ಭಾನುವಾರ, ಜೂನ್ 14, 2015

ಭಾರತದ ಸ್ವಾತಂತ್ರ್ಯ ಚಳುವಳಿ 1


ಭಾರತದ ಸ್ವಾತಂತ್ರ್ಯ ಚಳುವಳಿ






೧೯೪೭ರ ಆಗಸ್ಟ್ ೧೫ರ ಮಧ್ಯರಾತ್ರಿ ಭಾರತಕ್ಕೆ ಅಧಿಕಾರದ ಹಸ್ತಾಂತರ
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು. ಅಲ್ಪ ಕಾಲಾನಂತರ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವ್‍ನ ಉಪಾಯಗಳಿಂದ ವಂಗದ ಅಧಿಕಾರವನ್ನು ತನ್ನ ಕೈವಶಮಾಡಿಕೊಂಡಿತು. ಅಲ್ಲಿಂದ ಮುಂದೆ ಬಹುಬೇಗೆ ತಮ್ಮ ರಾಜಕೀಯ ನೀತಿಗಳಿಂದ ಭಾರತದ ಬಹುಭಾಗವನ್ನು ಅವರು ಕೈವಶ ಮಾಡಿಕೊಂಡರು. ಪ್ಲಾಸೀ ಕದನದಿಂದ ಸರಿಯಾಗಿ ನೂರು ವರ್ಷಗಳ ನಂತರ ಅಂದರೆ ೧೮೫೭ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ(ಅಥವ ೧೮೫೭ರ ಸಿಪಾಯಿ ದಂಗೆ) ಕಿಡಿಕಾರಿತು. ಆಂಗ್ಲರ ದಬ್ಬಾಳಿಕೆಯವಿರುದ್ಧ ಸಿಪಾಯಿಗಳೂ, ರಾಜ್ಯಗಳೂ ತಿರುಗಿಬಿದ್ದು ಪ್ರತಿಭಟಿಸಿದವಾದರೂ, ವ್ಯವಸ್ಥಿತವಾದ ಯೋಜನೆಯಿಲ್ಲದಿದ್ದರಿಂದ ದಂಗೆ ಹತ್ತಿಕ್ಕಲ್ಪಟ್ಟಿತು. ಸಿಪಾಯಿ ದಂಗೆ ವಿಫಲವಾದ ಮೇಲೆ, ಭಾರತದ ವಿದ್ಯಾವಂತರು ಎಚ್ಚೆತ್ತುಕೊಂಡರು ಹಾಗೂ ರಾಜಕೀಯವಾಗಿ ಸಂಘಟಿತರಾದರು. ೧೮೮೫ರಲ್ಲಿ ಸ್ಥಾಪಿತವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮೊದಲು ಬ್ರಿಟಿಷ್ ಸಾಮ್ರಾಜ್ಯದ ಅಧೀನತೆಯಲ್ಲಿಯೇ ಭಾರತೀಯರಿಗೆ ಹೆಚ್ಚು ಹಕ್ಕು-ಪ್ರಾತಿನಿಧ್ಯಗಳಿಗಾಗಿ ಹೋರಾಟ ಪ್ರಾರಂಭಿಸಿತು. ೨೦ನೇ ಶತಮಾನದ ಪ್ರಾರಂಭದ ವೇಳೆಗೆ ನಾಗರಿಕ ಸ್ವಾತಂತ್ರ್ಯ, ರಾಜಕೀಯ ಹಕ್ಕು, ಸಂಸ್ಕೃತಿ ಹಾಗೂ ದಿನನಿತ್ಯದ ಜೀವನದ ಮೇಲೆ ಬ್ರಿಟಿಷ್ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನರ ದನಿ ಜೋರಾಗತೊಡಗಿ, ಬಾಲ ಗಂಗಾಂಧರ ತಿಲಕಮೊದಲಾದ ಕ್ರಾಂತಿಕಾರಿ ನೇತಾರರು ಸ್ವರಾಜ್ಯಕ್ಕೆ ಆಗ್ರಹಿಸತೊಡಗಿದರು. ೧೯೧೮ ಹಾಗು ೧೯೨೨ರ ನಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳವಳಿಯ ಮೊದಲ ಸರಣಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದೊಡನೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ದೊರೆಯಿತು. ಭಾರತದ ಎಲ್ಲೆಡೆಯಿಂದ ಅನೇಕ ಜನ ಈ ಆಂದೋಲನದಲ್ಲಿ ಭಾಗಿಗಳಾದರು. ೧೯೩೦ರಲ್ಲಿ ಪೂರ್ಣ ಸ್ವರಾಜ್ಯಕ್ಕೆ ಬದ್ಧವಾದ ಕಾಂಗ್ರೆಸ್ ೧೯೪೨ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿಎನ್ನುವ ಒತ್ತಾಯದ ಬೇಡಿಕೆಯನ್ನು ಮಾಡಿತು. ಬ್ರಿಟಿಷ ಆಡಳಿತವನ್ನು ಕೊನೆಗೊಳಿಸಲು ೧೯೪೨ರಲ್ಲಿ ಸುಭಾಷಚಂದ್ರ ಬೋಸ್ರು ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರೂ ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಯಿತು. ಎರಡನೇ ಮಹಾಯುದ್ಧದ ನಂತರ ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ಭಾರತಹಾಗು ಪಾಕಿಸ್ತಾನವೆಂದು ಇಬ್ಭಾಗಿಸುವ ದೇಶವಿಭಜನೆಯ ಬೆಲೆ ತೆತ್ತ ಬಳಿಕ, ಭಾರತವು ೧೫ ಆಗಸ್ಟ ೧೯೪೭ ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ವನ್ನು ಪಡೆಯಿತು.

ಯೂರೋಪಿನವರ ರಾಜ್ಯಭಾರಸಂಪಾದಿಸಿ



ರಾಬರ್ಟ್ ಕ್ಲೈವ್ ಪ್ಲಾಸಿ ಕದನವನ್ನು ಗೆದ್ದ ಮೇಲೆ ಮೀರ್ ಜಾಫರ್ ಜೊತೆಗೆ
ಪೋರ್ತುಗೀಯ ಅನ್ವೇಷಕ ವಾಸ್ಕೊ ಡ ಗಾಮಾ ಕಲ್ಲಿಕೋಟೆ ಬಂದರಕ್ಕೆ ೧೪೯೮ರಲ್ಲಿ ಆಗಮಿಸಿದ ನಂತರ, ಯುರೋಪಿನ ವ್ಯಾಪಾರಸ್ಥರು ಸಾಂಬಾರು ಪದಾರ್ಥಗಳ ವ್ಯಾಪಾರದ ಅನ್ವೇಷಣೆಯಲ್ಲಿ ಭಾರತದ ಕರಾವಳಿಗೆ ಬರತೊಡಗಿದರು. ೧೭೫೭ರಲ್ಲಿ ಪ್ಲಾಸಿ ಕದನದಲ್ಲಿ ರಾಬರ್ಟ ಕ್ಲೈವನ ಅಧೀನದಲ್ಲಿದ್ದ ಬ್ರಿಟಿಷ ಸೈನ್ಯ ಬಂಗಾಲದ ನವಾಬ ಸಿರಾಜುದ್ದೌಲನನ್ನು ಪರಾಜಯಗೊಳಿಸಿದ ಬಳಿಕ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಭದ್ರವಾಗಿ ನೆಲೆಗೊಂಡಿತು. ಇದನ್ನು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ನಾಂದಿ ಎಂದು ಗುರುತಿಸಲಾಗುತ್ತದೆ. ೧೭೬೫ರಲ್ಲಿ ಬಕ್ಸಾರ್ ಕಾಳಗದ ನಂತರ, ಬಂಗಾಲ, ಬಿಹಾರ ಮತ್ತು ಓರಿಸ್ಸಾಗಳ ಮೇಲೆ ಕಂಪನಿಗೆ ಆಡಳಿತದ ಹಕ್ಕುಗಳು ದೊರೆತವು.
ಹೊಸದಾಗಿ ಗೆದ್ದುಕೊಂಡ ಈ ಪ್ರಾಂತಗಳ ಆಡಳಿತವನ್ನು ನಿಭಾಯಿಸಲು ಹಾಗು ಬಲಪಡಿಸಲು ಬ್ರಿಟಿಷ್ ಸಂಸತ್ತು ಅನೇಕ ಶಾಸನಗಳನ್ನು ರಚಿಸಿತು. ೧೮೩೫ರಲ್ಲಿ ಇಂಗ್ಲಿಷ್ ಅನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಲಾಯಿತು. ಪಾಶ್ಚಾತ್ಯ ಶಿಕ್ಷಣ ಪಡೆದ ಶಿಷ್ಟವರ್ಗದ ಹಿಂದುಗಳು ಹಿಂದೂ ಧರ್ಮದಲ್ಲಿರುವ ವಿವಾದಾಸ್ಪದ ಸಾಮಾಜಿಕ ಪದ್ಧತಿಗಳಾದ ಜಾತಿ ಪದ್ಧತಿ, ಬಾಲ್ಯ ವಿವಾಹ ಮತ್ತು ಸತಿ ಪದ್ಧತಿಗಳ ನಿವಾರಣೆಗೆ ಪ್ರಯತ್ನಪಟ್ಟರು. ಮುಂಬಯಿ ಮತ್ತು ಮದ್ರಾಸುಗಳಲ್ಲಿ ಪ್ರಾರಂಭವಾದ ಸಾಹಿತ್ಯಕ ಮತ್ತು ಚರ್ಚಾಕೂಟ ಸಮಾಜಗಳು ರಾಜಕೀಯ ಆಲೋಚನೆಯ ವೇದಿಕೆಗಳಾದವು. ಆರಂಭಕಾಲದ ಈ ಸುಧಾರಕರ ಶೈಕ್ಷಣಿಕ ಸಾಧನೆ ಮತ್ತು ಮುದ್ರಣ ಮಾಧ್ಯಮದ ಜಾಣತನದ ಉಪಯೋಗ ಇವುಗಳಿಂದಾಗಿ, ಭಾರತೀಯ ಸಾಮಾಜಿಕ ಮೌಲ್ಯಗಳನ್ನು ಹಾಗು ಧಾರ್ಮಿಕ ಆಚರಣೆಗಳನ್ನು ಅಪವರ್ತನಗೊಳಿಸದೆ, ವಿಶಾಲ ತಳಹದಿಯ ಸುಧಾರಣೆಗಳನ್ನು ತರುವ ಸಂಭಾವ್ಯತೆ ಬೆಳೆಯಿತು.
ಭಾರತೀಯ ಸಮಾಜದ ಮೇಲೆ ಆಧುನಿಕೀಕರಣದ ಈ ಪ್ರವೃತ್ತಿ ಕೆಲವು ಸುಧಾರಣಾಕಾರಿ ಪ್ರಭಾವ ಬೀರಿದರೂ ಸಹ, ಬ್ರಿಟಿಷ್ ಆಡಳಿತದಲ್ಲಿ ಭಾರತೀಯರ ದುರಪಚಾರ ಅಮಿತವಾಗಿತ್ತು. ೯ನೆಯ ಲಾನ್ಸರ್ಸ್‍ ಪಡೆಯ ಹೆನ್ರಿ ಔವ್ರಿಯ ಆತ್ಮಕತೆಯಲ್ಲಿ ಸ್ವತಃ ಅನೇಕ ಬಾರಿ ನಿಷ್ಕಾಳಜಿಯಿಂದ ಸೇವಕರಿಗೆ ಕಟುವಾದ ಹೊಡೆತ ನೀಡುವುದನ್ನು ದಾಖಲಿಸಿದ್ದಾನೆ. ಫ್ರ್ಯಾಂಕ್ ಬ್ರೌನ್ ಎನ್ನುವ ಸಾಂಬಾರ ವ್ಯಾಪಾರಿ ಈ ನಿರ್ದಯ ವರ್ತನೆಯ ಕತೆಗಳಲ್ಲಿ ಏನೇನೂ ಉತ್ಪ್ರೇಕ್ಷೆ ಇಲ್ಲವೆಂದೂ, ಅಲ್ಲದೆ ಹೊಡೆತ ಕೊಡುವ ಉದ್ದೇಶದಿಂದಲೆ ಕೆಲವರು ಸೇವಕರನ್ನು ಇಟ್ಟುಕೊಂಡಿದ್ದರೆಂದು ದಾಖಲಿಸಿದ್ದಾನೆ. ಬ್ರಿಟೀಷರ ಅಧಿಕಾರ ಬಲ ಹೆಚ್ಚಿದಂತೆ ಸ್ಥಳೀಯ ಆಚಾರಗಳ ಅವಹೇಳನೆಯೂ ಹೆಚ್ಚತೊಡಗಿತು. ಉದಾಹರಣೆಗೆ ಮಸೀದಿಗಳಲ್ಲಿ ಮೋಜು ಏರ್ಪಡಿಸುವದು, ತಾಜಮಹಲಿನ ಛಾವಣಿಯ ಮೇಲೆ ಸೈನ್ಯದ ತುಕುಡಿಗಳ ವಾದ್ಯಮೇಳಕ್ಕೆ ಹೆಜ್ಜೆಕುಣಿತ ಹಾಕುವದು, ಬಜಾರಗಳ ಜನಜಂಗುಳಿಗಳಲ್ಲಿ ಚಾಟಿ ಬೀಸುತ್ತ ದಾರಿ ಮಾಡಿಕೊಳ್ಳುವದು (ಜನರಲ್ ಹೆನ್ರಿ ಬ್ಲೇಕ್ ವರ್ಣಿಸಿದಂತೆ) ಮತ್ತು ಸಿಪಾಯಿಗಳ ಜೊತೆ ಕೀಳು ವರ್ತನೆ ಮಾಡುವದು. ೧೮೪೯ರಲ್ಲಿ ಪಂಜಾಬ್ ಅನ್ನು ಬ್ರಿಟೀಷರು ತಮ್ಮದಾಗಿಸಿಕೊಂಡ ಬಳಿಕ, ಅನೇಕ ಸಿಪಾಯಿ ಬಂಡಾಯಗಳಾದವು; ಇವೆಲ್ಲವನ್ನೂ ಬಲಪ್ರಯೋಗದಿಂದ ಹತ್ತಿಕ್ಕಲಾಯಿತು.

''೧೮೫೭ ಕ್ಕೆ ಮುನ್ನ ಪ್ರಾಂತೀಯ ಚಳುವಳಿಗಳುಸಂಪಾದಿಸಿ
೧೮೫೭ರ ಮುಂಚಿನ ಭಾರತದಲ್ಲಿ ವಿದೇಶಿ ಆಳ್ವಿಕೆಯ ವಿರುದ್ಧ ಹಲವು ಪ್ರಾಂತೀಯ ಚಳುವಳಿಗಳು ನಡೆದಿದ್ದವು. ಆದರೆ ಆ ಹೋರಾಟಗಳು ಏಕೀಕರಣಗೊಂಡಿರಲಿಲ್ಲವದುದರಿಂದ ಅವುಗಳನ್ನು ವಿದೇಶಿ ಆಡಳಿತಗಾರರು ಸುಲಭವಾಗಿ ಹತ್ತಿಕ್ಕಿದರು. ದಕ್ಷಿಣದ ಕೆಲವು ರಾಜರುಗಳು ವಿದೇಶಿ ಆಡಳಿತಗಾರ ವಿರುದ್ಧ ಹೋರಾಟಗಳನ್ನು ನಡೆಸಿದ್ದರು. ಟಿಪ್ಪು ಸುಲ್ತಾನ್ ಹಾಗು ಬ್ರಿಟೀಷರ ನಡುವೆ ನಡೆದ ಮೈಸೂರು ಯುದ್ಧಗಳು, ೧೭೮೭ ರಲ್ಲಿ ಗೋವಾದ ಮೇಲೆ ಪೋರ್ಚುಗೀಯ ನಿಯಂತ್ರಣವನ್ನು ವಿರೋಧಿಸಿ ನಡೆದ ಪಿಂಟೋಗಳ ಒಳಸಂಚು ಹೆಸರಿನ ಜನಾಂಗೀಯ ದಂಗೆ , ತಮಿಳುನಾಡಿನ ಇಂದಿನ ಟ್ಯುಟಿಕಾರಿನ್ ಜಿಲ್ಲೆಯನ್ನು ಆಳಿದ ವೀರ ಪಾಂಡ್ಯ ಕಟ್ಟಿ ಬೊಮ್ಮನ್ ನಡೆಸಿದ ಹೋರಾಟ ಇವುಗಳ ಉದಾಹರಣೆಗಳು. ವೀರ ಪಾಂಡ್ಯನು ಸ್ಥಳೀಯ ಜನರು ತಮ್ಮ ಕೃಷಿ ಉತ್ಪನ್ನಗಳ ಮೇಲೆ ವಿದೇಶಿ ಆಡಳಿತಗಾರರಿಗೆ ತೆರಿಗೆ ಕೊಡುವುದರ ಅಗತ್ಯವನ್ನು ಪ್ರಶ್ನಿಸಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದನು [೧]. ಉಳಿದ ಚಳುವಳಿಗಳಲ್ಲಿ ಸಂತಾಲರ ದಂಗೆ ಮತ್ತು ಬ್ರಿಟಿಷರಿಗೆ ಬಂಗಾಲದಲ್ಲಿ ಟಿಟುಮೀರ್ ಒಡ್ಡಿದ ಪ್ರತಿರೋಧಗಳು ಸೇರಿದ್ದವು.'Italic --122.167.4.122 ೦೫:೦೨, ೧೯ ಆಗಸ್ಟ್ ೨೦೧೨ (UTC)

೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸಂಪಾದಿಸಿ
ಮುಖ್ಯ ಲೇಖನ: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ



೧೮೫೭ರ ಸಿಪಾಯಿ ದಂಗೆ


ನವೆಂಬರ್ ೧೮೫೭ ರಲ್ಲಿ ದಂಗೆಕೋರರನ್ನು ೯೩ ನೇ ಹೈಲ್ಯಾಂಡರ್ ಹಾಗೂ ೪ ನೇ ಪಂಜಾಬು ತುಕಡಿ ಬಗ್ಗುಬಡಿದ ನಂತರದ ಸಿಕಂದರಾ ಬಾಗ್.
೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (೧೮೫೭ರ ಸಿಪಾಯಿ ದಂಗೆ) ೧೮೫೭-೧೮೫೮ರಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಉತ್ತರ ಮತ್ತು ಮಧ್ಯ ಭಾರತಗಳಲ್ಲಿ ಭುಗಿಲೆದ್ದ ದಂಗೆ. ಈ ದಂಗೆಯು ಭಾರತೀಯ ಸೈನಿಕರು ಮತ್ತು ಅವರ ಬ್ರಿಟಿಷ್ ಅಧಿಕಾರಿಗಳ ನಡುವಿನ ಜನಾಂಗೀಯ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳ ಫಲವಾಗಿತ್ತು. ಮುಘಲರು ಮತ್ತು ಮಾಜಿ ಪೇಶ್ವೆಗಳಂತಹ ಭಾರತೀಯ ರಾಜರುಗಳ ಕುರಿತಾದ ಬ್ರಿಟಿಷರ ಅಸಡ್ಡೆ ಮತ್ತು ಔಧ್ ಪ್ರಾಂತವನ್ನು ಬಲವಂತದಿಂದ ಸ್ವಾಧೀನ ಮಾಡಿಕೊಂಡದ್ದು ಭಾರತೀಯರಲ್ಲಿ ಆಕ್ರೋಶವನ್ನುಂಟು ಮಾಡಿದವು. ಡಾಲ್‍ಹೌಸಿಯ ರಾಜ್ಯಗಳನ್ನು ಕೈವಶ ತಗೆದುಕೊಳ್ಳುವ ತಂತ್ರಗಳಲ್ಲಿ ಪ್ರಮುಖವಾದ ಅತ್ಯಂತ ಅನ್ಯಾಯಕಾರಿ ದತ್ತು ಮಕ್ಕಲಿಗೆ ಹಕ್ಕಿಲ್ಲ, ಮೊಘಲರ ಉತ್ತರಾಧಿಕಾರಿಗಳನ್ನು ಅರಮನೆಯಿಂದ ದೆಹಲಿ ಬಳಿಯ ಕುತ್ಬ್‍ಗೆ ಓಡಿಸುವ ಸಂಚು ಅನೇಕ ಜನಗಳನ್ನು ಕೆರಳಿಸಿದವು.
ಆದರೆ ಸಿಪಾಯಿ ದಂಗೆಗೆ ನಿಕಟವಾದ ಕಾರಣವೆಂದರೆ ಬ್ರಿಟಿಷ್ ಸೈನ್ಯದ ಭಾರತೀಯ ಸಿಪಾಯಿಗಳಿಗೆ ನೀಡಲ್ಪಟ್ಟ ಲೀ-ಎನ್‍ಫೀಲ್ಡ್ (ಪಿ/೫೩) ಬಂದೂಕಿನ ತೋಟಾಗಳಿಗೆ ದನದ ಹಾಗೂ ಹಂದಿಯ ಕೊಬ್ಬನ್ನು ಸವರಿದ್ದಾರೆಂಬ ಸುದ್ದಿ. ಸೈನಿಕರು ಕಾಡತೂಸುಗಳನ್ನು ತಮ್ಮ ಬಂದೂಕುಗಳಲ್ಲಿ ತುಂಬುವ ಮೊದಲು ಹಲ್ಲಿನಿಂದ ಕಚ್ಚಿ ಅವುಗಳನ್ನು ತೆರೆಯಬೇಕಾಗಿತ್ತು. ಹೀಗಾಗಿ ಅದರಲ್ಲಿ ಆಕಳು ಮತ್ತು ಹಂದಿಯ ಕೊಬ್ಬು ಇದ್ದರೆ ಹಿಂದು ಮತ್ತು ಮುಸ್ಲಿಮ್ ಸೈನಿಕರಿಗೆ ಮನಸ್ಸು ನೋಯುವಂತಿತ್ತು. ಫೆಬ್ರುವರಿ ೧೮೫೭ ರಲ್ಲಿ ಸಿಪಾಯಿಗಳು ಹೊಸ ಕಾಡತೂಸುಗಳನ್ನು ಬಳಕೆ ಮಾಡಲು ನಿರಾಕರಿಸಿದರು. ಬ್ರಿಟಿಷರು ತೋಟಾಗಳನ್ನು ಬದಲಿಸಲಾಗಿದೆಯೆಂದೂ, ಬೇಕಿದ್ದರೆ ಸಿಪಾಯಿಗಳು ಜೇನುಮೇಣ ಮತ್ತು ಸಸ್ಯತೈಲವನ್ನು ತಾವೇ ತಯಾರಿಸಿಕೊಳ್ಳಬಹುದೆಂದು ಹೇಳಿದರೂ, ಗಾಳಿಮಾತು ಅಳಿಯಲಿಲ್ಲ.
೧೮೫೭ರ ಮಾರ್ಚಿನಲ್ಲಿ, ೩೪ನೇ ದೇಶೀಯ ಪದಾತಿದಳದ ಸಿಪಾಯಿಯಾದ ಮಂಗಲ ಪಾಂಡೆ, ಬ್ರಿಟಿಷ್ ಸಾರ್ಜೆಂಟ್ (ದಳನಾಯಕ) ಒಬ್ಬನ ಮೇಲೆರಗಿ ಅಡ್‍ಜುಟೆಂಟ್ (ಸೇನಾಧಿಕಾರಿ) ಒಬ್ಬನಿಗೆ ಗಾಯ ಮಾಡಿದನು. ಜನರಲ್ (ಸೇನಾಪತಿ) ಹರ್ಸೇ, ಪಾಂಡೆಗೆ ಯಾವುದೋ 'ಧರ್ಮದ ಮನೋವ್ಯಾಧಿ' ತಗುಲಿದೆಯೆನ್ನುತ್ತಾ, ಪಾಂಡೆಯನ್ನು ಬಂಧಿಸಲು ಜಮಾದಾರ (ಆರಕ್ಷಕ ಪ್ರಮುಖ)ನಿಗೆ ಆದೇಶಿಸಿದನಾದರೂ, ಬಂಧಿಸಲು ಆತ ನಿರಾಕರಿಸಿದನು. ಏಪ್ರಿಲ್ ೭ ರಂದು ಮಂಗಲ್ ಪಾಂಡೆಯನ್ನು ಜಮಾದಾರನೊಂದಿಗೆ ನೇಣು ಹಾಕಲಾಯಿತು. ಸಾಮೂಹಿಕ ಶಿಕ್ಷೆಯಾಗಿ ಇಡೀ ತುಕಡಿಯನ್ನೇ ವಿಸರ್ಜಿಸಲಾಯಿತು. ಮೇ ೧೦ ರಂದು, ೧೧ ನೇ ಹಾಗೂ ೨೦ ನೇ ಅಶ್ವದಳಗಳು ಸೇರಿದಾಗ ಉಕ್ಕುವ ರೋಷದಿಂದ ಸವಾರರು ಅಧಿಕಾರಗಳ ಮಿತಿ ಮೀರಿ, ಮೇಲಧಿಕಾರಿಗಳನ್ನು ಬಗ್ಗು ಬಡಿದರು. ಅನಂತರ ೩ನೇ ತುಕಡಿಯನ್ನು ಸ್ವತಂತ್ರಗೊಳಿಸಿದ ಅವರು, ಮೇ ೧೧ ರಂದು ದೆಹಲಿಯನ್ನು ತಲುಪಿದರು. ಅಲ್ಲಿ ಉಳಿದ ಭಾರತೀಯರು ಅವರನ್ನು ಸೇರಿಕೊಂಡರು. ಕೆಲಸಮಯದಲ್ಲಿ ಬಂಡಾಯವು ಉತ್ತರ ಭಾರತದ ತುಂಬೆಲ್ಲ ಹರಡಿತು. ಕೆಲವು ಮುಖ್ಯ ನಾಯಕರೆಂದರೆ ಅವಧ್ ಪ್ರಾಂತ್ಯದ ಮಾಜಿ ದೊರೆಯ ಸಲಹೆಗಾರನಾದ ಅಹ್ಮದ್ ಉಲ್ಲಾ; ನಾನಾ ಸಾಹೇಬ್; ಅವನ ಸೋದರಳಿಯ ರಾವ್ ಸಾಹೇಬ್ ಮತ್ತವನ ಅನುಯಾಯಿಗಳಾದ ತಾಂತ್ಯಾ ಟೋಪಿ ಮತ್ತು ಅಝೀಮುಲ್ಲಾ ಖಾನ್; ಝಾನ್ಸಿಯ ರಾಣಿ ಲಕ್ಷ್ಮೀ ಭಾಯಿ; ಕುಂವರ್ ಸಿಂಹ; ಬಿಹಾರದ ಜಗದೀಶಪುರದ ರಜಪೂತ ನಾಯಕ; ಮತ್ತು ಮುಘಲ್ ದೊರೆ ಬಹಾದುರ್ ಶಹಾನ ಸಂಬಂಧಿ ಫಿರೂಝ್ ಶಹಾ.
ಕೊನೆಯ ಮುಘಲ್ ಚಕ್ರವರ್ತಿ ಎರಡನೇ ಬಹಾದುರ್ ಶಹಾನ ವಾಸಸ್ಥಳವಾದ ಕೆಂಪು ಕೋಟೆಯನ್ನು ಸಿಪಾಯಿಗಳು ಮುತ್ತಿ ವಶಪಡಿಸಿಕೊಂಡರು. ರಾಜನು ಸಿಂಹಾಸನವನ್ನು ಮರಳಿ ಪಡೆಯಬೇಕೆಂದು ಅವರು ಪಟ್ಟು ಹಿಡಿದರು. ಅವನು ಮೊದಲು ಹಿಂಜರಿದನು, ಆದರೆ ನಂತರ ಅವರ ಬೇಡಿಕೆಯನ್ನೊಪ್ಪಿ ಬಂಡಾಯದ ಮುಂದಾಳು ಆದನು .
ಹೆಚ್ಚುಕಡಿಮೆ ಅದೇ ಸಮಯಕ್ಕೆ ಝಾನ್ಸಿಯಲ್ಲಿ ಸೈನ್ಯವು ಬಂಡೆದ್ದು ಬ್ರಿಟಿಶ್ ಸೈನ್ಯಾಧಿಕಾರಿಗಳನ್ನು ಕೊಂದಿತು . ಮೀರತ್ , ಕಾನ್ಪುರ , ಲಖನೌ ಮುಂತಾದ ಪ್ರದೇಶಗಳಲ್ಲಿ ದಂಗೆಗಳೆದ್ದವು. ಬ್ರಿಟಿಷರು ಪ್ರತಿಕ್ರಿಯಿಸುವದರಲ್ಲಿ ವಿಳಂಬವಾದರೂ ಅಪಾರ ಶಕ್ತಿಯೊಂದಿಗೆ ಪ್ರತಿಕ್ರಿಯೆಯನ್ನು ತೋರಿಸಿದರು. ಕ್ರಿಮಿಯಾ ಯುದ್ಧರಂಗದಲ್ಲಿದ್ದ ಹಾಗು ಚೀನಾದ ಕಡೆಗೆ ಹೊರಟಿದ್ದ ಸೈನ್ಯದಳಗಳನ್ನು ಭಾರತಕ್ಕೆ ತಿರುಗಿಸಿದರು. ದಿಲ್ಲಿಗೆ ಮುತ್ತಿಗೆ ಹಾಕುವ ಪೂರ್ವದಲ್ಲಿ, ದಿಲ್ಲಿಯ ಹತ್ತಿರವಿದ್ದ ಬಂಡುಕೋರರ ಪ್ರಮುಖ ಸೈನ್ಯದೊಂದಿಗೆ ಬ್ರಿಟಿಷರು ಬಾದಲ್-ಕೆ-ಸರಾಯಿಯಲ್ಲಿ ಹೋರಾಡಿ ಅವರನ್ನು ಮರಳಿ ದಿಲ್ಲಿಗೆ ಓಡಿಸಿದರು. ದೆಹಲಿಯ ಮುತ್ತಿಗೆಯು ೧ ಜುಲೈ ನಿಂದ ೩೧ ಆಗಸ್ಟ್ ವರೆಗೆ ಬಾಳಿತು. ಒಂದು ವಾರದ ರಸ್ತೆ ಕಾಳಗದ ನಂತರ ಬ್ರಿಟಿಷರು ದೆಹಲಿಯನ್ನು ಮತ್ತೆ ಆಕ್ರಮಿಸಿದರು. ಕೊನೆಯ ಮುಖ್ಯ ಕಾಳಗವು ಗ್ವಾಲಿಯರ್ ನಲ್ಲಿ ಜೂನ್ ೨೦, ೧೮೫೮ ರಂದು ನಡೆಯಿತು. ರಾಣಿ ಲಕ್ಷ್ಮೀ ಬಾಯಿ ಹತಳಾದದ್ದು ಈ ಕಾಳಗದಲ್ಲಿಯೇ. ೧೮೫೯ರ ಕೊನೆಯ ತನಕ ಅಲ್ಲಲ್ಲಿ ಕಾಳಗಗಳು ಮುಂದುವರೆದರೂ, ಬಂಡಾಯಕೋರರನ್ನು ಸೋಲಿಸಲಾಯಿತು.
ಅನಂತರದ ಫಲಿತಾಂಶಸಂಪಾದಿಸಿ
೧೮೫೭ರ ಯುದ್ಧವು ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಮುಖ್ಯ ತಿರುವಾಗಿತ್ತು. ಬ್ರಿಟೀಷರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯನ್ನು ರದ್ದುಗೊಳಿಸಿ ನೇರ ಬ್ರಿಟನ್ನಿನ ರಾಜಮನೆತನದ ಚಕ್ರಾಧಿಪತ್ಯದಡಿಗೆ ಭಾರತವನ್ನು ತಂದರು. ರಾಜಮನೆತನದ ಪ್ರತಿನಿಧಿಯಾಗಿ 'ವೈಸ್‍ರಾಯ್' ಪಟ್ಟವನ್ನು ಸ್ಥಾಪಿಸಲಾಯಿತು. ಈ ನೇರ ಆಡಳಿತ ಪದ್ದತಿಯ ಘೋಷಣೆಯ ಅಡಿಯಲ್ಲಿ, ಮಹಾರಾಣಿ ವಿಕ್ಟೋರಿಯ "ಭಾರತದ ರಾಜರುಗಳಿಗೆ, ನೇತಾರರಿಗೆ ಮತ್ತು ಜನರಿಗೆ" ಸಮಾನತೆಯನ್ನು ನೀಡುವುದಾಗಿ ಭರವಸೆ ನೀಡಿದಳು. ಆದರೆ ಸಿಪಾಯಿ ದಂಗೆಯಿಂದ ಭಾರತೀಯರಲ್ಲಿ ಮೂಡಿದ ಅವಿಶ್ವಾಸ ಮುಂದುವರೆದಿತ್ತು.
ಭಾರತೀಯರ ಬಲದ ಮೊದಲ ಪೆಟ್ಟಿಗೆ ಎಚ್ಚೆತ್ತುಕೊಂಡ ಬ್ರಿಟಿಷರು ಸುಧಾರಣೆಗಳನ್ನು ಹಮ್ಮಿಕೊಂಡರು; ಸರ್ಕಾರದಲ್ಲಿ ಭಾರತೀಯ ಮೇಲ್ವರ್ಗದವರನ್ನೂ, ರಾಜರುಗಳನ್ನೂ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದರು. ಭೂಕಬಳಿಕೆಯನ್ನು ನಿಲ್ಲಿಸಿ, ಧಾರ್ಮಿಕ ಸೌಹಾರ್ದತೆಯನ್ನು ತೋರಿಸುತ್ತಾ, ಪೌರ ಸೇವೆಗಳಲ್ಲಿ ಭಾರತೀಯರನ್ನು ಕೆಳಮಟ್ಟದ ಅಧಿಕಾರಿಗಳನ್ನಾಗಿ ನೇಮಿಸಲಾರಂಭಿಸಿದರು. ಅಲ್ಲದೆ, ದೇಶೀಯರಿಗಿಂತ ಬ್ರಿಟಿಷ್ ಸೈನಿಕರನ್ನು ಹೆಚ್ಚಾಗಿ ಸೈನ್ಯದಲ್ಲಿ ತುಂಬತೊಡಗಿದರು; ಶಸ್ತ್ರಾಸ್ತ್ರಗಳ ಬಳಕೆಯನ್ನು ಬ್ರಿಟಿಷರಿಗೆ ಮಾತ್ರ ಮಿತಿಗೊಳಿಸಿದರು.
ಎರಡನೇ ಬಹಾದುರ್ ಶಹಾನನ್ನು ಬರ್ಮಾದ ರಂಗೂನ್‍ಗೆ ಗಡಿಪಾರು ಮಾಡಲಾಯಿತು. ಅಲ್ಲಿ ಅವನು ೧೮೬೨ ರಲ್ಲಿ ಸತ್ತು ಮುಘಲ್ ವಂಶವು ಕೊನೆಯಾಯಿತು. ೧೮೭೭ ರಲ್ಲಿ ವಿಕ್ಟೋರಿಯಾ ಮಹಾರಾಣಿಯು ಭಾರತದ ಚಕ್ರವರ್ತಿನಿ ಎಂಬ ಬಿರುದನ್ನು ಧರಿಸಿದಳು .

1 ಕಾಮೆಂಟ್‌:

  1. 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🌟🌟🌟🌟🌟🌟🌍

    ಪ್ರತ್ಯುತ್ತರಅಳಿಸಿ