ಭಾನುವಾರ, ಆಗಸ್ಟ್ 14, 2016

ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ (೨)

ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ (೨)

ಜಕಾತಿ:

ಇದು ಸಂವಿಧಾನದ ಏಳನೆಯ ಅನುಬಂಧದ ಎರಡನೆಯ ಪಟ್ಟಿ(ರಾಜ್ಯ ಶಾಸನಾಧೀನ ವಿಷಯಗಳ ಪಟ್ಟಿ)ಯಲ್ಲಿ ನಂ. ೫೨ ಇದ್ದು ೧೯೭೯ರ ವರೆಗೆ ಇದನ್ನು ನಗರ ಪಾಲಿಕೆಗಳು ವಿಧಿಸಿ ವಸೂಲಿ ಮಾಡುತ್ತಿದ್ದವು. ವರಮಾನವೂ ಗಣನೀಯ ಮಟ್ಟದಲ್ಲಿ ಇರುತ್ತಿತ್ತು. ಆದರೆ ಇದರ ವಿರುದ್ಧ ಅರ್ಥಶಾಸ್ತ್ರಜ್ಞರೂ, ಆಡಳಿತ ತಜ್ಞರೂ, ಅನೇಕ ಸರಕಾರಿ ಸಮಿತಿಗಳೂ ಪ್ರಬಲವಾದ ವಾದಗಳನ್ನು ಮಂಡಿಸಿದ್ದರು. ಮುಖ್ಯವಾಗಿ –

i) ಜಕಾತಿ ವಸೂಲಿ ಕ್ರಮದಿಂದ ಸಾರಿಗೆ ವಾಹನಗಳ ನಿಲುಗಡೆ, ಮುಂತಾದವುಗಳಿಂದ ಸಾಮಾನು ಸಾರಿಗೆಗೆ ಹೆಚ್ಚಿನ ಅಡಚಣೆ, ವಿಳಂಬ ಉಂಟಾಗಿ ಸಾರಿಗೆಯ ಖರ್ಚು ವೃಥಾ ಹೆಚ್ಚಾಗಿ, ಗ್ರಾಹಕರಿಗೆ, ಕಸುಬು ಉದ್ದಿಮೆಗಳಿಗೆ ಭಾರವಾಗಿ ರಾಷ್ಟ್ರಕ್ಕೇ ಆರ್ಥಿಕ ಹಾನಿಯಾಗುತ್ತಿದೆ.

ii) ವಸೂಲಿ ಕ್ರಮದಲ್ಲಿ ಸೋರುವಿಕೆ ಮತ್ತು ಭ್ರಷ್ಟಾಚಾರಗಳಿಗೆ ವಿಶೇಷ ಆಸ್ಪದವಿದೆ.

iii) ಜಕಾತಿಯಿಂದ ಸಿಗಬಹುದಾದ ವರಮಾನವನ್ನು ಪಡೆಯಲು ಮೇಲಿನ ಆಕ್ಷೇಪಣೆಗಳಿಲ್ಲದ ಪರ್ಯಾಯ ವ್ಯವಸ್ಥೆ ಸಾಧ್ಯವಿದೆ.

ಕರ್ನಾಟಕದಲ್ಲಿ ಜಕಾತಿಯನ್ನು ೧೯೭೯ರಲ್ಲಿ ರದ್ದು ಮಾಡಿ ಸರಕಾರವು ತನ್ನ ಬೊಕ್ಕಸದಿಂದ “ಜಕಾತಿ ಪರಿಹಾರ ಧನ”ವನ್ನು ಪಾಲಿಕೆಗಳಿಗೆ ವರ್ಗಾಯಿಸುತ್ತಿದೆ. ಇತರ ಕೆಲವು ರಾಜ್ಯಗಳೂ ಇದನ್ನು ರದ್ದು ಮಾಡಿವೆ. ಆದರೆ ಕೆಲವು ರಾಜ್ಯಗಳಲ್ಲಿ- ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಲ – ಇದು ಇನ್ನೂ ಜಾರಿಯಲ್ಲಿದೆ. ಕೆಲವು ವರ್ಷಗಳ ಹಿಂದೆ ಆಗ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿದ್ದ ಶ್ರೀ ಜ್ಯೋತಿ ಬಸು ಅವರ ನೇತೃತ್ವದಲ್ಲಿ ಒಂದು ರಾಜ್ಯ ಮಂತ್ರಿಗಳ ಸಮಿತಿ ಕೂಡಿ ಜಕಾತಿಯು ಜಾರಿಯಲ್ಲಿರುವ ರಾಜ್ಯಗಳಲ್ಲಿ ಅದನ್ನು ಮುಂದುವರಿಸಬೇಕೆಂಬ ವರದಿಯನ್ನು ಕೊಟ್ಟಿದೆ. ತಮ್ಮ ಸಲಹೆಯ ಬೆಂಬಲದಲ್ಲಿ ಅದು ತರುವ ವರಮಾನದ ಪ್ರಮಾಣವಲ್ಲದೆ ಇನ್ನೊಂದು ಮುಖ್ಯ ಕಾರಣವು ಸಂವಿಧಾನದಲ್ಲಿ ಜಕಾತಿಯ ಅಸ್ತಿತ್ವವಿರುವುದೇ ಸಾಕೆಂದು ಸೂಚಿಸಿದೆಯಂತೆ. ಈ ರೀತಿಯ ವಿಚಾರಕ್ಕೆ ಮನ್ನಣೆ, ಮಹತ್ವ ಕೊಡುವುದಾದರೆ ರಾಜ್ಯಪಟ್ಟಿಯಲ್ಲಿ ‘ಜಕಾತಿ’ಯ ಮಗ್ಗುಲಲ್ಲೇ ೫೧ನೇ ಸ್ಥಾನದಲ್ಲಿ “ಸೆರೆ ಮತ್ತು ಅಫೀಮು ಗಾಂಜಾ” ಮುಂತಾದವುಗಳು ಅವುಗಳ ಮೇಲೆ “ಉತ್ಪಾದನಾ ತೆರಿಗೆ” ಎಂದಿರುವುದರಿಂದ ಅವುಗಳಿಂದಲೂ ಹೆಚ್ಚಿಗೆ ವರಮಾನ ಪಡೆಯಬಹುದಲ್ಲವೇ? ತೆರಿಗೆಯಿಂದ ಬರಬಹುದದ ವರಮಾನವೊಂಧೇ ಅಲ್ಲ ಅದರಿಂದ ಉಂಟಾಗಬಹುದಾದ ಲಾಭ-ಹಾನಿಗಳ ಸಮಗ್ರ ಚಿತ್ರವನ್ನು ಲಕ್ಷ್ಯದಲ್ಲಿಟ್ಟುಕೊಂಡು ನಿರ್ಣಯಕ್ಕೆ ಬರಬೇಕಾಗುತ್ತದೆ.

ಕರ್ನಾಟಕದಲ್ಲಿ ಜಕಾತಿಯ ಪರ್ಯಾಯ ವ್ಯವಸ್ಥೆ “ಜಕಾತಿ ಪರಿಹಾರ ಧನ”, ೧೯೯೯-೨೦೦೦ದಲ್ಲಿ ಸರಕಾರವು ೨೪.೦೬ ಲಕ್ಷ ರೂಪಾಯಿಗಳನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೀಡಿತು. ಇದು ಈ ಪಾಲಿಕೆಯ ಅದೇ ವರ್ಷದ ತನ್ನ ಎಲ್ಲಾ ತೆರಿಗೆಗಳ ವರಮಾನವಾಗಿದ್ದ ೯೦೮ ಲಕ್ಷದ ಎರಡು ಪಟ್ಟಿಗಿಂತ ಹೆಚ್ಚಿತ್ತು. ಆದರೂ ನಗರಪಾಲಿಕೆಗಳು ಇನ್ನೂ ‘ಜಕಾತಿ’ ಬೇಕೆಂದು ಒತ್ತಾಯ ಪಡಿಸುತ್ತವೆಯಂತೆ. ಇದಕ್ಕೆ ಕಾರಣಗಳು:

i) ತಾವೇ ಜಕಾತಿ ವಿಧಿಸಿ ವಸೂಲಿ ಮಾಡಿದರೆ ಈಗ ಸಿಗುತ್ತಿರುವ “ಜಕಾತಿ ಪರಿಹಾರ ಧನ”ಕ್ಕಿಂತ ಹೆಚ್ಚು ಸಿಗಬಹುದು;

ii) ವಸೂಲಿ ಮಾಡಿದ ಹಣ ನೇರವಾಗಿ ಪಾಲಿಕೆಯ ಬೊಕ್ಕಸಕ್ಕೆ ಸೇರುತ್ತದೆ. ಈಗಿನ ವ್ಯವಸ್ಥೆಯಲ್ಲಿ “ಪರಿಹಾರ ಧನ” ಎಷ್ಟು ಸಿಗಬಹುದು, ಎಷ್ಟು ಕಂಥುಗಳಲ್ಲಿ, ಯಾವ್ಯಾವಾಗ ಸಿಗಬಹುದು ಮತ್ತು ದೊರಕಿಸಿಕೊಳ್ಳಲಿಕ್ಕೆ ಪಾಲಿಕೆಯ ಅಧಿಕಾರಿಗಳು-ಆಯುಕ್ತರೂ, ಒಮ್ಮೊಮ್ಮೆ ಮಹಾಪೌರರೂ ಸಹಿತ-ವಿಧಾನಸೌಧದ ಯಾತ್ರೆ ಎಷ್ಟು ಸಲ ಕೈಗೊಳ್ಳಬೇಕಾಗಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಪಾಲಿಕೆಯ ಕೈಯಲ್ಲಿರುವುದಿಲ್ಲ.

ರಾಜ್ಯ ಸರಕಾರದಲ್ಲಿಯೂ ಜಕಾತಿ ವಾಪಸು ತಂದರೆ ಈಗ ಕೊಡುತ್ತಿರುವ “ಪರಿಹಾರ ಧನ” ಸರಕಾರಕ್ಕೇ ಉಳಿಯಬಹುದೆಂಬ ಒಂದು ಮತವೂ ಇರಬಹುದು.

ಈ ಗಣಿತಗಳಲ್ಲಿ ಲಾಭವೊಂದನ್ನೇ ನೋಡಿ ಆಗಬಹುದಾದ ದುಷ್ಪರಿಣಾಮಗಳನ್ನು ಮರೆತಿದ್ದಾರೆ. ಜಕಾತಿಯಾಗಲೀ, ಜಕಾತಿ ಪರಿಹಾರ ಧನವಾಗಲೀ ಅಥವಾ ಯಾವುದೆ ಸಾಮಾನುಗಳ ಮೇಲೆ ಹೇರುವ ಯಾವುದೇ ಕರವಾಗಲೀ, ಅವುಗಳ ಭಾರ ಸಾಮಾನನ್ನು ತಯಾರಿಸುವವನ ಮೇಲಾಗಲೀ ಅಥವಾ ಅದನ್ನು ಗ್ರಾಹಕರಿಗೆ ತಲುಪಿಸುವ ವರ್ತಕನ ಮೇಲಾಗಲೀ ಬೀಳುವುದಿಲ್ಲ. ಅದು ಸಾಮಾನಿನ ನಿಜವಾದ ಬೆಲೆಯ ಸಂಗಡ ಗ್ರಾಹಕನ ಮೇಲೆ, ಅಂದರೆ ಸಾಮಾನ್ಯ ಪ್ರಜರ ಮೇಲೆಯೇ ಬೀಳುತ್ತದೆ. ಹೆಚ್ಚು ವರಮಾನ ಬೇಕೆಂದರೆ, ಪ್ರಜರು ಸಾಮಾನುಗಳಿಗಾಗಿ ಹೆಚ್ಚು ಹಣ ಖರ್ಚು ಮಾಡಲೇಬೇಕಾಗುತ್ತದೆ. ಸರಕಾರವು ಮಾರಾಟ ಕರವನ್ನು ಹೆಚ್ಚಿಸಿ ಒಂದು ಪಾಲನ್ನು “ಜಕಾತಿ ಪರಿಹಾರ ಧನ” ವಾಗಿ ಪಾಲಿಕೆಗೆ ನೀಡಿದರೂ ಅಷ್ಟೇ ಅಥವಾ ಸರಕಾರವೇ ಆಗಲೀ ಪಾಲಿಕೆಯೇ ಆಗಲಿ ಬೇರೆಯಾಗಿ ‘ಜಕಾತಿ’ಯನ್ನು ವಿಧಿಸಿ, ಅದನ್ನು ಪಾಲಿಕೆಗೆ ವಸೂಲಿ ಮಾಡಲು ಬಿಟ್ಟರೂ ಅಷ್ಟೇ ಅಥವಾ ಸರಕಾರವು ಪಾಲಿಕೆಗೆ ಮಾರಾಟಕರದ ಮೇಲೆ ಒಂದು ಸರಚಾರ್ಜ್ ವಿಧಿಸಲು ಅಧಿಕಾರ ಕೊಟ್ಟು, ವಸೂಲಿಯನ್ನು ಮಾರಾಟಕರ ಖಾತೆಯಿಂದಲೇ ಮಾಡಿಸಿ, ಆ ಸರಚಾರ್ಜ್ ಹಣವನ್ನು ಖಜಾನೆಗೆ ಪ್ರತ್ಯೇಕ ವರಮಾನ ಹಣಕಾಸು ಶೀರ್ಷಿಕೆಯಡಿ ತುಂಬಿಸಿ, ಖಜಾನೆಯಿಂದ ನೇರವಾಗಿ ಪಾಲಿಕೆಗೆ ವರ್ಗಾಯಿಸಿದರೂ ಅಷ್ಟೆ. ಈ ಮೂರೂ ವಿಧಾನಗಳಲ್ಲಿ “ವರಮಾನ, ಪ್ರಜರ ಮೇಲಿನ ಭಾರ”ಗಳಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಇತರ ದುಷ್ಪರಿಣಾಮಗಳನ್ನು ತಪ್ಪಿಸಬೇಕಾದರೆ ಈ ಕೆಳಗೆ ಸೂಚಿಸಿದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

i) ಕರಾಕರಣೆ (ಅಂದರೆ ಕಾನೂನಿನ ಕರದ ದರವನ್ನು ಹಚ್ಚಿ ಕರದ ಮೊತ್ತವನ್ನು ಗಣಿಸುವುದು) ಮತ್ತು ಕರವಸೂಲಿಗಳಲ್ಲಿ ಬೇಕಾಗುವ ದಾಖಲೆಗಳು, ಅವುಗಳ ಪರಿಶೀಲನೆ ಮತ್ತಿತರ ಕ್ರಮಗಳು ಈಗಿನಕ್ಕಿಂತ ಹೆಚ್ಚಾದರೆ, ಹೆಚ್ಚು ಖಾತೆಗಳಾಗಲೀ, ಅಧಿಕಾರಿ-ಸಿಬ್ಬಂದಿಗಳಾಗಲೀ, ಅದರಲ್ಲಿ ಕೈಹಾಕಿದರೆ ಕಾಲ ವಿಳಂಬ, ಅವ್ಯವಹಾರ, ಆಡಳಿತ ಖರ್ಚು, ಭ್ರಷ್ಟಾಚಾರಗಳಿಗೆ ಆಸ್ಪದ, ಹೆಚ್ಚು. ಇವನ್ನು ತಪ್ಪಿಸಬೇಕಾದರೆ ಈಗಿನಂತೆ ಮಾರಾಟಕರ ಖಾತೆಯೇ ಎಲ್ಲ ಮಾಡಬೇಕು.

ii) ಜಕಾತಿಯ ಪರ್ಯಾಯ ಕ್ರಮದಿಂದ(ಅದು ಯಾವುದೇ ಇರಲಿ) ವಸೂಲಿ ಆದ ಹಣ, ಸರಕಾರಿ ಖಜಾನೆಯಲ್ಲಿ ಪ್ರತ್ಯೇಕ ಶೀರ್ಷಿಕೆಯಡಿ ಜಮಾ ಆಗಿ, ಕಾಲಕಾಲಕ್ಕೆ ಸರಿಯಾಗಿ ಖಜಾನೆಯೇ ಸ್ವಯಂ (ಸರಕಾರದ ಆದೇಶದ ಅಗತ್ಯವಿಲ್ಲದೇ) ನೇರವಾಗಿ ಪಾಲಿಕೆಗೆ ವರ್ಗಾಯಿಸಬೇಕು. ಇಂಥ ಪದ್ಧತಿ ಈಗಾಗಲೇ ಸ್ಟಾಂಪ ತೆರಿಗೆಯ ಮೇಲಿನ ಸರಚಾರ್ಜ ಬಗ್ಗೆ ರೂಢಿಯಲ್ಲಿದೆ.

ಈಗ ಇದನ್ನು ವಿಧಿಸುವ ವಿಧಾನ-ಮೇಲೆ ಹೇಳಿದ ಹಾಗೆ ಯಾವ ವಿಧಾನವಾದರೂ, ಸರಕಾರ ವಿಧಿಸಿದರೂ, ಪಾಲಿಕೆ ವಿಧಿಸಿದರೂ ವರಮಾನ, ಪ್ರಜರ ಮೇಲಿನ ಭಾರ ಬದಲಾಗುವುದಿಲ್ಲ. ಆದರೆ ಪಾಲಿಕೆಗೇ ಮಾರಾಟ ಕರದ ಮೇಲೆ ಪಾಲಿಕೆಯ ಸರಚಾರ್ಜ ಎಂದು ವಿಧಿಸಲು (ಅದರ ದರವನ್ನು ನಿರ್ಣಯಿಸಲೂ) ಅಧಿಕಾರವಿದ್ದರೆ, ಪಾಲಿಕೆಯ ಸ್ವಾಯತ್ತತೆಯ ಜವಾಬ್ದಾರಿ ಅದಕ್ಕೆ ಮನದಟ್ಟಾಗುತ್ತದೆ. ಆಗ ಅಲ್ಲಿಯ ನಿವಾಸಿಗಳೂ ಜಕಾತಿಯ ವರಮಾನ ಹೆಚ್ಚಾಗಬೇಕೆಂದರೆ, ತಾವು ಸಾಮಾನುಗಳಿಗಾಗಿ ಕೊಡಬೇಕಾದ ಬೆಲೆಯೂ ಹೆಚ್ಚಾಗಬೇಕಾಗುತ್ತಿದೆ ಎಂದು ಅರಿತುಕೊಂಡು, ಪಾಲಿಕೆಯೂ, ನಿವಾಸಿಗಳೂ ಹಾಸಿಗೆಯೂ ತಮ್ಮದೇ ಚಾಚಿಕೊಳ್ಳುವ ಕಾಲುಗಳೂ ತಮ್ಮವೇ ಎಂಬ ತಿಳುವಳಿಕೆ ಪಡೆಯುತ್ತಾರೆ. ಇದೇ ಜವಾಬ್ದಾರಿ ಪ್ರಜಾಪ್ರಭುತ್ವದ ಹಾದಿ.

ಸರಕಾರದ ತೆರಿಗೆಗಳಲ್ಲಿ ಪಾಲು ಮತ್ತು ಅನುದಾನ:

ಸರಕಾರವು ತಾನು ವಿಧಿಸಿ, ವಸೂಲಿ ಮಾಡಿದ ತೆರಿಗೆಗಳ ವರಮಾನದಲ್ಲಿ ಸ್ವಲ್ಪ ಪಾಲನ್ನು ಪಾಲಿಕೆಗಳಿಗೆ ನೀಡುತ್ತದೆ. ಮುಂಚೆ ಮನರಂಜನೆ ತೆರಿಗೆ ಮತ್ತು ಮೋಟಾರ್ ಗಾಡಿಗಳ ಮೇಲಿನ ತೆರಿಗೆಗಳಿಂದ ಸಿಗುತ್ತಿದ್ದ ಪಾಲು ಈಗ ಸಿಗುತ್ತಿಲ್ಲ. ಸ್ಟಾಂಪ್‌ತೆರಿಗೆ ಮೇಲಿನ ಸರಚಾರ್ಜ್ ಮಾತ್ರ ಇನ್ನೂ ಸಿಗುತ್ತಿದೆ. ೧೯೯೯-೨೦೦೦ದಲ್ಲಿ ಇದರಿಂದ ೨೬೮ ಲಕ್ಷ ರೂಪಾಯಿಗಳು ದೊರೆತವು. ಜಿಲ್ಲಾ ನೋಂದಣಿ ಅಧಿಕಾರಿಗಳು ಈ ಮೊತ್ತವನ್ನು ಪ್ರತಿ ತಿಂಗಳು ನೇರವಾಗಿ ಪಾಲಿಕೆಗೆ ವರ್ಗಾಯಿಸುತ್ತಿದ್ದಾರೆ. ಇದೇ ಪದ್ಧತಿಯನ್ನು ಸರಕಾರ ಎಲ್ಲ ತೆರಿಗೆಗಳ ಅಥವಾ ಪರಿಹಾರ ಧನದ ವರ್ಗಾವಣೆಗೂ ಅನುಸರಿಸಿದರೆ ಪಾಲಿಕೆಗೆ ಅನುಕೂಲ.

ಮನರಂಜನಾ ತೆರಿಗೆಯು ಸಂವಿಧಾನದ ಏಳನೆಯ ಅನುಬಂಧದ ರಾಜ್ಯ ವಿಷಯ ಪಟ್ಟಿಯಲ್ಲಿ ನಂ. ೬೨ ಆದ “ಭೋಗ ವಸ್ತುಗಳು, ಮನರಂಜನೆ, ಜೂಜು ಪಂದ್ಯಗಳನ್ನೊಳಗೊಂಡು, ಮೇಲಿನ ಕರ”ದಲ್ಲಿದೆ ಮತ್ತು ಅದೇ ಪಟ್ಟಿಯ ೬೦ನೆಯದು “ವೃತ್ತಿಕರ”. ಇವೆರಡೂ ಪಾಲಿಕೆಗಳ ತೆರಿಗೆಗಳಾಗುವುದು ವಿಹಿತ. ವೃತ್ತಿಗೆ ಆಸ್ಪದ, ಮತ್ತು ಭೋಗ ವಸ್ತುಗಳ, ಮನರಂಜನೆ ಮುಂತಾದವುಗಳ ಬೇಡಿಕೆ, ನಗರದ ಜನಸಂಖ್ಯೆ ಮತ್ತು ಪಾಲಿಕೆಯು ಒದಗಿಸುವ ಸೌಕರ್ಯ ಸೌಲಭ್ಯಗಳನ್ನು ಅವಲಂಬಿಸಿವೆ. ಅವು ಪ್ರಾರಂಭವಾಗಲು, ವೃದ್ಧಿಸಲು ಅಥವಾ ಕ್ಷೀಣಿಸಲು ನಗರದ ಪರಿಸರವೇ ಕಾರಣೀಭೂತ. ಅಲ್ಲದೇ ಇವುಗಳಿಗೆ ಸಂಬಂಧವಿರುವ ಜಾಹೀರಾತುಗಳ ಮೇಲಿನ ಕರ ಈಗಲೂ ಪಾಲಿಕೆಯದ್ದಾಗಿದೆ. ವಸತಿ ಗೃಹಗಳು (ಅಂದರೆ ದೊಡ್ಡ ಹೋಟೆಲ್ಲುಗಳೂ ಸಹಿತ), ಕಸಬು ಉದ್ದಿಮೆಗಳು ಪಾಲಿಕೆಯ ಪರವಾನಿಗೆ ಪಡೆಯಲೇಬೇಕು. ಆದಕಾರಣ ಈ ಎರಡೂ ತೆರಿಗೆಗಳನ್ನು ಪಾಲಿಕೆಗೆ ಕೊಟ್ಟು ಅವುಗಳ ವರಮಾನವನ್ನು ಸಂಪೂರ್ಣವಾಗಿ ಪಾಲಿಕೆಯೇ ಪಡೆಯಬೇಕು. ಇಡೀ ರಾಜ್ಯದಲ್ಲಿ ಸಮಾನ ದರಗಳು ಜಾರಿಯಲ್ಲಿ ಇರುವುದು ಸಮಂಜಸವೆನಿಸಿದರೆ, ದರಗಳನ್ನು ರಾಜ್ಯ ಶಾಸಕಂಗ ವಿಧಿಸಬಹುದು. “ಇಲ್ಲಿ ಇನ್ನೊಂದು ಮಹತ್ವದ ಪ್ರಶ್ನೆ. ಈಗ ಪಾಲಿಕೆಯ ಅಧಿಕಾರ, ಕಾರ್ಯಗಳ ಬಗ್ಗೆ ರಾಜ್ಯ ಶಾಸಕಾಂಗವು ಕಾನೂನು ಮಾಡಲು ಸ್ವತಂತ್ರವಿದೆ. ರಾಜ್ಯ ಸರಕಾರವು ಶಾಸಕಾಂಗದ ಒಪ್ಪಿಗೆ ಪಡೆದು ಪಾಲಿಕೆಗಳ ಅಧಿಕಾರದಲ್ಲಿ ಬದಲಾವಣೆಗಳನ್ನು ಮಾಡಬಹುದು. ಅದನ್ನು ಮೊಟಕುಗೊಳಿಸಲೂಬಹುದು. ಈಗಿರುವ ತೆರಿಗೆ ಅಧಿಕಾರವನ್ನು ಕಿತ್ತುಕೊಳ್ಳಬಹುದು. ಇದನ್ನು ತಡೆಯಲಿಕ್ಕೆ ಪಾಲಿಕೆಗಳ ತೆರಿಗೆ-ಅಧಿಕಾರವನ್ನು ಸಂವಿಧಾನದಲ್ಲಿಯೇ ದೃಢೀಕರಿಸಬೇಕು.

ಈ ಸಲಹೆಗೆ ಇನ್ನೊಂದು ಕಾರಣವಿದೆ. ಸಂವಿಧಾನದಲ್ಲಿ “ರಾಜ್ಯ ಹಣಕಾಸು ಆಯೋಗ”ದ ನೇಮಕ, ಅದರ ಶಿಫಾರಸುಗಳ ಪರಿಶೀಲನೆ, ಇವುಗಳ ಬಗ್ಗೆ ನಿಯಮಗಳಿವೆ. ಕರ್ನಾಟಕ ರಾಜ್ಯಪಾಲರು ಮೊದಲನೆಯ ಆಯೋಗವನ್ನು ಅರ್ಥಶಾಸ್ತ್ರಜ್ಞ ಡಾ. ತಿಮ್ಮಯ್ಯ ಅವರ ನೇತೃತ್ವದಲ್ಲಿ ಸ್ಥಾಪಿಸಿದರು. ಆ ಆಯೋಗ ೧೯೯೬ರಲ್ಲಿಯೇ ತನ್ನ ವರದಿಗಳನ್ನು ರಾಜ್ಯಪಾಲರಿಗೆ ಒಪ್ಪಿಸಿತು. ರಾಜ್ಯ ಸರಕಾರವು ಆ ವರದಿಯನ್ನು ಪರಿಶೀಲಿಸಿ, ಶಿಫಾರಸುಗಳ ಬಗ್ಗೆ ನಿರ್ಣಯ ತೆಗೆದುಕೊಂಡು, ವರದಿಯನ್ನೂ ತನ್ನ ನಿರ್ಣಯಗಳನ್ನೂ ರಾಜ್ಯಾಂಗದ ಮುಂದಿಡಬೇಕಾಗಿತ್ತು. ನನಗೆ ತಿಳಿದ ಮಟ್ಟಿಗೆ ಈ ಕಾರ್ಯ ಇನ್ನೂ ಸಂಪೂರ್ಣವಾಗಿಲ್ಲ. ಈಗ ಶ್ರೀ ನರಸಿಂಹಮೂರ್ತಿಯವರ ನೇತೃತ್ವದಲ್ಲಿ ಎರಡನೆಯ ಆಯೋಗವು ಕಾರ್ಯ ಪ್ರಾರಂಭಿಸಿದೆ. “ರಾಜ್ಯ ಹಣಕಾಸು ಆಯೋಗ”ದ ಸಂರಕ್ಷಣೆ ನಗರ ಪಾಲಿಕೆಗಳಿಗೆ ಪರಿಣಾಮಕಾರಿಯಾಗಿ ದೊರೆಯಬೇಕೆಂದರೆ ಸಂವಿಧಾನದಲ್ಲಿಯೇ ಈ ಇಡೀ ಕಾರ್ಯಕ್ರಮದ ವಿವಿಧ ಹಂತಗಳಿಗೆ – ಆಯೋಗದ ವರದಿ, ಸರಕಾರದ ಪರಿಶೀಲನೆ, ನಿರ್ಣಯ , ಶಾಸಕಾಂಗದಲ್ಲಿ ಮಂಡನೆ ಮತ್ತು ಶಿಫಾರಸುಗಳ ಅನುಷ್ಠಾನ-ಸೂಕ್ತ ಕಾಲಮಿತಿಗಳಿರಬೇಕು.

ಶುಲ್ಕಗಳು – ಮಿಶ್ರ ವರಮಾನಗಳು:

ಪಾಲಿಕೆಯಿಂದ ವಿಶೇಷ ಪರವಾನಿಗೆ, ಸೇವೆ ಅಥವಾ ಸೌಕರ್ಯಗಳನ್ನು ಪಡೆಯಲು ನಿರ್ಧರಿಸಿದ ದರಗಳಂತೆ ಶುಲ್ಕ ಕೊಡಬೇಕು. ಹುಬ್ಬಳ್ಳಿ-ಧಾರವಾಡದ ಬಜೆಟ್‌ನಲ್ಲಿ ಪ್ರಮುಖ ಬಾಬುಗಳ ವರಮಾನ:

 ೧೯೯೯-೨೦೦೦ರ ವಾಸ್ತವಿಕ೨೦೦೧-೨೦೦೨ರ ಅಂದಾಜು೧) ಮಾರುಕಟ್ಟೆ ಸ್ಟಾಲುಗಳ ಶುಲ್ಕ೧೬೯ ಲಕ್ಷ೪೧೧ ಲಕ್ಷ೨) ನೀರು ಕೊಳವೆ ಜೋಡಣೆ ಶುಲ್ಕ೩೪ ಲಕ್ಷ೫೫ ಲಕ್ಷ೩) ಇಮಾರತಿ ಕಟ್ಟಡ ಅನುಮತಿ ಶುಲ್ಕ೩೧ ಲಕ್ಷ೪೦ ಲಕ್ಷ೪) ಕೈಗಾರಿಕಾ ಉದ್ದಿಮೆ ಪರವಾನಿಗೆ ಶುಲ್ಕ೧೦ ಲಕ್ಷ೨೩ ಲಕ್ಷ೫) ಉಪಹಾರ, ವಸತಿ ಗೃಹ ಮುಂ. ಅನುಮತಿ, ನವೀಕರಣ ಶುಲ್ಕ೭ ಲಕ್ಷ೧೪ ಲಕ್ಷ

ಇವುಗಳಲ್ಲಿ “ಮಾರುಕಟ್ಟೆ ಸ್ಟಾಲುಗಳ ಶುಲ್ಕ” ಪಾಲಿಕೆಯು ಕಟ್ಟಿಸಿದ ಮಾರುಕಟ್ಟೆಗಳ ಬಾಡಿಗೆ ಇದು ಶುಲ್ಕವಲ್ಲ. ಪರವಾನಿಗೆ, ಸೇವೆ ಅಥವಾ ಸೌಕರ್ಯಗಳನ್ನು ವಿಶೇಷವಾಗಿ ಕೊಡುವಲ್ಲಿ ಪಾಲಿಕೆಯು ಹಣ ಖರ್ಚು ಮಾಡಬೇಕಾಗುತ್ತದೆ. ಆ ಖರ್ಚನ್ನು ತುಂಬಿಕೊಳ್ಳುವುದಕ್ಕಾಗಿ ಶುಲ್ಕವನ್ನು ವಿಧಿಸುತ್ತದೆ. ಶುಲ್ಕದ ವರಮಾನದ ಎದುರು ಸಂಬಂಧಿಸಿದ ವೆಚ್ಚವಿರುತ್ತದೆ. ಬಂಡವಾಳ ಹೂಡಿ ಸ್ಥಿರಾಸ್ತಿ ನಿರ್ಮಿಸಿ ಅದರ ಬಾಡಿಗೆ ಪಡೆಯುವುದು ಶುಲ್ಕವಲ್ಲ. ಮಿಶ್ರ ವರಮಾನವೆಂದೆಣಿಸಬೇಕು. ಇದೇ ರೀತಿ “ಮಿಶ್ರ ವರಮಾನಗಳ” ಪಟ್ಟಿಯಲ್ಲಿ ಕೆಲವು ಶುಲ್ಕಗಳನ್ನು ಸೇರಿಸಿರುವುದನ್ನೂ ನೋಡುತ್ತೇವೆ. ಇವುಗಳಲ್ಲಿ ತರ್ಕಬದ್ಧ ವಿಂಗಡಣೆ ಆಗಬೇಕು.

ಮಿಶ್ರ ವರಮಾನಗಳ ಪ್ರಮುಖ ಬಾಬುಗಳು

  ೧೯೯೯-೨೦೦೦ರ ವಾಸ್ತವಿಕ೨೦೦೧-೨೦೦೨ರ ಅಂದಾಜುi)ಭೂಭಾಡೆ೮ ಲಕ್ಷ೧೦ ಲಕ್ಷii)ವಿವಿಧ ಇಮಾರತಿ ಬಾಡಿಗೆ೧೩ ಲಕ್ಷ೧೮ ಲಕ್ಷiii)ತುಂಡು ಭೂಮಿಗಳ ಮಾರಾಟ೨೪ ಲಕ್ಷ೧೦ ಲಕ್ಷiv)ನಿವೇಶನಗಳ ಮಾರಾಟ—೨೫ ಲಕ್ಷv)ಕಡಿಮೆ ಆದಾಯದವರಿಗೆ ಕಟ್ಟಿದ ಮನೆಗಳ ಮಾರಾಟ೬ ಲಕ್ಷ೭ ಲಕ್ಷvi)ಅಭಿವೃದ್ಧಿ ಶುಲ್ಕ೨ ಸಾವಿರ ಮಾತ್ರ೬೫ ಲಕ್ಷvii)ಖಾತೆ ಬದಲು ಮಾಡಲು ಶುಲ್ಕ೩೭ ಲಕ್ಷ೪೫ ಲಕ್ಷviii)ರಸ್ತೆ ಕಡಿಯುವ ಶುಲ್ಕ೭೨ ಲಕ್ಷ೭೫ ಲಕ್ಷix)ವೈದ್ಯಕೀಯ ಸಂಸ್ಥೆಗಳಿಂದ ಉತ್ಪನ್ನ೯ ಲಕ್ಷ೧೫ ಲಕ್ಷx)ಕಸಾಯಿಖಾನೆ ಉತ್ಪನ್ನ೨ ಲಕ್ಷ೧೧ ಲಕ್ಷ

ಇವುಗಳಲ್ಲಿ vi vii, viii, ಶುಲ್ಕಗಳಿದ್ದು, ಮಿಶ್ರ ವರಮಾನಗಳಲ್ಲಿ ಕೂಡಿಸಬಾರದಿತ್ತು. ಉಳಿದ ಬಾಬುಗಳು ಪಾಲಿಕೆಯು ಬಂಡವಾಳ ಹೂಡಿ ನಿರ್ಮಿಸಿದ ಆಸ್ತಿಗಳಿಂದ ಬಂದ ಬಾಡಿಗೆ, ಮಾರಾಟ ಕ್ರಯ ಅಥವಾ ಉತ್ಪನ್ನಗಳು.

ಬಂಡವಾಳ ಖಾತೆ ಪಾಲಿಕೆಗಳು ನಾಗರಿಕರ ಸೌಕರ್ಯಕ್ಕಾಗಿಯೂ, ಬಾಡಿಗೆ ಮುಂತಾದ ವರಮಾನ ಪಡೆಯುವುದಕ್ಕಾಗಿಯೂ ಬಂಡವಾಳ ಹೂಡಿ ಹೊಸ ಆಸ್ತಿಗಳನ್ನು ನಿರ್ಮಿಸುತ್ತವೆ. ಆದರೆ ಈ ಬಂಡವಾಳವನ್ನು ವಾರ್ಷಿಕ ವರಮಾನದಲ್ಲಿಯೇ ಉಳಿತಾಯದಿಂದ ಪಡೆಯುವುದು ಅಸಾಧ್ಯ. ಹೀಗಾಗಿ ಸರಕಾರದಿಂದ ಅನುದಾನಗಳ ರೂಪದಲ್ಲಾಗಲೀ ಅಥವಾ ಸರಕಾರದಿಂದಾಗಲೀ, ಇತರ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದಾಗಲೀ ಸಾಲದ ರೂಪದಲ್ಲಾಗಲೀ ದೊರಕಿಸಿಕೊಳ್ಳುತ್ತವೆ.

ಹೀಗೆ ಪಡೆದ ಆದಾಯವನ್ನು ಮಾಡಿದ ವೆಚ್ಚವನ್ನು ವಾರ್ಷಿಕ ಆಯ-ವ್ಯಯದಲ್ಲಿ ಸೇರಿಸದೆ ಪ್ರತ್ಯೇಕವಾಗಿ ಬಜೆಟ್‌ನಲ್ಲಿ ಆಯಾ ಯೋಜನೆಯ ಅಡಿಯಲ್ಲಿ ತೋರಿಸುತ್ತಾರೆ. ಹುಬ್ಬಳ್ಳಿ-ಧಾರವಾಡದ ಈ ವರ್ಷದ ಬಜೆಟ್‌ನಲ್ಲಿ ಪ್ರಮುಖ ಯೋಜನೆಗಳು:

i) ರಂಗಮಂದಿರ ಕಟ್ಟುವುದು ಕೇಂದ್ರ ಸರಕಾರದ ಅನುದಾನ.ii) ಮಲಪ್ರಭಾ ನೀರು ಸರಬರಾಜು ಯೋಜನೆ ಕೊಳವೆ ಹಾಗೂ ಜಲಾಶಯ ಕಟ್ಟುವುದು ಸರಕಾರ ಮತ್ತು ಎಲ್‌.ಐ.ಸಿ. ಯಿಂದ ಸಾಲ.iii) ಅಂಬೇಡಕರ್ ವಸತಿ ಯೋಜನೆ iv) ಆಶ್ರಯ ಯೋಜನೆರಾಜ್ಯ ಸರಕಾರv) ವಾಣಿಜ್ಯ ಸಂಕೀರ್ಣ ಕಟ್ಟುವುದು ಹುಡ್ಕೋ ಸಾಲvi) ಸ್ವರ್ಣಜಯಂತಿ ಶಹರೀ ರೋಜಗಾರ ಯೋಜನೆ 

ಇವುಗಳ ಆಯ-ವ್ಯಯ ಶಿಲ್ಕುಗಳ ಲೆಕ್ಕಗಳು ಹಲವು ವರ್ಷಗಳ ವರೆಗೆ ನಡೆಯುತ್ತವೆ. ಆದಕಾರಣ ಆಯಾ ಯೋಜನೆಗಳ ಪ್ರಗತಿ, ಸಾಫಲ್ಯಗಳನ್ನು ಪರಿಶೀಲಿಸಲು ಪ್ರಾರಂಭದಿಂದ ಕೊನೆಯವರೆಗಿನ ಅಂಕಿ-ಸಂಖ್ಯೆಗಳನ್ನು ಜೋಡಿಸಿಕೊಂಡು, ವೆಚ್ಚಕ್ಕೆ ಅನುಗುಣವಾಗಿ ವಾಸ್ತವ ಪ್ರಗತಿ ಸಾಗಿದೆಯಾ ಅಥವಾ ಸಾಲ, ಅನುದಾನಗಳ ಕಂತುಗಳಲ್ಲಿ ತಡವಾಗಿಯಾಗಲೀ, ಪಾಲಿಕೆಯ ಆಡಳಿತದಲ್ಲಿಯೇ ಲೋಪದೋಷಗಳಿಂದಾಗಲೀ ಅಥವಾ ಅನಿರೀಕ್ಷಿತ ಘಟನೆಗಳಿಂದಾಗಲೀ ಪ್ರಗತಿ ಕುಂಠಿತವಾಗಿ, ಖರ್ಚು ಮೊದಲಿನ ಅಂದಾಜಿಗಿಂತಲೂ ಹೆಚ್ಚಾಗುತ್ತಿದೆಯಾ, ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗುತ್ತದೆ. ಇದು ಪಾಲಿಕೆಯ ಕರ್ತವ್ಯ ಹಾಗೂ ನಾಗರೀಕರಲ್ಲಿ ತಜ್ಞರ ಕರ್ತವ್ಯವೂ ಹೌದು. ಈ ಸಾಲಗಳ ಮರುಪಾವತಿಯನ್ನು ಸಾಧಾರಣವಾಗಿ ವಾರ್ಷಿಕ ವರಮಾನದಿಂದ ತೆಗೆಯುತ್ತಾರೆ.

ಇನ್ನು ವಾರ್ಷಿಕ ವ್ಯಯದ ಬಗ್ಗೆ ನೋಡೋಣ. ಪಾಲಿಕೆಯು ತನ್ನ ಕರ್ತವ್ಯ ಪಾಲನೆಯಲ್ಲಿ ಸಿಬ್ಬಂದಿ, ಸಾಮಾನುಗಳು ಮತ್ತು ಕೆಲಸಗಳಿಗಾಗಿ ಖರ್ಚು ಮಾಡಬೇಕಾಗುತ್ತದೆ. ಮಾಡಿದ ಖರ್ಚು ಅಧಿಕೃತವಾಗಿತ್ತಾ, ಪ್ರಯೋಜನಕಾರಿಯಾಗಿತ್ತಾ, ಪೋಲಾಗದೆ ಹಿಡಿತದಲ್ಲೇ ಉಳಿದಿತ್ತಾ ಎನ್ನುವುದರ ಪರಿಶೀಲನೆಯಾಗಬೇಕು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ೨೦೦೧-೨೦೦೨ರ ಬಜೆಟ್ಟಿನಲ್ಲಿ ಪ್ರಮುಖ ಬಾಬುಗಳು ಹೀಗಿವೆ:

  ೧೯೯೯-೨೦೦೦ರ ವಾಸ್ತವಿಕ೨೦೦೧-೨೦೦೨ರ ಅಂದಾಜುi)ಒಟ್ಟು ಖರ್ಚು೪೨.೩೮ ಲಕ್ಷ೬೮.೦೦ ಲಕ್ಷii)ಲೋಕೋಪಯೋಗಿ ಖಾತೆ೧೨.೧೮ ಲಕ್ಷ೧೪.೫೨ ಲಕ್ಷiii)ಆರೋಗ್ಯ ಇಲಾಖೆ೯.೨೭ ಲಕ್ಷ೧೦.೨೦ ಲಕ್ಷiv)ನೀರು ಸರಬರಾಜು೪.೮೬ ಲಕ್ಷ೬.೬೫ ಲಕ್ಷv)ಕಂದಾಯ ಇಲಾಖೆ೨.೮೦ ಲಕ್ಷ೪.೦೩ ಲಕ್ಷvi)ಪರಿಶಿಷ್ಟ ಜಾತಿ ಜನಾಂಗದವರಿಗಾಗಿ ಪ್ರತಿಶತ ೧೮ ರಷ್ಟು೨.೫೩ ಲಕ್ಷ೩.೮೫ ಲಕ್ಷvii)ದೀಪದ ಖಾತೆ೧.೦೬ ಲಕ್ಷ೨.೦೪ ಲಕ್ಷviii)ದವಾಖಾನೆ ಔಷಧಾಲಯಗಳು೧.೪೪ ಲಕ್ಷ೧.೯೬ ಲಕ್ಷix)ಸಾಮಾನ್ಯ ಆಡಳಿತ ವಿಭಾಗ೧.೬೧ ಲಕ್ಷ೧.೯೧ ಲಕ್ಷx)ಕೌನ್ಸಿಲ್‌(ಚುನಾಯಿತ ಸದಸ್ಯರು)೫೬ ಲಕ್ಷ೧.೧೧ ಲಕ್ಷ

 

ಒಟ್ಟು ಖರ್ಚಿನಲ್ಲಿ ಸಿಬ್ಬಂದಿಯ ಖರ್ಚಿನ ಪ್ರಮಾಣ ಹೀಗಿದೆ:

i)ಒಟ್ಟು ಮಹಾನಗರ ಪಾಲಿಕೆ೧೬.೭೯ ಲಕ್ಷ೧೬.೧೨ ಲಕ್ಷ(೩೯.೬%)(೨೩.೭%)ii)ಲೋಕೋಪಯೋಗಿ ಖಾತೆ೩.೪೧ ಲಕ್ಷ೩.೫೭ ಲಕ್ಷ(೨೮%)(೨೪.೬%)iii)ಆರೋಗ್ಯ ಖಾತೆ೭.೬೧ ಲಕ್ಷ೮.೦೦ ಲಕ್ಷ(೮೨%)(೭೮%)iv)ದವಾಖಾನೆಗಳು೧.೨೧ ಲಕ್ಷ೧.೯೬ ಲಕ್ಷ(೮೪%)(೯೨%)

 

ಲೋಕೋಪಯೋಗಿ ಖಾತೆಯ ಪ್ರಮುಖ ಕಾರ್ಯಗಳು:

 ೧೯೯೯-೨೦೦೦ರ ವಾಸ್ತವಿಕ೨೦೦೧-೨೦೦೨೪ ಅಂದಾಜುi) ಚರಂಡಿಗಳು, ನಿರ್ಮಾಣ, ಸಂರಕ್ಷಣೆ, ಕೊಳವೆ ಹಾಕುವುದು, ಮುಂ.೩.೮೯ ಲಕ್ಷ೩.೮೪ ಲಕ್ಷii) ರಸ್ತೆಗಳ ನಿರ್ಮಾಣ, ಖಡಿ ಹಾಕುವುದು ಡಾಮಬರ ಪುನರ್ ಲೇಪನ, ಕಾಲ್ದಾರಿ೨.೭೬ ಲಕ್ಷ೪.೪೪ ಲಕ್ಷiii) ಕಟ್ಟಡ ಕಟ್ಟುವುದು, ಕಟ್ಟಡಗಳ ಸಂರಕ್ಷಣೆ೯೬ ಲಕ್ಷ೯೩ ಲಕ್ಷ

ಆರೋಗ್ಯ ಇಲಾಖೆಯಲ್ಲಿ ಶೇಕಡಾ ೮೦ರಷ್ಟು ಖರ್ಚು ಸಿಬ್ಬಂದಿಯ ಮೇಲೆ. ಇದರಲ್ಲಿ ಸುಮಾರು ಅರ್ಧದಷ್ಟು ಪೌರ ಕಾರ್ಮಿಕರಿಗಾಗಿರಬಹುದು. ಆದರೆ ನಿವಾಸಿಗಳ ಪ್ರಕಾರ ರಸ್ತೆ, ಚರಂಡಿ ಮುಂತಾದವುಗಳ ಸ್ವಚ್ಛತೆ ಸಮಾಧಾನಕರವಿಲ್ಲ. ನಗರದ ಎಷ್ಟೋ ಭಾಗಗಳಲ್ಲಿ ಪೌರ ಕಾರ್ಮಿಕರು ಕಣ್ಣಿಗೇ ಬೀಳುವುದಿಲ್ಲ ಎಂದು ಕೆಲವು ನಗರ, ಮಹಾನಗರಗಳಲ್ಲಿ ಈ ಕೆಲಸವನ್ನು ಗುತ್ತಿಗೆದಾರರಿಗೆ ಒಪ್ಪಿಸುವ ಯೋಜನೆಗಳೂ ಇವೆ. ಇಲ್ಲಿಯೇ ಮಾರುಕಟ್ಟೆ, ಸ್ವಚ್ಛತೆಯನ್ನು ಕಸ ಸಾಗಾಣಿಕೆಯನ್ನೂ ಗುತ್ತಿಗೆದಾರರಿಗೆ ಒಪ್ಪಿಸಿದೆ. ಇದರಿಂದ ಕೆಲಸ ಹೆಚ್ಚು ಸಮಾಧಾನಕರವಿದೆಯಾ? ಈ ಪ್ರಯೋಗವನ್ನು ಇತರ ಕಡೆಯೂ ಹೂಡಬಹುದಾ? ಯೋಚಿಸಬೇಕು. ದವಾಖಾನೆ, ಔಷಧಾಲಯಗಳಲ್ಲೂ ಸಿಬ್ಬಂದಿ ಖರ್ಚು ಶೇಕಡಾ ೮೪ ರಿಂದ ೯೨ರ ವರೆಗೆ. ಇದನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸಬಹುದು. ೧೯೯೯-೨೦೦೦ರಲ್ಲಿ ವಾಸ್ತವವಾಗಿ(ಅಂದಾಜು ಅಲ್ಲ) ೧೨೧ ಲಕ್ಷ ಸಿಬ್ಬಂದಿಗೆ ಮತ್ತು ಸಾದಿಲವಾರಕ್ಕೆ ೨೧ ಲಕ್ಷ ಖರ್ಚು ಮಾಡಿ ೨ ಲಕ್ಷ ರೂಪಾಯಿಗಳ ಔಷಧ ಖರೀದಿಸಲಾಯಿತು. ೧೮ ಸಾವಿರ ರೂಪಾಯಿ ಪಥ್ಯಾನ್ನಕ್ಕೆ ಖರ್ಚು ಮಾಡಲಾಯಿತು. ೨೦೦೧-೨೦೦೨ ಅಂದಾಜು ಪ್ರಕಾರ ೧೮೦ ಲಕ್ಷ ಸಿಬ್ಬಂದಿಗೆ ಬರೀ ೩ ಲಕ್ಷ ಸಾದಿಲವಾರಕ್ಕೆ ಖರ್ಚು ಮಾಡಿ ೧೦ ಲಕ್ಷಕ್ಕೆ ಔಷಧ ೧ ಲಕ್ಷದ ಪಥ್ಯಾನ್ನದ ಖರ್ಚು ಮಾಡುವುದಿದೆ. ೨೦೦೦-೨೦೦೧ರಲ್ಲಿ ಮೊದಲ ಅಂದಾಜು ೧೫ ಲಕ್ಷವಿತ್ತು. ಔಷಧ ಖರೀದಿಗೆ, ಪರಿಷ್ಕೃತ ಅಂದಾಜಿನಲ್ಲಿ ಅದು ೫ ಲಕ್ಷಕ್ಕೆ ಇಳಿಯಿತು. ವಾಸ್ತವ ಖರ್ಚು ಮುಂದಿನ ಬಜೆಟ್‌ನಲ್ಲಿ ತಿಳಿಯುತ್ತದೆ. ವೆಚ್ಚದ ಅಂದಾಜು ಮಾಡುವಾಗ ಅದರ ಅವಶ್ಯಕತೆ, ಪ್ರಯೋಜನ ಮತ್ತು ಆ ಕಾರ್ಯವನ್ನು ಕೈಗೆತ್ತಿಕೊಳ್ಳುವ, ಮುಗಿಸುವ ಸಾಧ್ಯಾಸಾಧ್ಯತೆಗಳನ್ನು ಜವಾಬ್ದಾರಿತನದಿಂದ, ಆದಷ್ಟು ಸಂಪೂರ್ಣ ಮಾಹಿತಿಯನ್ನು ಒದಗಿಸಿಕೊಂಡು ಪರಿಶೀಲಿಸಿ ನಂತರ ಪ್ರಸ್ತಾಪವನ್ನು ಸೂಚಿಸಬೇಕು. ನಂತರ ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ತಾಂತ್ರಿಕ, ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲೂ, ಮುಗಿಸಲೂ ಸಂಬಂಧಿಸಿದ ಖಾತೆ, ಸಿಬ್ಬಂದಿ ಪೂರ್ಣ ತಯಾರಿಯಲ್ಲಿರಬೇಕು ಹಾಗೂ ಕಾರ್ಯ ಸುರುವಾದ ನಂತರ ಅದರ ಪ್ರಗತಿ, ಗುಣಮಟ್ಟದ, ಹಣದ ವ್ಯವಸ್ಥಿತ, ಸಮಯೋಚಿತ ಪ್ರಾಮಾಣಿಕ ವಿನಿಯೋಗ ಇವೆಲ್ಲವುಗಳನ್ನೂ ಲಕ್ಷ್ಯದಲ್ಲಿಡಬೇಕು.

ಈ ಸಂದರ್ಭದಲ್ಲಿ ಸಂವಿಧಾನದ ೭೪ನೆಯ ತಿದ್ದುಪಡಿಯಲ್ಲಿ “ನಗರ ವಿಭಾಗ ಸಮಿತಿ” (Ward Committee) ರಚಿಸುವ ಕಡ್ಡಾಯ ನಿಯಮವಿದೆ. ಇದನ್ನು ಕರ್ನಾಟಕ ಮಹಾನಗರ ಪಾಲಿಕಾ ಕಾನೂನು, ೧೯೭೬ರಲ್ಲಿ ಕಲಂ ೧೩-ಎ ಆಗಿ ಸೇರಿಸಿದೆ. ಇದರ ಪ್ರಕಾರ ೩ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರದಲ್ಲಿ ಈ ಸಮಿತಿಗಳನ್ನು ರಚಿಸಿಯೇ ತೀರಬೇಕೆಂಬ ಕಡ್ಡಾಯ ನಿಯಮವಿದೆ. ಈ ಸಮಿತಿಯಲ್ಲಿ ಆ ವಾರ್ಡಿನ ಚುನಾಯಿತ ಸದಸ್ಯರೂ, ಗರಿಷ್ಟ ೫ ಜನ ಪಾಲಿಕೆಯ ಆಡಳಿತದ ಅನುಭವವಿದ್ದವರು ಮತ್ತು ಗರಿಷ್ಟ ೩ ಜನ ಸರಕಾರೇತರ ಸಂಸ್ಥೆಗಳ ಸದಸ್ಯರು ಇರಬೇಕು. ಇಂತಹ ಸಮಿತಿಯ ಕಾರ್ಯ ಕರ್ತವ್ಯಗಳನ್ನು ಸರಕಾರವು ನಿರ್ದೇಶಿಸುತ್ತದೆ. ಪ್ರತಿ ವಾರ್ಡಿನಲ್ಲಿ ಇಂತಹ ಸಮಿತಿಗಳು ಕಾರ್ಯ ಪ್ರವೃತ್ತರಾದರೆ ನಿವಾಸಿಗಳ ಕೊರತೆಗಳನ್ನೂ, ಆಯಾ ವಾರ್ಡಿನಲ್ಲಿ ಕೈಗೊಳ್ಳಬೇಕಾದ, ಕೈಗೊಂಡು ನಡೆಸುತ್ತಿರುವ ಕೆಲಸಗಳನ್ನೂ ಗಮನದಲ್ಲಿಟ್ಟುಕೊಂಡು ಪಾಲಿಕೆಯ ಉತ್ತಮ ಕಾರ್ಯನಿರ್ವಹಣೆಗೆ ಸಹಾಯಕರಾಗುತ್ತಾರೆ. ಪಾಲಿಕೆಯ ಹಣದ ಸದ್ವಿನಿಯೋಗದ ಬಗ್ಗೆಯೂ ಪರಿಣಾಮಕಾರಿ ಪಾತ್ರವನ್ನು ವಹಿಸಬಹುದು.

ಬಜೆಟ್‌:

ಸಂವಿಧಾನ ಮತ್ತು ಮಹಾನಗರ ಪಾಲಿಕಾ ಕಾನೂನು ಇವುಗಳ ನಂತರ ಆಡಳಿತದ ವಾರ್ಷಿಕ ಆಯ-ವ್ಯಯ ಅಂದಾಜು ಪತ್ರಿಕೆಗಳು(ಬಜೆಟ್‌) ಮಹತ್ವದ ದಾಖಲೆಗಳು. ಇವುಗಳಿಂದ ಆಯಾ ವರ್ಷದ ವರಮಾನ, ಖರ್ಚುಗಳು, ಬಂಡವಾಳ ಯೋಜನೆಗಳಲ್ಲದೆ, ಆಯಾ ವರ್ಷದ ಕಾರ್ಯಕಲಾಪಗಳ ಬಗ್ಗೆಯೂ ಮಾಹಿತಿ ದೊರೆಯುತ್ತದೆ. ಪಾಲಿಕೆಯ ಸದಸ್ಯರೂ ಮತ್ತು ಆಸಕ್ತ ನಿವಾಸಿಗಳೂ ಇವುಗಳನ್ನು ಗಮನಿಸಬೇಕು. (ಕಲಂ ೧೬೬ ರಿಂದ ಕಲಂ ೧೭೦)

ಪ್ರತಿ ವರ್ಷ ಜನೇವರಿ ೧೫ರೊಳಗೆ ಆಯುಕ್ತರು ಮುಂದಿನ ವರ್ಷದ (ಏಪ್ರಿಲ್‌೧ ರಿಂದ ಮಾರ್ಚ ೩೧ರ ವರೆಗೆ) ಆಯ-ವ್ಯಯಗಳ ಅಂದಾಜುಗಳ ಪತ್ರಿಕೆಯನ್ನು (ಬಜೆಟ್‌) ತಯಾರಿಸಿ, ತೆರಿಗೆ ಅಥವಾ ಸಾಲಗಳ ಬಗ್ಗೆ ಏನಾದರೂ ಅಗತ್ಯವೆನಿಸಿದ ಪ್ರಸ್ತಾಪಗಳನ್ನೂ ಸೇರಿಸಿ, ಪಾಲಿಕೆಯ ತೆರಿಗೆ ಸ್ಥಾಯಿ ಸಮಿತಿಗೆ ಸಲ್ಲಿಸಬೇಕು. ಸ್ಥಾಯಿ ಸಮಿತಿಯು ಅವುಗಳನ್ನು ಪರಿಷ್ಕರಿಸಿ ಪಾಲಿಕೆಯ ಸರ್ವ ಸದಸ್ಯರ ಸಭೆಯ ಮುಂದೆ ಮಂಡಿಸಬೇಕು. ಪಾಲಿಕೆಯು ಮರು ವರ್ಷದ ಸುರುವಿಗಿಂತ ಕನಿಷ್ಠ ೩ ವಾರಗಳ ಮುಂಚೆ ಅಂದರೆ ಹಾಲಿ ವರ್ಷದ ಮಾರ್ಚ ೧೦ರೊಳಗೆ ಅದನ್ನು ಮಂಜೂರು ಮಾಡಿ (ಅವಶ್ಯವೆನಿಸಿದ ತಿದ್ದುಪಡಿಗಳೊಂದಿಗೆ) ಒಂದು ಪ್ರತಿಯನ್ನು ಕೂಡಲೇ ರಾಜ್ಯ ಸರಕಾರಕ್ಕೆ ಅದರ ಒಪ್ಪಿಗೆಗಾಗಿ ಕಳುಹಿಸಬೇಕು. ಸರಕಾರವು ಸಂಪೂರ್ಣವಾಗಿ ಅಥವಾ ಬದಲಾವಣೆಗಳೊಂದಿಗೆ ಒಪ್ಪಿಗೆ ಕೊಡಬಹುದು. ಎರಡು ತಿಂಗಳೊಳಗೆ ಉತ್ತರ ಬರದಿದ್ದರೆ ಸರಕಾರದ ಒಪ್ಪಿಗೆಯಿದ ಎಂದು ಪಾಲಿಕೆಯು ಮುಂದೆ ಸಾಗಬಹುದು.

ಬಜೆಟ್‌ನಲ್ಲಿ ಮೂರು ವರ್ಷಗಳ ಮಾಹಿತಿ ಇರುತ್ತದೆ. ಸರಕಾರದ ಒಪ್ಪಿಗೆಯ ಮರುವರ್ಷದ ಅಂದಾಜುಗಳ ಸಂಗಡ, ನಡೆಯುತ್ತಿರುವ ವರ್ಷದ ಮೊದಲ ಅಂದಾಜುಗಳು (ಅಂದರೆ ಒಂದು ವರ್ಷದ ಹಿಂದೆ ಹೀಗೆಯೇ ಸರಕಾರದ ಒಪ್ಪಿಗೆ ಪಡೆದ) ಮತ್ತು ನಂತರ ಕೆಲವು ತಿಂಗಳುಗಳ ಅನುಭಾವದ ಮೇಲೆ ಅವೇ ಅಂದಾಜುಗಳನ್ನು ಮರುಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಮಾಡಿದ ಪರಿಷ್ಕೃತ ಅಂದಾಜುಗಳೂ ಹಾಗೂ ಹಿಂದಿನ ವರ್ಷದ ವಾಸ್ತವಿಕ ಲೆಕ್ಕಗಳೂ ಇರುತ್ತವೆ. ಉದಾಹರಣೆಗೆ – ೨೦೦೧ರ ಜನೇವರಿ-ಮಾರ್ಚಗಳಲ್ಲಿ ತಯಾರಿಸಿ ಒಪ್ಪಿಗೆ ಪಡೆದ ೨೦೦೧-೨೦೦೨ರ ಅಂದಾಜುಗಳ ಸಂಗಡ ೨೦೦೦-೨೦೦೧ರ ಮೊದಲ ಮತ್ತು ಪರಿಷ್ಕೃತ ಅಂದಾಜುಗಳೂ ಹಾಗೂ ೧೯೯೯-೨೦೦೦ರ ವಾಸ್ತವಿಕ ಲೆಕ್ಕಗಳೂ ಈ ೨೦೦೧-೨೦೦೨ರ ಬಜೆಟ್‌ನಲ್ಲಿ ದೊರಕುತ್ತವೆ.

ಬಜೆಟ್‌ನಲ್ಲಿ ಮೊದಲು ವಿವಿಧ ಮೂಲಗಳಿಂಧ ಬರುವ ವರಮಾನಗಳನ್ನು, ನಂತರ ವಿವಿಧ ಖಾತೆಗಳ ವಿವಿಧ ಬಾಬುಗಳ ಮೇಲೆ ಆಗುವ ವೆಚ್ಚಗಳನ್ನು ಬೇರೆ ಬೇರೆಯಾಗಿ ಸೂಕ್ತ ಶೀರ್ಷಿಕೆಗಳ (Heads of Account) ಅಡಿಯಲ್ಲಿ ಕೊಟ್ಟಿರುತ್ತದೆ. ಮೂರು ವರ್ಷಗಳ ಮಾಹಿತಿ ಶೀರ್ಷಿಕೆಗಳನ್ನೂ, ಅವುಗಳ ಅರ್ಥ ಮತ್ತು ವ್ಯಾಪ್ತಿಯನ್ನು ಬದಲಿ ಮಾಡದೇ ಹಾಗೆ ಉಳಿಸಿಕೊಂಡರೆ ವರ್ಷ ವರ್ಷಗಳ ನಡುವೆ, ಪಾಲಿಕೆ-ಪಾಲಿಕೆಗಳ ನಡುವೆ ಪ್ರಯೋಜನಕಾರಿ ತೌಲನಿಕ ಅಧ್ಯಯನ ಸಾಧ್ಯವಾಗುತ್ತದೆ. ಇದರಿಂದ ಅಂದಾಜುಗಳನ್ನು ಮಾಡುವುದರಲ್ಲಿ, ನಂತರ ವರಮಾನ, ವೆಚ್ಚಗಳ ಪ್ರಗತಿಯಿಂದ, ಪಾಲಿಕೆಯ ಕಾರ್ಯವೈಖರಿ, ಪ್ರಗತಿಗಳಲ್ಲಿ ಇರಬಹುದಾದ ಲೋಪದೋಷಗಳೂ,. ಅವಕ್ಕೆ ಸರಿಸುಧಾರಣಾ ಸಲಹೆ ಸೂಚನೆಗಳೂ ಹೊಳೆಯುತ್ತವೆ. ಒಂದು ವರ್ಷದ ಮೊದಲ ಅಂದಾಜು ಮಾಡಲು ಹಿಂದಣ ವರ್ಷದ ಮೊದಲ ಮತ್ತು ಪರಿಷ್ಕೃತ ಅಂದಾಜುಗಳನ್ನೂ, ಅದರ ಹಿಂದಿನ ವರ್ಷದ ವಾಸ್ತವಿಕ ಲೆಕ್ಕಗಳನ್ನೂ, ಮುಂದೆ ಆಗಬಹುದಾದ ಮಹತ್ವದ ಬದಲಾವಣೆಗಳನ್ನೂ ಆಧಾರವಾಗಿಟ್ಟುಕೊಂಡಿರುತ್ತದೆ. ವರ್ಷದ ನಡುವೆ ಅಲ್ಲಿಯವರೆಗೆ ಆದ ವರಮಾನ ವೆಚ್ಚಗಳ ಪ್ರಗತಿ, ಅನಿರೀಕ್ಷಿತ ಬದಲಾವಣೆಗಳನ್ನು ನೋಡಿಕೊಂಡು ಮೊದಲ ಅಂದಾಜುಗಳನ್ನು ಸರಿಪಡಿಸಿ ಪರಿಷ್ಕೃತ ಅಂದಾಜುಗಳನ್ನು ಮಾಡುತ್ತದೆ. ವರ್ಷ ಮುಗಿದು ಎಲ್ಲಾ ಲೆಕ್ಕ ಪತ್ರಗಳ ಕಾರ್ಯ ಮುಕ್ತಾಯವಾದಾಗ ವಾಸ್ತವವಾಗಿ ಆದ ವರಮಾನ ವೆಚ್ಚಗಳ ವಾಸ್ತವಿಕ ಲೆಕ್ಕಗಳು ತಯಾರಾಗುತ್ತವೆ. ಇವುಗಳಲ್ಲಿ ಏನಾದರೂ ವಿಶೇಷ ತಿದ್ದುಪಡಿ, ಅಂತರವಾದಲ್ಲಿ ಅದರ ಕಾರಣಗಳನ್ನು ಸಂಕ್ಷಿಪ್ತ ಟಿಪ್ಪಣಿಯಲ್ಲಿ ಸೂಚಿಸುತ್ತಾರೆ. ಬಜೆಟ್‌ಗಳು ಈ ವ್ಯವಸ್ಥಿತ ಅರ್ಥಪೂರ್ಣ ರೀತಿಯಲ್ಲಿ ತಯಾರಾದರೆ ಪಾಲಿಕೆಯ ಅರ್ಥವ್ಯವಸ್ಥೆಯನ್ನು ಪಾಲಿಕೆಯ ಸದಸ್ಯರೂ, ನಾಗರೀಕರು ತಿಳಿದುಕೊಳ್ಳಲಾಗುತ್ತದೆ. ಅದರ ಹಿಂದೆಯೇ ಆಡಳಿತದ ಕ್ಷಮತೆ, ಸಾಫಲ್ಯಗಳನ್ನೂ, ವರ್ಷ ವರ್ಷಕ್ಕೆ ಸಾಧಿಸಿದ ಪ್ರಗತಿಯನ್ನೂ ಕಾಣಬಹುದು.

ಕೊನೆಯ ಹಾರೈಕೆ:

ಬೆಂಗಳೂರು ಮಹಾನಗರ ಪಾಲಿಕೆಯು ಹೊಸ “ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆಯನ್ನು ಜಾರಿಗೆ ತಂದ ಪತ್ರದಲ್ಲಿ ಅದನ್ನು ನಾಗರೀಕರೊಂದಿಗೆ ಅನ್ಯೋನ್ಯತೆ ಹೊಂದಲು ಸಮಂಜಸ ಮತ್ತು ಏಕತೆರವಾದ ದರಗಳಿಂದ ಹಾಗೂ ಪಾರದರ್ಶಕತೆಯುಳ್ಳ ತೆರಿಗೆ ನಿರ್ಧರಿಸುವ ಪದ್ಧತಿ” ಎಂದು ಕರೆದಿದ್ದನ್ನು ಹಿಂದೆ ಉಲ್ಲೇಖಿಸಲಾಗಿದೆ. ಅನ್ಯೋನ್ಯತೆಯೇ ಆಡಳಿತಕ್ಕೂ ಪ್ರಜರಿಗೂ ಸ್ಥಳೀಯ ಸ್ವ-ಆಡಳಿತ ಘಟಕಗಳಲ್ಲಿ ಇರಬೇಕಾದ ಬಹುಮುಖ್ಯ ಮತ್ತು ಅತ್ಯಂತ ಅಗತ್ಯ ಸಂಬಂಧ. ತೆರಿಗೆಯ ಬಗ್ಗೆ ಅಷ್ಟೇ ಅಲ್ಲ. ಎಲ್ಲಾ ವಿಷಯಗಳಲ್ಲೂ ಸೇವೆ ಸೌಕರ್ಯ ಒದಗಿಸುವುದರಲ್ಲಿ, ಅದಕ್ಕಾಗಿ ಮಾಡಿದ ಖರ್ಚಿನ ಬಗ್ಗೆಯೂ ಪಾರದರ್ಶಕತೆ ಅಷ್ಟೇ ಅಗತ್ಯ. ಪಾರದರ್ಶಕತೆ ಎಂದರೆ ಆಡಳಿತದ ಬಗ್ಗೆ ಎಲ್ಲಾ ಮಾಹಿತಿ ತೆರದ ಪುಸ್ತಕದಂತಿರಬೇಕು. ಆಸಕ್ತ ಪ್ರಜೆಗೆ ಅಡ್ಡಿಯಿಲ್ಲದೆ ಸುಲಭವಾಗಿ ದೊರೆಯಬೇಕು. ಹಾಗೆಯೇ ಪ್ರಜರೂ ತಮ್ಮ ಕರ್ತವ್ಯವನ್ನು ಪಾಲಿಸಬೇಕು. ಕೊಡಬೇಕಾದ ತೆರಿಗೆ, ಶುಲ್ಕ ಅಥವಾ ಇತರ ಹಣವನ್ನು ಕಾಲ ಕಾಲಕ್ಕೆ ಸರಿಯಾಗಿ, ಮುಚ್ಚುಮರೆ ಮಾಡದೆ, ತಡಮಾಡದೆ, ಪೂರ್ಣ ಸಹಕಾರ ಭಾವದಿಂದ ಮುಟ್ಟಿಸಬೇಕು. ಆಡಳಿತ ಕ್ಷೇತ್ರದಲ್ಲಿ ಏನಾದರೂ ಲೋಪದೋಷಗಳು ಕಂಡುಬಂದರೆ ಅವನ್ನು ತಮ್ಮ ಸಕಾರಾತ್ಮಕ ಸಲಹೆ-ಸೂಚನೆಗಳೊಂದಿಗೆ ಸಂಬಂಧಪಟ್ಟ ಖಾತೆ, ಅಧಿಕಾರಿಗೆ ತಿಳಿಸಬೇಕು. ಆಡಳಿತ ಮತ್ತು ಪ್ರಜರು ಎದುರಾಳಿಗಳಲ್ಲ, ಎಲ್ಲರ ಒಳಿತು ಒಂದೇ ಎಂಬುದನ್ನು ಮರೆಯಬಾರದು.

ಈ ಅನ್ಯೋನ್ಯತೆ ಮತ್ತು ಪಾರದರ್ಶಕತೆಯನ್ನು ಮೂಡಿಸುವಲ್ಲಿ ಮೊದಲ ಹೆಜ್ಜೆಯು ಆಡಳಿತದ್ದು.

ಪುಸ್ತಕ: ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ
ಲೇಖಕರು: ಪಂಚಪ್ಪ
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ