ಗುರುವಾರ, ಜುಲೈ 9, 2015

ಗದ್ದರ್ ಪಕ್ಷ


ಗದ್ದರ್ ಪಕ್ಷ



ಗದ್ದರ್ ಪಕ್ಷ ಭಾರತದ ಹೋರಾಟದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಲು ಬ್ರಿಟಿಷರನ್ನು ಶಸ್ತ್ರಾಸ್ತ್ರ ಬಂಡಾಯದಿಂದ ಕಿತ್ತೊಗೆಯ ಬೇಕೆಂದು ಕ್ರಾಂತಿಕಾರಿಗಳು ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿದ್ದರು. ಈ ಕ್ರಾಂತಿಕಾರಿಗಳು ಯುರೋಪ್, ಅಮೆರಿಕ, ಮಧ್ಯಏಷ್ಯ ಮತ್ತು ಆಗ್ನೇಯ ಏಷ್ಯಗಳಲ್ಲಿ ತಮ್ಮ ಚಟುವಟಿಕೆಯ ಕೇಂದ್ರಗಳನ್ನು ಸ್ಥಾಪಿಸಿಕೊಂಡಿದ್ದರು. ಇವರುಗಳು ಸಾವನ್ನು ಅಥವಾ ಸೆರೆಯಾಗುವುದರಿಂದ ಎದುರಿಸಲು ಹೆದರಿ ವಿದೇಶಗಳಿಗೆ ಹೋದವರಲ್ಲ. ಇವರು ಆ ದೇಶಗಳಲ್ಲಿ ಭಾರತದ ಸಮಸ್ಯೆಗಳನ್ನು ಪ್ರಚಾರ ಮಾಡಿ, ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಹೋಗಿದ್ದರು. ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಸಾವಿರಾರು ಭಾರತೀಯರು ಅದರಲ್ಲೂ ಹೆಚ್ಚಾಗಿ ಪಂಜಾಬಿನ ಸಿಕ್ಕರು ನೆಲೆಸಿದ್ದರು. ಅಲ್ಲಿ ಭಾರತೀಯರನ್ನು ವರ್ಣದ್ವೇಷ ಮತ್ತು ತಾರತಮ್ಯಗಳಿಂದ ಕಾಣುತ್ತಿದ್ದರು. ಇದೇ ಸಮಯದಲ್ಲಿ ತಾರಕನಾಥ್ ದಾಸ್ ಮತ್ತು ಸೋಹನ್ಸಿಂಗ್ ಈ ಪ್ರದೇಶಗಳಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ಹರಡಿದರು. ಲಾಲ ಹರಿದಯಾಳ್ರು ಅಮೆರಿಕಕ್ಕೆ ಹೋಗಿ 1857ರ ಸಿಪಾಯಿದಂಗೆಯ ನೆನಪಿಗಾಗಿ 1913ರ ನವೆಂಬರ್ 1 ರಂದು ‘ಗದ್ದರ್’ ಎಂಬ ಪತ್ರಿಕೆಯನ್ನು ಪ್ರಕಟಿಸಿದರು. ಪಂಜಾಬಿ ಭಾಷೆಯಲ್ಲಿ ‘ಗದ್ದರ್’ ಎಂದರೆ ಬಂಡಾಯವೆಂದರ್ಥ. ಈ ಪತ್ರಿಕೆಯು ಇಂಗ್ಲಿಷ್, ಗುರುಮುಖಿ, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು. ಈ ಪತ್ರಿಕೆಯಲ್ಲಿ ಅಧಿಕಾರಿಗಳ ಕೊಲೆ, ಕ್ರಾಂತಿಕಾರಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಸಾಹಿತ್ಯವನ್ನು ಪ್ರಕಟಿಸುತ್ತಿದರು ನಂತರ ಗದ್ದರ್ ಎಂಬ ಪಕ್ಷವನ್ನು ರಚಿಸಿದರು.

ಗದ್ದರ್ ಪತ್ರಿಕೆಯಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಸಾಹಿತ್ಯವನ್ನು ಪ್ರಕಟಿಸುವುದು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು, ಸೈನ್ಯದ ನಡುವೆ ವಿರೋಧಿ ಭಾವನೆ ಬೆಳೆಸುವುದು ಮುಂತಾದ ಲೇಖನಗಳನ್ನು ಪ್ರಕಟವಾಗುತ್ತಿತ್ತು. ಅಮೆರಿಕದ ಸ್ಯಾನ್ ಫ್ರನ್ಸಿಸ್ಕೋದಲ್ಲಿ ಇದರ ಕಛೇರಿಯಿತ್ತು. ಒಂದು ಸಲ ಈ ಪತ್ರಿಕೆಯಲ್ಲಿ ‘ಧೈರ್ಯಶಾಲಿ ಸೈನಿಕರು ಬೇಕಾಗಿದ್ದಾರೆ, ಉದ್ಯೋಗ- ಭಾರತದಲ್ಲಿ ದಂಗೆ ಏಳಲು ವೇತನ-ಸಾವು ಬೆಲೆ - ವೀರ ಮರಣ; ವಿಶ್ರಾಂತಿ ವೇತನ-ಸ್ವಾತಂತ್ರ್ಯ; ಯುದ್ಧ ನಡೆಯುವ ಸ್ಥಳ-ಭಾರತ’ ಎಂದು ಪ್ರಕಟಿಸಲಾಗಿತ್ತು. ಪ್ರಪಂಚದಾದ್ಯಂತ ಇರುವ ಭಾರತೀಯರನ್ನು ಒಟ್ಟುಗೂಡಿಸಿ ಕ್ರಾಂತಿ ಮಾಡಲು ಜನರನ್ನು ಸಂಘಟಿಸುವ ಉದ್ದೇಶವಾಗಿತ್ತು.

ಗದ್ದರ್ ಪಕ್ಷದ ಕೇಂದ್ರ ಕಛೇರಿಯು ಅಮೆರಿಕದ ಸ್ಯಾನ್ ಫ್ರನ್ಸಿಸ್ಕೋದ ನಂ, 436 ಹಿಲ್ ಸ್ಟ್ರೀನಲ್ಲಿತ್ತು . ಕಲ್ಕತ್ತದಲ್ಲಿ ಪ್ರಕಟವಾಗುತ್ತಿದ್ದ ‘ಯುಗಾಂತರ್’ ಪತ್ರಿಕೆಯ ಸ್ಥಾಪನೆಯ ನೆನಪಿನಲ್ಲಿ ಈ ಕೇಂದ್ರಕ್ಕೆ ‘ಯುಗಾಂತರ್ ಆಶ್ರಮ’ವೆಂದು ಹೆಸರಿಡಲಾಯಿತು. ಅಮೆರಿಕ, ಕೆನಡ ಮತ್ತಿತರ ಭಾಗಗಳಲ್ಲಿ ಈ ಪಕ್ಷದ ಶಾಖೆಗಳಿದ್ದವು. ಈ ಪಕ್ಷದ ವಿವಿಧ ಶಾಖೆಗಳಿಂದ ಸದಸ್ಯರನ್ನು ಆರಿಸಿ ಕೇಂದ್ರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಆಗಾಗ್ಗೆ ಸಭೆ ನಡೆಸಿ ಭಾರತದಲ್ಲಿದ್ದ ತನ್ನ ಬೆಂಬಲಿಗರಿಗೆ ರಾಜಕೀಯ ಶಿಕ್ಷಣ ನೀಡುವ ಮತ್ತು ಅದಕ್ಕೆ ಬೇಕಾಗುವ ಹಣವನ್ನು ಸಂಗ್ರಹಿಸುವ ತೀರ್ಮಾನಗಳನ್ನು ಕೈಗೊಳ್ಳುತ್ತಿತ್ತು. ಇದೇ ಪಕ್ಷದ ರಾಮಚಂದ್ರ ಅವರು ಅಮೆರಿಕದ ಅಧ್ಯಕ್ಷ ವಿಲ್ಸನ್ ರವರಿಂದ ಭಾರತದ ಸ್ವಾತಂತ್ರಕ್ಕೆ ಬೆಂಬಲ ದೊರಕಿಸಲು ಪ್ರಯತ್ನಪಟ್ಟರು. ಫಿಲಡೆಲ್ಫಿಯದಲ್ಲಿ ಗದ್ದರ್ ಸೊಸೈಟಿಯು ಭಾರತೀಯ ಕ್ರಾಂತಿಕಾರಿಗಳು ನಡೆಸಿದ ಮೆರವಣಿಗೆಯಲ್ಲಿ ಸುಮಾರು 10 ಸಾವಿರ ಅಮೆರಿಕನ್ನರು ಭಾಗವಹಿಸಿ ಭಾರತ ಮತ್ತು ಐರ್ಲೆಂಡ್ ನಲ್ಲಿ ಬ್ರಿಟಿಷರು ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿದರು. ಬ್ರಿಟಿಷರು ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು ಹೋರಾಡುತ್ತಿರುವ ಭಾರತದ ಪ್ರಯತ್ನಕ್ಕೆ ಅಮೆರಿಕ್ಕನ್ನರು ಬೆಂಬಲ ಘೋಷಿಸಿದರು.

ಅಮೆರಿಕದಲ್ಲಿದ್ದ ಜರ್ಮನಿ ರಾಯಭಾರಿ ಕಛೇರಿಯವರೊಡನೆ ಎಂ.ಎನ್.ರಾಯ್ ರವರು ಮಾತುಕತೆ ನಡೆಸಿ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳುಹಿಸುವ ದೀರ್ಘಯೋಜನೆ ಯನ್ನು ಮಾಡಿದರು. 1915 ಜನವರಿಯಲ್ಲಿ ಅನಿಲಾರ್ಸನ್ ಎಂಬ ಹಡಗಿನಲ್ಲಿ ಶಸ್ತ್ರಾಸ್ತ್ರಗಳನ್ನು ತುಂಬಿ ಒಂದು ಗುಪ್ತ ಸ್ಥಳದಲ್ಲಿ ಜರ್ಮನಿಯವರ ಸಹಾಯದಿಂದ ಮಾವೆರಿಕ್ ಎಂಬ ಹಡಗಿನಲ್ಲಿ ಶಸ್ತ್ರಾಸ್ತ್ರಗಳನ್ನು ಭರ್ತಿಮಾಡಿ ಕಳುಹಿಸಲಾಯಿತು. ಆದರೆ ಪೆಸಿಫಿಕ್ ಸಾಗರದಲ್ಲಿರುವ ಹವಾಯಿ ದ್ವೀಪದ ಹತ್ತಿರ ಮಾವೆರಿಕ್ ಹಡಗು ನೀರಿನ ತೊಂದರೆಯಿಂದ ಸಿಕ್ಕಿಕೊಂಡಿತು. ಅಲ್ಲಿಂದ ಬರುವ ಶಸ್ತ್ರಾಸ್ತ್ರಗಳನ್ನು ಇಳಿಸಿ ಕೊಳ್ಳಲು ಭಾರತದ ಒರಿಸ್ಸಾರಾಜ್ಯದ ಪೂರ್ವದಲ್ಲಿರುವ ಬಂಗಾಳ ಕೊಲ್ಲಿಯ ತೀರದಲ್ಲಿ ರುವ ಬಾಲಸೂರಿನ ಬಳಿ ಜತೀನ್ ಮುಖರ್ಜಿಯವರ ನೇತೃತ್ವದ್ಲಲಿ ಸಿದ್ಧವಿದ್ದ ಕ್ರಾಂತಿಕಾರಿಗಳು ಪೋಲಿಸ್ ಪಡೆಯೊಂದಿಗೆ ಹೋರಾಡಿ ಮಡಿದರು. ಹೀಗೆ ಕ್ರಾಂತಿಕಾರಿಗಳ ಯೋಜನೆ ಬಿದ್ದು ಹೋಯಿತು.

ಗದ್ದರ್ ಪಕ್ಷದ ಕ್ರಾಂತಿಕಾರಿಗಳು ವಿದೇಶಗಳಲ್ಲಿ ನಡೆಸಿದ ಕೊಲೆಗಳಲ್ಲಿ ಪ್ರಮುಖವಾದುದು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣನಾದ ಜನರಲ್ ಸರ್ ಮೈಕೆಲ್ ಓಡೈಯರನನ್ನು ಲಂಡನ್ನನ ಕ್ಯಾಕ್ಸ್ ಟೌನ್ ಹಾಲ್ನಲ್ಲಿ 1940ರ ಮಾರ್ಚ್ 13ರಂದು ಉದಾಮ್ ಸಿಂಗ್ ಕೊಂದ. ಜಲಿಯನ್ ವಾಲಾಬಾಗ್ ಘಟನೆ 1919ರ ಏಪ್ರಿಲ್ 13ರಂದು ನಡೆಯಿತು. ಆ ಸಮಯದಲ್ಲಿ ಉದಾಮ್ಸಿಂಗ್ ಬಾಲಕನಾಗಿದ್ದ ಪಂಜಾಬಿಗಳು ಓಡೈಯರನನ್ನು ದ್ವೇಷಿಸುತ್ತಿದ್ದರು ನಂತರ ದ್ವೇಷ ತೀರಿಸಲು ಲಂಡನ್ನಿಗ ಹೋಗಿ ಅವನನ್ನು ಉದಾಮ್ ಸಿಂಗ್ ಕೊಂದ. ಆಗ ಇವನನ್ನು ಬಂಧಿಸಿ ವಿಚಾರಣೆ ನಡೆಸಿ 1940ರ ಜೂನ್ 12 ರಂದು ಗಲ್ಲಿಗೇರಿಸಲಾಯಿತು.

ಪುಣೆಯಲ್ಲಿ ಪ್ಲೇಗ್ ಬಂದಾಗ ಮನೆಗಳನ್ನು ಖಾಲಿ ಮಾಡಿಸಲು ಬ್ರಿಟಿಷ್ ಅಸಭ್ಯತೆಯ ಮಿತಿ ಮೀರಿದ ಕ್ರಮಗಳಿಂದ ಚಾಪೆಕರ್ ಸೋದರರು ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಲ್ಲಲ್ಲು ಅವರಿಗೆ ಮರಣದಂಡನೆ ಆಯಿತು. ಲಂಡನ್ನಲ್ಲಿ ಶ್ಯಾಮಜಿಕೃಷ್ಣವರ್ಮ ಕ್ರಾಂತಿಕಾರಿಗಳ ತರಬೇತಿಗಾಗಿ ಇಂಡಿಯನ್ ಹೌಸ್ ಆರಂಭಿಸಿದರು. ಈ ಚಟುವಟಿಕೆಗಳ ಮೇಲೆ ಕಣ್ಣಿಟ್ಟು ವರದಿ ಮಾಡುತ್ತಿದ್ದ ಕರ್ಜನ್ ವೈಲಿ ಎಂಬ ಅಧಿಕಾರಿಯನ್ನು ಮದನಲಾಲ್ ದಿಂಗ್ರಾ ಎಂಬ ಕ್ರಾಂತಿಕಾರಿ ಲಂಡನ್ನ ಒಂದು ಸತ್ಕಾರ ಸಮಾರಂಭದಲ್ಲಿ ಗುಂಡು ಹಾರಿಸಿ ಕೊಂದನು. ದಿಂಗ್ರಾನು ಕೋರ್ಟ್ನಲ್ಲಿ ‘ಭಾರತೀಯ ಯುವಕರನ್ನು ಅಮಾನುಷವಾಗಿ ಗಲ್ಲಿಗೇರಿಸುತ್ತಿರುವುದಕ್ಕೆ ಅಲ್ಪ ಪ್ರತೀಕಾರವಾಗಿ ನಾನು ಬ್ರಿಟಿಷರ ರಕ್ತವನ್ನು ಸುರಿಸಲು ಯತ್ನಿಸಿದೆ ಎಂದು ಒಪ್ಪಿಕೊಳ್ಳುತ್ತೇನೆ. ನಿಶಸ್ತ್ರಜೀವನ ಬಹಿರಂಗ ಯುದ್ಧಕ್ಕಿಳಿಯುವುದು ಅಸಾಧ್ಯವಾದ ಕಾರಣ ಹಠಾತ್ ಧಾಳಿಗೆ ನನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದೆ’ ಎಂದೂ, ‘ನನ್ನ ದೇಶಕ್ಕೆ ಮಾಡುವ ಅನ್ಯಾಯ ಭಗವಂತನಿಗೆ ಮಾಡುವ ಅವಮಾನ ಎಂದು ಭಾವಿಸಿದೆ. ಎಂಬಂತಹ ದೇಶಭಕ್ತಿ ನುಡುಗಳನ್ನಾಡಿದನು. ದಿಂಗ್ರಾನ ದೇಶಾಭಕ್ತಿ ಹೇಳಿಕೆಯನ್ನು ಲಾಯ್ಡ್ ಜಾರ್ಜ್ ಮತ್ತು ವಿನ್ಸ್ಟನ್ ಚರ್ಚಿಲರು ದಿಂಗ್ರಾನ ಕೊನೆಯ ವಾಕ್ಯಗಳು ಎಂದೆಂದಿಗೂ ದೇಶಾಭಿಮಾನದ ಹೆಸರಿನಲ್ಲಿ ಮಾಡಿರುವ ಅತ್ಯುನ್ನತ ಹೇಳಿಕೆಯೆಂದು ಶ್ಲಾಘಿಸಿದರು. ಐರ್ಲೆಂಡ್ನ ಪ್ರಜೆಗಳು ದಿಂಗ್ರಾನನ್ನು ದೇಶಕ್ಕಾಗಿ ಪ್ರಾಣತೆತ್ತ ಮಹಾವೀರನೆಂದು ಗೌರವಿಸಿತು (1909).

 1922ರಲ್ಲಿ ಕ್ರಾಂತಿಕಾರಿಗಳಾದ ಯುವಕರು ಬ್ರಿಟಿಷ್ ಸರ್ಕಾರವನ್ನು ಬುಡಮೇಲು ಮಾಡಿ ಅದರ ಧೈರ್ಯ, ಸ್ಥೈರ್ಯ ಕುಂದಿಸಬೇಕೆಂದು ಗುಪ್ತವಾಗಿ ಶ್ರಮಿಸಿದರು. ಲಖನೌ ಬಳಿ ಕಾಕೋರಿ ರೈಲು ನಿಲ್ದಾಣದಲ್ಲಿ ಸರ್ಕಾರಿ ತಿಜೋರಿಯನ್ನು ಅಪಹರಿಸಿದರು. ಈ ಪ್ರಕರಣದಲ್ಲಿ 40 ಜನರ ಬಂಧನವಾಗಿ ಮೂವರಿಗೆ 1927ರಲ್ಲಿ ಮರಣದಂಡನೆ ಆಯಿತು.

1928 ಅಕ್ಟೋಬರ್ 20ರಂದು ಎಲ್ಲೆಡೆ ಸೈಮನ್ ಆಯೋಗದ ವಿರುದ್ಧ ಉಗ್ರ ಪ್ರತಿಭಟನೆಯಲ್ಲಿ ಪಾಲುಗೊಂಡ ಲಾಲಾಲಜಪತ್ರಾಯ್ ಮೇಲೆ ಉಗ್ರ ಲಾಠಿ ಪ್ರಹಾರವಾಗಿ ಅದರಿಂದ ಅವರು ಗಾಯಗೊಂಡು 1928ರ ನವೆಂಬರ್ 17ರಂದು ನಿಧನವಾದರು. ಈ ಅನಾಹುತಕ್ಕೆ ಸಾಂಡರ್ಸ್ ಎಂಬ ಅಧಿಕಾರಿಯನ್ನು ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ರಾಜಗುರು ಗುಂಡಿಕ್ಕಿ ಕೊಂದರು. ಹತ್ಯೆಯ ಅನಂತರ ತಲೆ ತಪ್ಪಿಸಿಕೊಂಡಿದ್ದ ಭಗತ್ ಸಿಂಗ್ ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಯ ಆಡಳಿತದ ಬಗ್ಗೆ ಪ್ರಪಂಚದ ಕಣ್ತೆರಿಸಬೇಕೆಂಬ ಉದ್ದೇಶದಿಂದ ದೆಹಲಿಯ ಕೇಂದ್ರ ಶಾಸನ ಸಭೆಯಲ್ಲಿ ಬಿಟುಕೇಶ್ವರದತ್ತನೊಂದಿಗೆ ಸೇರಿ ಬಾಂಬನ್ನೆಸೆದು ಬಂಧಿತನಾದ (1929). ವಿವಿಧ ಕ್ರಾಂತಿಕಾರಿ ಚಟುವಟಿಕೆಗಳಿಗೆ ವಿಚಾರಣೆ ನಡೆದು, ಭಗತ್ ಸಿಂಗ್, ಸುಖದೇವ್, ಮತ್ತು ರಾಜಗುರು ಈ ಮೂರು ಮಂದಿಗೂ ಮರಣದಂಡನೆ ವಿಧಿಸಲಾಯಿತು. 1931 ಮಾರ್ಚ್ 23ರಂದು ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಭಗತ್ ಸಿಂಗ್ ರನ್ನು ಗಲ್ಲಿಗೇರಿಸಲಾಯಿತು. ಚಂದ್ರಶೇಖರ್ ಆಜಾದ್ ಎಂಬ, ಈ ತಂಡದ ಕ್ರಾಂತಿಕಾರಿ 1931ರಲ್ಲಿ ಪೋಲಿಸರೊಡನೆ ಗುಂಡಿನ ಕಾಳಗದಲ್ಲಿ ಹುತಾತ್ಮನಾದ. ಈ ಕ್ರಾಂತಿಕಾರಿಗಳು ಯುವಕರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಳ್ಳಲು ಅಪಾರ ಸ್ಫೂರ್ತಿ ನೀಡಿದರು. ಇವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಗದ್ದರ್ ಪಕ್ಷದ ಸಂಪರ್ಕದಲ್ಲಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ