ಶನಿವಾರ, ಜೂನ್ 20, 2015

ವಿಮರ್ಶೆಯ ಪೂರ್ವ-ಪಶ್ಚಿಮ (2)

ವಿಮರ್ಶೆಯ ಪೂರ್ವ-ಪಶ್ಚಿಮ

ವಿಮರ್ಶೆಯ ಸ್ಥಿತಿ-ಗತಿ
ಯಾವ ಯಾವ ವಿಧಾನಗಳ ಮೂಲಕ ವಿಮರ್ಶಕನ ಮನಸ್ಸು ಕೃತಿ ರಸಾಸ್ವಾದನ ಕ್ರಿಯೆಯಲ್ಲಿ ನಮಗೆ ನೆರವಾಗಲು ಯತ್ನಿಸುತ್ತದೆಯೋ, ಅಷ್ಟು ರೀತಿಗಳನ್ನೂ ನಾವು ವಿಮರ್ಶೆಯ ಪ್ರಕಾರಗಳೆಂದು ಭಾವಿಸಬಹುದು. ದೈನಂದಿನ ಪತ್ರಿಕಾವಿಮರ್ಶೆಯಿಂದ ಹಿಡಿದು ಕೃತಿಯೊಂದನ್ನು ಕುರಿತ ಉದ್ಗ್ರಂಥದ ತನಕ ಇದರ ಹರಹನ್ನು ಗುರುತಿಸಬಹುದು. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಇತ್ಯಾದಿಗಳಲ್ಲಿ ಕೃತಿ ವಿಮರ್ಶೆಗೆ ಒಂದಿಷ್ಟು ಸ್ಥಳ ಮೀಸಲಾಗಿರುತ್ತದೆ. ಬಹುಬೇಗ ವಿಸ್ತಾರವಾದ ಜನಸಮೂಹಕ್ಕೆ ಸುದ್ದಿಗಳನ್ನು ಕೊಂಡೊಯ್ಯುವ ಈ ಪತ್ರಿಕೆಗಳಲ್ಲಿ, ಪುಸ್ತಕಗಳನ್ನು ಕುರಿತ ವಿಮರ್ಶೆಯೂ ವಾರ್ತೆಯ ಒಂದು ಅಂಗವಾಗಿ ಜನತೆಯನ್ನು ತಲುಪುತ್ತದೆ. ಇದಲ್ಲದೆ ಕಲೆ ಸಾಹಿತ್ಯವಿಮರ್ಶೆಗೆಂದೇ ಮೀಸಲಾದ ಕೆಲವು ಪತ್ರಿಕೆಗಳೂ ಉಂಟು, ಅವುಗಳ ಗಮನ ಕಾವ್ಯ – ವಿಮರ್ಶೆಗಳಲ್ಲಿ ವಿಶೇಷ ಆಸಕ್ತಿಯುಳ್ಳ ಪರಿಮಿತ ಓದುಗರ ವಲಯದ ಕಡೆಗೆ. ಪತ್ರಿಕೆಗಳಲ್ಲಿ-ಸಾಮಾನ್ಯವಾಗಿ ವಾರ, ಮಾಸಿಕ ಇತ್ಯಾದಿಗಳಲ್ಲಿ-ಬರುವ ಗ್ರಂಥಪ್ರಶಂಸೆ (Blurb) ಗ್ರಂಥಾವಲೋಕನ (Review) ಇವುಗಳ ಉದ್ದೇಶ ಇಡೀ ಪುಸ್ತಕದ ಸಮಗ್ರ ವಿಮರ್ಶೆ ಹಾಗೂ ಮೌಲ್ಯನಿರ್ಣಯ ಅಲ್ಲ; ಅದಕ್ಕೆ ಅಲ್ಲಿ ಸ್ಥಳಾವಕಾಶವೂ ಇಲ್ಲ. ಅವುಗಳ ಉದ್ದೇಶ, ಇಂಥ ಕೆಲವು ಪುಸ್ತಕಗಳು ಈಗ ತಾನೆ ಬಂದಿವೆ. ಅವುಗಳ ಸಾರ ಇಷ್ಟು; ಅವು ಓದಲು ಅರ್ಹವಾಗಿವೆ, ಅಥವಾ ಇಲ್ಲ ಎನ್ನುವ ವಿವರಗಳನ್ನು ಪ್ರಚುರಪಡಿಸುವುದು. ಅದಕ್ಕೆ ತಕ್ಕ ಹಾಗೆ ವಿಮರ್ಶೆ ಮಾಡತಕ್ಕವರು ಓದುಗರಲ್ಲಿ ಕುತೂಹಲ, ಆಸಕ್ತಿಗಳನ್ನು ಉಂಟು ಮಾಡುವಷ್ಟರಮಟ್ಟಿಗೆ ಆ ಪುಸ್ತಕದ ಸಾರವನ್ನೋ, ಭಾಗವನ್ನೋ, ಪಂಕ್ತಿಗಳನ್ನೋ ಎತ್ತಿ ತೋರಿಸುತ್ತಾರೆ. ಇಂಥ ಪತ್ರಿಕಾವಿಮರ್ಶೆಯಲ್ಲಿ, ಅತ್ಯಂತ ಸಮರ್ಥರಾದ ವಿಮರ್ಶಕರು ದೀರ್ಘವಾದ ಆಲೋಚನೆಯಿಂದ, ಅದರ ಬೆಲೆಯನ್ನು ಅಳೆದು ತೂಗಿ, ಅದರ ಸಾರವನ್ನು ಸಂಗ್ರಹವಾಗಿ ರೂಪಿಸಿದರೆ ಅದು ಸಾರ್ಥಕವಾದ ವಿಮರ್ಶೆಯೂ ಆಗಬಹುದು. ಆದರೆ ಅಂಥವರೆಷ್ಟು ಮಂದಿ ನಮ್ಮಲ್ಲಿ ಪತ್ರಿಕೆಗಳಿಗೆ ಬರೆಯುತ್ತಾರೆ, ಅಥವಾ ಬರೆಯುವಂತೆ ಪತ್ರಿಕೆಯವರು ಕೇಳಿಕೊಳ್ಳುತ್ತಾರೆ? ಎಷ್ಟೋ ಪತ್ರಿಕೆಗಳಲ್ಲಿ ಬರುವ ಈ ‘ವಿಮರ್ಶೆ’ಗಳನ್ನು ನೋಡಿದರೆ ಅವು ‘ಸಂತೆಯ ಹೊತ್ತಿಗೆ ನೆಯ್ದ ಮೂರು ಮೊಳ’ಗಳಾಗಿ ತೋರುವುದು ಸ್ವಾಭಾವಿಕ ಹಾಗೂ ಅನಿವಾರ‍್ಯ.
ಇದರ ಜೊತೆಗೆ ವಿಮರ್ಶನ ಶಕ್ತಿ ಸರಿಯಾಗಿ ಬೆಳೆಯಬೇಕಾದರೆ, ಅದಕ್ಕೆ ನಮ್ಮ ಶಿಕ್ಷಣಕ್ರಮದಲ್ಲಿ ಸರಿಯಾದ ಸ್ಥಾನವನ್ನು ಕಲ್ಪಿಸಬೇಕು. ಕೃತಿಯನ್ನು ಓದುವುದು ಹೇಗೆ ಎನ್ನುವುದರ ತಿಳಿವಳಿಕೆಯನ್ನು ಕೊಡಬೇಕು. ಶಾಲೆ-ಕಾಲೇಜುಗಳಲ್ಲಿ ವಿಮರ್ಶೆಯ ಶಿಕ್ಷಣ ರಂಗವೊಂದು ಏರ್ಪಾಡಾಗಬೇಕು. ಐ.ಎ. ರಿಚರ್ಡ್ಸ್ ಅವರು ಇಂಥ ಒಂದು ಪ್ರಯೋಗವನ್ನು ನಡೆಯಿಸಿದ್ದರ ಪರಿಣಾಮವನ್ನು ಅವರ Practical criticismನಲ್ಲಿ ನೋಡಬಹುದು. ಹತ್ತಾರು ವಿದ್ಯಾರ್ಥಿಗಳಿಗೆ ಒಂದೇ ಪದ್ಯವನ್ನು, ಅದೂ ಯಾವ ಕವಿಯದು ಎಂಬ ವಿಚಾರವನ್ನು ಹೇಳದೆ ಕೊಟ್ಟು ಅವರಿಂದ ಬಂದ ವಿವಿಧಾಭಿಪ್ರಾಯವನ್ನು ಸಂಗ್ರಹಿಸಿ, ಅವುಗಳಲ್ಲಿ ಆ ಒಂದು ಕವನವನ್ನು ಕುರಿತು, ಸಮಾನವಾದ ಅಂಶಗಳೆಷ್ಟು, ವೈಪರೀತ್ಯಗಳೇನು, ಎನ್ನುವುದನ್ನು ಕಂಡುಕೊಂಡು ಸರಿಯಾದ ತೀರ್ಪನ್ನು ಕೊಡುವುದು ಹೇಗೆ ಎನ್ನುವ ವಿಧಾನವನ್ನು ಕೊಟ್ಟಿದ್ದಾರೆ. ನಮ್ಮಲ್ಲಿಯೂ ಈ ಬಗೆಯ ಪ್ರಾಯೋಗಿಕ ವಿಮರ್ಶೆ ನಡೆಯಬೇಕಾಗಿದೆ.
ನಮ್ಮಲ್ಲಿ ಉತ್ತಮವಾದ ವಿಮರ್ಶೆ ಬೆಳೆಯಬೇಕಾದರೆ, ವಿಮರ್ಶಕರಿಗೆ ಮೊದಲು ‘ಭಾರತೀಯ ಕಾವ್ಯಮೀಮಾಂಸೆ’ಯ, ಹಾಗೂ ತಮ್ಮ ಸಾಹಿತ್ಯ ಪರಂಪರೆಯ ಪರಿಚಯವಿರಬೇಕು. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕಾವ್ಯಚರ್ಚೆಗೆಂದು ಅವರು ಬಳಸಿದ ನೂರಾರು ಪಾರಿಭಾಷಿಕ ಪದಗಳಿವೆ; ಅವುಗಳಲ್ಲಿ ಕೆಲವನ್ನಾದರೂ ಇಂದು ಚಲಾವಣೆಗೆ ತಂದು, ವಿಮರ್ಶೆಯ ಪರಿಭಾಷೆಗೆ ಸಹೃದಯರ ಕಿವಿ ಬಳಕೆಯಾಗುವಂತೆ ಮಾಡಲು ಸಾಧ್ಯವಿದೆ. ವಾಚ್ಯ; ವ್ಯಂಗ್ಯ : ಗುಣೀಭೂತವ್ಯಂಗ್ಯ; ಧ್ವನಿ; ಭಾವ ಶಬಲತೆ; ಭಾವಸಂಧಿ; ಅರ್ಥದುಷ್ಟ; ಶ್ರುತಿಕಷ್ಟ; ಭಾವ; ರಸ – ಇಂಥ ಎಷ್ಟೊಂದು ಪದಗಳು ಇಂದು ಬಳಕೆಯಾಗುವುದು ಕಡಿಮೆಯಾಗಿಹೋಗಿದೆ! ಜೊತೆಗೆ ನಮ್ಮ ಹಳಗನ್ನಡ ಕಾವ್ಯ ಪರಂಪರೆಯಲ್ಲಿ, ಅವರ ಕಾವ್ಯಾರಂಭದ ಪ್ರಸ್ತಾವನೆಗಳಲ್ಲಿಯೂ ಕೆಲವು ಮಾತುಗಳು ದೊರೆಯುತ್ತವೆ. ಈ ಎಲ್ಲ ಸಾಮಗ್ರಿಗಳನ್ನೂ ಹೊಸ ರೀತಿಯಲ್ಲಿ ಬಳಸಿ, ಇಂದಿನ ವಿಮರ್ಶೆಯ ಭಾಷೆಯೊಂದಿಗೆ ಹೊಂದಿಸಲು ಸಾಧ್ಯವಿದೆ. ಎಲ್ಲದಕ್ಕೂ ನಾವು ಆಂಗ್ಲ ಸಾಹಿತ್ಯದ ಕಡೆಗೇ ನೋಡಬೇಕಾಗಿಲ್ಲ; ಅಲ್ಲದೆ ಅಲ್ಲಿನ ಸಾಹಿತ್ಯಕ್ಕೆ ಅನುಸಾರವಾಗಿ ಅವರಲ್ಲಿ ಮೂಡಿದ ವಿಮರ್ಶೆಯ ತತ್ವಗಳೇ, ನಮ್ಮ ಸಾಹಿತ್ಯವನ್ನೂ ಅಳೆದು ನೋಡುವ ಮೂಲಮಾನಗಳಾಗುತ್ತವೆ ಎನ್ನುವ ಭ್ರಮೆಯನ್ನು ಬಿಡಬೇಕು. ಏಕೆಂದರೆ ಪ್ರತಿಯೊಂದು ಸಾಹಿತ್ಯಕ್ಕೂ ತನ್ನದೇ ಆದ ಪರಂಪರೆಯಿದೆ; ಅದನ್ನು ರೂಪಿಸಿದ ದೇಶದ ಮನೋಭಾವದ ಹಿನ್ನೆಲೆಯಿದೆ. ಅಲ್ಲಲ್ಲಿನ ಸಾಹಿತ್ಯಾಭ್ಯಾಸದಿಂದಲೇ ಹಲವು ಮೂಲತತ್ವಗಳನ್ನು ಕಂಡುಕೊಂಡು, ಅದರ ಅಂತರಂಗದ ನಿಯಮಗಳನ್ನು ತಿಳಿದು, ಅದರ ಮಾನದಂಡದಿಂದ ಸಾಹಿತ್ಯ ವಿಮರ್ಶೆಗೆ ತೊಡಗುವುದು ಕ್ಷೇಮ. ಈ ದೃಷ್ಟಿಯಿಂದ ನಿಜವಾದ ವಿಮರ್ಶಕನಿಗೆ ತನ್ನ ಸಾಹಿತ್ಯಪರಂಪರೆಯ ಪ್ರಜ್ಞೆ ಇರುವುದು ಅಗತ್ಯವಾಗಿದೆ. ಅಂದಮಾತ್ರಕ್ಕೆ ಬೇರೆಯ ಸಾಹಿತ್ಯ ವಿಮರ್ಶೆಯ ಅಭ್ಯಾಸದಿಂದ ವಿಮರ್ಶಕನಿಗೆ ಲಾಭವಾಗುವುದಿಲ್ಲವೆಂದು ಅರ್ಥವಲ್ಲ. ಬೇರೆ ಸಾಹಿತ್ಯ ವಿಮರ್ಶೆಯ, ಅದರಲ್ಲೂ ಪಾಶ್ಚಾತ್ಯ ಸಾಹಿತ್ಯವಿಮರ್ಶೆಯ ಸಮರ್ಪಕವಾದ ಪರಿಚಯ, ವಿಮರ್ಶಕನಿಗೆ ಅತ್ಯಂತ ಅಗತ್ಯ – ಅದೂ ಪ್ರಚೋದನೆಗೆ, ನವ ವಿಧಾನಗಳ ಪರಿಚಯಕ್ಕೆ; ಕೇವಲ ಅನುಕರಣ ಅನುಸರಣಗಳಿಗಲ್ಲ.
ಸಾಹಿತ್ಯ ವಿಮರ್ಶೆಯಲ್ಲಿ ಪ್ರಚಾರಕ್ಕಿಂತ ವಿಚಾರಕ್ಕೆ ವಿಶೇಷ ಗಮನ ಕೊಡಬೇಕಾಗುತ್ತದೆ. ಇಂದು ಸಾಹಿತ್ಯವಿಮರ್ಶೆಯಲ್ಲಿ ಬಳಕೆಯಾಗುತ್ತಿರುವ ಎಷ್ಟೋ ಮಾತುಗಳು ಕೇವಲ ರಭಸಮತಿಗಳ ಪ್ರಚಾರದ ಮಾತಾಗಿವೆ. ಪ್ರಗತಿಶೀಲ – ಸಂಪ್ರದಾಯನಿಷ್ಠ; ನವ್ಯ – ರೊಮ್ಯಾಂಟಿಕ್ ; ಪ್ರಾಮಾಣಿಕತೆ; ಅಸಲುತನ – ಇತ್ಯಾದಿ ಮಾತುಗಳನ್ನು ಸರಿಯಾಗಿ ವಿವೇಚಿಸದೆ, ಕೇವಲ ವಿಮರ್ಶೆಯ ರಾಜಕೀಯದ ಪ್ರಚಾರದ ಪರಿಭಾಷೆಗಳನ್ನಾಗಿ ಬಳಸುತ್ತಿರುವುದು ತಿಳಿದ ಸಂಗತಿ. ಮಾತನ್ನು ಕೇವಲ ಧೈರ್ಯವಾಗಿ ಹೇಳುವುದು, ಕಿರಿಚಿ ಹೇಳುವುದು, ಬೆಚ್ಚಿಬೀಳುವಂತೆ ಹೇಳುವುದು-ಇವುಗಳಲ್ಲಿ ವಿಮರ್ಶಕನ ಸತ್ವ ವ್ಯಕ್ತವಾಗುತ್ತದೆ ಎಂದು ಭಾವಿಸಬೇಕಾಗಿಲ್ಲ. ಕವಿಗಳಿಗೆ, ಕಾವ್ಯಗಳಿಗೆ ‘ತಲೆಚೀಟಿ’ಗಳನ್ನು ಅಂಟಿಸಿ ಅವರನ್ನು ಬಣಗಳನ್ನಾಗಿ ಏರ್ಪಡಿಸಿದರೆ ಸಾಹಿತ್ಯ ವಿಮರ್ಶೆಯಲ್ಲಿ ಯಾವ ಪುರುಷಾರ್ಥವನ್ನೂ ಸಾಧಿಸಿದಂತಾಗುವುದಿಲ್ಲ. ಎಲ್ಲಕ್ಕೂ ಮಿಗಿಲಾದದ್ದು, ಲೇಖಕ ವಿಮರ್ಶಕರಲ್ಲಿ ಬೆಳೆಯಬೇಕಾಗಿರುವ ಸಹಕಾರ. ಓದುಗರು ಮತ್ತು ವಿಮರ್ಶಕರು ಆದಷ್ಟು ನಿಷ್ಪಕ್ಷಪಾತವಾದ ದೃಷ್ಟಿಯಿಂದ ರಸಾಸ್ವಾದ ಮಾಡುವುದನ್ನು ಕಲಿಯುವ ತನಕ, ಲೇಖಕರು ವಿಮರ್ಶಕರ ಅಪ್ರಿಯ ಸತ್ಯವಿಮರ್ಶೆಯನ್ನು ವಸ್ತುನಿಷ್ಠವಾಗಿ ಗಮನಿಸಿ ಇದುವರೆಗೂ ಬರೆದದ್ದಕ್ಕಿಂತ ಇನ್ನೂ ಉತ್ತಮವಾದುದನ್ನು ಬರೆದು ತೋರಿಸಬಲ್ಲೆವೆಂಬ ಆತ್ಮಪ್ರತ್ಯಯವನ್ನು ಬೆಳೆಯಿಸಿಕೊಳ್ಳುವ ತನಕ, ನಿಜವಾದ ವಿಮರ್ಶೆ ನಮ್ಮಲ್ಲಿ ನೆಲೆಗೊಳ್ಳಲಾರದು. ಲೇಖಕ ವಿಮರ್ಶಕರ ಪರಸ್ಪರ ಸಹಕಾರದಿಂದಲೇ ಉತ್ತಮ ವಿಮರ್ಶೆಯಾಗಲೀ, ಉತ್ತಮಾಭಿ ರುಚಿಯಾಗಲೀ ಬೆಳೆಯುವುದು ಸಾಧ್ಯ.
ಸಾಹಿತ್ಯವಿಮರ್ಶೆಯಲ್ಲಿ ಅಂದಂದಿನ ಕೃತಿಗಳನ್ನು ಅಂದಂದಿನ ವಿಮರ್ಶಕರೆಲ್ಲರೂ ಗುರುತಿಸಿ ಬೆಲೆ ಕಟ್ಟುವರೆಂಬ ಮಾತು ಬರೀ ಭ್ರಮೆ. ವಾಸ್ತವವಾಗಿ ಸಮಕಾಲೀನ ಕವಿಗೆ ಸಮಕಾಲೀನ ವಿಮರ್ಶಕರಿಂದ ಸರಿಯಾದ ಬೆಲೆ ದೊರಕುತ್ತದೆ ಎಂದು ಹೇಳುವ ಧೈರ‍್ಯವಿಲ್ಲ. ಇಂದು ಅತ್ಯುತ್ತಮವೆಂದು ಸಮಕಾಲೀನ ಜನತೆ ಗುರುತಿಸಿದ ಕೃತಿ ನಾಳೆ ಯಾವುದೋ ಕಾರಣದಿಂದ ಮಾಸಿಹೋಗಬಹುದು. ಈ ಹೊತ್ತು ಅವಜ್ಞೆಗೆ ಗುರಿಯಾದ ಕೃತಿ ನಾಳೆ ಮಹತ್ವದ್ದೆಂದು ಪರಿಗಣಿತವಾಗಬಹುದು. ಸಾಹಿತ್ಯದಲ್ಲಿ ಉಳಿಯುವುದೆಷ್ಟೋ! ಅಳಿಯುವುದೆಷ್ಟೋ! ಸುಲಭವಾಗಿ ತಳ್ಳಿ ಹಾಕಲಾಗದಂಥ ತೀರ್ಪನ್ನು ಕೊಡುವವರು ಇವರಿಬ್ಬರೇ : ಲೋಕ ಮತ್ತು ಕಾಲ. ಕಾಲಾಯ ತಸೈ ನಮಃ.

ಗ್ರಂಥಋಣ
1. L. Abercrombie : Principles of Literary criticism
2. L. Abercrombie : The Idea of Great Poetry
3. Sri Aurobindo : The Future Poetry
4. Sri Aurobindo : Kalidasa II Series
5. Sri Aurobindo : Letters III Series
6. W.H. Auden : Making Knowing and Judging
7. S. W. Bethell : Essay on Literary criticism
8. G. Boas : A Primer of Critics
9. A. C. Bradley : Oxford Lectures on Poetry
10. A. K. Coomaraswamy : Introduction to Indian Art
11. H. Caudwell : Creative Impulse
12. Cassel’s Encyclopaedia of Literature : Ed. S.H. Steinberg
13. Diary of madame d Arbaly : Ed. Dobson
14. John Drinkwater : The Lyric
15. T. S. Eliot : On Poetry and Poets
16. T. S. Eliot : Selected prose
17. T. S. Eliot : The use of Poetry and the use of criticism
18. T. S. Eliot : (Ed) Ezra Pound : Selected poems
19. Emile Legoins : William Wordsworth & Annette Valloin
20. Sigmund Freud : Introductory Letters on Psycho-analysis
21. Helen Gardner : The business of Criticism
22. Helen Gardner : The art of T. S. Eliot
23. W. H. Hudson : An Introduction to the Study of Literature
24. Edmund D. Jones : (Ed.) English Critical Essays (XIXth Century)
25. C. J. Jung : Modern Man in Search of a Soul
26. F. L. Lucas : Style
27. Livingston Lowes : The Road to Xanadu
28. J. M. Murray : The Problem of Style
29. Albert D. Van Nostrand (Ed.) : Literary Criticism in America
30. Nalini Kantha Gupta : Poets and Mystics
31. R.Narasimhachar : History of Kannada Language
32. A. E. Powell : The Romantic Theory of Poetry
33. James Reeves : The Critical Sense
34. I. A. Richards : Principles of Literary  criticism
35. I. A. Richards : Practical Criticism
36. Herbert Read : Essays in Literary Criticism
37. Herbert Read : The Tenth muse
38. G. W. Roe : Carlyle : As a critic of Literature
39. R. Sadasiva lyer : A hand book of Literary criticism
40. W. B. Worsfold : Judgement in Literature
41. Austin Warren and Rene Welleck : Theory of Literature
42. Orlo Williams : Contemporary Criticism of Literature
43. A. W. Ward : ((Ed) The Poetical Works of Alexander Pope
೧. ಕುವೆಂಪು : ಕೃತ್ತಿಕೆ
೨. ಕುವೆಂಪು : ಪಕ್ಷಿಕಾಶಿ
೩. ಕುವೆಂಪು : ಚಿತ್ರಾಂಗದಾ
೪. ಕುವೆಂಪು : ತಪೋನಂದನ
೫. ಕುವೆಂಪು : ವಿಭೂತಿ ಪೂಜೆ
೬. ಕುವೆಂಪು : ಕಾವ್ಯ ವಿಹಾರ
೭. ಬೇಂದ್ರೆ : ನಾದಲೀಲೆ
೮. ತೀ. ನಂ. ಶ್ರೀ. : ಪಂಪ
೯. ತೀ. ನಂ. ಶ್ರೀ. ಭಾರತೀಯ ಕಾವ್ಯ ಮೀಮಾಂಸೆ
೧೦. ತೀ. ನಂ. ಶ್ರೀ. ಸಮಾಲೋಕನ
೧೧. ಟಿ. ಎಸ್. ವೆಂಕಣ್ಣಯ್ಯ : (ಅನು) ಪ್ರಾಚೀನ ಸಾಹಿತ್ಯ
೧೨. ಜಿ. ಪಿ. ರಾಜರತ್ನಂ : ರತ್ನನ ಪದಗಳು
೧೩. ಜಿ. ಪಿ. ರಾಜರತ್ನಂ : (ಸಂ.) ನವ್ಯ ಸಾಹಿತ್ಯ ನಿರ್ಮಾಣ
೧೪. ಎಸ್. ವಿ. ರಂಗಣ್ಣ : ಹೊನ್ನಶೂಲ
೧೫. ಎಸ್. ವಿ. ರಂಗಣ್ಣ : ಶಾಕುಂತಲ ನಾಟಕದ ವಿಮರ್ಶೆ
೧೬. ಎಸ್. ವಿ. ರಂಗಣ್ಣ : ವಿಕ್ರಮೋರ್ವಶೀಯ ನಾಟಕದ ವಿಮರ್ಶೆ
೧೭. ಎಸ್. ವಿ. ರಂಗಣ್ಣ : ಶೈಲಿ – ಭಾಗ ೨
೧೮. ರಂ. ಶ್ರೀ ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ
೧೯. ಮುಳಿಯ ತಿಮ್ಮಪ್ಪಯ್ಯ : ನಾಡೋಜ ಪಂಪ
೨೦. ದೇ. ಜವರೇಗೌಡ : (ಸಂ.) ಶ್ರೀ ರಾಮಾಯಣದರ್ಶನಂ ಉಪನ್ಯಾಸ ಮಾಲೆ
೨೧. ರಾ. ಅನಂತಕೃಷ್ಣಶರ್ಮ : ಸಾಹಿತ್ಯ ಮತ್ತು ಜೀವನ ಕಲೆ
೨೨. ಕೆ. ಎಸ್. ನರಸಿಂಹಸ್ವಾಮಿ : ಉಪವನ
೨೩. ಜಿ. ಬಿ. ಜೋಷಿ : ಕೆ. ಡಿ. ಕುರ್ತಕೋಟಿ : ನಡೆದು ಬಂದ ದಾರಿ, ಭಾಗ ೧, ೨
೨೪. ಸಿ. ಮಹಾದೇವಪ್ಪ : ಷೆಲ್ಲಿಯ ಕಾವ್ಯ ಸಮರ್ಥನೆ
೨೫. ಡಾ. ಕೆ. ಕೃಷ್ಣಮೂರ್ತಿ : ಕನ್ನಡ ಧ್ವನ್ಯಾಲೋಕ
೨೬. ಡಾ. ಕೆ. ಕೃಷ್ಣಮೂರ್ತಿ : ಕನ್ನಡ ಕಾವ್ಯಪ್ರಕಾಶ
೨೭. ಡಾ. ಕೆ. ಕೃಷ್ಣಮೂರ್ತಿ : ಕನ್ನಡ ಔಚಿತ್ಯ ವಿಚಾರ ಚರ್ಚೆ
೨೮. ಜಿ.ಎಸ್. ಶಿವರುದ್ರಪ್ಪ : ಪ್ರಭುಶಂಕರ : (ಸಂ.) ದರ್ಶನ ವಿಮರ್ಶೆ
೨೯. ಮಾಸ್ತಿ ವೆಂಕಟೇಶ ಅಯ್ಯಂಗಾರ್ : ವಿಮರ್ಶೆ, ೧
೩೦. ಮಾಸ್ತಿ ವೆಂಕಟೇಶ ಅಯ್ಯಂಗಾರ್ : ಆದಿಕವಿ ವಾಲ್ಮೀಕಿ
31. Journal of the Karnataka University, June 1957. Vol. 1. No 2
೩೨. ಪ್ರಬುದ್ಧ ಕರ್ನಾಟಕ : ೨೮-೪ (೧೯೪೭)


blogger
delicious
digg
facebook
reddit
stumble
twitter
print
email
ಪುಸ್ತಕ: ಸಮಗ್ರ ಗದ್ಯ- 3
ಲೇಖಕರು: ರಾಷ್ಟ್ರಕವಿ ಡಾ|| ಜಿ ಎಸ್ ಶಿವರುದ್ರಪ್ಪ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ