ಗುರುವಾರ, ಮಾರ್ಚ್ 30, 2017

ಪಾಕ್: ಹಿಂದೂ ವಿವಾಹ ಮಸೂದೆ ಕಾನೂನು ಜಾರಿ

ಪಾಕ್: ಹಿಂದೂ ವಿವಾಹ ಮಸೂದೆ ಕಾನೂನು ಜಾರಿ

ಇಸ್ಲಾಮಾಬಾದ್, ಮಾ. 20: ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ವಿವಾಹವನ್ನು ನಿಯಂತ್ರಿಸುವ ಮಸೂದೆಯು, ಅಧ್ಯಕ್ಷ ಮಮ್ನೂನ್ ಹುಸೈನ್ ಸೋಮವಾರ ಸಹಿ ಹಾಕುವುದರೊಂದಿಗೆ ಕಾನೂನಾಗಿದೆ.ಇದರೊಂದಿಗೆ, ಮದುವೆಗಳನ್ನು ನಿಯಂತ್ರಿಸುವುದಕ್ಕಾಗಿ ಪಾಕಿಸ್ತಾನದ ಹಿಂದೂಗಳಿಗೆ ವಿಶಿಷ್ಟ ವೈಯಕ್ತಿಕ ಕಾನೂನೊಂದು ಲಭಿಸಿದಂತಾಗಿದೆ.

‘‘ಪ್ರಧಾನಿ ನವಾಝ್ ಶರೀಫ್‌ರ ಸಲಹೆಯಂತೆ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್‌ನ ಅಧ್ಯಕ್ಷರು ‘ಹಿಂದೂ ವಿವಾಹ ಮಸೂದೆ 2017’ಕ್ಕೆ ಸಹಿ ಹಾಕಿದ್ದಾರೆ’’ ಎಂದು ಪ್ರಧಾನಿ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.

ಮದುವೆಗಳು, ಕುಟುಂಬಗಳು, ತಾಯಂದಿರು ಮತ್ತು ಅವರ ಮಕ್ಕಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಜೊತೆಗೆ, ಹಿಂದೂ ಕುಟುಂಬಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನೂ ಅದು ರಕ್ಷಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

‘‘ಪಾಕಿಸ್ತಾನದಲಿ ವಾಸಿಸುವ ಹಿಂದೂ ಕುಟುಂಬಗಳ ಮದುವೆಗಳನ್ನು ಊರ್ಜಿತಗೊಳಿಸುವುದಕ್ಕಾಗಿ ರೂಪಿಸಲಾದ ಪ್ರಬಲ ಕಾನೂನಾಗಿದೆ’’ ಎಂದಿದೆ.

ಪಾಕಿಸ್ತಾನದಲ್ಲಿ ವಾಸಿಸುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮಾನ ಹಕ್ಕುಗಳನ್ನು ನೀಡುವ ಪ್ರಸ್ತಾಪಕ್ಕೆ ತನ್ನ ಸರಕಾರ ಯಾವತ್ತೂ ಆದ್ಯತೆ ನೀಡಿದೆ ಎಂದು ಪ್ರಧಾನಿ ಶರೀಫ್ ಹೇಳಿದರು.

‘‘ಅವರು ಇತರ ಯಾವುದೇ ಸಮುದಾಯದಷ್ಟೇ ದೇಶಪ್ರೇಮಿಗಳು. ಹಾಗಾಗಿ, ಅವರಿಗೆ ಸಮಾನ ರಕ್ಷಣೆಯನ್ನು ನೀಡುವುದು ಸರಕಾರದ ಜವಾಬ್ದಾರಿಯಾಗಿದೆ’’ ಎಂದರು.

ಕಾನೂನಿನ ಪ್ರಕಾರ, ಹಿಂದೂಗಳ ಮದುವೆಗಳ ನೋಂದಣಿಗಾಗಿ ಅವರಿಗೆ ಅನುಕೂಲವೆನಿಸುವ ಸ್ಥಳಗಳಲ್ಲಿ ಸರಕಾರವು ವಿವಾಹ ನೋಂದಣಾಧಿಕಾರಿಗಳನ್ನು ನೇಮಿಸುತ್ತದೆ.

ದಾಂಪತ್ಯ ಹಕ್ಕುಗಳು, ಕಾನೂನುಬದ್ಧವಾಗಿ ಬೇರ್ಪಡುವುದು, ಮದುವೆಗಳನ್ನು ರದ್ದುಗೊಳಿಸುವುದು, ಹೆಂಡತಿ ಮತ್ತು ಮಕ್ಕಳ ಆರ್ಥಿಕ ಭದ್ರತೆ, ಮದುವೆ ರದ್ದಾದರೆ ಪರ್ಯಾಯ ಪರಿಹಾರ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ರದ್ದುಗೊಳಿಸುವುದು ಮುಂತಾದವುಗಳಿಗೆ ಕಾನೂನು ಅವಕಾಶ ಮಾಡಿಕೊಡುತ್ತದೆ.

ರುಮಾಹ್:- ಜಗತ್ತಿನ ಅತಿ ದೊಡ್ಡ ಒಂಟೆ ಉತ್ಸವ

ರುಮಾಹ್: ಜಗತ್ತಿನ ಅತಿ ದೊಡ್ಡ ಒಂಟೆ ಉತ್ಸವಕ್ಕೆ ಚಾಲನೆ

ರಿಯಾದ್, ಮಾ. 20: ಸೌದಿ ಅರೇಬಿಯದ ದೊರೆ ಸಲ್ಮಾನ್ ಅವರ ಆಶ್ರಯದಲ್ಲಿ ನಡೆಯುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಒಂಟೆ ಉತ್ಸವ ರಿಯಾದ್‌ನಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ರುಮಾಹ್‌ನಲ್ಲಿ ರವಿವಾರ ಆರಂಭಗೊಂಡಿದೆ.

28 ದಿನಗಳ ‘ದೊರೆ ಅಬ್ದುಲಝೀಝ್ ಒಂಟೆ ಉತ್ಸವ’ದಲ್ಲಿ ಒಂಟೆಗಳ ಸೌಂದರ್ಯ ಸ್ಪರ್ಧೆ ನಡೆಯಲಿದೆ ಹಾಗೂ 114 ಮಿಲಿಯ ಸೌದಿ ರಿಯಾಲ್ (ಸುಮಾರು 200 ಕೋಟಿ ರೂಪಾಯಿ)ನಷ್ಟು ಅಗಾಧ ಮೊತ್ತದ ಬಹುಮಾನವಿದೆ.

1999ರಲ್ಲಿ ಸ್ಥಳೀಯ ಬೆಡೊಯುನ್ ಜನರ ಗುಂಪೊಂದು ಆರಂಭಿಸಿದ ಈ ಸ್ಪರ್ಧೆಗೆ ಸೌದಿ ರಾಜ ಕುಟುಂಬದ ಬೆಂಬಲ ಲಭಿಸಿತು. ಅದರ ಬೆಳೆಯುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಅದು ಪರಂಪರೆ ಉತ್ಸವವಾಗಿ ಮಾರ್ಪಟ್ಟಿತು ಹಾಗೂ ಜಿಸಿಸಿ ದೇಶಗಳ ಜನರನ್ನು ಆಕರ್ಷಿಸಿತು.

ಸೌದಿ ಅರೇಬಿಯದ ಜೀವನ ಶೈಲಿ ಮತ್ತು ಸಂಸ್ಕೃತಿ ಹಾಗೂ ಬೆಡೊಯುನ್ ಸಂಪ್ರದಾಯಗಳನ್ನು ಆಚರಿಸುವ ಹಬ್ಬವು ಇಂದು 3 ಲಕ್ಷಕ್ಕೂ ಅಧಿಕ ಒಂಟೆಗಳು ಮತ್ತು ಅವುಗಳ ಮಾಲೀಕರನ್ನು ಆಕರ್ಷಿಸುತ್ತಿದೆ.

‘‘ಈ ಹಬ್ಬವು ಇತಿಹಾಸ, ಪರಂಪರೆ ಮತ್ತು ಮನರಂಜನೆಗಳ ವಿಷಯದಲ್ಲಿ ಸೌದಿಗಳು ಮತ್ತು ವಿದೇಶೀಯರಿಗೆ ಅತ್ಯುತ್ತಮ ದೇಣಿಗೆಗಳನ್ನು ನೀಡುತ್ತದೆ’’ ಎಂದು ದೊರೆ ಅಬ್ದುಲಝೀಝ್ ಒಂಟೆ ಉತ್ಸವ ಸಮಿತಿಯ ವಕ್ತಾರ ಡಾ. ತಲಾಲ್ ಬಿನ್ ಖಾಲಿದ್ ಅಲ್-ತಾರಿಫಿ ಹೇಳಿದರು.

ತೆರಿಗೆ ಸಂಗ್ರಹ : ವಾರ್ಷಿಕ ಗುರಿ ಮುಟ್ಟಿದ ಕರ್ನಾಟಕ

ತೆರಿಗೆ ಸಂಗ್ರಹ: ವಾರ್ಷಿಕ ಗುರಿ ಮುಟ್ಟಿದ ಕರ್ನಾಟಕ ತೆರಿಗೆ ಇಲಾಖೆ

ಬೆಂಗಳೂರು, ಮಾರ್ಚ್ 20: ಕರ್ನಾಟಕ ತೆರಿಗೆ ಇಲಾಖೆಯು 2016-17ರ ಆರ್ಥಿಕ ವರ್ಷದಲ್ಲಿ ತನಗೆ ನೀಡಲಾಗಿದ್ದ ಗುರಿಯನ್ನು ಫೆ. 16ರಂದೇ ಮುಟ್ಟಿರುವುದಾಗಿ ತಿಳಿಸಿದೆ.

ಬೆಂಗಳೂರಿನಲ್ಲಿಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ- ಗೋವಾ ಪ್ರಾದೇಶಿಕ ಮುಖ್ಯ ತೆರಿಗೆ ಆಯುಕ್ತರಾದ ನೂತನ್ ಒಡೆಯರ್ ಅವರು, ಈ ವಿಷಯ ತಿಳಿಸಿದರು.

ಪ್ರಸಕ್ತ ಹಣಕಾಸು ವರ್ಷ ಮುಗಿಯಲು ಇನ್ನು ಕೆಲವೇ ದಿನ (ಮಾರ್ಚ್ 30) ಬಾಕಿ ಇವೆ. ಈವರೆಗೆ 13 ಸಾವಿರ ಕೋಟಿ ತೆರಿಗೆಯನ್ನು ವಸೂಲಿ ಮಾಡಲಾಗಿದೆ ಎಂದು ಆಯುಕ್ತರು ಅಂಕಿ-ಅಂಶ ಸಹಿತ ವಿವರಿಸಿದರು.

ಕಳೆದ ವರ್ಷ 2,135 ಕೋಟಿ ರು. ಪತ್ತೆಯಾಗಿದ್ದರೆ, 4, 828 ಕೋಟಿ ರು. ಆಸ್ತಿ ಪತ್ತೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಶೇ. 22.48ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದ್ದು, ನೀಡಲಾಗಿದ್ದ ಗುರಿಯನ್ನು ಆರ್ಥಿಕ ವರ್ಷ ಮುಕ್ತಾಯವಾಗುವುದರೊಳಗೇ ಮುಟ್ಟಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿ 6ನೇ ಸ್ಥಾನದಲ್ಲಿದ್ದರೆ, ವೈಯಕ್ತಿಕ ಆದಾಯ ಸಂಗ್ರಹದಲ್ಲಿ ರಾಜ್ಯವು ಮೂರನೇ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು.

ಶೇ. 64ರಷ್ಟು ಸಿಬ್ಬಂದಿ ಕೊರತೆ, ಸತತ ನಾಲ್ಕು ವರ್ಷಗಳ ಬರಗಾಲದ ಪರಿಸ್ಥಿತಿಗಳ ಹೊರತಾಗಿಯೂ ಇಲಾಖೆಯು ನಿಗದಿತ ಗುರಿಯನ್ನು ಮುಟ್ಟಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಮ್

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಮ್

ವಾಶಿಂಗ್ಟನ್, ಮಾ. 20: ಇಸ್ಲಾಮ್ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮವಾಗಿದೆ; ಮುಸ್ಲಿಮ್ ಬಾಹುಳ್ಯದ ದೇಶಗಳಲ್ಲಿ ಮಾತ್ರವಲ್ಲದೆ, 2050ರ ವೇಳೆಗೆ 10 ಶೇಕಡ ಯುರೋಪಿಯನ್ನರು ಇಸ್ಲಾಂನ ಅನುಯಾಯಿಗಳಾಗಿರುತ್ತಾರೆ ಎಂದು ಇತ್ತೀಚಿನ ಪಿವ್ ರಿಸರ್ಚ್ ಸೆಂಟರ್‌ನ ಸಂಶೋಧನೆಯೊಂದು ತಿಳಿಸಿದೆ.

2010 ಮತ್ತು 2050ರ ನಡುವಿನ ಅವಧಿಯಲ್ಲಿ, ಮುಸ್ಲಿಮರ ಸಂಖ್ಯೆ ಜಗತ್ತಿನಾದ್ಯಂತ 73 ಶೇಕಡದಷ್ಟು ಹೆಚ್ಚಲಿದೆ ಎಣದಯ ಸಂಶೋಧನಾ ವರದಿ ಹೇಳಿದೆ. ನಂತರದ ಸ್ಥಾನದಲ್ಲಿ ಕ್ರೈಸ್ತ ಧರ್ಮವಿದ್ದು, ಇದೇ ಅವಧಿಯಲ್ಲಿ ಅವರ ಸಂಖ್ಯೆ 35 ಶೇಕಡದಷ್ಟು ಹೆಚ್ಚಲಿದೆ ಹಾಗೂ ಹಿಂದೂಗಳ ಸಂಖ್ಯೆ 34 ಶೇಕಡದಷ್ಟು ಹೆಚ್ಚಲಿದೆ ಎಂದು ವರದಿ ಹೇಳಿದೆ.

ಅಂದರೆ, ಈಗ ಜಗತ್ತಿನ ಎರಡನೆ ಅತಿ ದೊಡ್ಡ ಧರ್ಮವಾಗಿರುವ ಇಸ್ಲಾಮ್, ಶತಮಾನದ ಕೊನೆಯ ಹೊತ್ತಿಗೆ ಜಗತ್ತಿನ ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ಜಗತ್ತಿನ ಅತಿ ದೊಡ್ಡ ಧರ್ಮವಾಗಲಿದೆ ಎಂದು ಸಂಶೋಧನೆ ಹೇಳುತ್ತದೆ.

ಮುಸ್ಲಿಮ್ ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದುತ್ತಿರುವುದು ಇದಕ್ಕೆ ಕಾರಣವಾಗಿದೆ. ಇತರ ಎಲ್ಲ ಧಾರ್ಮಿಕ ಗುಂಪುಗಳನ್ನು ಒಗ್ಗೂಡಿಸಿದರೆ, ಈ ಧರ್ಮಗಳ ಮಹಿಳೆಯರು ಸರಾಸರಿ 2.3 ಮಕ್ಕಳನ್ನು ಹೊಂದಿದರೆ, ಮುಸ್ಲಿಮ್ ಮಹಿಳೆಯರು ಸರಾಸರಿ 3.1 ಮಕ್ಕಳನ್ನು ಹೊಂದುತ್ತಾರೆ ಎಂದು ಪಿವ್ ಅಭಿಪ್ರಾಯಪಟ್ಟಿದೆ. ಅದೂ ಅಲ್ಲದೆ, ಇಸ್ಲಾಮ್ ಧರ್ಮದ ಅನುಯಾಯಿಗಳು ಮುಸ್ಲಿಮೇತರರಿಗಿಂತ ಸರಾಸರಿ 7 ವರ್ಷಗಳಷ್ಟು ಕಿರಿಯವರಾಗಿರುತ್ತಾರೆ.

ಹೆರಿಗೆ ಸೌಲಭ್ಯ(ತಿದ್ದುಪಡಿ) ಮಸೂದೆ 2016 ರಾಜ್ಯಸಭೆಯಲ್ಲಿ ಅಂಗೀಕಾರ

ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ರಾಜ್ಯಸಭೆಯಲ್ಲಿ ಅಂಗೀಕಾರ

ನವದೆಹಲಿ: ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ನ್ನು ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

ಈ ಮಸೂದೆಯ ತಿದ್ದುಪಡಿಯ ಪ್ರಕಾರ ನೌಕರಿಯಲ್ಲಿರುವ ತಾಯಂದಿರಿಗೆ ಹೆರಿಗೆ ರಜೆಯನ್ನು ಸದ್ಯದ ೧೨ ವಾರಗಳಿಂದ ೨೬ ವಾರಗಳಿಗೆ ಹೆಚ್ಚಿಸಲಾಗಿದೆ. ಈ ಮಸೂದೆ ಕಳೆದ ವರ್ಷ ಆಗಸ್ಟ್ ೧೧ ರಂದೇ ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ಆದರೆ ತಾಂತ್ರಿಕ ತಿದ್ದುಪಡಿಯಿಂದ ರಾಜ್ಯಸಭೆಯಲ್ಲಿ ಮತ್ತೆ ಅಂಗೀಕಾರ ಮಾಡಲಾಗಿದೆ ಎಂದು ರಾಜ್ಯಸಭೆಯ ಉಪಸಭಾಪತಿ ಪಿ ಜೆ ಕುರಿಯನ್ ಹೇಳಿದ್ದಾರೆ.

ಕೂಗು ಮತದ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.

ಮೂರು ತಿಂಗಳಿಗಿಂತಲೂ ಚಿಕ್ಕ ಮಗುವನ್ನು ದತ್ತು ಸ್ವೀಕರಿಸುವ ತಾಯಿಗೆ ಈ ಮಸೂದೆಯಲ್ಲಿ ೧೨ ವಾರಗಳ ರಜೆಯನ್ನು ಕಲ್ಪಿಸಲಾಗಿದೆ.

ಹಾಗೆಯೇ ಈ ರಜದ ಅವಧಿ ಮುಗಿದ ಮೇಲೆ ಆರೋಗ್ಯದ ದೃಷ್ಟಿಯಿಂದ ಅಗತ್ಯತೆ ಇದ್ದಲ್ಲಿ, 'ಮನೆಯಿಂದ ಕೆಸಲಕ್ಕೆ' ಅವಕಾಶ ನೀಡುವ ಸೌಲಭ್ಯವನ್ನು ಕೂಡ ಆ ಮಸೂದೆ ಮಾಡಿಕೊಟ್ಟಿದೆ.
೫೦ ಅಥವಾ ಅದಕ್ಕಿಂತಲೂ ಹೆಚ್ಚು ನೌಕರನ್ನು ಹೊಂದಿರುವ ಉದ್ಯೋಗ ಸಂಸ್ಥೆಗಳು ಮಕ್ಕಳನ್ನು ನೋಡಿಕೊಳ್ಳುವ ಕ್ರಶ್ ಗಳನ್ನೂ ಸ್ಥಾಪಿಸುವುದು ಕೂಡ ಕಡ್ಡಾಯ ಮಾಡಿ ತಿದ್ದುಪಡಿ ಮಾಡಲಾಗಿದೆ.

ಪತಂಗಗಳು ಬೆಳಕಿನತ್ತ ಆಕರ್ಷಿತವಾಗುವುದೇಕೆ..?

ಪತಂಗಗಳು ಬೆಳಕಿನತ್ತ ಆಕರ್ಷಿತವಾಗುವುದೇಕೆ...?

ಪತಂಗಗಳು ಹಾರಾಟದಲ್ಲಿ ತಮ್ಮನ್ನು ತಾವು ಹೊಂದಿಸಿಕೊಳ್ಳಲು ಚಂದ್ರನನ್ನು ಬಳಸಿಕೊಳ್ಳುವುದರಿಂದ ಅವು ಬೆಳಕಿನತ್ತ ಆಕರ್ಷಿತಗೊಳ್ಳುತ್ತವೆ. ಕೃತಕ ಬೆಳಕು ಇದ್ದಾಗ ಗೊಂದಲಕ್ಕೊಳಗಾಗುವ ಪತಂಗಗಳು ಅದನ್ನು ಚಂದ್ರನೆಂದು ತಪ್ಪಾಗಿ ಗ್ರಹಿಸುತ್ತವೆ.

ಪತಂಗಗಳಿಗೆ ಚಂದ್ರನು ಆಪ್ಟಿಕಲ್ ಇನ್ಫಿನಿಟಿ ಅಥವಾ ದೃಷ್ಟಿಸಂಬಂಧಿ ಅನಂತದಲ್ಲಿ ಗೋಚರಿಸುತ್ತಾನೆ. ಅಂದರೆ ಪತಂಗದ ಕಣ್ಣುಗಳಿಂದ ನೋಡಿದರೆ ಬೆಳಕಿನ ಕಿರಣಗಳು ಭೂಮಿಗೆ ಸಮಾನಾಂತರವಾಗಿ ಕಾಣುತ್ತವೆ. ಹೀಗಾಗಿ ಪತಂಗಗಳು,ವಿಶೇಷವಾಗಿ ತಮ್ಮ ರೇಖಾತ್ಮಕ ಹಾರಾಟಕ್ಕೆ ಚಂದ್ರನನ್ನು ಮಾರ್ಗದರ್ಶಿ ಸಾಧನವಾಗಿ ಬಳಸಿಕೊಳ್ಳುತ್ತವೆ.

ಆಪ್ಟಿಕಲ್ ಇನ್ಫಿನಿಟಿಯು ಸ್ಥಳಕ್ಕೆ ಸಂಬಂಧಿಸಿದಂತೆ ತನ್ನ ತಾಣವನ್ನು ನಿರಂತರವಾಗಿ ಹೊಂದಿಸಿಕೊಳ್ಳಲು ಅನುಕೂಲ ಕಲ್ಪಿಸುತ್ತದೆ. ಇತರ ಗೋಚರ ಹೆಗ್ಗುರುತುಗಳು ಕಂಡು ಬಾರದಿರಬಹುದಾದ ರಾತ್ರಿಯ ಅಂಧಕಾರವನ್ನು ಪರಿಗಣಿಸಿದಾಗ ಇದು ತುಂಬ ಮಹತ್ವದ್ದಾಗುತ್ತದೆ.

ಕೃತಕ ಬೆಳಕು ಚಂದ್ರನಿಗಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಬಹುದು ಮತ್ತು ಪತಂಗಗಳು ಅದನ್ನೇ ಚಂದ್ರನೆಂದು ತಪ್ಪಾಗಿ ಭಾವಿಸುತ್ತವೆ. ಹೀಗಾಗಿ ಅವು ಕೃತಕ ಬೆಳಕಿನ ದಿಕ್ಕಿನಲ್ಲಿ ಮುಂದುವರಿಯುತ್ತವೆ. ಅವು ಕೃತಕ ಬೆಳಕಿನ ಸಮೀಪ ಹಾರುವಾಗ ಆಪ್ಟಿಕಲ್ ಇನ್ಫಿನಿಟಿಯನ್ನು ಕಳೆದುಕೊಳ್ಳುತ್ತವೆ ಮತ್ತು ದಿಕ್ಕು ತಪ್ಪಿದಂತಾಗುತ್ತವೆ.

ತನ್ನನ್ನೇ ತಾನು ಮರುಹೊಂದಿಸಿಕೊಳ್ಳುವ ಪ್ರಯತ್ನದಲ್ಲಿ ಪತಂಗವು ನಿರಂತರವಾಗಿ ಕೃತಕ ಬೆಳಕಿನ ಸುತ್ತ ಗಿರಕಿ ಹೊಡೆಯಬಹುದು. ಆದರೆ ಬೆಳಕಿನ ಮೂಲವು ಆಪ್ಟಿಕಲ್ ಇನ್ಫಿನಿಟಿ ಅಲ್ಲವಾದ್ದರಿಂದ ತನ್ನನ್ನು ತಾನು ಮರುಹೊಂದಿಸಿಕೊಳ್ಳುವ ಪತಂಗದ ಪ್ರಯತ್ನ ವಿಫಲಗೊಳ್ಳುತ್ತದೆ ಮತ್ತು ಅಂತಿಮವಾಗಿ ಅದು ಕೃತಕ ಬೆಳಕನ್ನು ಸೂಸುವ ದೀಪದ ಮೇಲೆ ಬಿದ್ದು ಸುಟ್ಟುಹೋಗುತ್ತದೆ.

'ಮೇಕ್ ಇನ್ ಇಂಡಿಯಾದ' ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಭಾರತ ದೇಶದ ಮೊಟ್ಟ ಮೊದಲ 'ಮೇಕ್ ಇನ್ ಇಂಡಿಯಾ' ಯೋಜನೆಯ ಅಡಿಯಲ್ಲಿ ತಯಾರಿಸಿದ ಪೂರ್ಣ ಪ್ರಮಾಣದ ರೈಲು ಎಂಬ ಖ್ಯಾತಿಗೆ 'ಮೇಧಾ' ಪಾತ್ರವಾಗಿದೆ.
'ಮೇಕ್ ಇನ್ ಇಂಡಿಯಾ'ದ ಮೊಟ್ಟ ಮೊದಲ ರೈಲು 'ಮೇಧಾ' ಲೋಕಾರ್ಪಣೆ

ಅತ್ಯದ್ಭುತ ತಂತ್ರಜ್ಞಾನ ಒಳಗೊಂಡಿರುವ ಸ್ವದೇಶಿ ನಿರ್ಮಿತ ರೈಲು ಲೋಕಾರ್ಪಣೆಗೊಳ್ಳುವ ಮೂಲಕ ಭಾರತ ದೇಶದಲ್ಲಿ ಉತ್ಪಾದನೆಯಾದ ಮೊಟ್ಟ ಮೊದಲ 'ಮೇಕ್ ಇನ್ ಇಂಡಿಯಾ' ರೈಲು ಎಂಬ ಹೆಗ್ಗಳಿಕೆಗೆ 'ಮೇಧಾ' ಪಾತ್ರವಾಗಿದೆ.

ಎಸ್,ಪಿ,ಗೆ ನೋಟಿಸ್ - ಇಳಯರಾಜ

ಗಾಯಕರು ಸಿಕ್ಕಾಪಟ್ಟೆ ಹಣ ಸಂಪಾದಿಸುತ್ತಾರೆ, ಆದರೆ ಸಂಗೀತ ಸಂಯೋಜಕರಿಗೆ ಗೌರವಧನ ಕೊಡಲ್ಲ!

ಚೆನ್ನೈ: ತಾನು ನಿರ್ದೇಶಿಸಿರುವ ಹಾಡುಗಳನ್ನು ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಬಾರದು ಎಂದು ಸಂಗೀತ ನಿರ್ದೇಶಕ ಇಳಯರಾಜಾ ಅವರು ಖ್ಯಾತ ಗಾಯಕ ಎಸ್‍.ಪಿ. ಬಾಲಸುಬ್ರಮಣ್ಯಂ, ಚರಣ್ ಹಾಗೂ ಗಾಯಕಿ ಚಿತ್ರಾ ಅವರಿಗೆ ನೋಟಿಸ್ ಕಳುಹಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಇಳಯರಾಜಾ ಅವರು ನೋಟಿಸ್ ಕಳುಹಿಸಿರುವ ಬಗ್ಗೆ ಫೇಸ್‌ಬುಕ್‍ನಲ್ಲಿ ಬರೆದುಕೊಂಡಿರುವ ಎಸ್‍ಪಿಬಿ ಈ ವಿಷಯದ ಬಗ್ಗೆ ನನಗೆ ಮೊದಲಿಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ.

ಸಂಗೀತಕ್ಷೇತ್ರಕ್ಕೆ ಎಸ್‌‍ಪಿಬಿಯವರು ಬಂದು 50 ವರ್ಷವಾಗಿರುವ ನೆನಪಿಗೆ 'ಎಸ್‍ಪಿಬಿ 50' ಹೆಸರಿನ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಹಮ್ಮಿಕೊಂಡಿದ್ದು ಅವರು ಪ್ರವಾಸದಲ್ಲಿದ್ದಾರೆ.

ಕೆಲವು ದಿನಗಳ ಹಿಂದೆ ಇಳಯರಾಜಾ ಅವರ ವಕೀಲರು ನನಗೆ ನೋಟಿಸ್ ನೀಡಿದ್ದಾರೆ. ನನ್ನ ಜತೆ ಗಾಯಕ ಚರಣ್,ಗಾಯಕಿ ಚಿತ್ರಾ ಅವರಿಗೂ ನೋಟಿಸ್ ನೀಡಲಾಗಿದೆ.
ಅಲ್ಲದೆ ಸಂಗೀತ ಕಛೇರಿ ಆಯೋಜಿಸಿರುವ  ಆಯೋಜಕರಿಗೂ ನೋಟಿಸ್ ನೀಡಲಾಗಿದೆ. ಇನ್ನು ಮುಂದೆ ನಾವು ಇಳಯರಾಜಾ ಅವರು ನಿರ್ದೇಶಿಸಿದ ಹಾಗೂ ಸಂಯೋಜನೆ ಮಾಡಿದ ಹಾಡುಗಳನ್ನು ಹಾಡುವುದಿಲ್ಲ.ಇಳಯರಾಜಾ ಅವರ ಅನುಮತಿ ಇಲ್ಲದೆ  ಹಾಡಿದರೆ ಹಕ್ಕುಸ್ವಾಮ್ಯ ಉಲ್ಲಂಘನೆಯಾಗುತ್ತದೆ ಎಸ್‍ಪಿಬಿ ತಮ್ಮ ಫೇಸ್‍ಬುಕ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ ನನ್ನ ಹಾಡುಗಳನ್ನು ಎಸ್‌ಪಿ ಬಾಲಸುಬ್ರಮಣ್ಯಂ ಹಾಡಬಾರದು: ಇಳಯರಾಜಾ

ಇಳಯರಾಜಾ ಅವರು ಎಸ್‍ಪಿಬಿ ಅವರಿಗೆ ನೋಟಿಸ್ ಕಳಿಸಿರುವ ಸುದ್ದಿ ಹರಡುತ್ತಿದ್ದಂತೆ ಎಸ್‍ಪಿಬಿ ಅಭಿಮಾನಿಗಳು ಇಳಯರಾಜಾ ಅವರ ಮೇಲೆ ಸಿಟ್ಟುಗೊಂಡಿದ್ದಾರೆ. ಇಳಯರಾಜಾ ಅವರು ಈ ರೀತಿ ಮಾಡಿದ್ದು ಸರಿಯಲ್ಲ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.

ಏತನ್ಮಧ್ಯೆ, ಎಸ್‍ಪಿಬಿಯವರು ತಾವು ರಾಜಾ ಸರ್ ಅವರನ್ನು ಗೌರವಿಸುತ್ತೇನೆ. ಯಾರಿಗೂ ನೋವುಂಟು ಮಾಡಬೇಡಿ ಎಂದು ಫೇಸ್‍ಬುಕ್ ಮೂಲಕ ವಿನಂತಿಸಿಕೊಂಡಿದ್ದಾರೆ

ಸಾಮಾಜಿಕ ತಾಣಗಳಲ್ಲಿ ಇಳಯರಾಜಾ ನೋಟಿಸ್ ಬಗ್ಗೆ ಚರ್ಚೆಯಾಗುತ್ತಿದ್ದು, ಇಳಯರಾಜಾ ಅವರು ಯಾಕೆ ಹೀಗೆ ಮಾಡಿದರು ಎಂಬ ಪ್ರಶ್ನೆ ಅಭಿಮಾನಿಗಳದ್ದು.

ಈ ಬಗ್ಗೆ ನ್ಯೂಸ್ ಮಿನಿಟ್ ಮಾಧ್ಯಮದೊಂದಿಗೆ ಮಾತನಾಡಿದ ಇಳಯರಾಜಾ ಅವರ ಕಾಪಿರೈಟ್ಸ್ ಕನ್ಸಲ್ಟೆಂಟ್ (ಹಕ್ಕುಸ್ವಾಮ್ಯ ಸಲಹೆಗಾರ) ಇ. ಪ್ರದೀಪ್ ಅವರು, ಜನರು ಈ ವಿಷಯವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇಳಯರಾಜಾ ಅವರ ಪೂರ್ವಾನುಮತಿ ಪಡೆಯದೆ ಮತ್ತು ಅವರಿಗೆ ಗೌರವಧನ ನೀಡದೆ ಯಾರೊಬ್ಬರೂ ಅವರ ಹಾಡುಗಳನ್ನು ಹಾಡುವಂತಿಲ್ಲ ಎಂದು ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಸುದ್ದಿಗೋಷ್ಠಿ ಕರೆದು ಇಳಯರಾಜಾ ಅವರು ಹೇಳಿದ್ದರು. ಇದೇನು ಹೊಸ ವಿಷಯವಲ್ಲ. ಆದರೆ ಇದೀಗ ಎಸ್‍ಪಿಬಿ ಅವರೇ ಕಾನೂನು ನೋಟಿಸ್ ಕಳುಹಿಸಿಕೊಡಬೇಕಾದಂತ ಪರಿಸ್ಥಿತಿಯನ್ನು ತಂದಿಟ್ಟಿದ್ದಾರೆ ಎಂದಿದ್ದಾರೆ.

ಇಳಯರಾಜಾ ಅವರು 35 ವರ್ಷಗಳ ಕಾಲ ಅವರು ಸಂಗೀತ ಸಂಯೋಜನೆ ಮಾಡಿ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಆದರೆ ಅವರಿಗೆ ತಕ್ಕ ಗೌರವಧನ ಯಾವತ್ತೂ ಸಿಗಲಿಲ್ಲ. ಇಳಯರಾಜಾ ಅವರ ಸಂಗೀತವನ್ನು ಬಳಸಿಕೊಂಡು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಆರ್ಕೆಸ್ಟ್ರಾ ಅಥವಾ ಸಂಗೀತಗಾರರು ಗೌರವಧನ ಕೊಡಲಿ ಎಂದು ನಾವು ಒತ್ತಾಯಿಸುತ್ತಿಲ್ಲ. ಆದರೆ ಅವರ ಸಂಗೀತವನ್ನು ಬಳಸಿ ಲಕ್ಷ ಅಥವಾ ಕೋಟಿಗಟ್ಟಲೆ ಸಂಪಾದನೆ ಮಾಡುವ ಗಾಯಕರಲ್ಲಿ ಮಾತ್ರ ನಾವು ಗೌರವಧನಕೊಡಿ ಎಂದು ಕೇಳುತ್ತಿದ್ದೇವೆ. ಎಸ್‌‍ಪಿಬಿ ಅವರೇನೂ ಸಹಾಯಾರ್ಥ ಸಂಗೀತ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಅವರು ಭರಪೂರ ಹಣ ಸಂಪಾದನೆ ಮಾಡುತ್ತಿದ್ದರೆ, ಸಂಗೀತ ಸಂಯೋಜಕನಿಗೆ ₹1 ಕೂಡಾ ಸಿಗುತ್ತಿಲ್ಲ. ಸಂಗೀತ ಸಂಯೋಜನೆ ಮಾಡಿದ ವ್ಯಕ್ತಿಯ ಸಾಮರ್ಥ್ಯ ಮತ್ತು ಕಲೆಗೆ ಬೆಲೆ ಬೇಡವೇ?

ಇಳಯರಾಜಾ ಅವರು ಹಲವಾರು ಹಾಡುಗಳ ಹಕ್ಕು ಸ್ವಾಮ್ಯವನ್ನು ಹೊಂದಿದ್ದಾರೆ. ಹೀಗಿರುವಾಗ ಪ್ರಸ್ತುತ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಎಸ್‍ಪಿಬಿ ಅನುಮತಿ ಕೇಳಬೇಕಿತ್ತು. ಅವರಿಬ್ಬರೂ ಗೆಳೆಯರು. ಹೀಗಿರುವಾಗ ಇಳಯರಾಜಾ ಅವರಲ್ಲಿ ಎಸ್‍ಪಿಬಿ ಅನುಮತಿ ಕೇಳಬಹುದಿತ್ತಲ್ಲವೇ?

ಇಂಥಾ ಸಂಗೀತ ಕಛೇರಿ ಮೂಲಕ ಸಿಕ್ಕಿದ ಆದಾಯದಿಂದ ಸಂಗೀತ ಸಂಯೋಜಕರು ಯಾವತ್ತೂ ಹಣ ಕೇಳುವುದಿಲ್ಲ. ಇಂತಿಷ್ಟೇ ಪಾವತಿ ಮಾಡಬೇಕು ಎಂಬ ಒತ್ತಾಯವೂ ಇಲ್ಲ. ಅವರಿಗೆ ಎಷ್ಟು ಹಣ ಕೊಡಲು ಸಾಧ್ಯ ಎಂದು ನಾವೇ ಕೇಳುತ್ತೇವೆ. ನೀವು ಸಂಗೀತ ಸಂಯೋಜಕರ ಬಳಿ ಅನುಮತಿ ಕೇಳಿ ಅವರಿಗೆ ಗೌರವಧನ ಕೊಟ್ಟು ಬಿಡಿ. ಆದರೆ ಯಾರೊಬ್ಬರೂ ₹1 ಕೊಡಲು ಮನಸ್ಸು ಮಾಡಲ್ಲ. ಜನರಿಗೆ ಎಲ್ಲವೂ ಉಚಿತವಾಗಿ ದಕ್ಕಬೇಕು ಅಂತಾರೆ ಪ್ರದೀಪ್.

ತನ್ನ ಪೂರ್ವಾನುಮತಿಯಿಲ್ಲದೆ ಹಾಡುಗಳನ್ನು ಪ್ರಸಾರ ಮಾಡುವಂತಿಲ್ಲ, ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಇಳಯರಾಜಾ ಅವರು 2015ರಲ್ಲಿ ರೇಡಿಯೊ ಸ್ಟೇಷನ್ ಮತ್ತು ಟಿವಿ ವಾಹಿನಿಗಳಿಗೆ ಎಚ್ಚರಿಕೆ ನೀಡಿದ್ದರು.

ಕುಲದೀಪ್ ನಯ್ಯರ್ ಪ್ರಶಸ್ತಿ- ರವೀಶ್ ಕುಮಾರ್

ರವೀಶ್‌ಕುಮಾರ್‌ಗೆ ಪ್ರಪ್ರಥಮ ಕುಲದೀಪ್ ನಯ್ಯರ್ ಪತ್ರಿಕೋದ್ಯಮ ಪ್ರಶಸ್ತಿ

ಹೊಸದಿಲ್ಲಿ,ಮಾ.20: ಎನ್‌ಡಿಟಿವಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ಅವರು ಪ್ರಪ್ರಥಮ ಕುಲದೀಪ್ ನಯ್ಯರ್ ಪತ್ರಿಕೋದ್ಯಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರವಿವಾರ ದಿಲ್ಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನ ಜಂಟಿಯಾಗಿ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ತಮ್ಮ ಕಾರ್ಯಗಳಿಂದ ಸ್ವತಂತ್ರ ಚಿಂತನೆ, ಪ್ರಜಾಸತ್ತಾತ್ಮಕ ವೌಲ್ಯಗಳು ಮತ್ತು ನಾಗರಿಕ ಹಕ್ಕುಗಳನ್ನು ಉತ್ತೇಜಿಸುವ ಭಾರತೀಯ ಭಾಷಾ ಪತ್ರಕರ್ತರಿಗೆ ಪ್ರತಿ ವರ್ಷ ನೀಡಲಾಗುತ್ತದೆ.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ರವೀಶ್ ಕುಮಾರ್ ಅವರು ದೇಶದಲ್ಲಿಯ ಸದ್ಯದ ಭೀತಿ ಮತ್ತು ಬೆದರಿಕೆಯ ವಾತಾವರಣದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಮಶಾನದಲ್ಲಿ ಸುಡುವುದು ಅಥವಾ ಖಬರಿಸ್ತಾನ್‌ದಲ್ಲಿ ದಫನ್ ಮಾಡುವುದು ಮಾತ್ರ ಸಾವಲ್ಲ. ಮಾತನಾಡದಂತೆ, ಬರೆಯದಂತೆ, ಕೇಳದಂತೆ ಬೆದರಿಕೆ ಯಿಂದ ಭೀತಿ ಪಡುವದೂ ಸಾವೇ ಆಗಿದೆ ಎಂದು ಅವರು ಹೇಳಿದರು.

‘ಕಾವಲುನಾಯಿ’ಗಳಂತೆ ವರ್ತಿಸುವ ಮತ್ತು ಸಾಯಂಕಾಲಗಳನ್ನು ‘ಲಾಕಪ್’ ಆಗಿ ಪರಿವರ್ತಿಸಿರುವ ಸುದ್ದಿ ವಾಹಿನಿಗಳ ನಿರೂಪಕರ ವಿರುದ್ಧವೂ ಅವರು ಎಚ್ಚರಿಕೆ ನೀಡಿದರು.

ನ್ಯಾಯಮೂರ್ತಿಗಳಿಗೆ ಬಂಪರ್ ಕೊಡುಗೆ

ನ್ಯಾಯಮೂರ್ತಿಗಳಿಗೆ ಬಂಪರ್ ಕೊಡುಗೆ!

ಹೊಸದಿಲ್ಲಿ, ಮಾ.26: ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನವನ್ನು ಶೇಕಡ 200ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಶಿಫಾರಸು ಜಾರಿ ಕಾರಣ ವೇತನ ಹೆಚ್ಚಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ವೇತನವನ್ನೂ ಪರಿಷ್ಕರಿಸಲಾಗಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಈಗ ತುಟ್ಟಿಭತ್ತೆ ಹಾಗೂ ಇತರ ಭತ್ತೆಗಳನ್ನು ಹೊರತುಪಡಿಸಿ ಒಂದು ಲಕ್ಷ ರೂಪಾಯಿ ಮಾಸಿಕ ವೇತನವಿದ್ದು, ಇದು ರೂ.2.8 ಲಕ್ಷಕ್ಕೆ ಹೆಚ್ಚಲಿದೆ.
ಇದರ ಜತೆಗೆ ಅಧಿಕೃತ ನಿವಾಸ, ಕಾರು, ಸಿಬ್ಬಂದಿ ಹಾಗೂ ಇತರ ಭತ್ತೆಗಳು ಇರುತ್ತವೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮಾಸಿಕ ವೇತನ 2.5 ಲಕ್ಷ ರೂ. ಆಗಲಿದೆ. ಜತೆಗೆ ಸಂಪುಟ ಕಾರ್ಯದರ್ಶಿ, ಸಿಎಜಿ ಹಾಗೂ ಸಿಇಸಿಗೆ ಸಮಾನವಾದ ಭತ್ತೆಗಳು ಹಾಗೂ ಇತರ ಸೌಲಭ್ಯಗಳಿವೆ.

ಹೈಕೋರ್ಟ್ ನ್ಯಾಯಮೂರ್ತಿಗಳ ವೇತನ ಮಾಸಿಕ 2.25 ಲಕ್ಷ ರೂ. ಆಗಲಿದೆ. ಇದು ಕೇಂದ್ರ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ವೇತನಕ್ಕೆ ಸಮವಾಗಲಿದೆ.

ಆದರೆ ಸುಪ್ರೀಂಕೋರ್ಟ್‌ನ ಮೂವರು ನ್ಯಾಯಮೂರ್ತಿಗಳಿದ್ದ ಸಮಿತಿ ಮಾಡಿದ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸಿಲ್ಲ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮಾಸಿಕ 3 ಲಕ್ಷ ರೂ.

ನಿಗದಿಪಡಿಸುವಂತೆ ಸಮಿತಿ ಪ್ರಸ್ತಾವನೆ ಸಲ್ಲಿಸಿತ್ತು. ಇದರ ಜತೆಗೆ ನಿವೃತ್ತ ವೈದ್ಯರ ಪಿಂಚಣಿ ಹಾಗೂ ಇತರ ಸೌಲಭ್ಯಗಳೂ ಹೆಚ್ಚಲಿವೆ. ಕೆಲ ತಿಂಗಳ ಹಿಂದೆ ಈ ಸಮಿತಿ ಸರ್ಕಾರಕ್ಕೆ ವರದಿ ನೀಡಿತ್ತು.

ಬಿ,ಎಸ್,ಎಪ್, ತುಕಡಿಗೆ ಮೋದಲ ಮಹಿಳಾ ಅಧಿಕಾರಿ

ಬಿಎಸ್‌ಎಫ್‌ ತುಕಡಿಗೆ ಮೊದಲ ಮಹಿಳಾ ಅಧಿಕಾರಿ

ಗ್ವಾಲಿಯರ್: ತನ್ನ 51 ವರ್ಷಗಳ ಇತಿಹಾಸದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ತುಕಡಿಯೊಂದರ ಮುಖ್ಯಸ್ಥರನ್ನಾಗಿ  ನಿಯೋಜನೆ ಮಾಡಲಿದೆ.
  25 ವರ್ಷದ ವಯಸ್ಸಿನ ತನುಶ್ರೀ ಪರೀಕ್ ತುಕಡಿಯ ನೇತೃತ್ವ ವಹಿಸಲಿರುವವರು. ಇವರು ರಾಜಸ್ತಾನದ ಬಿಕಾನೇರ್‌ನವರು.
  ಇಲ್ಲಿನ ತೆಕಾನ್‌ಪುರದಲ್ಲಿ ಶನಿವಾರ ನಡೆದ ನಿರ್ಗಮನ ಪಥಸಂಚಲನದಲ್ಲಿ 67 ತರಬೇತಿ ಅಧಿಕಾರಿಗಳ ನೇತೃತ್ವನ್ನು ತನುಶ್ರೀ ಅವರು ವಹಿಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹಾಜರಿಯಲ್ಲಿ ಈ ಪಥಸಂಚಲನೆ ನಡೆದಿತ್ತು.
  ಕೇಂದ್ರ ಲೋಕಸೇವಾ ಆಯೋಗ 2014ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಪರೀಕ್ ಆಯ್ಕೆಯಾಗಿದ್ದು, ಅಧಿಕಾರಿ ಶ್ರೇಣಿಯೊಂದಿಗೆ ಬಿಎಸ್‌ಎಫ್‌ಗೆ ಸೇರ್ಪಡೆಯಾಗಿದ್ದರು. ಬಿಎಸ್‌ಎಫ್ 2013ರಿಂದ ಮಹಿಳಾ ಅಧಿಕಾರಿಗಳನ್ನೂ ನಿಯೋಜನೆ ಮಾಡುತ್ತಿದೆ.

ಮಸೂದೆ ವಾಪಸ್: ಟ್ಂಪ್ ಗೆ ಮುಖಭಂಗ

ಮಸೂದೆ ವಾಪಸ್‌: ಟ್ರಂಪ್‌ಗೆ ಮುಖಭಂಗ

ವಾಷಿಂಗ್ಟನ್‌: ‘ಒಬಾಮಕೇರ್‌’ ಆರೋಗ್ಯ ನೀತಿ ರದ್ದುಗೊಳಿಸಿ ಪರ್ಯಾಯ ನೀತಿ ಜಾರಿಗೊಳಿಸುವುದಕ್ಕೆ ಸಂಬಂಧಿಸಿ ಅಮೆರಿಕದ ಕಾಂಗ್ರೆಸ್‌ನಲ್ಲಿ ಮಂಡಿಸಿದ್ದ ಮಸೂದೆಯನ್ನು ವಾಪಸ್‌ ಪಡೆಯಲಾಗಿದೆ.
  ಮಸೂದೆ ಜಾರಿಗೊಳಿಸಲು ಅಗತ್ಯದ ಮತಗಳನ್ನು ಕಲೆಹಾಕಲು ವಿಫಲವಾಗಿರುವ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.  ಮಸೂದೆ ಅಂಗೀಕಾರಗೊಳ್ಳಲು ಅಮೆರಿಕ ಕಾಂಗ್ರೆಸ್‌ನ ಕೆಳಮನೆಯಲ್ಲಿ (ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌) ಶುಕ್ರವಾರ ಮತದಾನ ನಡೆಯಬೇಕಿತ್ತು.
  ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ 435 ಸದಸ್ಯರಿದ್ದಾರೆ. ರಿಪಬ್ಲಿಕನ್‌ ಪಕ್ಷಕ್ಕೆ ಸರಳ ಬಹುಮತವಿದ್ದು, 235 ಸದಸ್ಯರನ್ನು ಹೊಂದಿದೆ. ಆದರೆ ಈ ಮಸೂದೆಗೆ ರಿಪಬ್ಲಿಕನ್‌ ಪಕ್ಷದಲ್ಲೇ ವಿರೋಧವಿದೆ.
  ಮತದಾನ ನಡೆದರೆ ಸೋಲು ಖಚಿತವಾದ್ದರಿಂದ  ಸ್ಪೀಕರ್‌ ಪೌಲ್‌ ರ್ಯಾನ್ ಅವರು ಮಸೂದೆಯನ್ನು ವಾಪಸ್‌ ಪಡೆಯುವ ನಿರ್ಧಾರ ತೆಗೆದುಕೊಂಡರು.
ಮಸೂದೆ ಜಾರಿಗೆ ಬೆಂಬಲ ಗಿಟ್ಟಿಸಲು ಟ್ರಂಪ್‌ ಅವರ ಪರವಾಗಿ ಸ್ಪೀಕರ್‌ ರ್ಯಾನ್ ಕೊನೆಯವರೆಗೂ ಕಸರತ್ತು ನಡೆಸಿದ್ದರು. ಮಸೂದೆ ಪರ ಮತ ಹಾಕುವಂತೆ ಅಮೆರಿಕ ಅಧ್ಯಕ್ಷರು ಗುರುವಾರ ರಿಪಬ್ಲಿಕನ್‌ ಪಕ್ಷದ ಸದಸ್ಯರಿಗೆ ಕಟ್ಟಪ್ಪಣೆ ವಿಧಿಸಿದ್ದರು.   ಆದರೂ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ ಹೊಸ ಮಸೂದೆ ಅಂಗೀಕಾರವಾಗದೇ ಇರುವುದು ಟ್ರಂಪ್ ಆಡಳಿತಕ್ಕೆ ಉಂಟಾದ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.   ಪಕ್ಷಾಂತರ ತಡೆ ಕಾಯ್ದೆ ಇಲ್ಲ: ಭಾರತದಲ್ಲಿರುವಂತೆ ಅಮೆರಿಕದ ಕಾಂಗ್ರೆಸ್‌ನಲ್ಲಿ ಪಕ್ಷಾಂತರ ತಡೆ ಕಾಯ್ದೆ ಇಲ್ಲ. ಇದರಿಂದ ಅಮೆರಿಕದ ಜನಪ್ರತಿನಿಧಿಗಳು ತಮ್ಮ ಇಚ್ಛೆಯಂತೆ ಮಸೂದೆಯ ಪರ ಅಥವಾ ವಿರೋಧವಾಗಿ ಮತ ಚಲಾಯಿಸಬಹುದು. ಪಕ್ಷದ ನಾಯಕತ್ವದ  ಆದೇಶದಂತೆ ಮತ ಹಾಕಬೇಕೆಂದಿಲ್ಲ.
  ಡೆಮಾಕ್ರೆಟಿಕ್‌ ಪಕ್ಷದ ಸಂಭ್ರಮ: ಮಸೂದೆ ವಾಪಸ್‌ ಪಡೆದ ಕ್ರಮಕ್ಕೆ ಡೆಮಾಕ್ರೆಟಿಕ್‌ ಪಕ್ಷದ ಜನಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ಈ ಮಸೂದೆ ವಿರೋಧಿಸುವಂತೆ ಅಮೆರಿಕದ ಮೂಲೆ ಮೂಲೆಯಲ್ಲಿರುವ ಜನರು ತಮ್ಮ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ. ಅವರ ಪ್ರಯತ್ನಕ್ಕೆ ಗೆಲುವು ದೊರೆತಿದೆ’ ಎಂದು ಹಿಲರಿ ಕ್ಲಿಂಟನ್‌ ಪ್ರತಿಕ್ರಿಯಿಸಿದ್ದಾರೆ.   ನಿರಾಸೆ ವ್ಯಕ್ತಪಡಿಸಿದ ಟ್ರಂಪ್‌
ಮಸೂದೆಯನ್ನು ವಾಪಸ್‌ ಪಡೆದದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಚ್ಚರಿ ಹಾಗೂ ನಿರಾಸೆ ವ್ಯಕ್ತಪಡಿಸಿದ್ದಾರೆ.
ಒಬಾಮಕೇರ್‌ ನೀತಿ ದೊಡ್ಡ ದುರಂತವಾಗಿದೆ. ಮುಂದಿನ ದಿನಗಳಲ್ಲಿ ನಿಮಗೆ ಸಂಕಷ್ಟ ಎದುರಾಗಲಿದೆ ಎಂದು ಅವರು ಅಮೆರಿಕದ ಜನರಿಗೆ ಎಚ್ಚರಿಸಿದ್ದಾರೆ.

ಮೊಬೈಲ್ ಗೆ ಆಧಾರ್ ಕಡ್ಡಾಯ

ಮೊಬೈಲ್‌ಗೆ ಆಧಾರ್‌ ಕಡ್ಡಾಯ

ನವದೆಹಲಿ: ಹಾಲಿ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್  ಮೊಬೈಲ್‌ ಸಿಮ್‌ ಬಳಕೆದಾರರು, ಮೊಬೈಲ್ ಸೇವಾ ಕಂಪೆನಿಗಳಿಗೆ ಆಧಾರ್‌ ಸಂಖ್ಯೆ ಕೊಡುವುದು ಕಡ್ಡಾಯ.

ಆಧಾರ್‌ ಸಂಖ್ಯೆ ಜೋಡಣೆಯಾಗದ ಮೊಬೈಲ್‌ ಸಂಪರ್ಕಗಳು 2018ರ ಫೆಬ್ರುವರಿ 6 ರಿಂದ ಅಕ್ರಮ ಎನಿಸಿಕೊಳ್ಳಲಿವೆ. ಜತೆಗೆ ಆ ಸಂಪರ್ಕಗಳು ಸ್ಥಗಿತಗೊಳ್ಳಲಿವೆ.

‘ಆಧಾರ್‌ ಆಧರಿತ ವಿದ್ಯುನ್ಮಾನ–ದೃಢೀಕರಣದ (ಇ–ಕೆವೈಸಿ: ಎಲೆಕ್ಟ್ರಾನಿಕ್‌–ನೋ ಯುವರ್‌ ಕಸ್ಟಮರ್‌) ಮೂಲಕ ಎಲ್ಲಾ ಮೊಬೈಲ್‌ ಸೇವಾ ಕಂಪೆನಿಗಳು ತಮ್ಮ ಚಂದಾದಾರರ ವಿವರಗಳನ್ನು ಮರುಪರಿಶೀಲನೆ ನಡೆಸಬೇಕು’ ಎಂದು  ದೂರಸಂಪರ್ಕ ಸಚಿವಾಲಯ ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

2018ರ ಫೆಬ್ರುವರಿ 6ರ ಒಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಅದು ಎಲ್ಲಾ ಕಂಪೆನಿಗಳಿಗೆ ಸೂಚನೆ ನೀಡಿದೆ. ‘ಆಧಾರ್‌ ಆಧರಿತ ಮರುಪರಿಶೀಲನೆ  ಪ್ರಕ್ರಿಯೆ ಹೇಗೆ ನಡೆಯುತ್ತದೆ

ಎಂಬುದನ್ನು ಎಸ್‌ಎಂಎಸ್ ಕಳುಹಿಸುವ ಹಾಗೂ ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮೂಲಕ  ಮೊಬೈಲ್‌ ಸೇವಾ ಕಂಪೆನಿಗಳು ತಮ್ಮ ಗ್ರಾಹಕರಿಗೆ ಮುಂಚಿತವಾಗಿ ವಿವರಿಸಬೇಕು’ ಎಂದು ಅದು ಹೇಳಿದೆ.

‘ಈ ಪ್ರಕ್ರಿಯೆಯಲ್ಲಿ ವ್ಯತ್ಯಯವಾದರೆ ಕೋಟ್ಯಂತರ ಗ್ರಾಹಕರಿಗೆ ತೊಂದರೆ ಆಗಲಿದೆ. ಹೀಗಾಗಿ, ಇಡೀ ಪ್ರಕ್ರಿಯೆ ಸರಾಗವಾಗಿ ನಡೆಯಲು ಅನುಕೂಲವಾಗುವಂತೆ ಕಂಪೆನಿಗಳು ವ್ಯವಸ್ಥೆರೂಪಿಸಬೇಕು’ ಎಂದು ಸಚಿವಾಲಯ ನಿರ್ದೇಶನ ನೀಡಿದೆ.

‘ಇ–ಕೆವೈಸಿ ಪ್ರಕ್ರಿಯೆ ಆರಂಭಿಸುವುದಕ್ಕೂ ಮುನ್ನ ಕಂಪೆನಿಗಳು ಪ್ರತಿ ಚಂದಾದಾರರಿಗೂ ಪರಿಶೀಲನಾ ಸಂಖ್ಯೆ (ವೆರಿಫಿಕೇಷನ್‌ ಕೋಡ್‌) ಕಳುಹಿಸಿ, ಸಿಮ್‌ ಕಾರ್ಡ್‌ ಅವರ ಬಳಿಯೇ ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು’ ಎಂದೂ ಅದು ಸೂಚಿಸಿದೆ.

‘ಸಿಮ್‌ ಮೂಲಕ ಹಾಟ್‌ಸ್ಪಾಟ್ ಮತ್ತು ಡಾಂಗಲ್‌ ಬಳಸಿ, ಇಂಟರ್ನೆಟ್ ಸೇವೆ  ಪಡೆಯುವಾಗ ಚಂದಾದಾರರು ಸಂಪರ್ಕ ಸಂಖ್ಯೆಯನ್ನು ನೀಡಿರುತ್ತಾರೆ. ಸೇವಾ ಕಂಪೆನಿಗಳು, ಆ ಸಂಖ್ಯೆಗಳ ಮೂಲಕ ಇಂಟರ್ನೆಟ್‌ ಚಂದಾದಾರರನ್ನು ಸಂಪರ್ಕಿಸಿ, ಆಧಾರ್‌ ಸಂಖ್ಯೆಯನ್ನು ಪಡೆದುಕೊಳ್ಳಬೇಕು’ ಎಂದು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ವಿವರಿಸಿದೆ. ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ದೂರಸಂಪರ್ಕ ಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ.

‘ಆಧಾರ್‌ ಮೂಲಕ ಮೊಬೈಲ್‌ ಸಂಪರ್ಕಗಳನ್ನು ಪರಿಶೀಲಿಸಲಾಗುವುದು. ನಕಲಿ ದಾಖಲೆಗಳನ್ನು ಸಲ್ಲಿಸಿ ಮೊಬೈಲ್‌ ಸಂಪರ್ಕ ಪಡೆಯಲಾಗಿದೆಯೇ ಎಂಬುದನ್ನು ಪತ್ತೆ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬ್ಯಾಂಕ್‌ ವಹಿವಾಟುಗಳಿಗೂ ಮೊಬೈಲ್‌ ಬಳಸುತ್ತಿರುವುದರಿಂದ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಫೆಬ್ರುವರಿಯಲ್ಲಿ ತಿಳಿಸಿತ್ತು. ಸರ್ಕಾರದ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿತ್ತು.

ಆಟಗಾರರಿಗಾಗಿ "ಸುರಕ್ಷಾ" ಯೋಜನೆ

ಆಟಗಾರರಿಗಾಗಿ 'ಸುರಕ್ಷಾ' ಯೋಜನೆ

ಬೆಂಗಳೂರು: ದೇಶದಲ್ಲಿ  ಮೊದಲ ಬಾರಿಗೆ ಆಟಗಾರರಿಗೆ ಪಿಂಚಣಿ ಯೋಜನೆ ಜಾರಿ ಮಾಡಿದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಶನಿವಾರ ರಾಜ್ಯದ ಕ್ರಿಕೆಟಿಗರಿಗೆ ಮತ್ತೊಂದು ವಿಶಿಷ್ಠ ಕೊಡುಗೆ ನೀಡಿದೆ.

ಆಟಗಾರರ ಹಿತ ಕಾಯಲು ಮುಂದಾಗಿರುವ ಕೆಎಸ್‌ಸಿಎ ಎಲ್ಲರಿಗೂ ಜೀವ ವಿಮೆ ಮಾಡಿಸಲು ಮುಂದಾಗಿದ್ದು ಇದಕ್ಕಾಗಿ ‘ಕೆಎಸ್‌ಸಿಎ ಸುರಕ್ಷಾ’ ಯೋಜ ನೆ ಯನ್ನು ಜಾರಿಗೆ ತರಲು ನಿರ್ಧರಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಹೊಸ ಯೋಜನೆ ಯನ್ನು ಘೋಷಿಸಲಾಗಿದ್ದು ಇದು  ಏಪ್ರಿಲ್‌ 1ರಿಂದ ಜಾರಿ ಯಾಗಲಿದೆ. ಕೆಎಸ್‌ಸಿಎ ಮತ್ತು ನ್ಯಾಷನಲ್‌ ಇನ್ಸುರೆನ್ಸ್‌ ಕಂಪೆನಿ ಲಿಮಿಟೆಡ್‌ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಈ ಯೋಜನೆಯು ರಾಷ್ಟ್ರೀಯ ತಂಡದಲ್ಲಿ ಆಡುವ ರಾಜ್ಯದ ಆಟಗಾರರಿಗೆ ಅನ್ವಯ ವಾಗುವುದಿಲ್ಲ.

‘ಆಟಗಾರರ ಹಿತ ದೃಷ್ಟಿಯನ್ನು  ಗಮನದಲ್ಲಿಟ್ಟುಕೊಂಡು ಕೆಎಸ್‌ಸಿಎ ಹೊಸ ಯೋಜನೆ ಜಾರಿಗೆ ತಂದಿದೆ. ದೇಶದಲ್ಲೇ ಇದು ಹೊಸ ಬಗೆಯ ಪ್ರಯೋಗವಾಗಿದ್ದು ಅಂದಾಜು 5000 ಕ್ರಿಕೆಟಿಗರು ಇದರ ಫಲಾನುಭವಿಗಳಾಗಲಿ ದ್ದಾರೆ ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ ತಿಳಿಸಿದರು.

ಹೊಸ ಯೋಜನೆಯ ಅನುಸಾರ ಪ್ರತಿಯೊಬ್ಬ ಆಟಗಾರನ ಹೆಸರಿಗೂ  ₹ 1 ಲಕ್ಷ ಮೊತ್ತದ ವಿಮೆ ಮಾಡಿಸಲಾಗುತ್ತದೆ. ಆಟಗಾರ ಅಪಘಾತದಲ್ಲಿ ಮೃತಪಟ್ಟರೆ, ಅಥವಾ ಅಂಗವೈಕಲ್ಯಕ್ಕೆ ಒಳಗಾದರೆ ಅವರ ಕುಟುಂಬಕ್ಕೆ ಈ ಮೊತ್ತ ಸಿಗಲಿದೆ.