ಮಂಗಳವಾರ, ಮಾರ್ಚ್ 21, 2017

ಕರ್ಣನ ಪಾತ್ರ ಪರಿಚಯ

💐💐💐💐💐🏹
ಕರ್ಣನ ಬಗ್ಗೆ ಈ 14 ವಿಷಯ ಕೇಳಿದ್ಮೇಲೆ ಏನೇ ಕಷ್ಟ ಬಂದ್ರೂ ಧೈರ್ಯವಾಗಿ ಎದುರಿಸ್ತೀರಿ
ಅರ್ಜುನನಿಗಿಂತ ಶೂರ ಕರ್ಣ, ಆದರೆ ಏನೆಲ್ಲ ಸಹಿಸ್ಕೊಂಡ ನೋಡಿ.

ನಿಮ್ ಬದುಕಲ್ಲಿ ಏನೂ ನಿಮ್ಗೆ ಬೇಕಾದ ಹಾಗೆ ಆಗ್ತಿಲ್ಲ, ನಿಮ್ ಯೋಗ್ಯತೆಗೆ ಸರಿಯಾಗಿ ಬೆಲೆ ಸಿಗ್ತಿಲ್ಲ, ಎಲ್ಲಾ ಕಷ್ಟ ನನಗ್ಯಾಕೆ ಬಂತು ಅಂತೆಲ್ಲಾ ನಿಮ್ಗೆ ಅನ್ನಿಸ್ಬಹುದು. ಆದ್ರೆ ಬೇರೇಯೋರ್ಗೆ ಹೋಲಿಸ್ಕೊಂಡ್ರೆ ನಿಮ್ ಕಷ್ಟ ಅಂಥದ್ದೇನಲ್ಲ, ನಿಭಾಯಿಸಿಕೊಂಡು ಹೋಗ್ಬೋದು ಅನ್ನೊ ಧೈರ್ಯ ಬರತ್ತೆ. ಹಾಗೊಂದು ಮಹಾಭಾರತದಲ್ಲಿ ಬರೋ ಕರ್ಣನ ಕಥೆ. ಏನೆಲ್ಲಾ ಕಷ್ಟ ಬಂದ್ರೂ ಅದನ್ನೆಲ್ಲ ನುಂಗಿ ನಾಲ್ಕು ಜನ ಗೌರವಿಸೋ ಹಾಗೆ ಕರ್ಣ ಬದುಕಿದ ರೀತಿನ ಅರ್ಥ ಮಾಡ್ಕೊಬೋದು.

1. ತಾಯಿ ಕುಂತೀನೇ ಕರ್ಣನ್ನ ಹೊಳೆನೀರಲ್ಲಿ ಬಿಟ್ಟು ಹೊಟೋಗ್ತಾಳೆ

ಕುಂತಿಗೆ ದೂರ್ವಾಸ ಮುನಿ ಒಂದು ವರ ಕೊಟ್ಟಿರ್ತಾರೆ - ಅವ್ಳು ಒಂದು ಮಂತ್ರ ಹೇಳಿದ್ರೆ ಅವ್ಳಿಗೆ ಯಾವ ದೇವ್ರು ಬೇಕೋ ಆ ದೇವ್ರು ಪ್ರತ್ಯಕ್ಷ ಆಗಿ ಅವ್ರಿಂದ ಅವ್ಳು ಒಂದು ಮಗು ಪಡೀಬೋದು ಅಂತ. ಈ ಮಂತ್ರ ಕೆಲಸ ಮಾಡುತ್ತಾ ಇಲ್ವಾ ನೋಡೋಣ ಅಂತ ಕುಂತಿ ಟ್ರೈ ಮಾಡಿದಾಗ ಸೂರ್ಯ ಪ್ರತ್ಯಕ್ಷ ಆಗಿ ಕರ್ಣನ್ನ ಹುಟ್ಟಿಸ್ತಾನೆ.

ಆದ್ರೆ ಆಗ ಕುಂತಿಗೆ ಮದುವೆ ಆಗಿರ್ಲಿಲ್ಲ. ಹಾಗಾಗಿ ಅವ್ಳಿಗೆ ಭಯ ಆಗಿ ಕರ್ಣನನ್ನ ಒಂದು ಬುಟ್ಟೀಲಿ ಹಾಕಿ ಹೊಳೇಲಿ ಬಿಡ್ತಾಳೆ.

2. ಕರ್ಣನಿಗೆ ಅವನು ಕ್ಷತ್ರಿಯ ಅಲ್ಲ ಅನ್ನೋ ಕಾರಣಕ್ಕೆ ಯಾರೂ ಬಿಲ್ವಿದ್ಯೆ ಕಲಿಸೋಕೆ ಒಪ್ಪೊಲ್ಲ

ಕರ್ಣ ಬೆಳ್ದಿದ್ದು ರಥ ಓಡಿಸುವ ಸಾರಥಿಯ ಮನೆಯಲ್ಲಿ. ಇವರು ಕ್ಷತ್ರಿಯರಿಗಿಂತ ಕೀಳು ಅನ್ನೋ ಮನೋಭಾವ ಇತ್ತು. ಹಾಗಾಗಿ ದ್ರೋಣ ಕೂಡ ಕರ್ಣನಿಗೆ ಬಿಲ್ವಿದ್ಯೆ ಕಲಿಸೋಕೆ ಒಪ್ಪೊಲ್ಲ.

3. ಬ್ರಾಹ್ಮಣ ಅಂತ ಸುಳ್ಳು ಹೇಳಿ ಪರಶುರಾಮನಿಂದ ಬಿಲ್ವಿದ್ಯೆ ಕಲೀತಾನೆ ಕರ್ಣ

ಪರಶುರಾಮ ಕ್ಷತ್ರಿಯದ್ವೇಷಿ. ಕರ್ಣ ಬ್ರಾಹ್ಮಣ ಅಂತ ಸುಳ್ಳು ಹೇಳಿ ಅವನಿಂದ ಬಿಲ್ವಿದ್ಯೆ ಕಲೀತಾನೆ.

4. ಕರ್ಣ ಸುಳ್ಳು ಹೇಳಿದ್ದು ಗೊತ್ತಾಗಿ ಪರಶುರಾಮ ಶಾಪ ಕೊಡ್ತಾನೆ

ಒಮ್ಮೆ ಪರಶುರಾಮ ಕರ್ಣನ ಮಡಿಲಲ್ಲಿ ಮಲ್ಗಿದ್ದಾಗ, ಒಂದು ದುಂಬಿ ಬಂದು ಕರ್ಣನ ತೊಡೆಗೆ ಕಚ್ಚಿ, ಕೊರ್ದು ಗಾಯ ಮಾಡುತ್ತೆ. ಪರಶುರಾಮನ ನಿದ್ದೆ ಕೆಡಿಸ್ಬಾರ್ದು ಅಂತ ಕರ್ಣ ಅದನ್ನ ಸಹಿಸ್ಕೋತಾನೆ. ಆದರೆ ನಿದ್ದೆಯಿಂದ ಎದ್ದ ಪರಶುರಾಮ ಕರ್ಣನ ತೊಡೆಯ ಗಾಯ ನೋಡಿ ಬ್ರಾಹ್ಮಣ ಇಷ್ಟು ನೋವು ಸಹಿಸ್ಕೊಳ್ಳೋದು ಸಾಧ್ಯ ಇಲ್ಲ ಅಂತ ಕರ್ಣನಿಗೆ ಸತ್ಯ ಏನು ಅಂತ ಕೇಳ್ದಾಗ, ಕರ್ಣ ಅವ್ನು ಬ್ರಾಹ್ಮಣ ಅಲ್ಲ ಅಂತ ಹೇಳ್ಬೇಕಾಗುತ್ತೆ. ಪರಶುರಾಮ ಆಗ ಕರ್ಣನಿಗೆ ತುಂಬಾ ಅವಶ್ಯಕತೆ ಇರೋ ಸಮಯದಲ್ಲೇ ಅವನು ಕಲಿತ ದಿವ್ಯಾಸ್ತ್ರಗಳ ಮಂತ್ರ ಎಲ್ಲ ಮರ್ತು ಹೋಗೋ ಹಾಗೆ ಶಾಪ ಕೊಡ್ತಾನೆ.

5. ಅರ್ಜುನ ದುರ್ಯೋಧನ ಎಲ್ರನ್ನೂ ಬಿಲ್ವಿದ್ಯೇಲಿ ಮೀರಿಸಿದ್ದಕ್ಕೆ ದ್ರೋಣ ಕರ್ಣನ್ನ ಆಚೆ ತಳ್ಳಿ ಕಳ್ಳ ಅಂತಾನೆ

ಭೀಷ್ಮ ಏನ್ ಮಾಡ್ತಾನೆ... ಪಾಂಡವ ಮತ್ತು ಕೌರವರ ವಿದ್ಯಾಭ್ಯಾಸ ಮುಗಿದ್ ಮೇಲೆ ಅವ್ರಿಗೆ ಗೊತ್ತಿರೋದನ್ನೆಲ್ಲ ತೋರ್ಸೋಕೆ ಅಂತ ಒಂದು ಸಮಾರಂಭ ಏರ್ಪಡಿಸ್ತಾರೆ. ಹೇಗೋ ಅಲ್ಲಿಗೆ ಕರ್ಣ ಬರ್ತಾನೆ. ಪಾಂಡವ, ಕೌರವರಿಗೆಲ್ಲ ನಾಚಿಕೆ ಆಗೋ ಹಾಗೆ ಬಿಲ್ವಿದ್ಯೆ ಪ್ರದರ್ಶನ ಮಾಡ್ತಾನೆ. ಆಗ ದ್ರೋಣ ಕರ್ಣನನ್ನ ಆ ಸಮಾರಂಭದಿಂದ ಹೊರಗೆ ಹಾಕ್ತಾನೆ, ಅಷ್ಟೇ ಅಲ್ಲ ಕರ್ಣ ಕ್ಷತ್ರಿಯರ ವಿದ್ಯೆ ಕದ್ದ ಅನ್ನೋ ಆಪಾದನೆ ಕೂಡ ಮಾಡ್ತಾನೆ.

6. ದ್ರೌಪದಿ ಸ್ವಯಂವರದಲ್ಲಿ ಅರ್ಜುನನಿಗಿಂತ ಮೊದಲು ಮೀನಿನ ಕಣ್ಣಿಗೆ ಗುರಿ ಇಟ್ಟೋನು ಕರ್ಣ, ಆದರೆ ದ್ರೌಪದಿ ಅವ್ನಿಗೆ ಅವಮಾನ ಮಾಡ್ತಾಳೆ

ಸಭೆಯ ಮುಂದೆ ಸೂತಪುತ್ರನನ್ನ ಮದುವೆ ಆಗೊಲ್ಲ ಅಂತ ದ್ರೌಪದಿ ಹೇಳ್ತಾಳೆ. ಕರ್ಣ ಏನೂ ಹೇಳದೆ ಅಲ್ಲಿಂದ ಹೊರಟು ಹೋಗ್ತಾನೆ.

7. ಒಂದು ಸಣ್ಣ ಮಗುವಿಗೆ ಉಪಕಾರ ಮಾಡಿದ್ದಕ್ಕೆ ಭೂತಾಯಿ ಕರ್ಣಂಗೆ ಶಾಪ ಕೊಡ್ತಾಳೆ

ಒಮ್ಮೆ ಒಬ್ಳು ಸಣ್ಣ ಮಗು ತುಪ್ಪ ತೆಗೊಂಡು ಹೋಗ್ತಿದ್ದಾಗ ಚೆಲ್ಲಿ ಬಿಡ್ತಾಳೆ. ಅವ್ಳ ಅಮ್ಮ ಬಯ್ತಾಳೆ ಅಂತ ತುಂಬ ಭಯ ಬಿದ್ದಿದ್ದ ಅವ್ಳನ್ನ ನೋಡಿ ಕರ್ಣ ಅವ್ನಿಗೆ ಗೊತ್ತಿದ್ದ ಮಂತ್ರದಿಂದ ಭೂಮಿಗೆ ಬಿದ್ದಿದ್ದ ತುಪ್ಪವನ್ನ ಮತ್ತೆ ಹೊರಗೆ ತೆಗೀತಾನೆ. ಆದರೆ ಇದರಿಂದ ಭೂತಾಯಿಗೆ ತುಂಬಾ ನೋವಾಗುತ್ತೆ, ಅದಕ್ಕೆ ಅವ್ಳು ಕರ್ಣನಿಗೆ ಶಾಪ ಕೊಡ್ತಾಳೆ - ಅವ್ನು ತುಂಬಾ ಕಷ್ಟದಲ್ಲಿದ್ದಾಗ ಅವ್ನ ಕೈ ಬಿಡ್ತಾಳೆ ಅನ್ನೋದೇ ಶಾಪ. ಕುರುಕ್ಷೇತ್ರ ಯುದ್ದದ ಸಮಯದಲ್ಲಿ ಈ ಶಾಪದಿಂದಾಗಿಯೇ ಕರ್ಣ ರಥದ ಚಕ್ರ ಮಣ್ಣಲ್ಲಿ ಹೂತು ಹೋಗೋದು.

8. ಅಕಸ್ಮಾತಾಗಿ ಕರ್ಣ ಒಂದು ಹಸು ಕೊಂದಿದ್ದಕ್ಕೆ ಒಬ್ಬ ಬ್ರಾಹ್ಮಣ ಶಾಪ ಕೊಡ್ತಾನೆ

ಒಬ್ಬ ಬ್ರಾಹ್ಮಣನ ಹಸುವನ್ನ ಗೊತ್ತಿಲ್ದೆ ಕೊಂದಿದ್ದಕ್ಕೆ ಅವ್ನು ಕರ್ಣನಿಗೆ ಒಂದು ಶಾಪ ಕೊಡ್ತಾನೆ ---- ತುಂಬಾ ಕಷ್ಟದಲ್ಲಿದ್ದಾಗ ಒಂದು ಬಾಣ ಚುಚ್ಚಿ ಕರ್ಣನ ಸಾವಾಗುತ್ತೆ ಅನ್ನೋದು ಶಾಪ.

ಈ ಶಾಪದಿಂದಾನೇ ರಥದ ಚಕ್ರ ಹೊರಗೆ ತೆಗಿಯೋಕೆ ಪ್ರಯತ್ನ ಮಾಡ್ತಿದ್ದಾಗ ಅರ್ಜುನ ಬಿಟ್ಟ ಬಾಣದಿಂದ ಕರ್ಣ ಸಾಯೋದು.

9. ಕರ್ಣ ಕ್ಷತ್ರಿಯ ಅಲ್ಲ, ಅವನು ನಮ್ಮ ಸೈನ್ಯದಲ್ಲಿದ್ದರೆ ನಾನು ಯುದ್ಧ ಮಾಡಲ್ಲ ಅಂತ ಭೀಷ್ಮ ಹೇಳ್ತಾನೆ

ಇದರಿಂದಾಗಿ ಭೀಷ್ಮ ಯುದ್ದದಲ್ಲಿ ಗಾಯವಾಗಿ ಬೀಳೋವರ್ಗೂ ಕರ್ಣ ಯುದ್ಧ ಮಾಡೋಕೆ ಆಗೊಲ್ಲ.

10. ಮೋಸ ಅಂತ ಗೊತ್ತಿದ್ದರೂ ತನ್ನನ್ನ ಯಾವಾಗ್ಲೂ ಕಾಪಾಡೋ ಕವಚ-ಕುಂಡಲಗಳ್ನ ಇಂದ್ರನಿಗೆ ದಾನ ಮಾಡ್ತಾನೆ

ಸೂರ್ಯ ಕರ್ಣನ ತಂದೆ. ಕರ್ಣಂಗೆ ಹುಟ್ಟೊವಾಗ್ಲೇ ಕವಚ ಮತ್ತು ಕುಂಡಲ ಕೊಟ್ಟಿರ್ತಾನೆ. ಅದು ಇರೋವರ್ಗೂ ಕರ್ಣನಿಗೆ ಸಾವಿಲ್ಲ.

ಆದರೆ ಅರ್ಜುನನ ತಂದೆ ಇಂದ್ರ ಮೋಸದಿಂದ ಇದನ್ನ ದಾನ ಪಡೀತಾನೆ. ಕರ್ಣನ ಕವಚ ಅವನ ದೇಹದ ಭಾಗ, ಅದನ್ನ ತೆಗಿಯೋದಂದ್ರೆ ದೇಹದಿಂದ ಮಾಂಸ ತೆಗೆದ ಹಾಗೆ. ಆದ್ರೂ ಕರ್ಣ ಅದನ್ನ ತೆಗೆದು ಕೊಡ್ತಾನೆ.

11. ಪಾಂಡವರನ್ನ ಕೊಲ್ಲೋದಿಲ್ಲ ಅಂತ ಕುಂತಿಗೆ ಮಾತು ಕೊಡ್ತಾನೆ

ಕುರುಕ್ಷೇತ್ರ ಯುದ್ಧ ಮುಗೀತಾ ಬರ್ತಿದ್ದಾಗೊಮ್ಮೆ ಕರ್ಣನಿಂದಾಗಿ ಪಾಂಡವರು ಸೋಲೋ ಹಾಗಿದ್ದಾಗ, ಕುಂತಿ ಕರ್ಣ ಇದ್ದಲ್ಲಿಗೆ ಹೋಗಿ ಪಾಂಡವ್ರನ್ನ ಕೊಲ್ಲೋದಿಲ್ಲ ಅಂತ ಮಾತು ಕೊಡೋ ಹಾಗೆ ಮಾಡ್ತಾಳೆ.
ಕರ್ಣನಿಗೆ ಕುಂತಿ ಅವ್ನ ತಾಯಿ ಅಂತ ಗೊತ್ತಿರುತ್ತೆ. ಆದ್ರೂ ತಾನು ಸತ್ರೂ ಪಾಂಡವರನ್ನ ಕೊಲ್ಲೋದಿಲ್ಲ ಅಂತ ಮಾತು ಕೊಡ್ತಾನೆ.

12. ಅರ್ಜುನನ್ ರಥದ್ ಚಕ್ರ ಸಿಕಾಕೊಂಡಿದ್ದಾಗ ಕರ್ಣ ಅವನ ಮೇಲೆ ಕೈ ಮಾಡಲ್ಲ

ಕರ್ಣ - ಅರ್ಜುನ ಯುದ್ಧ ಮಾಡ್ತಿದ್ದ ದಿನ ಇಂದ್ರ ಅರ್ಜುನನನ್ನ ಕಾಪಾಡೋಕೆ ಅಂತ ಜೋರು ಗಾಳಿ-ಮಳೆ ಬರೋ ಹಾಗೆ ಮಾಡಿರ್ತಾನೆ. ಇದ್ರಿಂದ ಮೊದ್ಲು ಅರ್ಜುನನ ರಥದ ಚಕ್ರ ನೆಲದಲ್ಲಿ ಹೂತು ಹೋಗುತ್ತೆ. ಕರ್ಣ ಅರ್ಜುನನ ಮೇಲೆ ದಾಳಿ ಮಾಡೋ ಅವಕಾಶ ಇದ್ರೂ ಕೂಡ ಯುದ್ಧ ನಿಲ್ಲಿಸ್ತಾನೆ. ಚಕ್ರ ಹೊರಗೆ ತೆಗೆದಾದ ಮೇಲೆನೇ ಅವ್ನು ಯುದ್ಧ ಮುಂದುವರಿಸೋದು. ಯುದ್ದದ ನಿಯಮಗಳಿಗೆ ಅವ್ನು ಕೊಡೋ ಬೆಲೆ ಇದು.

13. ಆದರೆ ಕರ್ಣನ ರಥದ್ ಚಕ್ರ ಸಿಕಾಕೊಂಡಿದ್ದಾಗ ಅರ್ಜುನ ಅವ್ನನ್ನ ಸಾಯಿಸಿ ಬಿಡ್ತಾನೆ!

ಅರ್ಜುನ ಯುದ್ದದ ನಿಯಮಗಳಿಗೆ ಯಾವ್ದೇ ಬೆಲೆ ಕೊಡೊಲ್ಲ. ಕರ್ಣನ ರಥದ ಚಕ್ರ ನೆಲದಲ್ಲಿ ಹೂತು ಹೋಗುತ್ತೆ. ಆ ದಿನ ಕರ್ಣನ ಮೇಲಿದ್ದ ಎಲ್ಲ ಶಾಪಗಳೂ ಕೆಲಸ ಮಾಡುತ್ತೆ. ಭೂತಾಯಿ ಅವನ ಕೈ ಬಿಡ್ತಾಳೆ, ಕಷ್ಟದಲ್ಲಿದ್ದವನಿಗೆ ಅವನ ದಿವ್ಯಾಸ್ತ್ರಗಳ ಮಂತ್ರ ಎಲ್ಲ ಮರ್ತು ಹೋಗುತ್ತೆ. ಅರ್ಜುನ ಬಿಟ್ಟ ಬಾಣ ಅವ್ನನ್ನ ಕೊಲ್ಲುತ್ತೆ.

14. ಕೊನೆ ಗಳಿಗೆಯಲ್ಲೂ ಕರ್ಣ ಒಂದು ದಾನ ಮಾಡ್ತಾನೆ

ನೆಲದಲ್ಲಿ ಬಿದ್ದಿದ್ದ ಕರ್ಣನ ಹತ್ರ ಕೃಷ್ಣ ಬ್ರಾಹ್ಮಣನ ರೂಪದಲ್ಲಿ ಹೋಗಿ ಭಿಕ್ಷೆ ಕೇಳ್ತಾನೆ. ಕರ್ಣನಿಗೆ ಎರಡು ಚಿನ್ನದ ಹಲ್ಲಿರುತ್ತೆ, ಅವ್ನು ಅದನ್ನೇ ದಾನ ಕೊಡ್ತಾನೆ. ಆದ್ರೆ ಅದರಲ್ಲಿ ಎಂಜಿಲಿದೆ ಅಂತ ಕೃಷ್ಣ ಸಿಟ್ಟಾಗ್ತಾನೆ. ಕರ್ಣ ಭೂಮಿಗೆ ಬಾಣ ಬಿಟ್ಟು, ನೀರುಕ್ಕಿಸಿ ಅದರಲ್ಲಿ ಚಿನ್ನದ ಹಲ್ಲನ್ನ ತೊಳ್ದು ಕೊಡ್ತಾನೆ. ಇದರಿಂದ ಖುಷಿಯಾದ ಕೃಷ್ಣ ವಿಶ್ವರೂಪದರ್ಶನ ಕೊಡ್ತಾನೆ. ಕರ್ಣನನ್ನೂ ಸೇರಿಸಿ ಮೂರೇ ಮೂರು ಜನ ಕೃಷ್ಣನ ವಿಶ್ವರೂಪವನ್ನ ನೋಡಿರೋದು.

ಕರ್ಣಂದು ದುರಂತ ಕಥೆ. ಅವ್ನಿಗೆ ಹೋದಲ್ಲೆಲ್ಲ ಎಲ್ರೂ ಅವಮಾನ ಮಾದಿದ್ರು. ಆದರೆ ಅವ್ನು ಯಾವತ್ತೂ ಸೋತವನ ಹಾಗೆ ಕೂರ್ಲಿಲ್ಲ. ಬದಲಿಗೆ ಅವ್ನಿಂದ ಆಗೋ ಅಷ್ಟೂ ಕೊಡ್ತಾ ಹೋದ. ಅದಕ್ಕೇ ಅವ್ನನ್ನ 'ದಾನ ಶೂರ' ಅಂತ ಇವತ್ತಿಗೂ ಜನ ನೆನೆಸ್ಕೊಳ್ಳೋದು.

ಜೀವನ ಅಂದಮೇಲೆ ಕಷ್ಟ ಇದ್ದೇ‌ ಇರುತ್ತೆ. ಅದನ್ನ ಧೈರ್ಯವಾಗಿ ಎದುರಿಸೋದೇ ನಮ್ಮ ಕೆಲಸ. ಹಾಗಂತ ನಮ್ಮ ಆದರ್ಶಗಳು, ನಮ್ಮ ಮನುಷ್ಯತ್ವ... ಇದನ್ನೆಲ್ಲ ಬಿಡಲೂ ಬಾರದು. ಇದನ್ನೆಲ್ಲ ಬದುಕಿ ತೋರಿಸಿದ ಕರ್ಣ ಎಲ್ಲರಿಗೂ ಒಂದು ಪ್ರೇರಣೆ ಅಲ್ವಾ?
🙏🏻🙏🏻🙏🏻🙏🏻🙏🏻🙏🏻🌹

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ