಮಾಣದ ಮರದ ದಿಮ್ಮಿ, ಕಂಬಗಳಿಗಾಗಿ ಅರಣ್ಯ ನಾಶ ಮುಂದವರಿಯಿತು. ಜೊತೆ ಜೊತೆಯಲ್ಲೇ ಅರಣ್ಯದ ಮರಮುಟ್ಟುಗಳ ವಿಚಾರವಾಗಿ ವೈಜ್ಞಾನಿಕ ಸಂಶೋಧನೆ ಪ್ರಾರಂಭವಾಯಿತು. ನೆಡುತೋಪುಗಳು, ಸಾಲುಮರಗಳು, ಗುಂಡು ತೋಪುಗಳನ್ನು ಅಲ್ಲಲ್ಲಿ ಬೆಳೆಸಿದರು. ಆದರೂ ಜನಸಂಖ್ಯೆಯ ಹೆಚ್ಚಳದಿಂದಾಗಿಯೂ ಹೆಚ್ಚು ಬೆಳೆ ಬೆಳೆಯುವ ಆಂದೋಲನದಿಂದಾಗಿಯೂ ಯೋಗ್ಯವಾದ ಕಾಡುಗಳು ನಾಶವಾಗುತ್ತ ಬಂದವು. ಕೈಗಾರಿಕೆಗಳಿಗೆ ಬೇಕಾದ ಮರಮುಟ್ಟು, ಸೌದೆ, ಇದ್ದಿಲುಗಳಿಗಾಗಿ ಪ್ರತಿವರ್ಷ ಸು. ೧ ಲಕ್ಷ ಹೆಕ್ಟೇರು ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ ಎಂದು ೧೯೭೦ರ ದಶಕದ ಅಂಕಿ ಸಂಖ್ಯೆಗಳು ತಿಳಿಸುತ್ತವೆ. ಆದರೆ ಇತ್ತೀಚೆಗೆ ನೆಡುತೋಪುಗಳನ್ನು ಹೆಚ್ಚಿಸುವ, ಸಸ್ಯಗಳನ್ನು ನೆಟ್ಟು ಅರಣ್ಯಗಳನ್ನು ಅಭಿವೃದ್ಧಿಪಡಿಸುವ ಹಾಗೂ ಸಾಮಾಜಿಕ ಅರಣ್ಯ ಕಾರ್ಯಕ್ರಮಗಳಿಂದಾಗಿ ಕರ್ನಾಟಕದ ಅರಣ್ಯ ಕ್ಷೇತ್ರ ಗಣನೀಯವಾಗಿಯಲ್ಲದಿದ್ದರೂ ನಿಧಾನವಾಗಿ ವೃದ್ಧಿಯಾಗುತ್ತಿದೆ.
೧೯೬೦ರ ದಶಕದಲ್ಲಿ ಕರ್ನಾಟಕದಲ್ಲಿ ೩೫,೨೧,೦೦೦ ಹೆಕ್ಟೇರು ಅರಣ್ಯವಿದ್ದು, ಇದು ಕರ್ನಾಟಕದ ಭೂಭಾಗದ ಶೇ. ೨೩ ಭಾಗದಷ್ಟಾಗುತ್ತಿತ್ತೆಂದು ದಾಖಲೆಗಳು ತಿಳಿಸುತ್ತವೆ. ೧೯೮೫ರ ವೇಳೆಗೆ ಕರ್ನಾಟಕದ ಅರಣ್ಯ ಪ್ರದೇಶದ ವಿಸ್ತೀರ್ಣ ಸುಮಾರು ಶೇ. ೧೯.೫ಕ್ಕೆ ಕುಸಿಯಿತು. ಅಂಕಿ ಅಂಶಗಳ ಪ್ರಕಾರ ೨೦೦೨-೦೩ರಲ್ಲಿ ಕರ್ನಾಟಕದ ಅರಣ್ಯ ಪ್ರದೇಶದ ವಿಸ್ತೀರ್ಣ ೩೦,೭೦,೦೦೦ ಹೆಕ್ಟೇರು. ವಿವಿಧ ಸಂರಕ್ಷಣಾ ತಂತ್ರಗಳಿಂದಾಗಿಯೂ ಈಗ ಕರ್ನಾಟಕದ ಭೂಭಾಗ ಶೇಕಡ ೧೪.೮ ಭಾಗ ಮಾತ್ರ ಅರಣ್ಯದಿಂದ ಆವೃತವಾಗಿದೆ.
ಕರ್ನಾಟಕದಲ್ಲಿ ಇಷ್ಟು ಅರಣ್ಯ ಪ್ರದೇಶವಿದ್ದರೂ ಇದಷ್ಟೂ ಮಾನವನ ಪ್ರಯೋಜನಕ್ಕೆ ಅರ್ಹವಾದುದೆಂದು ಹೇಳಲು ಸಾಧ್ಯವಿಲ್ಲ. ಕಾರಣಾಂತರಗಳಿಂದ ಒಟ್ಟು ಅರಣ್ಯದ ಶೇ. ೨೫ರಷ್ಟು ಭಾಗ ಕ್ಷೀಣದೆಶೆಯಲ್ಲಿದೆ. ಇಂಥ ಅಪ್ರಯೋಜಕ ಪ್ರದೇಶವನ್ನು ವೈಜ್ಞಾನಿಕ ಪ್ರಯೋಗಗಳ ಮೂಲಕ ಮೇಲುದರ್ಜೆಗೆ ಏರಿಸುವುದು ಸರ್ಕಾರದ ಉದ್ದೇಶ. ಈ ದಿಶೆಯಲ್ಲಿ ಅರಣ್ಯ ಇಲಾಖೆಯ ಅನೇಕ ವರ್ಷಗಳ ಪ್ರಯತ್ನದ ಫಲವಾಗಿ ಇಂದು ಮಾನವ ನಿರ್ಮಿತ ನೆಡುತೋಪುಗಳ ವಿಸ್ತೀರ್ಣ ಸು.೧,೫೦೦ಚ.ಕಿಮೀ. ಈ ನೆಡುತೋಪುಗಳಲ್ಲಿ ಆಧುನಿಕ ಕೈಗಾರಿಕೆಗೆ ಬೇಕಾಗುವ ಯೂಕಲಿಪ್ಟಸ್, ನೀಲಗಿರಿ, ತೇಗ, ರಬ್ಬರ್, ಕೋಕೋ, ಸಂಬಾರ, ಶ್ರೀಗಂಧ, ಗೇರು, ಎಣ್ಣೆ ಗಿಡಗಳು ಮುಂತಾದವು ಹೇರಳವಾಗಿವೆ. ಇತ್ತೀಚೆಗೆ ಜಾರಿಗೆ ಬಂದಿರುವ ಅರಣ್ಯವಿಭಾಗ ಬಿಡುಗಡೆ ಕಾನೂನು ಕಾಡಿನ ನಾಶವನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಿದೆ. ಜನತೆಗೆ ಬೇಕಾದ ಮರಮುಟ್ಟು, ಸೌದೆ, ಹಸಿಗೊಬ್ಬರ, ವ್ಯವಸಾಯದ ಉಪಕರಣಗಳು ಮುಂತಾದವುಗಳನ್ನು ಅರಣ್ಯ ಕೃಷಿಯ ಮೂಲಕ ಸರಿತೂಗಿಸಿಕೊಳ್ಳಬೇಕಾದುದು ಅನಿವಾರ್ಯ.

ಕರ್ನಾಟಕದ ಚಿತ್ರಕಲೆ


ಕರ್ನಾಟಕದ ಚಿತ್ರಕಲೆ


ಕರ್ನಾಟಕದ ಚಿತ್ರಕಲೆ: ಭಾರತದ ಇತರ ಭಾಗಗಳಲ್ಲಿರುವಂತೆ ಕರ್ನಾಟಕದಲ್ಲೂ ಚಿತ್ರಕಲಾ ಸಂಪ್ರದಾಯ ಪ್ರಾಚೀನಕಾಲದಿಂದಲೂ ಬಂದಿದೆ. ಕನ್ನಡ ನಾಡಿನ ಚಿತ್ರಕಲೆಯ ಬಹುಭಾಗ ದೇವಾಲಯಗಳಿಗೆ ಸಂಬಂಧಿಸಿದ್ದು. ಮರದಲ್ಲಿ ದೇವಾಲಯಗಳನ್ನು ನಿರ್ಮಿಸುತ್ತಿದ್ದಾಗ, ಮರದಲ್ಲಿಯೇ ಮೂರ್ತಿಗಳನ್ನು ಕಡೆಯುತ್ತಿದ್ದಾಗ, ರಮ್ಯತೆಗಾಗಿ ಅವುಗಳ ಮೇಲೆ ಬಣ್ಣ ಮೂಡಿಸುತ್ತಿದ್ದರು. ಹಿಂದಿನ ದೇವಾಲಯಗಳಲ್ಲಿ ಉತ್ಸವಮೂರ್ತಿಯಲ್ಲದೆ ಮರದ ಮೂಲಮೂರ್ತಿಯಲ್ಲೇ ಎರಡು ಬಗೆ ಇರುತ್ತಿದ್ದುವು. ಧ್ರುವಬೇರ ಎನಿಸಿಕೊಳ್ಳುವ ಮೂಲದೇವರಿಗೆ ಅಭಿಷೇಕವಿಲ್ಲ; ಅದರ ಮೇಲೆ ಸ್ಟಕ್ಕೋ ಲೇಪನ ಬಳಿದು ಬಣ್ಣಗಳಿಂದ ಅಲಂಕರಿಸುತ್ತಿದ್ದರು. ನಿತ್ಯದ ಅಭಿಷೇಕಕ್ರಿಯೆಗಳಿಗೆ ಸ್ನಪನಬೇರ ಎನಿಸಿಕೊಳ್ಳುವ ಮೂರ್ತಿಗಳು ಇರುತ್ತಿದ್ದುವು. ವರ್ಣಚಿತ್ರಕಲೆಯ ಉಗಮ ಧ್ರುವಬೇರ ಮೂರ್ತಿಗಳಲ್ಲಿ ಆಯಿತು. ಪ್ರಾಚೀನ ಚಿತ್ರಕಲೆ ದೇವಾಲಯದಲ್ಲೇ ಆರಂಭವಾಗಿ ಬಹುಕಾಲ ಶಿಲ್ಪಕ್ಕೆ ಸಹಕಾರಿ ಮಾತ್ರ ಆಗಿದ್ದಿತು. ಆದರೆ ಎಂಟನೆಯ ಶತಮಾನದ ವೇಳೆಗೆ ಈ ಕಲೆ ಪ್ರತ್ಯೇಕವಾಗಿ ವಿಶಿಷ್ಟವಾಗಿದ್ದಿತೆನ್ನಲು ನೆಲಮಂಗಲದ ಮನ್ನೆಫಲಕ ಆಧಾರ ; ಗಂಗರಾಜರ ಆಶ್ರಯದಲ್ಲಿದ್ದ ಶಾಸನದ ಲಿಪಿಕಾರ ತನ್ನನ್ನು ಸರ್ವಕಲಾಧಾರಭೂತ, ಚಿತ್ರಕಲಾಭಿಜ್ಞೇಯ ಎಂದು ಕರೆದುಕೊಂಡಿದ್ದಾನೆ.
ಹೊಯ್ಸಳರ ಕಾಲಕ್ಕೇ ಶಿಲ್ಪಿಗಳು ದೇವಾಲಯದ ಸೊಬಗನ್ನು ಹೆಚ್ಚಿಸಲು ಚಿತ್ರ ಕಲಾವಿದರನ್ನು ಕರೆಯುತ್ತಿದ್ದರು. ದೇವಾಲಯದ ಭುವನೇಶ್ವರಿ, ಮತ್ತು ಹಜಾರದ ಒಳಗೋಡೆಗಳು ಚಿತ್ರಗಳಿಂದ ತುಂಬಿರುತ್ತಿದ್ದುವು. ಇದರಲ್ಲಿದ್ದ ಗೊಂಬೆಗಳು ಚಿತ್ರಾಭಾಸವೆನಿಸಿಕೊಳ್ಳುತ್ತಿದ್ದುವು. ಎಂದರೆ ನಿಜವಾಗಿಯೇ ಇರುವಂತೆ ಭಾಸವಾಗುತ್ತಿದ್ದುವೆಂದರ್ಥ. ಶಿಲ್ಪದಲ್ಲಿ ಘನರೂಪವಿದೆ; ದುಂಡುಮೂರ್ತಿಗಳು ಶಕ್ಯ. ಆದರೆ ಚಿತ್ರಕಲೆಯಲ್ಲಿ ಘನರೂಪವನ್ನು ಸಾಂಕೇತಿಕವಾಗಿ ತೋರಿಸಬೇಕಷ್ಟೆ. ತಿರುಗಿಕೊಂಡ ಗೊಂಬೆಗಳಿದ್ದರೆ, ಮುಖದ ಒಂದು ಪಾಶರ್ವ್‌ ಮಾತ್ರ ಕಾಣುವಂತಿದ್ದರೆ ಅವು ಅರ್ಧ ಚಿತ್ರ ಎನಿಸಿಕೊಳ್ಳುತ್ತಿದ್ದುವು. ಇತ್ತೀಚೆಗೆ ದೊರಕಿರುವ ಹಸ್ತಪ್ರತಿಯೊಂದರಲ್ಲಿ ಆ ಕಾಲದ ವರ್ಣಚಿತ್ರವೊಂದಿದೆ. ಹೊಯ್ಸಳ ಕಾಲದ ವರ್ಣಚಿತ್ರಗಳಲ್ಲಿ ನಮಗೆ ದೊರಕಿರುವುದು ಇದೊಂದೆ.
ವಿಜಯನಗರದ ಕಾಲಕ್ಕೆ ಮುಂಚಿನವೆಂಬ ಒರಟು ಚಿತ್ರಗಳು ಆನೆಗೊಂದಿಯ ಅರಮನೆಯಲ್ಲಿವೆ. ಇವು ಬಂಗಾಳದ ಪಟವರ್ಣಚಿತ್ರಗಳ (ಪಾಟ್ ಪೇಂಟಿಂಗ್) ಮಾದರಿಯಲ್ಲಿವೆ. ವಿಜಯನಗರದ ಕಾಲದಲ್ಲಿ ಹಂಪಿಯ ಪಂಪಾವತಿಯ ದೇವಾಲಯದಲ್ಲಿ ರಂಗಮಂಟಪದ ಭುವನೇಶ್ವರಿಯ ಮೇಲೆ ಕಲ್ಯಾಣಸುಂದರ ಮತ್ತಿತ್ತರ ಚಿತ್ರಗಳಿವೆ. ಇವು ತಂಜಾವೂರು ಶೈಲಿಯವೆನ್ನಬಹುದು. ಸಿತ್ತನ್ನವಾಸಲ್, ಮಾಮಂಡೂರು, ಎಲ್ಲೂರ ಮತ್ತು ತಂಜಾವೂರು ಶೈಲಿಗಳು ಸಮ್ಮಿಳಿತವಾದ ಕಾಲ ಅದು. ಲೇಪಾಕ್ಷಿಯ ಚಿತ್ರಗಳು, ಸೋಮಪಲ್ಲಿಯ ಚೆನ್ನಕೇಶವ ದೇವಾಲಯದ ಚಿತ್ರಗಳು, ತಂಜಾವೂರಿನ ಬೃಹದೀಶ್ವರ ದೇವಾಲಯದ ಚಿತ್ರಗಳು- ಇವೆಲ್ಲವೂ ಈ ಸಮ್ಮಿಳಿತಶೈಲಿಯ ನಿದರ್ಶನಗಳು. ಇಮ್ಮಡಿ ವೆಂಕಟಪತಿ ದೇವರಾಯನ ಕಾಲದಲ್ಲಿ (೧೫೮೬ ರಿಂದ ೧೬೧೪), ಪೋರ್ಚುಗೀಸ್ ಚಿತ್ರಕಾರರು ಹಲವಾರು ಮಂದಿ ಆಸ್ಥಾನದಲ್ಲಿದ್ದರು. ಇವರ ಪ್ರಭಾವ ಕರ್ಣಾಟಕ ಚಿತ್ರಕಾರರ ಮೇಲೆ ಬಿತ್ತು.
ಹಾಸನ ತಾಲ್ಲೂಕಿನ ಜಕ್ಕನಹಳ್ಳಿಯಲ್ಲಿರುವ ಕಾಳೇಶ್ವರ ದೇವಾಲಯದ ನವರಂಗದಲ್ಲಿ ಭುವನೇಶ್ವರಿಯು ವರ್ಣಚಿತ್ರಿತವಾಗಿರುವುದನ್ನು ನೋಡಬಹುದು. ಇದು ಹೊಯ್ಸಳ ನರಸಿಂಹನ ಕಾಲದಲ್ಲಿ (ಸು. ೧೧೭೦) ಕಾಳಿಮಯ್ಯ ಹೆಗ್ಗಡೆಯೆಂಬವನಿಂದ ಕಟ್ಟಿಸಲ್ಪಟ್ಟಿತು. ಅದೇ ಕಾಲದ ಶ್ರವಣಬೆಳಗೊಳದ ಶಾಂತಿನಾಥ ಬಸದಿಯಲ್ಲೂ ವರ್ಣಚಿತ್ರಗಳು ಬರೆಸಲ್ಪಟ್ಟುವು ; ಈಗ ಅದರ ಬಹುಭಾಗ ಅಳಿಸಿಹೋಗಿದೆ. ಎಡೆಯೂರಿನ ತೋಂಟದ ಸಿದ್ದಲಿಂಗೇಶ್ವರ ದೇವಸ್ಥಾನದ ಮಹಾದ್ವಾರದಲ್ಲಿ ಬಹುಶಃ ೧೫ನೆಯ ಶತಮಾನದಲ್ಲಿ ಚಿತ್ರಗಳನ್ನು ಮೂಡಿಸಿದ್ದಾರೆ ; ಅದರ ಮುಖಮಂಟಪದಲ್ಲಿ ಜಂಗಮ ಗುರುವಾದ ಸಿದ್ಧಲಿಂಗನ ಜೀವಿತಕ್ಕೆ ಸಂಬಂಧಪಟ್ಟ ಚಿತ್ರಗಳೂ ಶಿವನ ಪಂಚವಿಂಶತಿ ಲೀಲಾಮೂರ್ತಿಗಳೂ ಚಿತ್ರಿತವಾಗಿವೆ. (ಈಗ ನಾಶವಾಗಿವೆ).
ಹಿರಿಯೂರಿನ ತಿರುಮಲ್ಲೇಶ್ವರ ಗುಡಿಯಲ್ಲಿ (೧೬ನೆಯ ಶತಮಾನ) ಶೈವಪುರಾಣದ ಪ್ರಸಂಗಗಳು ಚಿತ್ರಿತವಾಗಿವೆ. ೧೭ನೆಯ ಶತಮಾನದ ವಸ್ತಾರೆಯ ಪದ್ಮಾವತೀ ಗುಡಿಯಲ್ಲಿ, ೧೮ನೆಯ ಶತಮಾನದ ಮಾಗಡಿ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಹರದನಹಳ್ಳಿಯ ದಿವ್ಯಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ವರ್ಣಚಿತ್ರಿತ ಭುವನೇಶ್ವರಿಗಳಿವೆ.
ತುಮಕೂರು ಜಿಲ್ಲೆಯ ಗುಬ್ಬಿ ಮೈಲಪ್ಪನ ಗುಡಿಯ ಮುಖಮಂಟಪದಲ್ಲಿ ಶಿವನ ಪಂಚವಿಂಶತಿ ಲೀಲಾಮೂರ್ತಿಗಳನ್ನು ಚಿತ್ರಿಸಿದ್ದಾರೆ. ಮಾಗಡಿಯ ಸೋಮೇಶ್ವರ ದೇವಾಲಯದ ಎಡಪಕ್ಕದಲ್ಲಿ ೧೭೧೨ರಲ್ಲಿ ಮೂರನೆಯ ಕೆಂಪವೀರಗೌಡ ನಿರ್ಮಿತವಾದ ಕೆಂಪೇಗೌಡನ ಹಜಾರದ ಗೋಡೆಗಳ ಮತ್ತು ಭುವನೇಶ್ವರಿಯ ಮೇಲೂ ವರ್ಣಚಿತ್ರಗಳಿದ್ದ ಗುರುತಿವೆ. ಬೆಳಕವಾಡಿಯ ಮಂಠೇಸ್ವಾಮಿ ಮಠದ ಹಜಾರದ ಮರದ ಕಂಬದ ಮೇಲೆ ರಾಮಾಯಣದ ಮತ್ತು ಶಿವ ಪುರಾಣ ಪ್ರಸಂಗಗಳನ್ನು ಚಿತ್ರಿಸಲಾಗಿದ್ದು ಈಗ ಸುಣ್ಣ ಬಳಿಯಲಾಗಿದೆ. ವಿಜಯನಗರ ಕಾಲದ ಲೇಪಾಕ್ಷಿಯ ಪಾಪನಾಶೇಶ್ವರ ದೇವಸ್ಥಾನದಲ್ಲಿ ಸಾವಿರಾರು ಸೊಗಸಾದ ವರ್ಣಚಿತ್ರಗಳಿವೆ; ಇವನ್ನು ಮೂಡಿಸಿದ ವಿರೂಪಣ್ಣ ಕನ್ನಡನಾಡಿನವ; ಚಿತ್ರಕಾರರೂ ಕನ್ನಡದವರು.
ಮೈಸೂರಿನಲ್ಲಿ ವರ್ಣಚಿತ್ರಕಲೆಗೆ ಬಹುವಾಗಿ ಪ್ರೋತ್ಸಾಹವಿತ್ತವರೆಂದರೆ ಹೈದರ್ ಅಲಿ, ಟಿಪ್ಪು ಸುಲ್ತಾನ್ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರು. ೧೮ನೆಯ ಶತಮಾನದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಾಸಸ್ಥಾನವಾಗಿದ್ದ ಶ್ರೀರಂಗಪಟ್ಟಣದ ದರಿಯಾದೌಲತ್ ಅರಮನೆಯ ಹೊರಗೋಡೆಗಳ ಮೇಲೆ ಮುಸಲ್ಮಾನ ಮಾದರಿಯ ನೂರಾರು ವರ್ಣ ಚಿತ್ರಗಳಿವೆ. ಅಲ್ಲಲ್ಲಿ ನಡೆದ ಯುದ್ಧದ ದೃಶ್ಯಗಳು, ದಳವಾಯಿಗಳ ಚಿತ್ರಗಳು, ಮದಕರಿ ನಾಯಕ, ಚಿತ್ತೂರಿನ ರಾಣಿ ಮತ್ತು ಸವಣೂರಿನ, ಆರ್ಕಾಟಿನ ನವಾಬರು ಮುಂತಾದವರ ವ್ಯಕ್ತಿ ಚಿತ್ರಗಳೂ ಇಲ್ಲಿವೆ. ಬೆಂಗಳೂರಿನ ಟಿಪ್ಪು ಸುಲ್ತಾನನ ಅರಮನೆಯಲ್ಲೂ ೧೭೯೧ರ ಕಾಲಕ್ಕೆ ಸೇರಿದ ವರ್ಣಚಿತ್ರಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರು ಸ್ವತಃ ರಸಿಕರು, ಕಲಾಭಿಮಾನಿಗಳು. ಅವರ ಆಪ್ತವರ್ಗದಲ್ಲೇ ಹಲವಾರು ಚಿತ್ರಗಾರರಿದ್ದರು. ಅವರಲ್ಲಿ ಕೆ.ವೆಂಕಟಪ್ಪನವರ ತಾತಂದಿರೂ ಒಬ್ಬರಾಗಿದ್ದರು. ತಮ್ಮ ತಂದೆ ಖಾಸಾ ಚಾಮರಾಜ ಒಡೆಯರ ಸ್ಮಾರಕವಾಗಿ ಅರಸರು ಚಾಮರಾಜನಗರದಲ್ಲಿ ೧೮೧೦ರ ಸುಮಾರಿಗೆ ಚಾಮರಾಜೇಶ್ವರ ದೇವಸ್ಥಾನವನ್ನು ಕಟ್ಟಿಸಿದರು. ಇದರ ಜನ್ಮಮಂಟಪದಲ್ಲಿ ಅನೇಕ ಭಿತ್ತಿಚಿತ್ರಗಳಿವೆ. ತಲಕಾಡಿನ ಬಳಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಚಿತ್ರಮಂಟಪವೆಂದೇ ಪ್ರತ್ಯೇಕ ಸ್ಥಳವಿದೆ. ಇಲ್ಲಿನ ಗೋಡೆಗಳ ತುಂಬ ಶೈವ ಪುರಾಣದ ಚಿತ್ರಗಳಿವೆ. ಮೈಸೂರಿನ ಪ್ರಸನ್ನ ವೆಂಕಟರಮಣಸ್ವಾಮಿ ಗುಡಿಯಲ್ಲಿಯೂ ಒಂದು ಚಿತ್ರಮಂಟಪವಿದೆ. ಇಲ್ಲಿ ಪೌರಾಣಿಕ ಚಿತ್ರಗಳು ಮಾತ್ರವಲ್ಲದೆ ಪ್ರಕೃತಿಚಿತ್ರಗಳೂ ವ್ಯಕ್ತಿಚಿತ್ರಗಳೂ ಇವೆ. ವ್ಯಾಸ, ಮಧ್ವಾಚಾರ್ಯರು, ಪೂರ್ಣಯ್ಯ, ಸುಬ್ಬರಾಯದಾಸರು, ಸೀನಪ್ಪ, ಮುಮ್ಮಡಿ ಕೃಷ್ಣರಾಜ ಒಡೆಯರು ಮುಂತಾದವರ ವ್ಯಕ್ತಿಚಿತ್ರಗಳು ತುಂಬ ಚೆನ್ನಾಗಿವೆ. ೧೯ನೆಯ ಶತಮಾನದ ಶ್ರವಣಬೆಳಗೊಳದ ಜೈನಮಠಗಳಲ್ಲಿ ಪಂಚಪರಮೇಷ್ಠಿಗಳ, ಜಿನರ, ಜೈನರಾಜರ ಚಿತ್ರಗಳು ಅನೇಕ ಇವೆ. ಇವುಗಳಲ್ಲಿ ಮುಮ್ಮಡಿ ಕೃಷ್ಣರಾಜರ ಒಡೆಯರು ದಸರಾ ದರ್ಬಾರಿನ ಚಿತ್ರವೂ ಒಂದು ಸೇರಿದೆ. ಪಾಶರ್ವ್‌ನಾಥನ ಸಮವಸರಣದ ದೃಶ್ಯ ಸೊಗಸಾಗಿದೆ. ಲೇಶ್ಯದ ಚಿತ್ರಣ ಸ್ವಾರಸ್ಯವಾಗಿದೆ.
೧೮೬೧ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರಿನಲ್ಲಿ ಜಗನ್ಮೋಹನ ಅರಮನೆಯನ್ನು ಕಟ್ಟಿಸಲು ಆರಂಭಿಸಿದರು. ಕಾಲಕ್ರಮೇಣ ಇದು ಸಂಸ್ಥಾನದ ಅತ್ಯುತ್ತಮ ಚಿತ್ರಶಾಲೆಯಾಗಿ ಪರಿಣಮಿಸಿತು. ಇದರಲ್ಲಿ ೧೯ನೆಯ ಶತಮಾನಕ್ಕೆ ಸೇರಿದ ಅನೇಕ ಕಲಾಕೃತಿಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರ ಸಚಿತ್ರ ವಂಶವೃಕ್ಷ, ಮೈಸೂರು ಆಳರಸರ ವಂಶಾವಳಿಯನ್ನು ಚಿತ್ರಿಸುವ ಸಂತಾನಾಂಬುಜ, ವಿಜಯ ದಶಮಿಯಂದು ನಡೆದ ಮುಮ್ಮಡಿ ಕೃಷ್ಣರಾಜ ಒಡೆಯರ ಜಂಬೂಸವಾರಿ (ಇದರಲ್ಲಿ ರಾಜರು ಆರು ಆನೆಗಳನ್ನು ಕಟ್ಟಿದ ರಥದಲ್ಲಿ ಕುಳಿತಿದ್ದಾರೆ), ಇವುಗಳಲ್ಲದೆ ಕಿತ್ತೂರು, ಗೊತ್ತಗಾಲ, ಚಟ್ಟನಹಳ್ಳಿಗಳಲ್ಲಿ ನಡೆದ ಹುಲಿಶಿಕಾರಿ, ಚಾಮರಾಜನಗರದ ಕಾಡಿನಲ್ಲಿ ಪಟ್ಟದಾನೆಯಾದ ಕೆಂಪನಂಜಯ್ಯನನ್ನು ಹಿಡಿದ ದೃಶ್ಯ, ಕೃಷ್ಣರಾಜ ಒಡೆಯರು ಚದುರಂಗದಾಟವನ್ನು ಆಡುತ್ತಿರುವ ದೃಶ್ಯಗಳು, ವಸಂತೋತ್ಸವದ ದೃಶ್ಯ, ದೇವೀಸಾಯುಜ್ಯ, ಶ್ರೀಕಂಠಸಾಯುಜ್ಯ ಎಂಬ ಆಟಗಳು ಸೊಗಸಾದ ಬಣ್ಣಗಳಲ್ಲಿ ಚಿತ್ರಿತವಾಗಿವೆ. ಅಲ್ಲದೆ, ರಣಜಿತ್ಸಿಂಗ್, ಕೊಡಗಿನ ವೀರರಾಜೇ ಅರಸು, ಪೇಷ್ವೆಗಳು, ನಾನಾ ಫಡ್ನವೀಸ್, ಕೇರಳ ಮತ್ತು ತಿರುವಾಂಕೂರಿನ ರಾಜರು, ಅರಮನೆ ಅಧಿಕಾರಿಗಳು, ಪರಕಾಲಮಠದ ಸ್ವಾಮಿಗಳು, ಮಹಾರಾಜರ ಬಂಧುಗಳು ಹೀಗೆ ನೂರಾರು ವ್ಯಕ್ತಿಚಿತ್ರಗಳಿವೆ. ನಾಲ್ವಡಿ ಕೃಷ್ಣರಾಜ ಒಡೆಯರೂ ಚಿತ್ರಕಲೆಯ ಪಕ್ಷಪಾತಿಗಳು. ಅವರ ಆಸ್ಥಾನದಲ್ಲಿ ಕೆ.ವೆಂಕಟಪ್ಪ, ಕೇಶವಯ್ಯ ಮುಂತಾದ ನಿಪುಣ ಕಲೆಗಾರರಿದ್ದರು. ಈಚೆಗೆ ನಾಡಿನ ಲಲಿತಕಲಾ ಅಕೆಡಮಿಯವರಿಂದ ಪುರಸ್ಕೃತರಾದ ಕೆ.ವೆಂಕಟಪ್ಪ ಅವರು ಕಲ್ಕತ್ತೆಯ ಕಲಾಶಾಲೆಯಲ್ಲಿ ಪರ್ಸಿಬ್ರೌನ್ ಮತ್ತು ಅವನೀಂದ್ರನಾಥ ಠಾಕೂರರ ಬಳಿ ಏಳು ವರ್ಷಗಳು ಅಭ್ಯಾಸ ಮಾಡಿದ ನಂತರ ಆಸ್ಥಾನ ಕಲಾವಿದರಾಗಿದ್ದು ಕೊಂಡು ನೂರಾರು ಅತ್ಯುತ್ತಮ ವರ್ಣಚಿತ್ರಗಳನ್ನು ಬಿಡಿಸಿದ್ದಾರೆ. ಇವುಗಳಲ್ಲಿ ನೀಲಗಿರಿಯ ದೃಶ್ಯಗಳು ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಸೇರಿವೆಯೆಂದು ತಜ್ಞರ ಮತ. ಇವರು ದಂತದ ಮೇಲೆ ತಮ್ಮ ಗುರು ಅವನೀಂದ್ರನಾಥರ ಮತ್ತು ತಮ್ಮ ಆಶ್ರಯದಾತ ಕೃಷ್ಣರಾಜ ಒಡೆಯರ ಪ್ರತಿ ಕೃತಿಗಳನ್ನು ನೈಜವಾದ ವರ್ಣಗಳಲ್ಲಿ ಚಿತ್ರಿಸಿದ್ದಾರೆ. ಮೊಗಲರ ಕಾಲಕ್ಕೇ ಅಸ್ತಂಗತವಾಗಿದ್ದ ಈ ಕ್ಲಿಷ್ಟ ಕಲೆಯನ್ನು ವೆಂಕಟಪ್ಪನವರು ಪುನರುಜ್ಜೀವನ ಗೊಳಿಸಿದ್ದಾರೆ. ಇವರು ವರ್ಣಚಿತ್ರಕಾರರಲ್ಲದೆ ಉತ್ತಮ ಶಿಲ್ಪಿಯೂ, ನಿಪುಣ ವೈಣಿಕರೂ ಆಗಿದ್ದರು.
ಈಚಿನವರಲ್ಲಿ ವೆಂಕಟಪ್ಪನವರಲ್ಲದೆ ಮೈಸೂರು ವೀರಪ್ಪ ಮತ್ತು ಸುಬ್ಬುಕೃಷ್ಣ, ಬೆಳಗಾಂವಿಯ ಕೆ.ಎಸ್.ಕುಲಕರ್ಣಿ, ಗೋವದ ಲಕ್ಷ್ಮಣ ಪೈ, ದಕ್ಷಿಣ ಕನ್ನಡ ಜಿಲ್ಲೆಯ ಕೆ.ಕೆ.ಹೆಬ್ಬಾರ್, ಹುಬ್ಬಳ್ಳಿಯ ಆರ್.ಎಸ್.ಮಿಣಜಿಗಿ, ಕಮಡೋಳಿ ಮುಂತಾದ ಚಿತ್ರಕಾರರು ಕರ್ಣಾಟಕಕ್ಕೆ ಹೆಮ್ಮೆಯನ್ನು ತಂದಿದ್ದಾರೆ.
ಕರ್ನಾಟಕ ಶೈಲಿಯ ಚಿತ್ರಕಲೆಯ ಉಗಮ ಅಜಂತ ಗುಹಾಂತ ರ್ದೇವಾಲಯಗಳಲ್ಲಿ ಎಂಬುದು ನಿರ್ವಿವಾದ. ಪ್ರ.ಶ.ಪೂ. ೧ನೆಯ ಶತಮಾನದಲ್ಲಿ ಅಜಂತದ ಗುಹೆಗಳಲ್ಲಿ ಬೋಧಿಸತ್ವಯಾನಕ್ಕೆ ಸೇರಿದ ಬೌದ್ಧಬಿಕ್ಷುಗಳು ವಾಸಿಸುತ್ತಿದ್ದು, ತಮ್ಮ ಯೋಗಾಭ್ಯಾಸ ಧ್ಯಾನಕ್ರಿಯೆಗಳಿಗೆ ಸಹಕಾರಿಯಾಗಿ ಭಿತ್ತಿಚಿತ್ರಗಳನ್ನು ಮೂಡಿಸಿದರು. ಈ ಭಿತ್ತಿಚಿತ್ರಗಳಲ್ಲಿ ಸಾಂಕೇತಿಕ ಅರ್ಥವೇ ಹೆಚ್ಚು. ಆ ವೇಳೆಗಾಗಲೇ ಅಭಿಜಾತ ಚಿತ್ರಶೈಲಿ ಬಳಕೆಯಲ್ಲಿದ್ದು ಪ್ರೌಢದೆಶೆಯನ್ನು ಮುಟ್ಟಿದಂತೆ ತಿಳಿದುಬರುತ್ತದೆ. ವರ್ಣಗಳ ನಿರ್ಮಾಣ, ಮೆರುಗು ಕೊಡುವ ಪದ್ಧತಿ, ಸ್ಥೂಲರೇಖೆಗಳನ್ನು ರೂಪಿಸಿ ಒಳಭಾಗಗಳನ್ನು ಸ್ಪಷ್ಟವಾಗಿ ವಿವಿಕ್ತವಾಗಿ ಬಣ್ಣಗಳಿಂದ ತುಂಬಿಸುವ ಸಂವಿಧಾನ - ಇವು ಇಲ್ಲಿ ಕಾಣುತ್ತವೆ. ರೇಖಾಚಿತ್ರದ ಹಿರಿಮೆಯನ್ನೂ ಲತಾವಿನ್ಯಾಸದ ಭಂಗಿಗಳನ್ನೂ ಆ ಭಿಕ್ಷುಕಲಾವಿದರು ಚೆನ್ನಾಗಿ ಅರಿತಿದ್ದರು. ಇವು ಕನ್ನಡ ಕಲಾವಿದರ ಕೈಚಳಕವೆಂಬುದನ್ನು ಸೂಚಿಸಲು ಅಜಂತ ೧ನೆಯ ಗುಹೆಯಲ್ಲಿ ಗೋಡೆಯ ಮೇಲೆ ಬಿಡಿಸಿರುವ ೨ನೆಯ ಪುಲಕೇಶಿಯ ಒಡ್ಡೋಲಗದ ಚಿತ್ರಣ ನೆರವಾಗುತ್ತದೆ. ಬಾದಾಮಿಯಲ್ಲಿ ಕಾಣುವ ಚಿತ್ರಶೈಲಿಗೂ ಈ ಚಿತ್ರಶೈಲಿಗೂ ತುಂಬ ಸಾಮ್ಯವಿದೆ. ಎರಡೂ ಕಡೆಯ ಕಲಾವಿದರು ಒಂದೇ ಸಂಪ್ರದಾಯಕ್ಕೆ ಸೇರಿದವರು. ಇದು ಹೇಗೇ ಇರಲಿ, ಕರ್ನಾಟಕದ ರಾಜಪರಂಪರೆಗಳಲ್ಲಿ ಪ್ರಮುಖವಾದ ಚಾಳುಕ್ಯ ಅರಸರ ಉಲ್ಲೇಖವಂತೂ ನಿರ್ವಿವಾದವಾದ ನಿದರ್ಶನ. ಚಾಳುಕ್ಯ ಚಕ್ರೇಶ್ವರನೆಂದು ಪ್ರಖ್ಯಾತನಾದ ಇಮ್ಮಡಿ ಪುಲಿಕೇಶಿಯ ಬಳಿ ಪರ್ಷಿಯ ದೇಶದ ರಾಯಭಾರಿಗಳು ಬಂದು ಉಡುಗೊರೆಗಳನ್ನು ಅರ್ಪಿಸುತ್ತಿದ್ದ ಹಾಗೆ ಈ ಚಿತ್ರ ತೋರಿಸುತ್ತದೆ. ಆ ಕಾಲಕ್ಕೆ ಈ ಪ್ರದೇಶ ಚಾಳುಕ್ಯರ ಅಧೀನದಲ್ಲಿತ್ತು. ರಾಷ್ಟ್ರಕೂಟ ಕೃಷ್ಣರಾಜ ಈ ಗುಹೆಯ ನಿರ್ಮಾತೃವೆಂದು ಹೇಳುವವರೂ ಇದ್ದಾರೆ. ಅಜಂತ ದೇವಾಲಯಗಳ ಭಿತ್ತಿಗಳ ಮೇಲೆ ಮಹಾಯಾನ ಬೌದ್ಧಪಂಥಕ್ಕೆ ಸೇರಿದ ದೇವದೇವತೆಗಳ ಚಿತ್ರಣ ಬಹುವಾಗಿ ಮೂಡಿಬಂದಿವೆ. ಇವುಗಳಲ್ಲಿ ಪದ್ಮಪಾಣಿ ಅವಲೋಕಿತೇಶ್ವರ ಬೋಧಿಸತ್ತ್ವನ ಚಿತ್ರಣ ತುಂಬ ಪ್ರಸಿದ್ಧವಾಗಿದೆ. ಈ ಸಂಪ್ರದಾಯವನ್ನು ಒಳಗೊಂಡ ಪದ್ಧತಿ ಮುಂದೆ ದಕ್ಷಿಣದೇಶ, ಅದರಲ್ಲೂ ಕರ್ನಾಟಕದಲ್ಲಿ, ವಿಶೇಷವಾಗಿ ಪ್ರಚಲಿತವಾಯಿತು. ಬಾದಾಮಿಯ ಭಿತ್ತಿಚಿತ್ರಗಳು ಈ ಪದ್ಧತಿಗೆ ಸೇರಿದುವು. ಈ ಪದ್ಧತಿಯಲ್ಲಿ ಪ್ರಕೃತಿಚಿತ್ರಣಕ್ಕೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ೭ನೆಯ ಶತಮಾನದವರೆಗೂ ಬೆಳೆದುಬಂದ ಈ ಸಂಪ್ರದಾಯ ಕಾರಣಾಂತರದಿಂದ ಮರೆಯಾದ ಅನಂತರ ಚಿತ್ರಕಲೆ ೧೬, ೧೭ನೆಯ ಶತಮಾನಗಳವರೆಗೆ ಏಳಿಗೆಗೆ ಬರಲಿಲ್ಲ. ವಿಜಯನಗರಕಾಲದಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿಯೂ ಆನೆಗೊಂದಿಯಲ್ಲಿರುವ ಉಚ್ಚಪ್ಪ ಮಠದಲ್ಲಿಯೂ ಕಂಚಿಯ ವರದರಾಜಸ್ವಾಮಿ ದೇವಾಲಯದಲ್ಲಿಯೂ ಲೇಪಾಕ್ಷಿಯ ವೀರಭದ್ರಸ್ವಾಮಿ ಗುಡಿಯಲ್ಲಿಯೂ ಕಂಡುಬರುವ ಚಿತ್ರಗಳು ವಿಜಯನಗರದ ಕಾಲದಲ್ಲಿ ಕನ್ನಡಿಗ ಕಲೆಗಾರರು ಬಿಡಿಸಿದ ಚಿತ್ರಗಳು. ಈ ಸಂಪ್ರದಾಯಕ್ಕೆ ಸೇರಿದ ಚಿತ್ರಗಳೆಂದರೆ ತಂಜಾವೂರಿನಲ್ಲಿ ನಾಯಕರ ಆಳ್ವಿಕೆಯಲ್ಲಿ ಬೃಹದೀಶ್ವರ ದೇವಾಲಯದಲ್ಲಿ ಮೂಡಿಸಿರುವ ಚಿತ್ರಗಳು.
೧೭ನೆಯ ಶತಮಾನದ ಅಂತ್ಯಭಾಗದಿಂದ ಕರ್ನಾಟಕದಲ್ಲಿ ಚಿತ್ರಕಲೆಯ ಅವನತಿ ಮೊದಲಾಯಿತು. ಕನ್ನಡನಾಡಿನ ಪುಣ್ಯವಿಶೇಷದಿಂದ ಭಾರತದಲ್ಲಿ ಚಿತ್ರಕಲೆಯ ಪನರುಜ್ಜೀವನಕಾರ್ಯಕ್ಕೆ ಕನ್ನಡ ಕಲಾವಿದರು ಅಜಂತ ಗುಹೆಗಳಲ್ಲಿ ಬಿಡಿಸಿದ ಕಲಾಕೃತಿಗಳೇ ಸ್ಫೂರ್ತಿಯನ್ನಿತ್ತುವು. ೧೯೦೬ರಲ್ಲಿ ಲೇಡಿ ಹೆರ್ರಿಂಗ್ಹ್ಯಾಂ ಎಂಬಾಕೆ ಭಾರತಕ್ಕೆ ಬಂದು ಅವನೀಂದ್ರನಾಥ ಠಾಕೂರರ ಆದೇಶದಂತೆ ಅಜಂತ ಭಿತ್ತಿಚಿತ್ರಗಳ ರೇಖಾಪ್ರತಿಕೃತಿಗಳನ್ನು ಮಾಡುತ್ತಿದ್ದಾಗ ಈ ಕೆಲಸದಲ್ಲಿ ನೆರವಾದ ಕಲಾವಿದರಲ್ಲಿ ಕೆ. ವೆಂಕಟಪ್ಪನವರು ಪ್ರಮುಖರು. ಅವನೀಂದ್ರ ಠಾಕೂರರಿಂದ ಆರಂಭವಾದ ನವ್ಯಸಂಪ್ರದಾಯದಲ್ಲಿ ಪ್ರಾಚೀನಸತ್ತ್ವ ತುಂಬಲು ಈ ಪ್ರತಿಕೃತಿಗಳು ನೆರವಾದುವು. ಹಳೆಯ ಕನ್ನಡಶೈಲಿಗೆ ಹೊಸ ಸಂವಿಧಾನದ ಉಡುಗೆಯನ್ನು ತೊಡಿಸಿ ಕಲಾರಾಧನೆ ಮಾಡಿದವರು ವೆಂಕಟಪ್ಪನವರು. ಆಧುನಿಕ ಚಿತ್ರ ಕಲಾವಿದರಲ್ಲಿ ಇವರು ಪ್ರಮುಖರು, ವಿಶ್ವವಿಖ್ಯಾತರು. ಬಂಗಾಲೀ ಪದ್ಧತಿಯ ಸ್ಫೂರ್ತಿ ಪಡೆದು ಕರ್ಣಾಟಕದಲ್ಲಿ ಚಿತ್ರಕಲೆ ಈ ಕಾಲದಲ್ಲಿ ಮತ್ತೆ ತಲೆಯೆತ್ತಿತ್ತು.
ಈ ಸಂಪ್ರದಾಯವಲ್ಲದೆ ಪಾಶ್ಚಾತ್ಯ ದೇಶಗಳ ಪ್ರಗತಿಯ ಪ್ರಕಾರಗಳನ್ನು ಅಧ್ಯಯನ ಮಾಡಿ ಬೊಂಬಾಯಿಯ ಜೆ.ಜೆ. ಸ್ಕೂಲ್ ಆಫ್ ಆಟ್ರ್ಸ್‌, ಬೆಂಗಳೂರಿನ ಕೆನ್ಸ್ಕೂಲ್ ಮುಂತಾದೆಡೆ ತಾಂತ್ರಿಕ ಶಿಕ್ಷಣ ಪಡೆದ ಕಲೆಗಾರರು ಸ್ವತಂತ್ರ ಮನೋವೃತ್ತಿಯಿಂದ ಕಲಾಸೇವೆ ಮಾಡುತ್ತಿದ್ದಾರೆ. ಇವರಲ್ಲಿ ಹಲವರು ನಾಡಿನ ಗೌರವ ಪಡೆದಿದ್ದಾರೆ. ಈ ಬಗ್ಗೆ ಕೆಲವಾರು ವರ್ಷಗಳಿಂದ ಬೆಂಗಳೂರಿನಲ್ಲಿರುವ ಚಿತ್ರಕಲಾವಿದರು ಚಿತ್ರಕಲಾಪರಿಷತ್ ಎಂಬ ಸಂಸ್ಥೆಯನ್ನು ರೂಪಿಸಿಕೊಂಡು ಆ ಸಂಸ್ಥೆಯ ವತಿಯಿಂದ ಕಲಾಶಾಲೆಯೊಂದನ್ನು ನಡೆಸುತ್ತಿದ್ದಾರೆ. ಕರ್ನಾಟಕದ ಕಲೆಗಾರರ ಆಶೋತ್ತರಗಳನ್ನು ಈಡೇರಿಸಿ ಅವರ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲು ಈ ಸಂಸ್ಥೆ ಶ್ರಮಿಸುತ್ತಿದೆ.

ಕರುಳುವಾಳುರಿತ(ಅಪೆಂಡಿಕ್ಸ್‌)


ಕರುಳುವಾಳುರಿತ(ಅಪೆಂಡಿಕ್ಸ್‌)


ಕರುಳುವಾಳುರಿತ (ಅಪೆಂಡಿಕ್ಸ್‌): ಸಣ್ಣ ಕರುಳೂ ದೊಡ್ಡಕರುಳೂ ಕೂಡುವೆಡೆ ಮೋಟು ಬಾಲದಂತಿರುವ ಕರುಳುವಾಳದಲ್ಲಿ (ಅಪೆಂಡಿಕ್ಸ್‌) ಆಗುವ ಉರಿತ (ಅಪೆಂಡಿಸೈಟಿಸ್). ಇದರೊಂದಿಗೆ ಒಳಗಡೆ ತಡೆಯಾಗಿರಲೂಬಹುದು ಇಲ್ಲದಿರಲೂಬಹುದು. ಪ್ರಾಚೀನ ಈಜಿಪ್ಷಿಯನರಲ್ಲಿ ಮಮ್ಮಿಗಳಾಗಿ ಹೆಣಗಳನ್ನು ಶತಮಾನಗಳ ಕಾಲ ಕೆಡದಂತಿರಿಸುವವರಿಗೆ ಕರುಳುವಾಳ ಗೊತ್ತಿತ್ತು. ಲಿಯೋನಾರ್ಡೊ ಡ ವಿಂಚಿ ಇದನ್ನು ಚಿತ್ರಿಸಿ ವಿವರಿಸಿದ್ದ. ಕರುಳುವಾಳುರಿತವನ್ನು ಸತ್ತ ರೋಗಿಯಲ್ಲಿ ಹೀಸ್ಟರ್ ಮೊಟ್ಟಮೊದಲು ಕಂಡು ಗುರುತಿಸಿ ವರದಿ ಮಾಡಿದವ (1755). ಇದಕ್ಕೆ ಮೊದಲು ಚಿಕಿತ್ಸೆ ಮಾಡಿದ ಕ್ಲಾಡಿಯಸ್ (1735). ಕರುಳುವಾಳುರಿತದ ಗುಣಲಕ್ಷಣಗಳು 19ನೆಯ ಶತಮಾನದ ಕೊನೆಯೆರಡು ದಶಕಗಳ ತನಕ ಸರಿಯಾಗಿ ತಿಳಿದಿರಲಿಲ್ಲ. ಬೇರೆ ರೋಗಗಳೊಂದಿಗೆ ಹೋಲಿಸಿದರೆ ಇದನ್ನು ಒಂದು ಸಾಮಾನ್ಯ ರೋಗ ಎನ್ನಬಹುದು. ಇಂಗ್ಲೆಂಡಿನಲ್ಲಿ 200 ಮಂದಿಗೊಬ್ಬರು ಈ ರೋಗಕ್ಕೆ ಬಲಿಯಾಗುವರು. ಹೆಂಗಸರಿಗಿಂತ ಗಂಡಸರಲ್ಲೇ ಹೆಚ್ಚು. ಪ್ರೋಟೀನುಗಳೇ ಬಹುವಾಗಿದ್ದು ರಕ್ತಗತವಾಗದೆ, ಅರಗದೆ ಉಳಿದ ಪದಾರ್ಥಗಳು ಆಹಾರದಲ್ಲಿ ಹೆಚ್ಚಿದ್ದರೆ ಕರುಳುವಾಳುರಿತ ಆಗುವುದೆಂದೂ ಆಹಾರದಲ್ಲಿ ನಾರಿನಂಥ ಮರದೆಳೆ (ಸೆಲ್ಯುಲೋಸ್) ಹೆಚ್ಚಿಗಿದ್ದರೆ ಈ ರೋಗ ಬಾರದೆಂದೂ ಅಭಿಪ್ರಾಯವಿದೆ. ಯಾವ ವಯಸ್ಸಿನವರಿಗಾದರೂ ಇದು ಬರುವುದಾದರೂ 2 ವರ್ಷಗಳ ಕೆಳಗೂ 40 ಮೀರಿದವರಲ್ಲೂ ಬರುವುದು ಕಡಿಮೆ. ಕರುಳುವಾಳದಲ್ಲಿ ಹಾಲು ರಸ (ಲಿಂಫ್) ಊತಕಗಳು ತುಂಬ ಇರುವುದರಿಂದ ಮೆಂಡಿಕೆಯಂತೆ (ಟಾನ್ಸಿಲ್) ಇದಕ್ಕೂ ಆಗಾಗ್ಗೆ ಸೋಂಕು ಹತ್ತಿ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ಇದೊಂದು ಸಣ್ಣ ಕೊಳವೆಯಂತೆ ಇರುವುದರಿಂದ ಹಾಲು ರಸ ಊತಕ ಊದಿಕೊಂಡರೆ, ಹೆರ ವಸ್ತುಗಳೋ ಹುಳು, ಕ್ರಿಮಿಗಳೋ ಒಳಸೇರಿ ಸಿಕ್ಕಿಕೊಂಡರೆ ಕರುಳುವಾಳಕ್ಕೆ ಬಿರಟೆ ಹಾಕಿ ಮುಚ್ಚಿ ತಡೆದಂತಾಗುವುದು. ಇಲ್ಲಿನ ಸೊಂಕುಗಳಿಗೆ ಮುಖ್ಯ ಕಾರಕಗಳು ಕರುಳು ಕಾಯ್ಜೀವಿಗಳು (ಎಂಟ ರೋಕಾಕೈ), ಸರಕಾಯ್ಜೀವಿಗಳು (ಸ್ಟ್ರೆಪ್ಟೊಕಾಕೈ). ಕರುಳುವಾಳುರಿತದಲ್ಲಿ ಒಳಗಿನ ಲೋಳೆಪೊರೆ ಬಿರಿದು ಸೋಂಕುಹತ್ತಿರುವುದು. ಇದರಿಂದೇಳುವ ಹೊಟ್ಟೆನೋವಿನ ಜೋರು, ಒಳಗಡೆ ಕರುಳುವಾಳಕ್ಕೆ ತಡೆ ಆಗಿರುವುದೋ ಇಲ್ಲವೋ ಎನ್ನುವಂತಿರುವುದು. ತಡೆ ಆಗಿಲ್ಲವಾದರೆ, ಒಳಗಿನ ಉರಿತ ತಾನಾಗಿ ಶಮನವಾಗಿ ಇಳಿದುಹೋಗಬಹುದು. ಆದರೆ ಉರಿತ ಕೇವಲ ಲೋಳೆ ಪೊರೆಯಲ್ಲೇ ಉಳಿಯದೆ ಉಳಿದ ಪದರಗಳಿಗೂ ಹರಡಬಹುದು. ಆಗ ಇಡೀ ಕರುಳುವಾಳ ದಪ್ಪಗೆ ಕೆಂಪಗೆ ಊದಿ ರಕ್ತಗಟ್ಟಬಹುದು. ಕೊನೆಗೆ ಒಂದೆಡೆ ಕೊಳೆತು ಮೆತುವಾಗಿಬಿಟ್ಟು ತೂತುಬಿದ್ದರೆ ತೀರ ಅಪಾಯಕರ. ಕೆಲವೇಳೆ ಒಂದೆಡೆ ಹುಣ್ಣಾಗಿ ವಾಸಿಯಾಗುವಾಗ ಕಲೆಗಟ್ಟಿ ಮುದುರಿಕೊಳ್ಳುವುದ್ದರಿಂದ ಕರುಳುವಾಳದಬಾಯಿ ಮುಚ್ಚಿದಂತೆ ಕಿವುಚಿಕೊಂಡು ತಡೆಯಾಗಬಹುದು.
ಕರುಳುವಾಳದಲ್ಲಿ ತಡೆಯಾದರೆ, ಉರಿತ ಇನ್ನಷ್ಟು ಹೆಚ್ಚಿಕೊಂಡು ಬೇಗನೆ ಮೆತ್ತಗಾಗಿ ಕೊಳೆತು ತೂತಿಟ್ಟುಕೊಂಡು ಒಡೆಯುತ್ತದೆ. ಕೇವಲ 12-18 ತಾಸುಗಳೊಳಗಾಗಿ ಹೀಗಾಗಿಬಿಡಬಹುದು. ಇದರಿಂದ ಹೊಟ್ಟೆಯಲ್ಲಿ ಹೊದ್ದಿಸಿದಂತಿರುವ ಹೊರಬಿಗಿ ಪೊರೆಗೆ (ಪೆರಿಟೋನಿಯಂ) ತಾಕಿ ಇಡೀ ಒಡಲಲ್ಲೆಲ್ಲ ಹರಡಿಬಿಡಬಹುದು. ಹೊರಬಿಗಿ ಪೊರೆ ಇಲ್ಲಿ ಅಂಟಿಕೊಂಡಿದ್ದರೆ ಸೋಂಕು ಒಂದೆಡೆಯಲ್ಲಿ ಉಳಿವ ಅನುಕೂಲವಿದೆ.
ಕರುಳುವಾಳುರಿತ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ಆದರೂ ಬೆಳೆಗಿನ ಹೊತ್ತಿನಲ್ಲಿ ತಲೆದೋರುವುದೇ ಹೆಚ್ಚು. ಮೊದಲು ಇಡೀ ಒಡಲೆಲ್ಲ ನೋವು ತೋರುತ್ತಿದ್ದು ಕೊನೆಗೆ ಹೊಕ್ಕುಳಿನ ಸುತ್ತ ಉಳಿವುದು. ಮೊದಲೇ ವಾಂತಿಯಾಗಬಹುದು. ಸಾಮಾನ್ಯವಾಗಿ ಇದರಿಂದೇಳುವ ಹೊಟ್ಟೆನೋವು ಬಲಗಡೆಯ ಕೆಳಹೊಟ್ಟೆಯಲ್ಲಿ ಕರುಳುವಾಳ ಇರುವ ಜಾಗದಲ್ಲಿ ನೆಲೆಸಿರುತ್ತದೆ. ಮೊದಲ 6 ತಾಸುಗಳಲ್ಲಿ ಜ್ವರವಾಗಲಿ, ನಾಡಿ ಏರುವುದಾಗಲಿ ಇರದು. ಬರು ಬರುತ್ತ ನಿಧಾನವಾಗಿ ಜ್ವರ 101o ಫ್ಯಾ. ಮಟ್ಟಕ್ಕೇರಬಹುದು. ಕರುಳುವಾಳ ಇರುವೆಡೆ ಹೊಟ್ಟೆ ಗಡುಸಾಗಿ ಬಿಗಿತುಕೊಂಡಿದ್ದು ಮುಟ್ಟಿದರೆ ನೋಯುತ್ತದೆ. ಎಡಗಡೆಯ ಕೆಳಹೊಟ್ಟೆಯನ್ನು ಒತ್ತಿದರೆ ಬಲಗಡೆ ಅಲ್ಲಿ ನೋವೇಳುತ್ತದೆ. ಕರುಳುವಾಳದ ತಡೆಯಾಗದೆ ಉರಿತವಾಗಿದ್ದರೆ ಬಿಳಿ ರಕ್ತಕಣಗಳು ಹೆಚ್ಚಿರುವುದು ರಕ್ತಕಣಗಳ ಎಣಿಕೆಯಿಂದ ತಿಳಿಯುತ್ತದೆ. ತಡೆಯಾಗಿರುವ ಕರುಳುವಾಳುರಿತ ತೀರ ಕಟ್ಟುನಿಟ್ಟಿನದು, ಬಲು ಅಪಾಯಕರ. ಹೊಟ್ಟೆಶೂಲೆ ಜೋರಾಗಿರುತ್ತದಲ್ಲದ ಕೂಡಲೇ ಶಸ್ತ್ರಕ್ರಿಯೆ ಆಗದಿದ್ದರೆ ಪ್ರಾಣಾಪಾಯವಿದೆ.
ಕರುಳುವಾಳುರಿತದಿಂದ ಹಲವಾರು ತಾಕು ತೊಡಕುಗಳು ಏಳಬಹುದು. ಕರುಳುವಾಳದ ಸುತ್ತಲೂ ಮುದ್ದೆಗಟ್ಟಿದಂತಾಗಿ ಗಂಟುಗಂಟಾಗಬಹುದು. ಕರುಳುವಾಳದಲ್ಲಿ ಕೀವುಗೂಡಿ ಕುರು ಏಳಬಹುದು. ಹೊರಬಿಗಿಪೊರೆಯಲ್ಲಿ ಒಂದೆಡೆಯಲ್ಲೋ ಎಲ್ಲೆಲ್ಲೂ ಹರಡಿಯೋ ಸೋಂಕಿನ ಉರಿತವಾಗಬಹುದು. ಕರುಳುವಾಳ ಬಿರಿದು ತೂತಿಟ್ಟುಕೊಳಬಹುದು. ಕೊನೆಯದಾಗಿ ರಕ್ತ ಸರಬರಾಜಿಲ್ಲದೆ ಕರುಳುವಾಳ ಕೊಳೆಯಬಹುದು. ಕರುಳುವಾಳುರಿತ ಸುಮಾರು ಕೂರಾಗಿದ್ದರೆ (ಸಬಕ್ಯೂಟ್) ಶಸ್ತ್ರಕ್ರಿಯೆಗೆ ಅವಸರವಿಲ್ಲ. ಇದ್ದಕ್ಕಿದ್ದ ಹಾಗೆ ಜೋರಾಗಿದ್ದು ರೋಗಿಗೆ ಕೆಡುಕಾಗುವಂತಿದ್ದರೆ ಕೂಡಲೇ ಶಸ್ತ್ರಕ್ರಿಯೆಯಿಂದ ಕರುಳುವಾಳವನ್ನು ಕೊಯ್ದು ತೆಗೆಯಬೇಕು. ಆದರೆ ಕರುಳುವಾಳುರಿತವಾಗಿ ಗಂಟು ಕಟ್ಟಿಕೊಂಡಿದ್ದರೆ, ಸೋಂಕು ಇಳಿಸುವ ಜೀವಿರೋಧಕ ಮದ್ದುಗಳನ್ನು ಕೊಡುತ್ತ ಕಾದು ನೋಡುವುದು ಒಳ್ಳೆಯದು. ರೋಗಿಯನ್ನು ಹಾಸಿಗೆಯಲ್ಲಿ ಮಲಗಿಸಿ, ಮೊಣಕಾಲು ಕೊಂಚ ಮಡಿಸಿಟ್ಟು ತಲೆ ಎದೆಗಳನ್ನು ಎತ್ತರಿಸಿಟ್ಟಿರಬೇಕು. ಬಾಯಿ ಮೂಲಕ ಏನೂ ಕೊಡಬಾರದು. ನಾಡಿ, ಮೈ ಕಾವುಗಳನ್ನು ಗುರುತಿಸಿಡುತ್ತಿರಬೇಕು. ನೀರು ಲವಣಗಳು, ಪುಷ್ಟಿಕಾರಿಗಳು, ದ್ರಾಕ್ಷಿಸಕ್ಕರೆಗಳನ್ನು ಸಿರದ ಮೂಲಕ ಚುಚ್ಚಿ ಹೊಗಿಸುತ್ತಿರಬೇಕಾಗುವುದು. ಸಾಧಾರಣವಾಗಿ ಗಂಟುಕಟ್ಟಿದ್ದು 2-3 ವಾರಗಳಲ್ಲಿ ಕರುಗುತ್ತದೆ. 3 ತಿಂಗಳು ಬಿಟ್ಟು ಶಸ್ತ್ರಕ್ರಿಯ ಮಾಡಬಹುದು. ಇಂದಿನ ದಿನಗಳಲ್ಲಿ ಕರುಳುವಾಳುರಿತ ಶಸ್ತ್ರ ಚಿಕಿತ್ಸೆಯನ್ನು ಅಂತರ್ದಶಕದ ಮೂಲಕವೂ ನಡೆಸಬಹುದು. (ಕೆ.ಕೆ.ಆರ್.ಐ.)

ಅಖಿಲಭಾರತ ಪತ್ರಿಕಾಸಂಘಗಳು

ಅಖಿಲಭಾರತ ಪತ್ರಿಕಾಸಂಘಗಳು

ಅಖಿಲಭಾರತ ಪತ್ರಿಕಾ ಸಂಪಾದಕರ ಪರಿಷತ್ತು: ಭಾರತ ಸರ್ಕಾರ 1940 ಅಕ್ಟೋಬರ್ 26ನೆಯ ತಾರೀಕು ಭಾರತದ ಪತ್ರಿಕೆಗಳ ಮೇಲೆ, ಬಿಗಿಯಾದ ಮತ್ತು ಭೀತಿ ಹುಟ್ಟಿಸುವ ನಿಷೇಧಾಜ್ಞೆಯನ್ನು ಜಾರಿಮಾಡಿತು. ಸರ್ಕಾರದ ಈ ನಿಷೇಧಾಜ್ಞೆಯಿಂದ ಸ್ವಾತಂತ್ರ್ಯಹೋರಾಟದ ಸುದ್ದಿಗಳನ್ನು ಪ್ರಚಾರ ಮಾಡುವುದು ಸಾಧ್ಯವಿರಲಿಲ್ಲ. ಅದು ಪತ್ರಿಕಾಸ್ವಾತಂತ್ರ್ಯಕ್ಕೆ ಕೊಡಲಿ ಪೆಟ್ಟನ್ನು ಹಾಕಿದಂತಾಗಿತ್ತು. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರದೊಂದಿಗೆ ಸಮಾಲೋಚನೆಮಾಡಿ ಒಂದು ತೀರ್ಮಾನಕ್ಕೆ ಬರಲು, ಭಾರತದ ಪತ್ರಿಕೆಗಳ ಸಂಪಾದಕರು ಒಂದೆಡೆ ಸೇರಿದರು. ಆ ಒಕ್ಕೂಟವೇ ಅಖಿಲಭಾರತ ಪತ್ರಿಕಾಸಂಪಾದಕರ ಪರಿಷತ್ತಾಗಿ ಮಾರ್ಪಾಡಾಯಿತು.
ಪತ್ರಿಕೋದ್ಯಮದ ಶ್ರೇಷ್ಠವಾದ ಸಂಪ್ರದಾಯ ಮತ್ತು ಮಟ್ಟಗಳನ್ನು ಕಾಪಾಡುವುದು; ಪ್ರಕಟಣೆ, ಸುದ್ದಿ ಮತ್ತು ವಿಮರ್ಶಾತ್ಮಕ ಟೀಕೆಗಳ ಸ್ವಾತಂತ್ರ್ಯವನ್ನು ಕಾಪಾಡುವುದು; ಸರ್ಕಾರಕ್ಕೂ ಸಾರ್ವಜನಿಕರಿಗೂ ಇರುವ ಸಂಬಂಧವನ್ನು ಪತ್ರಿಕಾಲೋಕ ಯಾವ ರೀತಿ ತಿಳಿಸುತ್ತಿದೆ ಎಂಬುದನ್ನು ತಿಳಿಯುವುದು; ಸಾಧ್ಯವಾದಮಟ್ಟಿಗೂ ಸರ್ಕಾರಕ್ಕೂ ಪತ್ರಿಕೆಗಳಿಗೂ ಮಧ್ಯೆ ಮಧುರ ಬಾಂಧವ್ಯವನ್ನೇರ್ಪಡಿಸುವುದು; ವೃತ್ತಿಗೆ ಸಂಬಂಧಪಟ್ಟ ಇತರ ವಿಷಯಗಳಿಗೆ ಪರಿಹಾರವನ್ನು ಕಂಡುಹಿಡಿಯುವುದು-ಇವು ಈ ಪರಿಷತ್ತಿನ ಮುಖ್ಯ ಉದ್ದೇಶಗಳಾಗಿವೆ.
ಈ ಪರಿಷತ್ತಿನ ಅಧ್ಯಕ್ಷರುಗಳಾಗಿ ಹಿಂದೂ ಪತ್ರಿಕೆಯ ಕಸ್ತೂರಿ ಶ್ರೀನಿವಾಸನ್, ಬಾಂಬೆ ಕ್ರಾನಿಕಲ್ ಪತ್ರಿಕೆಯ ಸೈಯದ್ ಅಬ್ದುಲ್ಲಾ ಬ್ರೆಲ್ವಿ, ಅಮೃತ ಬಜಾರ ಪತ್ರಿಕೆಯ ತುಷಾರ ಕಾಂತಿಘೋಷ್, ಸ್ವದೇಶಮಿತ್ರನ್ ಪತ್ರಿಕೆಯ ಸಿ. ಆರ್. ಶ್ರೀನಿವಾಸನ್ ಮತ್ತು ಎ.ಡಿ. ಮಣಿ, ದೇವದಾಸ್ ಗಾಂಧಿ, ದುರ್ಗಾದಾಸ್, ಜೆ. ನಟರಾಜನ್, ಸಚಿನ್ಸೇನ್, ಮತ್ತು ಸಿ.ಕೆ. ಭಟ್ಟಾಚಾರ್ಯ ಮುಂತಾದವರು ಹೆಚ್ಚಿನ ಕೆಲಸಮಾಡಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದ ಕಾಲದಲ್ಲಿ ಬಹುತೇಕ ಪತ್ರಿಕೆಗಳಲ್ಲಿ ಪತ್ರಕರ್ತರ ಹಾಗೂ ಪತ್ರಕರ್ತರೇತರ ನೌಕರರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಸಾಕಷ್ಟು ಸಂಬಳ ಸಾರಿಗೆಗಳಿರಲಿಲ್ಲ. ಇತರ ವರ್ಗಗಳ ಕಾರ್ಮಿಕರಿಗಿದ್ದ ಕನಿಷ್ಠ ಸೌಕರ್ಯಗಳಿಂದಲೂ ಪತ್ರಕರ್ತರು ವಂಚಿತರಾಗಿದ್ದರು. ರಜಾ ಸೌಲಭ್ಯವಿರಲಿಲ್ಲ. ಉದ್ಯೋಗ ರಕ್ಷಣೆಯೇ ಇರಲಿಲ್ಲ. ಯಾರನ್ನು ಬೇಕಾದರೂ ಯಾವ ಸಮಯದಲ್ಲಾದರೂ ಸೇವೆಯಿಂದ ವಜಾ ಮಾಡಬಹುದಾಗಿತ್ತು. ಇಂತಹ ಶೋಷಣೆಯ ಪರಿಸ್ಥಿತಿಯೇ ಮುಂದೆ ಪತ್ರಕರ್ತರ ಹಾಗೂ ಪತ್ರಕರ್ತೇತರ ಸಂಘಟನೆಗಳು ಜನ್ಮ ತಾಳಲು ಕಾರಣವಾಯಿತು.
1947 ಆಗಸ್ಟ್ 15ರಂದು ಸ್ವಾತಂತ್ರ್ಯ ಸಂಪಾದಿಸಿದ ದೇಶದಲ್ಲಿ 1950ರ ಅಕ್ಟೋಬರ್ 15 ರಂದು ದೆಹಲಿಯಲ್ಲಿ ದೇಶದ ಎಲ್ಲ ಭಾಗಗಳಿಂದ ಬಂದಿದ್ದ ಪತ್ರಕರ್ತರು ಸಭೆ ಸೇರಿ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟವನ್ನು ಸ್ಥಾಪಿಸಲು ಐತಿಹಾಸಿಕ ತೀರ್ಮಾನ ಕೈಗೊಂಡರು. ಅಂದಿನಿಂದ ಇಲ್ಲಿಯವರೆಗೆ ಈ ಪತ್ರಕರ್ತರ ಒಕ್ಕೂಟ (ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್್ಟಗೆ) ಪತ್ರಕರ್ತರ ಸೇವಾ ಸ್ಥಿತಿಗತಿ ಉತ್ತಮಪಡಿಸಲು ಹೋರಾಟ ನಡೆಸಿ ಗಣನೀಯ ಸಾಧನೆಗೆ ಕಾರಣವಾಗಿದೆ. ಕಾಲ ಉರುಳಿದಂತೆ ಇತರ ಕೆಲವು ಸಂಘಗಳು ರೂಪುಗೊಂಡವು.
ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್, ದೆಹಲಿ ಅಖಿಲ ಭಾರತ ವೃತ್ತಪತ್ರಿಕಾ ನೌಕರರ ಸಂಘ ದೆಹಲಿ ಇವೆರಡು, ಕಾರ್ಯನಿರತ ಪತ್ರಕರ್ತರ ಸಂಘಟನೆಗಳು.
ಭಾರತೀಯ ವೃತ್ತ ಪತ್ರಿಕಾ ಸಂಸ್ಥೆ (ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ, (ಐಎನ್ಎಸ್)) ವೃತ್ತಪತ್ರಿಕೆಗಳ ಹಾಗೂ ಪ್ರಕಾಶಕರ ಸಂಸ್ಥೆ, ಅವರ ಮುಖವಾಣಿ. 1988ರ ಜನವರಿ 25ರಂದು ಅಸ್ತಿತ್ವಕ್ಕೆ ಬಂದಿತು. ಇದಕ್ಕೆ ಮುನ್ನ ಇಂಡಿಯ ಬರ್ಮ ಅಂಡ್ ಸಿಲೋನ್ ನ್ಯೂಸ್ ಪೇಪರ್್ಸ ಲಂಡನ್ ಕಮಿಟಿ 1927ರ ಅಕ್ಟೋಬರ್ 1ರಂದು ಸ್ಥಾಪನೆಯಾಗಿತ್ತು. ಅನಂತರ ಈ ಸಂಸ್ಥೆ ಇಂಡಿಯನ್ ಅಂಡ್ ಈಸ್ಟರ್ನ್ ನ್ಯೂಸ್ ಪೇಪರ್ ಸೊಸೈಟಿ (ಐ.ಇ.ಎನ್.ಎಸ್) ಆಗಿ ಪರಿವರ್ತಿತವಾಯಿತು. ಸಿಲೋನ್ ಬರ್ಮಾದೇಶಗಳು ಪ್ರತ್ಯೇಕವಾದ ಮೇಲೆ, ಸಂಸ್ಥೆಯ ಹೆಸರು ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ (ಐಎನ್ಎಸ್)ಎಂದು ಪರಿವರ್ತನೆಗೊಂಡಿತು. ಇದರ ಕೇಂದ್ರ ಕಛೇರಿ ದೆಹಲಿಯಲ್ಲಿದೆ. ಈ ಸಂಸ್ಥೆ ವೃತ್ತಪತ್ರಿಕೆಗಳು ಮಾಲೀಕರ ಮುಖವಾಣಿಯಾಗಿ ಸಾರ್ವಜನಿಕವಾಗಿ ಸರಕಾರದೊಡನೆ ವ್ಯವಹರಿಸುತ್ತಿದೆ. ವೃತ್ತಪತ್ರಿಕೆಗಳಿಗೆ ಅಗತ್ಯವಾದ ಮುದ್ರಣಕಾಗದ, ಯಂತ್ರಗಳು, ಬಿಡಿಭಾಗಗಳ ಆಮದಿಗೆ ನೆರವು ನೀಡುತ್ತಿದೆ. ಪ್ರೆಸ್ ಟ್ರಸ್ಟ್ ಆಫ್ ಇಂಡಿಯ(ಯುಎನ್ಎ) ವಾರ್ತಾಸಂಸ್ಥೆಗಳು ಪತ್ರಿಕೆಗಳ ಪ್ರಸಾರಸಂಖ್ಯೆಯನ್ನು ದೃಢೀಕರಿಸಿ ಪ್ರಮಾಣ ಪತ್ರ ನೀಡುತ್ತವೆ. ಆಡಿಟ್ ಬ್ಯೂರೋ ಆರ್ಫ್ ಸಕುರ್್ಯಲೇಷನ್ ಎಂಬ ಸ್ವಾಯತ್ತ ಸಂಸ್ಥೆಗಳ ರಚನೆಗೆ ಕಾರಣವಾಗಿದೆ.
ಪತ್ರಿಕೆಗಳಿಗೆ ಜಾಹೀರಾತು ಒದಗಿಸುವ ಜಾಹೀರಾತು ಸಂಸ್ಥೆಗಳಿಗೆ ಮಾನ್ಯತೆ ನೀಡುವ ಮೂಲಕ ಪತ್ರಿಕಾ ಸಂಸ್ಥೆಗಳು ಹಾಗೂ ಜಾಹೀರಾತು ಸಂಸ್ಥೆಗಳ ನಡುವೆ ವ್ಯವಹಾರ ಏಕರೂಪವಾಗಿ ಸುವ್ಯವಸ್ಥಿತವಾಗಿ ನಡೆಯಲು ಸಹಾಯಕವಾಗಿದೆ. 18 ಭಾಷೆಗಳ ಸು. 990 ದಿನಪತ್ರಿಕೆಗಳು, ವಾರಪತ್ರಿಕೆಗಳು, ಪಾಕ್ಷಿಕಗಳು, ಮಾಸಪತ್ರಿಕೆಗಳ ಮಾಲೀಕರು ಈ ಸಂಸ್ಥೆಯ ಸದಸ್ಯರಾಗಿದ್ದಾರೆ.
ಆಡಿಟ್ ಬ್ಯೂರೋ ಆಫ್ ಸಕುರ್್ಯಲೇಷನ್ : ಪತ್ರಿಕೆಗಳ ನಿಖರವಾದ ಪ್ರಸಾರವನ್ನು ದೃಢೀಕರಿಸುವ ಸಂಸ್ಥೆ. ಪ್ರಸಾರ ಪ್ರಮಾಣ ಪತ್ರ ನೀಡಿಕೆ ಮಾರಾಟವಾಗಿ ಸಂಸ್ಥೆಗೆ ಹಣಸಂದಾಯವಾದ ಪ್ರತಿಗಳ ಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಈ ಸಂಸ್ಥೆ ಸ್ಥಾಪನೆಗೆ ಐ.ಎನ್.ಎಸ್. (ವೃತ್ತಪತ್ರಿಕಾ ಮಾಲೀಕರ ಸಂಘಟನೆ) ಕಾರಣ.
ಇಂಡಿಯನ್ ಲ್ಯಾಂಗ್ವೇಜಸ್ ನ್ಯೂಸ್ಪೇಪರ್ಸ್ ಅಸೋಸಿಯೇಷನ್ಸ್ಸಂಪಾದಿಸಿ
ಪನೆ 1941. ಭಾರತದಲ್ಲಿನ ವೃತ್ತಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ಮಾಲಿಕರ ಸಂಘವಾಗಿದ್ದು ತನ್ನ ಸದಸ್ಯರ ನಡುವಣ ವ್ಯಾಪಾರಾಸಕ್ತಿಗಳನ್ನು ಉತ್ತೇಜನಗೊಳಿಸಿ ಅಭಿವೃದ್ಧಿಪಡಿಸುವುದು, ಅವರಲ್ಲಿ ಮೈತ್ರಿ ಹಾಗೂ ಸಹಕಾರವನ್ನು ಕಲ್ಪಿಸುವುದು-ಇತ್ಯಾದಿ ಉದ್ದೇಶಗಳನ್ನು ಹೊಂದಿದೆ. 1968ರಲ್ಲಿದ್ದ ಸದಸ್ಯರ ಸಂಖ್ಯೆ 215. ಕೇಂದ್ರ ಕಚೇರಿ ಮುಂಬಯಿ.
ಆಲ್ ಇಂಡಿಯ ನ್ಯೂಸ್ಪೇಪರ್ ಎಡಿಟರ್್ಸ: ಕಾನ್ಫರೆನ್ಸ್ಸಂಪಾದಿಸಿ
ಸ್ಥಾಪನೆ 1940. ಭಾರತದಲ್ಲಿನ ಪತ್ರಿಕೆ ಹಾಗೂ ನಿಯತಕಾಲಿಕೆಗಳ ಸಂಪಾದಕರನ್ನೊಳಗೊಂಡಿರುವ ಸ್ವಯಂಪ್ರೇರಿತ ಸಂಸ್ಥೆ. ಪತ್ರಿಕೋದ್ಯಮದ ಉನ್ನತ ಆದರ್ಶಗಳನ್ನು ಮತ್ತು ಸತ್ಸಂಪ್ರದಾಯಗಳನ್ನು ಎತ್ತಿಹಿಡಿಯುವುದು. ತಮ್ಮ ಕಾರ್ಯನಿರ್ವಹಣೆಯನ್ನು ನೆರವೇರಿಸಲು ಪತ್ರಿಕಾಲಯಗಳಿಗೆ ಬೇಕಾದ ಸೌಲಭ್ಯವನ್ನೊದಗಿಸುವುದು, ಪತ್ರಿಕೋದ್ಯೋಗಿಗಳ ಮತ್ತು ಸರ್ಕಾರದ ನಡುವೆ ಹಾಗೂ ಪತ್ರಿಕೋದ್ಯೋಗಿಗಳ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಕಲ್ಪಿಸುವುದು, ಇಂಥದೇ ಉದ್ದೇಶಗಳನ್ನಿಟ್ಟುಕೊಂಡಿರುವ ಇತರ ಸಂಘ-ಸಂಸ್ಥೆಗಳೊಡನೆ ಸಂಪರ್ಕವನ್ನು ಕಲ್ಪಿಸಿಕೊಳ್ಳುವುದು-ಇವೇ ಇದರ ಮುಖ್ಯ ಉದ್ದೇಶಗಳು. ಕೇಂದ್ರ ಕಚೇರಿ ನವದೆಹಲಿ.
ಪ್ರೆಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಸಂಪಾದಿಸಿ
ಭಾರತದ ಪತ್ರಿಕೋದ್ಯಮಿಗಳು ತಮ್ಮಲ್ಲಿನ ಉನ್ನತ ಹೊಣೆಗಾರಿಕೆಯನ್ನು ಅರಿಯುವಂತಾಗಲು ಅವರಿಗೆ ತರಬೇತಿ ನೀಡಲು ಒಂದು ವೃತ್ತಿಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ನೆರವಾಗುವಂತೆ ಮಾಡಲು ವೃತ್ತಪತ್ರಿಕೆ ಇತ್ಯಾದಿಗಳ ಬೆಳವಣಿಗೆ ಮತ್ತು ಸ್ಥಿರತೆಗೆ ನೆರವು ನೀಡಲು ಭಾರತದ ಪತ್ರಿಕೋದ್ಯಮಿಗಳು 1963ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಧರ್ಮದರ್ಶಿಗಳ ಮಂಡಲಿ, ಆಡಳಿತ ಮಂಡಲಿ ಮತ್ತು ಸೆಕ್ರೆಟೇರಿಯಟ್-ಈ ಮೂರು ಘಟ್ಟಗಳಲ್ಲಿ ಈ ಸಂಸ್ಥೆ ತನ್ನ ಕೆಲಸವನ್ನು ನಡೆಸುತ್ತಿದೆ. ಸಂಸ್ಥಾರೂಪದಲ್ಲಿನ ವ್ಯಕ್ತಿಗಳಿಗೆ ಮಾತ್ರ ಇದರ ಸದಸ್ಯತ್ವದ ಸೌಲಭ್ಯವಿದೆ.
ಪ್ರೆಸ್ ಗಿಲ್ಡ ಆಫ್ ಇಂಡಿಯಸಂಪಾದಿಸಿ
ಪತ್ರಿಕೋದ್ಯೋಗಿಗಳಿಗೆ ಮಾತ್ರವಲ್ಲದೆ ಪತ್ರಿಕಾ ವ್ಯವಹಾರದಲ್ಲಿ ತೊಡಗಿರುವ ಇತರರಿಗೂ ಒಂದು ಪ್ರಾಜ್ಞ ಹಾಗೂ ಸಾಮಾಜಿಕ ಮಟ್ಟದಲ್ಲಿ ಬಂಧುತ್ವವನ್ನು ಬೆಳೆಸಿಕೊಳ್ಳಲು ಸಹಾಯವಾಗುವಂತೆ ವ್ಯಾಪಕದೃಷ್ಟಿಯುಳ್ಳ ಈ ಸಂಘಟಿತ ಪತ್ರಿಕೋದ್ಯೋಗಿಗಳ ಸಂಸ್ಥೆ 1955ರಲ್ಲಿ ಸ್ಥಾಪನೆಯಾಯಿತು. ಆಡಳಿತ ಕಚೇರಿ ಮುಂಬಯಿ.
ಸ್ಪೆಷಲೈಸ್ಡ್ ಪಬ್ಲಿಕೇಷನ್ ಅಸೋಸಿಯೇಷನ್ಸ್ಸಂಪಾದಿಸಿ
ಭರತದಲ್ಲಿನ ವ್ಯಾಪಾರ, ವಾಣಿಜ್ಯ, ತಾಂತ್ರಿಕ ಪತ್ರಿಕಾಸಂಘಗಳು ಹಾಗೂ ಇತರ ವೈಶಿಷ್ಟ್ಯವುಳ್ಳ ಪ್ರಮುಖ ಪ್ರಕಟಣೆಗಳ ಪ್ರತಿನಿಧಿ ಸಂಸ್ಥೆ. 1959ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ. ವಾಣಿಜ್ಯ ಪದ್ಧತಿಯಂತೆ ನಡೆವ ಭಾರತದ ವೈಶಿಷ್ಟ್ಯಪುರ್ಣ ಪ್ರಕಟಣೆಗಳಿಗೆ ಸಮಾನ ಸ್ಥಾನಮಾನಗಳು ದೊರೆಯುವಂತೆ ಮಾಡುವುದು, ವೈಜ್ಞಾನಿಕ ಹಾಗೂ ಪ್ರಗತಿಪಥದಲ್ಲಿ ಮುಂದುವರೆಯುವಂತೆ ವೈಶಿಷ್ಟ್ಯಪುರ್ಣ ಪ್ರಕಾಶನಗಳಿಗೆ ನೆರವು ನೀಡುವುದು - ಇವೇ ಈ ಸಂಸ್ಥೆಯ ಮುಖ್ಯ ಉದ್ದೇಶಗಳು. ಆಡಳಿತ ಕಚೇರಿ ಮುಂಬಯಿ.
ಟ್ರೇಡ್ ಅಂಡ್ ಟೆಕ್ನಿಕಲ್ ಪಬ್ಲಿಕೇಷನ್ಸ್ ಅಸೋಸಿಯೇಷನ್ಸಂಪಾದಿಸಿ
ವ್ಯಾಪಾರ ಮತ್ತು ತಾಂತ್ರಿಕಪತ್ರಿಕೆಗಳಲ್ಲಿ ಆಸಕ್ತಿ ಹೊಂದಿದವರಿಂದ 1959ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಸರ್ಕಾರದ ಧೋರಣೆಗಳ ಫಲವಾಗಿ ಪತ್ರಿಕೆಗಳು ಕಾಲಕಾಲಕ್ಕೆ ಅನುಭವಿಸುವಂಥ ತೊಂದರೆಗಳನ್ನು ನಿವಾರಿಸಲು ಸಹಾಯಮಾಡುತ್ತವೆ. ಆಡಳಿತ ಕಚೇರಿ ಮುಂಬಯಿ.
ಆಲ್ ಇಂಡಿಯ ಇಂಡಸ್ಟ್ರಿಯಲ್ ಎಡಿಟರ್ಸ್ ಕೌನ್ಸಿಲ್ಸಂಪಾದಿಸಿ
ಪತ್ರಿಕೋದ್ಯಮದ ಉನ್ನತಸಂಪ್ರದಾಯಗಳನ್ನೂ ನೀತಿಯನ್ನೂ ಎತ್ತಿಹಿಡಿಯುವ ಈ ಸಂಸ್ಥೆಯ ಆಡಳಿತ ಕಚೇರಿ ನವದೆಹಲಿಯಲ್ಲಿದೆ.
ಆಲ್ ಇಂಡಿಯ ಸ್ಮಾಲ್ ಅಂಡ್ ಮೀಡಿಯಂ ನ್ಯೂಸ್ಪೇಪರ್ಸ್ ಎಡಿಟರ್ಸ್ ಅಸೋಸಿಯೇಷನ್ಸಂಪಾದಿಸಿ
ಅಖಿಲಭಾರತ ಸಣ್ಣ ಮತ್ತು ಮಧ್ಯಮ ದರ್ಜೆಯ ವೃತ್ತಪತ್ರಿಕೆಗಳ ಸಂಪಾದಕರ ಸಂಘವಾಗಿರುವ ಇದರ ಉದ್ದೇಶ ಪತ್ರಿಕೋದ್ಯಮದ ಉನ್ನತ ಆದರ್ಶಗಳನ್ನು ರಕ್ಷಿಸುವುದು, ಭಾರತದಲ್ಲಿ ಪ್ರಕಟವಾಗುವ ವೃತ್ತಪತ್ರಿಕೆ ಹಾಗೂ ಪ್ರಕಟನೆಗಳ ವ್ಯಾಪಾರ ಹಿತಾಸಕ್ತಿಯನ್ನು ಕಾಪಾಡುವುದು-ಇವೇ ಆಗಿವೆ. ಆಡಳಿತ ಕಚೇರಿ ನವದೆಹಲಿ. ಭಾರತ ಭಾಷಾಪತ್ರಿಕೆಗಳ ಸಂಘಟನೆ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿ ಕೇಷನ್ ಈ ಎರಡೂ ಸಂಸ್ಥೆಗಳ ಕೇಂದ್ರ ಕಛೇರಿ ನವದೆಹಲಿಯಲ್ಲಿದೆ.
ಪ್ರೆಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಸಂಪಾದಿಸಿ
ಸ್ವತಂತ್ರ ವಿಶ್ವಸ್ಥ ಸಂಸ್ಥೆ 1963ರಲ್ಲಿ ಆರಂಭವಾಯಿತು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ಮೌಲ್ಯಗಳನ್ನು ನೆಲೆಗೊಳಿಸುವುದು ಈ ಸಂಸ್ಥೆಯ ಗುರಿ. ಆರಂಭದಲ್ಲಿ ಬ್ರಿಟನ್ನಿನ ಥಾಂಸನ್ ಫೌಂಡೇಷನ್ನಿನಲ್ಲಿ ಪತ್ರಿಕೋದ್ಯಮದಲ್ಲಿ ಶಿಕ್ಷಣ ಪಡೆಯಲು, ಪತ್ರಕರ್ತರನ್ನು ಮತ್ತು ಛಾಯಾಗ್ರಾಹಕರನ್ನು ಆಯ್ಕೆ ಮಾಡುತ್ತಿತ್ತು. ಈಗ ಈ ಸಂಸ್ಥೆಯೇ ಪತ್ರಿಕಾಲಯಗಳಲ್ಲಿ ಹಾಗೂ ನಗರಗಳಲ್ಲಿ ಪತ್ರಿಕೋದ್ಯಮದ ವಿವಿಧ ವಿಭಾಗಗಳಿಗೆ ಸಂಬಂಧಪಟ್ಟಂತೆ ಕಾರ್ಯಾಗಾರ ನಡೆಸುತ್ತದೆ. ಭಾರತ, ಪಾಕಿಸ್ಥಾನ, ಸಿಲೋನ್ ಮೊದಲಾದ ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸೇರಿದ 4,000 ಮಂದಿ ಪತ್ರಕರ್ತರಿಗೆ ತರಬೇತಿ ನೀಡಿದೆ. ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟಂತೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ. ‘ವಿದುರ’ ಈ ತ್ರೈಮಾಸಿಕ ಪ್ರಕಟಣೆ.

ಶುಕ್ರವಾರ, ಜುಲೈ 10, 2015

ಕರ್ನಾಟಕ ಸಂಸ್ಕೃತಿಯ ಒಂದು ಚಿತ್ರ

ಕನ್ನಡ ಮನಸು: ೧೫. ಕರ್ನಾಟಕ ಸಂಸ್ಕೃತಿಯ ಒಂದು ಚಿತ್ರ

ಯಾಕೆ ಈ ಸ್ಥಿತಿ?
ಕತೆಗಾರ ಡಾ. ಬೆಸಗರಹಳ್ಳಿ ರಾಮಣ್ಣನವರು ತಮ್ಮ ಅನುಭವವೊಂದನ್ನು ಹೇಳುತ್ತಿದ್ದರು. ವೈದ್ಯರಾಗಿದ್ದ ಅವರು ಒಮ್ಮೆ ಆಂಧ್ರದ ವೈದ್ಯಕೀಯ ವಿದ್ಯಾರ್ಥಿಗಳ ಜತೆ ಚರ್ಚೆ ಮಾಡುತ್ತಾ, ಪೊಟ್ಟಿ ಶ್ರೀರಾಮುಲು ಎಂಬುವರ ವಿಷಯ ತೆಗೆದರಂತೆ. ಆಗ ಆ ವಿದ್ಯಾರ್ಥಿಗಳು ‘ಅವರು ಯಾರು, ತಮಗೇನೂ ಗೊತ್ತಿಲ್ಲ’ ಎಂದು ಮುಗ್ಧವಾಗಿ ಉತ್ತರಿಸಿದರಂತೆ. ರಾಮಣ್ಣನವರಿಗೆ ಆಶ್ಚರ್ಯವಾಗಿ ‘ಅಲ್ರಯ್ಯಾ, ತೆಲುಗು ಮಾತಾಡೋ ಪ್ರದೇಶಗಳೆಲ್ಲ ಸೇರಿ ಒಂದು ರಾಜ್ಯವಾಗಬೇಕು ಅಂತ ಆ ಮನುಷ್ಯ ೫೨ ದಿವಸ ಉಪವಾಸ ಮಾಡಿ ಪ್ರಾಣಬಿಟ್ಟೋನು. ಅವನಿಂದಲೇ ನಿಮ್ಮ ಆಂಧ್ರಪ್ರದೇಶ ಆಗಿದ್ದು. ನಮ್ಮ ಕರ್ನಾಟಕ ಏಕೀಕರಣಕ್ಕೂ ಅವನ ಪ್ರಾಣತ್ಯಾಗ ಸಹಾಯ ಮಾಡ್ತು. ಅಂತಹವನ ಬಗ್ಗೆ ಗೊತ್ತಿಲ್ಲ ಅಂತೀದೀರಲ್ಲ, ಏನು ಹೇಳೋಣ’ ಅಂತ ವಿಷಾದಿಸಿರಂತೆ.
ಇದೊಂದು ಉದಾಹರಣೆ ಅಷ್ಟೆ. ಇಂತಹವು ಇನ್ನೂ ಸಿಗಬಹುದು. ಪ್ರಶ್ನೆಯೆಂದರೆ, ಅಕ್ಷರಸ್ಥರಲ್ಲಿ ತಮ್ಮ ನಾಡಿನ ಜನರ ಬಗ್ಗೆ, ಸಂಸ್ಕೃತಿ ಬಗ್ಗೆ, ಅರಿವಿಲ್ಲದ ಈ ಪರಿಸ್ಥಿತಿ ಯಾಕೆ ಸೃಷ್ಟಿಯಾಗುತ್ತದೆ. ಎಷ್ಟೋ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಎಲ್ಲೆಲ್ಲಿ ಏನು ಬೆಳೆ ಬೆಳೆಯಲಾಗುತ್ತದೆ, ಅಲ್ಲಿನ ಆಹಾರ ಪದ್ಧತಿ, ಮನೆಕಟ್ಟುವ, ಬಟ್ಟೆ ಧರಿಸುವ ವಿಧಾನ ಯಾವುದು – ಈ ಬಗ್ಗೆ ಯಾಕೆ ಸಣ್ಣ ಕುತೂಹಲವೂ ಕಾಣುವುದಿಲ್ಲ. ಬಹುಶಃ ದೋಷ ಅವರಲ್ಲಿ ಇದ್ದಂತಿಲ್ಲ. ಅವರು ಕಲಿತ ಯುವ ಪರಿಸರದಲ್ಲಿ ಇದ್ದಂತಿದೆ.
ತಮ್ಮ ನಾಡಿನ ಬಗ್ಗೆ ಅರಿವಿರಬೇಕು ಎಂದರೇನು? ಅದಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ಜನರಲ್‌ನಾಲೆಜ್‌ರೀತಿಯಲ್ಲಿ ಸಂಗ್ರಹ ಮಾಡಿಕೊಂಡಿರಬೇಕು ಎಂದರ್ಥವಲ್ಲ. ಕರ್ನಾಟಕದ ವಿಸ್ತೀರ್ಣ ಎಷ್ಟು ಎಂದರೆ ಪಟಾರನೆ ಉತ್ತರ ಹೇಳುವುದಕ್ಕೂ, ಇಲ್ಲಿನ ಜನರ ಬದುಕಿನ ಜತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿರುವುದಕ್ಕೂ ವ್ಯತ್ಯಾಸವಿದೆ. ಮಾಹಿತಿ ಬರಿ ನೆನಪಿನ ಶಕ್ತಿಯಾಗಿ ಉಳಿದರೆ ಜಡವಾಗಿರುತ್ತವೆ. ಅದು ಸಂವೇದನೆಯ ಭಾಗವಾದರೆ, ನಾಡಿನ ಬಗ್ಗೆ ಅಪ್ತ ಸಂಬಂಧ ಬೆಳೆಸಿಕೊಳ್ಳಲು ಕಾರಣವಾಗುತ್ತದೆ. ಈ ಸಂಬಂಧವು ಜನರ ನೋವು ನಲಿವಿನ ಜತೆ ಮಿಡಿಯಲು ಪ್ರೇರಿಸುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕೃತಿಯನ್ನು ತಿಳಿವ ಅಗತ್ಯವಿದೆ.
ಸಂಸ್ಕೃತಿ ಎಂದರೇನು?
‘ಛೇ! ಅವರಿಗೆ ಕಲ್ಚರ್ರೇ ಇಲ್ಲಪ್ಪ’ ಎಂಬ ಮಾತನ್ನು ಕೇಳಿದ್ದೇವೆ. ಹೀಗೆ ಹೇಳುವವರ ಮನಸ್ಸಲ್ಲಿ ಸಂಸ್ಕೃತಿ ಅಂದರೆ ಏನರ್ಥ? ಅದೊಂದು ಸಭ್ಯತೆ, ತಾವು ಬೈಯುತ್ತಿರುವವರಲ್ಲಿ ಅದು ಇಲ್ಲ ಅಂತ ತಾನೇ? ಅವರ ಪ್ರಕಾರ ಸಂಸ್ಕೃತಿ ಎನ್ನುವುದು, ನಡತೆಗೆ, ನೈತಿಕ ಮೌಲ್ಯಗಳಿಗೆ ಸಂಬಂಧಿಸಿದ್ದು. ಹೌದು, ಇದೇ ಸಂಸ್ಕೃತಿಗಿರುವ ಜನಪ್ರಿಯ ಅರ್ಥ. ಈ ಅರ್ಥವನ್ನು ಒಪ್ಪಿಕೊಂಡೊಡನೆ ಒಂದು ಪ್ರಶ್ನೆ ಹುಟ್ಟುತ್ತದೆ. ಯಾರೋ ಕೆಲವರು ನಂಬಿರುವುದೇ ಯಾಕೆ ಸಂಸ್ಕೃತಿ ಎಂದಾಬೇಕು? ಬೇರೆಯವರಿಗೂ ಅವರದೇ ಸಂಸ್ಕೃತಿ  ಇರಬಹುದಲ್ಲವೇ? ಬಾಯಾರಿದವರಿಗೆ ನೀರು ಕೊಡೂವುದನ್ನು ಸಂಸ್ಕೃತಿ  ಎಂದರೆ ಸಮಸ್ಯೆಯಿಲ್ಲ. ‘ಅವರು ನಮಗೆ ಇಷ್ಟವಾಗದ ಆಹಾರ ತಿಂತಾರೆ, ಅವರು ಕೊಳಕಾಗಿದಾರೆ, ಅವರ ಭಾಷೆ ಒರಟು, ಆದ್ದರಿಂದ ಸಂಸ್ಕೃತಿ ಇಲ್ಲ’ ಎಂದರೆ ಸಮಸ್ಯೆ. ನಾಡಿನ ಜನರೆಲ್ಲ ಒಂದೇ ರೀತಿಯಲ್ಲಿ ಉಣ್ಣುವ ಉಡುವ ಚಿಂತಿಸುವ ಕೆಲಸ ಮಾಡುತ್ತಿದ್ದಾರೆ, ಈ ಕಷ್ಟ ಇರುತ್ತಿರಲಿಲ್ಲ. ಆದರೆ ಇಲ್ಲಿ ಹಲವು ಬಗೆಯ ಜನಸಮುದಾಯಗಳಿವೆ. ಹಲವು ಧರ್ಮ ಜಾತಿ ಬುಡಕಟ್ಟುಗಳು ಇವೆ. ಬಡವರಿದ್ದಾರೆ, ಸಿರಿವಂತರಿದ್ದಾರೆ. ಈ ವಿಭಿನ್ನ ಜನ ಉಡುವ ಉಣ್ಣುವ ರೀತಿಗಳಲ್ಲಿ ಸಹಜವಾಗಿ ವ್ಯತ್ಯಾಸ ಇದೆ. ಹೀಗಿರುವಾಗ ಯಾರೋ ಕೆಲವರು ಶ್ರೇಷ್ಠ ಎಂದು ನಂಬಿರುವುದು ಮಾತ್ರ ಸಂಸ್ಕೃತಿ ಎಂದರೆ ಹೇಗೆ ಒಪ್ಪುವುದು? ನೂರಾರು ಸಮುದಾಯಗಳು ಬದುಕುವ ಭಾರತದಲ್ಲಿ, ಇದೇ ಸಂಸ್ಕೃತಿ ಎಂದು ನಿರ್ಧರಿಸುವುದು ಯಾವಾಗಲೂ ಕಷ್ಟದ ಕೆಲಸ.
ಸಾಮಾನ್ಯವಾಗಿ ಎಲ್ಲ ಸಮಾಜಗಳಲ್ಲೂ ಶ್ರೇಷ್ಠ ಕನಿಷ್ಠ ಅನ್ನುವುದನ್ನ ತೀರ್ಮಾನ ಮಾಡುವುದು ಪ್ರತಿಷ್ಠಿತರು. ಒಬ್ಬ ಧಣಿ, ಕೆಲಸಗಾರರು ತನಗೆ ನಿಷ್ಠರಾಗಿ ದುಡಿಯುವುದೆ ಸಂಸ್ಕೃತಿ  ಅನ್ನಬಹುದು. ಬ್ರಿಟಿಷರು ಈ ದೇಶಕ್ಕೆ ಬಂದಾಗ ಭಾರತೀಯರ ಸಂಸ್ಕೃತಿ ಅನಾಗರಿಕ ಎಂದೂ, ಅವರಿಗೆ ತಮ್ಮ ಸಭ್ಯತೆ ಕಲಿಸಿ ನಾಗರಿಕರನ್ನಾಗಿ ಮಾಡಬೇಕು ಎಂದೂ ನಂಬಿದ್ದರು. ಅಧಿಕಾರಸ್ಥ ವರ್ಗಾದ ಜನ, ಸಂಸ್ಕೃತಿ  ವ್ಯಾಖ್ಯೆ ಮಾಡಿದಾಗೆಲ್ಲ ಈ ತಾರತಮ್ಯ ಇದ್ದೇ ಇರುತ್ತದೆ.
ಎಲ್ಲಾ ಸಮುದಾಯಗಳಿಗೆ ತಮ್ಮ ನಂಬಿಕೆ ಆಚರಣೆಗಳನ್ನು ಮತ್ತೊಬ್ಬರಿಗೆ ಇಷ್ಟವಾಗಲಿ ಬಿಡಲಿ, ಅನುಸರಿಸುವುದಕ್ಕೆ ಹಕ್ಕಿದೆ. ಅವರ ಹಕ್ಕು ಮತ್ತೊಬ್ಬರ ಹಕ್ಕನ್ನು ಕಿತ್ತುಕೊಳ್ಳಬಾರದು ಅಷ್ಟೆ. ಮೀನು ತಿನ್ನುವುದು ನಮಗೆ ಇಷ್ಟ ಎಂದಾಗ, ಅದು ಸಾಂಸ್ಕೃತಿಕ ಹಕ್ಕಾಗುತ್ತದೆ. ಅಸ್ಪೃತ್ಯತೆ ಆಚರಿಸುವುದು ನಮ್ಮ ಸಂಪ್ರದಾಯ ಎಂದಾಗ ಅದು ಇನ್ನೊಬ್ಬರನ್ನು ಕೀಳಾಗಿ ನೋಡುವ  ಮಾತಾಗುತ್ತದೆ. ಎರಡೂ ನಬಿಕೆಗಳಾದರೂ ಅವುಗಳಲ್ಲಿ ಎಷ್ಟೊಂದು ವ್ಯತ್ಯಾಸ! ನಾಗರಿಕ ಸಮಾಜಕ್ಕೆ ಭಾಧೆಯಾಗದಂತೆ ಜನ ತಮ್ಮ ಸಂಸ್ಕೃತಿಯ ವಿಷಿಷ್ಟತೆ ಉಳಿಸಿಕೊಂಡರೆ, ಅದು ಕೆಡುಕಲ್ಲ. ಕನ್ನಡದ ಮೊದಲ ಕೃತಿ ‘ಕವಿರಾಜಮಾರ್ಗ’ ದಲ್ಲಿ ‘ಪರರ ಧರ್ಮವನ್ನು ಪರರ ವಿಚಾರಗಳನ್ನು ಸಹಿಸುವುದೇ ಬಂಗಾರ’ ಎಂಬ ಒಂದು ಮಾತು ಬರುತ್ತದೆ. ಹಲವು ಸಂಸ್ಕೃತಿ ಗಳಿಗಿರುವ ಪರಿಸರದಲ್ಲಿ ಇರಲೇಬೇಕಾದ ಡೆಮಾಕ್ರಟಿಕ್‌ಸಹನೆಯನ್ನು ಇದು ಸೂಚಿಸುತ್ತಿದೆ.
ಹಾಗಾದರೆ ‘ಸಂಸ್ಕೃತಿ’ ಎಂದರೇನು? ಈ ಪ್ರಶ್ನೆಗೆ ಹೀಗೆ ಉತ್ತರಿಸಬಹುದು ಸಂಸ್ಕೃತಿ  ಎಂದರೆ ಒಂದು ನಾಡಿನ ಎಲ್ಲ ಜನರ ಜೀವನ ವಿಧಾನ. ನಮ್ಮಂತಹ ದೇಶದಲ್ಲಿ ಒಂದು ಸಂಸ್ಕೃತಿಯಲ್ಲ, ಹಲವು ಸಂಸ್ಕೃತಿಗಳಿವೆ. ಅವೆಲ್ಲ ಸೇರಿಯೆ ನಾಡಿನ ಒಟ್ಟು ಸಂಸ್ಕೃತಿ. ಒಬ್ಬರ ಜೀವನ ವಿಧಾನವನ್ನು ಮತ್ತೊಬ್ಬರು ಗೌರವಿಸುವುದು ಇಲ್ಲಿ ಬಹಳ ಮುಖ್ಯ ತತ್ವವಾಗಿದೆ.
ಒಂದಲ್ಲ ಹಲವು
ಈ ತತ್ವ ಕರ್ನಾಟಕ ಸಂಸ್ಕೃತಿಗೂ ಅನ್ವಯವಾಗುತ್ತದೆ. ನಮ್ಮ ಜನ ನಿರ್ದಿಷ್ಟ ಧರ್ಮಕ್ಕೆ ಅಥವಾ ಭಾಷೆಗೆ ಸೇರಿದವರಾಗಿದ್ದರೂ, ಅವರ ಜೀವನ ವಿಧಾನದಲ್ಲಿ ವ್ಯತ್ಯಾಸಗಳಿವೆ. ಬೀದರ್‌ಸೀಮೆಯ ಉರ್ದು ಸೊಗಡಿನ ಕನ್ನಡ ಮಾತಾಡುವವರಿಗೆ, ಕೊಳ್ಳೇಗಾಲದ ಕನ್ನಡ ಅರ್ಥವಾಗುವುದಿಲ್ಲ. ಬಿಜಾಪುರದ ಕನ್ನಡ ಉಡುಪಿಯವರಿಗೆ, ಪೂರ್ತಿ ತಿಳಿಯುವುದಿಲ್ಲ. ಧಾರವಾಡದವರು ಮೈಸೂರಿಗೆ ಹೋದರೆ ಜೋಳದ ರೊಟ್ಟಿ ಸಿಗದೆ ಯಾವುದೋ  ದೇಶಕ್ಕೆ ಬಂದೆವಲ್ಲ ಎಂದು ಪರದಾಡುವಂತಾಗುತ್ತದೆ. ಬಂಗುಡೆ  ಮೀನು ತಿನ್ನುವ ಕರಾವಳಿಯವರು ಬಳ್ಳಾರಿಗೆ ಹೋದರೂ ಹೀಗೇ ಅನಿಸಬಹುದು. ಕರ್ನಾಟಕದ ಪ್ರತಿ ಭಾಗದ ಜನ ಆಡುವ ಮಾತು, ಮಾಡುವ ಊಟ, ಉಡುವ ಬಟ್ಟೆಗಳಲ್ಲಿ ಇಷ್ಟೊಂದು ವೈವಿಧ್ಯವಿದೆ! ಇಲ್ಲಿನ ಸೋಲಿಗ ಸಿದ್ಧಿ ಹಾಲಕ್ಕಿ ಬುಡಕಟ್ಟು ಜನರ ಸಂಸ್ಕೃತಿಯಂತೂ ಮತ್ತು ವಿಶಿಷ್ಟ. ಕರ್ನಾಟಕ ಸಂಸ್ಕೃತಿ  ನಿಜಕ್ಕೂ ಬಹುರೂಪಿಯಾಗಿದೆ.
ಹಾಗಾದರೆ ಯಾವುದು ‘ಕರ್ನಾಟಕ ಸಂಸ್ಕೃತಿ’? ಕರ್ನಾಟಕದಲ್ಲಿ ಬದುಕುತ್ತಿರುವ ಎಲ್ಲಾ ಸಮುದಾಯಗಳ ಸಂಸ್ಕೃತಿಗಳ ಮೊತ್ತವೆ ಕರ್ನಾಟಕ ಸಂಸ್ಕೃತಿ. ಭಾರತೀಯ ಸಂಸ್ಕೃತಿ ಎಂದಾಗಲೂ ಇದೇ ರೀತಿಯಲ್ಲಿ ಅರ್ಥೈಸಬೇಕು.
ಸಂಸ್ಕೃತಿ ಮತ್ತು ಭಾಷೆ
‘ಕರ್ನಾಟಕ ಸಂಸ್ಕೃತಿ’ ಎಂದಂತೆ, ‘ಕನ್ನಡ ಸಂಸ್ಕೃತಿ’ ಎಂಬ ಮಾತೂ ಇದೆ. ಕನ್ನಡ ಸಂಸ್ಕೃತಿ ಎಂದಾಗ ಸಂಸ್ಕೃತಿಯನ್ನು ಭಾಷೆ ಹೆಸರಿನಲ್ಲಿ ಗುರುತಿಸುತ್ತೇವೆ. ಕರ್ನಾಟಕ ಸಂಸ್ಕೃತಿ ಎಂದಾಗ ಪ್ರದೇಶದ ಹೆಸರಿನಲ್ಲಿ ಗುರುತಿಸುತ್ತೇವೆ. ಇವುಗಳ ನಡುವೆ ಸೂಕ್ಷ್ಮ ವ್ಯತ್ಯಾಸವಿದೆ. ಕನ್ನಡ ಸಂಸ್ಕೃತಿ ಎಂದೊಡನೆ, ಕನ್ನಡ ಭಾಷೆ, ಕನ್ನಡ ಮಾತೃಭಾಷೆಯ ಜನ, ಕನ್ನಡ ಲೇಖಕರು ನೆನಪಾಗುತ್ತಾರೆ. ಆದರೆ ಮನೆಮಾತು ಕನ್ನಡವಾಗಿರದ ಜನಸಮುದಾಯಗಳೂ ಇಲ್ಲಿವೆ. ತುಳುವರಿದ್ದಾರೆ, ಕೊಡವರಿದ್ದಾರೆ. ಲಂಬಾಣಿ ಉರ್ದು ಕೊಂಕಣಿ ಮಲೆಯಾಳ, ತಮಿಳು, ತೆಲುಗು, ಮರಾಠಿ ಮಾತಾಡುವ ಜನರಿದ್ದಾರೆ. ಹಾಗಿರುವಾಗ ಇವರದು ಕನ್ನಡ ಸಂಸ್ಕೃತಿ ಹೌದೋ ಅಲ್ಲವೋ?
ಒಂದು ಭಾಷೆ ಮಾತಾಡುವ ಪ್ರದೇಶಗಳನ್ನೆಲ್ಲ ಸೇರಿಸಿ ರಾಜ್ಯ ಮಾಡಿದರೆ, ಜನ ಆ ಭಾಷೆಯಲ್ಲಿ ಶಿಕ್ಷಣ ಆಡಳಿತ ಮಾಡಿಕೊಂಡು, ಬೇಗನೆ ಅಭಿವೃದ್ಧಿ ಸಾಧಿಸುತ್ತಾರೆ. ಇದು ಭಾಷಾವಾರು ರಾಜ್ಯಗಳನ್ನು ಮಾಡಿದ್ದರ ಉದ್ದೇಶ. ಅದರಂತೆ, ೧೯೫೬ರಲ್ಲಿ ಕರ್ನಾಟಕ ರಾಜ್ಯ ಮೂಡಿತು. ಈ ಲೆಕ್ಕದಲ್ಲಿ ಕರ್ನಾಟಕ ಸಂಸ್ಕೃತಿಯೊಳಗೆ ಕನ್ನಡಭಾಷೆ ಕೇಂದ್ರ ಸ್ಥಾನದಲ್ಲಿರುವುದು ಸಹಜ. ಆದರೆ ಕರ್ನಾಟಕದಲ್ಲಿ ವಾಸಿಸುವ ಎಲ್ಲರನ್ನೂ ನಾವು ಕನ್ನಡಿಗರು ಎಂದೇ ಕರೆಯುತ್ತೇವೆ. ತುಳು, ಉರ್ದು, ಕೊಡವ ಭಾಷಿಕರು, ತಂತಮ್ಮ ಭಾಷೆಯ ಜತೆಗೆ, ಪರಿಸರದಲ್ಲಿರುವ ಕನ್ನಡವನ್ನು ಉಸಿರಾಟಕ್ಕೆ ಗಾಳಿ ಪಡೆದಷ್ಟು ಸಹಜವಾಗಿ ಪಡೆದು ಕೊಂಡಿದ್ದಾರೆ.
ಹೀಗಾಗಿ ‘ಕನ್ನಡ ಸಂಸ್ಕೃತಿ’ ಗಿಂತ ‘ಕರ್ನಾಟಕ ಸಂಸ್ಕೃತಿ’ ಎಂಬ ವಿಶಾಲ ಕಲ್ಪನೆಯನ್ನು ಬಳಸುವುದೇ ನಮ್ಮ ಸಂದರ್ಭದಲ್ಲಿ ಸೂಕ್ತ. ಕರ್ನಾಟಕ ಸಂಸ್ಕೃತಿ ಮರದ ದಿಮ್ಮಿಯಂತಿಲ್ಲ. ಕೊಂಬೆರೆಂಬೆಗಳುಳ್ಳ ಮರದಂತಿದೆ. ಅದರಲ್ಲಿ ಕನ್ನಡದ ಜತೆಗೆ ತುಳು ಕೊಡವ ಸಾಹಿತ್ಯವೂ ಇದೆ. ದಖನಿ ಉರ್ದುವಿನಲ್ಲಿ ಗುಲಬರ್ಗದ ಬಂದೇನವಾಜನೂ, ತೆಲುಗಿನಲ್ಲಿ ಕೈವಾರದ ತಾತಯ್ಯನು ರಚಿಸಿದ ಸಾಹಿತ್ಯವೂ ಇದೆ. ಧರ್ಮಗಳ ಆಧಾರದಲ್ಲಿ ಹೇಳುವುದಾದರೆ, ಹಿಂದುಗಳು ಕ್ರೈಸ್ತರು ಜೈನರು ಮುಸ್ಲಿಮರು ಎಲ್ಲ ಸೇರಿಯೇ ಕರ್ನಾಟಕ ಸಂಸ್ಕೃತಿಯಾಗಿದೆ.
ಕನ್ನಡದ ಜತೆ ಕನ್ನಡೇತರ ಮನೆಮಾತಿನ ಜನ ಇಟ್ಟುಕೊಂಡಿರುವ ಸಂಬಂಧ ಸ್ವಾರಸ್ಯಕರವಾಗಿದೆ. ಕನ್ನಡಿಗರಾದ ಗಂಗೂಬಾಯಿ ಹಾನಗಲ್‌, ಭೀಮಸೇನಜೋಶಿ ಹಾಡುವ ಹಿಂದೂಸ್ಥಾನಿ ಸಂಗೀತಕ್ಕೆ ಭಾಷೆಯ ಹಂಗೇ ಇಲ್ಲ. ಅವರು ಹಿಂದೂಸ್ಥಾನಿ ರಚನೆಗಳನ್ನು ಹಾಡುತ್ತಾರೆ. ಅವರು ಹಾಡುವ ಅಭಂಗಗಳಂತೂ ಮರಾಠಿಯವು. ಡಿವಿಜಿ, ಮಾಸ್ತಿ, ಕೈಲಾಸಂ, ಬೇಂದ್ರೆ, ನಿಸಾರ್ ಅಹಮದ್‌, ಸಾರಾ ಅಬೂಬಕರ್, ನಾ ಡಿಸೋಜ, ಲಲಿತನಾಯಕ ಇವರು ಕನ್ನಡ ಲೇಖಕರು. ಆದರೆ, ಇವರಲ್ಲಿ ಯಾರ ಮನೆಮಾತೂ ಕನ್ನಡವಲ್ಲ! ಬದಲಾಗಿ ತಮಿಳು, ತೆಲುಗು, ಉರ್ದು, ಕೊಂಕಣಿ, ಲಂಬಾಣಿ. ನೂರು ವರುಷಗಳ ಹಿಂದೆ ಕನ್ನಡಕ್ಕೊಂದು ಅಪರೂಪದ ನಿಘಂಟನ್ನು ರಚಿಸಿಕೊಟ್ಟ ಕಿಟ್ಟೆಲನಂತೂ ಈ ದೇಶದವನೇ ಅಲ್ಲ, ಜರ್ಮನಿಯವನು!
ವಿಚಿತ್ರವಾದರೂ ವಾಸ್ತವ ಸಂಗತಿಯೆಂದರೆ, ಮನೆಮಾತು ಕನ್ನಡವಾದರೂ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡದ, ಕನ್ನಡ ಮಾತಾಡಲು ಕೀಳರಿಮೆ ಪಟ್ಟುಕೊಳ್ಳುವ ಬೇಕಾದಷ್ಟು ಜನ ನಮ್ಮಲಿದ್ದಾರೆ! ಬಹುಶ ಬೆಂಗಳೂರಿನಲ್ಲಿ ಜಾಸ್ತಿ ಇದ್ದಾರೆ. ವೈದ್ಯಕೀಯ ಇಂಜಿನಿಯರಿಂಗ್‌ಶಿಕ್ಷಣವನ್ನು, ೨೦೦೦ ವರ್ಷದ ಚರಿತ್ರೆಯುಳ್ಳ, ಕೋಟ್ಯಂತರ ಜನರ ಭಾಷೆಯಾದ ಕನ್ನಡದಲ್ಲಿ, ಇನ್ನೂ ಕಲಿಸಲು ಯಾಕೆ ಸಾಧ್ಯವಾಗಿಲ್ಲ? ಕನ್ನಡಕ್ಕೆ ಸವಾಲು ಒಡ್ಡಿರುವುದು ಇಂಗ್ಲೀಷೊ, ಇಲ್ಲಿನ ಜನಭಾಷೆಗಳಾದ ತುಳು ಕೊಡವ ಉರ್ದುಗಳೋ? ಸಂಸ್ಕೃತಿಯನ್ನು ಆವೇಶದಲ್ಲಿ ಗ್ರಹಿಸಿದರೆ ಇಂತಹ ದೊಡ್ಡಸತ್ಯಗಳು ತಪ್ಪಿಸಿಕೊಂಡು ಬಿಡುತ್ತವೆ. ಸಂಸ್ಕೃತಿಯನ್ನು ಹುಶಾರಾಗಿ ವ್ಯಾಖ್ಯಾನಿಸದಿದ್ದರೆ, ಅದು ನಿಜವೈಖರಿಯನ್ನು ಬಿಟ್ಟು ಸಂಗಾತಿಯನ್ನು ದ್ವೇಷಿಸುವ ಕೆಲಸ ಮಾಡುತ್ತದೆ.
ಸಂಸ್ಕೃತಿಯಲ್ಲಿ ಕೊಡುಕೊಳು
ಬಿ ಜಿ ಎಲ್‌ಸ್ವಾಮಿ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಎಂಬ ಪುಸ್ತಕ ಬರೆದಿದ್ದಾರೆ. ಅದರಲ್ಲಿ ನಾವು ನಿತ್ಯ ಬಳಸುವ ಮೆಣಸಿನಕಾಯಿ ಗೋಡಂಬಿ ಕಡಲೆ ಪಪ್ಪಾಯಿ ಹೇಗೆ ಪರದೇಶದಿಂದ ಬಂದವು ಎಂದು ವಿವರಿಸುತ್ತಾರೆ. ನಮ್ಮ ಸಂಸ್ಕೃತಿ ಎಂಬುದು ನಮಗೇ ವಿಶಿಷ್ಟವಾದ ಗುರುತುಗಳಿರುವ ಸಂಗತಿ ಎಂಬ ಮಾತು ನಿಜ. ಹಾಗೆಂದು ಅದು ಹೊರಗಿನಿಂದ ಬಂದ ಯಾವುದರ ಜತೆಗೂ ಬೆರೆಯದೆ, ಮೂಲರೂಪದಲ್ಲಿ ಶುದ್ಧವಾಗಿ ಉಳಿದುಬಂದಿದೆ ಎಂದರ್ಥವಲ್ಲ. ಸಂಸ್ಕೃತಿಯು ಭೂಗರ್ಭದಿಂದ ಹುಟ್ಟಿ ಅಲ್ಲೇ ಬಿದ್ದಿರುವ ಬಂಡೆಯಂತಿಲ್ಲ. ಅದು ನದಿಯಂತೆ. ನೂರು ಕಡೆಯಿಂದ ಬಂದ ಜಲಧಾರೆಗಳನ್ನು ಸೇರಿಸಿಕೊಂಡು ಹರಿಯುತ್ತದೆ. ಎಂತಲೇ ಕರ್ನಾಟಕ ಸಂಸ್ಕೃತಿ ಒಂದು ದ್ವೀಪವಾಗಿಲ್ಲ. ಕನ್ನಡದಲ್ಲಿ ಸಾವಿರಾರು ಇಂಗ್ಲಿಷು ಪೋರ್ಚುಗೀಸು ಫಾರಿಸಿ ಅರಬ್ಬಿ ಸಂಸ್ಕೃತ ಭಾಷೆಯ ಪದಗಳು ಸೇರಿವೆ. ಅವು ಎಷ್ಟು ನಮ್ಮವಾಗಿವೆ ಎಂದರೆ, ಉಗಿಬಂಡಿ ಆರಕ್ಷಕ ವೈದ್ಯ ಅಭಿಯಂತರ ಮುಂತಾದವು ‘ನಮ್ಮ’ ಪದಗಳಾದರೂ ವಿದೇಶಿ ಅನಿಸುತ್ತದೆ. ರೈಲು ಪೋಲಿಸು ಇಂಜಿನಿಯರು ಡಾಕ್ಟರು ಇವು ‘ವಿದೇಶಿ’ ಪದಗಳಾದರೂ ನಮ್ಮವು ಅನಿಸುತ್ತವೆ.
ಜೀವಂತವಾದ ಯಾವ ಭಾಷೆಯೂ ಯಾವ ಸಂಸ್ಕೃತಿಯೂ ಒಂಟಿಯಾಗಿ ನಿಲ್ಲುವ ಹಟ ಮಾಡುವುದಿಲ್ಲ. ಅವು ಕೊಡುಕೊಳು ಮಾಡುತ್ತ ಬೆಳೆಯುತ್ತವೆ. ಕೊಡುಕೊಳೆ ಮಾಡುವಾಗ ಉಪಯುಕ್ತವಾದುದನ್ನು ಉಳಿಸುಕೊಳ್ಳಲು ಯತ್ನಿಸುತ್ತೇವೆ. ಬಿಜಾಪುರದ ಗೋಳಗುಮ್ಮಟ ಗಮನಿಸಿ. ಅದರಲ್ಲಿ ಪರ್ಶಿಯನ್‌ವಾಸ್ತುಶೈಲಿಯು ಭಾರತೀಯ ಶೈಲಿಯ ಜತೆ ಅದ್ಭುತವಾಗಿ ಮಿಲನಗೊಂಡಿದೆ. ಹಂಪಿಯ ಕಮಲಮಹಲ್‌ಇಡಿಯಾಗಿ ಇಸ್ಲಾಮಿಕ್‌ಶೈಲಿಯಲ್ಲಿದೆ. ಬ್ರಿಟಿಷ್‌ಇಂಜಿನಿಯರುಗಳು ಕಟ್ಟಿಸಿದ ಈಗಿನ ಮೈಸೂರು ಅರಮನೆಯಲ್ಲಿ, ಯೂರೋಪಿನ, ಪರ್ಶಿಯಾದ ಹಾಗೂ ಭಾರತೀಯ ವಾಸ್ತುಶೈಲಿಗಳೆಲ್ಲ ಮಿಲನವಾಗಿವೆ.
ಕರ್ನಾಟಕ ಸಂಸ್ಕೃತಿಗೆ ಕರ್ನಾಟಕಕ್ಕೆ ಲಗತ್ತಾಗಿರುವ ಪ್ರಾಂತ್ಯಗಳೂ ತಮ್ಮ ಕೊಡುಗೆ ಕೊಟ್ಟಿವೆ. ದಕ್ಷಿಣಕನ್ನಡ ಜಿಲ್ಲೆಯ ಊಟ ಉಡುಗೆ ಜಾತ್ರೆ ದೈವಗಳು ಹಬ್ಬಗಳು, ಕೇರಳ ಸಂಸ್ಕೃತಿಯೊಂದಿಗೆ ಗಾಢ ಸಂಬಂಧ ಹೊಂದಿವೆ. ಉತ್ತರ ಕರ್ನಾಟಕದ ಊಟ ನಾಟಕ ಉಡುಪು ವ್ಯಾಪಾರ ಇವು ಮಹಾರಾಷ್ಟ್ರ ಸಂಸ್ಕೃತಿಯೊಂದಿಗೆ ಸಂಬಂಧ ಪಡೆದಿದೆ. ಇದೇ ರೀತಿ ಕೊಳ್ಳೇಗಾಲದಲ್ಲಿ ತಮಿಳುನಾಡಿನ, ಕೋಲಾರದಲ್ಲಿ ಆಂಧ್ರದ, ಕಾರವಾರದಲ್ಲಿ ಕೊಂಕಣಿಯ ನೆರಳು ಚಾಚಿದೆ.
ಕರ್ನಾಟಕ ಸಂಸ್ಕೃತಿಯ ಬೆಳೆಗೆ ಎಷ್ಟೊಂದು ಕಡೆಯ ಮೋಡಗಳು ಮಳೆಸುರಿಸಿವೆ! ಎಷ್ಟು ದಿಸೆಯಿಂದ ಬಂದ ಗಾಳಿ ಬೀಸಿದೆ! ನಮ್ಮೀ ಸಂಸ್ಕೃತಿ ನೆರೆಯ ರಾಜ್ಯಗಳ ಮಾತ್ರವಲ್ಲ, ಜಗತ್ತಿನ ಅನೇಕ ದೇಶಗಳ ಸಂಸ್ಕೃತಿ ಪ್ರಭಾವಗಳನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ರೂಪುತಳೆದಿದೆ. ಇದಕ್ಕೆ ಒಳ್ಳೆ ಉದಾಹರಣೆ ಎಂದರೆ, ಕರ್ನಾಟಕದಲ್ಲಿ ನಡೆಯುವ ಮೊಹರಂ ಹಬ್ಬ. ಮುಸ್ಲಿಮ್ಮರಿಲ್ಲದ ಹಳ್ಳಿಗಳಲ್ಲೂ ಮೊಹರಂ ಆಚರಣೆಗಳು ನಡೆಯುತ್ತವೆ. ಇಲ್ಲಿನ ಸೂಫಿಸಂತರ ದರ್ಗಾಳಿಗೆ, ಎಲ್ಲ ಧರ್ಮಗಳ ಜನ ನಡೆದುಕೊಳ್ಳುತ್ತಾರೆ. ಶಿರಹಟ್ಟಿ ಫಕೀರೇಶ, ಸಾವಳಗಿ ಶಿವಲಿಂಗ, ತಿಂತಿಣಿ ಮೋನಪ್ಪ ಮುಂತಾದ ಸಂತರ ಜಾಗಗಳು, ಸೂಫಿಪಂಥದ ಪ್ರಭಾವದಲ್ಲಿ ರೂಪುಗೊಂಡಿರುವ ಧಾರ್ಮಿಕ ಸಾಮರಸ್ಯದ ಕ್ಷೇತ್ರಗಳಾಗಿವೆ.
ಹಿರೀಕರ ಸಾಧನೆ ಮಾತ್ರವೆ?
ಸಂಸ್ಕೃತಿ ಎನ್ನುವುದು ನಮ್ಮ ಪೂರ್ವಿಕರು ಗೈದ ಸಾಧನೆ ಎಂಬ ನಂಬಿಕೆ ಸಾಮಾನ್ಯವಾಗಿ ಇದೆ. ಹೀಗೆ ನಂಬಿದವರಿಗೆ ಸಂಸ್ಕೃತಿ ಎಂದೊಡನೆ ಗತಕಾಲವೆ ನೆನಪಾಗುವುದು. ಗತಕಾಲದ  ಮೂಲಕ ನೋಡುತ್ತ ಹೋದರೆ, ಅದರಲ್ಲಿ ವರ್ತಮಾನದ ಪಾತ್ರವೆ ಕಾಣುವುದಿಲ್ಲ. ಆದರೆ ಸಂಸ್ಕೃತಿ  ಕೇವಲ ಗತಕಾಲದ  ಚಿತ್ರವಲ್ಲ ಅಥವಾ ಪೂರ್ವಜರು ಬಿಟ್ಟುಹೋದ ಆಸ್ತಿಯಲ್ಲ. ಅದು ವರ್ತಮಾನದವರ ಸಾಧನೆ ಸೋಲುಗಳನ್ನೂ ಒಳಗೊಂಡಿದೆ. ಹೀಗಾಗಿ ಕರ್ನಾಟಕ ಸಂಸ್ಕೃತಿಯಲ್ಲಿ ಹಂಪಿ ಹಳೇಬೀಡು ಶ್ರವಣಬೆಳಗೊಳ ಬಿಜಾಪುರಗಳಲ್ಲಿರುವ ಶಿಲ್ಪಕಲೆ ವಾಸ್ತುಕಲೆಗಳು ಮಾತ್ರವಲ್ಲ. ಈಗ ಕಟ್ಟುತ್ತಿರುವ ಕಟ್ಟಡಗಳು ಇವೆ. ವಿಧಾನಸೌಧದಿಂದ ಹಿಡಿದು ನಮ್ಮ ಜನ ವಾಸಕ್ಕೆ ಕಟ್ಟಿಕೊಂಡಿರುವ ಮನೆಗಳೂ ಇವೆ. ಸಂಸ್ಕೃತಿಯ ನದಿಯೊಳಗೆ ನೆಲದಾಳದಿಂದ ಉಕ್ಕುವ ಒರತೆ ನೀರೂ ಉಂಟು. ಹೊಸದಾಗಿ ಬೀಳುವ ಮಳೆನೀರೂ ಉಂಟು.
ಸಂಸ್ಕೃತಿಯನ್ನು ಚರಿತ್ರೆಯ ಪ್ರಸಿದ್ಧ ರಾಜರಾಣಿಯರಲ್ಲಿ ಅವರ ಅರಮನೆ ಕೋಟೆಗಳಲ್ಲಿ ಹುಡುಕುವ ಮತ್ತೊಂದು ಪದ್ಧತಿಯಿದೆ. ಅರಮನೆ ಕೋಟೆಗಳನ್ನೆಲ್ಲ ಕಟ್ಟಿದವರು. ಸಾಮಾನ್ಯ ಜನರೇ. ಆದರೆ ಹೆಸರು ಉಳಿದಿರುವುದು ಮಾತ್ರ ಕಟ್ಟಿಸಿದವರದು! ಇಂತಹ ಸಂದರ್ಭದಲ್ಲಿ ಸಮುದಾಯಗಳ ಮೂಲಕ ಸಂಸ್ಕೃತಿಯನ್ನು ನೋಡಲು ಯತ್ನಿಸಬೇಕು. ಚರಿತ್ರೆಯನ್ನು ಅಧಿಕಾರಸ್ಥರ ಕಣ್ಣಲ್ಲಿ ನೋಡುವಾಗ, ಕೆಲವರ ಸುಖಕ್ಕಾಗಿ ಹಲವರು ಕಷ್ಟಪಡುವುದು ಸರಿ ಅನಿಸತೊಡಹುತ್ತದೆ; ಜನರ ದುಡಿಮೆ ಸೇವೆ ನಿಷ್ಠೆಗಳು ತ್ಯಾಗದಂತೆಯೂ, ಜನ ನ್ಯಾಯಕ್ಕಾಗಿ ಮಾಡುವ ಪ್ರತಿಭಟನೆ ದ್ರೋಹವಾಗಿ ಕಾಣತೊಡಗುತ್ತದೆ.
ನಾವು ಯಾವುದನ್ನು ‘ತ್ಯಾಗ’ ಎನ್ನುತ್ತೇವೆ – ಇದು ಕೇಳಿಕೊಳ್ಳಬೇಕಾದ ಪ್ರಶ್ನೆ. ನಮ್ಮ ಪ್ರಾಚೀನರ ಬದುಕಿಗೆ ಸಂಬಂಧಿಸಿದಂತೆ ಇರುವ ‘ವೀರಗಲ್ಲು’ ಹಾಗೂ ‘ಸಿಡಿತಲೆಕಲ್ಲು’ ಗಳನ್ನು ಗಮನಿಸೋಣ. ವೀರಗಲ್ಲುಗಳನ್ನು ಮೂರು ಕಾರಣಕ್ಕಾಗಿ ನಿಲ್ಲಿಸಲಾಗುತ್ತಿತ್ತು. ಊರಿಗೆ ಕಳ್ಳರು ಮುತ್ತಿದಾಗ, ಊರ ಮಹಿಳೆಯರನ್ನು ಹೊರಗಿನವರು ಆಪಹರಿಸಿದಾಗ, ಊರ ದನಗಳನ್ನು – ಪರ ಊರಿನವರು ಕದ್ದು ಒಯ್ಯುವಾಗ ರಕ್ಷಿಸುತ್ತ ಹೋರಾಡಿ ಜೀವತೆತ್ತ ವೀರರಿಗೆ ವೀರಗಲ್ಲು ನಿಲ್ಲಿಸಿ ಜನ ಕೃತಜ್ಞತೆ ಸಲ್ಲಿಸುತ್ತಿದ್ದರು. ಸಿಡಿತಲೆ ಕಲ್ಲುಗಳೆಂದರೆ, ರಾಜನಿಗೆ ಸೇವಕರು ತೋರಿಸುತ್ತಿದ್ದ ಸ್ವಾಮಿನಿಷ್ಠೆಯ ಸ್ಮಾರಕಗಳು ರಾಜನಿಗೆ ಮಕ್ಕಳಾಗಲೆಂದು ಅಥವಾ ಯುದ್ಧದಲ್ಲಿ ಗೆಲವು ಸಿಗಲೆಂದು ಹರಸಿಕೊಂಡವರು, ತಮ್ಮ ತಲೆ ಕತ್ತರಿಸಿಕೊಂಡು ಹರಕೆ ತೀರಿಸುತ್ತಿದ್ದರು. ಇದರ ರೀತಿ ಭಯಾನಕವಾಗಿತ್ತು.
ವೀರಗಲ್ಲಿನದು ಸಮುದಾಯಕ್ಕಾಗಿ ಪ್ರಾಣತ್ಯಾಗ ಮಾಡುವ ಶೌರ್ಯವಾದರೆ, ಸಿಡಿತಲೆಯದು ಧಣಿಗಾಗಿ ಸೇವಕರು ತೋರಿದ ನಿಷ್ಠೆ. ಈ ಎರಡೂ ಮುಖಗಳು ಕರ್ನಾಟಕದ ಗತಕಾಲದ ಚರಿತ್ರೆಯಲ್ಲಿವೆ. ಪ್ರಜಾಪ್ರಭುತ್ವದಲ್ಲಿ ಬದುಕ್ಕುತ್ತಿರುವ ನಾವು. ಇದರಲ್ಲಿ ಯಾವುದನ್ನು ‘ನಮ್ಮ ಸಂಸ್ಕೃತಿ’ ಎಂದು ಹೆಮ್ಮೆಯಿಂದ ಮಂಡಿಸಬೇಕು? ಚರಿತ್ರೆಯನ್ನು ಧಣಿಗಳ ಮೂಲಕ ನೋಡುವುದಕ್ಕೂ ಜನರ ಮೂಲಕ ನೋಡುವುದಕ್ಕೂ ವ್ಯತ್ಯಾಸ ಮಾಡುವ ಎಚ್ಚರ ತೋರಿಸಬೇಕಾದ್ದು ಇಲ್ಲೇ.
ವೈಭವೀಕರಣ ಮತ್ತು ಅಭಿಮಾನ
ಕರ್ನಾಟಕ ಸಂಸ್ಕೃತಿಯನ್ನು ಗತವೈಭವದ ಚಿತ್ರಗಳ ಮೂಲಕ ಕಟ್ಟಿ ತೋರಿಸುವ ರೂಢಿ ಕನ್ನಡದಲ್ಲಿದೆ. ಕನ್ನಡಿಗರು ಶೂರರೂ ಚೆಲುವರೂ ಅಭಿಮಾನಿಗಳೂ ವಿವೇಕಿಗಳೂ ರಸಿಕರೂ ಆಗಿದ್ದರು. ‘ಕವಿರಾಜಮಾರ್ಗ’ ವರ್ಣಿಸುತ್ತದೆ. ಅಂಡಯ್ಯನೆಂಬ ಕವಿಯ ಪ್ರಕಾರ, ಕನ್ನಡನಾಡಿನಲ್ಲಿ ತೆಂಗು ಅಡಕೆ ಮಾವು ಸಂಪಿಗೆಯ ಮರಗಳು, ಪಕ್ಷಿಗಳಲ್ಲಿ ಗಿಳಿ ಕೋಗಿಲೆ ನವಿಲುಗಳು ಮಾತ್ರ ಇದ್ದವಂತೆ. ತಮ್ಮ ದೇಶವನ್ನು ಭಾವುಕವಾಗಿ ಉತ್ಪೇಕ್ಷೆಯಿಂದ ಬಣ್ಣಿಸಿಕೊಳ್ಳುವ ಸ್ವಭಾವ ಎಲ್ಲ ಕಡೆ ಇದ್ದಂತಿದೆ. ಆದರೆ ಇಂಥ ಉದಾಹರಣೆಗಳನ್ನೆ ಕಟ್ಟಿ ತೋರಿಸಿದರೆ, ಸಂಸ್ಕೃತಿಯ ನಿಜವಾದ ನೋಟ ಸಿಕ್ಕುತ್ತದೆಯೇ? ಸಂಸ್ಕೃತಿಯಲ್ಲಿ ಅಭಿಮಾನದ ಜತೆ ಜತೆಯಲ್ಲಿ ಲಜ್ಜೆಯ ಅಂಶಗಳೂ ಇರುತ್ತವೆ. ಕರ್ನಾಟಕದಲ್ಲಿ ಗುಣವಂತರು ಶೂರರು ಇದ್ದರು, ಈಗಲೂ ಇದ್ದಾರೆ. ಇಂತಹವರ ಜತೆ, ಕಳ್ಳರೂ ಅಪ್ರಾಮಾಣಿಕರೂ ಶೂರರು ಇದ್ದರು, ಟಿಪ್ಪುನಿನಂತಹ ಕನಸುಗಾರನೂ ಸ್ವಾಭಿಮಾನಿಯೂ ಇದ್ದ ಕಾಲದಲ್ಲೆ ಮೀರ್‌ಸಾಧಿಕನಂತಹ ಸಮಯಸಾಧಕನೂ ಇದ್ದನಲ್ಲವೆ? ಪ್ರಾಚೀನ ಕರ್ನಾಟಕದಲ್ಲಿ ಜೀತಪದ್ಧತಿಯಿತು, ಅಸ್ಪೃಶ್ಯತೆಯಿತ್ತು. ಮಹಿಳೆಯರ ಮಾರಾಟವಿತ್ತು. ಬಡತನವಿತ್ತು. ‘ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲ. ಹಸಿವಿನ ಬೆಂಕಿ ಅವರನ್ನು ಸಾಕಷ್ಟು ಸುಟ್ಟಿದೆ. ಆದ್ದರಿಂದ ಬಡವರಿಗೆ ಸಾವು ಕೊಡಬ್ಯಾಡ’ ಎಂಬ ಅರ್ಥದ ಜನಪದ ಗೀತೆಯನ್ನು ನೆನೆಯಬೇಕು. ಬರಗಾಲ ಬಂದಾಗ ಜನ, ಹೆತ್ತ ಮಕ್ಕಳನ್ನು ಮರಾಟ ಮಾಡುತ್ತಿದ್ದರು ಎಂದು ‘ಮಕ್ಕಳ ಮಾರ್ಯಾರ ಮಳೆರಾಯ’ ಎಂಬ ಹಾಡು ಹೇಳುತ್ತದೆ. ಇವೆಲ್ಲ ಕುರೂಪಗಳು ದುಃಖಗಳು ಬೇರೆ ವೇಷದಲ್ಲಿ ಈಗಲೂ ಉಳಿದುಬಂದಿವೆ. ಇವನ್ನೆಲ್ಲ ಕೂಡಿಸಿ ನೋಡಿದಾಗಲೇ ನಮ್ಮ ಸಂಸ್ಕೃತಿಯ ವಾಸ್ತವ ಚಿತ್ರ ಸಿಕ್ಕುವುದು.
ಸಂಸ್ಕೃತಿಯಲ್ಲಿ ಸ್ವವಿಮರ್ಶೆ
ಹಾಗಾದರೆ ವರ್ತಮಾನದ ನಮಗೆ ಚರಿತ್ರೆಯ ಸುಂದರವಾದ ಅಭಿಮಾನ ಹುಟ್ಟಿಸುವ ನೆನಪುಗಳು ಬೇಡವೇ? ಅವು ಬೇಕು. ಅವುಗಳ ನೆನಪಿನಿಂದ ನಮ್ಮ ಕಣ್ಣೆದುರಿನ ಕೇಡುಗಳ ವಿರುದ್ಧ ಹೋರಾಡಲು ಚೈತನ್ಯ ಸಿಗುತ್ತವೆ. ಸಂಸ್ಕೃತಿಯಲ್ಲಿ ಇಂತಹ ಅಬಿಮಾನದ ಮುಖಗಳು ಬೇಕಾದಷ್ಟಿವೆ. ಆದರೆ ಅಭಿಮಾನವು ಕೊಂಚ ಜಾರಿದರೂ ವೈಭವೀಕರಣಕ್ಕೆ ಹೋಗಿಬಿಡುತ್ತದೆ. ಕರ್ನಾಟಕ ಸಂಸ್ಕೃತಿ ಬರಿ ವೈಭವಗಳ ಕಥನವಲ್ಲ. ಅಲ್ಲಿ ನಾವು ಹೆಮ್ಮೆ ಪಡಲಾಗದ ನೂರಾರು ಕಪ್ಪುಕಲೆಗಳಿವೆ. ಯಾವತ್ತೂ ಸಾಧನೆಗಳು ಹೆಮ್ಮೆಯಿಂದ ತಲೆಯೆತ್ತಿಸುತ್ತವೆ. ನೋವು ಪಶ್ಚಾತ್ತಾಪಗಳು ಆತ್ಮವಿಮರ್ಶೆಗೆ ಹಚ್ಚುತ್ತವೆ. ಆತ್ಮವಿಮರ್ಶೆ ಇಲ್ಲದೆ ಯಾವ ದೇಶವೂ ದೊಡ್ಡದಾಗಿ ಬೆಳೆದಿಲ್ಲ. ಚರಿತ್ರೆಯನ್ನಾಗಲಿ ವರ್ತಮಾನವನ್ನಾಗಲಿ ಅಲ್ಲಿರುವ ಕೇಡೂ ನೋವು ಸೋಲುಗಳ ಸಮೇತ ಸ್ವೀಕರಿಸಬೇಕು. ನಮ್ಮಲ್ಲಿ ಕೊರತೆಯಿದೆ ಎಂದು ಒಪ್ಪಿಕೊಂಡರೆ, ಅದನ್ನು ತೊಡೆಯಲು ಯತ್ನಿಸಬಹುದು, ನೋವಿರದ ಸುಂದರ ಸಮಾಜ ಕಟ್ಟಿಕೊಳ್ಳುವ ಕನಸನ್ನು ಕಾಣಬಹುದು ತಾನೆ.
ಸಂಘರ್ಷದ ನೆನಪುಗಳು
ಕರ್ನಾಟಕ ಸಂಸ್ಕೃತಿ ಬರಿ ಸಾಮರಸ್ಯ ತ್ಯಾಗ ನಿಷ್ಠೆಗಳಿಂದ ರೂಪುಗೊಂಡಿಲ್ಲ ಅನೇಕ ಸ್ವಾಭಿಮಾನಿಗಳು ಅನ್ಯಾಯದ ವಿರುದ್ಧ ಮಾಡಿದ ಸಂಘರ್ಷಗಳಿಂದಲೂ ರೂಪುಗೊಂಡಿದೆ. ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆ ಸಂಭವಿಸುವುದೇ ಪ್ರಶ್ನಿಸುವಿಕೆಯಿಂದ, ಪ್ರತಿರೋಧದಿಂದ. ನಮ್ಮ ಜನ ಬಡವರಾಗಿದ್ದರು. ಆದರೆ ಅಭಿಮಾನ ಹೀನರಾಗಿರಲಿಲ್ಲ. ಕಣಸೆ ಜಟ್ಯ ಎಂಬುವನ ಕತೆ ನೆನಪಾಗುತ್ತದೆ. ೧೯೫೦ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾಗೋಡು ಹಳ್ಳಿಯಲ್ಲಿ ಗೇಣಿರೈತರು ಉಳುವವನಿಗೆ ಭೂಮಿ ಎಂದು ಹೋರಾಟ ಮಾಡಿದರು. ಅವರಲ್ಲಿ ಕಣಸೆ ಜಟ್ಯನೂ ಒಬ್ಬ. ಕಾಗೋಡಿನಲ್ಲಿ ಬಯಲಾಟ ನಡೆವಾಗ ಜಮೀನುದಾರರೊಬ್ಬರೇ ಕುರ್ಚಿಯ ಮೇಲೆ ಕೂರುವ ಸಂಪ್ರದಾಯ ಇತ್ತು. ಉಳಿದ ಜನರೆಲ್ಲ ನೆಲದ ಮೇಲೆ ಕೂರುತ್ತಿದ್ದರು. ಆದರೆ ಜಟ್ಯ ‘ನಮಗೆ ಭೂಮಿ ಬಿಟ್ಟುಕೊಡದ ಧಣಿಯ ಮುಂದೆ ಯಾಕೆ ತಗ್ಗಬೇಕು’ ಎಂದು, ಮನೆಯಿಂದ ಒಂದು ಕುರ್ಚಿ ತಂದು ಕೂರುತ್ತಿದ್ದನಂತೆ. ಪಕ್ಕದ ಊರಿಲ್ಲಿ ಬಯಲಾಟ ನಡೆದರೆ, ಅಲ್ಲಿಗೂ ಕುರ್ಚಿ ಹೊತ್ತುಕೊಂಡು ಹೋಗುತ್ತಿದ್ದನಂತೆ.  ಇದು ನೋಡಲು ಸಣ್ಣ ಘಟನೆಯಂತೆ ತಮಾಶೆಯಂತೆ ಕಾಣುತ್ತದೆ. ಆದರೆ ಅಳದಲ್ಲಿ ಉಳ್ಳವರಿಗೆ ಬಾಗದೆ ತಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಜನ ಮಾಡುವ ಸೆಣಸಾಟವನ್ನು ಸೂಚಿಸುತ್ತದೆ. ಕರ್ನಾಟಕದ ಚರಿತ್ರೆಯಲ್ಲಿ ಇಂತಹ ಜನ ಉದ್ದಕ್ಕೂ ದಿಟ್ಟ ಹೋರಾಟ ಮಾಡಿಕೊಂಡು ಬಂದಿರುವ ನಿದರ್ಶನಗಳಿವೆ. ‘ಹೋರಾಟ’ ವೆಂದರೆ ರಾಜನಿಗಾಗಿ ಸೈನಿಕರು ಮಾಡಿದ ಯುದ್ಧಗಳು ಮಾತ್ರವಲ್ಲ. ಇಡೀ ನಾಡಿನ ಬಿಡುಗಡೆಗಾಗಿ ಮಾಡಿದ ವಿಶಾಲ ಯುದ್ಧಗಳು ಹೌದು. ಉಳ್ಳಾಲದ ರಾಣಿ ಅಬ್ಬಕ್ಕ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾಯ, ಕಿತ್ತೂರಚೆನ್ನಮ್ಮ, ಟಿಪ್ಪುಸುಲ್ತಾನ ಇವರೆಲ್ಲ ವಿದೇಶಿ ಆಕ್ರಮಣಕಾರರ ವಿರುದ್ಧ ಮಾಡಿದ ಯುದ್ಧಗಳು ಇಂತಹವು.ರೈತರು ಸರಕಾರಕ್ಕೆ ತೆರಿಗೆ ಕಟ್ಟದೆ ತೋರಿದ ಅಸಹಕಾರವೂ ಇನ್ನೊಂದು ಬಗೆಯ ಯುದ್ಧವೆ. ಅಂಕೋಲದಲ್ಲಿ ಇಂತಹ ಕರನಿರಾಕರಣೆ ಚಳುವಳಿ ನಡೆಯಿತು. ಗದಗ ಜಿಲ್ಲೆಯ ಕೊರ್ಲಹಳ್ಳಿಯಲ್ಲಿ ೧೯೫೭ರ ಸುಮಾರಿಗೆ ಬ್ರಿಟಿಷರ ವಿರುದ್ಧ ೨೬ ಜನ ದಂಗೆಯೆದ್ದರು. ಅವರನ್ನು ಹಿಡಿದು ಗಲ್ಲಿಗೇರಿಸಲಾಯಿತು. ೧೯೪೨ರಲ್ಲಿ ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ ಕೂಡ ಬ್ರಿಟಿಷ್ ಸರಕಾರದ ವಿರುದ್ಧ ಬಂಡೆದ್ದ ಹಳ್ಳಿ ಜನರನ್ನು ಗಲ್ಲಿಗೇರಿಸಲಾಯಿತು. ಈ ಜನರನ್ನು ಚರಿತ್ರೆಯ ಪುಸ್ತಕಗಳು ನಾಯಕರಂತೆ ದಾಖಲಿಸದೆ ಇರಬಹುದು. ಆದರೆ ಇವರ ಧೀರಸಾವು ನಮ್ಮ  ಸಂಸ್ಕೃತಿಯ ಸತ್ವವನ್ನು ರೂಪಿಸಿದೆ. ಉಳ್ಳಾಲ, ಶ್ರೀರಂಗಪಟ್ಟಣ, ಕಿತ್ತೂರು ಸಂಗೊಳ್ಳಿ, ಹಲಗಲಿ, ನರಗುಂದ ಇವೆಲ್ಲ   ಕರ್ನಾಟಕ ಸಂಸ್ಕೃತಿಯನ್ನು ಸಂಘರ್ಷದ ಚಾಣದಿಂದ ಕಟೆದ ತಾಣಗಳು, ೨೦ನೇ ಶತಮಾನವಂತೂ ಜನರ ಚಳುವಳಿಗಳಿಂದ ತುಂಬಿ ಹೋಗಿದೆ. ಕನ್ನಡ ಚಳುವಳಿ, ರೈತ ಚಳುವಳಿ, ದಲಿತ ಚಳುವಳಿ, ಪರಿಸರ ಚಳುವಳಿ, ಮಹಿಳಾ ಹೋರಾಟ, ನದಿ ಉಳಿಸುವ ಚಳುವಳಿ, ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಹೋರಾಟ ಇವೆಲ್ಲ ನಮ್ಮ ಸಂಸ್ಕೃತಿಗೆ ಆಕಾರ ಕೊಟ್ಟಿವೆ.
ಶಿಖರಗಳ ಕೆಳಗೆ ನೆಲ
ಚರಿತ್ರೆಯಲ್ಲಿ ನಾಯಕರಿತ್ತಾರೆ. ಬಸವಣ್ಣ, ಅಕ್ಕಮಹಾದೇವಿ, ಕುಮಾರರಾಮ, ಮಂಟೇಸ್ವಾಮಿ, ಕುಮಾರವ್ಯಾಸ, ಕನಕದಾಸ, ಟಿಪ್ಪುಸುಲ್ತಾನ, ಸರ್‌ಎಂವಿ, ಕುವೆಂಪು, ಶಿವರಾಮಕಾರಂತ, ಗುಬ್ಬಿವೀರಣ್ಣ, ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ರಾಜಕುಮಾರ‍್, ಪಿ ಲಂಕೇಶ್‌ಇವರೆಲ್ಲ ಕರ್ನಾಟಕ ಸಂಸ್ಕೃತಿಯ ನಾಯಕರೆ, ಆದರೆ ನಾಯಕರ ಮೂಲಕ ಸಂಸ್ಕೃತಿ ನೋಡುವಾಗ ಮರೆತುಹೋಗುವ ಒಂದು ಅಂಶವಿದೆ. ಅದೆಂದರೆ ಈ ನಾಯಕರು ತಮ್ಮ ಪ್ರತಿಭೆ ತ್ಯಾಗ ದುಡಿಮೆಗಳಿಂದ ಮಾತ್ರ ದೊಡ್ಡವರಾದವರಲ್ಲ. ತಮ್ಮ ಪರಿಸರದಲ್ಲಿದ್ದ ಜನ ಬಲದಿಂದಲೂ ದೊಡ್ಡವರಾದವರು. ಬಸವಣ್ಣನನ್ನು ಅವನ ಜತೆಗಿದ್ದ ನೂರಾರು ಸಂಗಾತಿಗಳಿಂದ ಬೇರೆಮಾಡಿ ಹೇಗೆ ನೋಡುವುದು? ಶಿಖರಗಳು ಗಗಚುಂಬಿ ಯಾಗಿರಬಹುದು. ಆದರೆ ಅವು ನೆಲದ ಮೇಲೆಯೆ ನಿಲ್ಲಬೇಕು ತಾನೇ? ನಾಯಕರು ರಂಗದ ಮೇಲೆ ಬರುತ್ತಾರೆ.ನಾಯಕರಲ್ಲದ ಲಕ್ಷಾಂತರ ಜನ ರಂಗದ ಹಿಂದೆ ದುಡಿಯುತ್ತಾರೆ. ಎಷ್ಟೋ ಸುಂದರವಾದ ಜನಪದ ಹಾಡುಗಳನ್ನು ಕಟ್ಟಿದ ಪ್ರತಿಭಾವಂತ ಕವಿ ಯಾರೆಂದು ಗೊತ್ತೆ ಅಗುವುದಿಲ್ಲ. ಸಂಸ್ಕೃತಿ ಒಂದು ಕಾಡಿದ್ದಂತೆ. ಅದರಲ್ಲಿ ಆಕಾಶದೆತ್ತರಕ್ಕೆ ಬೆಳೆದ ಮರಗಳೂ ಇವೆ. ಹೆಸರಿಲ್ಲದ ಸಣ್ಣಪುಟ್ಟ ಗಿಡಗಳೂ ಇವೆ. ನೆಲದಲ್ಲಿ ಹರಡಿರುವ ಹುಲ್ಲೂ ಇದೆ. ಇವೆಲ್ಲ ಸೇರಿತಾನೆ ಒಂದು ಕಾಡು?
ಸಮುದಾಯದ ಸೃಜನಶೀಲತೆ
ಸಮುದಾಯಗಳ ಮೂಲಕ ನೋಡತೊಡಗಿದರೆ ಸಂಸ್ಕೃತಿಯ ವ್ಯಾಖ್ಯೆ ವಿಶಾಲಗೊಳ್ಳುತ್ತದೆ. ಆಗ ಅದು ಹೆಸರಿಲ್ಲದ ಅಧಿಕಾರವಿಲ್ಲದ ಲಕ್ಷಲಕ್ಷ ಮಾನವರ ಕಥನವನ್ನೂ ಒಳಗೊಳ್ಳಲಾರಂಭಿಸುತ್ತದೆ. ಆಗ ಧೀಮಂತ ಮಹಿಳೆಯರಾದ ಅತ್ತಿಮಬ್ಬೆ ಅಕ್ಕಮಹಾದೇವಿ ಅಬ್ಬಕ್ಕ ಕಿತ್ತೂರಚೆನ್ನಮ್ಮ ಚಾದಂಬೀಬಿಯರ ಜತೆ, ಸಾಲುಮರದ ತಿಮ್ಮಕ್ಕನೂ ಸೇರುತ್ತಾಳೆ. ಹಾದಿ ಹೋಕರಿಗೆ ನೆರಳನ್ನು ನೀಡುವ ನೂರಾರು ಮರಗಳನ್ನು ಒಂದು ಬಡಕುಟುಂಬ ಸಾಕಿ ಬೆಳೆಸಿತು. ಇದರ ಹಿಂದೆ ಕೆಲಸ ಮಾಡಿರುವ ಮನಸ್ಸು, ಕರ್ನಾಟಕ ಸಂಸ್ಕೃತಿಯ ಅಪೂರ್ವ ಸೃಷ್ಟಿಯಲ್ಲದೆ ಮತ್ತೇನು?
ಸಮುದಾಯದ ಸೃಜನಶೀಲತೆ ಎಂದರೆ, ಜನ ತಮ್ಮ ಶ್ರಮದ ಭಾಗವಾಗಿ ಪ್ರಕಟಿಸುವ ಜೀವಂತಿಕೆ; ತಮ್ಮ ಸುಖಸಂಭ್ರಮ ದುಃಖದುಗುಡಗಳ ಭಾಗವಾಗಿ ಚಿಮ್ಮಿಸುವ ಮಾನವೀಯಸ್ತೆ. ಗದಗ ಜಿಲ್ಲೆಯ ಮುಳಗುಂದದ ಹತ್ತಿರ ಒಬ್ಬ ರೈತ, ಬೆರ್ಚಪ್ಪನನ್ನು ಮಾಡುತ್ತಾನೆ. ಬೆಳೆದ ಬೆಳೆಗೆ ಕೆಟ್ಟದೃಷ್ಟಿ ತಾಗದಿರಲಿ ಎಂಬ ನಂಬಿಕೆಯಿಂದ ನಿಲ್ಲಿಸುವ ಬೆದರು ಬೊಂಬೆಗೆ ‘ಬೆರ್ಚಪ್ಪ’ ಎನ್ನುತ್ತಾರೆ. ಈ ರೈತ ಬೆರ್ಚಪ್ಪನನ್ನು ಎಲ್ಲರಂತೆ ಅಂಗಿಯೊಳಗೆ ಹುಲ್ಲುತುಂಬಿ ಮಡಕೆಯ ತಲೆಯಿಟ್ಟು ಮಾಡುತ್ತಿರಲಿಲ್ಲ. ಅಲ್ಲಿ ಇಲ್ಲಿ ಬಿದ್ದಿದ್ದ ಬಣ್ಣದ ಚಿಂದಿಬಟ್ಟೆ ಆರಿಸಿತಂದು ಮಾನವಾಕೃತಿಯ ಗೊಂಬೆ ಮಾಡುತ್ತಿದ್ದ. ಅವು ಎಷ್ಟು ಸುಂದರ ಗೊಂಬೆಗಳಾಗುತ್ತಿದ್ದವು ಎಂದರೆ, ಅವನ್ನು ನೋಡಲು ದೂರದಿಂದ ಜನ ಬರುತ್ತಿದ್ದರು. ರೈತ ಇವನ್ನು ಕಲೆ ಎಂದು ಮಾಡಲಿಲ್ಲ. ಬೆರ್ಚಪ್ಪ ಎಂದು ಮಾಡಿದರೆ ಅದು ಕಲೆಯೂ ಆಯಿತು. ಇದೇ ರೀತಿ, ನಮ್ಮ ಮಡಕೆ ಮಾಡುವಾಗ, ಬುಟ್ಟಿ ಹೆಣೆಯುವಾಗ ಕೌದಿ ಹೊಲೆಯುವಾಗ ಜನ ಕಲಾತ್ಮಕತೆ ಮೆರೆಯುತ್ತಾರೆ. ಹಳ್ಳಿಗಾಡಿನಲ್ಲಿ ಇಂತಹ ಸಾವಿರಾರು ಪ್ರತಿಭೆಗಳಿವೆ. ಇವು ನಮ್ಮ ಸೃಜನಶೀಲತೆಯಿಂದ ಇಡೀ ಪರಿಸರವನ್ನು ಜೀವಂತವಾಗಿ ಇಡುತ್ತವೆ. ರೈತರು ಬೆಳೆ ತಿನ್ನಲು ಬರುವ ಪ್ರಾಣಿಪಕ್ಷಿಗಳನ್ನು ಓಡಿಸಲು ಅಥವಾ ಬೇಟೆಯಾಡಲು ಮಾಡಿಕೊಂಡಿರುವ ನೂರಾರು ಉಪಕರಣಗಳಲ್ಲಿ, ಪಾರಂಪರಿಕ ತಂತ್ರಜ್ಞಾನದ ಸಾಧನೆಯಿದೆ. ನಮ್ಮ ನಾಡಮದ್ದು, ಕಾಡಿನ ಜನ ನೂರಾರು ವರುಷಗಳಿಂದ ಮಾಡಿದ ಪ್ರಯೋಗಗಳ ಫಲವಾದರೆ, ನಮ್ಮ ತಿಂಡಿತಿನುಸುಗಳು ಅಡುಗೆಮನೆಗಳಲ್ಲಿ ಸಾವಿರಾರು ವರುಷಗಳ ಪ್ರಯೋಗಶೀಲತೆಯ ಫಲವಾಗಿವೆ.
ದುಡಿವ ಜನರ ಸೃಜನಶೀಲತೆಯ ಅಸಲಿ ಮುಖ ಕಾಣಬೇಕಾದರೆ, ಜಾನಪದಕ್ಕೆ ಹೋಗಬೇಕು. ಜನಪದ ಸಾಹಿತ್ಯ, ಸಂಗೀತ, ಕುಣಿತ, ನಾಟಕ, ಅಡುಗೆ, ವೈದ್ಯ, ಆಚರಣೆಗಳ ಒಂದು ದೊಡ್ಡಲೋಕವೇ ಅಲ್ಲಿದೆ. ಮಂಟೆಸ್ವಾಮಿ, ಮಲೆಯ ಮಾದೇಶ್ವರ, ಜುಂಜಪ್ಪ, ಬೀರಪ್ಪ, ಎಲ್ಲಮ್ಮ ಮುಂತಾದ ದೈವಗಳ ಮೇಲೆ, ಜನಪದರು ರಾತ್ರಿಯಿಡಿ ಹಾಡಬಲ್ಲ ಕಾವ್ಯ ಕಟ್ಟಿದ್ದಾರೆ. ಗಣ್ಯರೆನಿಸಿಕೊಂಡ ವಿಜ್ಞಾನಿಗಳು ಲೇಖಕರು ಸಂಗೀತಗಾರರು ಚಿತ್ರಗಾರರು ನಟರು ಮಾಡಿದ ಸಾಧನೆ ಮೂಲಕವೆ ಸಂಸ್ಕೃತಿ ಚಿತ್ರ ಬರೆಯಲು ಸಾಧ್ಯವಿಲ್ಲ. ಹಾಗೆ ಬರೆದರೆ, ನಾಡಿನ ಕೋಟ್ಯಂತರ ದುಡಿವ ಜನ, ನೂರಾರು ವರ್ಷಗಳಿಂದ ಕಟ್ಟಿಕೊಂಡಿರುವ ದೊಡ್ದಲೋಕ ಹೊರಗುಳಿದು ಬಿಡುತ್ತದೆ. ರೈತರು ನೇಕಾರರು ಕಮ್ಮಾರರು ಕೂಲಿಕಾರರು ತಮ್ಮ ಶ್ರಮದ ಭಾಗವಾಗಿ ಸೃಷ್ಟಿಸಿರುವ ಈ ಲೋಕಕ್ಕೆ ಹೋಗದಿದ್ದರೆ, ಸಂಸ್ಕೃತಿಯ ಅರ್ಥವೆ ಕುಬ್ಜವಾಗಿಬಿಡುತ್ತದೆ.
ಸಂಸ್ಕೃತಿಯ ಸಂಕೀರ್ಣ ಚಿತ್ರ
ಇಷ್ಟೆಲ್ಲ ಹೇಳಿದ ಮೇಲೆ ‘ಕರ್ನಾಟಕ ಸಂಸ್ಕೃತಿ’ ಎಂದರೆ, ನಮ್ಮ ಮಸ್ಸಿನ ಪರದೆಯ ಮೇಲೆ ಮೂಡುವ ಚಿತ್ರ ಎಂತಹುದು? ಆ ಚಿತ್ರದಲ್ಲಿ ರೈತರು, ಕೂಲಿಕಾರರು, ಕಸಬುದಾರರು, ಕವಿಗಳು ಸಂತರು, ದೊರೆಗಳು, ಆಡಳಿತಗಾರರು, ಹೋರಾಟಗಾರರು, ಬುಡಕಟ್ಟು ಜನ ಸುಳಿಯತೊಡಗುತ್ತಾರೆ; ಪಂಪ ಕುಮಾರವ್ಯಾಸರ ಕಾವ್ಯಗಳು, ಶರಣರ ವಚನಗಳು, ಕುವೆಂಪು ಕಾರಂತರ ಕಾದಂಬರಿಗಳು, ಬೇಂದ್ರೆ ಕವನಗಳು, ಜನಪದ ಗೀತೆಗಳು ಗೋಚರಿಸುತ್ತವೆ; ಬಂಗುಡೆಮೀನು, ಜೋಳದರೊಟ್ಟಿ, ರಾಗಿಮುದ್ದೆ ಯಕ್ಷಗಾನ, ದೊಡ್ಡಾಟ, ಕೃಷ್ಣಪಾರಿಜಾತ, ಮೈಲಾರದ ಜಾತ್ರೆ, ಗೋಳಗುಮ್ಮಟ, ಹಂಪಿಯ ಗುಡಿ, ಶ್ರವಣಬೆಳಗೊಳದ ಬಾಹುಬಲಿ, ವೀರಗಲ್ಲು ಮುಂತಾದವೆಲ್ಲ ಮಿಂಚಿ ಮಾಯವಾಗುತ್ತವೆ; ಜತೆಗೆ ನಮ್ಮ ನಾಡಿನ ಬಡತನ, ಕಡಿತಲೆಯಾದ ಕಾಡು, ಚರಂಡಿಯಾಗಿರುವ ನದಿಗಳು, ಪರದೇಶಿಗರಿಗೆ ಸೂರೆಹೋಗುತ್ತಿರುವ ಸಂಪನ್ಮೂಲಗಳು, ಕನ್ನಡದ ದುಸ್ಥಿತಿ, ರೈತರ ಆತ್ಮಹತ್ಯೆ -ಇವೆಲ್ಲ ಕಾಡುತ್ತವೆ. ಇವೆಲ್ಲ ಸೇರಿದರೆ ಅದೆಂತಹ ಸಂಕೀರ್ಣ ಚಿತ್ರವಾಗುತ್ತದೆ! ಹೌದು, ಒಂದು ನಾಡಿನ ಜನಜೀವನದ ಎಲ್ಲವೂ ಸಂಸ್ಕೃತಿ ಎನ್ನುವುದಾದರೆ, ಇಂತಹ ಸಂಕೀರ್ಣ ಚಿತ್ರವೇ ಮೂಡಬೇಕು.
ಹೀಗೆ ಕರ್ನಾಟಕ ಸಂಸ್ಕೃತಿ ಬಹುರೂಪಿಯಾಗಿದೆ, ವರ್ಣರಂಜಿತವಾಗಿದೆ. ಅದರಲ್ಲಿ ಸಂಘರ್ಷವೂ ಇವೆ, ಸಾಮರಸ್ಯವೂ ಇದೆ. ಹಳತು ಹೊಸತು ಎರಡೂ ಇವೆ. ಸಂಭ್ರಮ ನೋವುಗಳೆರಡೂ ಇವೆ. ಇವೆಲ್ಲ ಇರುವುದರಿಂದಲೇ ಅದು ಜೀವಂತವಾಗಿದೆ, ಚಲನಶೀಲವಾಗಿದೆ. ಕರ್ನಾಟಕ ಸಂಸ್ಕೃತಿ ಹಡೆದ ಅಪರೂಪದ ವ್ಯಕ್ತಿ ಬಸವಣ್ಣ ಹೇಳುವಂತೆ, ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’! ಅಂದರೆ ಚಲನಶೀಲವಾಗಿರುವ ಯಾವುದಕ್ಕೂ ನಾಶದ ಭಯವಿಲ್ಲ. ಎಂತಲೇ ಅನಿಸುತ್ತದೆ: ಕರ್ನಾಟಕ ಸಂಸ್ಕೃತಿಯ ಸುಂದರ ದಿನಗಳು ಗತಕಾಲದಲ್ಲಿ ಮುಗಿದು ಹೋಗಿಲ್ಲ. ಅವು ನಮ್ಮ ಕಣ್ಮುಂದೆ ರೂಪುಗೊಳ್ಳಬೇಕಾಗಿವೆ. ಅವು ಭವಿಷ್ಯದ ಕಾಲಗರ್ಭದಲ್ಲಿ ಸುಪ್ತವಾಗಿ ಅಡಗಿಕೊಂಡಿವೆ.
ಲೇಖಕರು
ರಹಮತ್‌ತರೀಕೆರೆ (೧೯೫೯) ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದ ಅಧ್ಯಾಪಕರಾಗಿದ್ದಾರೆ. ‘ಪ್ರತಿಸಂಸ್ಕೃತಿ’ ‘ಮರದೊಳಗಣ ಕಿಚ್ಚು’ ‘ಕರ್ನಾಟಕದ ಸೂಫಿಗಳು’ ‘ಅಂಡಮಾನ್‌ಕನಸು’ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ.
ಆಶಯ
ಪ್ರಸ್ತುತ ಲೇಖನವು ಕರ್ನಾಟಕ ಸಂಸ್ಕೃತಿ ಹೇಗೆ ಬಹುರೂಪಿಯಾಗಿದೆ ಎಂದು ವಿವರಿಸಲು ಯತ್ನಿಸುತ್ತದೆ. ಯಾವುದಾರೂ ಒಂದು ಭಾಷೆ, ಸಮುದಾಯ ಅಥವಾ ಧರ್ಮದ ನೆಲೆಯಲ್ಲಿ ಮಾತ್ರ ನೋಡಿದರೆ, ಅದರ ನಿಜರೂಪ ಸಿಗಲಾರದು. ಅದರಲ್ಲಿ ಹೆಮ್ಮೆಯ ಹಾಗೂ ಅಪಮಾನದ ಎರಡೂ ಚಿತ್ರಗಳಿವೆ. ಅವೆರಡನ್ನೂ ಕೂಡಿಸಿಯೇ ನೋಡಬೇಕು ಎಂದು ಲೇಖನ ಪ್ರತಿಪಾದಿಸುತ್ತದೆ.
ಟಿಪ್ಪಣಿ
ಮಲೇಮಾದೇಶ್ವರ = ಕೊಳ್ಳೆಗಾಲ ತಾಲ್ಲೂಕು ಮಹದೇಶ್ವರ ಬೆಟ್ಟದಲ್ಲಿರುವ ದೈವ, ಕುಮಾರರಾಮ = ೧೪ನೇ ಶತಮಾನದ ಕಂಪಲಿ ರಾಜ್ಯದ ರಾಜಕುಮಾರ, ಸಂಗೊಳ್ಳಿರಾಯಣ್ಣ = ಕಿತೂರುಚೆನ್ನಮ್ಮನ ಅನುಯಾಯಿ, ಬ್ರಿಟಿಷ್‍ಸರಕಾರದ ನಿದ್ದೆ ಕೆಡಿಸಿದ್ದ ಹೋರಾಟಗಾರ, ನರಗುಂದದ ಬಾಬಾಸಾಹೇಬ = ಗದಗ ಜಿಲ್ಲೆಯ ನರಗುಂದ ಸಂಥಾನದ ಅಧಿಪತಿಯಾಗಿದ್ದವನು, ಬ್ರಿಟಿಷರ ವಿರುದ್ಧ ಹೋರಾಡಿದವನು. ಅವನನ್ನು ೧೮೫೮ ರಲ್ಲಿ ಹಿಡಿದು ಗಲ್ಲಿಗೇರಿಸಲಾಯಿತು ತಿಮ್ತಿಣಿಮೋನಪ್ಪ = ಗುಲಬರ್ಗಾ ಜಿಲ್ಲೆಯ ಜನಪ್ರಿಯ ಸಂತ, ೨ನೇ ಇಬ್ರಾಹಿಂ = ಬಿಜಾಪುರವನ್ನಾಳಿದ ಪ್ರಸಿದ್ಧ ಆದಿಲಶಾಹಿ ದೊರೆ, ಸರಸ್ವತಿಯ ಆರಾಧಕನೂ ಸಂಗೀತಪ್ರೇಮಿಯೂ ಆಗಿದ್ದ  ಈತ ಕಿತಾಬೆ ನವರ್ಸ್‌ಎಂಬ ಕೃತಿ ರಚಿಸಿದನು. ಕೈವಾರದ ತಾತಯ್ಯ = ೧೯ ನೇ ಶತಮಾನದಲ್ಲಿ ಕೋಲಾರ ಭಾಗದಲ್ಲಿದ್ದ ಸಂತ, ಅಭಂಗ = ಮರಾಠಿ ಸಂತರ ತತ್ವಪದ, ಬಂದೇನವಾಚ್‌= ೧೪ನೇ ಶತಮಾನದಲ್ಲಿ ಗುಲಬರ್ಗಾದಲ್ಲಿದ್ದ ಜನಪ್ರಿಯ ಸೂಪೀಸಂತ, ಕವಿರಾಜಮಾರ್ಗ = ೯ನೇ ಶತಮಾನದ ಅಲಂಕಾರ ಗ್ರಂಥ, ಇದರಲಿ ಕನ್ನಡ ನಾಡು, ಕನ್ನಡಭಾಷೆ ಹಾಗೂ ಕನ್ನಡಿಗರನ್ನು ಕುರಿತ ವರ್ಣನೆಗಳಿವೆ, ಮಂಟೆ ಸ್ವಾಮಿ = ಮೈಸೂರು ಮಂಡ್ಯ ಸೀಮೆಯ ಕೆಳವರ್ಗದ ಸಮುದಾಯದಲ್ಲಿ ಜನಪ್ರಿಯನಾಗಿರುವ ಸಂತ, ಪರ್ಶಿಯನ್‌= ಈಗಿನ ಇರಾನ್‌ದೇಶಕ್ಕೆ ಸಂಬಂಧಿಸಿದ, ಶಿಶುನಾಳ = ೧೯ನೇ ಶತಮಾನದಲ್ಲಿ ಗದಗ ಜಿಲ್ಲೆಯಲ್ಲಿದ್ದ ಸಂತ, ಸೂಫಿ = ಅನುಭಾವಿ ಪಂಥದ ಯೋಗಿ, ಉರುಸು = ಸೂಫಿಸಂತನ ಪುಣ್ಯತಿಥಿಯ ನೆನಪಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಉತ್ಸವ, ಮೊಹರಂ = ೭ನೇ ಶತಮಾನದಲ್ಲಿ ಅರಬ್‌ದೇಶದಲ್ಲಿ ತಮ್ಮ ಶತ್ರುಗಳಿಂದ ಹತರಾದ ಹಸೇನ ಹುಸೇನ ಎಂಬ ಅಣ್ಣತಮ್ಮಂದಿರ ನೆನಪಲ್ಲಿ ನಡೆವ ಆಚರಣೆ, ದರ್ಗಾ = ಸಮಾಧಿ, ಗುಬ್ಬಿವೀರಣ್ಣ = ಪ್ರಸಿದ್ಧ ನಾಟಕ ಕಂಪನಿ ನಡೆಸಿದವರು, ರಾಣಿಅಬ್ಬಕ್ಕ = ಪೋರ್ಚುಗೀಸರ ವಿರುದ್ಧ ಹೋರಾಡಿದ ಉಳ್ಳಾಲದ ರಾಣಿ, ಚಾಂದಬೀಬಿ = ಮೊಗಲರ ವಿರುದ್ಧ ಹೋರಾಡಿದ ಬಿಜಾಪುರ ರಾಣಿ, ಅತ್ತಿಮಬ್ಬೆ = ದಾನಕ್ಕೆ ಹೆಸರಾಗಿದ್ದ ೧೦ನೇ ಶತಮಾನದಲ್ಲಿದ್ದ ಒಬ್ಬ ಜೈನಮಹಿಳೆ, ಮುಂಡರಗಿ ಭೀಮರಾಯ = ೧೮೫೭ ಕ್ರಾಂತಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ, ಜುಂಜಪ್ಪ = ಗೊಲ್ಲಸಮುದಾಯದ ಸಾಂಸ್ಕೃತಿಕ ನಾಯಕ, ಬೀರಪ್ಪ = ಕುರುಬ ಸಮುದಯದ  ಸಾಂಸ್ಕೃತಿಕ ನಾಯಕ, ಹಲಗಲಿ = ಬಾಗಲಕೋಟೆ ಜಿಲ್ಲೆಯ ಒಂದು ಹಳ್ಳಿ, ೧೮೫೭ರಲ್ಲಿ ಇಲ್ಲಿನ ಬೇಡರು ಶಸ್ತ್ರಗಳನ್ನು ಇಟ್ಟುಕೊಳ್ಳಬಾರದು ಎಂಬ ಬ್ರಿಟಿಷರ ಕಾನೂನನ್ನು ಪ್ರತಿಭಟಿಸಿ ಹೋರಾಡಿದರು, ಇವರಲ್ಲಿ ೧೯ ಜನರನ್ನು ಗಲ್ಲಿಗೇರಿಸಿದರು. ಸಾಲುಮರದ ತಿಮ್ಮಕ್ಕ = ತನ್ನ ಗಂಡನೊಂದಿಗೆ ಸೇರಿ ಸಾಲುಮರಗಳನ್ನು ನೆಟ್ಟು ಮಕ್ಕಳಂತೆ ಸಾಕಿದ ಮಹಿಳೆ.
ಪ್ರಶ್ನೆಗಳು
೧. ಪೊಟ್ಟಿಶ್ರೀರಾಮಲು ಬಗ್ಗೆ ಬೆಸಗರಹಳ್ಳಿ ರಾಮಣ್ಣನವರಿಗೆ ಆದ ಅನುಭವ ಏನನ್ನು ಸೂಚಿಸುತ್ತದೆ?
೨. ‘ಸಂಸ್ಕೃತಿ’ ಇರುವ ಜನಪ್ರಿಯ ಕಲ್ಪನೆಗಳು ಯಾವುವು?
೩. ಸಂಸ್ಕೃತಿಯನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಯಾಕೆ ವ್ಯಾಖ್ಯಾನಿಸುವ ಅಗತ್ಯವಿದೆ?
೪. ಕರ್ನಾಟಕ ಸಂಸ್ಕೃತಿಯನ್ನು ಸ್ವವಿಮರ್ಶೆಯ ಮೂಲಕ ಗ್ರಹಿಸುವ ಅಗತ್ಯ ಯಾಕಿದೆ?
೫. ಸಂಸ್ಕೃತಿಯನ್ನು ಗತಕಾಲದಲ್ಲಿ ಮಾತ್ರ ಅರಸುವ ಪ್ರವೃತ್ತಿಯು ಯಾಕೆ ಸರಿಯಲ್ಲ?
೬. ಕರ್ನಾಟಕ ಸಂಸ್ಕೃತಿಯಲ್ಲಿ ವೈಭವೀಕರಣದ ಅಪಾಯಗಳು ಯಾವುವು?
೭. ಸಮುದಾಯದ ಸೃಜನಶೀಲತೆ ಎಂದರೇನು?
೮. ಯಾಕೆ ಕರ್ನಾಟಕ ಸಂಸ್ಕೃತಿಯನ್ನು ಶಿಖರಗಳಿಂದಲೇ ಗುರುತಿಸುವುದು ಸಲ್ಲದು, ವಿವರಿಸಿ.
ಪೂರಕ ಓದು
೧. ಮಂಟೆಸ್ವಾಮಿ ಹಾಗೂ ಮಲೆಮಾದೇಶ್ವರ ಮಹಾಕಾವ್ಯಗಳು.
೨. ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ‘ಕರ್ನಾಟಕ ಜನಪದ ಕಲೆಗಳ ಕೋಶ’.
೩. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ‘ವಿಷಯ ವಿಶ್ವಕೋಶ : ಕರ್ನಾಟಕ’.
೪. ಬರಗೂರು ರಾಮಚಂದ್ರಪ್ಪ ಅವರ ‘ಸಂಸ್ಕೃತಿ : ಶ್ರಮ ಮತ್ತು ಸೃಜನಸೀಲತೆ’.
೫. ಎಚ್‌. ತಿಪ್ಪೇರುದ್ರಸ್ವಾಮಿ ಅವರ ‘ಕರ್ನಾಟಕ ಸಂಸ್ಕೃತಿ ಸಮೀಕ್ಷೆ’.
೬. ಮಾಸ್ತಿ ವೆಂಕಟೇಶ ಅಯ್ಯಂಗಾರ್‌ಅವರ ‘ಕರ್ನಾಟಕದ ಜನತೆಯ ಸಂಸ್ಕೃತಿ’.
೭. ಎಂ ಚಿದಾನಂದಮೂರ್ತಿ ಅವರ ‘ಕರ್ನಾಟಕ ಸಂಸ್ಕೃತಿ ‘
೮. ಕನ್ನಡ  ವಿಶ್ವವಿದ್ಯಾಲಯ ಪ್ರಕಟಿಸಿರುವ  ‘ಕನ್ನಡ ಕನ್ನಡಿ’ ಮಾಹಿತಿಕೋಶ.
೯. ಎಸ್‌ಎಸ್‌ಹಿರೇಮಠ ಅವರ ‘ಕರ್ನಾಟಕ ಸಂಸ್ಕೃತಿ ಪರಂಪರೆ ಹಬ್ಬಗಳು ‘,
೧೦. ಬೆಟಗೇರಿ ಕೃಷ್ಣಶರ್ಮ ಅವರ ‘ನಮ್ಮ ಸಂಸ್ಕೃತಿ ಪರಂಪರೆ’.
೧೧. ಎಚ್‌ಎಸ್‌ಗೋಪಾಲರಾವ್‌ಅವರ ‘ನಮ್ಮ ನಾಡು ಕರ್ನಾಟಕ ‘.
೧೨. ಜಿ. ರಾಜಶೇಖರ ಅವರ ‘ಕಾಗೋಡು ಸತ್ಯಾಗ್ರಹ’.
೧೩. ಶಿವರಾಮ ಕಾರಂತರ ‘ನಮ್ಮ ಸಂಸ್ಕೃತಿಯ ಹೆಮ್ಮ ಸಾಲದು’ ಎಂಬ ಲೇಖನ.
೧೪. ಎನ್‌, ಪಿ. ಶಂಕರನಾರಾಯಣರಾವ್‌ಅವರ ‘ಸಾತಂತ್ರ್ಯ ಗಂಗೆಯ ಸಾವಿರ ತೊರೆಗಳು’.
blogger
delicious
digg
facebook
reddit
stumble
twitter
print
email
ಪುಸ್ತಕ: ಕನ್ನಡ ಮನಸು (ಇಂಜಿನಿಯರಿಂಗ್ ಪ್ರಥಮ ಪದವಿ ತರಗತಿಯ ಕನ್ನಡ ಪಠ್ಯ)
ಲೇಖಕರು: ಡಾ. ರಹಮತ್ ತರೀಕೆರೆ
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಗುರುವಾರ, ಜುಲೈ 9, 2015

ಗದ್ದರ್ ಪಕ್ಷ


ಗದ್ದರ್ ಪಕ್ಷ



ಗದ್ದರ್ ಪಕ್ಷ ಭಾರತದ ಹೋರಾಟದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಲು ಬ್ರಿಟಿಷರನ್ನು ಶಸ್ತ್ರಾಸ್ತ್ರ ಬಂಡಾಯದಿಂದ ಕಿತ್ತೊಗೆಯ ಬೇಕೆಂದು ಕ್ರಾಂತಿಕಾರಿಗಳು ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿದ್ದರು. ಈ ಕ್ರಾಂತಿಕಾರಿಗಳು ಯುರೋಪ್, ಅಮೆರಿಕ, ಮಧ್ಯಏಷ್ಯ ಮತ್ತು ಆಗ್ನೇಯ ಏಷ್ಯಗಳಲ್ಲಿ ತಮ್ಮ ಚಟುವಟಿಕೆಯ ಕೇಂದ್ರಗಳನ್ನು ಸ್ಥಾಪಿಸಿಕೊಂಡಿದ್ದರು. ಇವರುಗಳು ಸಾವನ್ನು ಅಥವಾ ಸೆರೆಯಾಗುವುದರಿಂದ ಎದುರಿಸಲು ಹೆದರಿ ವಿದೇಶಗಳಿಗೆ ಹೋದವರಲ್ಲ. ಇವರು ಆ ದೇಶಗಳಲ್ಲಿ ಭಾರತದ ಸಮಸ್ಯೆಗಳನ್ನು ಪ್ರಚಾರ ಮಾಡಿ, ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಹೋಗಿದ್ದರು. ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಸಾವಿರಾರು ಭಾರತೀಯರು ಅದರಲ್ಲೂ ಹೆಚ್ಚಾಗಿ ಪಂಜಾಬಿನ ಸಿಕ್ಕರು ನೆಲೆಸಿದ್ದರು. ಅಲ್ಲಿ ಭಾರತೀಯರನ್ನು ವರ್ಣದ್ವೇಷ ಮತ್ತು ತಾರತಮ್ಯಗಳಿಂದ ಕಾಣುತ್ತಿದ್ದರು. ಇದೇ ಸಮಯದಲ್ಲಿ ತಾರಕನಾಥ್ ದಾಸ್ ಮತ್ತು ಸೋಹನ್ಸಿಂಗ್ ಈ ಪ್ರದೇಶಗಳಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ಹರಡಿದರು. ಲಾಲ ಹರಿದಯಾಳ್ರು ಅಮೆರಿಕಕ್ಕೆ ಹೋಗಿ 1857ರ ಸಿಪಾಯಿದಂಗೆಯ ನೆನಪಿಗಾಗಿ 1913ರ ನವೆಂಬರ್ 1 ರಂದು ‘ಗದ್ದರ್’ ಎಂಬ ಪತ್ರಿಕೆಯನ್ನು ಪ್ರಕಟಿಸಿದರು. ಪಂಜಾಬಿ ಭಾಷೆಯಲ್ಲಿ ‘ಗದ್ದರ್’ ಎಂದರೆ ಬಂಡಾಯವೆಂದರ್ಥ. ಈ ಪತ್ರಿಕೆಯು ಇಂಗ್ಲಿಷ್, ಗುರುಮುಖಿ, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು. ಈ ಪತ್ರಿಕೆಯಲ್ಲಿ ಅಧಿಕಾರಿಗಳ ಕೊಲೆ, ಕ್ರಾಂತಿಕಾರಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಸಾಹಿತ್ಯವನ್ನು ಪ್ರಕಟಿಸುತ್ತಿದರು ನಂತರ ಗದ್ದರ್ ಎಂಬ ಪಕ್ಷವನ್ನು ರಚಿಸಿದರು.

ಗದ್ದರ್ ಪತ್ರಿಕೆಯಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಸಾಹಿತ್ಯವನ್ನು ಪ್ರಕಟಿಸುವುದು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು, ಸೈನ್ಯದ ನಡುವೆ ವಿರೋಧಿ ಭಾವನೆ ಬೆಳೆಸುವುದು ಮುಂತಾದ ಲೇಖನಗಳನ್ನು ಪ್ರಕಟವಾಗುತ್ತಿತ್ತು. ಅಮೆರಿಕದ ಸ್ಯಾನ್ ಫ್ರನ್ಸಿಸ್ಕೋದಲ್ಲಿ ಇದರ ಕಛೇರಿಯಿತ್ತು. ಒಂದು ಸಲ ಈ ಪತ್ರಿಕೆಯಲ್ಲಿ ‘ಧೈರ್ಯಶಾಲಿ ಸೈನಿಕರು ಬೇಕಾಗಿದ್ದಾರೆ, ಉದ್ಯೋಗ- ಭಾರತದಲ್ಲಿ ದಂಗೆ ಏಳಲು ವೇತನ-ಸಾವು ಬೆಲೆ - ವೀರ ಮರಣ; ವಿಶ್ರಾಂತಿ ವೇತನ-ಸ್ವಾತಂತ್ರ್ಯ; ಯುದ್ಧ ನಡೆಯುವ ಸ್ಥಳ-ಭಾರತ’ ಎಂದು ಪ್ರಕಟಿಸಲಾಗಿತ್ತು. ಪ್ರಪಂಚದಾದ್ಯಂತ ಇರುವ ಭಾರತೀಯರನ್ನು ಒಟ್ಟುಗೂಡಿಸಿ ಕ್ರಾಂತಿ ಮಾಡಲು ಜನರನ್ನು ಸಂಘಟಿಸುವ ಉದ್ದೇಶವಾಗಿತ್ತು.

ಗದ್ದರ್ ಪಕ್ಷದ ಕೇಂದ್ರ ಕಛೇರಿಯು ಅಮೆರಿಕದ ಸ್ಯಾನ್ ಫ್ರನ್ಸಿಸ್ಕೋದ ನಂ, 436 ಹಿಲ್ ಸ್ಟ್ರೀನಲ್ಲಿತ್ತು . ಕಲ್ಕತ್ತದಲ್ಲಿ ಪ್ರಕಟವಾಗುತ್ತಿದ್ದ ‘ಯುಗಾಂತರ್’ ಪತ್ರಿಕೆಯ ಸ್ಥಾಪನೆಯ ನೆನಪಿನಲ್ಲಿ ಈ ಕೇಂದ್ರಕ್ಕೆ ‘ಯುಗಾಂತರ್ ಆಶ್ರಮ’ವೆಂದು ಹೆಸರಿಡಲಾಯಿತು. ಅಮೆರಿಕ, ಕೆನಡ ಮತ್ತಿತರ ಭಾಗಗಳಲ್ಲಿ ಈ ಪಕ್ಷದ ಶಾಖೆಗಳಿದ್ದವು. ಈ ಪಕ್ಷದ ವಿವಿಧ ಶಾಖೆಗಳಿಂದ ಸದಸ್ಯರನ್ನು ಆರಿಸಿ ಕೇಂದ್ರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಆಗಾಗ್ಗೆ ಸಭೆ ನಡೆಸಿ ಭಾರತದಲ್ಲಿದ್ದ ತನ್ನ ಬೆಂಬಲಿಗರಿಗೆ ರಾಜಕೀಯ ಶಿಕ್ಷಣ ನೀಡುವ ಮತ್ತು ಅದಕ್ಕೆ ಬೇಕಾಗುವ ಹಣವನ್ನು ಸಂಗ್ರಹಿಸುವ ತೀರ್ಮಾನಗಳನ್ನು ಕೈಗೊಳ್ಳುತ್ತಿತ್ತು. ಇದೇ ಪಕ್ಷದ ರಾಮಚಂದ್ರ ಅವರು ಅಮೆರಿಕದ ಅಧ್ಯಕ್ಷ ವಿಲ್ಸನ್ ರವರಿಂದ ಭಾರತದ ಸ್ವಾತಂತ್ರಕ್ಕೆ ಬೆಂಬಲ ದೊರಕಿಸಲು ಪ್ರಯತ್ನಪಟ್ಟರು. ಫಿಲಡೆಲ್ಫಿಯದಲ್ಲಿ ಗದ್ದರ್ ಸೊಸೈಟಿಯು ಭಾರತೀಯ ಕ್ರಾಂತಿಕಾರಿಗಳು ನಡೆಸಿದ ಮೆರವಣಿಗೆಯಲ್ಲಿ ಸುಮಾರು 10 ಸಾವಿರ ಅಮೆರಿಕನ್ನರು ಭಾಗವಹಿಸಿ ಭಾರತ ಮತ್ತು ಐರ್ಲೆಂಡ್ ನಲ್ಲಿ ಬ್ರಿಟಿಷರು ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿದರು. ಬ್ರಿಟಿಷರು ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಹೋರಾಡುತ್ತಿರುವ ಭಾರತದ ಪ್ರಯತ್ನಕ್ಕೆ ಅಮೆರಿಕ್ಕನ್ನರು ಬೆಂಬಲ ಘೋಷಿಸಿದರು.

ಅಮೆರಿಕದಲ್ಲಿದ್ದ ಜರ್ಮನಿ ರಾಯಭಾರಿ ಕಛೇರಿಯವರೊಡನೆ ಎಂ.ಎನ್.ರಾಯ್ ರವರು ಮಾತುಕತೆ ನಡೆಸಿ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳುಹಿಸುವ ದೀರ್ಘಯೋಜನೆ ಯನ್ನು ಮಾಡಿದರು. 1915 ಜನವರಿಯಲ್ಲಿ ಅನಿಲಾರ್ಸನ್ ಎಂಬ ಹಡಗಿನಲ್ಲಿ ಶಸ್ತ್ರಾಸ್ತ್ರಗಳನ್ನು ತುಂಬಿ ಒಂದು ಗುಪ್ತ ಸ್ಥಳದಲ್ಲಿ ಜರ್ಮನಿಯವರ ಸಹಾಯದಿಂದ ಮಾವೆರಿಕ್ ಎಂಬ ಹಡಗಿನಲ್ಲಿ ಶಸ್ತ್ರಾಸ್ತ್ರಗಳನ್ನು ಭರ್ತಿಮಾಡಿ ಕಳುಹಿಸಲಾಯಿತು. ಆದರೆ ಪೆಸಿಫಿಕ್ ಸಾಗರದಲ್ಲಿರುವ ಹವಾಯಿ ದ್ವೀಪದ ಹತ್ತಿರ ಮಾವೆರಿಕ್ ಹಡಗು ನೀರಿನ ತೊಂದರೆಯಿಂದ ಸಿಕ್ಕಿಕೊಂಡಿತು. ಅಲ್ಲಿಂದ ಬರುವ ಶಸ್ತ್ರಾಸ್ತ್ರಗಳನ್ನು ಇಳಿಸಿ ಕೊಳ್ಳಲು ಭಾರತದ ಒರಿಸ್ಸಾರಾಜ್ಯದ ಪೂರ್ವದಲ್ಲಿರುವ ಬಂಗಾಳ ಕೊಲ್ಲಿಯ ತೀರದಲ್ಲಿ ರುವ ಬಾಲಸೂರಿನ ಬಳಿ ಜತೀನ್ ಮುಖರ್ಜಿಯವರ ನೇತೃತ್ವದ್ಲಲಿ ಸಿದ್ಧವಿದ್ದ ಕ್ರಾಂತಿಕಾರಿಗಳು ಪೋಲಿಸ್ ಪಡೆಯೊಂದಿಗೆ ಹೋರಾಡಿ ಮಡಿದರು. ಹೀಗೆ ಕ್ರಾಂತಿಕಾರಿಗಳ ಯೋಜನೆ ಬಿದ್ದು ಹೋಯಿತು.

ಗದ್ದರ್ ಪಕ್ಷದ ಕ್ರಾಂತಿಕಾರಿಗಳು ವಿದೇಶಗಳಲ್ಲಿ ನಡೆಸಿದ ಕೊಲೆಗಳಲ್ಲಿ ಪ್ರಮುಖವಾದುದು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣನಾದ ಜನರಲ್ ಸರ್ ಮೈಕೆಲ್ ಓಡೈಯರನನ್ನು ಲಂಡನ್ನನ ಕ್ಯಾಕ್ಸ್ ಟೌನ್ ಹಾಲ್ನಲ್ಲಿ 1940ರ ಮಾರ್ಚ್ 13ರಂದು ಉದಾಮ್ ಸಿಂಗ್ ಕೊಂದ. ಜಲಿಯನ್ ವಾಲಾಬಾಗ್ ಘಟನೆ 1919ರ ಏಪ್ರಿಲ್ 13ರಂದು ನಡೆಯಿತು. ಆ ಸಮಯದಲ್ಲಿ ಉದಾಮ್ಸಿಂಗ್ ಬಾಲಕನಾಗಿದ್ದ ಪಂಜಾಬಿಗಳು ಓಡೈಯರನನ್ನು ದ್ವೇಷಿಸುತ್ತಿದ್ದರು ನಂತರ ದ್ವೇಷ ತೀರಿಸಲು ಲಂಡನ್ನಿಗ ಹೋಗಿ ಅವನನ್ನು ಉದಾಮ್ ಸಿಂಗ್ ಕೊಂದ. ಆಗ ಇವನನ್ನು ಬಂಧಿಸಿ ವಿಚಾರಣೆ ನಡೆಸಿ 1940ರ ಜೂನ್ 12 ರಂದು ಗಲ್ಲಿಗೇರಿಸಲಾಯಿತು.

ಪುಣೆಯಲ್ಲಿ ಪ್ಲೇಗ್ ಬಂದಾಗ ಮನೆಗಳನ್ನು ಖಾಲಿ ಮಾಡಿಸಲು ಬ್ರಿಟಿಷ್ ಅಸಭ್ಯತೆಯ ಮಿತಿ ಮೀರಿದ ಕ್ರಮಗಳಿಂದ ಚಾಪೆಕರ್ ಸೋದರರು ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲಲ್ಲು ಅವರಿಗೆ ಮರಣದಂಡನೆ ಆಯಿತು. ಲಂಡನ್ನಲ್ಲಿ ಶ್ಯಾಮಜಿಕೃಷ್ಣವರ್ಮ ಕ್ರಾಂತಿಕಾರಿಗಳ ತರಬೇತಿಗಾಗಿ ಇಂಡಿಯನ್ ಹೌಸ್ ಆರಂಭಿಸಿದರು. ಈ ಚಟುವಟಿಕೆಗಳ ಮೇಲೆ ಕಣ್ಣಿಟ್ಟು ವರದಿ ಮಾಡುತ್ತಿದ್ದ ಕರ್ಜನ್ ವೈಲಿ ಎಂಬ ಅಧಿಕಾರಿಯನ್ನು ಮದನಲಾಲ್ ದಿಂಗ್ರಾ ಎಂಬ ಕ್ರಾಂತಿಕಾರಿ ಲಂಡನ್ನ ಒಂದು ಸತ್ಕಾರ ಸಮಾರಂಭದಲ್ಲಿ ಗುಂಡು ಹಾರಿಸಿ ಕೊಂದನು. ದಿಂಗ್ರಾನು ಕೋರ್ಟ್ನಲ್ಲಿ ‘ಭಾರತೀಯ ಯುವಕರನ್ನು ಅಮಾನುಷವಾಗಿ ಗಲ್ಲಿಗೇರಿಸುತ್ತಿರುವುದಕ್ಕೆ ಅಲ್ಪ ಪ್ರತೀಕಾರವಾಗಿ ನಾನು ಬ್ರಿಟಿಷರ ರಕ್ತವನ್ನು ಸುರಿಸಲು ಯತ್ನಿಸಿದೆ ಎಂದು ಒಪ್ಪಿಕೊಳ್ಳುತ್ತೇನೆ. ನಿಶಸ್ತ್ರಜೀವನ ಬಹಿರಂಗ ಯುದ್ಧಕ್ಕಿಳಿಯುವುದು ಅಸಾಧ್ಯವಾದ ಕಾರಣ ಹಠಾತ್ ಧಾಳಿಗೆ ನನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದೆ’ ಎಂದೂ, ‘ನನ್ನ ದೇಶಕ್ಕೆ ಮಾಡುವ ಅನ್ಯಾಯ ಭಗವಂತನಿಗೆ ಮಾಡುವ ಅವಮಾನ ಎಂದು ಭಾವಿಸಿದೆ. ಎಂಬಂತಹ ದೇಶಭಕ್ತಿ ನುಡುಗಳನ್ನಾಡಿದನು. ದಿಂಗ್ರಾನ ದೇಶಾಭಕ್ತಿ ಹೇಳಿಕೆಯನ್ನು ಲಾಯ್ಡ್ ಜಾರ್ಜ್ ಮತ್ತು ವಿನ್ಸ್ಟನ್ ಚರ್ಚಿಲರು ದಿಂಗ್ರಾನ ಕೊನೆಯ ವಾಕ್ಯಗಳು ಎಂದೆಂದಿಗೂ ದೇಶಾಭಿಮಾನದ ಹೆಸರಿನಲ್ಲಿ ಮಾಡಿರುವ ಅತ್ಯುನ್ನತ ಹೇಳಿಕೆಯೆಂದು ಶ್ಲಾಘಿಸಿದರು. ಐರ್ಲೆಂಡ್ನ ಪ್ರಜೆಗಳು ದಿಂಗ್ರಾನನ್ನು ದೇಶಕ್ಕಾಗಿ ಪ್ರಾಣತೆತ್ತ ಮಹಾವೀರನೆಂದು ಗೌರವಿಸಿತು (1909).

 1922ರಲ್ಲಿ ಕ್ರಾಂತಿಕಾರಿಗಳಾದ ಯುವಕರು ಬ್ರಿಟಿಷ್ ಸರ್ಕಾರವನ್ನು ಬುಡಮೇಲು ಮಾಡಿ ಅದರ ಧೈರ್ಯ, ಸ್ಥೈರ್ಯ ಕುಂದಿಸಬೇಕೆಂದು ಗುಪ್ತವಾಗಿ ಶ್ರಮಿಸಿದರು. ಲಖನೌ ಬಳಿ ಕಾಕೋರಿ ರೈಲು ನಿಲ್ದಾಣದಲ್ಲಿ ಸರ್ಕಾರಿ ತಿಜೋರಿಯನ್ನು ಅಪಹರಿಸಿದರು. ಈ ಪ್ರಕರಣದಲ್ಲಿ 40 ಜನರ ಬಂಧನವಾಗಿ ಮೂವರಿಗೆ 1927ರಲ್ಲಿ ಮರಣದಂಡನೆ ಆಯಿತು.

1928 ಅಕ್ಟೋಬರ್ 20ರಂದು ಎಲ್ಲೆಡೆ ಸೈಮನ್ ಆಯೋಗದ ವಿರುದ್ಧ ಉಗ್ರ ಪ್ರತಿಭಟನೆಯಲ್ಲಿ ಪಾಲುಗೊಂಡ ಲಾಲಾಲಜಪತ್ರಾಯ್ ಮೇಲೆ ಉಗ್ರ ಲಾಠಿ ಪ್ರಹಾರವಾಗಿ ಅದರಿಂದ ಅವರು ಗಾಯಗೊಂಡು 1928ರ ನವೆಂಬರ್ 17ರಂದು ನಿಧನವಾದರು. ಈ ಅನಾಹುತಕ್ಕೆ ಸಾಂಡರ್ಸ್ ಎಂಬ ಅಧಿಕಾರಿಯನ್ನು ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ರಾಜಗುರು ಗುಂಡಿಕ್ಕಿ ಕೊಂದರು. ಹತ್ಯೆಯ ಅನಂತರ ತಲೆ ತಪ್ಪಿಸಿಕೊಂಡಿದ್ದ ಭಗತ್ ಸಿಂಗ್ ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಯ ಆಡಳಿತದ ಬಗ್ಗೆ ಪ್ರಪಂಚದ ಕಣ್ತೆರಿಸಬೇಕೆಂಬ ಉದ್ದೇಶದಿಂದ ದೆಹಲಿಯ ಕೇಂದ್ರ ಶಾಸನ ಸಭೆಯಲ್ಲಿ ಬಿಟುಕೇಶ್ವರದತ್ತನೊಂದಿಗೆ ಸೇರಿ ಬಾಂಬನ್ನೆಸೆದು ಬಂಧಿತನಾದ (1929). ವಿವಿಧ ಕ್ರಾಂತಿಕಾರಿ ಚಟುವಟಿಕೆಗಳಿಗೆ ವಿಚಾರಣೆ ನಡೆದು, ಭಗತ್ ಸಿಂಗ್, ಸುಖದೇವ್, ಮತ್ತು ರಾಜಗುರು ಈ ಮೂರು ಮಂದಿಗೂ ಮರಣದಂಡನೆ ವಿಧಿಸಲಾಯಿತು. 1931 ಮಾರ್ಚ್ 23ರಂದು ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಭಗತ್ ಸಿಂಗ್ ರನ್ನು ಗಲ್ಲಿಗೇರಿಸಲಾಯಿತು. ಚಂದ್ರಶೇಖರ್ ಆಜಾದ್ ಎಂಬ, ಈ ತಂಡದ ಕ್ರಾಂತಿಕಾರಿ 1931ರಲ್ಲಿ ಪೋಲಿಸರೊಡನೆ ಗುಂಡಿನ ಕಾಳಗದಲ್ಲಿ ಹುತಾತ್ಮನಾದ. ಈ ಕ್ರಾಂತಿಕಾರಿಗಳು ಯುವಕರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಳ್ಳಲು ಅಪಾರ ಸ್ಫೂರ್ತಿ ನೀಡಿದರು. ಇವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಗದ್ದರ್ ಪಕ್ಷದ ಸಂಪರ್ಕದಲ್ಲಿದ್ದರು.

ಕರ್ನಾಟಕ (ವ್ಯುತ್ಪತ್ತಿ)


ಕರ್ನಾಟಕ (ವ್ಯುತ್ಪತ್ತಿ)





ಕರ್ನಾಟಕ (ವ್ಯುತ್ಪತ್ತಿ): ಕರ್ಣಾಟಕ, ಕರ್ಣಾಟ ಮತ್ತು ಕನ್ನಡ ಶಬ್ದಗಳು, ದೇಶ, ಭಾಷೆ, ಜನ ಮತ್ತು ಕುಲಗಳನ್ನು ನಿರ್ದೇಶಿಸುತ್ತವೆ. ಕವಿರಾಜಮಾರ್ಗದಲ್ಲಿಯೂ ಆಂಡಯ್ಯನ ಕಬ್ಬಿಗರ ಕಾವದಲ್ಲಿಯೂ ಕನ್ನಡ ದೇಶವಾಚಕವಾಗಿದೆ. ಚೆನ್ನಬಸವೇಶ್ವರ, ನಿಜಗುಣ ಶಿವಯೋಗಿಗಳ ಉಲ್ಲೇಖನಗಳಲ್ಲಿ ಅದು ಕುಲವಾಚಕವಾಗಿ ಬಂದಿರುವಂತೆ ತೋರುತ್ತದೆ. ಮುಖ್ಯವಾಗಿ ಆ ಶಬ್ದಗಳು ದೇಶ ಮತ್ತು ಭಾಷಾ ವಾಚಕಗಳಾಗಿಯೇ ಪ್ರಯೋಗವಾಗುತ್ತವೆ. ಈ ಲೇಖನದಲ್ಲಿ ಕರ್ಣಾಟಕ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥವ್ಯಾಪ್ತಿಯನ್ನು ಕುರಿತು ವಿವೇಚಿಸಲಾಗಿದೆ.
ಕರ್ಣಾಟ ಶಬ್ದದ ಪೂರ್ವಪ್ರಯೋಗಗಳು ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಅಲ್ಲಲ್ಲಿ ಕಂಡುಬರುತ್ತವೆ. ಸಂಸ್ಕೃತ ಮಹಾಭಾರತದಲ್ಲಿ (ಪ್ರ.ಶ. 320-200?) ಜನಪದಗಳನ್ನು ಕುರಿತು ಹೇಳುವಾಗ ಸಭಾಪರ್ವದಲ್ಲಿ ಕರ್ಣಾಟಾಃ ಎಂದೂ (78-98), ಭೀಷ್ಮಪರ್ವದಲ್ಲಿ ಕರ್ಣಾಟಿಕಾಃ ಎಂದೂ (9-59) ಎರಡು ಮಾತುಗಳು ಬಂದಿವೆ. ಶೂದ್ರಕ ಕವಿಯ (ಪ್ರ.ಶ.ಸು. 400) ಮೃಚ್ಛಕಟಿಕ ನಾಟಕದ ಒಂದು ಸಂವಾದದಲ್ಲಿ, ವರಾಹಮಿಹಿರನ (ಪ್ರ.ಶ.ಸು. 6ನೆಯ ಶತಮಾನದ ಆದಿಭಾಗ) ಬೃಹತ್ಸಂಹಿತೆಯಲ್ಲಿ, ಮಾರ್ಕಂಡೇಯ ಪುರಾಣ (ಪ್ರ.ಶ.ಸು 8ನೆಯ ಶ.?) ಮತ್ತು ಸೋಮದೇವನ ಕಥಾಸರಿತ್ಸಾಗರಗಳಲ್ಲಿ ಕರ್ಣಾಟ ಶಬ್ದವನ್ನು ಕಾಣಬಹುದೆಂದು ವಿದ್ವಾಂಸರು ತಿಳಿಸಿದ್ದಾರೆ. ಗುಣಾಢ್ಯನ ಬೃಹತ್ಕಥೆಯಿಂದ ಆ ಪದವನ್ನು ಸೋಮದೇವ ಎತ್ತಿಕೊಂಡಿದ್ದ ಪಕ್ಷಕ್ಕೆ ಆ ಶಬ್ದದ ಬಳಕೆ ಪ್ರ.ಶ. 1-2 ನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆನ್ನಬಹುದು. ಈಚೆಗೆ ರಾಜಶೇಖರನ (ಪ್ರ.ಶ. 10ನೆಯ ಶ.) ಕಾವ್ಯಮೀಮಾಂಸಾ ಗ್ರಂಥದಲ್ಲಿ ಕನ್ನಡಿಗರ ಪಠನ ರೀತಿಯನ್ನು ಕುರಿತು ಹೇಳುವಾಗ ರಸಃ ಕೋಪ್ಯಸ್ತುಕಾಪ್ಯಸ್ತು ರೀತಿಃ ಸಗರ್ವಂ ಸರ್ವಕರ್ಣಾಟಕಾಃ ಟಂಕಾರೋತ್ತರ ಪಾಠಿನಃ-ಎಂಬ ಸ್ವಾರಸ್ಯಕರವಾದ ಮಾತು ಬಂದಿದೆ.
ಶಿಲಪ್ಪದಿಗಾರಂ ಎಂಬ ಪ್ರಾಚೀನ ತಮಿಳು ಸಾಹಿತ್ಯ ಕೃತಿಯಲ್ಲಿ (ಪ್ರ.ಶ.ಸು. 2-5) ಕರುನಾಡರ್ ಎಂಬ ಶಬ್ದವೂ ಪಾಂಡ್ಯ ದೊರೆ ಶಡೈಯನ್ ಪರಾಂತಕ ವೇಳ್ವಿಕುಡಿ ತಾಮ್ರ ಶಾಸನದಲ್ಲಿ (ಪ್ರ.ಶ.ಸು. 770) ಕರುನಾಡಗನ್ ಎಂಬ ಶಬ್ದವೂ ದೊರೆಯುತ್ತವೆ. ಹಾಗೆಯೇ ಕನ್ನಾಡಗರುಂ, ಕನ್ನಾಟ, ಕನ್ನಾಟಕ ಎಂಬ ರೂಪಗಳೂ ತಮಿಳುಶಾಸನಗಳಲ್ಲಿ ಕಂಡುಬಂದಿವೆ. ಅಪಭ್ರಂಶ ಪ್ರಾಕೃತದಲ್ಲಿ ಕನ್ನಾಡ, ಪಾಲಿಯಲ್ಲಿ ಕಣ್ಣಾಟ, ಗುಜರಾತಿ ಮೊದಲಾದುವುಗಳಲ್ಲಿ ಕನಡಿ, ಮರಾಠಿಯಲ್ಲಿ ಕಾನಡಿ ಎಂಬ ರೂಪಗಳುಂಟು. ಬಿ. ಎ. ಸಾಲೆತೊರೆ ಅವರ ಪ್ರಕಾರ ಪಾಶ್ಚಾತ್ಯರು ಕನ್ನಡ ಭಾಷೆಯ ಹೆಸರನ್ನು ಪ್ರ.ಶ. 1516ರಲ್ಲಿ Canari , 1520ರಲ್ಲಿ Canarim , 1552ರಲ್ಲಿ Canarij , 1615ರಲ್ಲಿ Canarin , 1654ರಲ್ಲಿ Cannary ಎಂದೂ ನಡುನಡುವೆ ಎಷ್ಟೋ ಬಾರಿ Carnatic, Carnate, Karnat- ಎಂದು ಮುಂತಾಗಿ ಬರೆಯುತ್ತಿದ್ದರೆಂದು ತಿಳಿಯುತ್ತದೆ.
ಕನ್ನಡ ಭಾಷೆಯಲ್ಲಿಯೇ ಬಹುಸಂಖ್ಯೆಯ ಪ್ರಾಚೀನ ಶಾಸನಗಳಲ್ಲಿ ಹಾಗೂ ಗ್ರಂಥಗಳಲ್ಲಿ ಕರ್ಣಾಟ ಮತ್ತು ಸದೃಶ ಶಬ್ದಗಳಾದ ಕರ್ಣಾಟಕ, ಕರ್ನಾಟ, ಕರ್ನಾಟಕ, ಕನ್ನಡ ಮುಂತಾದವು ಬಳಕೆಯಾಗಿವೆ. ಉತ್ತರ ಕರ್ಣಾಟಕದಲ್ಲಿ, ವ್ಯವಹಾರದಲ್ಲಿ ಕನ್ನಡು ಎಂಬ ಮಾತುಂಟು. ಸುಮಾರು 7-8ನೆಯ ಶತಮಾನದಿಂದ ಶಾಸನಗಳಲ್ಲಿ ಈ ಶಬ್ದಗಳ ರೂಪಗಳು ಬಳಕೆಯಾಗಿರುವಂತೆ ತೋರುತ್ತವೆ. 90ಕ್ಕೆ ಮೇಲ್ಪಟ್ಟ ಅಂಥ ಶಾಸನಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಇವುಗಳ ಆಧಾರದಿಂದ ಕನ್ನಡನಾಡು ಬಹು ಹಿಂದಿನ ಕಾಲದಿಂದಲೂ ಕರ್ಣಾಟ, ಕರುನಾಡು ಮುಂತಾದ ಹೆಸರುಗಳಲ್ಲಿ ಅಸ್ತಿತ್ವದಲ್ಲಿದೆಯೆಂಬುದಾಗಿ ತಿಳಿಯುತ್ತದೆ.

ಕಾಲ್ಡ್‌ವೆಲ್ ಅವರು ಕರ್ಣಾಟಕ ಎಂಬ ಪದ ಈಚೆಗೆ ವಿಪರೀತವಾದ ಅರ್ಥವನ್ನು ಪಡೆಯಿತೆಂದು ಹೇಳಿದ್ದಾರೆ. ಈ ಮೊದಲು ಕರ್ಣಾಟಕ ಎಂಬುದು ದಕ್ಷಿಣ ಹಿಂದೂಸ್ತಾನದ ಎತ್ತರವಾದ ಪ್ರಾಂತ್ಯಕ್ಕೆ ಕೊಟ್ಟ ಹೆಸರಾಗಿತ್ತು. ಈಚೆಗೆ ವಿದೇಶೀಯರ ಕೈಯಲ್ಲಿ ಅದಕ್ಕೆ ವಿಪರೀತವಾದ ಅರ್ಥ ಬಂತು. ಮಹಮ್ಮದೀಯರು ದಕ್ಷಿಣ ಭಾರತಕ್ಕೆ ಬಂದ ಮೊದಲಲ್ಲಿ ತಮಗೆ ಮೊದಲು ಪರಿಚಿತವಾದ ಮೈಸೂರು ಮತ್ತು ತೆಲಂಗಾಣದ ಭಾಗಗಳನ್ನೊಳಗೊಂಡ ಘಟ್ಟಗಳ ಮೇಲಿನ ಪ್ರದೇಶವನ್ನು ಕರ್ಣಾಟಕ ದೇಶವೆಂದು ಕರೆದರು. ಕಾಲಕ್ರಮದಲ್ಲಿ ಅವರು ಆ ಹೆಸರನ್ನು ಘಟ್ಟಗಳ ಕೆಳಗಿನ ಪ್ರದೇಶಕ್ಕೂ ಕೊಟ್ಟರು. ಅನಂತರದಲ್ಲಿ ಇಂಗ್ಲಿಷರು ವಾಸ್ತವವಾಗಿ ಆ ಹೆಸರಿಗೆ ಏನೂ ಸಂಬಂಧವೇ ಇಲ್ಲದ ಘಟ್ಟದ ಕೆಳಗಿನ ಪ್ರದೇಶಕ್ಕೆ ಮಾತ್ರ ಆ ಹೆಸರನ್ನು ಸೀಮಿತಗೊಳಿಸಿದರು. ಈ ಕಾರಣವಾಗಿ ನಿಜವಾಗಿ ಕರ್ಣಾಟಕ ಎಂಬ ಶಬ್ದ ಯಾವ ಪ್ರದೇಶವನ್ನು ಸೂಚಿಸಬೇಕಾಗಿತ್ತೋ ಅದು ಹೋಗಿ ಕರ್ನಾಟಿಕ್ ಎಂಬುದು ತಮಿಳು ದೇಶವನ್ನೂ ತೆಲುಗು ದೇಶದ ನೆಲ್ಲೂರು ಜಿಲ್ಲೆಯನ್ನೂ ಒಳಗೊಂಡು ಪೂರ್ವ ಸಮುದ್ರತೀರದಲ್ಲಿರುವ ಘಟ್ಟದ ಕೆಳಗಿನ ಪ್ರಾಂತ್ಯಕ್ಕೆ ಮಾತ್ರ ಅನ್ವಯಿಸುವಂತಾಯಿತು.
ಕವಿರಾಜಮಾರ್ಗದ ಉಲ್ಲೇಖದ ಪ್ರಕಾರ ಕನ್ನಡನಾಡು ಎಂಬುದು ದಕ್ಷಿಣದ ಕಾವೇರಿಯಿಂದ ಮೇಲೆ ಗೋದಾವರಿಯವರೆಗಿದ್ದ ನಾಡು. ನಂಜುಂಡ ಕವಿಯ (ಪ್ರ. ಶ. ಸು. 1525) ರಾಮನಾಥ ಚರಿತದಲ್ಲಿಯ ಉಲ್ಲೇಖವೂ ಈ ವಿಷಯವನ್ನು ತಿಳಿಸುತ್ತದೆ. ಕವಿರಾಜಮಾರ್ಗಕರ್ತೃ ಹೇಳುವ ಪ್ರಕಾರ, ಬಿಜಾಪುರ ಜಿಲ್ಲೆಯ ಪಟ್ಟದಕಲ್ಲು, ರಾಯಚೂರು ಜಿಲ್ಲೆಯ ಕೊಪ್ಪಳ, ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಬೆಳಗಾಂವಿ ಜಿಲ್ಲೆಯ ಒಂಕುಂದ-ಇವುಗಳ ನಡುವೆಯಿದ್ದ ಪ್ರದೇಶ ಕನ್ನಡ ನಾಡಿನ ತಿರುಳು ಶಾಸನಗಳು, ಸಾಹಿತ್ಯ, ಸ್ಥಳನಾಮಗಳು ಮೊದಲಾದವುಗಳ ಆಧಾರದ ಮೇಲೆ ಹಿಂದಿನ ನಿಜಾಂಶಾಹಿಯ ಅತಿ ಪಡುವಲ ಸ್ಥಾನದಿಂದ ಹಿಡಿದು ಅತಿ ಮೂಡಲ ಸ್ಥಾನದವರೆಗಿನ ಪ್ರದೇಶವೂ ಹಿಂದಿನ ಮದ್ರಾಸ್ ಪ್ರಾಂತ್ಯದ ವೆಂಗಿಮಂಡಲ ಮತ್ತು ಗೋದಾವರೀ ಕೃಷ್ಣಾನದಿಗಳ ನೀರು ಹರಿಯುವ ಜಿಲ್ಲೆಗಳೂ ಹಿಂದಿನ ಮಹಾರಾಷ್ಟ್ರದ ಭಾಗಗಳೂ ಇನ್ನೂ ದಕ್ಷಿಣದಲ್ಲಿ ನೀಲಗಿರಿ, ಕೊಯಮತ್ತೂರು, ಸೇಲಂ ಜಿಲ್ಲೆಗಳೂ ಕನ್ನಡಭೂಮಿಯಾಗಿತ್ತೆಂದು ಕೆಲವು ಚರಿತ್ರಕಾರರು ಹೇಳಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ಕಾಲಕಾಲಕ್ಕೆ ಕನ್ನಡನಾಡಿನ ಸೀಮಾರೇಖೆಗಳು ಸಂಕೋಚಗೊಂಡಿವೆ.
ಕರ್ಣಾಟ(ಕ) ಎಂಬ ಪದದ ಸರಿಯಾದ ರೂಪ ಯಾವುದು, ಅರ್ಥವೇನು, ನಿಷ್ಪತ್ತಿ ಹೇಗೆ-ಎಂಬ ವಿಷಯದಲ್ಲಿ ಚರಿತ್ರಕಾರರೂ ಸಾಹಿತ್ಯಜ್ಞರೂ ತುಂಬ ಜಿಜ್ಞಾಸೆ ಮಾಡಿರುವುದು ಕಾಣುತ್ತದೆ. ಆ ಪದದ ಸಂಬಂಧವಾಗಿಯೇ ಕನ್ನಡ ಪದವೂ ವಿಚಾರಕ್ಕೆ ಸೇರಿಕೊಂಡಿದೆ. ವಿಚಾರಮಂಥನ ನಡೆದು ಭಿನ್ನ ಭಿನ್ನ ಮತಗಳು ವ್ಯಕ್ತಪಟ್ಟಿವೆ. ಆದರೆ ಒಮ್ಮತವಾದ ಅಥವಾ ಬಹುಜನ ಸಮ್ಮತವಾದ ನಿರ್ಣಯ ಮಾತ್ರ ಇನ್ನೂ ಸಾಧ್ಯವಾಗಿಲ್ಲ. ನಿಶ್ಚಿತ ಪ್ರಮಾಣಗಳ ಅಭಾವವೇ ಇದಕ್ಕೆ ಮುಖ್ಯ ಕಾರಣ. ಕೆಲವು ಅಭಿಪ್ರಾಯಗಳನ್ನು ಇಲ್ಲಿ ಸಂಕ್ಷೇಪವಾಗಿ ಸೂಚಿಸಬಹುದು.
(ಅ) ಕರ್ಣಾಟ(ಕ) ಎಂಬ ಪದಕ್ಕೆ ಸಂಸ್ಕೃತ ಮೂಲವಾಗಿ ನಿಷ್ಪತ್ತಿಯನ್ನು ಕೊಡುವ ಹಳೆಯ ಉಲ್ಲೇಖಗಳಲ್ಲಿ ಇವು ಪ್ರಸಿದ್ಧವಾಗಿವೆ; ಕರ್ಣೇಷು ಅಟತಿ- ಪ್ರಭೂತಯಶಸ್ವಿನ ಏತದ್ದೇಶಸ್ಯ ರಾಜ್ಞೋ ಗುಣಾದಿ ಕೀರ್ತನೇನ ಸರ್ವೇಷಾಂಕರ್ಣೇಷು ಭ್ರಮತೀತಿ. ಕರ್ಣ + ಅಟ್ + ಅಚ್ (ಯಾವ ದೇಶದ ರಾಜನ ಕೀರ್ತಿ ಎಲ್ಲರ ಕಿವಿಯಲ್ಲಿಯೂ ಮೊಳಗು ತ್ತಿರುವುದೊ ಆ ದೇಶ). ಇದು ಶಬ್ದರತ್ನಾವಲಿಯಲ್ಲಿ ಸಿಗುವ ಆಧಾರ. ಕೇಶವವರ್ಣಿಯೆಂಬ (ಪ್ರ.ಶ. 1356) ಜೈನ ಪಂಡಿತನ ಪ್ರಕಾರ ಭೇದನಾರ್ಥಕವಾದ ಕರ್ಣ ಧಾತುವಿನಿಂದ ಕರ್ಣಾಟ ಪದವಾಯಿತು. ದಿವ್ಯಭಾಷೆಯಿಂದ ಬೇರೆಯಾಗಿ ವ್ಯವಹಾರದಲ್ಲಿರುವ ಭಾಷೆಯೆಂದು ಆ ಪದದ ಅರ್ಥ. ವೆಂಕಟಾಧ್ವರಿಯ (ಪ್ರ.ಶ.ಸು. 1700) ವಿಶ್ವಗುಣಾದರ್ಶದಲ್ಲಿ ಕರ್ಣಾಟ ದೇಶೋ ಯಃ ಪುರ್ವಂ ಕರ್ಣದೇಶಮಭೂಷಯಾತ್ ಸ ಏಷ ಸಾಂಪ್ರತಂ ಪಶ್ಯ ಚಕ್ಷುಷೋರ್ಭೂಷಣಾಯತೇ|| ಎಂದೂ ಕರ್ಣಯೋಃ ಅಟತೀತಿ ಕರ್ಣಾಟಃ ಅಟ ಗತೌ ಇತಿಧಾತೋಃ ನಿಷ್ಪನ್ನಶ್ಯಬ್ದಃ || ಎಂದೂ ನಿರೂಪಣೆಯಿದೆ. ಸ್ಕಂದಪುರಾಣದ ಪ್ರಕಾರ ಕರ್ಣಾಟನೆಂಬ ರಾಕ್ಷಸನಿಂದ ನಾಡಿಗೆ ಈ ಹೆಸರಾಯಿತಂತೆ.
ಕವಿಕಲ್ಪಿತಗಳೆಂದು ಹೇಳಿ ಈ ಅರ್ಥ ಮತ್ತು ನಿಷ್ಪತ್ತಿಗಳನ್ನು ರಾ. ನರಸಿಂಹಾಚಾರ್ ಮೊದಲಾದ ಮಹನೀಯರು ಗ್ರಾಹ್ಯಮಾಡಿಲ್ಲ. ರಾಜವಾಡೆಯವರು ಕರಣ+ನಟ=ಕರ್ಣಾಟ ಎಂದು ನಿಷ್ಪತ್ತಿ ಹೇಳಿದ್ದಾರೆ. ಮನು ತನ್ನ ಕಾಲದ ವ್ರಾತ್ಯ ಕ್ಷತ್ರಿಯರ ಪಂಗಡಗಳನ್ನು ವಿವರಿಸುತ್ತ ನಟಶ್ಚ ಕರಣಶ್ಷೈವ ಎಂಬುದಾಗಿ ಎರಡು ಬಗೆಗಳನ್ನು ಕೂಡ ಹೇಳಿದ್ದಾನೆ ಎಂಬ ಆಧಾರವನ್ನು ಹಿಡಿದು, ಕರಣ ಮತ್ತು ನಟರ ಸಮ್ಮಿಶ್ರ ಪಂಗಡವೇ ಕರ್ಣಾಟವೆಂದು ಗ್ರಹಿಸಿದ್ದಾರೆ. ಇದನ್ನು ವಿಮರ್ಶಿಸುತ್ತ ಶಂ. ಬಾ. ಜೋಶಿಯವರು ಬೇರೆ ಸ್ಮೃತಿಗಳಲ್ಲಿಯೂ ನಟರ ಉಲ್ಲೇಖಗಳನ್ನು ಗುರುತಿಸಿ ಮತ್ಸ್ಯ ಪುರಾಣದಲ್ಲಿ ಕರ್ಣ ಎಂದಿರುವ ಜನಪದ ವಾಚಕವನ್ನು ಕರಣ ಎಂಬುದರೊಡನೆ ಅಭಿನ್ನವಾಗಿ ಗ್ರಹಿಸಿ, ಕರಣ+ನಟ-ಕರ್ಣ್ನಾಟ > ಕರ್ಣಾಟ ಎಂದೋ ಕರ್ಣ+ನಟ=ಕರ್ಣಾಟ ಎಂದೋ ಆಗಬಹುದೆಂದು ಸೂಚಿಸಿ, ಆ ಶಬ್ದಗಳ ಮೂಲವನ್ನು ಮಾತ್ರ ದೇಶೀಯವೆಂದು (ಕನ್ನಡವೆಂದು) ಹೇಳಿದ್ದಾರೆ. ಆದರೆ ಈ ಸಮೀಕರಣಗಳನ್ನು ಪುಷ್ಟೀಕರಿಸುವ ಬೇರೆ ಪ್ರಮಾಣಗಳಿಲ್ಲ.
(ಆ) ಕನ್ನಡ ಎಂಬ ದೇಶ್ಯ ಶಬ್ದವೇ ಕರ್ಣಾಟ(ಕ) ಎಂಬ ಸಂಸ್ಕೃತರೂಪವನ್ನು ಆನಂತರದಲ್ಲಿ ಪಡೆಯಿತು ಎನ್ನುವ ಆಧುನಿಕ ಭಾಷಾವಿದ್ವಾಂಸರ ಕೆಲವು ಅಭಿಪ್ರಾಯಗಳು ಹೀಗಿವೆ:
1. ಗುಂಡರ್ಟನ ಪ್ರಕಾರ ದಕ್ಷಿಣ ದಕ್ಖನಿನ ನೆಲ ಕಪ್ಪುಮಣ್ಣಿನ ಭೂಮಿಯಾಗಿದೆ; ಆದ್ದರಿಂದ ಕರ್ನಾಡು (ಕಪ್ಪು ನಾಡು) ಎಂಬುದು ಕರ್ಣಾಟದ ಮೂಲರೂಪ. ಕರ್+ನಾಟ್+ಅಗಂ ಎಂದರೆ ಕಪ್ಪುನಾಡಿನ ಒಳಭಾಗ (ಪ್ರದೇಶ)- ಎಂಬುದು ಕೂಡ ಅವರ ಇನ್ನೊಂದು ಸೂಚನೆ. ಮೊದಲನೆಯದನ್ನು ಕಾಲ್ಡ್‌ವೆಲ್ ಮತ್ತು ಆರ್. ರಘುನಾಥರಾಯರು ಒಪ್ಪಿದ್ದಾರೆ; ಎರಡನೆಯದನ್ನು ಉದ್ಧರಿಸಿದ್ದಾರೆ.
2. ಕನ್ನಡನಾಡು ಸಮುದ್ರ ಮಟ್ಟಕ್ಕಿಂತ ಎತ್ತರವಾಗಿ ಘಟ್ಟದ ಮೇಲಿದೆ. ಕರುನಾಡು ಎಂಬುದು ಕರುಮಾಡ ಎಂಬಂತೆ ಸೀಮೆ (ಕಣಿವೆ ಮೇಲಣ ಸೀಮೆ) ಆದ್ದರಿಂದ ಕರು-ನಾಡು (ಎತ್ತರವಾದ ನಾಡು) ಎಂಬುದು ದ್ರಾವಿಡಭಾಷೆಗಳಲ್ಲಿ ಮುಂದೆ ಕನ್ನಡ ಎಂಬು ದಾಗಿಯೂ ಸಂಸ್ಕೃತದಲ್ಲಿ ಕರ್ಣಾಟ ಎಂಬುದಾಗಿಯೂ ಪರಿವರ್ತಿಸಿರಬಹುದು. ಇದು ಎಚ್. ನಾರಾಯಣರಾಯರ ಅಭಿಪ್ರಾಯ.
3. ಕರುನಡಂ (= ಕನ್ನಡ): ಕರ್ಣಾಟ. ಕರುನಡಂ ಎಂಬುದೂ ಕನ್ನಡಂ ಎಂಬುದೂ ತಮಿಳು ಲಕ್ಷಣ ಗ್ರಂಥಗಳ ವೃತ್ತಿಗಳಲ್ಲಿ ಉಕ್ತವಾಗಿವೆ. ತಮಿಳಿನಲ್ಲಿ ಕರು ಎಂದರೆ ಬೆಟ್ಟ ಎಂದರ್ಥ. ಕೀಳ್ನಾಡಿನವರಾದ ತಮಿಳರು ಮೇಲ್ನಾಡನ್ನು ಕರುನಾಡು-ಕರುನಡ ಎಂದು ಕರೆದಿರಬಹುದು; ಕಮ್ಮಿತು + ನಡೆ (ಕಂ+ನಡೆ>ಕನ್ನಡ). ಇದು ಆರ್. ತಾತಾಚಾರ್ಯರ ಅಭಿಮತ.
4. ಕರಂ, ಕರು, ಕಡು ಎಂಬವು ದೊಡ್ಡ, ವಿಸ್ತಾರವಾದ ಮಹಾ ಎಂಬ ಅರ್ಥದ ಪದಗಳು. ಆದ್ದರಿಂದ ಕರುನಾಡು ಎಂದರೆ ಮಹಾರಾಷ್ಟ್ರ. ಕರು + ನಾಡು > ಕರ್ + ನಾಡು > ಕರ್ನಾಡು (=ದೊಡ್ಡ ದೇಶ) ಎಂಬ ಕನ್ನಡ ಸಮಾಸಪದವೇ ಸಂಸ್ಕೃತದಲ್ಲಿ ಕರ್ಣಾಟ ಎಂದು ಆಗಿರಬೇಕು. ಇದು ಎಂ.ಗೋವಿಂದ ಪೈಗಳ ಮತ. ರಾ. ಹ. ದೇಶಪಾಂಡೆಯವರ ಆಭಿಪ್ರಾಯವೂ ಒಟ್ಟಿನಲ್ಲಿ ಇದೇ ಆಗಿದೆ.
5. (ಪರಿಮಳವಾಚಿಯಾದ) ಕಮ್ಮಿತು + ನಾಡು=ಕನ್ನಾಡು > ಕನ್ನಡು > ಕನ್ನಡ. ಕನ್ನಡ ಎಂಬ ಪದಕ್ಕೆ ಪರಿಮಳ ವಿಶಿಷ್ಟವಾದ ದೇಶದ ಭಾಷೆ ಎಂದು ಅರ್ಥ. ಕನ್ನಡ ದೇಶ ಗಂಧದ ಮರದ ಕಾಡುಗಳಿಗೂ ತಾವರೆಕೊಳಗಳಿಗೂ ಪ್ರಸಿದ್ಧಿಪಡೆದಿರುವುದರಿಂದ ಕಮ್ಮಿತು ಎಂಬ ವಿಶೇಷಣ ಅನುರೂಪವಾದುದು-ಎಂದು ರಾ. ನರಸಿಂಹಾಚಾರ್ಯರು ಹೇಳುತ್ತಾರೆ. ಆರ್. ತಾತಾಚಾರ್ಯರು ಈ ಅಭಿಪ್ರಾಯವನ್ನು ಒಪ್ಪಿಕೊಂಡಿರುವಂತೆ ತೋರುತ್ತದೆ.
6. ಕನ್ (ಎಂದರೆ ಕಾಣು ಅಥವಾ ಒಡಮೂಡು) ಎಂಬ ಧಾತುವಿನಿಂದ ಕನ್ನಡ ಹುಟ್ಟಿದೆ. ಕನ್ + ಅಳ್ =ಕನ್ನಳ್, ಕನ್ನಡ. ಕನ್ - ಅಳ್ = ಒಡಮೂಡುವುದನ್ನು ಉಳ್ಳದ್ದು; ಭಾವಗಳನ್ನು ಒಡಮೂಡಿಸುವುದು - ಕನ್ನಡ. ಹೀಗೆಂದು ದ. ರಾ. ಬೇಂದ್ರೆ ಮತ್ತು ಬೆಟಗೇರಿ ಕೃಷ್ಣಶರ್ಮರ ಅಭಿಪ್ರಾಯ.
7. ಕರ್- ನಾಟ್- ಅಗಂ ಎಂದರೆ ಕರಿಯ ನಾಡನ್ನು ಒಳಗೊಂಡ ಪ್ರದೇಶ. ಆದರೆ ಶಬ್ದರೂಪ ಕರ್ಣಾಟಕವೇ ಹೊರತು ಕರ್ನಾಟಕ ಅಲ್ಲ. ಇದು ಬಿ.ಎಂ.ಶ್ರೀ. ಅವರ ಧೋರಣೆ. ಒಟ್ಟಿನಲ್ಲಿ ಇದು ಗುಂಡರ್ಟ್ ಅವರ ಅಭಿಪ್ರಾಯವನ್ನು ಪೋಷಿಸುತ್ತದೆ.
8. ಮೊಹೆಂಜೋದಾರೋ ಚಿತ್ರಲಿಪಿಯ ಸಂಕೇತವನ್ನು ಗಮನಿಸಿದರೆ ಕಣ್ನಿರ್ ಪದದ ಸಂಸ್ಕೃತರೂಪ ಕರ್ಣಾಟಕ ಆಗಿರಬಹುದು- ಎಂದರೆ ಫಾದರ್ ಹೆರಾಸರ ಮತ.
9. ಅಡಿಯಲ್ಲಿ ಕಣ್ಣುಳ್ಳವರು ಯಾರೋ ಅವರು ಕನ್(ಣ್) + ಅಡಿಗರ್ ಅರ್ಥಾತ್ ಕನ್ನಡಿಗರು- ಎಂಬುದು ರೆ. ಚನ್ನಪ್ಪ ಉತ್ತಂಗಿಯವರ ಮತ.
10. ಕನ್ನಡದ ರಾಜಕುಲಕ್ಕೆ ಕದಂಬ ಅಥವಾ ಕರಂಬ ಎಂಬ ಹೆಸರಿದೆ. ಆ ಕರ್ ಅಲ್ಲವೆ ಕನ್ ಎಂಬ ದಸ್ಯುವರ್ಗದಿಂದ ಕನ್ನಡ ಎಂಬ ಹೆಸರಾಗಿರಬಹುದು. ಕರು ಪದಕ್ಕೆ ಎತ್ತರ, ಶಿಖರ, ಮಹತ್ತು ಎಂಬ ಅರ್ಥಗಳಿರುವುದು ತಿಳಿದಿದೆ. ಕನ್ ಮತ್ತು ಕರ್ ಎಂಬ ರೂಪಗಳು ಅಭಿನ್ನ. ಅದರಿಂದ ಕನ್ + ನಾಡು= ಕನ್ನಾಡು(ಕನ್ನಡ); ಕರ್ + ನಾಡು =ಕರುನಾಡು (ಕರುನಾಡಗ, ಸಂ. ಕರ್ಣಾಟಕ); ಕಱು ತಳದ ನಾಟರೇ ಕನ್ನಡಿಗರು. ಆದಿಜನಾಂಗದೊಳಗಿನವರಾದ ಕನ್ ಮತ್ತು ನಾಟರು ಬೆರೆದು ಕನ್ನಡಿಗರೆನ್ನಿಸಿರಬಹುದು. ಇದು ಮುಳಿಯ ತಿಮ್ಮಪ್ಪಯ್ಯನವರ ವಾದ.
11. ಶ್ರೀಶೈಲಪರ್ವತದ ತಪ್ಪಲಿನಲ್ಲಿ ಹಿಂದಿನ ಕಾಲದಲ್ಲಿ ಕಣ್ಣ ವಿಷಯ (ಕರ್ಣಾಟ ಸೀಮಾ), ಕನ್ನಾಡು ಎಂಬ ಚಿಕ್ಕ ಜಿಲ್ಲೆಯಿತ್ತು; ಆ ಮೂಲಕವಾಗಿಯೇ ತಮ್ಮ ನಾಡಿಗೆ, ನುಡಿಗೆ ಕನ್ನಡಿಗರು ಆ ಹೆಸರನ್ನು ಪಡೆದುಕೊಂಡರು ಎಂದು ತೋರುತ್ತದೆಂದು ಹೇಳಿದ್ದಾರೆ, ಎನ್. ವೆಂಕಟರಮಣಯ್ಯನವರು.
12. ಳ-ಣ-ನ ಗಳಲ್ಲಿ ಪರಸ್ಪರವಾಗಿ ಪಲ್ಲಟವುಂಟು. ಕಳವರು (ಕಳ್ವರು ಅಥವಾ ಕಳ್ಳರು=ಕಳಭ್ರರು) ಎಂಬ ದ್ರಾವಿಡ ವರ್ಗದ ಬಹುಪ್ರಾಚೀನ ಶಾಖೆಯ ಜನಾಂಗವೇ ಕಣ್ಣರು ಅಥವಾ ಕನ್ನರು. ಕನ್ನರ ನಾಡು ಕನ್ನಾಡು (ಕನ್ನಡ). ಇದು ಕನ್ನಾಡು>ಕನ್ನಾಟ>ಕರ್ಣಾಟ ಈ ಕ್ರಮದಿಂದ ಸಂಸ್ಕೃತದಲ್ಲಿ ಸೇರಿಕೊಂಡಿದೆ, ಕರ್ಣಾಟಕದಲ್ಲಿರುವ ದ್ವಿರುಕ್ತಿದೋಷ ಕನ್ನಾಡ (ಕನ್ನಡ)ದಲ್ಲಿ ಸ್ವಲ್ಪವೂ ಇಲ್ಲ. ಇದು ಶಂ.ಬಾ. ಜೋಶಿಯವರ ಮತ.
13. ಕನ್ನಾಡ ಅಥವಾ ಕರ್ನಾಡು ಎಂಬ ಪದದ ಮೂಲ ಅರ್ಥ ಒಂದು ಮಹಾನಾಡು ಅಥವಾ ಒಂದು ಎತ್ತರವಾದ ನಾಡು ಎಂದಿದ್ದು, ಇವನ್ನು ಸಂಸ್ಕೃತರೂಪಕ್ಕೆ ತಿರುಗಿಸಿದಾಗ ಕರ್ನಾಟ, ಕರ್ನಾಟಕ, ಮಹಾರಾಷ್ಟ್ರ ಆಗಿರಬೇಕು-ಎಂದು ಬಿ.ಎ.ಸಾಲೆತೊರೆಯವರ ವಾದ.
14. ಕಣಾ(ನಾರ್)ಟ, ಕಣಾ(ನಾರ್)ಟಕ ಶಬ್ದಗಳು ಮೂಲತಃ ಸಂಸ್ಕೃತ ಶಬ್ದಗಳಲ್ಲ. ಪುನ್ನಾಡು ಸಂಸ್ಕೃತಕ್ಕೆ ಬರುವಾಗ ಪುನ್ನಾಟ ಆದಂತೆ ಕರ್ನಾಡು ಎಂಬ ದೇಶ್ಯ ಶಬ್ದ ಸಂಸ್ಕೃತಜ್ಞರ ಉಚ್ಚಾರಣೆಯಲ್ಲಿ ಕಣಾ(ನಾರ್)ಟ ಎಂಬ ರೂಪವನ್ನು ತಾಳಿರಬೇಕು. ಕಣಾ(ನಾರ್)ಟ+ಕ=ಕಣಾ(ನಾರ್)ಟಕ, ಇದು ತೀ.ನಂ. ಶ್ರೀಕಂಠಯ್ಯನವರ ಹೇಳಿಕೆ.
15. ಕರ್ನಾಡುವಿನಿಂದ ಕರ್ನಾಟ ಹುಟ್ಟಿ ಸ್ವಾರ್ಥದಲ್ಲಿ ಕ ಪ್ರತ್ಯಯ ಬಂದು ಕರ್ನಾಟಕ ಆಗಿರುವುದು ಸಾಧ್ಯ. ಕರ್ನಾಟ, ಕರ್ನಾಟಕ ರೂಪಗಳು ಅಪಾಣಿನೀಯವೆಂದು ಅವನ್ನು ಕರ್ಣಾಟ ಕರ್ಣಾಟಕ ಎಂದು ಮಾಡಿಕೊಂಡಿರಬೇಕು ; ಆಗ ಮೂಲ ಪದದ ಅರ್ಥ ಮರೆಯಾಗಿಯೋ ಗೊತ್ತಾಗದೆಯೋ ಪುನ್ನಾಟವನ್ನು ಪುಂರಾಷ್ಟ್ರ ಎಂದು ಮಾಡಿಕೊಂಡಂತೆ ಕರ್ಣಾಟದ ನಿಷ್ಪತ್ತಿಯನ್ನು ಕರ್ಣೇಷು ಅಟತಿ ಇತಿ ಕರ್ಣಾಟಃ ಎಂದು ವಿವರಿಸಲು ಸ್ವಾಭಾವಿಕವಾಗಿ ಯತ್ನಿಸಿರಬಹುದು. ಪ್ರಯೋಗಗಳನ್ನು ನೋಡಿದರೆ ನಕಾರಯುಕ್ತ ಕರ್ನಾಟಕವೂ ಣಕಾರಯುಕ್ತ ಕರ್ಣಾಟಕವೂ ಬಹುಕಾಲದಿಂದ ವಿಕಲ್ಪವಾಗಿ ಪ್ರಯೋಗವಾಗಿರುವುದಕ್ಕೆ ಶಾಸನೋಕ್ತವಾದ ಉದಾಹರಣೆಗಳಿರುವುದರಿಂದ ಎರಡೂ ಗ್ರಾಹ್ಯವೇ. ಕರ್ನಾಡು ಪ್ರಾಯಃ ಪ್ರಾಕೃತ ಪ್ರಭಾವದಿಂದ, ಪ್ರಾಚೀನವಾದ ಪುನ್ನಾಡು ಪುನ್ನಾಟ ಆದಂತೆ ಕರ್ನಾಡು ಕರ್ನಾಟ ಆಗಿರಬೇಕು. ಇದು ಜಿ. ಪಿ. ರಾಜರತ್ನಂ ಅವರ ಮಂಡನೆ.
ಈ ಮೇಲೆ ಕಾಣಿಸಿದ ಕೆಲವು ಅಭಿಪ್ರಾಯಗಳನ್ನು ಪರಿಶೀಲಿಸಿದರೆ ಕನ್ನಡದೇಶ ಮತ್ತು ಭಾಷೆಗಳಿಗೆ ಆ ಹೆಸರುಗಳು ಎಲ್ಲಿಂದ ಹೇಗೆ ಬಂದುವು ಎನ್ನುವ ವಿಷಯವನ್ನು ಖಚಿತವಾಗಿ ಗೊತ್ತುಮಾಡುವುದು ಇನ್ನೂ ಸಾಧ್ಯವಾಗಿಲ್ಲ ಎನ್ನುವ ಸಂಗತಿ ವಿಶದವಾಗುತ್ತದೆ. ಒಂದೊಂದು ಸೂಚನೆಯಲ್ಲಿಯೂ ಏನಾದರೂ ಕುಂದುಕೊರತೆಗಳನ್ನು ವಿದ್ವಾಂಸರು ಸಪ್ರಮಾಣವಾಗಿ ಎತ್ತಿರುವುದರಿಂದ ಯಾವುದೂ ಬಹುಜನ ಸಮ್ಮತವಾಗಿ ಗ್ರಾಹ್ಯವಾಗಲಾರದೆ ಹೋಗಿದೆ. ಆದರೆ ಈ ಸಮಸ್ಯೆಯ ಕೆಲವಂಶಗಳು ಬಹುಮಂದಿ ಸಂಶೋಧಕರಿಗೆ ಸಮ್ಮತವಾಗಿರುವುದು ಕಾಣುತ್ತದೆ. ಕರ್ನಾ(ರ್ಣಾ)ಟ(ಕ) ಎಂಬ ಸಂಸ್ಕೃತ ಪದದ ಮೂಲ ದೇಶೀಯವಾದುದು. ದೇಶೀಯವಾದುದೊಂದು ಪದದಿಂದ ಸಂಸ್ಕೃತ ರೂಪ ಹುಟ್ಟಿತಲ್ಲದೆ ಸಂಸ್ಕೃತರೂಪ ತದ್ಭವವಾಗಿ ದೇಶೀಯ ಪದ ಹುಟ್ಟಲಿಲ್ಲ. ಅದು ಒಂದು ಸಮಾಸಪದ. ಅದರ ಉತ್ತರಪದ ನಾಡು ಮತ್ತು ಅದರ ಜನ್ಯ ರೂಪಗಳು. ಇನ್ನು ಪೂರ್ವಪದದ ರೂಪ ಎತ್ತರ, ದೊಡ್ಡ , ಮಹಾ ಎಂಬರ್ಥಗಳಿರುವ ಕರು ಎಂಬುದಾಗಿದ್ದರಬೇಕೆಂಬುದು ಹಲವರಿಗೆ ಒಪ್ಪಿಗೆಯಾಗಿರುವಂತೆ ತೋರುತ್ತದೆ. ಕಪ್ಪು ಎಂಬರ್ಥದ ಕರ್ ಎಂಬುದನ್ನೂ ಕೆಲವರು ಒಪ್ಪಿದ್ದಾರೆ. ಜನಾಂಗವಾಚಕವಾದ ಕಳ್, ಕಣ್, ಕರ್, ಕನ್ ಎಂಬುವನ್ನು ಪೂರ್ವಪದವಾಗಿ ತೋರಿಸಲು ಶಂ.ಬಾ. ಜೋಶಿ ಮೊದಲಾದ ವಿದ್ವಾಂಸರು ತುಂಬ ಶ್ರಮಿಸಿದ್ದರೂ ಒದಗಿಸಿರುವ ಪ್ರಮಾಣಗಳು ಪ್ರಾಯಃ ಗಟ್ಟಿಯಾದವಲ್ಲವಾಗಿ ಅವು ಸಾರ್ವತ್ರಿಕ ವಾದ ಮಾನ್ಯತೆ ಪಡೆದುಕೊಂಡಿರುವಂತೆ ತೋರುವುದಿಲ್ಲ. ಉಳಿದ ಕೆಲವು ಸೂಚನೆಗಳು ಹೆಚ್ಚಾಗಿ ಉಹಾಜನ್ಯವಾಗಿಯೇ ಕಾಣುತ್ತವೆ. ಬಹುಜನಸಮ್ಮತವಾಗಿ ತೋರುವ ವ್ಯುತ್ಪತ್ತಿಗಳು ಕೆಲವರು ಸಯುಕ್ತÀವಾದ ಆಕ್ಷೇಪಣೆಗಳನ್ನು ಒಡ್ಡಿರುವುದು ಕಾಣುತ್ತದೆ. ಕರು ಪದಕ್ಕೆ ವಿಸ್ತಾರವಾದ, ಎತ್ತರವಾದ ಮೊದಲಾದ ಅರ್ಥಗಳು ಇಲ್ಲವೆಂದೂ ತಮಿಳು ಉಲ್ಲೇಖಗಳಲ್ಲಿ ಅಲ್ಲದೆ ಕರುನಾಡು ಎಂಬ ಮಾತು ಕನ್ನಡದಲ್ಲಿ ಎಲ್ಲೂ ಬಳಕೆಯಾಗಿಲ್ಲವೆಂದೂ ಎತ್ತರವಲ್ಲದ ಬಯಲು ಸೀಮೆಯೂ ಕನ್ನಡನಾಡಿನಲ್ಲಿ ಉಂಟೆಂದೂ ಮುಂತಾಗಿ ವಾದಿಸಿದ್ದಾರೆ. ಹೀಗೆಯೇ ಕನ್ನಡದ ನೆಲದಲ್ಲಿ ಕಪ್ಪುಮಣ್ಣಿನ ನೆಲವಲ್ಲದ ಭಾಗಗಳೂ ಬಹುವಾಗಿರುವುದರಿಂದ ಕರ್ (ಕರಿದು)-ನಾಡು=ಕನ್ನಾಡು ಆಯಿತೆಂದು ಒಪ್ಪುವುದಕ್ಕೆ ಆಗದೆಂದಿದ್ದಾರೆ. ಈಚೆಗೆ ಈ ವಿಷಯದಲ್ಲಿ ಹೆಚ್ಚಿನ ವಿಚಾರ ವಿಮರ್ಶೆಗಳೇನೂ ಆಗಿಲ್ಲ; ಪೂರ್ವೋಕ್ತವಾದ ಎರಡು ನಿಷ್ಪತ್ತಿಗಳಲ್ಲಿ ವಿಮರ್ಶಕರು ಯಾವುದಾದರೊಂದರ ಕಡೆಗೆ ಒಲವನ್ನು ತೋರುವಂತೆ ಕಾಣುತ್ತದೆ.
ಶಬ್ದಾರ್ಥದ ವಿಚಾರದಲ್ಲಿ ವಿವಿಧಾಭಿಪ್ರಾಯಗಳು ವ್ಯಕ್ತವಾಗಿರುವಂತೆಯೇ ಶಬ್ದರೂಪದ-ಮುಖ್ಯವಾಗಿ ಕರ್ನಾಟ(ಕ) - ಕರ್ಣಾಟ(ಕ) ಎಂಬ ರೂಪಗಳ-ವಿಚಾರದಲ್ಲಿಯೂ ಬಹುವಾಗಿ ಚರ್ಚೆ ನಡೆದಿರುವುದು ಕಾಣುತ್ತದೆ. ಈ ಚರ್ಚೆಯಲ್ಲಿ ಶ್ರೀಯುತರಾದ ತೋಗೆರೆ ನಂಜುಂಡಶಾಸ್ತ್ರಿ, ಎಚ್. ನಾರಾಯಣರಾವ್, ಆರ್. ತಾತಾಚಾರ್ಯ, ರಾ.ಹ. ದೇಶಪಾಂಡೆ, ತೀ.ನಂ. ಶ್ರೀಕಂಠಯ್ಯ, ಜಿ.ಪಿ. ರಾಜರತ್ನಂ ಮೊದಲಾದ ವಿದ್ವಾಂಸರು ಪಾಲ್ಗೊಂಡಿದ್ದಾರೆ. ಕರ್ಣಾಟ(ಕ) ಶುದ್ಧ ಸಂಸ್ಕೃತ ಪದವೆಂದೂ ಅದಕ್ಕೆ ಸಂಸ್ಕೃತದಲ್ಲಿ ವ್ಯುತ್ಪತ್ತಿ ಕೊಡಬಹುದೆಂದೂ ಕನ್ನಡ ಅದರ ತದ್ಭವವೆಂದೂ ಆದ್ದರಿಂದ ಕರ್ಣಾಟ(ಕ)ವೇ ಸಾಧುವೆಂದೂ ಎನ್ನುವವರು ಸಾಮಾನ್ಯವಾಗಿ ಶಬ್ದರತ್ನಾವಲಿಯಲ್ಲಿ ಉಕ್ತವಾದ ವ್ಯುತ್ಪತ್ತಿಯನ್ನೂ ಕೇಶಿರಾಜ ಅಪಭ್ರಂಶ ಪ್ರಕರಣದಲ್ಲಿ ಕರ್ಣಾಟದ ತದ್ಭವ ಕನ್ನಡ ಎಂದು ಹೇಳಿರುವುದನ್ನೂ ಸಂಸ್ಕೃತ ಕನ್ನಡ ಗ್ರಂಥಗಳಲ್ಲಿ ಕರ್ಣಾಟ(ಕ) ಪದದ ಪ್ರಾಚುರ್ಯವನ್ನೂ ಆಧಾರವಾಗಿ ತೋರಿಸುತ್ತಾರೆ. ಪೂರ್ವೋಕ್ತವಾದ ಸಂಸ್ಕ್ರತ ಗ್ರಂಥದ ವ್ಯುತ್ಪತ್ತಿಯನ್ನು ಯಾವ ದೇಶಕ್ಕಾಗಲಿ ಭಾಷೆಗಾಗಲಿ ಅನ್ವಯಿಸಬಹುದೆಂದೂ ಕೇಶಿರಾಜ ಕೆಲವು ದ್ರಾವಿಡ ಶಬ್ದಗಳನ್ನೂ ಸಂಸ್ಕ್ರತದ ತದ್ಭವವಾಗಿ ಹೇಳಿರುವುದರಿಂದ ಆತನ ಸೂಚನೆ ಪ್ರಮಾಣವಾಗದೆಂದೂ ಮುಂತಾದ ಆಕ್ಷೇಪಗಳಿವೆ. ಎರಡನೆಯ ಪಂಥದವರು ಕರ್ಣಾಟ(ಕ)ಕ್ಕೆ ಮೂಲ ಕನ್ನಡ ಅಥವಾ ಕರ್ನಾಟ(ಕ) ಯಾವುದೇ ಇರಲಿ, ರಕಾರ ಸಂಪರ್ಕವಿರುವ ನಕಾರ ಣಕಾರವಾಗಿ ಮಾರ್ಪಡಬೇಕಾದ್ದು ಸಂಸ್ಕೃತ ವ್ಯಾಕರಣದ ಮರ್ಯಾದೆ ಯಾದ್ದರಿಂದ ಕರ್ಣಾಟ(ಕ) ಎಂಬ ಶಬ್ದರೂಪವೇ ಸಾಧು ಎನ್ನುತ್ತಾರೆ. ಇದನ್ನು ಆಕ್ಷೇಪಿಸುವವರು, ದುರ್ನಯ ದುರ್ನೀತಿ ಇತ್ಯಾದಿ ಸಂಸ್ಕೃತ ಪದಗಳಲ್ಲಿ ರಕಾರ ಸಂಪರ್ಕದ ನಕಾರಣಕಾರವಾಗದಿರುವುದನ್ನು ತೋರಿಸಿ, ಕರ್ನಾಟ(ಕ) ತಪ್ಪೆಂದು ಹೇಳುವುದಕ್ಕಾಗುವುದಿಲ್ಲ ಎನ್ನುತ್ತಾರೆ. ಕರ್ನಾಟ(ಕ) ಅಚ್ಚಕನ್ನಡ ಶಬ್ದ; ಅದಕ್ಕೆ ಕನ್ನಡದಲ್ಲಿಯೇ ವ್ಯುತ್ಪತ್ತಿಯುಂಟು. ಸಂಸ್ಕೃತಜ್ಞರು ಅವರ ಭಾಷಾ ಮರ್ಯಾದೆಗೆ ಅನುಸಾರವಾಗಿ ಅದನ್ನು ಕರ್ಣಾಟ(ಕ)ವೆಂದು ಮಾಡಿದ್ದಾರೆ ಎನ್ನುವುದು ಇನ್ನೊಂದು ಪಂಥ. ಕರ್ನಾಟ(ಕ) ಅಚ್ಚಕನ್ನಡ ಎನ್ನುವವರ ವಾದವನ್ನು ಆಧುನಿಕ ಭಾಷಾ ಶಾಸ್ತ್ರಜ್ಞರ ಮತ್ತು ಇತರರ ನಿರೂಪಣೆಯಲ್ಲಿ ಕಾಣುತ್ತೇವೆ. ಈ ಜಿಜ್ಞಾಸೆ ಪ್ರಬಲವಾಗಿದ್ದ ಕಾಲದಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಹೆಸರನ್ನು ಕರ್ಣಾಟಕ ಸಾಹಿತ್ಯ ಪರಿಷತ್ತು ಎಂಬುದರಿಂದ ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಿಸಿ ಕೊಂಡಿತೆಂಬುದನ್ನು ಇಲ್ಲಿ ನೆನೆಯಬಹುದು. ಕರ್ಣಾಟಕ, ಕರ್ನಾಟಕ ಎರಡು ರೂಪ ಗಳನ್ನೂ ಭಾಷಾಶಾಸ್ತ್ರದ ತತ್ತ್ವಗಳಿಗೆ ಅನುಸಾರವಾಗಿ ವಿಮರ್ಶಿಸಿ, “ಒಂದು ಶಬ್ದರೂಪ ಸಾಧುವೆ ಅಸಾಧುವೆ ಎಂದು ನಿರ್ಣಯಿಸುವುದರಲ್ಲಿ ಶಿಕ್ಷಾಶಾಸ್ತ್ರ, ಭಾಷಾಗತಿ, ಶಿಷ್ಟಸಮ್ಮತಿ ಇವೆಲ್ಲವನ್ನೂ ಗಮನಕ್ಕೆ ತಂದುಕೊಳ್ಳಬೇಕು. ಕರ್ಣಾಟಕ ಎಂಬ ಮೂರ್ಧನ್ಯಸಹಿತ ರೂಪ ಪಾಣಿನಿ ಸಮ್ಮತವಾದದ್ದು. ಕನ್ನಡನಾಡಿನ ಒಂದು ಭಾಗದಲ್ಲಿ (ಮುಖ್ಯವಾಗಿ, ಮೈಸೂರಿನಲ್ಲಿ) ಬಹುಮಟ್ಟಿಗೆ ಬಳಕೆಯಾಗಿರತಕ್ಕದ್ದು. ಆದಕಾರಣ ಅದರ ಉಚ್ಚಾರಣೆ ಕಠಿಣವಾದರೂ ಶಿಕ್ಷಾಶಾಸ್ತ್ರದ ಬೆಂಬಲ ಅದಕ್ಕಿಲ್ಲದೆ ಹೋದರೂ ಅದು ಸರ್ವಥಾ ತ್ಯಾಜ್ಯವೆಂದು ಹೇಳಲಾಗುವುದಿಲ್ಲ. ಕರ್ನಾಟಕವೆಂಬ ರೂಪವಾದರೋ ಹೆಚ್ಚುಯುಕ್ತ ವಾದದ್ದು, ಉಚ್ಚಾರಣೆಗೆ ಸುಲಭವಾದದ್ದು, ಕನ್ನಡನಾಡಿನ ಉತ್ತರ ಭಾಗದಲ್ಲೆಲ್ಲಾ ರೂಢಿಯಾಗಿರತಕ್ಕದ್ದು. ಇದನ್ನು ಅಸಾಧುವೆಂದು ಹೊರದೂಡುವುದು ಹಾಗಿರಲಿ; ಮೂರ್ಧನ್ಯಸಹಿತ ರೂಪಕ್ಕಿಂತ ಹೆಚ್ಚು ಉಪಾದೇಯವೆಂದು ಹೇಳಲು ಮನಸಿಲ್ಲದಿದ್ದರೆ ಅದರಷ್ಟೇ ಸಾಧುವೆಂದಾದರೂ ಒಪ್ಪಲೇಬೇಕು. ಸದ್ಯಕ್ಕೆ ಎರಡು ರೂಪಗಳನ್ನೂ ಅಂಗೀಕರಿಸೋಣ. ಸಂಸ್ಕೃತದಲ್ಲೇ ಕೋಷ-ಕೋಶ, ಪೃಥ್ವೀ-ಪೃಥಿವೀ ಮೊದಲಾದ ಜೋಡಿಗಳಿಲ್ಲವೆ? ಕರ್ಣಾಟಕ-ಕರ್ನಾಟಕಗಳಲ್ಲಿ ಕೊನೆಗೆ ಯಾವುದು ನಿಲ್ಲಬೇಕೆಂಬುದನ್ನು ಕಾಲಪುರುಷ ನಿರ್ಣಯಿಸಲಿ.” ತೀ.ನಂ. ಶ್ರೀಕಂಠಯ್ಯನವರ ಈ ಅಭಿಪ್ರಾಯ ಈ ಸಮಸ್ಯೆಯ ಜಿಜ್ಞಾಸುಗಳಿಗೆ ತಕ್ಕ ಸಮಾಧಾನವನ್ನು ನೀಡಬಹುದೆಂದು ತೋರುತ್ತದೆ. ಶಬ್ದರೂಪದ ಬಗ್ಗೆ ವಿದ್ವಾಂಸರ ಚರ್ಚೆಗಳು ಏನೇ ಇದ್ದರೂ ಕನ್ನಡನಾಡಿಗೆ ಕರ್ನಾಟಕ ಎಂಬ ಹೆಸರು ಇರಬೇಕೆಂದು ವಿಧಾನಮಂಡಲಗಳಲ್ಲಿ ತೀರ್ಮಾನವಾಗಿ (1973) ಈಗ ಈ ರೂಪವೇ ಮಾನ್ಯವಾಗಿದೆ. (ಟಿ.ವಿ.ವಿ.)

ಶುಕ್ರವಾರ, ಜುಲೈ 3, 2015

ಎನ್.ಸಿ.ಎಫ್ ಪೊಶೀಷನ್ ಪೇಪರ್ ಭಾಷಾಬೋಧನೆಯ ಮೌಲ್ಯಮಾಪನ

ಎನ್.ಸಿ.ಎಫ್ ಪೊಶೀಷನ್ ಪೇಪರ್ ಭಾಷಾಬೋಧನೆಯ ಮೌಲ್ಯಮಾಪನ




Contents [hide]
೧ ಪರಿಚಯ
೨ ಪರೀಕ್ಷೆಯ ವಿಧಾನಗಳು
೩ ಪರೀಕ್ಷೆಯನ್ನು ಅಭಿವೃದ್ಧಿಪಡಿಸುವುದು
೪ ಪರೀಕ್ಷಾ ಕಾರ್ಯಗಳು
ಪರಿಚಯ
ಮೌಲ್ಯಮಾಪನ ಕಲಿಕಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ.. ಪ್ರಸ್ತುತ ಅಂತಿಮ ಪರೀಕ್ಷೆ ಆಧಾರಿತ ಮೌಲ್ಯಮಾಪನ ವಿಧಾನಗಳು ಅತಿಯಾದ ಆತಂಕವನ್ನು ಸೃಷ್ಟಿಸುತ್ತದೆ. ಇದರಿಂದ ಕಳೆದ ಹಲವಾರು ವರ್ಷಗಳಿಂದ ವಿಧ್ಯಾಭ್ಯಾಸದ ಉತ್ತುಂಗವಾದ ತರಗತಿಗಳಾದ ಹತ್ತನೇ ಮತ್ತು ಹನ್ನೆರಡನೇ (PUC) ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಮಾಡುತ್ತಿರುವ ಆತ್ಮಹತ್ಯಾ ಪ್ರಯತ್ನಗಳು ದ್ವಿಗುಣಗೊಂಡಿವೆ. ಹಲವಾರು ಅಧ್ಯಯನಗಳು (ಹೊರ್ವಿಟ್ಜ್, ಹೋರ್ವಿಟ್ಸ್ ಮತ್ತು ಕೋಪ್1986; ; ಸ್ಟೈನ್ಬರ್ಗ್ ಮತ್ತು ಹೋರ್ವಿಟ್ಸ್ 1986; ಅಬ್ದುಲ್ ಹಮೀದ್ 2005) ಸಹ ಆತಂಕದ ಮಟ್ಟ ಹೆಚ್ಚಿದಂತೆಲ್ಲಾ ಪರೀಕ್ಷೆಗಳಲ್ಲಿ ಪ್ರದರ್ಶನದ ಮೇಲೆ ಋಣಾತ್ಮಕ ಸಂಬಂಧ ಬೀರುತ್ತವೆ ಎಂದು ತೋರಿಸಿವೆ. ಸಾಧ್ಯವಿರುವ ಪ್ರಯತ್ನಗಳನ್ನು ಮಾಡುವ ಮೂಲಕ ಮೌಲ್ಯಮಾಪನ ವಿಧಾನಗಳು ಹೆಚ್ಚು ಸವಾಲಿನದ್ದಾಯೂ ಮತ್ತು ಆನಂದಿಸುವಂತಿಯೂ ಇರಬೇಕು ಅದರ ಬದಲಿಗೆ ನೀರಸ ಮತ್ತು ಬೆದರಿಕೆಯಿಂದ ಕೂಡಿರಬಾರದು. ಭಾಷಾ ಕೌಶಲಗಳನ್ನು ಮೌಲ್ಯಮಾಪನ ಮಾಡುವಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಲಾಗಿದೆ (ಉದಾ ಓದಲು, ಬರೆಯಲು, ಮಾತನಾಡುವ, ಆಲಿಸುವ) ಸಂವಹನ ಕೌಶಲಗಳನ್ನು ಮತ್ತು ಸುಸಂಬದ್ಧತೆಯನ್ನು ಸೇರಿದಂತೆ ಹಲವಾರು ಅಧ್ಯಯನಗಳಿಂದ (ಉದಾಹರಣೆಗೆ, ಆಲ್ಡರ್ಸನ್ 1979 ; ಬ್ಯಾಚ್ಮನ್ನ 1989; ಡೇವಿಸ್ 1990; ಒಲ್ಲರ್ 1983 ; ವಲಾಟೆ 1967; ಹ್ಯಾರಿಸ್ 1969; ಸ್ಪೋಲ್ಕಿ 1978; ಹ್ಯಾರಿಸನ್ 1980; ನಿಜ್ಡ್ 1974, 1988) ನಾವು ಅಗಾಧ ಪ್ರಯೋಜನ ಪಡೆಯಬಹುದು. ಇವುಗಳಲ್ಲಿ ಹೇಳಿರುವ ಅನೇಕ ಅಧ್ಯಯನಗಳು ಮೌಲ್ಯಮಾಪನವನ್ನು ಒಂದು ನಿರಂತರ ಪ್ರಕ್ರಿಯೆಯಾಗಿದೆ ಸೂಚಿಸುತ್ತದೆ ಮತ್ತು ಇದು ಕಲಿಕಾರ್ಥಿಯಲ್ಲಿ ಭಾಷಾ ರಚನೆ ಮತ್ತು ಸ್ವರೂಪದ ಬಗ್ಗೆ ಅರಿತ್ತಿರುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವುದಾಗಿದೆ, ಇದು ಕಲಿಕಾರ್ಥಿ ವಿವಿಧ ಅಧಿಕೃತ ಸಂದರ್ಭಗಳಲ್ಲಿಅಭಿವ್ಯಕ್ತಪಡಿಸುವ ತನ್ನ ಸಾಮರ್ಥ್ಯವನ್ನು, ಭಾಷೆಯ ಬಗೆಗಿನ ಸೌಂದರ್ಯದ ಅಂಶಗಳನ್ನು ಪ್ರಂಶಸಿಸುವ ಸಾಮರ್ಥ್ಯಗಳನ್ನು ಮಾಲ್ಯಮಾಪನಕ್ಕೆ ಒಳಪಡಿಸುವುದಾಗಿದೆ. ಇದು ನಮಗೆ ಕಲಿಕಾರ್ಥಿ ಮಾಡಿದ ಪ್ರಗತಿ ಮತ್ತು ಕಲಿಕಾರ್ಥಿಯ ಪ್ರಯೋಜನಕ್ಕಾಗಿ ಇರುವ ಜ್ಞಾನದ ಮೇಲೆ ಸಕಾಲಿಕ ಹಸ್ತಕ್ಷೇಪದ ಪ್ರತಿಕ್ರಿಯೆ ಕಂಡುಕೊಳ್ಳುವಲ್ಲಿಮತ್ತು ಶಿಕ್ಷಕರು ವಿಧಾನ ಬಳಸಲು ನೆರವಾಗುತ್ತದೆ.
ವಿದ್ಯಾರ್ಥಿಯ ಮೌಲ್ಯಮಾಪನದ ಸಮಯದಲ್ಲಿ ತರಗತಿಯಲ್ಲಿ ಕಲಿತ ಭಾಷಾ ಜ್ಞಾನ ಮತ್ತು ಸಂವಹನ ಕೌಶಲಗಳು ಈ ಎರಡೂ ವಿಷಯಗಳ ಮೇಲೆ ಮೌಲ್ಯಮಾಪನ ಮಾಡಬೇಕು. ಮೌಲ್ಯ ಮಾಪನದ ಸಂಧರ್ಭದಲ್ಲಿ ಕಲಿಕಾರ್ಥಿಯನ್ನು ತನ್ನ ಮತ್ತು ತನ್ನ ಸಹಪಾಠಿಗಳ ಜೊತೆ ಸಂಬಂಧೀಕರಿಸಿ ಬ್ಯಾಟರಿ ಪರೀಕ್ಷೆ ಮತ್ತು ಪರೀಕ್ಷಾ ರೀತಿಯೆಂಬ ಎರಡೂ ರೀತಿಯಲ್ಲೂ ಮೌಲ್ಯಮಾಪನ ಮಾಡಬೇಕು. ಉದಾಹರಣೆಗೆ ವಿಸೃತ ಮತ್ತು ಸಂಕ್ಷಿಪ್ತ ಉತ್ತರ ಬಯಸುವ ಪ್ರಶ್ನೆಗಳು, ಬಹು ಆಯ್ಕೆಯ ಪ್ರಶ್ನೆಗಳು, ಅಥವಾ ಮುಕ್ತವಾಗಿ ಅಭಿವೃದ್ಧಿಪಡಿಸಬಹುದಾದ ಉತ್ತರಗಳನ್ನು ಬಳಸಿ ವಿದ್ಯಾರ್ಥಿಯ ಪ್ರಗತಿಯನ್ನು ನಾವಿವ್ಯಯುತವಾಗಿ ಮೌಲ್ಯಮಾಪನ ಮಾಡುವಾಗ ಗುಂಪು ಮತ್ತು ಯೋಜನೆಗಳ ಪ್ರಸ್ತುತಿ ಆಧಾರದಲ್ಲಿ ಮಾಡಬಹುದು.
ಪರೀಕ್ಷೆಯ ವಿಧಾನಗಳು
ಪರೀಕ್ಷೆ ಎಂಬುದು ಜ್ಞಾನ, ಸಾಮರ್ಥ್ಯ, ಮತ್ತು ಪ್ರದರ್ಶನವನ್ನು ಅಳೆಯುವ ಯಾವುದೇ ಒಂದು ವಿಧಾನ ಎಂದು ಉಲ್ಲೇಖಿಸಬಹುದು. ಭಾಷಾ ಬೋಧನೆಯಲ್ಲಿ ಪರೀಕ್ಷೆ ಎಂಬುದನ್ನು ತರಗತಿ ಕೋಣೆಯ ವಿಸ್ತರಣಾ ಕೆಲಸವಾಗಿ ನೋಡಬೇಕು ಇದು ಶಿಕ್ಷಕರ ಬೋಧನಾ ವಿಧಾನಗಳು ಮತ್ತು ಕಲಿಕೋಪಕರಣಗಳ ಸುಧಾರಣೆಯ ಆಧಾರವಾಗಿಟ್ಟುಕ್ಕೊಂಡು ವಿದ್ಯಾರ್ಥಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಬೇಕು.
ಸಾಮರ್ಥ್ಯ ಪರೀಕ್ಷೆ: ಸಾಮರ್ಥ್ಯ ಪರೀಕ್ಷೆಗಳು ವಿದೇಶಿ/ ಎರಡನೇ ಭಾಷೆ ಕಲಿಯುವ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯುತ್ತದೆ. ಇದು ಯಶಸ್ವಿಯಾಗುವ ವಿದ್ಯಾರ್ಥಿಗಳನ್ನು ಗುರುತಿಸುತ್ತದೆ. ಮಾನದಂಡ ಉಲ್ಲೇಖನೀಯ ಪರೀಕ್ಷೆ: ಒಂದು ಮಾನದಂಡ ಉಲ್ಲೇಖನೀಯ ಪರೀಕ್ಷೆಯು ಸುಸ್ಪಷ್ಟ ಮತ್ತು ನಿರ್ದಿಷ್ಟ ಗುರಿಗಳನ್ನು ಅಳೆಯಲು ವಿನ್ಯಾಸಗೊಳಿಸಲಾದ ಪರೀಕ್ಷೆಯಾಗಿದೆ. ಇನ್ನೊಂದರ್ಥದಲ್ಲಿ ಇದು ಒಂದು ವಿಷಯ/ ಕಾರ್ಯಕ್ರಮದಿಂದ ಪಡೆದ ಜ್ಞಾನ ಅಳೆಯಲು ನಿರ್ದಿಷ್ಟವಾಗಿರುತ್ತದೆ. ವಿಶ್ಲೇಷಣಾತ್ಮಕ ಮತ್ತು ಸಾಧನಾ ಪರೀಕ್ಷೆಗಳು ಈ ವರ್ಗಕ್ಕೆ ಸೇರಿವೆ. ವಿಶ್ಲೇಷಣಾತ್ಮಕ ಪರೀಕ್ಷೆಯಲ್ಲಿನ ಪ್ರಗತಿ ವರದಿಯು ಸಹಜವಾಗಿ ಕಲಿಕಾರ್ಥಿ ನಿರ್ದಿಷ್ಟ ಅಂಶಗಳನ್ನು ಆ ವಿಷಯದಲ್ಲಿ ಕಲಿತ್ತಿರುವ ಕುರಿತು ತಿಳಿಸುತ್ತದೆ. ಸಾಮಾನ್ಯವಾಗಿ ಈ ರೀತಿಯ ಪರೀಕ್ಷೆಯನ್ನು ವಿಷಯದ (ಕೋರ್ಸ್) ಘಟಕ ಕೊನೆಯಲ್ಲಿ ಮಾಡಲಾಗುತ್ತದೆ. ಇಂತಹ ಪರೀಕ್ಷೆಗಳ ಸಾಧನೆಯು ಒಂದು ನಿರ್ದಿಷ್ಟ ಹಂತದಲ್ಲಿವಿದ್ಯಾರ್ಥಿಯ ಕಲಿಕೆಯನ್ನು ಇತರ ಕಲಿಕಾರ್ಥಿಯವರೊಂದಿಗೆ ಹೋಲಿಸಿ ಆ ಕಲಿಕಾರ್ಥಿಗೆ ಗುಣಮಟ್ಟ ಅಥವಾ ಗ್ರೇಡ್ ತೋರಿಸುವ ಉದ್ದೇಶ ಹೊಂದಿರುತ್ತದೆ. ಇಂತಹ ಪರೀಕ್ಷೆಗಳ ಉದ್ದೇಶವು ಕಲಿಕಾರ್ಥಿ ಎಷ್ಟು ಯಶಸ್ವಿಯಾಗಿ ವಿಷಯ (ಕೋರ್ಸ್) ಆರಂಭದಲ್ಲಿ ನಿರ್ಧಿಷ್ಟ ಪಡಿಸಿರುವ ಸಾಧನೆಗಳನ್ನು ಈಡೇರಿಸಿದ ಬಗ್ಗೆ ಮಾಪನ ಮಾಡುವುದಾಗಿದೆ.
ಗೌರವ ಉಲ್ಲೇಖನೀಯ ಪರೀಕ್ಷೆ: ಗೌರವ ಉಲ್ಲೇಖನೀಯ ಪರೀಕ್ಷೆ ಜಾಗತಿಕ ಭಾಷೆ ಸಾಮರ್ಥ್ಯಗಳ ಮಟ್ಟವನ್ನು ಪರೀಕ್ಷಿಸುವ ಪರೀಕ್ಷೆಯಾಗಿದೆ. ಹೆಚ್ಚಿನ ಉದ್ಯೋಗ ಭಡ್ತಿ ಮತ್ತು ಕೌಶಲ ಪರೀಕ್ಷೆಗಳು ಗೌರವ ಉಲ್ಲೇಖನೀಯ ಪರೀಕ್ಷೆಗಳಾಗಿವೆ. ಕೌಶಲ ಗುರುತಿಸುವ ಪರೀಕ್ಷೆಗಳ ಗುರಿಯು ಕಲಿಕಾರ್ಥಿ ಕಲಿತದ್ದನ್ನು ನೈಜ್ಯ ಸನ್ನಿವೇಶದಲ್ಲಿಅನ್ವಯಿಸುವ ಮತ್ತು ಕಲಿಕಾರ್ಥಿಯ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಕಾರ್ಥಿ ಒಂದು ನಿರ್ದಿಷ್ಟ ಹಂತವನ್ನು ತಲುಪಿರುವಲ್ಲಿ ಗುಣಮಟ್ಟ ಕಂಡುಹಿಡಿಯಲು ಇರುವ ಸಾಮರ್ಥ್ಯ ವಿಶ್ಲೇಷಣೆ ಆಗಿದೆ.
ಈ ಪರೀಕ್ಷೆಗಳು ವಸ್ತುನಿಷ್ಠ ಅಥವಾ ವ್ಯಕ್ತಿನಿಷ್ಠ ಆಗಬಹುದು. ವಸ್ತುನಿಷ್ಠ ಪರೀಕ್ಷೆಗಳಲ್ಲಿ ಅಂಕಗಳು ಯಾಂತ್ರಿಕವಾಗಿ ಗಳಿಸುತ್ತಾರೆ. ಇವು ಬಹು ಆಯ್ಕೆಯ ಉತ್ತರಗಳು ಹಾಗೂ ರೂಪಾಂತರಗೊಂಡ ಪ್ರಶ್ನೆಗಳು, ಪೂರ್ಣಗೊಂಡ ಪ್ರಶ್ನೆಗಳು, ಸತ್ಯ / ಸುಳ್ಳು ಹೇಳಿಕೆಗಳು, ಹೊಂದಿಸುವಿಕೆ ಇತ್ಯಾದಿ ಆಧರಿಸಿದ ಪ್ರಶ್ನೆಗಳು ಒಳಗೊಂಡಿರುತ್ತವೆ; ವ್ಯಕ್ತಿನಿಷ್ಠ ಪರೀಕ್ಷೆಗಳಿಗೆ ಪರೀಕ್ಷಾರ್ಥಿಯ ಕಡೆಯಿಂದ ವೈಯಕ್ತಿಕ ತೀರ್ಪು ಅಗತ್ಯವಿರುತ್ತದೆ ಇವುಗಳನ್ನು ಗುರುತಿಸುವುದು ಕಷ್ಟ ಮತ್ತು ಈ ಪ್ರಕ್ರಿಯೆಯಲ್ಲಿ ನಿರ್ಣಯಿಸಲು ಸಮಯವನ್ನು ತೆಗೆದುಕೊಳ್ಳುಲಾಗುತ್ತದೆ. ಇಲ್ಲಿ ಉತ್ತರಿಸುವ ಯಾವುದೇ ಉತ್ತರಗಳನ್ನು ಸೂಕ್ತ ಪರಿಗಣಿಸಲಾಗುವುದಿಲ್ಲ. ಅವುಗಳ ನಿರ್ಣಯಗಳನ್ನು ಬಹಳಷ್ಟು ಸಂಖ್ಯೆಯಲ್ಲಿರುವ ಪರೀಕ್ಷಾರ್ಥಿಯೇ ನಿರ್ಧರಿಸುತ್ತಾನೆ.
ಪರೀಕ್ಷೆಯನ್ನು ಅಭಿವೃದ್ಧಿಪಡಿಸುವುದು
ತರಗತಿ ಕೋಣೆಯ ಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆ ಅಭಿವೃದ್ಧಿಪಡಿಸುವಲ್ಲಿ ಮೂರು ಹಂತಗಳಿವೆ:
1.ವಿನ್ಯಾಸ
2.ಕಾರ್ಯಾಚರಣೆ
3.ಪರೀಕ್ಷಾ ಆಡಳಿತ.
ವಿನ್ಯಾಸ ಹಂತದಲ್ಲಿ ವಿವರಣೆ, ಗುರುತಿಸುವಿಕೆ, ಮತ್ತು ಬಳಸಲಾಗುವ ವಿಷಯಗಳ ಆಯ್ಕೆ ಒಳಗೊಂಡಿರುತ್ತದೆ. ಕಾರ್ಯಾಚರಣೆಯ ಹಂತದಲ್ಲಿ ಪರೀಕ್ಷೆಗೆ ನಿರ್ಧಿಷ್ಟಪಡಿಸಿದ ವಿಷಯಗಳನ್ನು ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ರೂಪಿಸಲು ಆಯೋಜಿಸಲಾಗುವುದು ಮತ್ತು ನೈಜ್ಯ ಪರೀಕ್ಷೆ ನಡೆಸುವಲ್ಲಿ ಒಂದು ನೀಲನಕ್ಷೆಯ ಅಭಿವೃದ್ಧಿ ಮಾಡಲಾಗುವುದು ಅಲ್ಲಿ ಪರೀಕ್ಷೆ ಹೇಗೆ ನಡೆಸಲಾಗುವುದೆಂದು ವಿವರಿಸಲಾಗುವ ವಿಶೇಷಣಗಳು, ಪರೀಕ್ಷೆ ಬರೆಯುವ, ಸೂಚನೆಗಳು, ಮತ್ತು ಪರೀಕ್ಷೆಯಲ್ಲಿ ಗಳಿಸಬಹುದಾದ ಻಻ಅಂಕಗಳಿಕೆ ಬಗ್ಗೆ ನಿರ್ಧಿಷ್ಟ ಪಡಿಸಲಾಗುತ್ತದೆ. ಆಡಳಿತ ಹಂತದಲ್ಲಿ ಪರೀಕ್ಷೆಯನ್ನು ಮಾಡುವ, ಮಾಹಿತಿಯನ್ನು ಸಂಗ್ರಹಿಸುವ, ಮತ್ತು ಅಂಕಗಳನ್ನು ವಿಶ್ಲೇಷಿಸುವ ಅಂಶಗಳು ಒಳಗೊಂಡಿರುತ್ತದೆ.
ಪರೀಕ್ಷಾ ಅಭಿವೃದ್ಧಿ ಹಂತವು ಶಿಕ್ಷಕರಿಗೆ ಮೌಲ್ಯಮಾಪನದ ಉಪಯುಕ್ತತೆ ಗಮನಿಸಲು ಸಹಾಯ ಮಾಡುತ್ತದೆ. ಪರೀಕ್ಷಾ ಅಭಿವೃದ್ಧಿ ಪ್ರಕ್ರಿಯೆಯು ಪರಸ್ಪರ ಒಂದಕ್ಕೊಂದು ಹೊಂದಿಕೊಂಡಿವೆ. ಮುಂದುವರಿದ ಹಂತದಲ್ಲಿ ಪರೀಕ್ಷೆ ಬಗ್ಗೆ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ಮತ್ತು ಪರಿಷ್ಕರಿಸಲು ಸಹಾಯ ಮಾಡುತ್ತದೆ. ಇದು ಅಂಕ/ ಮಾಪಕಗಳು / ವಿಧಾನಗಳನ್ನು ಅಭಿವೃದ್ಧಿಪಡಿಸಿ ವ್ಯಾಖ್ಯಾನಿಸಲು ಸಹಾಯ ಮಾಡುತ್ತದೆ
ಪರೀಕ್ಷಾ ಕಾರ್ಯಗಳು
ಪರೀಕ್ಷಾ ಕಾರ್ಯಗಳಲ್ಲಿ ವಿವಿಧ ಬಗೆಗಳಿವೆ ಅನುತ್ಪಾದಕ ಪರೀಕ್ಷಾ ಕಾರ್ಯಗಳಿಂದ ಹಿಡಿದು (ಹೊಂದಿಸುವಿಕೆ, ಬಹು ವಿಧಧ ಆಯ್ಕೆ, ಅನುಕ್ರಮಗೊಳಿಸುವುದು ಇತ್ಯಾದಿ) ಉತ್ಪಾದಕ ಪರೀಕ್ಷಾ ಕಾರ್ಯಗಳವರೆಗೆ (ಪರೀಕ್ಷೆಯನ್ನು ಮುಕ್ತಾಯಗೊಳಿಸುವುದು, ಪರೀಕ್ಷೆ ನಿರಂಕುಶಾಜ್ಞೆ ನೀಡುವುದು, ಅನುವಾದ ಮಾಡುವುದು, ಸೂಚನೆಗಳನ್ನು ತೆಗೆದುಕೊಳ್ಳುವುದು, ಸಂಯೋಜನೆ ಇತ್ಯಾದಿ). ಭಾಷೆಯ ನೆಲಗಟ್ಟು ಇರುವುದು ವ್ಯವಸ್ಥಿತ ರೀತಿಯಲ್ಲಿ ದಾಖಲೆಗಳನ್ನುಜೋಡಿಸಿ ಸಂಘಟಿತವಾಗಿ ಸಂಗ್ರಹಿಸುವಲ್ಲಿ, ಇದನ್ನುಪ್ರತಿ ವಿದ್ಯಾರ್ಥಿಯು ತನ್ನ ತನ್ನ ಸಮಯಾವಧಿಯಲ್ಲಿ ಕಲಿಯುತ್ತಿರುತ್ತಾನೆ/ಳೆ ಮತ್ತು ವ್ಯವಸ್ಥಿತ ರೀತಿಯಲ್ಲಿ ಪ್ರದರ್ಶಸಲಾಗುತ್ತದೆ. ಇದನ್ನು ಗುಣಮಟ್ಟದ ಪರೀಕ್ಷೆಗೆ ಪರ್ಯಾಯವಾಗಿ ಪರಿಗಣಿಸಲಾಗಿದೆ. ಇದು ಕಲಿಕಾರ್ಥಿಯಲ್ಲಿ ತನ್ನ ಕಲಿಕೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಭಾಷೆಯ ಮೌಲ್ಯಮಾಪನಕ್ಕೆ ಇತ್ತೀಚಿನ ಬೆಳವಣಿಗೆಗಳು ಒಂದು ಪ್ರತ್ಯೇಕವಾದ ಬಿಂದುವಿನ ಸಮತೋಲಿತ ಬ್ಯಾಟರಿ ಮತ್ತು ಸುಸಂಯೋಜನಾತ್ಮಕ ಪರೀಕ್ಷಾ ವಿಧಾನಗಳು ಉಪಯುಕ್ತ ಎಂದು ಸೂಚಿಸುತ್ತವೆ. ಪರೀಕ್ಷೆಯಲ್ಲಿನ ಸಮಗ್ರತೆಯು ಪರೀಕ್ಷಾ ಮುಕ್ತಾಯದ ವಿಧಾನ, ಮನೋವಿಜ್ಞಾನವನ್ನು ಆಧರಿಸಿರುವುದು ನಿಜವಾಗಿಯೂ ಬಹುಮುಖ ಸ್ವರೂಪಗಳು ಪರೀಕ್ಷೆಯ ಎಲ್ಲಾ ಹಂತಗಳಲ್ಲಿ ಇದನ್ನು ಸೃಜನಾತ್ಮಕವಾಗಿ ಬಳಸಬಹುದು (ಕೊಹೆನ್ 1980). ಹಾಗೆಯೇ, ವಿಶೇಷವಾಗಿ ಬಹುಭಾಷಾ ತರಗತಿಗಳಲ್ಲಿ ಅನುವಾದವನ್ನು ಉತ್ಪಾದಕ ವಿಷಯವಾಗಿ ಬಳಸಲಾಗುತ್ತದೆ.

ಎನ್.ಸಿ.ಎಫ್ ಪೊಶೀಷನ್ ಪೇಪರ್ ಭಾಷಾಬೋಧನೆಯ ಮೌಲ್ಯಮಾಪನ

ಎನ್.ಸಿ.ಎಫ್ ಪೊಶೀಷನ್ ಪೇಪರ್ ಭಾಷಾಬೋಧನೆಯ ಮೌಲ್ಯಮಾಪನ




Contents [hide]
೧ ಪರಿಚಯ
೨ ಪರೀಕ್ಷೆಯ ವಿಧಾನಗಳು
೩ ಪರೀಕ್ಷೆಯನ್ನು ಅಭಿವೃದ್ಧಿಪಡಿಸುವುದು
೪ ಪರೀಕ್ಷಾ ಕಾರ್ಯಗಳು
ಪರಿಚಯ
ಮೌಲ್ಯಮಾಪನ ಕಲಿಕಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ.. ಪ್ರಸ್ತುತ ಅಂತಿಮ ಪರೀಕ್ಷೆ ಆಧಾರಿತ ಮೌಲ್ಯಮಾಪನ ವಿಧಾನಗಳು ಅತಿಯಾದ ಆತಂಕವನ್ನು ಸೃಷ್ಟಿಸುತ್ತದೆ. ಇದರಿಂದ ಕಳೆದ ಹಲವಾರು ವರ್ಷಗಳಿಂದ ವಿಧ್ಯಾಭ್ಯಾಸದ ಉತ್ತುಂಗವಾದ ತರಗತಿಗಳಾದ ಹತ್ತನೇ ಮತ್ತು ಹನ್ನೆರಡನೇ (PUC) ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಮಾಡುತ್ತಿರುವ ಆತ್ಮಹತ್ಯಾ ಪ್ರಯತ್ನಗಳು ದ್ವಿಗುಣಗೊಂಡಿವೆ. ಹಲವಾರು ಅಧ್ಯಯನಗಳು (ಹೊರ್ವಿಟ್ಜ್, ಹೋರ್ವಿಟ್ಸ್ ಮತ್ತು ಕೋಪ್1986; ; ಸ್ಟೈನ್ಬರ್ಗ್ ಮತ್ತು ಹೋರ್ವಿಟ್ಸ್ 1986; ಅಬ್ದುಲ್ ಹಮೀದ್ 2005) ಸಹ ಆತಂಕದ ಮಟ್ಟ ಹೆಚ್ಚಿದಂತೆಲ್ಲಾ ಪರೀಕ್ಷೆಗಳಲ್ಲಿ ಪ್ರದರ್ಶನದ ಮೇಲೆ ಋಣಾತ್ಮಕ ಸಂಬಂಧ ಬೀರುತ್ತವೆ ಎಂದು ತೋರಿಸಿವೆ. ಸಾಧ್ಯವಿರುವ ಪ್ರಯತ್ನಗಳನ್ನು ಮಾಡುವ ಮೂಲಕ ಮೌಲ್ಯಮಾಪನ ವಿಧಾನಗಳು ಹೆಚ್ಚು ಸವಾಲಿನದ್ದಾಯೂ ಮತ್ತು ಆನಂದಿಸುವಂತಿಯೂ ಇರಬೇಕು ಅದರ ಬದಲಿಗೆ ನೀರಸ ಮತ್ತು ಬೆದರಿಕೆಯಿಂದ ಕೂಡಿರಬಾರದು. ಭಾಷಾ ಕೌಶಲಗಳನ್ನು ಮೌಲ್ಯಮಾಪನ ಮಾಡುವಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಲಾಗಿದೆ (ಉದಾ ಓದಲು, ಬರೆಯಲು, ಮಾತನಾಡುವ, ಆಲಿಸುವ) ಸಂವಹನ ಕೌಶಲಗಳನ್ನು ಮತ್ತು ಸುಸಂಬದ್ಧತೆಯನ್ನು ಸೇರಿದಂತೆ ಹಲವಾರು ಅಧ್ಯಯನಗಳಿಂದ (ಉದಾಹರಣೆಗೆ, ಆಲ್ಡರ್ಸನ್ 1979 ; ಬ್ಯಾಚ್ಮನ್ನ 1989; ಡೇವಿಸ್ 1990; ಒಲ್ಲರ್ 1983 ; ವಲಾಟೆ 1967; ಹ್ಯಾರಿಸ್ 1969; ಸ್ಪೋಲ್ಕಿ 1978; ಹ್ಯಾರಿಸನ್ 1980; ನಿಜ್ಡ್ 1974, 1988) ನಾವು ಅಗಾಧ ಪ್ರಯೋಜನ ಪಡೆಯಬಹುದು. ಇವುಗಳಲ್ಲಿ ಹೇಳಿರುವ ಅನೇಕ ಅಧ್ಯಯನಗಳು ಮೌಲ್ಯಮಾಪನವನ್ನು ಒಂದು ನಿರಂತರ ಪ್ರಕ್ರಿಯೆಯಾಗಿದೆ ಸೂಚಿಸುತ್ತದೆ ಮತ್ತು ಇದು ಕಲಿಕಾರ್ಥಿಯಲ್ಲಿ ಭಾಷಾ ರಚನೆ ಮತ್ತು ಸ್ವರೂಪದ ಬಗ್ಗೆ ಅರಿತ್ತಿರುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವುದಾಗಿದೆ, ಇದು ಕಲಿಕಾರ್ಥಿ ವಿವಿಧ ಅಧಿಕೃತ ಸಂದರ್ಭಗಳಲ್ಲಿಅಭಿವ್ಯಕ್ತಪಡಿಸುವ ತನ್ನ ಸಾಮರ್ಥ್ಯವನ್ನು, ಭಾಷೆಯ ಬಗೆಗಿನ ಸೌಂದರ್ಯದ ಅಂಶಗಳನ್ನು ಪ್ರಂಶಸಿಸುವ ಸಾಮರ್ಥ್ಯಗಳನ್ನು ಮಾಲ್ಯಮಾಪನಕ್ಕೆ ಒಳಪಡಿಸುವುದಾಗಿದೆ. ಇದು ನಮಗೆ ಕಲಿಕಾರ್ಥಿ ಮಾಡಿದ ಪ್ರಗತಿ ಮತ್ತು ಕಲಿಕಾರ್ಥಿಯ ಪ್ರಯೋಜನಕ್ಕಾಗಿ ಇರುವ ಜ್ಞಾನದ ಮೇಲೆ ಸಕಾಲಿಕ ಹಸ್ತಕ್ಷೇಪದ ಪ್ರತಿಕ್ರಿಯೆ ಕಂಡುಕೊಳ್ಳುವಲ್ಲಿಮತ್ತು ಶಿಕ್ಷಕರು ವಿಧಾನ ಬಳಸಲು ನೆರವಾಗುತ್ತದೆ.
ವಿದ್ಯಾರ್ಥಿಯ ಮೌಲ್ಯಮಾಪನದ ಸಮಯದಲ್ಲಿ ತರಗತಿಯಲ್ಲಿ ಕಲಿತ ಭಾಷಾ ಜ್ಞಾನ ಮತ್ತು ಸಂವಹನ ಕೌಶಲಗಳು ಈ ಎರಡೂ ವಿಷಯಗಳ ಮೇಲೆ ಮೌಲ್ಯಮಾಪನ ಮಾಡಬೇಕು. ಮೌಲ್ಯ ಮಾಪನದ ಸಂಧರ್ಭದಲ್ಲಿ ಕಲಿಕಾರ್ಥಿಯನ್ನು ತನ್ನ ಮತ್ತು ತನ್ನ ಸಹಪಾಠಿಗಳ ಜೊತೆ ಸಂಬಂಧೀಕರಿಸಿ ಬ್ಯಾಟರಿ ಪರೀಕ್ಷೆ ಮತ್ತು ಪರೀಕ್ಷಾ ರೀತಿಯೆಂಬ ಎರಡೂ ರೀತಿಯಲ್ಲೂ ಮೌಲ್ಯಮಾಪನ ಮಾಡಬೇಕು. ಉದಾಹರಣೆಗೆ ವಿಸೃತ ಮತ್ತು ಸಂಕ್ಷಿಪ್ತ ಉತ್ತರ ಬಯಸುವ ಪ್ರಶ್ನೆಗಳು, ಬಹು ಆಯ್ಕೆಯ ಪ್ರಶ್ನೆಗಳು, ಅಥವಾ ಮುಕ್ತವಾಗಿ ಅಭಿವೃದ್ಧಿಪಡಿಸಬಹುದಾದ ಉತ್ತರಗಳನ್ನು ಬಳಸಿ ವಿದ್ಯಾರ್ಥಿಯ ಪ್ರಗತಿಯನ್ನು ನಾವಿವ್ಯಯುತವಾಗಿ ಮೌಲ್ಯಮಾಪನ ಮಾಡುವಾಗ ಗುಂಪು ಮತ್ತು ಯೋಜನೆಗಳ ಪ್ರಸ್ತುತಿ ಆಧಾರದಲ್ಲಿ ಮಾಡಬಹುದು.
ಪರೀಕ್ಷೆಯ ವಿಧಾನಗಳು
ಪರೀಕ್ಷೆ ಎಂಬುದು ಜ್ಞಾನ, ಸಾಮರ್ಥ್ಯ, ಮತ್ತು ಪ್ರದರ್ಶನವನ್ನು ಅಳೆಯುವ ಯಾವುದೇ ಒಂದು ವಿಧಾನ ಎಂದು ಉಲ್ಲೇಖಿಸಬಹುದು. ಭಾಷಾ ಬೋಧನೆಯಲ್ಲಿ ಪರೀಕ್ಷೆ ಎಂಬುದನ್ನು ತರಗತಿ ಕೋಣೆಯ ವಿಸ್ತರಣಾ ಕೆಲಸವಾಗಿ ನೋಡಬೇಕು ಇದು ಶಿಕ್ಷಕರ ಬೋಧನಾ ವಿಧಾನಗಳು ಮತ್ತು ಕಲಿಕೋಪಕರಣಗಳ ಸುಧಾರಣೆಯ ಆಧಾರವಾಗಿಟ್ಟುಕ್ಕೊಂಡು ವಿದ್ಯಾರ್ಥಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಬೇಕು.
ಸಾಮರ್ಥ್ಯ ಪರೀಕ್ಷೆ: ಸಾಮರ್ಥ್ಯ ಪರೀಕ್ಷೆಗಳು ವಿದೇಶಿ/ ಎರಡನೇ ಭಾಷೆ ಕಲಿಯುವ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯುತ್ತದೆ. ಇದು ಯಶಸ್ವಿಯಾಗುವ ವಿದ್ಯಾರ್ಥಿಗಳನ್ನು ಗುರುತಿಸುತ್ತದೆ. ಮಾನದಂಡ ಉಲ್ಲೇಖನೀಯ ಪರೀಕ್ಷೆ: ಒಂದು ಮಾನದಂಡ ಉಲ್ಲೇಖನೀಯ ಪರೀಕ್ಷೆಯು ಸುಸ್ಪಷ್ಟ ಮತ್ತು ನಿರ್ದಿಷ್ಟ ಗುರಿಗಳನ್ನು ಅಳೆಯಲು ವಿನ್ಯಾಸಗೊಳಿಸಲಾದ ಪರೀಕ್ಷೆಯಾಗಿದೆ. ಇನ್ನೊಂದರ್ಥದಲ್ಲಿ ಇದು ಒಂದು ವಿಷಯ/ ಕಾರ್ಯಕ್ರಮದಿಂದ ಪಡೆದ ಜ್ಞಾನ ಅಳೆಯಲು ನಿರ್ದಿಷ್ಟವಾಗಿರುತ್ತದೆ. ವಿಶ್ಲೇಷಣಾತ್ಮಕ ಮತ್ತು ಸಾಧನಾ ಪರೀಕ್ಷೆಗಳು ಈ ವರ್ಗಕ್ಕೆ ಸೇರಿವೆ. ವಿಶ್ಲೇಷಣಾತ್ಮಕ ಪರೀಕ್ಷೆಯಲ್ಲಿನ ಪ್ರಗತಿ ವರದಿಯು ಸಹಜವಾಗಿ ಕಲಿಕಾರ್ಥಿ ನಿರ್ದಿಷ್ಟ ಅಂಶಗಳನ್ನು ಆ ವಿಷಯದಲ್ಲಿ ಕಲಿತ್ತಿರುವ ಕುರಿತು ತಿಳಿಸುತ್ತದೆ. ಸಾಮಾನ್ಯವಾಗಿ ಈ ರೀತಿಯ ಪರೀಕ್ಷೆಯನ್ನು ವಿಷಯದ (ಕೋರ್ಸ್) ಘಟಕ ಕೊನೆಯಲ್ಲಿ ಮಾಡಲಾಗುತ್ತದೆ. ಇಂತಹ ಪರೀಕ್ಷೆಗಳ ಸಾಧನೆಯು ಒಂದು ನಿರ್ದಿಷ್ಟ ಹಂತದಲ್ಲಿವಿದ್ಯಾರ್ಥಿಯ ಕಲಿಕೆಯನ್ನು ಇತರ ಕಲಿಕಾರ್ಥಿಯವರೊಂದಿಗೆ ಹೋಲಿಸಿ ಆ ಕಲಿಕಾರ್ಥಿಗೆ ಗುಣಮಟ್ಟ ಅಥವಾ ಗ್ರೇಡ್ ತೋರಿಸುವ ಉದ್ದೇಶ ಹೊಂದಿರುತ್ತದೆ. ಇಂತಹ ಪರೀಕ್ಷೆಗಳ ಉದ್ದೇಶವು ಕಲಿಕಾರ್ಥಿ ಎಷ್ಟು ಯಶಸ್ವಿಯಾಗಿ ವಿಷಯ (ಕೋರ್ಸ್) ಆರಂಭದಲ್ಲಿ ನಿರ್ಧಿಷ್ಟ ಪಡಿಸಿರುವ ಸಾಧನೆಗಳನ್ನು ಈಡೇರಿಸಿದ ಬಗ್ಗೆ ಮಾಪನ ಮಾಡುವುದಾಗಿದೆ.
ಗೌರವ ಉಲ್ಲೇಖನೀಯ ಪರೀಕ್ಷೆ: ಗೌರವ ಉಲ್ಲೇಖನೀಯ ಪರೀಕ್ಷೆ ಜಾಗತಿಕ ಭಾಷೆ ಸಾಮರ್ಥ್ಯಗಳ ಮಟ್ಟವನ್ನು ಪರೀಕ್ಷಿಸುವ ಪರೀಕ್ಷೆಯಾಗಿದೆ. ಹೆಚ್ಚಿನ ಉದ್ಯೋಗ ಭಡ್ತಿ ಮತ್ತು ಕೌಶಲ ಪರೀಕ್ಷೆಗಳು ಗೌರವ ಉಲ್ಲೇಖನೀಯ ಪರೀಕ್ಷೆಗಳಾಗಿವೆ. ಕೌಶಲ ಗುರುತಿಸುವ ಪರೀಕ್ಷೆಗಳ ಗುರಿಯು ಕಲಿಕಾರ್ಥಿ ಕಲಿತದ್ದನ್ನು ನೈಜ್ಯ ಸನ್ನಿವೇಶದಲ್ಲಿಅನ್ವಯಿಸುವ ಮತ್ತು ಕಲಿಕಾರ್ಥಿಯ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಕಾರ್ಥಿ ಒಂದು ನಿರ್ದಿಷ್ಟ ಹಂತವನ್ನು ತಲುಪಿರುವಲ್ಲಿ ಗುಣಮಟ್ಟ ಕಂಡುಹಿಡಿಯಲು ಇರುವ ಸಾಮರ್ಥ್ಯ ವಿಶ್ಲೇಷಣೆ ಆಗಿದೆ.
ಈ ಪರೀಕ್ಷೆಗಳು ವಸ್ತುನಿಷ್ಠ ಅಥವಾ ವ್ಯಕ್ತಿನಿಷ್ಠ ಆಗಬಹುದು. ವಸ್ತುನಿಷ್ಠ ಪರೀಕ್ಷೆಗಳಲ್ಲಿ ಅಂಕಗಳು ಯಾಂತ್ರಿಕವಾಗಿ ಗಳಿಸುತ್ತಾರೆ. ಇವು ಬಹು ಆಯ್ಕೆಯ ಉತ್ತರಗಳು ಹಾಗೂ ರೂಪಾಂತರಗೊಂಡ ಪ್ರಶ್ನೆಗಳು, ಪೂರ್ಣಗೊಂಡ ಪ್ರಶ್ನೆಗಳು, ಸತ್ಯ / ಸುಳ್ಳು ಹೇಳಿಕೆಗಳು, ಹೊಂದಿಸುವಿಕೆ ಇತ್ಯಾದಿ ಆಧರಿಸಿದ ಪ್ರಶ್ನೆಗಳು ಒಳಗೊಂಡಿರುತ್ತವೆ; ವ್ಯಕ್ತಿನಿಷ್ಠ ಪರೀಕ್ಷೆಗಳಿಗೆ ಪರೀಕ್ಷಾರ್ಥಿಯ ಕಡೆಯಿಂದ ವೈಯಕ್ತಿಕ ತೀರ್ಪು ಅಗತ್ಯವಿರುತ್ತದೆ ಇವುಗಳನ್ನು ಗುರುತಿಸುವುದು ಕಷ್ಟ ಮತ್ತು ಈ ಪ್ರಕ್ರಿಯೆಯಲ್ಲಿ ನಿರ್ಣಯಿಸಲು ಸಮಯವನ್ನು ತೆಗೆದುಕೊಳ್ಳುಲಾಗುತ್ತದೆ. ಇಲ್ಲಿ ಉತ್ತರಿಸುವ ಯಾವುದೇ ಉತ್ತರಗಳನ್ನು ಸೂಕ್ತ ಪರಿಗಣಿಸಲಾಗುವುದಿಲ್ಲ. ಅವುಗಳ ನಿರ್ಣಯಗಳನ್ನು ಬಹಳಷ್ಟು ಸಂಖ್ಯೆಯಲ್ಲಿರುವ ಪರೀಕ್ಷಾರ್ಥಿಯೇ ನಿರ್ಧರಿಸುತ್ತಾನೆ.
ಪರೀಕ್ಷೆಯನ್ನು ಅಭಿವೃದ್ಧಿಪಡಿಸುವುದು
ತರಗತಿ ಕೋಣೆಯ ಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆ ಅಭಿವೃದ್ಧಿಪಡಿಸುವಲ್ಲಿ ಮೂರು ಹಂತಗಳಿವೆ:
1.ವಿನ್ಯಾಸ
2.ಕಾರ್ಯಾಚರಣೆ
3.ಪರೀಕ್ಷಾ ಆಡಳಿತ.
ವಿನ್ಯಾಸ ಹಂತದಲ್ಲಿ ವಿವರಣೆ, ಗುರುತಿಸುವಿಕೆ, ಮತ್ತು ಬಳಸಲಾಗುವ ವಿಷಯಗಳ ಆಯ್ಕೆ ಒಳಗೊಂಡಿರುತ್ತದೆ. ಕಾರ್ಯಾಚರಣೆಯ ಹಂತದಲ್ಲಿ ಪರೀಕ್ಷೆಗೆ ನಿರ್ಧಿಷ್ಟಪಡಿಸಿದ ವಿಷಯಗಳನ್ನು ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ರೂಪಿಸಲು ಆಯೋಜಿಸಲಾಗುವುದು ಮತ್ತು ನೈಜ್ಯ ಪರೀಕ್ಷೆ ನಡೆಸುವಲ್ಲಿ ಒಂದು ನೀಲನಕ್ಷೆಯ ಅಭಿವೃದ್ಧಿ ಮಾಡಲಾಗುವುದು ಅಲ್ಲಿ ಪರೀಕ್ಷೆ ಹೇಗೆ ನಡೆಸಲಾಗುವುದೆಂದು ವಿವರಿಸಲಾಗುವ ವಿಶೇಷಣಗಳು, ಪರೀಕ್ಷೆ ಬರೆಯುವ, ಸೂಚನೆಗಳು, ಮತ್ತು ಪರೀಕ್ಷೆಯಲ್ಲಿ ಗಳಿಸಬಹುದಾದ ಻಻ಅಂಕಗಳಿಕೆ ಬಗ್ಗೆ ನಿರ್ಧಿಷ್ಟ ಪಡಿಸಲಾಗುತ್ತದೆ. ಆಡಳಿತ ಹಂತದಲ್ಲಿ ಪರೀಕ್ಷೆಯನ್ನು ಮಾಡುವ, ಮಾಹಿತಿಯನ್ನು ಸಂಗ್ರಹಿಸುವ, ಮತ್ತು ಅಂಕಗಳನ್ನು ವಿಶ್ಲೇಷಿಸುವ ಅಂಶಗಳು ಒಳಗೊಂಡಿರುತ್ತದೆ.
ಪರೀಕ್ಷಾ ಅಭಿವೃದ್ಧಿ ಹಂತವು ಶಿಕ್ಷಕರಿಗೆ ಮೌಲ್ಯಮಾಪನದ ಉಪಯುಕ್ತತೆ ಗಮನಿಸಲು ಸಹಾಯ ಮಾಡುತ್ತದೆ. ಪರೀಕ್ಷಾ ಅಭಿವೃದ್ಧಿ ಪ್ರಕ್ರಿಯೆಯು ಪರಸ್ಪರ ಒಂದಕ್ಕೊಂದು ಹೊಂದಿಕೊಂಡಿವೆ. ಮುಂದುವರಿದ ಹಂತದಲ್ಲಿ ಪರೀಕ್ಷೆ ಬಗ್ಗೆ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ಮತ್ತು ಪರಿಷ್ಕರಿಸಲು ಸಹಾಯ ಮಾಡುತ್ತದೆ. ಇದು ಅಂಕ/ ಮಾಪಕಗಳು / ವಿಧಾನಗಳನ್ನು ಅಭಿವೃದ್ಧಿಪಡಿಸಿ ವ್ಯಾಖ್ಯಾನಿಸಲು ಸಹಾಯ ಮಾಡುತ್ತದೆ
ಪರೀಕ್ಷಾ ಕಾರ್ಯಗಳು
ಪರೀಕ್ಷಾ ಕಾರ್ಯಗಳಲ್ಲಿ ವಿವಿಧ ಬಗೆಗಳಿವೆ ಅನುತ್ಪಾದಕ ಪರೀಕ್ಷಾ ಕಾರ್ಯಗಳಿಂದ ಹಿಡಿದು (ಹೊಂದಿಸುವಿಕೆ, ಬಹು ವಿಧಧ ಆಯ್ಕೆ, ಅನುಕ್ರಮಗೊಳಿಸುವುದು ಇತ್ಯಾದಿ) ಉತ್ಪಾದಕ ಪರೀಕ್ಷಾ ಕಾರ್ಯಗಳವರೆಗೆ (ಪರೀಕ್ಷೆಯನ್ನು ಮುಕ್ತಾಯಗೊಳಿಸುವುದು, ಪರೀಕ್ಷೆ ನಿರಂಕುಶಾಜ್ಞೆ ನೀಡುವುದು, ಅನುವಾದ ಮಾಡುವುದು, ಸೂಚನೆಗಳನ್ನು ತೆಗೆದುಕೊಳ್ಳುವುದು, ಸಂಯೋಜನೆ ಇತ್ಯಾದಿ). ಭಾಷೆಯ ನೆಲಗಟ್ಟು ಇರುವುದು ವ್ಯವಸ್ಥಿತ ರೀತಿಯಲ್ಲಿ ದಾಖಲೆಗಳನ್ನುಜೋಡಿಸಿ ಸಂಘಟಿತವಾಗಿ ಸಂಗ್ರಹಿಸುವಲ್ಲಿ, ಇದನ್ನುಪ್ರತಿ ವಿದ್ಯಾರ್ಥಿಯು ತನ್ನ ತನ್ನ ಸಮಯಾವಧಿಯಲ್ಲಿ ಕಲಿಯುತ್ತಿರುತ್ತಾನೆ/ಳೆ ಮತ್ತು ವ್ಯವಸ್ಥಿತ ರೀತಿಯಲ್ಲಿ ಪ್ರದರ್ಶಸಲಾಗುತ್ತದೆ. ಇದನ್ನು ಗುಣಮಟ್ಟದ ಪರೀಕ್ಷೆಗೆ ಪರ್ಯಾಯವಾಗಿ ಪರಿಗಣಿಸಲಾಗಿದೆ. ಇದು ಕಲಿಕಾರ್ಥಿಯಲ್ಲಿ ತನ್ನ ಕಲಿಕೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಭಾಷೆಯ ಮೌಲ್ಯಮಾಪನಕ್ಕೆ ಇತ್ತೀಚಿನ ಬೆಳವಣಿಗೆಗಳು ಒಂದು ಪ್ರತ್ಯೇಕವಾದ ಬಿಂದುವಿನ ಸಮತೋಲಿತ ಬ್ಯಾಟರಿ ಮತ್ತು ಸುಸಂಯೋಜನಾತ್ಮಕ ಪರೀಕ್ಷಾ ವಿಧಾನಗಳು ಉಪಯುಕ್ತ ಎಂದು ಸೂಚಿಸುತ್ತವೆ. ಪರೀಕ್ಷೆಯಲ್ಲಿನ ಸಮಗ್ರತೆಯು ಪರೀಕ್ಷಾ ಮುಕ್ತಾಯದ ವಿಧಾನ, ಮನೋವಿಜ್ಞಾನವನ್ನು ಆಧರಿಸಿರುವುದು ನಿಜವಾಗಿಯೂ ಬಹುಮುಖ ಸ್ವರೂಪಗಳು ಪರೀಕ್ಷೆಯ ಎಲ್ಲಾ ಹಂತಗಳಲ್ಲಿ ಇದನ್ನು ಸೃಜನಾತ್ಮಕವಾಗಿ ಬಳಸಬಹುದು (ಕೊಹೆನ್ 1980). ಹಾಗೆಯೇ, ವಿಶೇಷವಾಗಿ ಬಹುಭಾಷಾ ತರಗತಿಗಳಲ್ಲಿ ಅನುವಾದವನ್ನು ಉತ್ಪಾದಕ ವಿಷಯವಾಗಿ ಬಳಸಲಾಗುತ್ತದೆ.